ಸಂಪಾದಕೀಯ

ಪಂಜುವಿನ ಕನ್ನಡ ಪದಗಳ ಮೆರವಣಿಗೆಗೆ ನೂರರ ಸಂಭ್ರಮ: ನಟರಾಜು ಎಸ್. ಎಂ.


ಡಿಸೆಂಬರ್ 3, 2014 ರಂದು ವಿಶ್ವ ವಿಕಲ ಚೇತನರ ದಿನದ ಸಲುವಾಗಿ ಎನ್ ಜಿ ಓ ಒಂದರ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅವತ್ತೇ ಪಶ್ಚಿಮ ಬಂಗಾಳದ ಸಿಎಂ ನಾನಿರುವ ಪುಟ್ಟ ಊರಾದ ಜಲ್ಪಾಯ್ಗುರಿಗೆ ಆಗಮಿಸಿದ್ದರು. ಆ ಕಾರಣಕ್ಕೆ ಇಡೀ ಊರಿನ ತುಂಬಾ ಬಂದೋಬಸ್ತಿನ ವಾತಾವರಣವಿತ್ತು. ಆ ಎನ್ ಜಿ ಓ ಆಫೀಸಿನ ಹತ್ತಿರದ ಪ್ರವಾಸಿ ಮಂದಿರದಲ್ಲಿ ಸಿಎಂ ತಂಗಿದ್ದ ಕಾರಣ ಆ ಎನ್ ಜಿ ಓ ಗೆ ಮಧ್ಯಾಹ್ನದವರೆಗೂ ತನ್ನ ಕಾರ್ಯಕ್ರಮಗಳನ್ನು ಶುರು ಮಾಡಲು ಒಂಚೂರು ತೊಂದರೆಯೇ ಆಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ ಎಂದು ನನಗೆ ಅವರು ತಿಳಿಸಿದ್ದರಿಂದ ಹತ್ತು ಗಂಟೆಯ ಒಳಗೆ ಅಲ್ಲಿಗೆ ತಲುಪಿದ್ದೆ. ಅಲ್ಲಿಗೆ ತಲುಪಿದಾಗ ಪಕ್ಕದ ಪ್ರವಾಸಿ ಮಂದಿರದಲ್ಲಿ ತಂಗಿರುವ ಸಿಎಂ ಅಲ್ಲಿಂದ ಹೊರಡದ ಹೊರತು ನಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಕಷ್ಟ ಎಂಬ ಅಳಲನ್ನು ತೋಡಿಕೊಂಡ ಕಾರ್ಯಕ್ರಮದ ಆಯೋಜಕರು ತಾವು ವಿಶ್ವ ವಿಕಲ ಚೇತನರ ದಿನದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರಣೆ ನೀಡುತ್ತಾ ಹೋದರು. ಒಂದೆಡೆ ರಕ್ತದಾನ ಶಿಬಿರ ನಡೆಯುತ್ತಿದ್ದರೆ ಮತ್ತೊಂದೆಡೆ ದೂರದ ಊರುಗಳಿಂದ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿರುವ ವಿಕಲ ಚೇತನರು ಸಾಲಾಗಿ ಕುರ್ಚಿಗಳಲ್ಲಿ ಕುಳಿತ್ತಿದ್ದರು. ಇನ್ನೊಂದೆಡೆ ಆವತ್ತಿನ ಕಾರ್ಯಕ್ರಮಕ್ಕಾಗಿ ಊಟ ಉಪಚಾರದ ತಯಾರಿ ನಡೆತ್ತಿತ್ತು. ಆ ಎನ್ ಜಿ ಓ ದ ಕಾರ್ಯದರ್ಶಿ ನನ್ನನ್ನು ಕರೆದೊಯ್ದು ಅಂಗವಿಕಲರಿಗಾಗಿ ಅವರು ನಡೆಯುತ್ತಿರುವ ಶಾಲೆ, ಬಡವರಿಗೆ ತುಂಬಾ ಕಡಿಮೆ ದರದಲ್ಲಿ ನೀಡುವ ಔಷದಿಗಳ ಅಂಗಡಿ, ಪುಟ್ಟ ಆಸ್ಪತ್ರೆ, ತಮ್ಮ ಪೆಥಾಲಜಿ ಲ್ಯಾಬ್, ಮತ್ತು ಕಚೇರಿಯನ್ನು ನನಗೆ ತೋರಿಸುತ್ತಾ ಹೋದರು. ಆರೋಗ್ಯ ಇಲಾಖೆಯ ರೆಫ್ರೆಸೆಂಟೇಟೀವ್ ಆಗಿ ಹೋಗಿದ್ದ ನನಗೆ ಅವರ ಕಾರ್ಯವೈಖರಿಗಳ ನೋಡಿ ಒಂತರಾ ಖುಷಿ ಆಯಿತು. 

ಕಾರ್ಯಕ್ರಮ ಮಧ್ಯಾಹ್ನದ ಮೇಲೆ ಶುರುವಾಗುತ್ತದೆ ಎಂದರಿತ ನಾನು ಆ ಆಯೋಜಕರಿಗೆ ವಂದಿಸಿ ಅಲ್ಲಿಂದ ವಾಪಸ್ಸು ಆಫೀಸಿಗೆ ಬರುವಾಗ ಕಳೆದ ವರ್ಷ ನಮ್ಮ ಪಬ್ಲಿಕ್ ಹೆಲ್ತ್ ಬ್ರಾಂಚ್ ನ ನೇತೃತ್ವದಲ್ಲಿ ನಡೆದ ವಿಕಲ ಚೇತನರ ಕ್ಯಾಂಪ್ ಗಳು ನೆನಪಿಗೆ ಬಂದವು. ಜಲ್ಪಾಯ್ಗುರಿ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿರುವ ವಿಕಲ ಚೇತನರಿಗೆ ತಾಲ್ಲೂಕಿನ ಒಂದಷ್ಟು ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿ ತಜ್ಞ ವೈದ್ಯರಿಂದ ವಿಕಲ ಚೇತನರನ್ನು ಪರೀಕ್ಷೆಗೆ ಒಳಪಡಿಸಿ ಸ್ಥಳದಲ್ಲಿಯೇ ಅವರಿಗೆ ಸರ್ಟಿಫಿಕೇಟ್ ಮತ್ತು ವಿಕಲ ಚೇತನರು ಎಂಬ ಕಾರ್ಡ್ ವಿತರಿಸುವ ಶಿಬಿರಗಳು ಅವಾಗಿದ್ದವು. ಸರ್ಟಿಫಿಕೇಟ್ ಕ್ಯಾಂಪ್ ಗಳನ್ನು ಅತಿ ಯಶಸ್ವಿಯಾಗಿ ನಿರ್ವಹಿಸಿದ್ದ ನನಗೆ ಆ ಕ್ಯಾಂಪ್ ಗಳಲ್ಲಿ ಕಂಡ ನೂರಾರು ವಿಕಲ ಚೇತನರ ಮುಖಗಳು ಮತ್ತು ಆ ಎನ್ ಜಿ ಓ ನಲ್ಲಿ ಕಂಡ ದೃಶ್ಯಗಳು ಮನಃಪಟಲದಲ್ಲಿ ಹಾದು ಹೋಗಲು ಶುರುಮಾಡಿದಾಗ ಸಡನ್ ಆಗಿ ಪಂಜುವಿನಲ್ಲೇಕೆ ವಿಕಲ ಚೇತನರ ಕುರಿತು ಒಂದು ವಿಶೇಷ ಸಂಚಿಕೆ ತರಬಾರದು ಎನಿಸಿತು. ಹಾಗೆ ಅನಿಸಿದ್ದನ್ನು ಆ ಕ್ಷಣಕ್ಕೆ ಆಫೀಸಿಗೆ ಬಂದು ಒಬ್ಬರಿಗೆ ಮೆಸೇಜ್ ಸಹ ಮಾಡಿಬಿಟ್ಟಿದ್ದೆ. ಪ್ರತಿ ಕೆಲಸವನ್ನು ಮಾಡುವ ಮೊದಲು ಆ ಕೆಲಸದ ನೀಲನಕ್ಷೆಯನ್ನು ಪೇಪರ್ ಮೇಲೆ ಬರೆದಿಡಬೇಕು ಎನ್ನುವುದನ್ನು ಪಾಲಿಸುವ ನಾನು ನನ್ನ ಆಫೀಸಿನ ಕೆಲಸದ ಬಿಡುವಿನ ವೇಳೆಯಲ್ಲಿ ಡೈರಿಯ ಪುಟಗಳ ಮೇಲೆ ನನಗನಿಸಿದ ಟಾಪಿಕ್ ಗಳ ನೋಟ್ ಮಾಡುತ್ತಾ ಹೋಗಿದ್ದೆ. ಆ ಕ್ಷಣಕ್ಕೆ ತುಂಬಾ ದಿನಗಳಿಂದ ನನ್ನನ್ನು ಒಮ್ಮೆ ಪಂಜುವಿನ ಎಡಿಟರ್ ಮಾಡಿ  ಎನ್ನುವ ಅರುಣ್ ರವರ ಮಾತು ಸಹ ಗುಂಯ್ ಗುಡುತ್ತಿತ್ತು. ಅವತ್ತು ಹಾಗೆ ನನ್ನ ಡೈರಿಯಲ್ಲಿ ಮಾಡಿದ ನೀಲ ನಕ್ಷೆಯ ಫಲಿತಾಂಶ ಇವತ್ತಿನ ಈ ಸಂಚಿಕೆ. ಖುಷಿಯ ಸಂಗತಿಯೆಂದರೆ ಈ ಸಂಚಿಕೆಯ ವಿಶೇಷ ಅತಿಥಿ ಸಂಪಾದಕರ ಗೌರವವನ್ನು ನಮ್ಮ ಪಂಜುವಿನ ವ್ಯಂಗ್ಯ ಚಿತ್ರಕಾರ ಅರುಣ್ ನಂದಗಿರಿಯವರಿಗೆ ನೀಡಲಾಗಿದೆ. ಅರುಣ್ ರವರು ಒಬ್ಬ ವಿಶಿಷ್ಟ ಚೇತನ. ಅವರು ನಮ್ಮ ಪಂಜುವಿನ ರೆಗ್ಯುಲರ್ ವ್ಯಂಗ್ಯ ಚಿತ್ರಕಾರರಾಗಿ ಸಲ್ಲಿಸಿರುವ ಸೇವೆಗೆ ಪಂಜು ಬಳಗ ಎಂದೆಂದಿಗೂ ಚಿರ ಋಣಿಯಾಗಿರುತ್ತದೆ. ಹಾಗೆಯೇ ಮತ್ತೊಂದು ಖುಷಿಯ ಸಂಗತಿ ಎಂದರೆ ಈ ಸಂಚಿಕೆ ಪಂಜುವಿನ ನೂರನೇ ಸಂಚಿಕೆಯಾಗಿದೆ. 

ಜನವರಿ 21, 2013 ರಿಂದ ಪ್ರಾರಂಭವಾಗಿರುವ ಪಂಜು ತಾನು ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನದ ವಿಶೇಷ ಸಂಚಿಕೆ ಹೊರತಂದಿತ್ತು. ತದ ನಂತರ 25ನೇ ವಾರದ ಖುಷಿಗೆ ಐವತ್ತನೇ ವಾರದ ಸಂಭ್ರಮಕ್ಕೆ ಅಂತ ವಿಶೇಷ ಸಂಚಿಕೆಗಳನ್ನೂ ಸಹ ಹೊರತಂದಿತ್ತು. ಈ ವರ್ಷ ಪಂಜು ಇಲ್ಲಿಯವರೆಗೆ ವಿಶ್ವ ಕವಿತಾ ದಿನದ ವಿಶೇಷ ಸಂಚಿಕೆ, ವಿಶ್ವ ಮಹಿಳಾ ದಿನದ ವಿಶೇಷ ಸಂಚಿಕೆ, ಮಕ್ಕಳ ಹಕ್ಕುಗಳ ಕುರಿತ ವಿಶೇಷ ಸಂಚಿಕೆಗಳನ್ನು ಪ್ರಕಟಿಸಿದೆ. ಪಂಜು ಈಗ ನೂರು ವಾರಗಳ ಕುರುಹುವಿಗಾಗಿ  ಎರಡು ಸಾವಿರದ ಹದಿನಾಲ್ಕರ ವಿಶೇಷ ಸಂಚಿಕೆಗಳ ಸಾಲಿಗೆ ವಿಶಿಷ್ಟ ಚೇತನರ ಕುರಿತ ಈ ಸಂಚಿಕೆ ಸೇರ್ಪಡೆ ಮಾಡಿದೆ. ಪಂಜುವಿನಲ್ಲಿ ನೀವು ಓದುತ್ತಿರುವ ಈ ವಾರದ ಮೂವತ್ತಕ್ಕೂ ಹೆಚ್ಚು ಬರಹಗಳು ಕೇವಲ ಐದು ದಿನಗಳಲ್ಲಿ ಪಂಜುವಿನ ಮೇಲ್ ಐಡಿಗೆ ಬಂದು ಸೇರಿವೆ ಎನ್ನುವುದನ್ನು ಹೇಳಿಕೊಳ್ಳಲು ಖುಷಿಯಾಗುತ್ತದೆ. ನಿಮ್ಮ ಓದು ನಿಮ್ಮ ಬರಹ ನಿಮ್ಮ ಸಪೋರ್ಟ್ "ಪಂಜು" ಕನ್ನಡ ಅಂತರ್ಜಾಲ ಪತ್ರಿಕೆಗಳ ಪೈಕಿ ತನ್ನದೇ ವಿಶಿಷ್ಟ ಛಾಪು ಮೂಡಿಸುವಲ್ಲಿ ತುಂಬಾ ಸಹಕಾರಿಯಾಗಿರುವುದಕ್ಕೆ ಪಂಜು ಬಳಗ ನಿಮ್ಮೆಲ್ಲರಿಗೂ ಎಂದೆಂದಿಗೂ ಚಿರ ಋಣಿಯಾಗಿರುತ್ತದೆ. ನಿಮ್ಮ ಪ್ರೀತಿ ಹೀಗೆಯೇ ಇರಲಿ.. 

ಪ್ರೀತಿಯಿಂದ 
ಪಂಜು ಬಳಗದ ಪರವಾಗಿ
ನಟರಾಜು 

******

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಪಂಜುವಿನ ಕನ್ನಡ ಪದಗಳ ಮೆರವಣಿಗೆಗೆ ನೂರರ ಸಂಭ್ರಮ: ನಟರಾಜು ಎಸ್. ಎಂ.

  1. ನೂರು ಸಂಚಿಕೆಗಳನ್ನು ಹೊರ ತಂದಿರುವ ನಿಮ್ಮ ಬಳಗಕ್ಕೆ ಅಭಿನಂದನೆಗಳು. ನೂರನೆಯ ಸಂಚಿಕೆ ಅಂಗ ವಿಕಲರ ಬಗ್ಗೆ ವಿಶೇಷ ಸಂಚಿಕೆಯನ್ನು ಆಗಿ ಮಾಡಿರುವುದು, ನಿಮ್ಮ ಸಾಮಾಜಿಕ ಕಳಕಳಿಯ ಸಂಕೇತ.

    ಪ್ರತೀ ಸೋಮವಾರ ನಿಮ್ಮ ಪತ್ರಿಕೆ ಪ್ರಕಟವಾಗುತ್ತಲೇ ಇರಲಿ, ಓದುಗರ ಸಂಖ್ಯೆಯೂ ಹೆಚ್ಚಾಗುತ್ತಾ ಹೊಗಲಿ. ಶುಭಾಶಯಗಳೊಂದಿಗೆ

  2. ಪಂಜು ಪತ್ರಿಕೆ ನೂರು ಸಂಚಿಕೆಗಳನ್ನು ತಲುಪಿರುವುದು ನಿಜಕ್ಕೂ ಸಂತಸದ ವಿಚಾರ. ಯುವ ಬರಹಗಾರರಿಗೆ ನಿಮ್ಮ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯ. ಹೀಗೇ ಪಂಜು ಎಲ್ಲೆಡೆ ತನ್ನ ಪ್ರಭಾವಳಿಯನ್ನು ಪಸರಿಸಲಿ. ಶುಭವಾಗಲಿ.

  3. ಕನ್ನಡ ಪದಗಳ ಮೆರವಣಿಗೆ 'ಪಂಜು 'ವಿನ ಸೆಂಚುರಿ ಸಂಚಿಕೆಗೆ ನನ್ನ ಅಭಿನಂದನೆಗಳು.

  4. S.M.ನಟರಾಜುರವರ ಸಮರ್ಥ ಸಾರಥ್ಯದಲ್ಲಿ ಅದ್ದೂರಿ ಸೆಂಚುರಿಬಾರಿಸಿರುವ ಪಂಜು ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

  5. ಸದ್ಯ ನಾನು ಕಂಡ ಮಟ್ಟಿಗೆ ತರಂಗ ವಾರ ಪತ್ರಿಕೆ ಮೊದಲ ಸ್ಥಾನ ಪಡೆದರೆ ಪಂಜು ಎರಡನೆಯ ಸ್ಥಾನದಲ್ಲಿ ಓಡುತ್ತಿದೆ. ನೂರು ಸಂಚಿಕೆ ಸಾವಿರವಾಗಲಿ, ಸಾವಿರ ಬೆಳಗಿ ಸಾವಿರಾರಗಲಿ. ಹೊಸ ಹೊಸ ವಿಷಯಗಳಬಗ್ಗೆ ಒಳ್ಳೆಯ ಲೇಖನ, ಕತೆ, ಕವನ, ಛಾಯಾ ಚಿತ್ರ, ವ್ಯಂಗ್ಯ ಚಿತ್ರ ಹೀಗೆ ಎಲ್ಲಾ ಬೇರೆ ಬೇರೆ ಅಭಿರುಚಿಯ ಓದುಗರಿಗೆ ಪಂಜು ಪಂಜಿನ ಬೆಳಕ ತೋರಿಸಿ ಮುಂದೊಂದು ದಿನ ತರಂಗಕ್ಕೆ ಸಮಾನಾಂತರವಾಗಲಿ. ಯುವ ಜನರನ್ನು ಓದಿನತ್ತ ಸೆಳೆಯುವಲ್ಲಿ ಸಫಲವಾಗಲಿ ಎಂಬುದೇ ನನ್ನ ಹೃದಯಾಳದ ಮಾತು.

Leave a Reply

Your email address will not be published. Required fields are marked *