ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು.

ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು ಗೆಲ್ಲಬೇಕೆಂಬ ತುಡಿತಗಳೇ ಮೂಲ ಕಾರಣ. ಇತ್ತೀಚೆಗಂತೂ ವಿದ್ಯಾರ್ಥಿಗಳು ಈ ಹಿಂದಿನಂತೆ ಬರೆದು ಅಭ್ಯಸಿಸುವುದು ಕಡಮೆ. ನೋಟ್ಸುಗಳ ಜೆ಼ರಾಕ್ಸುಗಳ ಗೈಡುಗಳ ಮೊರೆ ಹೋದ ಮೇಲೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳುವುದಾದರೆ ಟ್ಯಾಬುಗಳ ಮೊಬೈಲುಗಳ ಸ್ಕ್ರೀನುಗಳ ಸರ್ಫಿಸಿ ಕಣ್ಣಾಡಿಸುವುದು ಬಂದ ಮೇಲೆ ಬರೆಯುವ ಪ್ರಾಕ್ಟೀಸು ಹೊರಟೇ ಹೋಗುತಿದೆ.

ಆದರೆ ಏಕಚಿತ್ತತೆಯಿಂದ ಪರೀಕ್ಷೆಗಳನ್ನು ಬರೆಯುವ-ನಾವಿನ್ನೂ ಪೂರ್ಣಪ್ರಮಾಣದಲಿ ಆನ್ಲೈೆನಾಗಿಲ್ಲ- ಸಂದರ್ಭದಲಿ ಬರೆಹ ಹೇಗೆ ಸಾಧ್ಯವಾಗುತ್ತದೆ? ಅಭ್ಯಾಸವಿಲ್ಲದೆ ನೇರವಾಗಿ ಪರೀಕ್ಷೆಯಲ್ಲಿ ಬರೆಯುವುದರಿಂದಲೇ ತಪ್ಪುಗಳಾಗುವುದು, ವೇಗ ಸಿದ್ಧಿಸದಿರುವುದು ಮತ್ತು ವಾಕ್ಯಗಳಲ್ಲಿ ತಾಳಮೇಳವಿಲ್ಲದಿರುವುದು. ನಮ್ಮ ವಿದ್ಯಾರ್ಥಿಗಳು ಮೊಬೈಲಾನ್ ಮಾಡಿ ಅದ ನೋಡುತ್ತಾ ಅಸೈನ್ಮೆಂ ಟ್ ಬರೆಯುತಿದ್ದುದನು ಕಣ್ಣಾರೆ ನೋಡಿಯೇ ಈ ಮಾತು ಹೇಳುತಿರುವುದು. ಎಲ್ಲಿಗೆ ಬಂತು? ಬರೆಹದ ದುಃಸ್ಥಿತಿ ಎಂದುಕೊಂಡೆ.

ಹತ್ತು ಸಲ ಓದುವುದಕಿಂತ ಒಂದು ಸಲ ಬರೆಯುವುದು ಪರಿಣಾಮಕಾರಿ ಎಂದು ಹಿಂದೆ ಹೇಳುತಿದ್ದರು. ಇದರ ಅಂತರಾಳ ನಮಗೆ ವೇದ್ಯವಾಗಿತ್ತು. ಜೊತೆಗೆ ಹೆಚ್ಚು ಓದಿಕೊಂಡಾಗ ಬರೆಹ ಸಲೀಸು. ‘ಓದು ಬರೆಹಕೆ ಶತ್ರು’ ಎಂಬ ಮಾತೂ ಇದೆ. ಹಿಂದಿನ ವಿದ್ವಾಂಸರಂತೆ ನಾವೀಗ ‘ಅಷ್ಟೊಂದು’ ಓದುತಿಲ್ಲವಾದುದರಿಂದ ಬರೆಯದೇ ಇರುವುದಕೆ ಇದನು ಕಾರಣ ಮಾಡಿ ನುಣುಚಿಕೊಳ್ಳಬೇಕಿಲ್ಲ! ಈಗಂತೂ ನಾವೆಲ್ಲ ಬರೆಯುವುದು ಕಡಮೆ; ನೇರವಾಗಿ ಕಂಪ್ಯೂಟರಿನಲಿ ಟೈಪಿಸುವುದೇ ಹೆಚ್ಚು. ಪೆನ್ನು ಹಿಡಿಯುವ ಕೈ ಕೀಬೋರ್ಡಿನ ಮೇಲೆ ನಾಟ್ಯವಾಡುತ್ತದೆ ಅಷ್ಟೇ. ಹೆಚ್ಚೇನೂ ವ್ಯತ್ಯಾಸವಿಲ್ಲ. ನನ್ನನೇ ನಾ ಗಮನಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೇಳುವುದಾದರೆ, ಬರೆಯುವಾಗ ಹೆಚ್ಚು ಆಲೋಚಿಸುತ್ತೇನೆ; ಟೈಪಿಸುವಾಗ ಸರಾಗ ಸಿದ್ಧಿಸುತ್ತದೆ. ಬೇಡವೆನಿಸಿದ ವಾಕ್ಯಗಳನ್ನು ಡಿಲೀಟಿಸುವುದು ಸುಲಭ, ಅದಕಿರಬಹುದು. ಮನಸಿನ ಸ್ವಚ್ಛಂದದ ಅಭಿವ್ಯಕ್ತಿಗೆ ಇದು ಹೇಳಿ ಮಾಡಿಸಿದ ವಿಧಾನ. ಜೊತೆಗೆ ಪೆನ್ನಲಿ ಬರೆಯುವುದಕಿಂತ ಟೈಪಿಸುವಾಗ ಹೆಚ್ಚು ಪ್ರಾಮಾಣಿಕವಾಗಿರುತ್ತೇವೆ. ಏನೋ, ಇದನ್ನು ನಿಯಮ ಮಾಡಲಾಗದು. ಅವರವರ ಅನುಕೂಲ ಎಂದು ಸುಮ್ಮನಾಗಬೇಕು. ಆದರೆ ಬರೆಯುವುದು ಎಷ್ಟು ಮುಖ್ಯವೋ, ಬರೆಯುವಾಗಿನ ಮನಸ್ಥಿತಿ ಮತ್ತು ಪರಿಸ್ಥಿತಿ ಅಷ್ಟೇ ಮುಖ್ಯ. ಪದೇ ಪದೇ ಮೊಬೈಲು ನೋಡದೆ, ಕುಟುಂಬದ ಸದಸ್ಯರೊಂದಿಗೆ ಮಾತಾಡದೆ, ಏಕಾಂತವನ್ನು ನಿರ್ಮಿಸಿಕೊಳ್ಳುವುದು ಅಷ್ಟೇ ಪ್ರಮುಖ. ಮನಸನ್ನು ಹದಗೊಳಿಸಿಕೊಳ್ಳುವುದು ಇನ್ನೂ ಪ್ರಮುಖ. ಬೆಳೆಯುವ ಮುನ್ನ ಭೂಮಿಯನು ಹದ ಮಾಡುವ ತೆರದಿ ಈ ಕಾಯಕ.

ಅಂದರೆ ಬರೆಯುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭದ್ದಲ್ಲ. ಬರೆಯುತ್ತ ಹೋಗಬೇಕು ಅಷ್ಟೇ ಎಂಬ ದಾಢಸಿ ಉತ್ತರ ಸಿಕ್ಕೀತು. ಬರೆಹ ಒಂದು ತಪಸ್ಸು. ಕುವೆಂಪು, ಕಾರಂತ, ಭೈರಪ್ಪ ಎಲ್ಲರೂ ಇಂಥ ತಪಸ್ವಿಗಳು. ಸಾವಿರಾರು ಪುಟಗಳನ್ನು ಅದೂ ಶುದ್ಧ ಸೃಜನಶೀಲವನ್ನು ಬರೆಯುವುದೆಂದರೆ ಹುಡುಗಾಟಿಕೆಯಲ್ಲ. ಏನೋ ಒಂದನ್ನು ಗೀಚುವುದು ಬರೆಹವಲ್ಲ. ಮನಸಿನಲಿ ಬಂದಿದ್ದನೆಲ್ಲ ಸ್ಖಲಿಸುವುದು ಸಾಹಿತ್ಯವಲ್ಲ! ಬರೆಯುವವರು ಯಾರಿಗೆ? ಏನನ್ನು? ಎಷ್ಟು? ಯಾವ ರೂಪದಲ್ಲಿ? ಬರೆಯಬೇಕೆಂದು ತೀರ್ಮಾನಿಸಿಯೇ ಕುಳಿತುಕೊಳ್ಳುತಾರೆ. ಅವರ ಕಣ್ಣ ಮುಂದೆ ಅಸ್ಪಷ್ಟವಾದ ಒಂದು ಓದುಗ ವರ್ಗ ಹಾದು ಹೋಗುತ್ತದೆ. ಏನನು ಯಾವ ರೂಪದಲಿ ಬರೆಯಬೇಕೆಂಬುದು ನಿರ್ಧಾರವಾದ ಮೇಲೆಯೇ ಕೆಲವರ ಬರೆಹಗಳು ರೂಪ ತಾಳುತ್ತವೆ.

ಹಾಗಾಗಿ ಗದ್ಯಕಿಂತ ಪದ್ಯ ಕಷ್ಟವಾಗಿತ್ತು ಹಿಂದೆ. ಛಂದಸ್ಸು, ಲಯ, ಗೇಯತೆ, ವ್ಯಾಕರಣಾಂಶಗಳ ನಿಯಮಾನುಸಾರ ಬರೆಯಬೇಕಿತ್ತು. ತಾಳೆಗರಿಯಲ್ಲಿ ಅಕ್ಷರಶಃ ಕೊರೆಯಬೇಕಿತ್ತು. ಬರೆಯುವ ಮುಂಚೆ ಹಲಗೆ-ಬಳಪವ ಬಳಸಬೇಕಿತ್ತು. ಅಲ್ಲಿ ಛಂದಸ್ಸನು ಸರಿ ಮಾಡಿಕೊಂಡು ತದ ನಂತರ ನಕಲಿಸಬೇಕಿತ್ತು. ಕುಮಾರವ್ಯಾಸನಂಥವನು ಹಲಗೆ ಬಳಪವ ಹಿಡಿಯಲೇ ಇಲ್ಲವಂತೆ, ಅದೇ ಆತನ ಅಗ್ಗಳಿಕೆ! (ಹೆಗ್ಗಳಿಕೆಯೂ ಹೌದು) ಅಂದರೆ ನೇರ ತಾಳೆಗರಿಯಲಿ ಆತ ಕೊರೆದದ್ದಂತೆ! ಆತನೇ ಹೇಳಿಕೊಳ್ಳುತ್ತಾನೆ. ನೋಡಿದವರು ಯಾರೂ ಇಲ್ಲ!

ಮುಕ್ತ ಛಂದಸ್ಸು ಪರಿಚಯವಾದ ಮೇಲೆ ಪದ್ಯ ಬರೆಯುವುದು ಸುಲಭವಾಯಿತು; ಗದ್ಯವೇ ಕಷ್ಟವಾಯಿತು! ಹಾಗಾಗಿಯೇ ಅಷ್ಟೊಂದು ಕವನ ಸಂಕಲನಗಳು ಹೆತ್ತುಕೊಂಡಿವೆ. ಕತೆ-ಕಾದಂಬರಿ ಬರೆಯುವುದು ಕಷ್ಟ, ಲಲಿತ ಪ್ರಬಂಧಗಳನ್ನು ಬರೆಯುವುದಕಿಂತಲೂ. ಪಾತ್ರ-ಸನ್ನಿವೇಶ ಮತ್ತು ಸಂವಿಧಾನ ಮುಂತಾದ ಪರಿಕರವು ಏಕಸೂತ್ರತೆಯಲ್ಲಿ ಬಂಧಗೊಳ್ಳುವುದೇ ಇದಕ್ಕೆ ಕಾರಣ. ಯಾವತ್ತೂ ಸೃಜನಪ್ರಧಾನ ರಚನೆಗಳು ಮೇಲುಗೈ ಸಾಧಿಸುತ್ತವೆ. ಚಿಂತನಪ್ರಧಾನ ಬರೆಹಗಳು ಅವುಗಳ ನಂತರವಷ್ಟೇ.

ಎಲ್ಲರಲ್ಲೂ ಸೃಜನಶೀಲತೆ ಮತ್ತು ಪ್ರತಿಭೆ ಇರಬಹುದು; ಆದರೆ ಎಲ್ಲರೂ ಸೃಜನಶೀಲ ಸಾಹಿತಿಗಳಾಗಲಾರರು! ಇದೊಂದು ಚೋದ್ಯವೇ ಸರಿ. ಇಷ್ಟಕೂ ಕೇವಲ ಬರೆವಣಿಗೆಯೊಂದೇ ಸೃಷ್ಟಿಶೀಲ ಪ್ರತಿಭೆ ಎಂಬುದನ್ನು ಒಪ್ಪಲಾಗದು. ಲಲಿತಕಲೆಗಳಲ್ಲಿ ಸಾಹಿತ್ಯವೂ ಒಂದು; ಅದೇ ಮುಂದಲ್ಲ! ಇನ್ನುಳಿದ ನಾಲ್ಕು: ಸಂಗೀತಕಲೆ, ನೃತ್ಯಕಲೆ, ಶಿಲ್ಪಕಲೆ ಮತ್ತು ಚಿತ್ರಕಲೆ. ಈ ಐದೂ ತಮ್ಮದೇ ಆದ ನಿರ್ದಿಷ್ಟ ವಿಧಿ-ವಿಧಾನಗಳ ಮೂಲಕ ಸೈದ್ಧಾಂತಿಕ ಪಾತಳಿಯ ನೆರವಿನಲ್ಲಿ ಅಭಿವ್ಯಕ್ತವಾಗುತ್ತವೆ. ಆದರೆ ಸಾಹಿತ್ಯವೊಂದನ್ನು ಬಿಟ್ಟು ಉಳಿದ ನಾಲ್ಕು ಕಲೆಗಳನ್ನು ಆಸ್ವಾದಿಸಲು ಮತ್ತು ಅರ್ಥವಿಸಿಕೊಳ್ಳಲು ನಿರ್ದಿಷ್ಟ ಪ್ರಮಾಣದ ಪಾರಿಭಾಷಿಕತೆ ಮತ್ತು ಪ್ರಾಥಮಿಕ ಪ್ರವೇಶಜ್ಞಾನ ಬೇಕು. ಹಾಗೆ ನೋಡಿದರೆ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಕಾವ್ಯ ಮೀಮಾಂಸೆ ಮತ್ತು ವಿಮರ್ಶಾ ಪರಿಭಾಷೆಗಳ ಮೂಲಕ ಸಾಹಿತ್ಯವನ್ನು ಗಂಭೀರವಾಗಿ ವಿಶ್ಲೇಷಿಸಬೇಕಾದಾಗ ಇದನ್ನು ಮರೆಯುವಂತಿಲ್ಲ. ಆದರೆ ಓದು ಮತ್ತು ಬರೆಹ ಬಲ್ಲವರೆಲ್ಲರೂ ಸಾಹಿತ್ಯವನ್ನು ಅರಿಯಬಲ್ಲರು. ಅವರವರ ಅಭಿರುಚಿ ಮತ್ತು ಗ್ರಹಿಕೆಯ ಮಟ್ಟಕ್ಕನುಗುಣವಾಗಿ ಅರಳಿಸುವ ಸಾಹಿತ್ಯ, ಕೆರಳಿಸುವ ಸಾಹಿತ್ಯ ಮತ್ತು ನರಳಿಸುವ ಸಾಹಿತ್ಯವನ್ನು ಇಷ್ಟಪಡಬಹುದು! ಇತ್ತೀಚೆಗೆ ನಮ್ಮ ದೃಶ್ಯ ಮಾಧ್ಯಮಗಳು ಬೆದರಿಸುವ ಸಾಹಿತ್ಯವನ್ನೂ ಹೊಸೆದು ಶಾಕಿಂಗ್ ನ್ಯೂಸ್ಗುಳನ್ನು ನೀಡುವಲ್ಲಿ ನಿರತವಾಗಿವೆ. ಟಿಆರ್ಪಿ ಹೆಚ್ಚಿಸಿಕೊಳ್ಳುವುದೊಂದೇ ಗುಪ್ತಕಾರ್ಯಯಸೂಚಿ. ಅದು ಹೆಚ್ಚಾದರೆ ಹೆಚ್ಚು ಹೆಚ್ಚು ಜಾಹಿರಾತುಗಳು ಲಭಿಸುತ್ತವೆ. ಜಾಹಿರಾತು ಎಂದರೆ ದುಡ್ಡು, ಲಾಭ ಅಷ್ಟೇ. ಇದನ್ನೇ ಸಮೂಹ ಸನ್ನಿ ಎನ್ನುವುದು. ವೀಕ್ಷಕರಲ್ಲಿ ದಿಗಿಲು ಹುಟ್ಟಿಸುವುದೇ ವಾರ್ತೆಯ ವಿಶೇಷ ಎಂದು ಭಾವಿಸಿ, ತಕ್ಷಣಕ್ಕೆ ಹೊಸೆಯುವ ಮತ್ತು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮಿಸುವ ಆತುರದಲ್ಲಿ ಇಂಥ ಸಂತಾನಗಳು ಸಂಭವಿಸುತ್ತವೆ.

ಹಾಗಾಗಿ, ಬರೆಯುವ ಉದ್ದೇಶ ಮತ್ತು ಆಶಯಗಳು ವಯೋಧರ್ಮ, ಕಾಲಧರ್ಮ ಮತ್ತು ಮನೋಧರ್ಮಗಳನ್ನು ಆಧರಿಸಿ ಬದಲಾಗುತ್ತಿರುತ್ತವೆ. ಪ್ರಾರಂಭದಲ್ಲಿ ಮತಧರ್ಮಗಳನ್ನು ಸಂವಹನಿಸುವುದೇ ಸಾಹಿತ್ಯದ ಗುರಿಯಾಗಿತ್ತು. ಈಗ ಹಾಗಲ್ಲ! ಯುದ್ಧವನ್ನೂ ಶೌರ್ಯ್ವನ್ನೂ ಶ್ಲಾಘಿಸುವುದೇ ಒಂದು ಕಾಲಘಟ್ಟದ ಸಾಹಿತ್ಯದ ಪ್ರಧಾನ ಧ್ಯೇಯ; ಈಗಿನದು ಶಾಂತಿಮಂತ್ರ. ಮಾನವತೆಯನ್ನೂ ಜೀವಕಾರುಣ್ಯವನ್ನೂ ಪ್ರತಿಪಾದಿಸುವುದು ಇಂದಿನ ತುರ್ತು ಮತ್ತು ಕಾಲಧರ್ಮ. ಒಂದಂತೂ ಸತ್ಯ: ಪ್ರಬೋಧ ಬರೆಹಗಳು ಯಾವತ್ತೂ ಕಡಮೆ ಮತ್ತು ಅವು ಬಹು ಕಾಲ ನಿಲ್ಲುವಂಥವು. ಇನ್ನು ಪ್ರಮೋದ (ವಿನೋದ) ಬರೆಹಗಳು ಮನೋರಂಜನೆಯನ್ನೂ ವಿಡಂಬನೆಯನ್ನೂ ತನ್ನೊಡಲಲ್ಲಿ ಹುದುಗಿಸಿಟ್ಟುಕೊಂಡಿರುವಂಥವು. ನಕ್ಕು ನಲಿಯುವ ಮತ್ತು ಅದರಿಂದ ಹೊರಡುವ ಸತ್ಯದ ಪ್ರಖರತೆ ಇಂಥಲ್ಲಿ ಮುಖ್ಯ. ಕೊನೆಯದು ಪ್ರಮಾದ ಬರೆಹಗಳು. ಪ್ರಮಾದಗಳನ್ನು ಉಂಟು ಮಾಡಿದ ಮೇಲೆಯೇ ಇವು ಎಲ್ಲರ ಕಣ್ಣಿಗೆ ಬೀಳುತ್ತವೆ. ಸಮಾಜದ ಶಾಂತಿ ಮತ್ತು ಸಮುದಾಯಗಳ ಸಹಬಾಳ್ವೆಯನ್ನು ಹಾಳು ಮಾಡುವುದೇ ಇವುಗಳ ಪರಮ ಗಂತವ್ಯ. ದೊಡ್ಡವರ ಬಗ್ಗೆ ಕೆಟ್ಟದಾಗಿ ಬರೆದು ಸಣ್ಣವರಾಗುವುದು, ಜಾತಿ, ಧರ್ಮ ಮತ್ತು ವೈಯಕ್ತಿಕ ವಿಚಾರಗಳನ್ನು ಕೆದಕುವುದು ಮೊದಲಾದ ಮುಜುಗರಗಳನ್ನು ಉಂಟು ಮಾಡಿ ಶಾಂತ ಸರೋವರಕ್ಕೆ ಕಲ್ಲನೆಸೆದು ತಮಾಷೆ ನೋಡುವ ಪ್ರವೃತ್ತಿ ಕೆಲವು ಬರೆಹಗಾರರದು. ಇಂಥವನ್ನು ಬರೆಯದಿದ್ದರೂ ಏನೂ ನಷ್ಟವಿಲ್ಲ; ಹಾಗೆ ಓದದಿದ್ದರೂ! ಬಹು ಬೇಗ ಪ್ರಸಿದ್ಧರಾಗಬೇಕೆಂಬ ಮತ್ತು ಎಲ್ಲರೂ ಕೊಂಡು ಓದುವಂತೆ ಪ್ರೇರಿಸಿ, ದುಡ್ಡು ಮಾಡಿಕೊಳ್ಳಬೇಕೆಂಬ ಇರಾದೆ ಇರುವುದು ಇಂಥಲ್ಲಿ ಸ್ಪಷ್ಟ. ದುರಂತವೆಂದರೆ ಇಂಥವನ್ನು ತನಿಖಾ ವರದಿಗಳೆಂದೂ ಸಂಶೋಧನಾ ಕೃತಿಗಳೆಂದೂ ಕರೆದು ಸಾಹಿತ್ಯದ ಸಾರ್ಥಕತೆಗೆ ಮತ್ತು ಪವಿತ್ರತೆಗೆ ಭಂಗ ತರುವುದು. ಹೀಗಾಗಿ ಕೆಲವೊಮ್ಮೆ ಬರೆಯದೇ ಸುಮ್ಮನಿರುವುದು ಸಹ ನಾವು ಸಮಾಜಕ್ಕೆ ಮತ್ತು ದೇಶಕ್ಕೆ ಮಾಡುವ ಬಹು ದೊಡ್ಡ ಉಪಕಾರ. ಇರಲಿ.

ಬುದ್ಧಿ ಭಾವಗಳ ವಿದ್ಯುದಾಲಿಂಗನವೇ ಇಂಥ ಪ್ರತಿಭಾಶಾಲಿಗಳ ಬರೆಹದ ಲಕ್ಷಣ. ಸಾಹಿತ್ಯ ಮೀಮಾಂಸೆಯಲ್ಲಿ ಇದನೆಲ್ಲ ಓದಿ ಅರಿವಾಗಿಸಿಕೊಳ್ಳಲು ಸಾಧ್ಯ. ಹಾಡುತ್ತ ಹಾಡುತ್ತ ರಾಗ ಎಂದಂತೆ ಬರೆಯುತ್ತ ಬರೆಯುತ್ತ ಬರೆಹ, ಅಷ್ಟೇ. ಅನುಭವ ದಟ್ಟವಿದ್ದಷ್ಟೂ ಅಭಿವ್ಯಕ್ತಿ ಗಾಂಭೀರ್ಯ. ಪಡೆದುಕೊಳ್ಳುತ್ತದೆ. ಮೊದ ಮೊದಲಿಗೆ ಸುದ್ದಿಗಳನು ಬರೆಯುತ್ತ ಕೈ ಪಳಗಿದ ಮೇಲೆ ಲೇಖನಗಳನು ಬರೆಯಲು ತೊಡಗುವುದು ಬರೆವಣಿಗೆಯ ಪ್ರಾಥಮಿಕ ಗುಣ. ಪುಟಗಳ ಮತ್ತು ಪದಗಳ ಮಿತಿಯಲಿ ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಬರೆದು ಮುಗಿಸುವುದೊಂದು ಕಲೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಸ್ವಂತ ಅನುಭವದಿಂದಷ್ಟೇ ಕಂಡುಕೊಳ್ಳಬೇಕು. ಇಂಥ ಸವಾಲು ಯಾವತ್ತೂ ಪತ್ರಿಕೋದ್ಯಮದ ಗುಣಲಕ್ಷಣ. ಕಡಮೆ ಪದಗಳಲ್ಲಿ ಹೆಚ್ಚು ಹೇಳುವ ಶೈಲಿಯೇ ಅಲ್ಲಿ ಮಾನ್ಯ. ಉದಾಹರಣೆಗೆ ನಿಯಮಿತವಾಗಿ ಪ್ರಕಟವಾಗುವ ಅಂಕಣಗಳು.

ಬರೆಯವುದು ಹೇಗೆ? ಎಂಬ ಪ್ರಶ್ನೆಯು ಬರೆಯುವುದು ಹೀಗೆಯೇ ಎಂಬಂಥ ಉತ್ತರಕೆ ಮೂಲವಾಗುತ್ತದೆ. ಬರೆಹ ಮಕ್ಕಳ ತರಹ- ಮುಗ್ಧತೆಯ ನೆಲೆಗಳನ್ನು ಅನ್ವೇಷಿಸುವುದೇ ನೈಜತೆ; ಅಹಮನು ಪೋಷಿಸುವುದು ಬರೆಹವಾಗದು. ಅಹಮಿನ ನೆಲೆಗಳನ್ನು ಶೋಧಿಸುವುದು ನಿಜ ಬರೆಹದ ದಿಕ್ಕು ದೆಸೆ. ಸತ್ಯಕಾಮರಂಥ ಸಂತಸಾಹಿತಿ ಹೇಳುತಿದ್ದರು ಕೊನೆಗೆ: ‘ಬರೆಯುವುದೇ ಅಹಂಕಾರ ಎಂದು!’ ನಿಜ, ಹಲವು ಸಾಹಿತಿಗಳನ್ನು ಕಂಡಾಗ ಮತ್ತು ಅವರು ಬರೆದದ್ದನ್ನು ಓದಿದಾಗ ಇವರು ಅಹಂನ ನೆಲೆಗಳನ್ನು ಶೋಧಿಸುವ ಬದಲು ಪೋಷಿಸಿದ್ದಾರೆಂದು ಮನವರಿಕೆಯಾಗುವುದು. ಯಾರೇ ಆಗಲಿ, ಬರೆಯುವವರು ಬೀಗಬಾರದು, ಬೀಗಿದರೆ ಸಾಹಿತ್ಯದ ಆಂತರ್ಯಜ ಅರ್ಥವಾಗುವುದಿಲ್ಲ. ಸಾಹಿತಿಗಳು ಸರ್ವಜ್ಞರಲ್ಲ ಮತ್ತು ಸಾಹಿತ್ಯವೇ ಅಂತಿಮವಲ್ಲ! ಜೊತೆಗೆ ಬರೆದದ್ದನ್ನು ಮರೆತು ಬಿಡಬೇಕು, ಇಲ್ಲದಿದ್ದರೆ ಹೊಸತು ಹುಟ್ಟುವುದಿಲ್ಲ.

ನನ್ನ ಪ್ರಕಾರ ಬರೆಹಗಾರರನ್ನು ಬಹು ವಿಶೇಷವಾಗಿ ನೋಡುವ ಮತ್ತು ಸಮ್ಮಾನಿಸುವ ಅಗತ್ಯವೇ ಇಲ್ಲ! ಅದೊಂದು ವೃತ್ತಿ ಮತ್ತು ಪ್ರವೃತ್ತಿ ಅಷ್ಟೇ. ಸಮಾಜ, ಮೀಡಿಯಾ ಮತ್ತು ಸಂಘಸಂಸ್ಥೆಗಳು ಬರೆಹಗಾರರನ್ನು ಹೊಗಳಿ ಅಟ್ಟಕ್ಕೇರಿಸುತ್ತವೆ ಅಥವಾ ತೆಗಳಿ ಪಾತಾಳಕ್ಕೆ ತಳ್ಳುತ್ತವೆ. ಈ ಎರಡೂ ಮನಸ್ಥಿತಿ ಸಲ್ಲದು. ಅವರಿಗೆ ಗೊತ್ತಿದ್ದನ್ನು ಮತ್ತು ಗೊತ್ತಿರುವಷ್ಟು ಬರೆಯುತ್ತಾರೆ. ಅದು ಕಾಲದ ಪರೀಕ್ಷೆಯಲ್ಲಿ ಗೆದ್ದರೆ ಪುಟವಿಟ್ಟ ಚಿನ್ನವಾಗಿ ಸಮಾಜಕ್ಕೆ ದಾರಿದೀಪವಾಗುತ್ತದೆ. ಇಲ್ಲದಿದ್ದರೆ ‘ಏನನೋ ಕಾರಿಕೊಂಡಿದ್ದಾರೆ’ಎಂದಾಗಿ ಹೊಸ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಅಷ್ಟೇ. ‘ಅಜೆಂಡಾ’ಗಳನ್ನೂ ತಾವು ಒಪ್ಪಿದ ಮತ್ತು ಅಪ್ಪಿದ ಸಿದ್ಧಾಂತಗಳನ್ನೂ ಪ್ರತಿಪಾದಿಸಲು ಸಾಹಿತ್ಯವನ್ನು ಆಶ್ರಯಿಸಿ, ಮುಗ್ಧ ಓದುಗರನ್ನು ದಿಕ್ಕು ತಪ್ಪಿಸುವ ಸಾಹಿತಿಗಳು ಎಲ್ಲ ಕಾಲದಲ್ಲೂ ಇದ್ದರು ಮತ್ತು ಈಗಲೂ ಇದ್ದಾರೆ. ಆದರೆ ಓದುಗರು ಪ್ರಜ್ಞಾವಂತರಾಗಿದ್ದರೆ ಹಾಗೂ ‘ಸರಿಯಾಗಿ’ಓದಿಕೊಂಡರೆ ಅವರವರ ಬೇಳೆಕಾಳು ಬಯಲಾಗುತ್ತದೆ.

ಇನ್ನು ಪ್ರಶಸ್ತಿ-ಬಹುಮಾನ-ಪುರಸ್ಕಾರಗಳು ಇರುವುದು ಬೆನ್ನು ತಟ್ಟಲು, ಬೆಂಬಲಿಸಲು ಮತ್ತು ಗೌರವಿಸಲು! ಆದರೆ ಈಗ ಆಗಿರುವುದು ಏನು? ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪ್ರಶಸ್ತಿ ʼಗಳಿಸಿದವರನ್ನುʼ ಗುಮಾನಿ, ಸಂದೇಹಗಳಿಂದ ನೋಡುವಂತಾಗಿದೆ. ಪ್ರಶಸ್ತಿಗಳಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ; ದೊಡ್ಡವರಿಗೆ ಪ್ರಶಸ್ತಿ ಬಂದರೆ ಅದು ಪ್ರಶಸ್ತಿಯ ಸಾರ್ಥಕತೆ. ಇದೊಂದು ಗೌರವ. ಪಂಪನಿಗೆ ಅರಿಕೇಸರಿಯು ಧರ್ಮಪುರವೆಂಬ ಅಗ್ರಹಾರವನ್ನೇ ಬರೆದುಕೊಟ್ಟಂತೆ; ಕಾಳಿದಾಸನಿಗೆ ತುಂಬಿದ ಒಡ್ಡೋಲಗದಲ್ಲಿ ತುಲಾಭಾರ ಮಾಡಿದಂತೆ!

ಅಡ್ಡದಾರಿ ಹಿಡಿದು ‘ರಾಜಕೀಯ’ಮಾಡಿ, ಘನತೆ ಇಲ್ಲದೆ, ಆತ್ಮಗೌರವ ಕಳೆದುಕೊಂಡು, ಲಾಬಿ ನಡೆಸಿ, ಪರ್ಸಂಟೇಜ್ ಮಾತಾಡಿ ಅನರ್ಹರೂ ಅ-ಸಾಹಿತಿಗಳೂ ಪುರಸ್ಕಾರಗಳನ್ನು ದೋಚಿಕೊಂಡರೆ ಅದು ಒಂದು ದೇಶಭಾಷೆಯ ಸಂಸ್ಕೃತಿಯ ವಿಕಾರ. ಎಲ್ಲವನ್ನೂ ವಾಣಿಜ್ಯ-ವ್ಯವಹಾರವನ್ನಾಗಿ ನೋಡುವಂತೆ ಸಾಕ್ಷಾತ್ ಸರಸ್ವತಿಯ ಕ್ಷೇತ್ರದಲ್ಲೂ ತೋಳ್ಬಲ, ಜಾತಿಬಲ ಮತ್ತು ಹಣಬಲಗಳನ್ನು ಬಳಸಿದರೆಂದರೆ ಅದು ಬರೀ ವಿಕಾರವಲ್ಲ; ಸಂಸ್ಕೃತಿಯ ದಿವಾಳಿತನದ ಸಂಕೇತ. ಇಂಥ ಅಯೋಗ್ಯ ಅನರ್ಹ ಅಲ್ಪರು ಸಾಹಿತ್ಯವನ್ನು ಮಾಧ್ಯಮವನ್ನಾಗಿ ಅಲ್ಲ; ಉದ್ಯಮವನ್ನಾಗಿ ಕಂಡು ಒಟ್ಟಾರೆ ಪಾವಿತ್ರ್ಯವನ್ನು ಕೆಡಿಸಿದವರು.

ಟಾಲ್ಸ್ಟಾ ಯ್, ಟಾಗೋರ್, ಅರವಿಂದ ಘೋಷ್, ಜಲಾಲುದ್ದೀನ್ ರೂಮಿ, ಗಿಬ್ರಾನ್, ಪಂಪ, ಅಲ್ಲಮ, ಬೇಂದ್ರೆ, ಕುವೆಂಪು, ರಮಣ, ಓಶೋ ಮೊದಲಾದವರನ್ನು (ಪಟ್ಟಿಯನ್ನು ನಮ್ಮ ರುಚಿಯಭಿರುಚಿಗೆ ಅನುಗುಣವಾಗಿ ಬೆಳೆಸಬಹುದು) ‘ಸರಿಯಾಗಿ’ಓದಿಕೊಂಡವರು ಹೀಗೆ ಏನೇನೋ ಕಾರಿಕೊಳ್ಳುವುದಿಲ್ಲ. (ಸರಿಯಾಗಿ ಅಂದರೆ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳು ಇಲ್ಲದೆ ಎಂದರ್ಥ) ಬರೆದದ್ದನೆಲ್ಲ, ಪ್ರಕಟಿಸಿದ್ದನೆಲ್ಲ ಸಾಹಿತ್ಯವೆಂದು ಸಡಗರಿಸುವುದಿಲ್ಲ! ಇಷ್ಟಕೂ ಯಾರೂ ಏನೂ ಹೊಸದನ್ನು ಹೇಳಲು ಸಾಧ್ಯವಿಲ್ಲ! ಏಕೆಂದರೆ ಈಗಾಗಲೇ ಎಲ್ಲವನೂ ಹೇಳಲಾಗಿದೆ ಮತ್ತು ಬರೆಯಲಾಗಿದೆ!! ಓದುವುದು ಬಾಕಿಯಿದೆ ಅಷ್ಟೇ. ಹೇಳುತ್ತಿರುವವರು ಹೊಸಬರಿರಬಹುದು; ಹೇಳುತ್ತಿರುವುದು ಹೊಸದಲ್ಲ! ಈ ಅರಿವಿನ ವಿನಯ ನಮಗಿರಬೇಕು ಮತ್ತು ಮುಖ್ಯವಾಗಿ ಬರೆಯುವಾಗ ಇರಬೇಕು. ಆಗ ಬರೆಹ ಮೆದುವಾಗುತ್ತದೆ; ಜಗದ ಕಾರುಣ್ಯದ ಕಣ್ಣಾಗುತ್ತದೆ. ಅರಿಯಲು ಬರೆಯಬೇಕು ಮತ್ತು ಬರೆದ ಮೇಲೆ ಮರೆತು ಜೀವಿಸಬೇಕು. ಆಗಲೇ ಬದುಕು ದಿವ್ಯ; ಇಲ್ಲದಿದ್ದರೆ ಅದೇ ಒಂದು ಅಪಸವ್ಯ!
– ಡಾ. ಹೆಚ್ ಎನ್ ಮಂಜುರಾಜ್, ಮೈಸೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x