ಶಾಲೆ ಬಿಡುವ ಮಕ್ಕಳಿಗೆ ಯಾರು ಹೊಣೆ?:ಕೆ.ಎಂ.ವಿಶ್ವನಾಥ


ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ಗುಣಾತ್ಮಕತೆ ತರಲು, ಗಣನೀಯವಾಗಿ ಶ್ರಮಿಸಲಾಗುತ್ತಿದೆ . ಶಿಕ್ಷಣ ಎಲ್ಲರ ಸೊತ್ತಾಗಬೇಕು. ಪ್ರತಿಯೊಂದು ಮಗು ಶಾಲೆಯ ಆಸರೆಯಲ್ಲಿ ತನ್ನ ಮುಗ್ಧ ಬಾಲ್ಯವನ್ನು ಕಳೆಯಬೇಕು. ಎನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಹೊರತರಲಾಗುತ್ತಿದೆ. ಪ್ರತಿಯೊಂದು ಯೋಜನೆಯೂ ಉತ್ತಮ ಅನುಪಾಲನೆ ಮಾಡಿದಾಗ ಮಾತ್ರ, ಶಿಕ್ಷಣದಲ್ಲಿ ಗುಣಾತ್ಮಕತೆ ತರಲು ಸಾಧ್ಯವಾಗುತ್ತದೆ.

ಈಗಾಗಲೇ ನಮ್ಮ ರಾಜ್ಯ, ಶಾಲೆ ಬಿಟ್ಟ ಮಕ್ಕಳಲ್ಲಿ ಮೊದಲನೆ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ನೂರು ಯೋಜನೆಗಳು ಹೊರತಂದ ರಾಜ್ಯ ಸರಕಾರ, ಪ್ರತಿ ಹಂತದಲ್ಲಿ ಯೋಜನೆಯ ಸೂಕ್ತ ಪರಿಶೀಲನೆಯನ್ನು ಮರೆಮಾಚುತ್ತಿದೆ.  ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 1,68,621 ಮಕ್ಕಳು ಶಾಲೆ ಬಿಟ್ಟಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಿಧಾನಸಭೆಗೆ ಯಾವ ಮೂಲಾಜೆಯಿಲ್ಲದೆ ಸೂಕ್ತವಾದ ಮಾಹಿತಿ ನಾಡಿನ ಜನತೆಗೆಲ್ಲ ರವಾನಿಸಿದ್ದಾರೆ.

ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು, ಶಾಲಾ ಸಮೀಕ್ಷೆ ಮತ್ತು ಕುಟುಂಬ ಸಮೀಕ್ಷೆ ಎರಡು ಹಂತದಲ್ಲಿ ನಡೆಸಲಾಗಿದೆ. ಶಿಕ್ಷಣ ಇಲಾಖೆ ಜತೆಗೆ ಕಾರ್ಮಿಕ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ , ಕಂದಾಯ, ಜಿಲ್ಲಾ ಪಂಚಾಯಿತಿಗಳು ಹಾಗೂ ಎನ್‌ಜಿಓಗಳ ಸಹಯೋಗದಲ್ಲಿ ನಡೆಸಲಾಗಿದೆ.'' ಪ್ರತಿಯೊಂದು ಇಲಾಖೆಯೂ ತನ್ನ ಜವಾಬ್ದಾರಿಯನ್ನು ಉತ್ತೇಜನ ರೀತಿಯಲ್ಲಿ ಮಾಡಿದಾಗ ಮಾತ್ರ ಶಾಲೆ ಬಿಟ್ಟ ಮಕ್ಕಳನ್ನು ಸೂಕ್ತ ರೀತಿಯಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ಎಲ್ಲರೂ ಪ್ರತಿ ಹಂತದಲ್ಲಿ ಕೈಜೋಡಿಸಿ ಕೆಲಸ ಮಾಡುವ ಅತೀ ಅವಶ್ಯಕತೆಯಿದೆ. ಸರಕಾರಗಳ ಮಟ್ಟದಲ್ಲಿ ಶಾಲೆ ಬಿಟ್ಟ ಮಕ್ಕಳ ಚರ್ಚೆಯೂ  ಗಣನೀಯವಾಗಿ ನಡೆಯಬೇಕಾದ     ಅಗತ್ಯ ಹಾಗೂ ಅನಿವಾರ್ಯವಿದೆ.

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 18,322 ಮಕ್ಕಳು, ಗುಲ್ಬರ್ಗದಲ್ಲಿ 15,367 ಮಕ್ಕಳು, ರಾಯಚೂರಿನಲ್ಲಿ 12,033 ಮಕ್ಕಳು, ಯಾದಗಿರಿಯಲ್ಲಿ 11,142 ಮಕ್ಕಳು, ಚಾಮರಾಜನಗರದಲ್ಲಿ 9690 ಮಕ್ಕಳು, ಕೊಪ್ಪಳದಲ್ಲಿ 7290 ಮಕ್ಕಳು, ಬಾಗಲಕೋಟದಲ್ಲಿ 6155, ಹಾವೇರಿಯಲ್ಲಿ 4623 ಮಕ್ಕಳು ಶಾಲೆ ಬಿಟ್ಟಿದ್ದಾರೆ, ಎಂಬ ವಿಷಯ ಸರಕಾರ ಸ್ವತ: ತಿಳಿಸಿದೆ, ಮಕ್ಕಳು ನಮ್ಮ ದೇಶದ ಭವಿಷ್ಯ ಮಕ್ಕಳಾಗಿರುವಾಗ ಅವರ ಬದುಕನ್ನು ಶಾಲೆ ಬಿಡದಂತೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂಬ ವಿಷಯ ನಾವೆಲ್ಲರೂ ತಿಳಿಯಬೇಕಾದ ಅಗತ್ಯವಿದೆ.

ಆರ್‌ಟಿಇ ಮಕ್ಕಳು: 2014-15ನೇ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯಡಿ ಒಟ್ಟು 1,10,794 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈವರೆಗೆ 95,042 ಮಕ್ಕಳು ದಾಖಲಾಗಿದ್ದಾರೆ,'' ಕಾಯಿದೆಯಡಿಯಲ್ಲಿ ಆಯ್ಕೆಯಾದ ಮಕ್ಕಳು ಯಾವ ರೀತಿಯಾಗಿ ಮಕ್ಕಳು ಕಲಿಯುತ್ತಿದ್ದಾರೆಯೆಂಬ ವಿಷಯ ಮಾತ್ರ ಇನ್ನು ನಿಗೂಢವಾಗಿದೆ . ಸರಕಾರ ಕಾಯಿದೆ ನಿರ್ಮಾಣ ಮಾಡಿ ಅದರ ಅನುಪಾಲನೆ ಮಾಡದಿರುವುದು ವಿಪರ್ಯಾಸ. 

2012-13ನೇ ಸಾಲಿನಲ್ಲಿ 51,994, 2013-14ನೇ ಸಾಲಿನಲ್ಲಿ 22,741 ಹಾಗೂ 2014-15ನೇ ಸಾಲಿನಲ್ಲಿ 1,68,621 ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದ್ದು ಅವು ಈ ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ.

ಶಾಲೆ ದೂರ ಇರುವುದು :

ರಾಜ್ಯದ ಹಲವು ಶಾಲೆಗಳು, ಇನ್ನು ಮನೆಯಿಂದ ದೂರ ಇವೆ. ಮಕ್ಕಳು ತಮ್ಮ ಮನೆಯಿಂದ ಶಾಲೆಗೆ ತೆರಳಲು ಅವಕಾಶಗಳಿಲ್ಲ, ಒಂದು ಹಳ್ಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಅಗತ್ಯವಿದೆ ಆದರೆ ಅದನ್ನು ಹೊರತುಪಡಿಸಿ, ಉಳಿದ ಕೆಲಸಗಳಿಗೆ ನಾವು ಹೆಚ್ಚಿನ ಮಹತ್ವ ಕೊಟ್ಟರೆ ಮಕ್ಕಳು ಶಾಲೆಗೆ ಬರುವ ಬಗ್ಗೆ ಯೋಚಿಸುತ್ತಿಲ್ಲ. ಶಾಲೆಯ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಒಂದು ಕಿ.ಮೀ. ದೂರದೊಳಗೆ ಶಾಲೆ ಇರಬೇಕು ಆದರೆ ಅದೆಷ್ಟು ಹಳ್ಳಿಗಳು ಇನ್ನು ರಸ್ತೆಯಿಲ್ಲದೆ ಗೊಣಗುತ್ತಿವೆ. ಅಂತಹ ಹಳ್ಳಿಗಳಲ್ಲಿ ಶಾಲೆಗಳಿಲ್ಲ ಬೇರೆ ಹಳ್ಳಿಗಳಿಗೆ ನಡೆದು ಹೋಗಿ ಶಾಲೆ ಕಲಿಯಬೇಕಾದ ಅವಶ್ಯಕತೆಯಿದೆ. ಮಕ್ಕಳು ನಡುದುಹೋಗುವ ಪರಿಯನ್ನು ಪರಿಗಣಿಸಿದರೆ, ಕೆಲವೊಮ್ಮೆ  ಮಕ್ಕಳು ಹಠಮಾಡಿ ಶಾಲೆಗೆ ಗೈರುಹಾಜರಿಯಾಗುವ  ಅವಕಾಶಗಳು ಹೆಚ್ಚಾಗಿವೆ.

ಇಂದು ಪ್ರಾಥಮಿಕ ಶಾಲೆಗಿಂತ ಪ್ರೌಢ ಶಾಲೆಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.  ಪ್ರೌಢ ಶಾಲೆಗಳಲ್ಲಿ ಮಕ್ಕಳು ವಯಸ್ಸಿಗೆ ಬಂದಿರುವುದರಿಂದ ದೂರದ ಊರುಗಳಿಗೆ ನಡೆದು ಹೋಗುವುದು ಕಷ್ಟವಾದ್ದರಿಂದ, ಇದೀಗ ದೂರವಿರುವ ಮಕ್ಕಳ ಬಗ್ಗೆ ವಿಚಾರ ಮಾಡಬೇಕಾದ ಅಗತ್ಯವಿದೆ. ಪ್ರಾಥಮಿಕ ಹಂತ ಮುಗಿಸುವ ಮಕ್ಕಳು ಪ್ರೌಢ ಹಂತದಲ್ಲಿ ಇದ್ದಕ್ಕಿದ್ದಂತೆ ಶಾಲೆಯಿಂದ ದೂರ ಆಗುತ್ತಾರೆ. ಈ ಸಮಸ್ಯೆ ಹಳ್ಳಿಗಳಲ್ಲಿ ಹೆಚ್ಚಿದೆ. ಹಳ್ಳಿಗಳಲ್ಲಿ ನಮ್ಮ ಜನರು ನಂಬಿರುವೆ ಅನೇಕ ಮೂಢನಂಬಿಕೆಗಳನ್ನು ನಂಬಿ ಹುಡುಗಿಯರ ಶಿಕ್ಷಣ ಕುಂಠಿತಗೊಳ್ಳಲು ಅವಕಾಶವಾಗುತ್ತಿದೆ.

ಮನೆಗೆಲಸ :

ಹಳ್ಳಿಗಳಲ್ಲಿ ಮಕ್ಕಳು ಹೆಚ್ಚಾಗಿ ಕೃಷಿ ಕಾರ್ಮಿಕರ ಮಕ್ಕಳು ಹೆಚ್ಚಿರುವದರಿಂದ, ಹೆಚ್ಚಿನ ಮಕ್ಕಳು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ನಮ್ಮ ಹಳ್ಳಿಗಳಲ್ಲಿ ನಮ್ಮ ಹೆಚ್ಚಿನ ಪಾಲಕರು,  ತಮ್ಮ ಮಕ್ಕಳನ್ನು  ಮುಂದಿನ ಭವಿಷ್ಯದಲ್ಲಿ ಹೀಗೆ ಆಗಬೇಕು ಎಂಬ ಕಲ್ಪನೆಯಿಂದ ದೂರಾಗುತ್ತಿದ್ದಾರೆ.  ಸ್ವತ: ಪಾಲಕರೆ ತಮ್ಮ ಮಕ್ಕಳನ್ನು ಮನೆಗೆಲಸಕ್ಕೆ ಬಳಸಿಕೊಂಡು ಮಕ್ಕಳ ಭವಿಷ್ಯವನ್ನು ಮಣ್ಣುಪಾಲು ಮಾಡುತ್ತಿರುವುದು ಅತ್ಯಂತ ದೊಡ್ಡ ವಿಪರ್ಯಾಸವೇ ಸರಿ. ಇದರ ಜೊತೆಗೆ ಇನ್ನು ಹಲವು ಕಾರಣಗಳಿಂದ ನಮ್ಮ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅವು ಈ ಕೆಳಗಿನಂತಿವೆ.

ಬೇರೆಯವರ ಮನೆಯಲ್ಲಿ ಕೆಲಸಕ್ಕೆ ಸೇರಿರುವುದು, ದುಡಿಮೆಯಲ್ಲಿ ತೊಡಗಿರುವುದು, ಚಿಕ್ಕಂದಿನಲ್ಲಿ ಮದುವೆಯಾಗಿರುವುದು, ಹೆಣ್ಣು ಮಕ್ಕಳು ಋತುಮತಿಯಾದಳೆಂದು ಶಾಲೆ ಬಿಡಿಸಲಾಗಿದೆ. ಶಾಲಾ ಪರಿಸರ ಆಕರ್ಷಣೀಯವಾಗಿ ಇಲ್ಲದಿರುವುದು, ಅಲೆಮಾರಿ ಜೀವನ, ಶಿಕ್ಷಕರ ಭಯ, ಓಡಿ ಹೋದ ಮಗು, ಬೀದಿ ಮಗು, ಚಿಂದಿ ಆಯುವ ಮಗು, ವಿಕಲಚೇತನದಿಂದ ಹಾಗೂ ಇತರ ಕಾರಣಗಳಿಂದ ಮಕ್ಕಳು ಶಾಲೆ ಬಿಟ್ಟಿದ್ದಾರೆ, ಎಂದು ಸಮೀಕ್ಷೆಯಿಂದ ದೃಢಪಟ್ಟಿದೆ.  ಈ ಸಮೀಕ್ಷೆಯಲ್ಲಿ ಈಗಾಗಲೇ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಒಳಗೊಂಡಿದ್ದು ನಿಖರವಾದ ಮಾಹಿತಿಯಂದು ಪರಿಗಣಿಸಲಾಗಿದೆ.

ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಸರಕಾರ ಹಲವು ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಮೂರು ತಿಂಗಳ ವಸತಿ ರಹಿತ ಹಾಗೂ ವಸತಿ ಸಹಿತ ವಿಶೇಷ ತರಬೇತಿ, ಶಾಲಾಧಾರಿತ ವಿಶೇಷ ತರಬೇತಿ , ವಲಸೆ ಮಕ್ಕಳಿಗಾಗಿ ಟೆಂಟ್ ಶಾಲೆಗಳು, ಬಾಲಕಾರ್ಮಿಕ ಮಕ್ಕಳಿಗಾಗಿ ವಿಶೇಷ ಶಾಲೆ, ನಗರದಲ್ಲಿ ಶಿಕ್ಷಣ ವಂಚಿತ ಮಕ್ಕಳಿಗಾಗಿ ಶಾಲೆ ಹಾಗೂ ಮದರಸ ಕೇಂದ್ರ ಆರಂಭಿಸಲು ನೆರವು, ಶೈಕ್ಷಣಿಕವಾಗಿ ಹಿಂದುಳಿದ ಕಡೆ ಹೆಣ್ಣು ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ಆರಂಭಿಸಲಾಗಿದೆ. ಹಾಸ್ಟೆಲ್ ವ್ಯವಸ್ಥೆ , ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕೂಲ್‌ಬ್ಯಾಕ್, ಸೈಕಲ್, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಮೊದಲಾದ ಕಾರ್ಯಕ್ರಮಗಳ ಮೂಲಕ ಸತತ ಶ್ರಮಿಸುತ್ತಿದೆ . 

ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಕೆಲಸ ಮಾಡಿದರು ಮಕ್ಕಳು ಶಾಲೆ ಬಿಡುವ ವ್ಯವಸ್ಥೆ ಸರಿಯಾಗುತ್ತಿಲ್ಲ. ಶಾಲೆ ಬಿಟ್ಟ, ಶಾಲೆ ಕಲಿಯದ ಮಕ್ಕಳಿಗೆ ಸಾಮೋಹಿಕ ನಾಯಕತ್ವ ಅತ್ಯಂತ ಅವಶ್ಯಕವಾಗಿದೆ. ಏಕಮುಖವಾದ ಹೋರಾಟವಾಗಲಿ ಕೆಲಸಗಳಾಗಲಿ ಈ ಕಾರ್ಯದಲ್ಲಿ ಕೆಲಸ ಮಾಡುವುದಿಲ್ಲ ಅದಕ್ಕಾಗಿ ಸಮುದಾಯ,ಶಿಕ್ಷಕರು, ಮಕ್ಕಳು, ಜನಪ್ರತಿನಿಧಿಗಳು, ಎಲ್ಲಾ ಇಲಾಖೆಗಳು, ಮುಖ್ಯ ಗುರುಗಳು, ಶಾಲಾಭಿವೃದ್ಧಿ ಸಮಿತಿಯವರು , ಅಧಿಕಾರಿಗಳು ಒಂದುಗೂಡಿ ಶಾಲೆಯಿಂದ ಹೊರಗುಳಿದ ಹಾಗೂ ಶಾಲೆಯನ್ನು ಬಿಟ್ಟ ಮಕ್ಕಳಿಗಾಗಿ ಕೆಲಸ ಮಾಡುವ ಅವಶ್ಯಕತೆ ಹಾಗೂ ಅನಿವಾರ್ಯತೆಯಿದೆ.

ಶಿಕ್ಷಣದಲ್ಲಿ ಗುಣಾತ್ಮಕತೆ ತರಲು ಪ್ರತಿಯೊಂದು ಹಂತದಲ್ಲಿ ಪ್ರತಿಯೊಬ್ಬರು ಕೆಲಸ ಮಾಡುವ ಅವಶ್ಯಕತೆಯಿದೆ. ಎಲ್ಲರು ಒಬ್ಬರ ಮೇಲೆ ಇನ್ನೊಬ್ಬರು ಗೂಬೆಕೂರಿಸುವುದು ಬಿಟ್ಟು  ಎಲ್ಲರೂ ಅವರವರ ಕರ್ತವ್ಯ ಮಾಡಬೇಕಾದ ಅಗತ್ಯವಿದೆ. ಎಲ್ಲರ ಮನದೊಳಗೆ ಬದಲಾವಣೆಯ ಗಾಳಿ ಬೀಸಿ ಎಲ್ಲರು ಸೂಕ್ತ ರೀತಿಯಲ್ಲಿ ಅವರವರ ಹಕ್ಕು ಕರ್ತವ್ಯಗಳನ್ನು ನಿರ್ವಹಿಸಿ ಶಾಲೆ ಬಿಟ್ಟ ಮಕ್ಕಳು ಹಾಗೂ ಶಾಲೆಯನ್ನು ಕಲಿಯದ ಮಕ್ಕಳಿಗೆ ಶಾಲೆ ಕಲಿಸುವ ಅಭಿಯಾನ ಪ್ರಾರಂಭ ಮಾಡುವ ಮನಸ್ಸು ಮಾಡಬೇಕಿದೆ. ಬನ್ನಿ ಹಾಗಾದರೆ ಒಗ್ಗಟ್ಟಿನಿಂದ ಕಗ್ಗಂಟಾಗಿರುವ ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸೋಣವೆ?

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Rukmini Nagannavar
Rukmini Nagannavar
9 years ago

ಗುಡ್ ಆರ್ಟಿಕಲ್ ಸರ್..

1
0
Would love your thoughts, please comment.x
()
x