ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಗುರಿಯೇ ಇಲ್ಲ
ಫಕೀರರ ಗುಂಪೊಂದು ತಮ್ಮ ಗುರುಗಳ ಆಜ್ಞಾನುಸಾರ ಮಾಂಸ ತಿನ್ನುತ್ತಿರಲಿಲ್ಲ, ಧೂಮಪಾನ ಮಾಡುತ್ತಿರಲಿಲ್ಲ. ಇದನ್ನು ತಿಳಿದ ವ್ಯಕ್ತಿಯೊಬ್ಬ ಆ ಜ್ಞಾನಿಗಳ ಪಾದಗಳ ಬಳಿ ಕುಳಿತುಕೊಳ್ಳಲೋಸುಗ ಆ ಜ್ಞಾನಿಗಳು ಅವರು ಒಟ್ಟಾಗಿ ಸೇರುವ ತಾಣಕ್ಕೆ ಹೋದ. ಅಲ್ಲಿದ್ದವರೆಲ್ಲರೂ ೯೦ ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದರು. ಅಲ್ಲಿ ತಂಬಾಕಿನ ಸುಳಿವೂ ಇರಲಿಲ್ಲ, ಮಾಂಸದ ಸುಳಿವೂ ಇರಲಿಲ್ಲ. ಹೋದಾತನಿಗೆ ಬಲು ಆನಂದವಾಯಿತು. ಅವರು ನೀಡಿದ ಹುರುಳಿ-ಮೊಸರಿನ ಸೂಪ್‌ನ ರುಚಿ ಆಸ್ವಾದಿಸುತ್ತಾ ಮಾಲಿನ್ಯರಹಿತ ವಾಯು ಸೇವನೆ ಮಾಡುತ್ತಾ ಅಲ್ಲಿ ಕುಳಿತ. ಕನಿಷ್ಠಪಕ್ಷ ೧೦೦ ವರ್ಷವಾದರೂ ಅವರು ಬದುಕಿರಬೇಕೆಂಬುದು ಅವನ ಆಶಯವಾಗಿತ್ತು.
ಇದ್ದಕ್ಕಿದ್ದಂತೆಯೇ ಅಲ್ಲಿದ್ದವರ ಪೈಕಿ ಒಬ್ಬ ಫಕೀರ ಪಿಸುಗುಟ್ಟಿದ, “ಅದೋ, ನಮ್ಮ ಮಹಾನ್ ಗುರುಗಳು ಬರುತ್ತಿದ್ದಾರೆ.” ಆ ಪೂಜ್ಯ ಸಂತ ಒಳ ಬಂದಾಗ ಎಲ್ಲರೂ ಎದ್ದು ನಿಂತರು. ಆತ ಒಳಬಂದವನೇ ಅನುಗ್ರಹ ಸೂಚಕವಾಗಿ ಮುಗುಳ್ನಗೆ ಬೀರಿ ತನ್ನ ಕೊಠಡಿಯತ್ತ ಹೋದ. ೫೦ ವರ್ಷಕ್ಕಿಂತ ಒಂದು ದಿನದಷ್ಟೂ ಹೆಚ್ಚು ವಯಸ್ಸು ಆದವನಂತೆ ಅವನು ಗೋಚರಿಸುತ್ತಿರಲಿಲ್ಲ.
ಅಲ್ಲಿಗೆ ಬಂದಿದ್ದಾತ ಕೇಳಿದ, “ಅವರಿಗೆಷ್ಟು ವಯಸ್ಸು? ಅವರೇನು ತಿನ್ನುತ್ತಾರೆ?”
ಅಲ್ಲಿದ್ದ ಹಿರಿಯರ ಪೈಕಿ ಒಬ್ಬ ಉಸುರಿದ, “ಅವರಿಗೆ ೧೫೦ ವರ್ಷ ವಯಸ್ಸಾಗಿದೆ. ಬಹುಶಃ ನಾವು ಯಾರೂ ಆವರ ವಯಸ್ಸನ್ನೇ ಆಗಲಿ ಅವರು ಇರುವ ಸ್ಥಾನವನ್ನೇ ಆಗಲಿ ತಲುಪುವುದಿಲ್ಲ. ಅಂದ ಹಾಗೆ ಕೆಟ್ಟ ಚಪಲಗಳಿಂದಲೇ ಆಗಲಿ, ಹುಡುಗಾಟಿಕೆಯ ವಸ್ತುಗಳಿಂದಲೇ ಆಗಲಿ ಪ್ರಭಾವಿತರಾಗುವ ವಯಸ್ಸು ಅವರದಲ್ಲವಾದ್ದರಿಂದ ದಿನಕ್ಕೆ ೨೦ ಸಿಗಾರ್‌ಗಳನ್ನೂ ಹುರಿದ ಮಾಂಸದ ೩ ತುಂಡುಗಳನ್ನೂ ತೆಗೆದುಕೊಳ್ಳುತ್ತಾರೆ!”

*****


೨. ತಲೆಬುರುಡೆಗಳ ರಾಶಿ
ಸೂಫಿ ಸಂತ ಬಯಾಝಿದ್ ಒಂದು ದಿನ ಸ್ಮಶಾನದ ಮೂಲಕ ಹೋಗುತ್ತಿದ್ದಾಗ ತಲೆಬುರುಡೆಗಳ ಒಂದು ರಾಶಿಯನ್ನು ಕಂಡ. ಕುತೂಹಲದಿಂದ ಅವನು ಒಂದು ತಲೆಬುರುಡೆಯನ್ನು ‌ಕೈನಲ್ಲಿ ಎತ್ತಿ ಹಿಡಿದು ವೀಕ್ಷಿಸಿದ. ಎಲ್ಲ ತಲೆಬುರುಡೆಗಳೂ ಹೆಚ್ಚುಕಮ್ಮಿ ಒಂದೇ ತೆರನಾಗಿರುತ್ತದೆಂಬುದಾಗಿ ತಿಳಿದಿದ್ದ ಅವನಿಗೆ ಅವು ಒಂದೇ ತೆರನಾಗಿ ಇಲ್ಲದಿರುವುದನ್ನು ಕಂಡು ಅಚ್ಚರಿಯಾಯಿತು. ಕೆಲವು ತಲೆಬುರುಡೆಗಳಲ್ಲಿ ಎರಡು ಕಿವಿಗಳ ನಡುವೆ ಸಂಪರ್ಕ ಕಲ್ಪಿಸುವ ಹಾದಿಯೊಂದಿತ್ತು, ಕೆಲವು ತಲೆಬುರುಡೆಗಳಲ್ಲಿ ಎರಡು ಕಿವಿಗಳ ನಡುವೆ ಸಂಪರ್ಕ ಏರ್ಪಡುವುದಕ್ಕೆ ಅಡ್ಡಿ ಉಂಟು ಮಾಡುವ ತಡೆ ಇತ್ತು. ಕೆಲವು ತಲೆಬುರುಡೆಗಳಲ್ಲಿ ಪ್ರತೀ ಕಿವಿಗೂ ಹೃದಯಕ್ಕೂ ನಡುವೆ ಸಂಪರ್ಕವೇರ್ಪಟ್ಟಿತ್ತೇ ವಿನಾ ಅವುಗಳ ನಡುವೆ ನೇರ ಸಂಪರ್ಕವಿರಲಿಲ್ಲ. 
ಅಶ್ಚರ್ಯಚಕಿತನಾದ ಆತ ದೇವರನ್ನು ಪ್ರಾರ್ಥಿಸಿದ, “ಓ ದೇವರೇ ಇದೇನು ವಿಷಯ? ನನಗೆ ಏನನ್ನು ತಿಳಿಯಪಡಿಸಲು ಪ್ರಯತ್ನಿಸುತ್ತಿರುವೆ?”
ಆಗ ದೇವರು ಹೇಳಿದರು, “ಜಗತ್ತಿನಲ್ಲಿ ಮೂರು ವರ್ಗಗಳ ಜನರಿರುತ್ತಾರೆ. ಒಂದು ಕಿವಿಯಿಂದ ಕೇಳಿದ್ದನ್ನು ಇನ್ನೊಂದು ಕಿವಿಯಿಂದ ಹೊರಹಾಕುವವರು ಮೊದಲನೆಯ ವರ್ಗದವರು. ಇವರು ಕೇಳಿಸಿಕೊಂಡದ್ದು ಕ್ಷಣಕಾಲ ಮಾತ್ರ ಅವರೊಂದಿಗೆ ಇರುತ್ತದೆ, ತದನಂತರ ಅವರೊಳಗೆ ನಿಲ್ಲದೇ ಹೊರಹೋಗುತ್ತದೆ. ಒಂದೇ ಕಿವಿಯಿಂದ ಕೇಳುವವರು ಎರಡನೇ ವರ್ಗದವರು. ಅವರ ಒಂದು ಕಿವಿಯ ಒಳಹೊಕ್ಕದ್ದು ಎಲ್ಲಿಗೂ ಹೋಗುವುದಿಲ್ಲ. ಅರ್ಥಾತ್, ಅವರು ಕೇಳಿಸಿಕೊಂಡಿರುವುದೇ ಇಲ್ಲ, ಏನೋ ಶಬ್ದವಾಯಿತು ಎಂಬುದಾಗಿ ಭಾವಿಸುತ್ತಾರೆ. ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ಎರಡೂ ಕಿವಿಗಳ ಮೂಲಕ ಒಳ ಹೊಕ್ಕದ್ದು ಹೃದಯವನ್ನು ಮುಟ್ಟುತ್ತದೆ. ದೇವರು ಮುಂದುವರಿದು ಹೇಳಿದರು, “ಬಯಾಝಿದ್‌ ನೀನು ಇತರರೊಂದಿಗೆ ಮಾತನಾಡುವಾಗ ನೆನಪಿನಲ್ಲಿ ಇಟ್ಟಿರಲೇಬೇಕಾದ ಅಂಶವನ್ನು ತಿಳಿಯಪಡಿಸಲೋಸುಗ ನಾನು ನಿನ್ನನ್ನು ಈ ತಲೆಬುರುಡೆಗಳ ರಾಶಿಯ ಬಳಿಗೆ ಕರೆತಂದಿದ್ದೇನೆ. ನೀನು ಹೇಳಿದ್ದನ್ನು ಯಾರು ಹೃದ್ಗತ ಮಾಡಿಕೊಳ್ಳುತ್ತಾರೋ ಅಂಥವರೊಂದಿಗೆ ಮಾತ್ರ ಮಾತನಾಡು. ಮಿಕ್ಕುಳಿದವರೊಂದಿಗೆ ಮಾತನಾಡುತ್ತಾ ನಿನ್ನ ಸಮಯವನ್ನೂ ಶಕ್ತಿಯನ್ನೂ ವೃಥಾ ವ್ಯಯಿಸಬೇಡ. ಏಕೆಂದರೆ ನಿನ್ನ ಜೀವನ ಅತ್ಯಮೂಲ್ಯವಾದದ್ದು. ನೀನು ಹೇಳಬೇಕಾದದ್ದೂ ಅತ್ಯಮೂಲ್ಯವಾದದ್ದು.”

*****

೩. ಭೋಜನ ಕೂಟ
ಹರಕು ಬಟ್ಟೆ ಧರಿಸಿದ್ದ ಬಡವನೊಬ್ಬ ಅರಮನೆಯ ಭೋಜನಕೂಟಕ್ಕೆ ಬಂದ. ಸಭ್ಯತೆಯನ್ನು ಉಲ್ಲಂಘಿಸಬಾರದೆಂಬ ಕಾರಣಕ್ಕಾಗಿ ಅವನನ್ನು ಒಳಹೋಗಲು ಬಿಟ್ಟರೂ ಊಟದ ಮೇಜಿನ ಕೊನೆಯಲ್ಲಿ ಅವನನ್ನು ಕೂರಿಸಿದರು. ಊಟಕ್ಕೆ ಬಡಿಸುವ ಪರಾತಗಳು ಅವನಿರುವಲ್ಲಿಗೆ ತಲಪುವ ವೇಳೆಗೆ ಹೆಚ್ಚುಕಮ್ಮಿ ಖಾಲಿ ಆಗಿರುತ್ತಿದ್ದವು. ಆದ್ದರಿಂದ ಆತ ಅಲ್ಲಿಂದ ಹೊರಟು ಹೋದ. ಒಬ್ಬ ಶ್ರೀಮಂತ ಮಿತ್ರನಿಂದ ಬೆಲೆಬಾಳುವ ನಿಲುವಂಗಿಯನ್ನೂ ಆಭರಣಗಳನ್ನೂ ಎರವಲು ಪಡೆದು ಧರಿಸಿಕೊಂಡು ಸ್ವಲ್ಪ ಸಮಯದ ನಂತರ ಭೋಜನಕೂಟದ ತಾಣಕ್ಕೆ ಪುನಃ ಬಂದ. ಈ ಸಲ ಅವನನ್ನು ತಕ್ಷಣವೇ ಬಲು ಗೌರವದಿಂದ ಊಟದ ಮೇಜಿನಲ್ಲಿ ಮೊಟ್ಟಮೊದಲನೆಯ ಆಸನದ ಸಮೀಪದಲ್ಲಿ ಕೂರಿಸಿ ಅವನಿದ್ದಲ್ಲಿಗೇ ಮೊದಲು ಊಟಕ್ಕೆ ಬಡಿಸುವ ಪರಾತಗಳನ್ನು ತರಲಾರಂಭಿಸಿದರು.
“ಓ, ಎಷ್ಟು ರುಚಿಯಾದ ತಿನಿಸುಗಳು ನನ್ನ ತಟ್ಟೆಯಲ್ಲಿವೆ,” ಎಂದು ಉದ್ಗರಿಸಿ, ‘ತಾನು ಒಂದು ಚಮಚೆ ಆಹಾರವನ್ನು ತನ್ನ ಉಡುಪಿಗೆ ಹಾಕುವುದು ನಂತರದ ಚಮಚೆಯ ಆಹಾರವನ್ನು ತಿನ್ನುವುದು’ ಮಾಡತೊಡಗಿದ. ಆತನ ಪಕ್ಕದಲ್ಲಿ ಕುಳಿತಿದ್ದ ಕುಲೀನನೊಬ್ಬ ಈ ಕೊಳಕು ವರ್ತನೆಯನ್ನು ನೋಡಿ ಮುಖ ಸಿಂಡರಿಸಿ ಕೇಳಿದ, “ಮಹಾಶಯ, ನಿಮ್ಮ ಇಷ್ಟು ಒಳ್ಳೆಯ ಉಡುಪಿಗೆ ಆಹಾರವನ್ನು ಏಕೆ ಮೆತ್ತುತ್ತಿದ್ದೀರಿ?”
ಆತ ಲೊಚಗುಟ್ಟುತ್ತಾ ಉತ್ತರಿಸಿದ, “ಈಗ ನನ್ನ ಉಡುಪು ಗಲೀಜಾಗಿ ನಿಮಗೆ ಕಾಣುತ್ತಿರುವುದಕ್ಕೆ ಕ್ಷಮಿಸಿ. ಈ ಉಡುಪಿನಿಂದಾಗಿ ನನಗೆ ಇಷ್ಟು ಒಳ್ಳೆಯ ತಿನಿಸುಗಳು ಸಿಕ್ಕಿವೆ. ಎಂದೇ, ಅದಕ್ಕೆ ಮೊದಲು ತಿನ್ನಿಸಬೇಕಾದದ್ದು ನ್ಯಾಯೋಚಿತವಲ್ಲವೇ?”

*****


೪. ನಾವು ಈ ಮೊದಲೇ ದೇವರು ಆಗಿದ್ದೇವೆ.
ಖ್ಯಾತ ಸೂಫಿ ಮುಮುಕ್ಷು ರಬಿಯಾ ಎಂದಿನಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಮಾರುಕಟ್ಟೆಗೆ ಪ್ರತೀದಿನ ಅವಳು ಹೋಗುತ್ತಿದ್ದ ರಸ್ತೆ ಅದು. ಪ್ರತೀದಿನ ಮಾರುಕಟ್ಟೆಗೆ ಹೋಗಿ ತಾನು ಕಂಡುಕೊಂಡ ಸತ್ಯವನ್ನು ಎಲ್ಲರಿಗೂ ಕೇಳುವಂತೆ ಬೊಬ್ಬೆಹೊಡೆಯುವುದು ಅವಳ ದೈನಂದಿನ ಕಾಯಕಗಳಲ್ಲಿ ಒಂದಾಗಿತ್ತು. ರಸ್ತೆಯಲ್ಲಿ ಹೋಗುವಾಗ ಸುಪರಿಚಿತ ಮುಮುಕ್ಷು ಹಸನ್‌ ಮಸೀದಿಯ ಬಾಗಿಲ ಎದುರು ಕುಳಿತು, “ಓ ದೇವರೇ, ಬಾಗಿಲು ತೆರೆ! ದಯವಿಟ್ಟು ಬಾಗಿಲು ತೆರೆ! ನನ್ನನ್ನು ಒಳಕ್ಕೆ ಬಿಡು!” ಎಂಬುದಾಗಿ ಪ್ರತೀದಿನ ಪ್ರಾರ್ಥಿಸುತ್ತಿರುವುದನ್ನು ಬಹುದಿನಗಳಿಂದ ನೋಡುತ್ತಿದ್ದಳು. ಅನೇಕ ಸಲ ಹಸನ್‌ ಅಳುತ್ತಿದ್ದ, ಅವನ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ಅವನು ಪುನಃ ಪುನಃ ಬೊಬ್ಬೆ ಹೊಡೆಯುತ್ತಿದ್ದ, “ಬಾಗಿಲು ತೆರೆ! ನನ್ನನ್ನು ಒಳಕ್ಕೆ ಬಿಡು! ನೀನೇಕೆ ನಾನು ಹೇಳುವುದನ್ನು ಕೇಳಿಸಿಕೊಳ್ಳುತ್ತಿಲ್ಲ? ನೀನೇಕೆ ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುತ್ತಿಲ್ಲ?” ಪ್ರತೀ ದಿನ ಹಸನ್‌ ಹೇಳುವುದನ್ನು ಕೇಳಿ ಅವಳು ನಗುತ್ತಿದ್ದಳು. ಆದರೆ ಒಂದು ದಿನ ರಬಿಯಾಳಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನ ಹತ್ತಿರ ಹೋಗಿ ಅವನನ್ನು ಹಿಡಿದು ಅಲುಗಾಡಿಸಿ ಹೇಳಿದಳು, “ಈ ಅವಿವೇಕದ ಮಾತು ನಿಲ್ಲಿಸು! ಬಾಗಿಲು ತೆರೆದಿದೆ – ವಾಸ್ತವವಾಗಿ ನೀನು ಈಗಾಗಲೇ ಒಳಗಿರುವೆ!”

ಹಸನ್‌ ರಬಿಯಾಳನ್ನು ನೋಡಿದ. ಆ ಕ್ಷಣವೇ ಅವನಿಗೆ ಸತ್ಯದ ಸಾಕಾತ್ಕಾರದ ಕ್ಷಣವಾಯಿತು. ರಬಿಯಾಳ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ಅವನು ಶಿರಬಾಗಿ ವಂದಿಸಿದ, ಅವಳ ಪಾದಗಳನ್ನು ಸ್ಪರ್ಷಿಸಿ ವಂದಿಸಿದ. ತದನಂತರ ಹೇಳಿದ, “ಸರಿಯಾದ ಸಮಯದಲ್ಲಿ ನೀನು ಬಂದೆ. ಇಲ್ಲವಾಗಿದ್ದಲ್ಲಿ ನಾನು ನನ್ನ ಜೀವಿತಾವಧಿಯನ್ನೆಲ್ಲಾ ದೇವರನ್ನು ಕರೆಯುವುದರಲ್ಲಿಯೇ ಕಳೆಯುತ್ತಿದ್ದೆ. ಎಷ್ಟೋ ವರ್ಷಗಳಿಂದ ನಾನು ಇಂತು ಮಾಡುತ್ತಿದ್ದೇನೆ. ಈ ಮೊದಲು ನೀನು ಎಲ್ಲಿ ಹೋಗಿದ್ದೆ? ಈ ಬೀದಿಯಲ್ಲಿ ನೀನು ಪ್ರತೀದಿನ ಹೋಗುತ್ತಿರುವ ವಿಷಯ ನನಗೆ ತಿಳಿದಿದೆ. ನಾನು ಅಳುತ್ತಿರುವುದನ್ನೂ ಪ್ರಾರ್ಥಿಸುತ್ತಿರುವುದನ್ನೂ ನೀನು ನೋಡಿರಲೇ ಬೇಕು.”

ಆಗ ರಬಿಯಾ ಹೇಳಿದಳು, “ಅದು ನಿಜ. ಆದರೆ ಸತ್ಯವನ್ನು ನಿರ್ದಿಷ್ಟ ಕ್ಷಣದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಂದರ್ಭದಲ್ಲಿಯೇ ಹೇಳಬೇಕು. ನಾನು ಆ ಸರಿಯಾದ ಕ್ಷಣಕ್ಕೆ ಕಾಯುತ್ತಿದ್ದೆ. ಆ ಕ್ಷಣ ಇಂದು ಬಂದೊದಗಿತು. ಎಂದೇ, ನಾನು ನಿನ್ನ ಸಮೀಪಕ್ಕೆ ಬಂದೆ. ನಾನೇನಾದರೂ ನಿನ್ನೆ ಹೇಳಿದ್ದಿದ್ದರೆ ಅದು ನಿನ್ನನ್ನು ಸಿಟ್ಟಗೆಬ್ಬಿಸುತ್ತಿತ್ತು, ನಿನಗೆ ಕೋಪ ಬರುತ್ತಿತ್ತು, ನೀನು ನನಗೆ ವಿರುದ್ಧವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯೂ ಇತ್ತು. ‘ನೀನು ನನ್ನ ಪ್ರಾರ್ಥನೆಗೆ ವಿಘ್ನವುಂಟು ಮಾಡಿರುವೆ, ಯಾರದೇ ಪ್ರಾರ್ಥನೆಗೆ ಅಡ್ಡಿಯುಂಟು ಮಾಡುವುದು ಸರಿಯಲ್ಲ,’ ಎಂಬುದಾಗಿ ನನಗೇ ನೀನು ಹೇಳುವ ಸಾಧ್ಯತೆಯೂ ಇತ್ತು. ನಿನಗೆ ತಿಳಿದಿರುವಂತೆ ಒಬ್ಬ ಭಿಕ್ಷುಕನ ಪ್ರಾರ್ಥನೆಗೆ ರಾಜನೂ ಅಡ್ಡಿಯುಂಟುಮಾಡಕೂಡದು. ಮುಸ್ಲಿಮ್‌ ರಾಷ್ಟ್ರಗಳಲ್ಲಿ ಅಪರಾಧಿಯನ್ನು, ಆತ ಕೊಲೆಗಡುಕನೇ ಆಗಿದ್ದರೂ, ಪ್ರಾರ್ಥನೆ ಮಾಡುತ್ತಿರುವಾಗ ದಸ್ತಗಿರಿ ಮಾಡುವುದಿಲ್ಲ. ಎಂದೇ, ನಾನು ನಿನಗೆ, ‘ಹಸನ್‌ ಮೂರ್ಖನಂತಾಡಬೇಡ, ಬಾಗಿಲು ತೆರೆದಿದೆ. ವಾಸ್ತವವಾಗಿ ನೀನು ಈಗಾಗಲೇ ಒಳಗಿರುವೆ’ ಎಂದು ಹೇಳಲು ಯುಕ್ತ ಕ್ಷಣ ಬರಲಿ ಎಂದು ಕಾಯುತ್ತಿದ್ದೆ.”

*****


೫. ನಂಬಿಕೆ ತಂದ ಸಂಕಷ್ಟ
ಒಬ್ಬಳು ತನ್ನ ಗೆಳತಿಗೆ ಹೇಳಿದಳು, “ಪಾಪ, ಮೈಸೈ ತಾನು ಯಾವುದನ್ನು ನಂಬಿದ್ದಳೋ ಅದರಿಂದಾಗಿ ತುಂಬ ಸಂಕಟಪಡಬೇಕಾಯಿತು”
ಗೆಳತಿ ಕೇಳಿದಳು, “ಅವಳು ಏನನ್ನು ನಂಬಿದ್ದಳು?”
“ಒಂಭತ್ತು ಗಾತ್ರದ ಪಾದಗಳಿರುವವರು ಆರು ಗಾತ್ರದ ಪಾದರಕ್ಷೆಗಳನ್ನು ಧರಿಸಬಹುದು!”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x