ಝೆನ್-ಸೂಫಿ ಕತೆಗಳು

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ಸಮಸ್ಯೆಗೆ ಹೋಜ ಸೂಚಿಸಿದ ಪರಿಹಾರ

ಒಂದು ದಿನ ಹೋಜ ತನ್ನ ಪರಿಚಯದವನೊಬ್ಬನನ್ನು ರಸ್ತೆಯಲ್ಲಿ ಸಂಧಿಸಿದ.

ಆ ಮನುಷ್ಯ ಚಿಂತಾಕ್ರಾಂತನಾಗಿದ್ದಂತೆ ಗೋಚರಿಸುತ್ತಿದ್ದದ್ದರಿಂದ ಹೋಜ ಅವನನ್ನು ಕಾರಣ ವಿಚಾರಿಸಿದ.

“ನನಗೊಂದು ಭಯಾನಕ ಕನಸು ಬೀಳುತ್ತಿದೆ,” ವಿವರಿಸಿದ ಆತ, “ನನ್ನ ಮಂಚದ ಕೆಳಗೆ ಒಂದು ಪೆಡಂಭೂತವೊಂದು ಅಡಗಿ ಕುಳಿತಿರುವಂತೆ ಪ್ರತೀ ದಿನ ರಾತ್ರಿ ಕನಸು ಬೀಳುತ್ತಿದೆ. ಎದ್ದು ನೋಡಿದರೆ ಅಲ್ಲೇನೂ ಇರುವುದಿಲ್ಲ. ಎಂದೇ ನಾನೀಗ ವೈದ್ಯರ ಹತ್ತಿರ ಹೋಗುತ್ತಿದ್ದೇನೆ. ೧೦೦ ದಿನಾರ್‌ ಶುಲ್ಕ ಕೊಟ್ಟರೆ ಇದಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.”

“೧೦೦ ದಿನಾರ್‌ಗಳೇ? ೫ ದಿನಾರ್‌ಗಳಿಗೇ ಆ ಸಮಸ್ಯೆಯನ್ನು ನಾನು ನಿವಾರಿಸುತ್ತೇನೆ,” ಹೇಳಿದ ಹೋಜ.

ಆತ ತಕ್ಷಣವೇ ೫ ದಿನಾರ್‌ಗಳನ್ನು ಹೋಜನಿಗೆ ಕೊಟ್ಟು ಪರಿಹಾರ ಸೂಚಿಸುವಂತೆ ಕೋರಿದ.

“ಪರಿಹಾರ ಬಲು ಸುಲಭ. ನಿನ್ನ ಮಂಚದ ಕಾಲುಗಳನ್ನು ಕತ್ತರಿಸಿ ಹಾಕು. ಪೆಡಂಭೂತಕ್ಕೆ ಮಂಚದ ಕೆಳಗೆ ಅಡಗಲು ಸಾಧ್ಯವಾಗುವುದಿಲ್ಲ,” ಕಿಸೆಗೆ ದುಡ್ಡು ಹಾಕಿ ಹೇಳಿದ ಹೋಜ.

*****

೨. ರಾಜ ಹೋಜ

ಯಾವುದೋ ಆಲೋಚನೆಯಲ್ಲಿ ಮುಳುಗಿದ್ದ ಹೋಜ ಅರಮನೆಯ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಮನುಷ್ಯನೊಬ್ಬನಿಗೆ ಢಿಕ್ಕಿ ಹೊಡೆದ. ಆತನಿಗೆ ವಿಪರೀತ ಸಿಟ್ಟು ಬಂದು ಕೂಗಾಡತೊಡಗಿದ, ಹೋಜನಿಗೆ ಶಾಪ ಹಾಕತೊಡಗಿದ.

“ನಾನು ಯಾರೆಂಬುದು ನಿನಗೆ ಗೊತ್ತಿದೆಯೇ?” ಆತ ಕಿರುಚಿದ. “ನಾನು ರಾಜನ ಆಪ್ತ ಸಲಹೆಗಾರ!”

“ಬಹಳ ಸಂತೋಷ,” ಹೇಳಿದ ಹೋಜ. “ನಾನಾದರೋ, ಒಬ್ಬರಾಜ.”

“ಒಬ್ಬ ರಾಜ?” ಕೇಳಿದ ಆತ. “ನೀವು ಯಾವ ರಾಜ್ಯವನ್ನು ಆಳುತ್ತಿದ್ದೀರಿ?”

“ನಾನು ನನ್ನನ್ನೇ ಆಳುತ್ತೇನೆ. ನನ್ನ ಭಾವೋದ್ವೇಗಗಳನ್ನು ನಾನು ಸಂಪೂರ್ಣವಾಗಿ ನಿಯಂತ್ರಿಸುತ್ತೇನೆ. ನೀನು ಈಗ ತಾಳ್ಮೆ ಕಳೆದುಕೊಂಡಂತೆ ನಾನು ತಾಳ್ಮೆ ಕಳೆದುಕೊಳ್ಳುವುದನ್ನು ನೀನು ಎಂದೆಂದಿಗೂ ನೋಡುವುದಿಲ್ಲ.”

ಆ ಸಲಹೆಗಾರ ಹೋಜನ ಕ್ಷಮೆ ಕೇಳಿ ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಹೊರಟುಹೋದ.

*****

೩. ಹುಳಿ ಉತ್ತರ!

ಒಂದು ದಿನ ಪರಿಚಿತನೊಬ್ಬ ನಜ಼ರುದ್ದೀನನ್ನು ಕೇಳಿದ, “ನಿನ್ನ ಹತ್ತಿರ ೪೦ ವರ್ಷಗಳಷ್ಟು ಹಳೆಯದಾದ ವಿನಿಗರ್‌ ಇದೆಯೆಂಬುದು ತಿಳಿಯಿತು, ನಿಜವೇ?”

“ನಿಜ.”

“ಸ್ವಲ್ಪ ನನಗೆ ಕೊಡುವೆಯಾ?”                                                                                             

“ಕೇಳಿದವರಿಗೆಲ್ಲ ನಾನು ವಿನಿಗರ್‌ ಕೊಟ್ಟಿದ್ದಿದ್ದರೆ ಅದು ೪೦ ವರ್ಷ ಹಳೆಯದಾಗುವಷ್ಟು ಕಾಲ ಉಳಿಯುತ್ತಲೇ ಇರಲಿಲ್ಲ!”

*****

೪. ಹೋಜನ ಎತ್ತು

ಕುದುರೆಗಳ ಓಟದ ಸ್ಪರ್ಧೆಯೊಂದಕ್ಕೆ ನೋಂದಾಯಿಸಲು ಸ್ಪರ್ಧಿಗಳು ಸಾಲಾಗಿ ನಿಂತಿದ್ದರು.

ಅಲ್ಲಿಗೆ ಮುಲ್ಲಾ ನಜ಼ರುದ್ದೀನ್‌ ಹೋಜ ಒಂದು ಎತ್ತಿನೊಂದಿಗೆ ಬಂದು ಅದನ್ನು ಸ್ಪರ್ಧೆಗೆ ಸೇರಿಸಿಕೊಳ್ಳಬೇಕೆಂದು ಹೇಳಿದ.

ಸಂಘಟಕರು ಪ್ರತಿಕ್ರಿಯಿಸಿದರು, “ನಿನಗೇನು ಹುಚ್ಚು ಹಿಡಿದಿದೆಯೇ? ಕುದುರೆಗಳ ಜೊತೆ ಅದು ಸ್ಪರ್ಧಿಸಿ ಗೆಲ್ಲಲು ಸಾಧ್ಯವೇ?”

ಹೋಜ ಪ್ರತಿಕ್ರಿಯಿಸಿದ, “ನಿಮಗೆ ನನ್ನ ಎತ್ತಿನ ಕುರಿತು ಏನೇನೂ ತಿಳಿದಿಲ್ಲವಾದ್ದರಿಂದ ನೀವಿಂತು ಹೇಳುತ್ತಿದ್ದೀರಿ. ಅದು ಕರುವಾಗಿದ್ದಾಗ ಹೆಚ್ಚುಕಮ್ಮಿ ಕುದುರೆಮರಿಯಷ್ಟೇ ವೇಗವಾಗಿ ಓಡುತ್ತಿತ್ತು. ಈಗ ಅದು ಬೆಳೆದು ದೊಡ್ಡದಾಗಿದೆ, ಅಂದ ಮೇಲೆ ಅದು ಈಗ ಇನ್ನೂ ವೇಗವಾಗಿ ಓಡಬೇಕಲ್ಲವೇ?”

*****

೫. ಅಧಿಮಾರಾಟಗಾರ

ನಜ಼ರುದ್ದೀನ್‌ ಹೋಜ ತನ್ನ ಮನೆಯನ್ನು ಮಾರಲು ಎಷ್ಟು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಒಂದು ದಿನ ಅವನು ಮನೆಯ ಗೋಡೆಯೊಂದರಿಂದ ಒಂದು ಇಟ್ಟಿಗೆಯನ್ನು ಕಿತ್ತು ತೆಗೆದ. ಗೋಡೆ ಬಿದ್ದೀತೆಂದು ಭಯಭೀತಳಾದ ಅವನ ಹೆಂಡತಿ ಕೇಳಿದಳು, “ಅದನ್ನೇಕೆ ಕಿತ್ತು ತೆಗೆದೆ?”

ನಜ಼ರುದ್ದೀನ್ ವಿವರಿಸಿದ, “ಓ ಮೂರ್ಖ ಹೆಂಗಸೇ, ನಿನಗೇನು ತಿಳಿದಿದೆ. ಏನನ್ನಾದರೂ ಮಾರಾಟ ಮಾಡಬೇಕಾದರೆ ಅದರ ಸಣ್ಣಭಾಗವನ್ನು ನಮೂನೆಯಾಗಿ ತೋರಿಸಬೇಕಾಗುತ್ತದೆ. ಇದನ್ನು ನಾನು ನಮ್ಮ ಮನೆಯ ನಮೂನೆಯಾಗಿ ತೋರಿಸುವವನಿದ್ದೇನೆ!”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *