ಕಾವ್ಯಧಾರೆ

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಶ್ಮಿ ಹೆಜ್ಜಾಜಿ, ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.


ವಿಳಾಸವಿಲ್ಲದ ಮನುಷ್ಯ

ದಿಕ್ಕಿಲ್ಲದ ಬದುಕ ಸವೆಸಲು
ಎಣಗಾಡುತ ದೇಕಾಡಿ
ಹರಕು ಬಟ್ಟೆ ಮುರಕು ಜೀವ ಹೊತ್ತು
ನೀರು ನೆರಳಿಲ್ಲದ ಜಾಗದಲಿ

ಚಳಿಯಲ್ಲಿ ಗೂಡರಿಸಿ ನ್ಯೂವ್ಸ್ ಪೇಪರ ಹೊದ್ದು 
ಮಲಗಿ, ಜೋಕರಿಸುವ ನೊಂದ ಬೇಸತ್ತ ಜೀವಕು
ತನ್ನ ಜೀವದ ಮೇಲೆ ಎಲ್ಲಿಲ್ಲದ ಆಸೆ

ಅನ್ನ ಹಾಕುವ ಸಿಲವಾರ ತಟ್ಟೆಯಲಿ
ನೊಣ ಮುಕರಿ ಗುಂಯ್ ಗುಟ್ಟುತ್ತಿವೆ
ಅಳಸಲು ಅನ್ನಕೆ ಆ ದೇಕುವ ಜೀವ
ಮನೆ ಮನೆಯ ಗೇಟ ಅಳ್ಳಾಡಿಸುವ ಪರಿ ನೋಡಿ
ಜೀವ ಹಿಂಡುತಿದೆ
ಯಾರೆತ್ತ ಮಗನೋ ಪಾಪ
ಸೊರಗಿ ಬೆಂಡಾಗಿದೆ ಅರೆ ಸತ್ತ ಜೀವ

ಎದುರಿಗೆ ತಾಕಿದ ಮಕ್ಕಳ ನೋಡಿ
ಹಲ್ಲು ಗಿಂಜುತ್ತದೆ ಪ್ರೀತಿಯಿಂದ
ಮಕ್ಕಳೋ ಕಿಟಾರನೆ ಕಿರುಚಿದ್ದಿಲ್ಲ
ಮುಸ,ಮುಸನೆ ನಕ್ಕಿದ್ದೇ ಹೆಚ್ಚು
ಕಲ್ಮಶವಿಲ್ಲದೆ ರುಪಾಯಿ ಕಾಯಿನ್ಗಳ ಕೊಟ್ಟು.

ಮಕ್ಕಳು, ಆ ಅನಾಥನ ನಗುವಿನಲಿ
ಬುದ್ಧನ ನಗುವ ಕಂಡಿದ್ದವೇನೋ!

ಕಾಣುತ್ತಿಲ್ಲ ಅವ ಇತ್ತೀಚಿಗೆ
ಮಕ್ಕಳು ಅಳುವುದನ್ನು ಆರಂಬಿಸಿವೆ
ತೋರಿಸಲು ಅವನಿಲ್ಲ,ಅವನ ಮುಗ್ಧ ನಗುವಿಲ್ಲ !
ಹುಡುಕಿ ಕೊಡಿ ಯಾರಿಗಾದರು ಅವ ಸಿಕ್ಕರೆ.

-ಬಿದಲೋಟಿ ರಂಗನಾಥ್

 

 

 

 


ಕನಸ್ಸುಗಳು ಮಾರಾಟಕ್ಕಿವೆಯೆಂದು
ದಪ್ಪಕ್ಷರಗಳಲ್ಲಿ ಬೋರ್ಡ್-ಹಾಕಿ
ಎದುರಿಗೆ ನಿಂತವನೆದೆಯಲ್ಲಿ
ಆತನೆಲ್ಲ ಕನಸ್ಸುಗಳ ಗೋರಿ ಕಟ್ಟಿ
ಬಿಕ್ಕಳಿಸಿ-ಬಿಕ್ಕಳಿಸಿ ಒಳಗೆ
ಒಳಗೊಳಗೆ ಗೋಗರೆಯುತ್ತಿದ್ದುದು 
ಸಮಾಜಕ್ಕೆ ಕಾಣಿಸಲೇ ಇಲ್ಲಾ

ಆದರೂ ತನ್ನೆಲ್ಲಾ ಸತ್ತು ಹೆಣವಾಗಿರುವ
ನೂರಾರು ಕನಸ್ಸುಗಳ ಬೊಗಸೆಗಳಲ್ಲಿ
ತುಂಬಿ-ತುಂಬಿ ಎಲ್ಲರಿಗೂ ನೀಡಿ
ಮಾರಿ ಜೀವನಗಾಡಿಯ ದೂಡಿ
ನಿಂತಿರುವ ಗಟ್ಟಿ-ಪಿಂಡ ಅವನು

ಜೀವನದ ಪರಿಧಿಯು ಹರಿದು
ಹೋಗಬಾರದ ಎಂದು ಕುಗ್ಗಿ
ಜರ್ಜರಿತಗೊಂಡಿರುವ ಮನದಿ
ಮುದಿಯಾಗಿರುವ ಆಸೆಗಳೊಡನೆ
ಹೆಜ್ಜೆ ಹಾಕುತ್ತಿರುವ 
ಯಂಗ್ ಅಂಡ್ ಎನೆರ್ಜೆಟಿಕ್ ಯುವಕನು

ಇಂದು ಈ ಜನರಿಗೆ 
ಕಲರ್ಫುಲ್ ಕನಸ್ಸುಗಳ ಮಾರುತ್ತ
ಕುರುಡು ಪ್ರೀತಿಗೆ ಕಿವಿಗೊಡುತ್ತಾ
ತನ್ನದೇ ಗೋರಿ ಮೇಲೆ
ಕಾರು-ಬಾರು ನಡೆಸುತ್ತಾ
ಕೂತಿದ್ದಾನೆ ಮಹಾನುಭಾವ !!

-ರಶ್ಮಿ ಹೆಜ್ಜಾಜಿ

 

 

 

 


ಚತುಷ್ಪತ

ಕೈ ಕಾಲು ಮುರಿದು ಶಕ್ತಿ
ಕಳೆದುಕೊಂಡ ದೇಹ
ಮೋಡವಿರದ ಬಾಂದಳ ನೋಡುತಿದೆ
ಅರ್ಥವಾಗದ ಸೆಕೆಯಂತೆ
ಪ್ರ ತಿಭಟಿಸದೆ 
ಬುಡ ಕಳೆದುಕೊಂಡವಳ
ಹಿಡಿಯದ ಹಿಡಿಮಣ್ಣು ಭರವಸೆಯ 
ವಿರುದ್ದ ಚಳುವಳಿ ಹೂಡಿವೆ

ಗರಗಸ ಬುಡ ಕೊರೆಯುವ ಚಣ
ಕನಸು ಕಟ್ಟಿದ್ದಳು ಮರದಾಕೆ
ವಸಂತೋತ್ಸವಕ್ಕೆ 
ಎಲೆ ಉದುರಿಸಿ ಮಿಂದು
ಅಭೃಂಜನ ಗಮಲಲಿ ಕಾದವಳು
ಫಲವತಿಯಾಗಲು.

ಸಿಗಲಿಲ್ಲ ಒಬ್ಬನೆ ಒಬ್ಬ
ಅರಿಯಲು
ಸಸ್ಯಗಳಿಗೂ ಜೀವವಿದೆ
ಸಿದ್ದಾಂತವನ್ನೆ ತುಂಡರಿಸಿದ
ತುಂಡು
ತುಂಡಾಗಿ ದೇಹ
ಬಿಕರಿಯಾಗುತಿದೆ
ಸವಾಲು ನಾಟಿನದು……!?

ಯಾರೋ ನೆಟ್ಟು  ನೀರೆರದರೂ….
ನೋವಿದೆ ಪ್ರತಿ  ಮರಕೂ 
ಜೀವ ಕಳೆದು ಜೋತು ಬಿದ್ದ
ಎಲೆಯ ಜೋಲು ಮೊರೆಗೆ ಕರಗದ
ಜೋಳಿಗೆಗಳು 
ಚತುಷ್ಫತದ ಹಾದಿಯಲಿ 
ಇನ್ನೂ…..
ಕತ್ತರಿಸಿ ತುಂಬುತ್ತಲೆ ಇವೆ.

-ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮೂವರ ಕವನಗಳು: ಬಿದಲೋಟಿ ರಂಗನಾಥ್, ರಶ್ಮಿ ಹೆಜ್ಜಾಜಿ, ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.

  1. ಬೀದಿಯ ಆ ಅನಾಥ ಮಕ್ಕಳ ಮಗುವಿನಲ್ಲಿ ಬದ್ಧನಗುವನ್ನು ಕಾಣುವ ಬಿದಲೋಟಿಯ ಹೃದಯಸ್ಪರ್ಶಿ ಭಾವನೆ, ಮತ್ತೆ ಬುದ್ಧನನ್ನು ಹುಡುಕುವ ಸಂವೇದನೆ ಚೆನ್ನಾಗಿದೆ , ಅಕ್ಷತರ ಬುಡ ಕಳೆದುಕೊಂಡ ಹಿಡಿ ಮಣ್ಣು ಭರವಸೆಯ ಎದಿರು ಚಳವಳಿ ಹೂಡಿರುವುದು ಮತ್ತೆ ಆ ಬುಡದ ಗುಣಿಯಲಿ ಹೊಸ ಚಿಗುರುವ ಮೂಡವ ಆಸೆಯನು ತಾಳಿದೆ.ಇನ್ನು ರಶ್ಮಿ ಯವರ ಕವನ ಚೆನ್ನಾಗಿದೆ ಆದರೆ ಗಟ್ಟಿತನವಿಲ್ಲ.

Leave a Reply

Your email address will not be published. Required fields are marked *