ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 74 & 75): ಎಂ. ಜವರಾಜ್

-೭೪-

ಸೂರ್ಯ ಮುಳುಗ ಹೊತ್ತು

ಆ ಆಳು ತ್ವಾಟ್ದಲ್ಲಿ ಓಡಾಡ್ತಿದ್ನ
ಆ ಆಳ್ನೆಡ್ತಿ ತಿಗುನ್ ಗರಿ ಕಟ್ಗಂಟು
ತಲಮ್ಯಾಲ ಹೊತ್ಗಂಡು ನಡ್ದಂಗಾಯ್ತು

ಈ ಅಯ್ನೋರು
ಆ ಮುಳುಗ ಸೂರ್ಯನ್ ಕಡ
ಕಣ್ಣಾಡುಸ್ತ
ಆ ಆಳ್ಗ ಸನ್ನ ಮಾಡುದ್ರು

ಆ ಆಳು
ಆ ಸನ್ನುಕ್ಕ
ಒಂದೇ ದಾಪ್ಗ ಓಡ್ದ
*

ಆ ಮಾರ ನನ್ನ ಹದ ಮಾಡಿ
ಈ ಅಯ್ನೋರ್ ಪಾದ್ಗ ಮೆಟ್ಸಿ
‘ಹೆಂಗಿದ್ದು ಅಳಿ ಜೋಕಗಿದ್ದವ’ ಅಂತಂದು
ಒಂದೇಡ್ ತಿಂಗ್ಳೇ ಆಗಿ
ಅವತ್ತಿಂದ ಇವತ್ಗೂ
ಅವುನ್ ಸುಳುವೆ ಕಾಣಿ
*

ಸೂರ್ಯ ಮುಳುಗಿ
ಕತ್ಲು ಕವಿಕಂಡು
ಆ ಹೊತ್ಲಿ
ಅದ್ಯಾರ ಹತ್ತಾರ್ ಜನ ಮಾತಾಡ್ತ
ಬೇಲಿ ನೆಕ್ಕಂಡು ಬಂದಂಗಾಯ್ತು

ಈ ಅಯ್ನೋರು ನಗ್ತ ಮ್ಯಾಕೆದ್ದು
ಅತ್ತಗು ಇತ್ತಗು ಹೆಜ್ಜ ಹಾಕ್ತ..
ಆ ಬೇಲಿ ನೆಕ್ಕಂಡ್ ಬಂದವ್ರೂ
ನಗ್ತ ನಗ್ತ
ಕಪಲ ಬಾವಿ ಕಟ್ಟ ಮ್ಯಾಲ
ನಿಂತ್ಕಂಡೇ ತಿಕ ಊರುದ್ರು

ಅದೆ ಸವುಳ್ಗ
ಆ ಆಳು ತಲ ಮ್ಯಾಲ
ಎರುಡು ಪೆಟ್ಟಿ
ಹೆಂಡದ ಖಾನಿ ಹೊತ್ಕಂಡು
ಕೈಲಿ ತುಂಬುದ್ ಬ್ಯಾಗ ಹಿಡ್ಕಂಡು
ತ್ವಾಟುದ್ ಮಧ್ಯ
ತಿಗುನ್ ಬುಡ್ದಲಿ ಇಳ್ಕಿ
ಆಲುದ್ ಮರದಲ್ಲಿ
ಎಲ ಬುಡುಸ್ಕಂಡು
ಸರಂಜ್ ಮಾಡ್ತಿರದು ಕಾಣ್ತು
*

‘ಅಯ್ನೋರಾ ನಮ್ಗ
ಯಾವತಿದ್ರು ನೀವೆ
ಆದ್ರ ಮೊದುಲ್ತರ ಈಗ ಇಲ್ಲ’

‘ಹಂಗ ಬಾಯ ತಗಿಬ್ಯಾಡಿ..
ಇಲ್ಲಿ ಗೆಲ್ತಿನಿ ಗೆದ್ದೆ ಗೆಲ್ತಿನಿ
ಚೇರ್ಮೆನೂ ಆಗ್ತಿನಿ
ಅದಾಗಕ ನೀವಿಲ್ದೆ ಆದ್ದಾ..’

‘ಆಯ್ತು ಅಯ್ನೋರಾ
ಮಾತು ಎಳ್ಯಾದ್ ಬ್ಯಾಡ
ಆದ್ರ ಆಗ್ಗಿಂತ ಈಗ ಜಾಸ್ತಿನೆ ಗೆಯ್ಯದದ’

‘ಆಗ್ಲಿ ಅದೇನಾದ್ದ ಆಗ್ಲಿ
ನಂಗೀಗ ಬಲ ಬೇಕು ಬಲ’
ಅಂತ ತ್ವಾಟುದ್ ಮಧ್ಯಕ್ಕ ನಡುದ್ರು
*

ಆ ಆಳು ಸರಂಜಾಗಿ
ಎಲ್ರುಗು ಒಂದೊಂದ್
ಹೆಂಡುದ್ ಬಾಟ್ಲು ಕೊಟ್ಟು
ಆಮ್ಯಾಲ ಬುಡ್ಸಿಟ್ಟಿರ ಆಲ್ದೆಲ ಮ್ಯಾಕ್ಕ
ಒಂದೊಂದ್ ಮೀನುನ್ ಖಡಿ ಮಡ್ಗಿ
ಕುಡಿತಿರವ್ರ್ ಬಲಗೈಗ ತುರುಕುದ್ನ

ಈ ಅಯ್ನೋರು
ಹೆಂಡದ ಖಾನಿಗ ಕೈಯಾಕಿ
ಒಂದು ಹೆಂಡದ ಬಾಟ್ಲು ಎತ್ತಿ
ನಿಂತ್ಕಂಡೇ ಗಟಗಟ ಹೀರಿ
ಕಳ್ಳಪುರಿ ಕಾರಸ್ಯಾವ್ಗ
ಬಾಯ್ಗ ಹಾಕಳವತ್ಲಿ
ಊರೊಳಗ ನಾಯ್ಗಳು ಗಳ್ಳಾಕ್ತ
ದಿಕ್ಕಪಾಲಾಗಿ ಬೊಗ್ಳದು ಕೇಳ್ತಿತ್ತು

ಆಗ ಆ ಮುಂದಾಳ್ಗಳು
ಕುಡ್ದು ವಾಲಾಡ್ತ…

‘ಆ ಕಾಲ ಇದ್ನಲ್ಲ ಕಾಲ,
ಅವ್ನೈದುನ್ನ ಹಂಗೆ ಬುಟ್ಟದು
ನಿಮ್ಗು ಮುಳ್ಳೆ
ನಮ್ಗೂ ಮುಳ್ಳೆ ಅಯ್ನೋರಾ..

‘ಆಗ್ಲೆ ಅಂದಂಗ ಗೆಯ್ಯದದ ವಸಿ

‘ನೀವೇನ ಗೆದ್ಕತಿದ್ದರಿ
ಚೇರ್ಮನ್ನೂ ಆಯ್ತಿದ್ದರಿ
ಆದ್ರಾ.. ಆದ್ರಾ
ಆಮ್ಯಾಲುನ್ ಗತಿ ಅಯ್ನೋರಾ…’
ಅಂತ
ತರಾವರಿ ಮಾತಾಡದು
ಈ ಅಯ್ನೋರ್ ಬಾಯ ಕಟ್ಟಾಕಿ
ಬಾಟ್ಲು ಮ್ಯಾಲ ಬಾಟ್ಲು ಎತ್ತಿ
ಆ ಆಳ್ನ ಹೆಗುಲ್ಗ ಕೈಯಾಕಿ
ಮ್ಯಾಕ್ಕ ಕಣ್ಣಾಡ್ಸತರ ಕಂಡ್ರು
*

ಆಗ ಎಲ್ಲ ಮುಂದಾಳ್ಗಳು
ಕುಡ್ದ ಮತ್ಲಿ ವಾಲಾಡ್ತ
ತಲಗೊಂದ್ ಮಾತಾಡ್ತ
ಆ ಕುಡ್ದ ಮತ್ತು ನತ್ತಿಗೇರಿ
ಆ ಮತ್ತಲ್ಲೇ ಖಡಿ ಖಡಿ ಮೀನ
ತಿಂತ ಚಪ್ಪರ್ಸಿ
ಹಂಗ ಚಪ್ಪರ್ಸವತ್ಲಿ
ಆ ಮೀನುನ್ ಮುಳ್ಳು
ಅಂಗುಳ್ಗ ಸಿಕ್ಕಿ
ಕೆಮ್ಮಿ ಕ್ಯಾಕರಿಸಿ ಉಗಿತಿರದು
ತ್ವಾಟುದ್ ತುಂಬ ತುಂಬ್ಕತು

ಅತ್ತ
ಊರೊಳಗ
ನಾಯ್ಗಳು ಬೊಗಳದು
ಗಳ್ಳಾಕದು ಜೋರಾಗ್ತಾ..

ಇತ್ತ
ಕುಡ್ದವ್ರು ತಿಂದವ್ರು
ಕೆಮ್ಮಿ ಕ್ಯಾಕುರ್ಸಿ
ಮ್ಯಾಕ್ಕೆದ್ದು ವಾಲಾಡ್ತ
ಗೊಣುಗ್ತ ಗೊಣುಗ್ತ ಹೆಜ್ಕ ಕಿತ್ರು


-೭೫-

ಸುಡು ಬಿಸುಲು

ಕಲ್ಬುಟ್ರ ಓಣಿ ಗಕುಂ ಅಂತಿತ್ತು
ಯಾರಂದ್ರ ಯಾರೂ ಇಲ್ದೆರ ಹೊತ್ತು

ಈ ಅಯ್ನೋರು ಬೀಡಿ ಬಾಯ್ಗಿಟ್ಟು
ಕಡ್ಡಿಗೀರಿ ಹಸ್ಸಿ ಸೇಯ್ತ ಹೊಗ ಬುಡ್ತ
ಆ ಬುಟ್ಟ ಹೊಗನೇ ಬುಟ್ಕಣ್ಲಿ ನೋಡ್ತಾ..
*

ನೆನ್ನ ಓಟಾಕದು ಮುಗ್ದು
ಮಸ್ಸಂಜ ಹೊತ್ಲಿ
ಆ ಕಂತಕಟ್ಟ ಗದ್ದಮಾಳ್ದಲ್ಲಿ
ಕುಡ್ದವ್ರು ತಿಂದವ್ರು
‘ಗೆಲ್ತಿದ್ದರಿ ಕಣ ಬುಡಿ’
ಅಂತಂತ ಕಾಲ್ಕಿತ್ತೂ..
ಅವ್ರು ಕಾಲ್ಕಿತ್ತ ಗಳುಗ್ಗ
ಆ ಕಂತಕಟ್ಟ ಗದ್ದಮಾಳಾಗಿದ್ಮಾಳೆಲ್ಲ
ದಿಕ್ದಿಕ್ಕೂ ಗಕುಂ ಅಂತ ಬಣ್ಗುಡ್ತ
ಹೊತ್ತು ಸರಿತಾ ಕತ್ಲು ಕವಿಕಂಡಿತ್ತು

ಆಗ ಆ ಆಳು
ಆ ಕವಿಕಂಡಿರ ಕತ್ಲೊಳ್ಗ
“ಗೆಲ್ತಿನಿ ಅನ್ನದ್ನೂ ಬುಡಿ…
ಪಂಚಾಯ್ತಿ ಕುರ್ಚಿ ಕನುಸ್ನೂ ಬುಡಿ…
ಇದ ಗಿಟ್ಸಕ ಆ ತ್ವಾಟನು ಮಾರುದ್ರಿ
ಅದ್ನೂ ಬುಡಿ…
ಈ ಕಂತಕಟ್ಟ ಗದ್ದಮಾಳ
ನಂಗೊತ್ತಿರತರ
ತಕರಾರ ಹೊದ್ದಿ ಮನ್ಗದ”

ಅಂದದು ತಲ ಒಳ್ಗ ತುಂಬ್ಕಂಡು
ಮಗ್ಗುಲು ಬುಟ್ಟು ಎದ್ದು
ನನ್ನ ಮೆಟ್ಟಿ ಅಲ್ದು ಅಲ್ದು
ಸಾಕಾಗಿ ಉಸ್ಸ್ ಅಂತ
ಈ ಸುಡು ಬಿಸುಲ್ಲಿ
ಈ ಓಣಿ ಒಳ್ಗ ಕುಂತು ಬೀಡಿ ಸೇಯ್ತ
ಹೊಗ ಬುಡ್ತ
ಆ ಬುಟ್ಟ ಹೊಗ ಒಳ್ಗೇ
ಎಲ್ಲ ಸುಳ್ಕ ಬಂದೊತ್ಲಿ
ಪಡ್ಲು ದಿಕ್ಕಲಿ ದಿದ್ಕದಿದ್ಕ ಸದ್ದಾಯ್ತು

ಅಲಲಲೇ..
ಅಂವ ಓಣಿ ಒಳಗ ನಡುಮಧ್ಯ
ಕಲ್ಮೇಲ ಕಾಲಾಕಂಡು
ನೆಕ್ಕಂಡ್ ನೆಕ್ಕಂಡು ಓಡ್ಬತ್ತಿದ್ನ

ಅಂವ ಸತ್ತನ ಅಂತ ಎಲ್ರು ಅನ್ಕಂಡರ
‘ಆ ಎಳುರುಂಡಿ ಮಾದೇವುನ್ನ ಹೊಡ್ದು
ಉರಿತಿರ ಹುಲ್ಲುನ್ ಮೆದ್ಗ ಹಾಕುದ್ರಂತ’
ಅನ್ನದು ಸುತ್ಮತ್ಲ ಊರೊಳಗ ಗಲಕಾಕ್ತಿತ್ತು

ಅಂವುನ್ನ ಹೊಡ್ದು ಸಾಯ್ಸುದ್ದೆ ಸರಿ
ಇವ್ನೆಡಲಿ ಹೆಣೈಕ ಬದ್ಕಕಾಯ್ತಿತ್ತಾ
ತೂ ಸೂಳಮಗ ಹೋಗ್ಲಿ ಬುಡು

ಈ ಅಂವ
ಅಂದ್ರ, ಎಳುರುಂಡಿ ಮಾದೇವ,
ಜೈಲಿಂದ ತಪ್ಪುಸ್ಕ ತಿರಗಾಡ್ತಿದ್ದ
ಆ ಕಾಲುನ್ ಗಂಡು ಪರ್ಶುನೂ
ಉರಿತಿರ ಹುಲ್ಲುನ್‌ ಮೆದ್ಗ ಹಾಕಿ ಬೇಯ್ಸಿದ್ನಂತ

ಆಮ್ಯಾಲ ಇನ್ನೊಂದು ಮಾತು,
ಆ ಪರ್ಶು ಅಂವುನ್ನ
ಅಂದ್ರ,
ಎಳುರುಂಡಿ ಮಾದೇವುನ್ನ
ಹುಲ್ಲುನ್ ಮೆದ ಒಳಕಾಕಿ
ಬೆಂಕಿ ಇಟ್ಟು
ಅದೆ ಮೆದ ಸುತ್ತ ಅರುಚ್ತ
‘ಆ ಅಯ್ನೋರ್ನೂ ಹಿಂಗೆ
ಸಾಯಿಸ್ತಿನಿ’ ಅಂದಿದ್ನಂತ

ಈ ಅಯ್ನೋರು ಜನ ಆಡ
ಆ ಈ ಮಾತ ಲೆಕ್ಕುಕ್ಕಿಡ್ದೆ
ಆ ಮಾತು ಈ ಮಾತು ಆಡಿ
ಸಾಗಾಕಿದ್ದದ ನಾ ಕಂಡಿದ್ದಿ

ಹಂಗೆ, ಸತ್ತಿರ ಪರ್ಶು ಎದ್ಬಂದು
ಎಳುರುಂಡಿ ಮಾದೇವುನ್ನ
ಹೆಂಗ್ ಸಾಯ್ಸಿನೂ…

ಅದ್ಕೂ ಮುಂಚ
ಈ ಕಾಲ್ನೈದ
ಚೆಂಗುಲಿ ಸಾಯ್ಸಿರ ಕೇಸ್ಲಿ ಜೈಲಲಿದ್ದಂವ

ಜೈಲಿಂದ ತಪ್ಪುಸ್ಕ ತಿರುಗ್ತ
ಒಳ್ಗೊಳ್ಗೆ ಪುಂಡೈಕ್ಳ ಪುಂಡ್ಕಟ್ಟಿ
ಸುತ್ಮತ್ಲು ಊರೂರ್ ಜನುಕ್ಕ
ನೆಮ್ದಿ ಕೆಡ್ಸಿದ್ನ ಅನ್ನದೂ ಒಂದಿತ್ತು

ಈ ದೊಂಬಿ ಒಳಗ
ಪರ್ಶು,
ಕೊಲ ಆಗಿರ ಸುದ್ದಿ ಇತ್ತು

ಆದ್ರ, ಪರ್ಶು ಸತ್ತಿಲ್ಲ ಅನ್ನದು
ದಿಟುವಾಗಿದ್ದು….

ಅವತ್ತು ಮಟಮಟ ಮದ್ಯಾನ
*

ಗಡ್ಡ ಬುಟ್ಟು
ಇಕ್ಕಂಡಿರ ಬಟ್ಟನೂ ಜೂಲಾಗಿ
ಜೊಲ್ಲ ಸುರಿಸ್ತ
ಕೈಲಿ ಚಾಕಿಡ್ಕಂಡು
ತಿಗುನ್ ಮರದ ಮ್ಯಾಲಿಂದ
ದುಬಾರಂತ ದುಮುಕಿ
ಓಡಿ ಬತ್ತಿರದ ನೋಡ ನೋಡ್ತ
ಈ ಅಯ್ನೋರು ಆ ಮಾರನ ಕೈಹಿಡ್ದು
ದಿಗುಲ್ ಕೊಡ್ದೆ
ಕಾಲ ಒದರಿ ಓಡ್ತ…

ಆ ಓಡ ರಬುಸುಕ್ಕ
ಕಾಲು ತೆವ್ರಿಗ ಎಡ್ರೀ..
ಹಂಗ ಎಡ್ರುದ್ ರಬುಸುಕ್ಕ
ಕಾಲಿಂದ ನನ್ ಕಿಬ್ರಿ ಕಂಕ್ಳು ಕಿತ್ತು
ದಿಕ್ಕಾಪಾಲಾಗ ಹೊತ್ಲಿ
ಈ ಅಯ್ನೋರ್ ಎದಲಿ
ಆ ಪರ್ಶೂ ಉಳ್ದು…

ಆ ಪರ್ಶು ಉಳ್ದನ ಅಂದ್ರ
ಅಂವ
ಅದೆ, ಎಳುರುಂಡಿ ಮಾದೇವ
ಇನ್ನೂ
ಜೀವ ಉಳಿಸ್ಕಂಡು
ಉಳ್ದಿರ ಮಾತಿಲ್ಲ ಬುಡು
ಅಂತ
ನಿಚಾಯಿಸ್ಕಂಡು ಇರವತ್ಲೀ…

ಈ ಸುಡು ಬಿಸುಲ್ಲಿ
ಈ ಕಟ್ಬುಟ್ರ ಓಣಿಲಿ
ಕಲ್ಮೇಲ ಕಾಲಾಕಂಡು
ನೆಕ್ಕಂಡ್ ನೆಕ್ಕಂಡ್ ಬತ್ತಿರದು ಕಂಡು
ಆ ಸುಡು ಬಿಸುಲ್ಗು ಅದ್ಕೂ
ಈ ಅಯ್ನೋರು ಬೆವ್ತು
ಕಣ್ಣ ರಪ್ಪನು ಬಡಿದೆ ಇರತರ ನೋಡ್ತ..

“ಮಾದೇವ ನೀನಾ..”
“ಊ್ಞ ನಾನೇ ಅಯ್ನೋರಾ..”
“ಅದೇನ ಕೇಳ್ಪಟ್ಟಿ”
“ಬೆವ್ರು ಹರಿತಾ ಅದ ಸೀಟ್ಗಳಿ”
“ನೋಡು ಬಿಸ್ಲು ಹೆಂಗ ರವ್ಗುಟ್ತ ಅದ..”
“ಊ್ಞ ಅಯ್ನೋರಾ ಬಿಸ್ಲು..”
“ಯಾಕ ಮನುಸ್ಗೆ ಸರಿಲ್ಲ ಕ ಮಾದೇವ”
“ಗೊತ್ತು ಬುಡಿ..”
“ನಾ ತಪ್ಪು ಮಾಡ್ದಿ ಅನ್ಸುತ್ತ”
“ಅಯ್ನೋರಾ
ಮೈಸೂರು ಗಡಿಯಾರುತ್ತವ್
ಕಾಲ್ನೆಣ್ಣು ಸವ್ವಿ ನೋಡ್ದಂಗಾಯ್ತು
ಅದ್ಯಾರ ಇನ್ನೊಬ್ಬ ಇದ್ನ ಜೊತ್ಗ
ಹಂಗೆ ಒಂದು ಚಿಂಕ್ಕಂಡಿತ್ತು
ಕೈಹಿಡ್ಕಂಡು ನಡ್ಕ ಹೋಯ್ತಿದ್ರು”
“ಅದು ಬುಡು ಮಾದೇವ,
ನಂಗ ಕುಂದ್ರಕಾಯ್ತಿಲ್ಲ ನಿಂದ್ರಕಾಯ್ತಿಲ್ಲ
ಸಂದಕ ಬಂದು ಕಾಣು ವಸಿ
ಕಂತಕಟ್ಟ ಗದ್ದಮಾಳುತ್ತವ್ಕ
ತಾವ್ರ ಕೆರ ಮಗ್ಗುಲ್ಲಿ ಇರ್ತಿನಿ
ಬರವತ್ಗ ಅದ ಗೊತ್ಮಾಡ್ಕ ಬಾ”
“ಊ್ಞ..”

ಅಂತ ಇಬ್ರೂ ಮ್ಯಾಕ್ಕೇಳವತ್ಲಿ
ಸೂರ್ಯ ಮುಳಗ ಹೊತ್ತು

ಆ ಹೊತ್ಲಿ
ಅಂವ ಸುಡು ಬಿಸುಲ್ಲಿ
ಆಗ ಬಂದ ದಿಕ್ಕೇ
ಮೊಖ ಮಾಡ್ತ ನಡಿತಿದ್ರ
ಮ್ಯಾಲ ಬಣ್ಣ ಬಳ್ದಿರತರ
ಆ ದಿಕ್ತುಂಬ ಕೆಂದೂಳು ಕಣ್ಗ ರಾಚ್ತಿತ್ತು

-ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x