ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ಮಾಡದೇ ಹತ್ತಿರ-ಹತ್ತಿರ ವರ್ಷವಾಗಿತ್ತು. ಜಾಗತಿಕ ಹವಾಮಾನ ಬದಲಾವಣೆ ಜಾಥಾವನ್ನು ಹಠಕ್ಕೆ ಬಿದ್ದು ಆಯೋಜಿಸಿದ್ದೆ, ಯಾವುದೇ ಕಾರ್ಯಕ್ರಮ ಮಾಡುವುದಾದರೂ ಮುಖ್ಯವಾಗಿ ಹಣದ ಅವಶ್ಯಕತೆ ಇರುತ್ತದೆ. ಹಣ ಹೊಂದಿಸುವುದು ಸಮಸ್ಯೆಯೇ ಸರಿ. ಜಗದ ಉಳಿವಿಗೆ, ನಾಳಿನ ಮಕ್ಕಳ ಭವಿಷ್ಯಕ್ಕೆ ಏನಾದರೂ ಮಾಡಲೇಬೇಕೆಂದು ಶುರು ಹಚ್ಚಿಕೊಂಡ ಕಾರ್ಯಕ್ರಮಕ್ಕೆ ಹದಿನೈದು ದಿನಗಳಿಂದ ತಯಾರಿ ಮಾಡಲಾಗಿತ್ತು. ಸಾಗರದಂತಹ ಸ್ಥಳದಲ್ಲಿ ಭಾನುವಾರ ಒಂದು ತರಹ ಕಪ್ರ್ಯೂ ಹಾಕಿದ ಹಾಗೆ ಇರುತ್ತದೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೂ ರಜೆ. ಪ್ಯಾರಿಸ್ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಶೃಂಗ ಸಭೆಗೆ ಮುನ್ನಾ ದಿನವೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಹಾಗಾಗಿ ಭಾನುವಾರ ರಜಾದಿನವಾದರೂ ಜಾಥಾ ಮಾಡಿದೆವು.
ಸಾಗರದಿಂದ 8 ಕಿ.ಮಿ. ದೂರದ ಅಮಟೆಕೊಪ್ಪದಲ್ಲಿರುವ ಹೊಂಗಿರಣ ಶಾಲೆಯ 147 ಮಕ್ಕಳು ಹಾಗೂ 6 ಜನ ಶಿಕ್ಷಕರು ಸರಿಯಾಗಿ 11 ಗಂಟೆಗೆ ಜಾಥಾ ಪ್ರಾರಂಭಿಸುವ ಸ್ಥಳಕ್ಕೆ ಬಂದಿಳಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಲೇ ಬಂದ್ದಿದ್ದರು. ನಿವೃತ್ತ ನೌಕರರು 20 ಮಂದಿ ಉತ್ಸಾಹದಿಂದ ಜಾಥಾ ಉದ್ಘಾಟನೆಗಾಗಿ ಕಾದಿದ್ದರು. ಕರ್ನಾಟಕ ಕಂಡ ಅಪರೂಪದ ಪರಿಸರ ಹೋರಾಟಗಾರ ಹಾಗೂ ಲೇಖಕ ಶ್ರೀ ಕಲ್ಕುಳಿ ವಿಠ್ಠಲ ಹೆಗ್ಗಡೆ ಘೋಷಣೆಗಳನ್ನು ಬರೆದ ಫಲಕವನ್ನು ಬಾಲಕಿಗೆ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ರಟ್ಟಿನ ಮೇಲೆ ಬರೆಸಿದ ಘೋಷಣೆಗಳನ್ನು ಮಕ್ಕಳು, ಯುವಕರು, ಯುವತಿಯರು ಕೂಗುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಚಲಿಸಿದರು. ಜಾಥಾದ ಫೋಟೊಗಳನ್ನು ಪ್ಯಾರಿಸ್ ಶೃಂಗ ಸಭೆಗೆ ಕಳುಹಿಸ ಬೇಕಾದ್ದರಿಂದ ಇಂಗ್ಲೀಷ್ನಲ್ಲೂ ಘೋಷಣೆಗಳನ್ನು ಬರೆಸಿದ್ದೆವು. ಘೋಷಣೆಗಳು ಹೀಗಿವೆ.
IT IS NOT WARMING
IT’S DYING
**
DOESN’T DENY
CLIMATE CHANGE
**
SYSTEM | NOT CLIMATE
CHANGE | CHANGE
**
NATURE PROTECTS
IF SHE IS PROTECTED
**
NO RAIN
MUCH PAIN
**
LEND A HAND
TO SAVE TREES
**
THE MORE YOU BURN
THE LESS YOU EARN
**
IF YOU DISTURB THE NATURE
THE NATURE WILL DISTURB YOU
**
PROTECT WHAT
YOU LOVE
MOTHER EARTH
**
A PLANT A DAY
KEEPS THE FLOOD AWAY
**
ANIMALS DIE
WHEN POLLUTION
FILLS LAND & SKY
**
NO ONE WILL
BLAME YOU
FOR GLOBAL WARMING
EXCEPT YOUR CHILDREN
**
ಹೆಚ್ಚಿದ ತಾಪ
ಎಲ್ಲಕೂ ಶಾಪ
**
ಈ ಭೂಮಿ ನಮ್ಮ ತಾತ ಮುತ್ತಾತರಿಂದ
ಬಳುವಳಿಯಾಗಿ ಬಂದದ್ದಲ್ಲ
ನಮ್ಮ ಮಕ್ಕಳು-ಮೊಮ್ಮಕ್ಕಳಿಂದ
ಎರವಲಾಗಿ ಪಡೆದದ್ದು
**
ಕಾರ್ಬನ್ ಹೊಗೆ
ಜಗಕೆಲ್ಲಾ ಧಗೆ
**
ಎಲ್ಲೆಲ್ಲೂ ಪ್ಲಾಸ್ಟಿಕ್ ಚೀಲದ ರಾಶಿ
ಕೇಳಬೇಡಿ ಮಾಲಿನ್ಯದ ಕಾಶಿ
**
ಎಲ್ಲೆಲ್ಲೂ ಗಿಡ-ಮರ
ಚರಾಚರ ಅಮರ
**
ಬಳಸಿ ಎಂದು ಸೋಲಾರು
ಮಾಡಿಕೊಳ್ಳಿ ಕರಾರು
**
ಮಳೆ ನೀರು ಇಂಗಿಸಿ
ಬಾಯಾರಿಕೆ ಹಿಂಗಿಸಿ
**
ಐಷರಾಮಿ ತೊರೆಯಿರಿ
ತ್ಯಾಗವನ್ನು ಮೆರೆಯಿರಿ
**
ವನ್ಯಜೀವಿ ಪ್ರೀತಿಸಿ
ಬಾಳಿನಲ್ಲಿ ಲಂಘಿಸಿ
ಸುಮಾರು 2 ಕಿ.ಮಿ. ಜಾಥಾವನ್ನು ನಡೆಸಿ ಬ್ರಾಸಂ ಸಭಾಂಗಣಕ್ಕೆ ಬರುವ ಹೊತ್ತಿಗೆ ಸರಿಯಾಗಿ ಸಮಯ 12 ಗಂಟೆಯಾಗಿತ್ತು. ಹತ್ತು ನಿಮಿಷದ ವಿರಾಮದ ನಂತರ ಸಭೆ ಶುರುವಾಯಿತು. ಎಲ್ಲರನ್ನೂ ಸ್ವಾಗತಿಸಿ, ಪ್ರಸ್ತಾವಿಕವಾಗಿ ಒಂದಿಪ್ಪತ್ತು ನಿಮಿಷ ಮಾತನಾಡಿದೆ. ಮುಖ್ಯ ಅತಿಥಿಗಳು ಬರೀ ಎರೆಡೆರೆಡು ನಿಮಿಷ ಮಾತನಾಡಿ ವೇದಿಕೆಯನ್ನು ಕಲ್ಕುಳಿಯವರಿಗೆ ಬಿಟ್ಟುಕೊಟ್ಟರು.
1992ರಲ್ಲಿ ಬ್ರೆಜಿಲ್ ದೇಶದಲ್ಲಿ ಪ್ರಾರಂಭವಾದ ಈ ಹವಾಗುಣ ಬದಲಾವಣೆ ಶೃಂಗಸಭೆಯಿಂದ ಹಿಡಿದು ಇವತ್ತಿನವರೆಗೆ 20 ಜಾಗತಿಕ ಸಭೆಗಳು ನಡೆದಿವೆ. ಜಗತ್ತಿನ ಎಲ್ಲಾ ದೇಶದ ಧುರೀಣರು ಒಂದು ಒಟ್ಟಾರೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಮುಂದುವರೆದ ದೇಶ ಅಮೆರಿಕ. ಅಮೆರಿಕ ಯಾವತ್ತೂ ತನ್ನ ಐಷಾರಾಮಿ ಜೀವನದಿಂದ ಹೊರಬರಲು ಒಪ್ಪದೇ ಎಲ್ಲಾ ಶೃಂಗ ಸಭೆಗಳನ್ನೂ ವಿಫಲವಾಗುವಂತೆ ನೋಡಿಕೊಂಡಿತು. ವಾತಾವರಣ ಬದಲಾವಣೆಗೆ ಮುಖ್ಯ ಕಾರಣ ಇಂಗಾಲಾಮ್ಲ, ಪಳೆಯುಳಿಕೆ ಇಂಧನಗಳನ್ನು ಅತಿಯಾಗಿ ಬಳಸುವುದರಿಂದಲೇ ಭೂಮಿ ಬಿಸಿಯಾಗುತ್ತಿದೆ ಎಂದು ವಿಜ್ಞಾನಿಗಳು ಸಾರಿ-ಸಾರಿ ಹೇಳುತ್ತಿದ್ದರೂ ಅಮೆರಿಕ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಮೆರಿಕಾದ ಮೊಬಿಲ್ ಎಕ್ಸಾನ್ ಎಂಬ ತೈಲ ಕಂಪನಿ ಜಗತ್ತಿನ ಹದಿನೇಳು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಭಾರತದಲ್ಲೂ ಅದರ ಶಾಖೆ ಇದೆ. ಈ ಕಂಪನಿಯ ವಾರ್ಷಿಕ ಲಾಭ ಭಾರತ ದೇಶದ ವಾರ್ಷಿಕ ಬಜೆಟ್ಟಿಗಿಂತ ಹದಿನೇಳು ಪಟ್ಟು ಹೆಚ್ಚು. ಇಂತಹ ಕಂಪನಿಯೇ ಕೆಲವು ವಿಜ್ಞಾನಿಗಳಿ ಹಣ ನೀಡಿ, ಇಂಗಾಲಾಮ್ಲದಿಂದ ವಾತಾವರಣದಲ್ಲಿ ಬಿಸಿ ಏರಿಕೆ ಆಗುವುದಿಲ್ಲ ಎಂಬ ವರದಿಯನ್ನು ಬರೆಸುತ್ತದೆ. ಕಂಪನಿಗೆ ತನ್ನ ಲಾಭ ಮುಖ್ಯವೇ ಹೊರತು ಭೂಮಿಯ ಆರೋಗ್ಯವಲ್ಲ. ಇದೇ ಕಂಪನಿ ಕೆಲವು ಡೋಂಗಿ ಪರಿಸರವಾದಿಗಳಿಗೂ ಹಣ ನೀಡುತ್ತದೆ. “ಹುಲಿಯ ಆಹಾರ” ಎಂಬ ಬಗ್ಗೆ ನಮ್ಮ ದೇಶದ ಡೋಂಗಿ ಪರಿಸರವಾದಿಗಳು ಸಂಶೋಧನೆ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಾರೆ.
ಭಾರತದಲ್ಲಿ ಭತ್ತ ಬೆಳೆಯುವುದರಿಂದ ಹಾಗೂ ಭಾರತದ ಜಾನುವಾರುಗಳಿಂದ ವಾತಾವರಣದಲ್ಲಿ ಬಿಸಿಯೇರಿಕೆಯಾಗುತ್ತದೆ ಎಂಬ ವರದಿಯನ್ನು ಈ ಕಂಪನಿ ತಯಾರು ಮಾಡುತ್ತದೆ. ಭಾರತದಲ್ಲಿ ಕಟ್ಟಿಗೆ ಒಲೆಯಿಂದ ಬರುವ ಹೊಗೆಯಿಂದ ಇಂಗಾಲಾಮ್ಲ ಹೆಚ್ಚುತ್ತಿದೆಯೆಂಬ ಆರೋಪವನ್ನು ಅಮೆರಿಕ ಮಾಡುತ್ತಿರುವುದಕ್ಕೆ ಈ ಕಂಪನಿಯ ವರದಿಗಳೇ ಕಾರಣ. ಜಗತ್ತಿನ ಯಾವುದೇ ಸರ್ಕಾರಗಳನ್ನು ಅಲ್ಲಾಡಿಸುವ ಶಕ್ತಿ ಹೊಂದಿರುವ ಮೊಬಿಲ್ ಎಕ್ಸಾನ್ ಕಂಪನಿ ಈ ಜಗತ್ತಿನ ನಿಜವಾದ ಖಳನಾಯಕ ಎಂದರು. 50 ನಿಮಿಷ ನಿರರ್ಗಳವಾಗಿ ನೆರದ ಮಕ್ಕಳಿಗೆ ಅರ್ಥವಾಗುವಂತೆ ಕಲ್ಕುಳಿಯವರು ನುಡಿದ ಮಾತುಗಳು ಎಲ್ಲರ ಮನ ತಟ್ಟಿದವು.
2 ಗಂಟೆಗೆ ಸರಿಯಾಗಿ ಸಭೆ ಮುಕ್ತಾಯವಾಯಿತು. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿದ್ದೆವು. ಚಿಕ್ಕದಾದ-ಚೊಕ್ಕದಾದ ಈ ಮಹತ್ವ್ತದ ಕಾರ್ಯಕ್ರಮದ ಆಶಯವನ್ನು ವಿಶ್ವ ನಾಯಕರಿಗೆ ತಲುಪಿಸುವ ಕೆಲಸವನ್ನು ಆವಾಜ್ ಸಂಸ್ಥೆ ಕೈಗೆತ್ತಿಕೊಂಡಿದೆ. ಜಾಥಾದ ಹಾಗೂ ಸಭೆಯ ಪೋಟೊ ಹಾಗೂ ವಿವರಗಳನ್ನು ಕಳುಹಿಸಲಾಗಿದ್ದು, ಇಂದಿನಿಂದ ಪ್ರಾರಂಭವಾಗುವ ಜಾಗತಿಕ ಹವಾಮಾನ ಬದಲಾವಣೆ ಶೃಂಗ ಸಭೆಯಲ್ಲಿ ವಿಶ್ವನಾಯಕರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೆಂದು ಆಶಿಸುತ್ತಾ. . .