ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಬೋಹ್‌ಲುಲ್‌ ಮತ್ತು ಸೇತುವೆ
ನದಿ ನೀರಿನ ಹರಿಯುವಿಕೆಯನ್ನು ನೋಡುತ್ತಾ ಒಂದು ಸೇತುವೆಯ ಮೇಲೆ ಕುಳಿತಿದ್ದ ಬೋಹ್‌ಲುಲ್‌. ರಾಜ ಅವನನ್ನು ನೋಡಿದ, ತಕ್ಷಣ ದಸ್ತಗಿರಿ ಮಾಡಿಸಿದ.
ರಾಜ ಹೇಳಿದ, “ಸೇತುವೆ ಇರುವುದು ನದಿಯನ್ನು ದಾಟಲೋಸುಗ, ಅಲ್ಲಿಯೇ ಉಳಿದುಕೊಳ್ಳಲು ಅಲ್ಲ.”
ಬೋಹ್‌ಲುಲ್ ಉತ್ತರಿಸಿದ, “ನೀವೊಮ್ಮೆ ನಿಮ್ಮನ್ನೇ ನೋಡಿಕೊಳ್ಳುವುದು ಒಳ್ಳೆಯದು. ಈ ಜೀವನಕ್ಕೆ ಹೇಗೆ ಅಂಟಿಕೊಂಡಿದ್ದೀರಿ ಎಂಬುದನ್ನೊಮ್ಮೆ ಗಮನಿಸುವುದು ಒಳ್ಳೆಯದು.”

*****
೨. ಬಾಸ್ರಾದ ಹಸನ್‌ನಿಗೆ ರಬಿ’ಆ ಳ ಉಡುಗೊರೆಗಳು
ರಬಿ’ಆ ಅಲ್‌-ಅದವಿಯ್ಯಾ ಬಾಸ್ರಾದ ಹಸನ್‌ನಿಗೆ ಮೂರು ವಸ್ತುಗಳನ್ನು ಕಳುಹಿಸಿದಳು – ಮೇಣದ ಒಂದು ತುಂಡು, ಒಂದು ಸೂಜಿ, ಒಂದು ಕೂದಲು.
ಅವಳು ಹೇಳಿದಳು, “ಮೇಣದಂತಿರು. ಜಗತ್ತನ್ನು ಬೆಳಗಿಸು, ನೀನು ಸುಟ್ಟು ಬೂದಿಯಾಗು. ಅನಲಂಕೃತವಾಗಿ ಯಾವಾಗಲೂ ಕೆಲಸ ಮಾಡುತ್ತಿರುವ ಸೂಜಿಯಂತಿರು. ಈ ಎರಡು ಕೆಲಸಗಳನ್ನು ನೀನು ಮಾಡಿದಾಗ ಒಂದು ಸಾವಿರ ವರ್ಷಗಳು ನಿನಗೆ ಒಂದು ಕೂದಲಿನಂತೆ ಭಾಸವಾಗುತ್ತದೆ.”
ರಬಿ’ಆ ಳನ್ನು ಹಸನ್‌ ಕೇಳಿದ, “ನಾವು ಮದುವೆ ಆಗಬೇಕೆಂಬುದು ನಿನ್ನ ಅಪೇಕ್ಷೆಯೇ?”
ರಬಿ’ಆ ಉತ್ತರಿಸಿದಳು, “ಸ್ವತಂತ್ರ ಅಸ್ತಿತ್ವ ಉಳ್ಳವರಿಗೆ ವಿವಾಹ ಬಂಧನ ಅನ್ವಯಿಸುತ್ತದೆ. ನನ್ನ ವಿಷಯದಲ್ಲಿ ಸ್ವತಂತ್ರ ಅಸ್ತಿತ್ವ ಮಾಯವಾಗಿದೆ. ನಾನು ನನ್ನನ್ನು ಇಲ್ಲವಾಗಿಸಿದ್ದೇನೆ. ನಾನು ‘ಅವನ’ ಮೂಲಕ ಮಾತ್ರವೇ ಅಸ್ತಿತ್ವದಲ್ಲಿದ್ದೇನೆ. ನಾನು ಸಂಪೂರ್ಣವಾಗಿ ‘ಅವನ’ ಸ್ವಾಮ್ಯದಲ್ಲಿ ಇದ್ದೇನೆ. ‘ಅವನ’ ನಿಯಂತ್ರಣದ ನೆರಳಿನಲ್ಲಿ ನಾನು ಜೀವಿಸುತ್ತಿದ್ದೇನೆ. ನನ್ನ ಕೈಹಿಡಿಯಬೇಕಾದರೆ ನೀನು ‘ಅವನನ್ನು’ ಕೇಳಬೇಕು, ನನ್ನನ್ನಲ್ಲ.”
ಹಸನ್‌ ಕೇಳಿದ, “ಈ ರಹಸ್ಯ ನಿನಗೆ ತಿಳಿದಿದ್ದಾದರೂ ಹೇಗೆ ರಬಿ’ಆ?”
ರಬಿ’ಆ ಉತ್ತರಿಸಿದಳು, “ನಾನು ‘ದೊರಕಿಸಿಕೊಂಡ’ ಎಲ್ಲವನ್ನೂ ‘ಅವನಲ್ಲಿ’ ಕಳೆದುಕೊಂಡೆ.”
ಹಸನ್‌ ವಿಚಾರಿಸಿದ, “ನಿನಗೆ ‘ಅವನು’ ಹೇಗೆ ಗೊತ್ತು?”
ರಬಿ’ಆ ಹೇಳಿದಳು, “ ನಿನಗೆ ‘ಹೇಗೆ’ ಗೊತ್ತು, ನನಗಾದರೋ ‘ಹೇಗಲ್ಲ’ ಗೊತ್ತು.”

*****
೩. ಸೂಫಿಗಳ ಹಾಗೂ ಧು ನನ್‌ನ ವಿರುದ್ಧವಾಗಿದ್ದವ
ಒಬ್ಬ ಯುವಕ ಯಾವಾಗಲೂ ಸೂಫಿಗಳ ವಿರುದ್ಧ ಮಾತನಾಡುತ್ತಿದ್ದ. ಒಂದು ದಿನ ಧು ನನ್‌ ತನ್ನ ಕೈಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಅವನಿಗೆ ಕೊಟ್ಟು ಹೇಳಿದ, “ಇದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಒಂದು ಡಾಲರ್‌ಗೆ ಮಾರಾಟ ಮಾಡು.”
ಆ ಯುವಕ ಅದನ್ನು ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸಿದಾಗ ಯಾರೂ ಅದಕ್ಕೆ ೧೦ ಸೆಂಟ್‌ಗಳಿಗಿಂತ ಹೆಚ್ಚು ಹಣ ಕೊಡಲು ಸಿದ್ಧರಿರಲಿಲ್ಲ. ಆತ ಹಿಂದಿರುಗಿ ಬಂದು ಧು ನನ್‌ಗೆ ವಿಷಯ ತಿಳಿಸಿದ.

“ಈಗ ಇದನ್ನು ಆಭರಣದ ವ್ಯಾಪಾರಿಗಳ ಹತ್ತಿರ ತೆಗೆದುಕೊಂಡು ಹೋಗು. ಅವರು ಅದಕ್ಕೆ ಏನು ಬೆಲೆ ಕೊಡಲು ಸಿದ್ಧರಿರುತ್ತಾರೆ ಎಂಬುದನ್ನು ಗಮನಿಸು,’ ಎಂಬುದಾಗಿ ಹೇಳಿದ ಧು ನನ್‌.
ಆಭರಣದ ವ್ಯಾಪಾರಿಗಳು ಅದಕ್ಕೆ ೧೦೦೦ ಡಾಲರ್‌ ಕೊಡಲು ಸಿದ್ಧರಿದ್ದರು.
ಯುವಕ ಹಿಂದಿರುಗಿ ಬಂದಾಗ ಧು ನನ್‌ ಹೇಳಿದ, “ಮಾರುಕಟ್ಟೆಯಲ್ಲಿ ಇದ್ದವರಿಗೆ ಉಂಗುರದ ಕುರಿತು ಎಷ್ಟು ತಿಳಿದಿತ್ತೋ ಅಷ್ಟೇ ಸೂಫಿ ಕುರಿತು ನಿನಗೆ ತಿಳಿದಿದೆ.”
ಯುವಕ ತನ್ನ ವರ್ತನೆಗಾಗಿ ಪಶ್ಚಾತ್ತಾಪ ಪಟ್ಟು ಅಂದಿನಿಂದ ಸೂಫಿಗಳನ್ನು ಅಪನಂಬಿಕೆಯಿಂದ ನೋಡುವುದನ್ನು ಬಿಟ್ಟುಬಿಟ್ಟ.

*****
೪. ಬಯಾಝಿದ್‌ ಅಲ್‌-ಬಿಸ್ತಾಮಿ ಅವರಿಂದ ನಮ್ರತೆಯನ್ನು ಕಲಿಯುವುದು
ಬೆಸ್ತಾಮ್‌ನ ಮಹಾನ್‌ ಸಂತರುಗಳ ಪೈಕಿ ಒಬ್ಬ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದ ಸಂನ್ಯಾಸಿಯೊಬ್ಬನಿದ್ದ. ಅವನಿಗೆ ಅವನದೇ ಆದ ಅನುಯಾಯಿಗಳೂ ಅಭಿಮಾನಿಗಳೂ ಇದ್ದರು. ಆದರೂ, ಆತ ಬಯಾಝಿದ್‌ ಅಲ್‌-ಬಿಸ್ತಾಮಿ (ಅಥವ ಅಬು ಯಾಝಿದ್‌ ಅಲ್‌-ಬಿಸ್ತಾಮಿ) ಅವರ ಅನುಯಾಯಿ ವಲಯದಲ್ಲಿಯೇ ಸದಾ ಇರುತ್ತಿದ್ದ. ಅವರ ಎಲ್ಲ ಪ್ರವಚನಗಳನ್ನೂ ಕೇಳುತ್ತಿದ್ದ, ಅವರ ಸಹಚರರೊಂದಿಗೇ ಕುಳಿತುಕೊಳ್ಳುತ್ತಿದ್ದ.

ಒಂದು ದಿನ ಅವನು ಅಬು ಯಾಝಿದ್‌ರಿಗೆ ಹೇಳಿದ, “ಗುರುಗಳೇ, ಕಳೆದ ೩೦ ವರ್ಷಗಳಿಂದಲೂ ನಿರಂತರವಾಗಿ ನಾನು ಹಗಲು ಹೊತ್ತು ಉಪವಾಸ ಮಾಡುತ್ತಿದ್ದೇನೆ. ರಾತ್ರಿಯ ವೇಳೆ ನಿದ್ದೆ ಮಾಡದೆಯೇ ಪ್ರಾರ್ಥನೆ ಮಾಡುತ್ತಿದ್ದೇನೆ. ಆದರೂ ನೀವು ಹೇಳುವ ಜ್ಞಾನದ ಕುರುಹೂ ನನಗೆ ಸಿಕ್ಕಿಲ್ಲ. ಆದರೂ ಈ ಜ್ಞಾನದಲ್ಲಿ ನನಗೆ ನಂಬಿಕೆ ಇದೆ, ಈ ಕುರಿತಾದ ಪ್ರವಚನಗಳು ನನಗೆ ಬಹಳ ಪ್ರಿಯವಾದವು.”
ಅಬು ಯಾಝಿದ್‌ ಹೇಳಿದರು, “ ಇನ್ನೂ ಮುನ್ನೂರು ವರ್ಷಗಳ ಕಾಲ ನೀನು ಹಗಲು ಉಪವಾಸ-ರಾತ್ರಿ ಪ್ರಾರ್ಥನೆ ಮಾಡಿದರೂ ಈ ಪ್ರವಚನಗಳಲ್ಲಿ ಹೇಳಿದ್ದರ ಒಂದು ಅಣು ಮಾತ್ರದಷ್ಟನ್ನೂ ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ.”
ಆತ ಕೇಳಿದ, “ಏಕೆ?”
ಅಬು ಯಾಝಿದ್‌ ಉತ್ತರಿಸಿದರು, “ಏಕೆಂದರೆ ನಿನ್ನ ಅಹಂನ ಪರದೆ ನಿನ್ನನ್ನು ಆವರಿಸಿಕೊಂಡಿದೆ.”
ಆತ ಕೇಳಿದ, “ಇದಕ್ಕೇನು ಪರಿಹಾರ?”
ಅಬು ಯಾಝಿದ್‌ ಉತ್ತರಿಸಿದರು, “ನೀನು ಅದನ್ನೂ ಎಂದಿಗೂ ಒಪ್ಪಿಕೊಳ್ಳುವುದಿಲ್ಲ.”
ಆತ ಹೇಳಿದ, “ನಾನು ಒಪ್ಪಿಕೊಳ್ಳುತ್ತೇನೆ. ಅದೇನೆಂಬುದನ್ನು ಹೇಳಿ, ನೀವು ಹೇಳಿದಂತೆ ಮಾಡುತ್ತೇನೆ.”
ಅಬು ಯಾಝಿದ್‌ ಹೇಳಿದರು, “ಸರಿ ಹಾಗಾದರೆ. ಈಗಲೇ ಹೋಗಿ ನಿನ್ನ ಗಡ್ಡ, ಮೀಸೆ, ತಲೆ ಬೋಳಿಸಿಕೊ. ಈಗ ನೀನು ಧರಿಸಿರುವ ಉಡುಗೆಗಳನ್ನು ಕಳಚಿ ಹಾಕು. ಮೇಕೆಯ ಉಣ್ಣೆಯಿಂದ ಮಾಡಿದ ಕೌಪೀನವನ್ನು ನಿನ್ನ ಸೊಂಟಕ್ಕೆ ಕಟ್ಟಿಕೊ. ನಿನ್ನ ಕುತ್ತಿಗೆಗೆ ನೆಲಗಡಲೆ ಇರುವ ಚೀಲ ನೇತು ಹಾಕಿಕೊ. ಆ ನಂತರ ಮಾರುಕಟ್ಟೆಗೆ ಹೋಗಿ ಅಲ್ಲಿರುವ ಮಕ್ಕಳನ್ನೆಲ್ಲ ನಿನ್ನ ಸಮೀಪಕ್ಕೆ ಕರೆದು ಅವರಿಗೆ ಹೇಳು, ’ನನಗೆ ಒಂದು ಪೆಟ್ಟು ಕೊಡುವವರಿಗೆಲ್ಲ ಒಂದೊಂದು ನೆಲಗಡಲೆ ಕೊಡುತ್ತೇನೆ.’ ತದನಂತರ ನಗರದಾದ್ಯಂತ, ವಿಶೇಷವಾಗಿ ನಿನ್ನ ಪರಿಚಿತರು ಇರುವೆಡೆ, ಸುತ್ತು ಹಾಕಿ ಇದೇ ರೀತಿ ಮಾಡು. ಇದೇ ನಿನಗೆ ತಕ್ಕುದಾದ ಪರಿಹಾರೋಪಾಯ.”

ಈ ಪದಗಳನ್ನು ಕೇಳಿದೊಡನೆ ಆತ ಗಟ್ಟಿಯಾಗಿ ಕೂಗಿ ಹೇಳಿದ, “ದೇವರಿಗೆ ಜಯವಾಗಲಿ! ದೇವರು ಇರುವುದು ನಿಜ.”
ಅಬು ಯಾಝಿದ್‌ ಉದ್ಗರಿಸಿದರು, “ನಾಸ್ತಿಕನೊಬ್ಬ ಈ ಘೋಷಣೆ ಕೂಗಿ ಹೇಳಿದ್ದರೆ ಅವನು ಆಸ್ತಿಕನಾಗುತ್ತಿದ್ದ. ನೀನಾದರೋ ಇಂತು ಘೋಷಿಸಿ ಬಹುದೇವತಾ ಸಿದ್ಧಾಂತಿಯಾದೆ.”
ಆತ ಕೇಳಿದ, “ಅದು ಹೇಗೆ?”

ಅಬು ಯಾಝಿದ್‌ ಉತ್ತರಿಸಿದರು, “ನಾನು ಹೇಳಿದ್ದನ್ನು ಮಾಡಬಾರದಷ್ಟು ದೊಡ್ಡಮನುಷ್ಯ ಎಂಬುದಾಗಿ ನಿನ್ನನ್ನು ನೀನು ಪರಿಗಣಿಸಿರುವೆ. ಎಂದೇ, ನೀನು ಬಹುದೇವಾತಾ ಸಿದ್ಧಾಂತಿ. ನೀನು ಈ ಘೋಷಣೆಯನ್ನು ಕೂಗಿ ಹೇಳಿದ್ದು ದೇವರನ್ನು ಹೊಗಳಲು ಅಲ್ಲ, ನಿನ್ನ ಪ್ರಾಮುಖ್ಯವನ್ನು ಅಭಿವ್ಯಕ್ತಿಗೊಳಿಸಲೋಸುಗ.”
ಆತ ಆಕ್ಷೇಪಿಸಿದ, “ಇದನ್ನು ನಾನು ಮಾಡಲಾರೆ. ನನಗೆ ನೀವು ಬೇರೆ ಪರಿಹಾರೋಪಾಯಗಳನ್ನು ಸೂಚಿಸಿ.”
ಅಬು ಯಾಝಿದ್‌ ಘೋಷಿಸಿದರು, “ನಾನು ಹೇಳಿದ್ದೇ ಪರಿಹಾರೋಪಾಯ.”
ಆತ ಉತ್ತರಿಸಿದ, “ಅದನ್ನು ನಾನು ಮಾಡಲಾರೆ.”
ಅಬು ಯಾಝಿದ್‌ ಹೇಳಿದರು, “ನೀನು ಎಂದೆಂದಿಗೂ ನಾನು ಹೇಳಿದಂತೆ ಮಾಡುವುದಿಲ್ಲ ಎಂಬುದಾಗಿ ಈ ಮೊದಲೇ ಹೇಳಿದ್ದೆನಲ್ಲವೇ?”

*****
೫. ರಬಿ’ಆ ಳೂ ಪಂಡಿತನೂ
ರಬಿ’ಆ ಅಲ್‌-ಅದವಿಯ್ಯಾ ಅನಾರೋಗ್ಯದಿಂದ ನರಳುತ್ತಿದ್ದಾಗ ಬಾಸ್ರಾದ ಖ್ಯಾತ ಪಂಡಿತನೊಬ್ಬ ಅವಳನ್ನು ಭೇಟಿಮಾಡಲು ಬಂದ. ಅವಳ ತಲೆದಿಂಬಿನ ಪಕ್ಕದಲ್ಲಿ ಕುಳಿತುಕೊಂಡು ಪ್ರಪಂಚ ಎಷ್ಟು ಭಯಾನಕವಾದದ್ದು ಎಂಬುದರ ಕುರಿತು ಆತ ಮಾತನಾಡಿದ.

ರಬಿ’ಆ ಪ್ರತಿಕ್ರಿಯಿಸಿದಳು, “ನೀನು ಪ್ರಪಂಚವನ್ನು ಬಹುವಾಗಿ ಪ್ರೀತಿಸುತ್ತಿರುವೆ. ನೀನು ಪ್ರಪಂಚವನ್ನು ಪ್ರೀತಿಸದೇ ಇರುತ್ತಿದ್ದರೆ ಅದರ ಕುರಿತು ಇಷ್ಟೊಂದು ಮಾತನಾಡುತ್ತಿರಲಿಲ್ಲ. ಕೊಂಡುಕೊಳ್ಳುವವನು ಯಾವಾಗಲೂ ತಾನು ಕೊಂಡುಕೊಳ್ಳಬಯಸಿದ್ದನ್ನು ಹೀನೈಸಿ ಮಾತನಾಡುತ್ತಾನೆ. ನೀನು ಪ್ರಪಂಚದೊಂದಿಗಿನ ವ್ಯವಾಹರವನ್ನು ಮುಗಿಸಿದ್ದಿದ್ದರೆ ಅದರ ಒಳ್ಳೆಯ ಅಥವ ಕೆಟ್ಟ ಅಂಶಗಳನ್ನು ಉಲ್ಲೇಖಿಸುತ್ತಲೇ ಇರಲಿಲ್ಲ. ಈಗ ನೀನು ಅದನ್ನು ಆಗಿಂದಾಗ್ಯೆ ಉಲ್ಲೇಖಿಸುತ್ತಿರುವೆ. ಏಕೆಂದರೆ ಗಾದೆಯೊಂದರ ಪ್ರಕಾರ ಯಾರು ಏನನ್ನು ಪ್ರೀತಿಸುತ್ತಾರೋ ಅದನ್ನು ಆಗಿಂದಾಗ್ಯೆ ಉಲ್ಲೇಖಿಸುತ್ತಲೇ ಇರುತ್ತಾರೆ.”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x