ಮೊದಲು ಓದುಗನಾಗು

ಯು.ಆರ್. ಅನಂತಮೂರ್ತಿಯವರ ಭಾರತೀಪುರ

 

ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ.

ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ ನಾಯಕನ ಬಗ್ಗೆ ಅಸೂಯೆ ಭಾವ ಹೊಂದಿದ್ದು ಅವನ್ನೊಬ್ಬಗೆನೆ ವ್ಯಾಸಂಗ ಮಾಡುತ್ತಿರುತ್ತಾನೆ. ಈ ಮೂವರಲ್ಲಿಯೂ ಸ್ನೇಹವು ಗಾಢವಾಗಿರುತ್ತದೆ.

ಉನ್ನತ ಶಿಕ್ಷಣದ ನಂತರ ‘ಭಾರತೀಪುರಕ್ಕೆ’ ಮರಳಿ ಬಂದಂತಹ ಜಗನ್ನಾಥನಿಗೆ ‘ಭಾರತೀಪುರ’, ಮೌಡ್ಯತೆಯ ಆಗರವಾಗಿ ಕಾಣುತ್ತದೆ. ಶೂದ್ರರ ದೇವ ಭೂತರಾಯ, ಭೂತರಾಯನ ಒಡೆಯ ಮಂಜುನಾಥಸ್ವಾಮಿ ಹೀಗೆ ಮೇಲ್ವರ್ಗದ ಜನಾಂಗ ಶೂದ್ರರನ್ನು ತಮ್ಮ ನಿಯಂತ್ರಣಕ್ಕೆ ಅನಿವಾರ್ಯವಾಗಿ ಒಳಪಡಿಸಿರುತ್ತಾರೆ. ಭಾರತೀಪುರದಲ್ಲಿ ಮಲ ಹೋರುವ ಹೊಲೆಯರಿರದಿದ್ದರೆ ಈ ಪುರವೆಲ್ಲಾ ಕೊಳೆತು ನಾರುತ್ತಿತ್ತೇನೋ ಎನಿಸುತ್ತದೆ. ಹೊಲೆಯರಿಂದಲೇ ಶುದ್ಧವಾಗುವ ಊರು, ಅವರು ಮಂಜುನಾಥ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದರೆ ಅಪವಿತ್ರವಾಗುವುದಾದರೂ ಹೇಗೆ? ಎಂದು ಯೋಚಿಸುತ್ತಾನೆ. ಬಂಡಾಯದ ಬಗ್ಗೆ ಮಾತನಾಡಿ ಮೆಚ್ಚಿಗೆ ಗಿಟ್ಟಿಸಿದ ಜಗನ್ನಾಥನಿಗೆ ಈ ಭಾರತೀಪುರದಲ್ಲಿ ಸುಧಾರಣೆ ತುರ್ತು ಅಗತ್ಯವಾಗಿ ಕಾಣುತ್ತದೆ.

ಇಡೀ ಕಥೆಯಲ್ಲಿ ಜಗನ್ನಾಥನ ಧ್ಯೇಯ ಒಂದೇ ಹೇಗಾದರೂ ಸಮಾನತೆಯನ್ನು ಸಾಧಿಸಬೇಕು. ಅದಕ್ಕಾಗಿ ಮೊದಲು ಹೊರೆಯರನ್ನು ದೇವಾಲಯಕ್ಕೆ ನುಗ್ಗಿಸಬೇಕು ಎಂಬುದು. ಆದರೆ ತನ್ನ ಮುಖವನ್ನು ತಲೆ ಎತ್ತಿ ನೋಡಲು ಹೆದರುವ ಹೊಲೆಯರು ಈ ಕಾರ್ಯಕ್ಕೆ ಸಿದ್ಧರಾಗುವರೇ? ಎಂದು ಸಂದೇಹಿಸಿ, ಮೊದಲು ಇವರಿಗೆ ಅಕ್ಷರ ಜ್ಞಾನವನ್ನು ನೀಡಬೇಕೆಂದು ತನ್ನನ ಮನೆಯಂಗಳದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸುತ್ತಾನೆ. ಮಂಜುನಾಥ ಸ್ವಾಮಿಯಜಾತ್ರೆಯ ದಿನದಂದು ಹೊಲೆಯರನ್ನು ದೇವಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿ ಪತ್ರಿಕೆಯಲ್ಲಿಯೂ ಪ್ರಕವಣೆ ನೀಡುತ್ತಾನೆ. ಇದಕ್ಕೆ ಊರಿನವರಿಂದ ಹಾಗೂ ಹೊರಗಿನ ಜನರಿಂದಲೂ ಸಾಕಷ್ಟು ವಿರೋಧ-ಅವಿರೋಧ ಪ್ರತಿಕ್ರಿಯೆಗಳು ಬರುತ್ತದೆ. ನಾಯಕನಿಗೆ ಹೊರಗಿನಿಂದ ಬೆಂಬಲವನ್ನು ನೀಡಬಂದ ವ್ಯಕ್ತಿಗಳು ತಮ್ಮ ಕುಸಿಯುತ್ತಿರುವ ‘ಹಿರೋಯಿಸಮ್’ ನನ್ನು ಎತ್ತಿ ಹಿಡಿಯುವ ಸಲುವಾಗಿ ಜಗನ್ನಾಥನ ಕ್ರಾಂತಿಕಾರ್ಯವನ್ನು ಬಳಸಿಕೊಳ್ಳುವ ಸಂದರ್ಭಗಳು ಮತ್ತು ಆ ಸಂದರ್ಭಗಳಲ್ಲಿನ ನಾಯಕನ ನಿಲುವು ಓದುಗರ ಮನದಲ್ಲಿ ನಿಲ್ಲುತ್ತದೆ.

ಈ ನಡುವೆ ಜಗನ್ನಾಥನ ಗೆಳತಿ, ‘ಮನದನ್ನೇ’ಯಾಗಿದ್ದ ‘ಮಾರ್ಗರೇಟ್’, ಇಂಗ್ಲೆಂಡಿನಲ್ಲಿ ಉಳಿದಿದ್ದ ಗೆಳೆಯ (ಸದಾ ಕಾಲ ಜಗನ್ನಾಥನ ಬಗೆಗೆ ಅಸೂಯೆ ಪಡುವವ) ನೊಂದಿಗೆ ತನಗೆ ಏರ್ಪಟ್ಟು ಹೊಸ ಸಂಬಂಧವನ್ನು ತಿಳಿಸಿದಾಗ, ಜಗನ್ನಾಥ ಕುಗ್ಗಿ ಹೋಗುತ್ತಾನೆ. ಸಾವರಿಸಿಕೊಂಡು ತಾನು ಮತ್ತೆ ಮಾರ್ಗರೇಟನ್ನು ಪಡೆಯುತ್ತೇನೆಂಬ ಆಶಯವನ್ನು ದೃಢವಾಗಿಸಿಕೊಂಡು ತನ್ನ ಧ್ಯೇಯೆದೆಡೆಗೆ ಹೆಚ್ಚು ಜಾಗೃತನಾಗಿ ಕಾರ್ಯನಿರ್ವಹಿಸುತ್ತಾನೆ. ಜಗನ್ನಾಥ ಮಾರ್ಗರೇಟನ್ನು ಕಳೆದುಕೊಂಡ ನೋವನ್ನು ಓದುಗರು ಕೂಡ ಅನುಭವಿಸುವಂತೆ ಕಾದಂಬರಿಕಾರರು ಚಿತ್ರಿಸಿದ್ದಾರೆ.

ಅನೇಕ ವಿಘ್ನಗಳ ನಡುವೆಯೂ ಜಗನ್ನಾಥನ ದೃಢಸಂಕಲ್ಪ ನಡೆದೇ ತೀರುತ್ತದೆ. ಹೊಲೆಯರು ಜಾತ್ರೆಯ ದಿನದಂದು ದೇವಾಲಯವನ್ನು ಪ್ರವೇಶಿಸುತ್ತಾರೆ. ಇದು ಪತ್ರಿಕೆಗಳಲ್ಲಿಯೂ ಸುದ್ಧಿಯಾಗುತ್ತದೆ. ಮುಂದಿನ ಹಂತವೆಂಬಂತೆ ಶೋಷಿತ ವರ್ಗದವರೊಂದಿಗೆ ರೈತರನ್ನು ಸೇರಿಸಿ ಕ್ರಾಂತಿ ಮಾಡುವ ಯೋಚನೆಯನ್ನು ನಾಯಕ ಹಾಕುತ್ತಿರುವಾಗ, ಅತ್ತ ಕಡೆ ದೇವಾಲಯದಲ್ಲಿ ಶುದ್ಧ ಮಾಡಿ ಮತ್ತೆ ಶ್ರೀ ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆಯ ಕಾರ್ಯ ಸಿದ್ಧತೆ ನಡೆದಿರುತ್ತದೆ. ಏನೇ ಕ್ರಾಂತಿ ಕಾರ್ಯಗಳಾದರೂ ಬದಲಾಗದ ಸಮಾಜ ಇಲ್ಲಿನ ಕಥಾ ವಸ್ತು.

ಕಾದಂಬರಿಯಲ್ಲಿನ ಭಾಷಾ ಶೈಲಿ ತುಂಬಾ ಇಷ್ಠವಾಗುತ್ತದೆ. ಸರಳವಾಗಿ ಭಾವನೆಗಳ ಕಲ್ಪನೆ ಮೂಡಿಸುವ ಕಾರ್ಯ ನಡಿದಿದೆ ಪ್ರತೀ ಸನ್ನೀವೇಶದಲ್ಲೂ ವ್ಯಕ್ತಿಯ ಆಂತರಿಕ ಆಲೋಚನೆಗಳು ಖಿನ್ನತೆ, ಆಸೆಗಳನ್ನು ಹಾಗೂ ಬಾಹ್ಯ ನಡೆಗಳ ಚಿತ್ರಣವನ್ನು ಒಟ್ಟೊಟ್ಟಿಗೆ ನಮಗೆ ಕಟ್ಟಿಕೊಡುತ್ತಾರೆ. ಈ ವಿಶೇಷತೆ ನನಗೆ ತುಂಬಾ ಇಷ್ಟವಾಯಿತು. ಸರಳ ಮಾತುಗಳಿಂದ ವ್ಯಕ್ತಿಯ ವಿವಿಧ ಬಲ-ದೌರ್ಬಲ್ಯಗಳನ್ನು ಪಾತ್ರಗಳ ಮುಖೇನ ನಮಗೆ ದರ್ಶಿಸುತ್ತಾರೆ. ಇದರ ಮೂಲಕ ನಮ್ಮನ್ನು ‘ಅಂತರಾವಲೋಕನ’ಕ್ಕೆ ತೊಡಗುವಂತೆ ಮಾಡಿದ್ದಾರೆ.

ಮತ್ತೊಂದು ಸಂಗತಿಯೆಂದರೆ, ಈ ಕಾದಂಬರಿಯಲ್ಲಿ ಗಂಡು-ಹೆಣ್ಣಿನ ಸಂಬಂಧವು ಪ್ರೇಮಮಯವಾಗಿರದೆ ಕಾಮಮಯವಾಗಿರುವುದು ಮನಸ್ಸಿಗೆ ಏಕೋ ಸಂಕಟವಾಗುತ್ತದೆ. ಈ ಸಂಬಂಧದಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತದೆ. ಉದಾಹರಿಸುವುದಾದರೆ, ಮನೆಯ ಆಳು ಕಾವೇರಿ, ಜೋಯಿಸರ ಸೊಸೆ ನಾಗಮಣಿಯರನ್ನು ಮೋಹಿಸುವ ಜಗನ್ನಾಥ, ತನ್ನ ಪ್ರೇಯಸಿ ಮಾರ್ಗರೇಟನ್ನೂ ಬಯಸುತ್ತಾನೆ. ಆಕೆ ಇನ್ನೊಬ್ಬನಲ್ಲಿ ಆಸಕ್ತಳಾದಾಗ ನೋಯುತ್ತಾನೆ, ಕುಗ್ಗುತ್ತಾನೆ. ಹಾಗಾದರೆ ಈತ ಯಾರಿಗೆ ಪ್ರಾಮಾಣಿಕನಾಗಿದ್ದಾನೆ? ಎಂಬುದು ಪ್ರಶ್ನೆ ಕಥಾ ನಾಯಕ ಜಗನ್ನಾಥ ತನ್ನೇಲ್ಲಾ ಭಾವನೆಗಳನ್ನು ಸದಾಕಾಲ ಮನಸ್ಸಿನಲ್ಲಿಯೇ ‘ಮಾರ್ಗರೇಟಿ’ಗೆ ಕಾಗದವನ್ನು ಬರೆಯುತ್ತಿರುತ್ತಾನೆ. ಇದರಿಂದ ಮಾನಸಿಕವಾಗಿ ಆಕೆ ಯಾವಾಗಲೂ ಅವನೊಂದಿಗೆ ಇರುತ್ತಿದ್ದಳು. ಇಂತಹ ಗೆಳತಿ ತನಗೆ ದ್ರೋಹ ಮಾಡಿದಳೆಂದು ತಿಳಿದು ಸಹ ಅವಳನ್ನು ಮತ್ತೆ ತಾನು ಜೀವನದಲ್ಲಿ ಪಡೆಯುತ್ತೇನೆಂಬ ಜಗನ್ನಾಥನ ಆಶಯ ಮತ್ತು ನಿರೀಕ್ಷೆಗಳನ್ನು ಇಲ್ಲಿ ಪ್ರೀತಿಯೇ ಆಗಿರಬಹುದೆಂದು ತಿಳಿದು ಸಮಾಧಾನಗೊಳ್ಳುತ್ತೇನೆ.

ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಸಾಮಾಜಿಕ ಕಾದಂಬರಿ. ಸಮಾಜದಲ್ಲಿನ ಮೌಡ್ಯತೆ, ಅಸಮಾನತೆ, ದಬ್ಬಾಳಿಕೆ, ಕುತಂತ್ರ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದೆ.

ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವಂತಹ, ಕಿತ್ತು ಹಾಕುವಂತಹ ಯೋಚನೆಗಳನ್ನು ನಮ್ಮಲ್ಲಿಯೂ ಹುಟ್ಟು ಹಾಕುತ್ತದೆ.

ನನ್ನ ದೃಷ್ಟಿಕೋನ, ವಿಶ್ಲೇಷಣೆಯಲ್ಲೇನಾದರೂ ದೋಷವಿದ್ದರೆ, ಎಚ್ಚರಿಸಿ ಸಹಕರಿಸಿರಿ.

-ದಿವ್ಯ ಆಂಜನಪ್ಪ

 

ಕನ್ನಡದ ಬರಹಗಳನ್ನು ಹಂಚಿ ಹರಡಿ

19 thoughts on “ಯು.ಆರ್. ಅನಂತಮೂರ್ತಿಯವರ ಭಾರತೀಪುರ

  1. ಬಾರತಿಪುರ ಕಾದಂಬರಿಯ ಉತ್ತಮ ನಿರೂಪಣೆ ದಿವ್ಯ ಅಂತನಪ್ಪರವರೆ , ಕಾದಂಬರಿಯಲ್ಲಿ ನೈತಿಕತೆಯ ಕೊರತೆ ಕಾಣುವಿರಿ ಎಂದಿರುವಿರಿ ಹೌದು ಬಹುಷಃ ತುಂಬಾ ದೊಡ್ಡ ಲೇಖಕರಾದ ನಂತರ ಹಲವರು  ಕಾದಂಬರಿಯಲ್ಲಿ ಅಂತಹ ಸನ್ನಿವೇಶವನ್ನು ತುರುಕಿದಂತೆ ತರುತ್ತಾರೆ, ಬುದ್ದಿಜೀವಿಗಳ ಆ ಕೆಲಸ ಕಾಮವನ್ನು ಸಂಕೇತದಂತೆ ಬಳಸಿದ್ದಾರೆ ಎನ್ನುವರು.  ಕೆಲವು ಕಾದಂಬರಿಗಳಲ್ಲಿ ಕಾರಂತರು ಅದೆ ಕೆಲಸ ಮಾಡಿರುವರು. ಕತೆಗೆ ಅನಿವಾರ್ಯವಾಗದ ಹೊರತು ಅಂತಹ ಘಟನೆಗಳನ್ನು ನಡುವೆ ತರುವುದು ಕೇವಲ ಓದುಗರನ್ನು ಸೆಳೆಯಲು ಎಂದೆ ನಾನು ಭಾವಿಸುವೆ

    1. ತಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು ಸರ್, 

  2. ಬಹುಶಃ ಮನುಷ್ಯನ ಮನಸ್ಸೊಳಗೂ ಒಂದು ಸಮಾಜ ಪ್ರತಿಫಲಿಸುತ್ತಿರುತ್ತದೇನೋ, ಬದಲಾಗದ ಸಮಾಜ, ಅನೈತಿಕತೆಯ ಮನಸ್ಸು ಪೂರಕವಾ ಅಥವಾ ಓದುಗನ ದೃಷ್ಠಿಕೋನವಾ..?? ನೈತಿಕ ಮುಸುಕಿನ ಮನಸ್ಸುಗಳ ಅನೈತಿಕತೆಯನ್ನ ಹುಡುಕುವುದು ಬರಹಗಾರರ ಬರಹ ತಂತ್ರವೂ ಇರಬಹುದೇನೋ…

    ಚಂದನೆಯ ವಿಮರ್ಶೆ.

  3. ಕಥೆ ಹೇಳುವುದರ ಜೋತೆ ಜೋತೆಯಲ್ಲೇ ವಿಮರ್ಷೆ ಸಾಗಿ ಬಂದಿದ್ದರೆ ಚೆನ್ನಾಗಿತ್ತು . ನಮ್ಮ ವ್ಯವಸ್ಥೆಯಲ್ಲಿನ ಜಾತಿ,ಮೌಡ್ಯಗಳ ವಿರುದ್ದ ಮಾತಾನಾಡುವುದು ಅನಂತಮೂರ್ತಿಯವರ ಎಲ್ಲಾ ಕಥೆಗಳ ಸಾಮಾನ್ಯ ಕಥಾ ಹಂದರದಿಂದ ಕೂಡಿರುತ್ತದೆ . ಪ್ರತಿ ಕಥೆಯಲ್ಲೂ ಬಿನ್ನವಾಗಿರುತ್ತದೆ. ಅವರ ಅವಸ್ಥೆ, ಮತ್ತು ಸಂಸ್ಕಾರ ಕಾದಂಬರಿ ಓದಿದ್ದೇನೆ. ನಿಮ್ಮ ವಿಮರ್ಶೆ ಓದಿ ಭಾರತಿ ಪುರ ಸಹ ಓದುತ್ತೇನೆ. ಗಂಡು ಮತ್ತು ಹೆಣ್ಣಿನ ಸಂಭಂದ ಪ್ರೇಮ, ಮತ್ತು ಕಾಮ ಇವುಗಳ ವಿಷಯದಲ್ಲಿ ಲೇಖಕರು ತಮ್ಮ ಪ್ರತಿ ಕಾದಂಬರಿಯಲ್ಲೂ ಓದುಗರನ್ನು ಚರ್ಚೆಗೆ ದೂಡುತ್ತಾರೆ. ಎಂದಿನಂತ ತಾವು ಶ್ರದ್ದಾಸಕ್ತಿಯಿಂದ ವಿಮರ್ಶೆ ಮಾಡಿದ್ದೀರಿ. ತಮ್ಮಿಂದ ಇನ್ನೂ ಬಹಳ ವಿಮರ್ಶೆಗಳು ಹೊರಬರಲಿ ಎಂದು ಆಶಿಸುತ್ತೇನೆ. ಚೆನ್ನಾಗಿದೆ. ಧನ್ಯವಾದಗಳು

    1. ಧನ್ಯವಾದಗಳು ಸರ್,

      ಮೊದಲ ಬಾರಿ ಒಂದು ಪುಸ್ತಕದ ಕುರಿತು ಬರೆದ ಲೇಖನವಿದು ಸರ್. ನಿಮ್ಮ ಸಲಹೆಯಂತೆ ಮುಂದಿನ ಬಾರಿ ಪ್ರಯತ್ನಿಸುತ್ತೇನೆ ಸರ್. ನಿಮ್ಮ ಮಾರ್ಗದರ್ಶನ ಹೀಗೆಯೇ ಇರಲಿ ಸರ್. 

  4. "ಭಾರತಿಪುರ" ವನ್ನು ಸರಳ ಸುಂದರವಾಗಿ ಬಣ್ಣಿಸಿದ್ದೀರಿ. ಕಾದಂಬರಿಯ ವಿಷಯ ವಸ್ತುವನ್ನು ಅಲ್ಲಲ್ಲಿ ಹೇಳುತ್ತಲೇ ವಿಶ್ಲೇಷಿದ ರೀತಿ, ತುಂಬಾ ಇಷ್ಟವಾಯ್ತು ಮೇಡಮ್… ನಿಮ್ಮ ಬರಹದಲ್ಲಿನ ಅಚ್ಚು- ಕಟ್ಟತೆ ಎಂದಿನಂತಯೇ ಸುಂದರ….ಶುಭವಾಗಲಿ..!!

  5. ವಿಮರ್ಷೆ ಚೆನ್ನಾಗಿ ಬರೆದಿದ್ದೀರಿ. ಪ್ರಾಯಶಹ ಸುಮಾರು ೩೫ ವರ್ಷಗಳ ಹಿಂದೆ ಓದಿದ್ದ ನೆನಪು. ಇಲ್ಲಿ ನಾಯಕ ಸೋಲುತ್ತಾನೆ. ಯಾಕೆಂದರೆ ಆತ ಬಯಸಿದ ಕ್ರಾಂತಿ ಯಶಸ್ಸುಗೊಳ್ಳುವುದಿಲ್ಲ. ಹೊಲೆಯರಲ್ಲಿ ಭಯವಿದೆ, ದೇವಸ್ಥಾನದ ಶುದ್ದಿ ಆಗುತ್ತದೆ. ಆತನ ಗೆಳತಿಯನ್ನು ಹಿಂದೆ ಪಡೆಯ ಬೇಕೆನ್ನುವ ಆಸೆ, ಪ್ರೀತಿಯೂ ಇರಬಹುದು ಯಾ ಅಸೂಯೆಯೂ ಇರಬಹುದು. ಪ್ರೀತಿಯಲ್ಲೂ ನಾಯಕ ಸೋಲುತ್ತಾನೆ. ಕಾದಂಬರಿಯ ಮೊದಲ ಸಾಲು (ನನಗೆ ನೆನಪಿರುವ ಹಾಗೆ), ಜಗನ್ನಾಥ ಹೊಂಡಗಳನ್ನು ಎಂದೂ ಬಳಸಿಕೊಂಡು ಹೋಗುವುದಿಲ್ಲ – ಹಾರಿಕೊಂಡು ಹೋಗುತ್ತಾನೆ. ಇದು ಆತನ ವ್ಯಕ್ತಿತ್ವದ ಪರಿಚಯ.
    ನೀವು ಕೊನೆಯ ಸಾಲಿನಲ್ಲಿ ಹೇಳಿರುವ ಸಂದೇಹದ ಆವಶ್ಯಕತೆ ಇಲ್ಲ -ಚೆನ್ನಾಗಿ ಬರೆಯುತ್ತೀರಿ.

    1. ಧನ್ಯವಾದಗಳು ಸರ್

      ಹಿರಿಯರಾದ ನೀವು ಮೆಚ್ಚಿದ್ದು ನನಗೆ ತುಂಬಾ ಸಂತೋಷ ತಂದಿದೆ ಸರ್.

  6. ಹೌದು. ಭಾರತೀಪುರ ಕಾದಂಬರಿಯನ್ನ ನಾನು ಸಹ ಈ ಹಿಂದೆ ಓದಿದ್ದೆ. ಆದರೆ ತಾವುಗಳು ಅದನ್ನು ಕಣ್ಣಿಗೆ ಕಟ್ಟುವಂತೆ ಮತ್ತೊಮ್ಮೆ ವಿಶ್ಲೇಷಿಸಿದ್ದೀರ. ನಿಮ್ಮ ವಿಮರ್ಶಶೈಲಿ ತುಂಬಾ ಚೆನ್ನಾಗಿದೆ.

  7. ಉತ್ತಮ್, ರಘುನಂದನ್, ಸಂತೋಷ  ಮತ್ತು ಚಿನ್ಮಯ್ ರವರೇ ತಮ್ಮೆಲ್ಲರ ಮೆಚ್ಚುಗೆ, ಅಭಿಪ್ರಾಯ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು.

  8. ವಿಶ್ಲೇಶಣೆ ಚೆನ್ನಾಗಿದೆ. ಆದರೆ ನೀವು ನೈತಿಕತೆಯೆಂದು ಕರೆದ ಗಂಡು-ಹೆಣ್ಣಿನ ಸಂಬಂಧ ಹೆಚ್ಚಿನ ಸಂದರ್ಭಗಳಲ್ಲಿ ಕಾಮವನ್ನೇ ಧ್ವನಿಸುತ್ತದೆ…

  9. ಥ್ಯಾಂಕ್ಯೂ ರುಕ್ಮಿಣಿ, ಭಾರವಿ ಸರ್ 🙂

  10. ನಿಮ್ಮ ಲೇಖನಕ್ಕೆ ಬಹು ತಡವಾದ ಪ್ರತಿಕ್ರಿಯೆ. ನವ್ಯ ಸಾಹಿತ್ಯ ಶೈಲಿಯ ಬರಹವಾದ ಭಾರತೀಪುರ ಕಾದಂಬರಿಯು ಪಾಶ್ಚಾತ್ಯ ಪ್ರಜ್ಞಾಪ್ರವಾಹತಂತ್ರವನ್ನು ಬಳಸಿಕೊಂಡಿದೆ.ಇದು ಅನಂತಮೂರ್ತಿಯವರ ಇಂಗ್ಲೀಷ್ ಓದಿನ ಪ್ರಭಾವ.ಈ ಕಾದಂಬರಿಯನ್ನು ಹೆಗ್ಗೋಡಿನ ನೀನಾಸಂ ಸಂಸ್ಥೆಯಲ್ಲಿ ಒಂದು ಪುನರ್ ವಿವಾಹದ ಚಿತ್ರಪಟ ನೋಡಿದ ಪ್ರೇರಣೆಯಿಂದ ಬರೆದದ್ದು ಎಂಬ ಮಾಹಿತಿ ಡಿ ಆರ್ ನಾಗರಾಜರ ಲೇಖನದಲ್ಲಿ ಓದಿದ ನೆನಪು.ನಿಮ್ಮ ಲೇಖನದಿಂದ ನಾನು ನನ್ನ ನೆನಪುಗಳಿಗೆ ಸಾಗಿ ಬಂದಂತಾಯ್ತು.ಧನ್ಯವಾದಗಳು.

  11. ಇಲ್ಲಿ ಮಾನಸಿಕ ತೊಳಳಾಟಗಳು ಇವೆ ,ಏನು,ಯಾಕೆ,ಎಲ್ಲೀಗೆ,ಯಾವದು,ಎಂಬ ಪ್ರಶ್ನೆಗಳು ಕಾಡುವುದು ನಿಜ

Leave a Reply

Your email address will not be published. Required fields are marked *