ಹಂಚದ ಹೊರತು ಹರಡುವುದು ಕಷ್ಟ….

ಇತ್ತೀಚೆಗೆ ತುಂಬು ಲೇಖನವೊಂದನ್ನು ಬರೆದು ಎಷ್ಟೋ ದಿನಗಳಾಗಿಬಿಟ್ಟಿದೆ. ಒಂದೆರಡು ಗಂಟೆ ಒಂದೆಡೆ ಕುಳಿತು ಶ್ರದ್ಧೆಯಿಂದ ಬರೆದರೆ ಚಂದವಾದ ಬರಹಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವೇನಲ್ಲ. ಆದರೆ ಆ ರೀತಿ ಕುಳಿತು ಬರೆಯುವ ಶ್ರದ್ದೆಯನ್ನು ನಮ್ಮದಾಗಿಸಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ನಮ್ಮೊಳಗಿನ ಶ್ರದ್ಧೆ, ಸೃಜನಶೀಲತೆ ಒಂದು ದಿನ ಹಠಾತ್ತನೆ ಮಾಯವಾಗಿ “ಏನು ಬರೆಯೋದು ಏನು ಮಾಡೋದು” ಎಂಬ ಭಾವನೆ ತುಂಬಿದ ಶೂನ್ಯತೆಯ ದಿನಗಳು ನಮ್ಮಲ್ಲಿ ಹುಟ್ಟಿಸಿಬಿಡುತ್ತವೆ. ಕೆಲವು ದಿನಗಳ ಹಿಂದೆ ಆ ರೀತಿ ಶೂನ್ಯತೆ ನನ್ನೊಳಗೆ ಮೂಡಿದ ಒಂದು ದಿನ ಬರೆಯುವುದನ್ನು ಹಠಾತ್ ನಿಲ್ಲಿಸಿಬಿಟ್ಟಿದ್ದೆ. ಒಬ್ಬ ನಿರೋದ್ಯೋಗಿ ತನ್ನ ಕೆಲಸವಿಲ್ಲದತನವನ್ನು ಸೋಮಾರಿತನದ ಮೂಲಕ ಆಚರಿಸುವ ಹಾಗೆ ಒಬ್ಬ ಬರಹಗಾರ ಬರೆಯುವುದನ್ನು ನಿಲ್ಲಿಸಿದ ಮರುಕ್ಷಣ ಒಂದು ಚಂದದ ಸೋಮಾರಿತನವನ್ನು ತನಗೆ ಗೊತ್ತಿಲ್ಲದೆ ಅನುಭವಿಸುತ್ತಾ ಹೋಗುತ್ತಾನೆ. ಯಾರಾದರೂ “ಯಾಕೆ ಏನು ಬರೀತ ಇಲ್ಲ? ಏನಾದ್ರು ಬರೀರಿ.” ಎಂದು ಮಕ್ಕಳಿಗೆ ಚಾಕ್ ಲೇಟ್ ಕೊಟ್ಟು ಆಸೆ ತೋರಿಸುವ ಹಾಗೆ ಏನಾದರೊಂದು ಮ್ಯಾಜಿಕ್ ಮಾಡಿದರಷ್ಟೇ ನಿದ್ರಿಸುತ್ತಿರುವ ಬರಹಗಾರನನ್ನು ಮತ್ತೆ ಎಬ್ಬಿಸಲು ಸಾಧ್ಯ.

ಕೆಲವು ಸಲ ಪ್ರತೀ ವಾರ ತಪ್ಪದೇ ಏನಾದರೊಂದು ಬರೆಯಲೇಬೇಕು ಎಂದು ನಮಗೆ ನಾವೇ ದಂಬಾಲು ಬೀಳುವುದು ಸರಿಯೋ ತಪ್ಪೋ ಗೊತ್ತಿಲ್ಲ. ಹಾಗೆ ಪ್ರತಿ ವಾರ ಬರೆಯಲೇಬೇಕೆಂಬ ಜವಾಬ್ದಾರಿ ಹೊತ್ತ ಬರಹಗಾರನಲ್ಲಿ ಏನಾದರೊಂದು ಬರೆಯಲೇಬೇಕೆಂಬ ಒತ್ತಡವಿರುತ್ತದೆ. ಆ ಒತ್ತಡ ಆ ಬರಹಗಾರನನ್ನು ಕೆಲವು ಸಲ ಏನು ಬರೆಯೋದು ಎಂಬ ಶೂನ್ಯತೆಯೆಡೆಗೆ ನೂಕುವಲ್ಲಿ ಯಶಸ್ಸು ಪಡೆಯುತ್ತದೆ ಎನ್ನಬಹುದು. ಅಂತಹ ಒತ್ತಡಗಳಲ್ಲಿ ಬರೆದ ಬರಹಗಳಲ್ಲಿರುವ ಒಂದು ಶೂನ್ಯತೆ, ಆ ಲೇಖಕನ ಬರವಣಿಗೆಯಲ್ಲಿ ಮಾಯವಾಗಿರುವ ಓದಿಸಿಕೊಳ್ಳುವಿಕೆ ಎಲ್ಲವೂ ಆ ಲೇಖಕನಿಗೆ ಕಾಣದಿದ್ದರೂ ಆ ಲೇಖಕನ ಬರಹಗಳನ್ನು ತಪ್ಪದೇ ಓದುತ್ತಿರುವ ಓದುಗ ಮಹಾಶಯರ ಕಣ್ಣಿಗೆ ಆ ಲೇಖಕನ ಬರಹಗಳಲ್ಲಿನ ಶೂನ್ಯತೆಯ ಕಾರಣದ ನ್ಯೂನತೆಗಳು ಸ್ಪಷ್ಟವಾಗಿ ಎದ್ದು ಕಾಣುತ್ತವೆ. ಆಗ ಆ ಓದುಗರು “ಈ ವಾರ ಏನೋ ಬರೆಯಬೇಕಲ್ಲ ಎನ್ನುವ ಒತ್ತಡಕ್ಕೆ ಬಿದ್ದು ಏನೋ ಗೀಚಿದ್ದಾರೆ” ಎನ್ನುವ ಅಭಿಪ್ರಾಯ ತಳೆದುಬಿಡುತ್ತಾರೆ. ಹಾಗಾದರೆ ಒಬ್ಬ ಲೇಖಕನಲ್ಲಿ ಶೂನ್ಯತೆ ಮೂಡಿದ ಕ್ಷಣ ಕೆಲವು ದಿನಗಳವರೆಗೆ ಬರವಣಿಗೆಗೆ ರಜೆ ಹಾಕಿ ಬರೆಯುವುದಕ್ಕಾಗಿಯಾದರೂ ಒಂದಷ್ಟು ಬದುಕಿನ ಅನುಭವಗಳ ತನ್ನದಾಗಿಸಿಕೊಂಡು ಮತ್ತೆ ಫ್ರೆಶ್ ಆಗಿ ಬರೆಯಲು ಕುಳಿತರೆ ಆ ಬರವಣಿಗೆಯಲ್ಲಿ ಕಾಣುವ ಬದಲಾವಣೆಯ ಗಾಳಿಯ ಕಂಪನ್ನು ಓದುಗರು ಅನುಭವಿಸಬಲ್ಲರು. ಅಷ್ಟೇ ಅಲ್ಲ  ಓದುಗರ ಆ ಅನುಭವವನ್ನು ಬರಹಗಾರನು ಸಹ ಬರೆಯುವಾಗಲೇ ಅನುಭವಿಸಬಲ್ಲ.. ಅಂತಹ ಬರವಣಿಗೆ ಹೊಸತನವನ್ನು ಉಣಬಡಿಸುತ್ತೆ ಎನ್ನಬಹುದು.

ಹಿಂದೊಮ್ಮೆ ವಾರಕ್ಕೊಮ್ಮೆ ಏನಾದರೊಂದು ಬರೆಯಬೇಕು ಎಂಬ ದೀಕ್ಷೆ ತೊಟ್ಟವನಂತೆ ನಿಂತು ಗೆಳೆಯನೊಬ್ಬನಿಗೆ ಬರೆಯುವ ನನ್ನ ಆ ನಿರ್ಧಾರವನ್ನು ತಿಳಿಸಿದಾಗ, ಆತ “ಅಂತರ್ಜಾಲ ತಾಣಗಳಲ್ಲಿ ಬರೆದು ಯಶಸ್ಸು ಪಡೆಯುವುದು ಕಷ್ಟದ ಕೆಲಸ.” ಎಂದು ಹೆದರಿಸಿದ್ದ. ಅವನ ಮಾತು ಭಾಗಶಃ ನಿಜವೇ ಆಗಿದ್ದರೂ ಆ ಮಾತು ಕೇಳಿದ ಮೇಲೆ ಅಂತರ್ಜಾಲ ತಾಣದಲ್ಲಿ ಬರಹಗಳನ್ನು ಹಂಚದ ಹೊರತು ಹರಡಲಾಗುವುದಿಲ್ಲ ಎನಿಸಿತ್ತು. ಹೆಚ್ಚಿನ ಬರಹಗಾರರು ಅಂತರ್ಜಾಲ ತಾಣಗಳಲ್ಲಿ ಬರೆಯುತ್ತಾರ ಹೊರತು ಹಂಚುವುದಿಲ್ಲ. ಹಿಂದೊಮ್ಮೆ ತಮ್ಮ ಲೇಖನ ಬರೆದು ಸುಮ್ಮನಾಗುತ್ತಿದ್ದ ಗೆಳೆಯರೊಬ್ಬರು ಈಗ ಸಮಯ ಮಾಡಿಕೊಂಡು ತಮ್ಮ ಬರಹಗಳನ್ನು ತಮ್ಮ ಗೆಳೆಯರಿಗೆ ಮೆಸೇಜ್ ಗಳ ಮೂಲಕ ಹಂಚಿಕೊಳ್ಳುತ್ತಾರೆ. ಅಚ್ಚರಿಯೆಂದರೆ ಅವರು ಲೇಖನಗಳನ್ನು ಹಾಗೆ ಹಂಚಿಕೊಳ್ಳಲು ಶುರು ಮಾಡಿದ ಮೇಲೆ ಅವರ ಓದುಗರ ಬಳಗ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹಾಗೆ ಬರಹಗಳನ್ನು ಹಂಚಿಕೊಳ್ಳುವುದು ಒಂದು ಕಲೆ. “ಮಾಡೋಕೆ ಇವರಿಗೆ ಕೆಲಸವಿಲ್ಲ. ಏನೇನೋ ಬರೆದು ಓದಿ ಓದಿ ಅಂತ ನಮ್ಮ ಜೀವ ತಿಂತಾರೆ” ಅನ್ನುವವರ ಜೊತೆ ಬರಹಗಳನ್ನು ಹಂಚಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ಬರಹಗಳು ನಿಜಕ್ಕೂ ಚೆನ್ನಾಗಿದ್ದರೆ ಓದಿ ಮೆಚ್ಚುಗೆಯ ತಿಳಿಸಲು, ಇಲ್ಲವೇ ಮನಸ್ಸೋ ಇಚ್ಚೆ ನೀವು ಬರೆದಿರೋದು ಸರಿಯಲ್ಲ ಎಂದು ಜಗಳ ಮಾಡಲು ಸಹೃದಯಿ ಓದುಗರ ವೃಂದ ಯಾವಾಗಲು ಕಾಯುತ್ತಿರುತ್ತದೆ. ಅವರಿಗೆ ಓದಲು ಮೆಚ್ಚಲು ಒಳ್ಳೆಯ ಬರಹಗಳು ಬೇಕು ಅಷ್ಟೆ. ಹಾಗೆ ಒಳ್ಳೆಯ ಬರಹಗಳನ್ನು ಬರೆದು ಓದುಗ ಮಹಾಶಯರನ್ನು ಒಲಿಸಿಕೊಂಡಷ್ಟೂ ಬರಹಗಾರನ ಬರೆಯುವ ಜವಾಬ್ದಾರಿ ಹೆಚ್ಚುತ್ತಾ ಹೋಗುತ್ತದೆ.

ಇನ್ನು ಅಂತರ್ಜಾಲ ತಾಣಗಳಲ್ಲಿ ಲೈಕು ಮತ್ತು ಕಾಮೆಂಟ್ ಗಳು ಬರಹಗಾರನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಯಾರೂ ಫೇಸ್ ಬುಕ್ ಲೈಕು ಒತ್ತಿಲ್ಲ ಅಂದ್ರೆ ಕಾಮೆಂಟ್ ಮಾಡಿಲ್ಲ ಅಂದ್ರೆ ಹೆಚ್ಚು ಜನ ಬರಹಗಳನ್ನು ಓದಿಯೇ ಇಲ್ಲವೇನೋ ಎಂಬ ತಪ್ಪು ಅಭಿಪ್ರಾಯಗಳು ಬರಹಗಾರನಲ್ಲಿ ಬೇರೂರುತ್ತವೆ. ಅಂತಹ ಭಾವನೆಗಳು ಬರಹಗಾರನೊಳಗೆ ಬೇರೂರಿದಾಗ ಆತ ಬರೆಯುವುದನ್ನೇ ನಿಲ್ಲಿಸುವ ಸಾಧ್ಯತೆಗಳಿರುತ್ತವೆ. ಇನ್ನೂ ಕೆಲವರ ಕಾಮೆಂಟ್ ಗಳು, ಗುಂಪುಗಾರಿಕೆ ಇತ್ಯಾದಿ ಬರಹಗಾರನ ಮೇಲೆ ನೆಗೆಟೀವ್ ಆದ ಪರಿಣಾಮಗಳನ್ನು ಬೀರುತ್ತಿರುತ್ತವೆ. ಅವುಗಳನ್ನೆಲ್ಲಾ ಮೀರಿ ನಿಲ್ಲಿವುದು ಪ್ರತೀ ಬರಹಗಾರನ ಕರ್ತವ್ಯ. ನೀವು ನನಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರೆ ಏನಪ್ಪಾ ನಮಗೆ ಬರೆಯೋದರ ಬಗ್ಗೆ ಪಾಠ ಹೇಳ್ತಾ ಇದ್ದಾನೆ ಈ ಹುಡುಗ ಅಂತ ಬಯ್ಯುಕೋಬೇಡಿ.. ಸುಮ್ಮನೆ ಓದಿ ನಕ್ಕು ಬಿಡಿ.. 🙂 ವಯಸ್ಸಿನಲ್ಲಿ ನನಗಿಂತ ಕಿರಿಯರಾಗಿದ್ದರೆ ಅಥವಾ ನನ್ನ ವಯೋಮಾನದವರೇ ಆಗಿದ್ದರೆ ಇವು ಗೆಳೆಯನೊಬ್ಬನ ಕಿವಿಮಾತು ಎಂದುಕೊಳ್ಳಿ.. ನನಗನಿಸಿದ ಮಟ್ಟಿಗೆ ಚಂದದ ಬರಹಗಳನ್ನು ಓದಲು ಓದುಗರ ದೊಡ್ಡ ಬಳಗವೇ ಕಾಯುತ್ತಿರುತ್ತದೆ. ಅಂತಹ ಚಂದದ ಬರಹಗಳು ಅಂತರ್ಜಾಲ ತಾಣಗಳಲ್ಲಿ ಓದಿಗೆ ಸಿಗುವುದು ತುಂಬಾ ಅಪರೂಪ.. ಅಂತಹ ಬರಹಗಳು ಓದಿಗೆ ಸಿಕ್ಕರೆ ಆ ಲೇಖನಗಳನ್ನು ಹಂಚಿ ಹರಡಿ.. ಕನ್ನಡದ ಸೇವೆ ಹಾಗೆ ಹಂಚುವುದರಿಂದಲೂ ಹರಡುವುದರಿಂದಲೂ ಸಾಧ್ಯ..

ಎಂದಿನಂತೆ ಈ ವಾರವೂ ಪಂಜು ವಿಧ ವಿಧದ ಲೇಖನಗಳನ್ನು ಹೊತ್ತು ನಿಮ್ಮ ಮುಂದೆ ನಿಂತಿದೆ. ಇನ್ನು ನಾಲ್ಕು ದಿನಗಳಲ್ಲಿ ಪ್ರೇಮಿಗಳ ದಿನವಿರುವ ಕಾರಣ ಈ ವಾರದ ಸಂಚಿಕಯ ಜೊತೆ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ವಿಶೇಷ ಸಂಚಿಕೆಯೂ ಸಹ ನಿಮ್ಮ ಓದಿಗೆ ದಕ್ಕಲಿದೆ. ನಿಮ್ಮ ಪ್ರೀತಿ ಪ್ರೋತ್ಸಾಹ ಸಹಕಾರ ಹೀಗೆಯೇ ಇರಲಿ..

ಮತ್ತೆ ಸಿಗೋಣ

 

ನಿಮ್ಮ ಪ್ರೀತಿಯ

ನಟರಾಜು :))

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

19 Comments
Oldest
Newest Most Voted
Inline Feedbacks
View all comments
Utham
11 years ago

Hosa barahagararinge nimma prothsaha salahe erali shubhavagali natanna

Kirti Gaonkar
Kirti Gaonkar
11 years ago

Lekhan channagide, tamma panjuvina mUlaka kannadada kanmpu vishwadyadanta haradali.

Upendra
Upendra
11 years ago

ಚೆನ್ನಾಗಿದೆ. ಇಷ್ಟ ಆಯ್ತು…

ಶ್ರೀವತ್ಸ ಕಂಚೀಮನೆ.

ಚಂದದ ಬರಹ…

parthasarathy N
parthasarathy N
11 years ago

ನಿಮ್ಮ ಮಾತು ನಿಜ ಉತ್ತಮ ಬರಹ ಕತೆ ಕವನಗಳನ್ನು ಓದಲು ಓದುಗರು ಉತ್ಸುಕರಾಗಿರುತ್ತಾರೆ. ಅದನ್ನು ಒದಗಿಸುವ ಸಾರ್ಥಕ ಕೆಲಸ ಬರಹಗಾರನದು.
ಪಾರ್ಥಸಾರಥಿ

Raghunandan K
11 years ago

ಬರಹಗಾರನ ಖಾಲಿತನ, ಹಂಚಿಕೊಳ್ಳುವ ಸುಖ, ತಾನೇ ಬರೆಸಿಕೊಳ್ಳುವ ಬರಹದ ಜೀವಂತಿಕೆ, ಓದುಗರ ಪ್ರೀತಿ, ಅಂತರ್ಜಾಲದ ಅವಕಾಶಗಳ ಸಾಧ್ಯತೆ…. ಚಂದದ ಸಂಪಾದಕೀಯ…

ಪಂಜು ಬೆಳಗುತ್ತಿದೆ, ಬೆಳಗಿಸುತ್ತಿದೆ…
ಒಳಿತಾಗಲಿ.

ಸುಮತಿ ದೀಪ ಹೆಗ್ಡೆ

ಎಲ್ಲರಿಗೂ ಒಳ್ಳೆಯ ನೀತಿಪಾಠ ಹೇಳಿದ್ದೀರಿ. ಧನ್ಯವಾದಗಳು.

Santhoshkumar LM
11 years ago

Very nice article about writing!! good…keep writing such articles!!

ramachandra shetty
ramachandra shetty
11 years ago

ಚ೦ದದ ಲೇಖನ ನಟರಾಜಣ್ಣ..

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಬಹು ಅಗತ್ಯವಿದ್ದ ಮಾರ್ಗದರ್ಶನಗಳು, ಧನ್ಯವಾದಗಳು ಸರ್

M.S.Krishna murthy
M.S.Krishna murthy
11 years ago

ಖಂಡಿತಾ ಹಂಚೋಣ ನಟರಾಜ್ ತಮ್ಮ ಈ ಸಾಹಿತ್ಯ ಸೇವೆಯಲ್ಲಿ ನಾವು ನಿಮ್ಮೊಡನಿದ್ದೇವೆ. ಕಲಿಯುವುದಕ್ಕೆ ವಯಸ್ಸಿನ ಅಂತರ ಬರುವುದಿಲ್ಲ. ನಾನು ಸಹ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಈ ಲೇಖನದಿಂದ. ಧನ್ಯವಾದಗಳು

Rukmini Nagannavar
11 years ago

ಪ್ರತಿಯೊಬ್ಬ ಬರಗಾರರಲ್ಲಿ ಒಂದು ಒಳ್ಳೆಯ ಸಂದೇಶ ಇದ್ದೇ ಇರುತ್ತದೆ.
ಹರಿದು ಹಂಚಿ ಹೋಗಲಿ ಆ ಸಂದೇಶ ನಟಣ್ಣ

Dr. Ganesh Hegde,Neelesara
Dr. Ganesh Hegde,Neelesara
11 years ago

ಒಳ್ಳೆಯ ಸಂಪಾದಕೀಯ. ಧನ್ಯವಾದಗಳು. ನಿಜ.ಒಂದು ಕಾಲಮಿತಿಯ ಒಳಗೆ ಲೇಖನವೊಂದನ್ನು ಬರೆಯಲೇಬೇಕು ಅಂದಾಗ ಸಹಜವಾಗಿಯೇ ಒತ್ತಡ ಶುರುವಾಗುತ್ತದೆ.  ಮುಖ್ಯವಾಗಿ ಸಮಯ(!) ಇಲ್ಲದಿದ್ದಾಗ ಈ ಸಮಸ್ಯೆ ಬೃಹದಾಕಾರ ತಾಳಲೂಬಹುದು. ಇದಕ್ಕೆ ನನ್ನ ಅನಿಸಿಕೆಯೆಂದರೆ ಪತ್ರಿಕೆಯನ್ನು ಪಾಕ್ಷಿಕ ಅಥವಾ ಮಾಸಿಕವನ್ನಾಗಿಸಿ ವಿರಾಮವಾಗಿ ಓದುಗರಿಗೆ ಉಣಬಡಿಸಬಹುದು.
ಆದರೆ ಕೆಲವು ಮೇನ್ ಸ್ಟ್ರೀಮ್ ಜರ್ನಲಿಸ್ಟುಗಳ ಪ್ರಕಾರ ಡೆಡ್ ಲೈನಿನಲ್ಲೇ (ಒತ್ತಡದಲ್ಲೇ) ಬರೆದ  ಲೇಖನಗಳು ಕ್ಲಿಕ್ ಆಗಬಲ್ಲವು. ಹೀಗೆ ಬರೆಯುವುದೂ ಸುಲಭ. ಅದರೆ ಬರಹಗಾರನಲ್ಲಿ ಸಾಕಷ್ಟು ವಿಷಯ ಸಂಗ್ರಹ  ಇದ್ದರೆ ಮಾತ್ರ ಹೀಗೆ ಮಾಡಬಹುದು.ಇಲ್ಲದಿದ್ದರೆ ಸಂಪಾದಕರು ಹೇಳಿದಂತೆ ಖಾಲಿ (ಬ್ಲಾಂಕ್) ಆಗುವ ಅಪಾಯವಿದೆ!.
 

Jaya Nanaiah
Jaya Nanaiah
11 years ago

Chenngide …..

Prasad V Murthy
11 years ago

ಈ ವಾರದ ಸಂಚಿಕೆ ಚೆನ್ನಾಗಿದೆ. ಅಭಿನಂದನೆಗಳು ಪಂಜು ಬಳಗಕ್ಕೆ. 🙂

Swarna
Swarna
11 years ago

ಇದು ನನ್ನ ಅನುಭವಕ್ಕೂ  ಬಂದಿರುವ ಸತ್ಯ.ಬೇರೆ ಬೇರೆ ಥರದ ಮಾರ್ಕೆಟಿಂಗ್  ಮಾಡೋದ್ರಲ್ಲಿ ತಪ್ಪಿಲ್ಲ.ಅದೂ ಒಂದು ಕಲೆ. ತಮ್ಮ ಬರಹಗಳಿಗೆ ಅಸಂಖ್ಯಾತ ಓದುಗರನ್ನ  ಕ್ಷಣ ಮಾತ್ರದಲ್ಲಿ ಸೆಳೆಯ ಬಲ್ಲ  ಬರಹಗಾರರಿದ್ದಾರೆ.  ಚಂದದ ಸಂಚಿಕೆ

ಆತ್ರಾಡಿ ಸುರೇಶ ಹೆಗ್ಡೆ

ಹಂಚುವುದು ಅಗತ್ಯ ಎನ್ನುವ, ತಮ್ಮ ಈ ಮಾತನ್ನು ಒಪ್ಪಬಹುದಾದರೂ, ಹಂಚುವ ಮಾಧ್ಯಮ, ಹಂಚುವ ವೈಖರಿ ಮಾಡಬಾರದು ಓದುಗರಿಗೆ ಕಿರಿಕಿರಿ. ಓದುಗರನ್ನು ಕೇವಲ ತಮ್ಮ ಓದಿಗಾಗಿಯೇ ಮೀಸಲಾಗಿರುವವರೆಂಬ ಭಾವನೆಯೊಡನೆ ಅಗೌರವದಿಂದ ಕಾಣುವವರ ವರ್ಗವೂ ಇರುವಾಗ ಈ ವಿಷಯ ಚರ್ಚಾತೀತವಾಗಿ ಉಳಿಯುವುದಿಲ್ಲ.

ತಾವಂದಂತೆ ಹಂಚದ ಹೊರತು ಹರಡುವುದು ಆಗಿರಬಹುದೇನೋ ಕಷ್ಟ
ಆದರೆ, ವಿಮರ್ಶೆಗೆ ತೆರೆದುಕೊಳ್ಳದ ಹೊರತು ತಾ ಬೆಳೆಯುವುದು ಕಷ್ಟ!
 

sarvesh kumar M.V
sarvesh kumar M.V
11 years ago

ಆತ್ರಾಡಿಯವರೇ, ಯಾವುದೇ ಬರಹ/ಪುಸ್ತಕವಾಗಲಿ ಹಂಚಿದ ಮೇಲಲ್ಲವೇ ಓದಲು ಮತ್ತು ವಿಮರ್ಶೆಗೆ ಸಿಗುವುದು.?
 
 
 
 
 

sharada moleyar
sharada moleyar
11 years ago

ಪಂಜು ಬೆಳಗುತ್ತಿದೆ, ಬೆಳಗಿಸುತ್ತಿದೆ…
ಒಳಿತಾಗಲಿ.
chennagide

19
0
Would love your thoughts, please comment.x
()
x