"ಅನಿತಾ ನರೇಶ್ ಮಂಚಿ" ಉದಯೋನ್ಮುಖ ಲೇಖಕಿಯ ಹೋ ….. ಎನು…? ಲಘು ಬರಹಗಳ ಸಂಕಲನ ಓದಿದೆ. ರಂಗಕರ್ಮಿ "ನಟರತ್ನಾಕರ ಡಾ . ಮಾಸ್ಟರ್ ಹಿರಣ್ಣಯ್ಯ " ಅವರ ಮುನ್ನುಡಿ "ರಾಮ್ ನರೇಶ ಮಂಚಿ " ರ ಮುಖಪುಟದ ಛಾಯಾಚಿತ್ರ ಅದ್ಬುತವಾಗಿದೆ.
ಒಟ್ಟು ೪೪ ಲಘು ಹಾಸ್ಯ ಲೇಖನಗಳನ್ನು ಹೊತ್ತ ಸುಂದರ ಮುದ್ರಣದ ಪುಸ್ತಕ. "ಅನಿತಾ ನರೇಶ್ ಮಂಚಿ" ಯವರು ದಿನ ನಿತ್ಯದ ಅನುಭವಗಳಲ್ಲಿ ಹಾಸ್ಯ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ತುಂಬಾ ಸ್ವಾರಸ್ಯವಾಗಿ ಹೇಳುತ್ತಾರೆ . ಅವರ ಬಾಷೆಯೂ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ ಒಂದು ಹಾಸ್ಯ ಘಟನೆಯ ಸಂಪೂರ್ಣ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಲೇಖನಗಳ ಜೊತೆಗೆ ಕೆಲವು ಹಾಸ್ಯ ಚಿತ್ರಗಳನ್ನು ಸೇರಿಸಿದ್ದರೆ ಇನ್ನೂ ಸೊಗಸಿತ್ತು ಅನಿಸತ್ತೆ. ಆದರೆ ಅದು ಕೊರತೆ ಎಂದು ಅನಿಸುವುದಿಲ್ಲ.
"ನಗುವು ಸಹಜ ಧರ್ಮ,ನಗಿಸುವುದು ಪರ ಧರ್ಮ" ಡಿ ವಿ ಜಿ ಯವರ ಮಾತು ಪಾಲಿಸಿ ನಮ್ಮಲ್ಲಿ ಹತ್ತಾರು ಹಾಸ್ಯ ಲೇಖಕರು .ಬೀಚಿ,ಸುನಂದಮ್ಮ,ಅ ರಾ ಮಿತ್ರ, ಎಂ ಎಸ್ ನರಸಿಂಹಮೂರ್ತಿ, ಡಾ . ಮಾಸ್ಟರ್ ಹಿರಣ್ಣಯ್ಯ,ಬೇಲೂರು ರಾಮಮೂರ್ತಿ, ಹೆಚ್ ಎಲ್ ಕೇಶವ ಮೂರ್ತಿ,ಯಮುನಾ ಮೂರ್ತಿ, ಡುಂಡಿರಾಜ್ ಹೀಗೆ ಹೆಸರಿಸಬಹುದು . ಹಾಸ್ಯ ಎಂಬುದು ಮನಸಿಗೆ ಮುದ ಕೊಡುವ ಟಾನಿಕ್ ಎಂದರೆ ತಪ್ಪಾಗಲಾರದು.
ಹಾಸ್ಯದಲ್ಲಿ ಹಲವು ಬಗೆ . ಕೆಲವು ಬರಹಗಳು ಬರಿಯ ಗಂಡ ಹೆಂಡತಿಯರ ದಾಂಪತ್ಯ ಜೀವನಕ್ಕೆ ಸೀಮಿತವಾಗಿರುತ್ತದೆ . ಕೆಲವು ಅತಿರಂಜನೆಯು ಮತ್ತೆ ಕೆಲವು ದ್ವಂದಾರ್ಥ ಪೂರಿತ. ಕೆಲವು ನವಿರಾದ ಹಾಸ್ಯ. ಹೋ ….. ಎನು…? ಲಘು ಬರಹಗಳ ಸಂಕಲನ ನವಿರಾದ ಹಾಸ್ಯ ಎನ್ನಬಹುದು
ಇಂದು ಜೆಟ್ ಯುಗ . ವೈಚಾರಿಕತೆಯ ಬೈರಪ್ಪ, ಕಾರಂತರಂತಹ ಕಾದಂಬರಿಗಳನ್ನು ಇತರ ಸಾಮಾಜಿಕ ಕಾದಂಬರಿಗಳನ್ನು ಓದಲು ಎಲ್ಲರಿಗು ಸಮಯದ ಅಭಾವ . ಪುಟ್ಟ ಪುಟ್ಟ ಲಘು ಹಾಸ್ಯದ ಲೇಖನಗಳು ಮನಸೆಳೆಯುತ್ತವೆ . ಓದಲು ಬೇಕಾದ ಕಾಲಾವಕಾಶವೂ ಬಹು ಕಡಿಮೆ ಜೊತೆಗೆ ಹಾಸ್ಯದ ಆಸ್ವಾದ . ಈ ನಿಟ್ಟಿನಲ್ಲಿ ಹೋ ….. ಎನು…? ಲಘು ಬರಹಗಳ ಸಂಕಲನ ಮೆಚ್ಚಿಗೆಯಾಗುತ್ತದೆ . "ಅನಿತಾ ನರೇಶ್ ಮಂಚಿ" ಬರವಸೆ ಹುಟ್ಟಿಸುತ್ತಾರೆ.
ಇದು ಒಂದು ಹೊತ್ತಿನ ಭಕ್ಷ ಬೋಜನವಲ್ಲ . ಬಿಡುವಿನ ವೇಳೆಯಲ್ಲಿ ಒಂದೆರಡು ಹಾಸ್ಯ ಘಟನೆ ಓದಿ ಆಸ್ವಾದಿಸುವ ರುಚಿ. ಮಳೆಗಾಲದಲ್ಲಿ ಬೆಚ್ಚಗಿನ ಕುರುಕಲ ತಿಂಡಿಯಂತೆ.
"ಅಡುಗೆ ಮನೆ ಪುರಾಣ" ದಲ್ಲಿ ರಾದ್ದಾಂತ ಮಾಡುವ ಇಲಿಯನ್ನು ಕೈಯಲ್ಲಿ ಗಟ್ಟಿ ಪರಕೆ ಹಿಡಿದು ಬಲಿ ತೆಗೆದುಕೊಳ್ಳುವ ಅಂಬಾ ಭವಾನಿಯ ಪ್ರಸಂಗ ಹಾಸ್ಯಬರಿತವಾಗಿದೆ. "ಸಿಕ್ಕಿದ ನಿನ್ನನು ಕೊಲ್ಲದೇ ಬಿಡುವೆನೇ …. ಯಕ್ಷಗಾನದ ಏರು ಪದ್ಯ ಇಡಿಯ ಪ್ರಸಂಗಕ್ಕೆ ಮೆರಗು ಕೊಡುತ್ತದೆ.
"ಗಂಡ ಹೆಂಡತಿ"ಯಲ್ಲಿ ಹಲಸಿನ ಹಪ್ಪಳದ ತಯಾರಿಯಲ್ಲಿ ಗಂಡ ಹೆಂಡತಿಯ ಸಂಬಾಷಣೆ ಚುರುಕಾಗಿದೆ
"ಹನಿಮೂನ್" ಅಜ್ಜಿಯ "ಹನುಮಾನ್" ಆಗಿ ಪರದಾಟವು ಸೊಗಸಾಗಿದೆ.
"ಕೊಲೆ" ಸಾಮಾಜಿಕ ವಿಡಂಬನೆಯ ಹಾಸ್ಯ ತುಳುಕುತ್ತದೆ ಪ್ರಚಾರಕ್ಕೆ ಒಗ್ಗಿದ ನಮ್ಮ ರೀತಿ ನೀತಿಯ ವಿಡಂಬನೆ ಇದೆ.
ಹಾಸ್ಯ ಲೇಖನಕ್ಕೆ "ಹಸಿವು ಮತ್ತು ಊಟ ", ಕಾಗದ ಪತ್ರ ""ಹಳೆ ಬಟ್ಟೆ ಮತ್ತು ಪರ್ಸ್" "ಮನೆಯ ಕೆಲಸದಾಳಿನ ಗೋಳು""ನಿದ್ದೆ" “ದಂತ” "ಅವಲಕ್ಕಿ" "ಬೆಕ್ಕು" "ಜಿರಳೆ" “ ಎಲ್ಲವು ಕಥಾ ವಸ್ತುಗಳೇ. “
“ಮೊದಲು ಮಾನವನಾಗು” ಮಕ್ಕಳ ಜೀವನದ ಕನಸುಗಳು ಹೇಗೆ ಬದಲಾಗುತ್ತವೆ ಎಂದು ಸುಂದರವಾಗಿ ಹೇಳಲಾಗಿದೆ . ಏನಾದರೂ ಆಗಲಿ ಮೊದಲು ಮಾನವನಾಗ ಬೇಕು ಎಂಬ ಸಂದೇಶ ಇದೆ
"ಕಲೆಯ ಬಲೆ " ಯಲ್ಲಿ ದೇವಸ್ಥಾನ ದ "ಎತ್ತ ನೋಡಿದರೂ ಕಲೆಯೇ ಕಲೆ" ಕುಂಕುಮ ಗಂಧದ ಕಲೆ,ಚಲ್ಲಿದ ದೀಪದ ಎಣ್ಣೆ ಯ ಕಪ್ಪು ಕಲೆ,ಜೇಡರ ಬಲೆ ನೋಡಿ ಧನ್ಯವಾಗುತ "ಕಲೆ" ಪದದ ಸಂಪೂರ್ಣ ಅರ್ಥ ಮಾಡಿಸುವ ಬುದ್ದಿವಂತಿಕೆ ಇದೆ.
"ಭಾಷಣದ ಗಮ್ಮತ್ತು " ಹೋಳಿಗೆಯೂ ಹಳೆ ಪೇಪರ್ರು " "ಹುಡುಕಾಟ ""ಕನ್ನ" ಮೊದಲಾ ಸಲ" ಓದಿ ಹೊಟ್ಟೆ ಹಿಡಿದು ನಕ್ಕಿದ್ದೇನೆ ಒಬ್ಬನೇ . ಇದರ ಬಗ್ಗೆ ಹೆಚ್ಚು ಬರೆದು ಆ ಸ್ವಾರಸ್ಯವನ್ನು ಹಾಳು ಮಾಡುವ ಮನಸಿಲ್ಲ.
ಇದರಲ್ಲಿಯ ಕೆಲವು ಹಾಸ್ಯ ಬರಹಗಳು “ಪಂಜು” ನಲ್ಲಿ ಪ್ರಕಟವಾಗಿ ಜನಪ್ರಿಯವಾಗಿದೆ.
ಇದು ಪುಸ್ತಕ ಪರಿಚಯ ಮಾತ್ರ. ಪುಸ್ತಕ ಓದಿದನಂತರ ಲೇಖಕಿಯ ನವಿರಾದ ಹಾಸ್ಯ ಪ್ರಜ್ಞೆ, ಸುಂದರ ಸರಳ ಭಾಷೆ ಮನಮುಟ್ಟುತ್ತದೆ.
೧ ಲಘು ಬರಹಗಳ ಸಂಕಲನ: ಹೋ …ಎನು…?
೨ ಲೇಖಕಿ : ಶ್ರೀಮತಿ ಅನಿತಾ ನರೇಶ್ ಮಂಚಿ
೩ ಪ್ರಕಾಶಕರು : ತೇಜು ಪಬ್ಲಿಕೇಷನ್ಸ್ ಬೆಂಗಳೂರು
೪ ಬೆಲೆ : ರೂ ೧೪೦/-
ಪುಸ್ತಕ ಬೆಂಗಳೂರಿನ ಸಪ್ನಾ ಬುಕ್ ಹೌಸ್ ನಲ್ಲಿ ಲಭ್ಯ
ವಂದನೆಗಳು ಸರ್ 🙂
Just book madide, Sapna dalli !!! thank u sir