ಪುಣೇಕರರು ಹಾಗೂ ಅವರ ಆಂಗ್ಲ ಶ್ರೀರಾಮಾಯಣ ದರ್ಶನಂ: ಶ್ರೀನಿವಾಸ ದೇಸಾಯಿ


ಶಂಕರ ಮೊಕಾಶಿ ಪುಣೇಕರ ಕನ್ನಡ ಸಾಹಿತ್ಯದ ವಿಶಿಷ್ಟ ವ್ಯಕ್ತಿ. ಎರಡು ಅಡ್ಡಹೆಸರು ಪಡೆದವರು, ಮಾತೃಭಾಷೆ ಕನ್ನಡ ಹಾಗೂ ವಿಶ್ವಭಾಷೆ ಆಂಗ್ಲಭಾಷೆ ಎರಡರಲ್ಲೂ ಪ್ರತಿಭಾನ್ವಿತರು. ದ್ವಿಭಾಷಾ ಸಾಹಿತಿ ಎಂದು ಪ್ರಸಿದ್ಧರು. ಹಾಗೇ ದೇವಭಾಷೆ ಸಂಸ್ಕೃತವೂ ಚೆನ್ನಾಗಿ ಬರುತ್ತಿತ್ತು. ಪುಣೇಕರರ ಬದುಕಿನ ಪಥವಂತೂ ಅವರೇ ಹೇಳಿಕೊಂಡಂತೆ, ಕಾರವಾನ್(Carvan)ತರಹದ್ದಾಗಿದೆ. ಬಾಲ್ಯದಿಂದಲೂ ಜೀವಕ್ಕೆ ಅಂಟಿಗೊಂಡ ಓದಿನ ಗೀಳು ಬದುಕಿನ ಅಂತ್ಯದವರೆಗೆ ಸಾಗಿತ್ತು. ಬಿ.ಎಂ.ಶ್ರೀ., ಪ್ರೊ. ಮೆನಜಿಸ್, ಡಾ. ಗೋಕಾಕರಂತಹ ಶ್ರೇಷ್ಠ ಶಿಕ್ಷಕರ ಅಡಿಯಲ್ಲಿ ಕಾಲೇಜು ಶಿಕ್ಷಣ ನಡೆದು, ಎಂ.ಎ. (ಇಂಗ್ಲಿಷ್) ಹಾಗೂ ಯೇಟ್ಸ್ ಕವಿಯ ಸಾಹಿತ್ಯ ಕುರಿತು ಡಾಕ್ಟರೇಟ್ ಪಡೆದ ಧೀಮಂತರು. ಮುಂದೆ ಕೆಲವೇ ವರುಷಗಳಲ್ಲಿ ಆಂಗ್ಲ ಸಾಹಿತಿ – ಕವಿ ಯೇಟ್ಸನ ಸಾಹಿತ್ಯ ಕುರಿತು ಓರ್ವ ವಿದ್ವಾಂಸರೆಂದು ಪುಣೇಕರರು ಪ್ರಸಿದ್ಧಿ ಪಡೆದರು ವಿಶ್ವದಾದ್ಯಂತ!

ಪುಣೇಕರರು ಜೀವಿಸಿದ ಅವಧಿ 76 ವರುಷ. (8.5.1928 – 11.8.2004). ಬಹುಮುಖ ವ್ಯಕ್ತಿತ್ವ ಅವರದು. ಶಿಕ್ಷಕ, ಪ್ರಾಧ್ಯಾಪಕ, ಕವಿ, ಕಾಂಬರಿಕಾರ, ವಿಮರ್ಷಕ ಅನುವಾದಕ, ಸಂಗೀತ ಶಾಸ್ತ್ರಜ್ಞ, ಸಂಗೀತ ವಿಮರ್ಷಕ ಹಾಗೂ ಲಿಪಿ ಸಂಶೋಧಕ ಹೀಗೆ ಹಲವು ವಿಧದ ಹೆಗ್ಗಳಿಕೆ. ಸಂಸಾರ ಸಮೇತ ತಿರುಗಿದ ಊರುಗಳು: ಬಿಜಾಪುರ, ಕಾರವಾರ, ಬೆಳಗಾವಿ, ಮುಂಬೈ, ಧಾರವಾಡ, ಉಡುಪಿ, ಮೈಸೂರು, ಪುಟ್ಟಪರ್ತಿ ಕೊನೆಗೆ ಧಾರವಾಡ; ಹುಬ್ಬಳ್ಳಿ

ಶಂಕರ ಮೊಕಾಶಿ ಪುಣೇಕರ

ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ 11 ಹಾಗೆಯೇ ಆಂಗ್ಲಭಾಷೆಯಲ್ಲಿ 19 ಕೃತಿಗಳು, ಪುಣೇಕರ ಪ್ರತಿಭೆಯಿಂದ ಹೊರಹೊಮ್ಮಿದ ಅಪೂರ್ವ ಕೃತಿಗಳು. ಗಂಗವ್ವ – ಗಂಗಾಮಾಯಿ, ಅವಧೇಶ್ವರಿ (ಕಾದಂಬರಿ), ಮಾಯಿಯ ಮೂರುಮುಖಗಳು (ಕಾವ್ಯ) ಹಾಗೂ ನಟನಾರಾಯಣ (ನಾಟಕ) ಇವು ಸಾರ್ವಕಾಲಿಕ ಕನ್ನಡದ ಕೃತಿಗಳು.
ಆಂಗ್ಲಭಾಷೆಯಲ್ಲಿಯ ಹೆಚ್ಚಿನ ಕೃತಿ ರಚನೆ, ಪುಣೇಕರರಿಗೆ ಶ್ರೇಷ್ಠ ಆಂಗ್ಲ ಸಾಹಿತಿಯೆಂಬ ಪ್ರಸಿದ್ಧಿ ತಂದಿದೆ. The Captive (Poetry), Cycle of Seasons (ಕವಿ ಕಾಳಿದಾಸನ ಋತುಸಂಹಾರದ ಅನುವಾದಿತ ಕಾವ್ಯ), Avadoot Geet (ಅನುವಾದ ಕಾವ್ಯ), ಯೇಟ್ಸ್ ಕವಿಯ ಕುರಿತ ಗ್ರಂಥಗಳು, ಡಾ. ಗೋಕಾಕ ಹಾಗೂ ರಾಷ್ಟ್ರಕವಿ ಕುವೆಂಪುರವರ Monograph (ವ್ಯಕ್ತಿಚಿತ್ರಣ) ಕೆಲವು ಪ್ರಮುಖ ಕೃತಿಗಳು. ಕನ್ನಡದ ಕಳೆದ ಶತಮಾನದ ಮಹಾಕಾವ್ಯ, ಕುವೆಂಪುರವರ ಶ್ರೀರಾಮಾಯಣ ದರ್ಶನಂ ಆಂಗ್ಲ ಅನುವಾದವು ಪುಣೇಕರರ ಆಂಗ್ಲ ಸಾಹಿತ್ಯ ಕೃಷಿಯ ಮಹಾಕಿರೀಟ.

ಪುಣೇಕರರು ತಮ್ಮ ಪಾಂಡಿತ್ಯದೊಡನೆ ಅಪೂರ್ವ ವ್ಯಕ್ತಿತ್ವವನ್ನು ರೂಪಿಸಿಗೊಂಡವರು. ಅವರು ಸರಳಜೀವಿ. ಸ್ನೇಹಪರರು. ಆದರೆ ಪ್ರಚಾರಪ್ರಿಯರಲ್ಲ. ಗುಂಪುಗಾರಿಕೆಯಿಂದ ದೂರವಿದ್ದವರು, ಸ್ವತಂತ್ರ ಮನೋಭಾವ, ವೈಚಾರಿಕತೆ ಭಿಡೆ ಸ್ವಭಾವ ಅವರದಾಗಿತ್ತು.

ಎಲ್ಲರೂ, ಅಚ್ಚುಮೆಚ್ಚಿನಿಂದ ನೋಡಬಯಸುವ ಸುಂದರ ರೂಪದ ಪುಣೇಕರರು ಸಾಧು ಸ್ವಭಾವದ, ಸೃಜನಶೀಲರು, ನಿರಂತರ ಅಧ್ಯಯನಶೀಲರು. ಇವೆಲ್ಲಕ್ಕೂ ಮಿಗಿಲಾಗಿ ಪುಣೇಕರರು ವಿನಯವಂತರು. ಪುಣೇಕರರ ಇಂತಹ ವ್ಯಕ್ತಿತ್ವವನ್ನು ಸನಿಹದಿಂದ ಗಮನಿಸಿದ್ದ ಚಿಂತಕ ಸಾಹಿತಿ ಡಾ. ಮುರಾರಿ ಬಲ್ಲಾಳರು “ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ ಎಂಬ ಮಾತಿಗೆ ನಾನು ಕಂಡ ಅತ್ಯಂತ ಸೂಕ್ತ ಉದಾಹರಣೆ ಶಂಕರ ಮೊಕಾಶಿ ಪುಣೇಕರ. ಅವರು ನಿಜಕ್ಕೂ ಪ್ರಜ್ಞೌವಾನ” ಎಂದಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ (1988), ಕನ್ನಡ ಸಾಹಿತ್ಯ ಅಕಾಡೆಮಿ (1986) ಹಾಗೂ ಚಲನಚಿತ್ರ ಕಥಾ ಪ್ರಶಸ್ತಿ (1996), ಮೈಸೂರು ವಿಶ್ವವಿದ್ಯಾಲಯ ಹಬ್ಬದ ಗೌರವ (1977), ಕುವೆಂಪು ವಿದ್ಯಾವರ್ಧಕ ಪ್ರಶಸ್ತಿ (1978) ಈ ಪ್ರಶಸ್ತಿಗಳು ತಂತಾನೆ ಪುಣೇಕರರನ್ನು ಗೌರವಿಸಿವೆ.
ಶಂಕರ ಮೊಕಾಶಿ ಪುಣೇಕರರ ಮೇಲಿನ ವ್ಯಕ್ತಿಚಿತ್ರಣವು ಅವರು ಕನ್ನಡ ಕಾವ್ಯಸಾಹಿತ್ಯದ ಮಹಾಕಾವ್ಯ, ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆಂಗ್ಲಭಾಷೆಗೆ ಅನುವಾದಿಸುವ ಕೆಳಗಿನ ಸಂಕ್ಷಿಪ್ತ ನಿರೂಪಣೆಗೆ ಪೀಠಿಕೆಯಾಗಿದೆ. ಈ ಅನುವಾದದ ಹಿಂದೆ ಒಂದು ಜ್ವಲಂತವಾದ ರೋಚಕ ಹಾಗೂ ವ್ಯಥೆಯ ನೈಜ ಕಥೆ ಇದೆ.

1980-90ರ ದಶಕದಲ್ಲಿ ಪುಣೇಕರರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 1986ರಲ್ಲಿ ಅವರನ್ನು ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಻ನುವಾದ ಮಾಡಲು ಕೇಳಲಾಗಿತ್ತು. ಅಷ್ಟೇ ಬೇಕಾಗಿತ್ತೇನೊ ಅನ್ನುವಂತೆ, ಕೇವಲ ೆರಡು ವರುಷಕ್ಕೂ ಕಡಮೆ ಅವಧಿಯಲ್ಲಿಯೇ, ಪುಣೇಕರರು 25000 ಸಾಲುಗಳು ಇಉವ ಮಹಾಛಂದಸ್ಸಿನ ಆ ಮಹಾಕಾವ್ಯವನ್ನು ಅನುವಾದಿಸಿದರು.

ಈ ಅನುವಾದ ಕಾರ್ಯವು ಪುಣೇಕರರ 60ನೇ ಪಕ್ವ ವಯಸ್ಸಿನಲ್ಲಿ ಜರುಗಿದೆ. ಆ ಎರಡು ವರುಷದ ಆ ಅನುವಾದದ ತಪಸ್ಸು, ಸತತವಾಗಿ ಹಗಲು ರಾತ್ರಿಯೆನ್ನದೆ ನಡೆಯಿತಂತೆ! ಸ್ವತಃ ನಿಪುಣ ಬೆರಳಚ್ಚುಗಾರರಾಗಿದ್ದ ಪುಣೇಕರರು, ಟೈಪರೇಟರಿನ ಮೇಲೆ ನೇರವಾಗಿ ಅನುವಾದ ಮಾಡುತ್ತಿದ್ದರು. ಇದಲ್ಲದೇ ತಮ್ಮ ಆ ಅನುವಾದವನ್ನು ಸ್ವತಃ ತಾವೇ ಸೈಕಲ್ಲು ತುಳಿದು, 2-3 ಕಿ.ಮೀ. ದೂರದ ಕುವೆಂಪುರವರ ುದಯರವಿಗೆ ಒಯ್ಯುತ್ತಿದ್ದರು. ಕುವೆಂಪುರವರಿಗೆ ಅನುವಾದ ಓದಿ ತೋರಿಸಿ, ಸಲಹೆ ಪಡೆದುದು ಅಲ್ಲದೇ ಶಹಬ್ಭಾಸ್ ಪಡೆದದ್ದೇ ಪಡೆದದ್ದು.

ಈ ಮೊದಲೇ ಕುವೆಂಪು, ಪುಣೇಕರರ ಆಂಗ್ಲಭಾಷಾ ಪ್ರೌಢಿಮೆಯನ್ನು ಬಹಳ ಮೆಚ್ಚಿಕೊಂಡಿದ್ದರು. ಕುವೆಂಪು ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು ಪುನೇಕರರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ, ಆಂಗ್ಲಭಾಷೆಯಲ್ಲಿ, ಕುವೆಂಪುರವರ ವ್ಯಕ್ತಿತ್ವ ಹಾಗೂ ಸಮಗ್ರಸಾಹಿತ್ಯದ ಅವಲೋಕನ ಚಿತ್ರಣ ‘Homing Bird’ 1976ರಲ್ಲಿ ಪುಣೇಕರರು ಬರೆದುಕೊಟ್ಟಿದ್ದರು. 75 ಪುಟಗಳ ಈ ವ್ಯಕ್ತಿಚಿತ್ರಣವನ್ನು “A sort of mirroring macrocosm in a microcosm” ಎಂದು ಶ್ಲಾಘಿಸಿದ್ದಾರೆ ಸಾಹಿತಿ ಸದಾನಂದ ಕನವಳ್ಳಿಯವರು. ಕುವೆಂಪು “Homing Bird” ಅನ್ನು ಮನಸಾರೆ ಮೆಚ್ಚಿದ್ದರು. ಒಂದು ಸೆಮಿನಾರದಲ್ಲಿ ಪುಣೇಕರರು ಕುಳಿತಲ್ಲಿಗೆ ಕುವೆಂಪು ತಾವೇ ಸ್ವತಃ ಬರಿಗಾಲಿನಿಂದ ಬಂದು ಅವರನ್ನು ಅದಕ್ಕಾಗಿ ಪ್ರಶಂಸಿಸಿ, ಧನ್ಯವಾದ ಹೇಳಿದರು.

“ಶ್ರೀರಾಮಾಯಣ ದರ್ಶನಂ” ಆಂಗ್ಲ ಅನುವಾದವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ 1988ರಲ್ಲಿ ನೀಡಿದರು. ನಂತರ ಪುಣೇಕರರು ಮೈಸೂರಿನಿಂದ ತೆರಳಿದರು. ಆದರೆ ಈ ಆಂಗ್ಲ ಅನುವಾದ ಪ್ರಕಟವಾಗಿದ್ದು 2004ರಲ್ಲಿ. ಕನ್ನಡ ಸಾಹಿತ್ಯದ ಮೇರುಕಾವ್ಯದ ಆಂಗ್ಲ ಅನುವಾದಕ್ಕೆ 16 ವರುಷಗಳ ವನವಾಸ! ಶ್ರೀ ಜಿ.ಎಸ್. ಶಿವರುದ್ರಪ್ಪ, ಶ್ರೀ ಪ್ರಭುಶಂಕರ ಹಾಗೂ ಶ್ರೀ ಪೂರ್ಣಚಂದ್ರ ತೇಜಸ್ವಿ ಇವರುಗಳ ಪ್ರಯತ್ನದ ಫಲ, “ಶ್ರೀರಾಮಾಯಣ ದರ್ಶನಂ” ಆಂಗ್ಲ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ. ಈ ಮಹನೀಯರರ ಜೊತೆ ಪಾಟೀಲ ಪುಟ್ಟಪ್ಪನವರ ಕನ್ನಡದ ಗುಡುಗಿನ ಧ್ವನಿಯೂ ಸೇರಿತ್ತು.

ತಮ್ಮ ಆಂಗ್ಲ ಅನುವಾದವು 15-16 ವರುಷಗಳಾದರೂ ಪ್ರಕಟವಾಗದಿರುವುದಕ್ಕೆ ಪುಣೆಕರರು ತುಂಬ ನಿರಾಶೆ ಹಾಗೂ ಹತಾಶೆ ಅನುಭವಿಸಿದ್ದರು. 1990ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಎದುರು ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು. ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಬಳಲುತಿದ್ದ ಪುಣೇಕರರು, 2004ರಲ್ಲಿ ಪ್ರಕಟವಾದ ತಮ್ಮ ಆಂಗ್ಲ ಅನುವಾದದ ಶ್ರೀರಾಮಾಯಣ ದರ್ಶನಂ ಅನ್ನು ಕಂಡು ಬಹು ಸಂತೋಷಿಸಿದ್ದರು. ತಮ್ಮ ಆಂಗ್ಲ ಸಾಹಿತ್ಯ ಸಾಧನೆಯ ಮಹಾಫಲವನ್ನು ಕಣ್ಣಾರೆ ಕಂಡು, ಮುಂದೆ ಕೆಲವೇ ತಿಂಗಳಲ್ಲಿ ವಿಧಿವಶರಾದರು.

ಶ್ರೀರಾಮಾಯಣ ದರ್ಶನಂ ಆಂಗ್ಲ ಪುಸ್ತಕದಲ್ಲಿ, ಕನ್ನಡದ ಖ್ಯಾತ ಸಾಹಿತಿ ಶ್ರೀ ಜಿ.ಎಸ್. ಆಮೂರರವರ 10 ಪುಟಗಳ ಪೀಠಿಕೆ ಇದೆ. ಇದರಲ್ಲಿ ಪುಣೇಕರರ ಅನುವಾದ ಕುರಿತು ಒಂದು ಸಾಲೂ ಬರೆದಿಲ್ಲ! ಈ ಲೇಖನವನ್ನು ಬಹು ಹಿಂದೆ ಬರೆಯಲಾಗಿತ್ತೆಂದು ಶ್ರೀ ಅಮೂರ ತಿಳಿಸಿದ್ದಾರೆ. ಅನುವಾದಕ ಪುಣೇಕರರು, ತಮ್ಮ ಅನುವಾದ ಕುರಿತು ಬರೆದ ಯಾವ ಮಾಹಿತಿಯೂ ಇಲ್ಲ. ಇದಲ್ಲದೆ ಪುಣೇಕರರ ಪರಿಚಯ ಕೇವಲ ಎರಡು ಸಾಲಿನಲ್ಲಿ, ಅದೂ ಹಿಂಬದಿಗೆ, ಪುಸ್ತಕದ ಕವರ್ ಮೇಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಈ ಎಲ್ಲ ವಿಷಯ ಕುರಿತು, ಈ ಬಗೆಯ ನಿರ್ಲಕ್ಷ್ಯ ತೋರದೆ ಹೆಚ್ಚಿನ ವಿಶಾಲತೆ ತೋರಿಸುವ ಅವಶ್ಯಕತೆ ಇದೆ.
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕೆಲವು ಸಾಲುಗಳನ್ನು ಪುಣೇಕರರ ಆಂಗ್ಲ ಅನುವಾದದ ಸಾಲುಗಳ ಜತೆ, ಅರ್ಥಸಹಿತ ಕೆಳಗೆ ಉಲ್ಲೇಖಿಸಿದೆ. ಇದರ ಉದ್ದೇಶ ಅನುವಾದದ ಶ್ರೇಷ್ಠತೆಯ ಸೊಬಗಿನ ನೋಟ ನೀಡುವುದಾಗಿದೆ.

1.      ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆರಂಭದ ಐದು ಸಾಲುಗಳಿವು:

ಶ್ರೀ ರಾಮ ಕಥೆಯಂ ಮಹರ್ಷಿ ನಾರದ ವೀಣೆಯಿಂ
ಕೇಳ್ದು, ಕಣ್ದಾವರೆಯೊಳಶ್ರುರಸಮುಗುವನ್ನೆಗಂ
ರೋಮಹರ್ಷಂದಾಳ್ದು ಸಹೃದಯಂ ವಾಲ್ಮೀಕಿ ತಾಂ
ನಡೆತಂದನಾತ್ಮಸುಖಿ, ಕೇಳ್, ತಮಸಾ ನದೀ ತಟಿಗೆ,
ತೇಜಸ್ವಿ, ತರುಣಂ ತಪೋವಲ್ಕಲ ವಸ್ತ್ರ ಶೋಭಿ.

(ಅರ್ಥ: ಶ್ರೀರಾಮ ಕಥೆಯನ್ನು ಮಹರ್ಷಿ ನಾರದನ ವೀಣೆಯಿಂದ ಕೇಳಿ, ತಪಸ್ವಿಯೂ, ಸಹೃದಯನೂ, ತೇಜಸ್ವಿಯೂ ಆದ ತರುಣ ವಾಲ್ಮೀಕಿಯು ತನ್ನ ಕಮಲದಂತಹ ಕಣ್ಣುಗಳಲ್ಲಿ ಆನಂದಭಾಷ್ಪಗಳು ಉದುರುವಷ್ಟು ರೋಮಾಂಚನಗೊಂಡನು. ನಾರುಡೆಯನ್ನು ಧರಿಸಿದ್ದ ಅವನು ಆತ್ಮಾನಂದದಿಂದ ಸುಖಿಸುತ್ತಾ ತಮಸಾ ನದಿ ತೀರಕ್ಕೆ ನಡೆದು ಹೊರಟನು)

Sri Rama’s Tale recited in the dulcet voice
By Sage Narada, moved poet Valmiki’s heart
To soulful tears fill his lotus eyes overflowed;
And hair stood on end from the roots. In profound
Self-fulfilment, Valmiki, young, radiant, clad
In ascetic bark, jogged to the banks of Tamasa
To bathe.

2.     ಶಬರಿಯ ಪಾತ್ರವನ್ನು ಕುವೆಂಪು ಈ ಮಹಾಕಾವ್ಯದಲ್ಲಿ ಬಹು ಎತ್ತರದಲ್ಲಿ ಇರಿಸಿದ್ದಾರೆ. ಶಬರಿ ದಿನಾಲು ಭಗವಂತನ ರೂಪದ ರಾಮನು ಸೀತೆ ಹಾಗೂ ಲಕ್ಷ್ಮಣರೊಂದಿಗೆ ಬರುವುದನ್ನು ಕಾಯುತ್ತಿದ್ದಳು. ಸೀತೆ ರಾವಣನಿಂದ ಅಪಹರಣವಾದಳು. ಕಳಾಹೀರಾದ ರಾಮ-ಲಕ್ಷ್ಮಣರು ದಾಗ ಬೇಡರಂತೆ ಶಬರಿಗೆ ಕಾಣುತ್ತಾರೆ. ಕುವೆಂಪು ಕವಿಹೃದಯದ ಕವಿವಾಣಿ ಇದು.

ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ,
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳ್ ಅಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ಧಿಯೋಲ್!

Does god approach his devotee
With the accoutrements and consume the devotee expects?
When devotee expects joyous end, God comes like, agony,
Plunders devotee’s all, rejects his offerings, plunger his ego
Into the loath of divine nothingness, thus conferring
Perfect achievement!

3.     ವೀರ ಹನುಮಂತ ಲಂಕೆಗೆ ಹಾರಿ, ಸೀತೆಯನ್ನು ಅಶೋಕವನದಲ್ಲಿ ಕಂಡು ಮರಳಿ ಬಂದು, ರಾಮನಿಗೆ ಹೇಳುವ ಮಾತುಗಳು ಹಾಗೂ ಸೀತೆಯ ಚೂಡಾಮಣಿ ನೀಡುವ ದೃಶ್ಯದ ಶಬ್ದಗಳಿವು.

ಮೊಳಗಿದುದು ವೇದಘೋಷ ಸಮಾನವಾಣಿ ಆ

ಯೋಗಿಯುರದಿಂದಿಂತು: “ನಿಯತೆ! ಅಕ್ಷತೆ! ದೇವಿ

ಸುವ್ರತೆ! ಅಶೋಕವನಗತೆ! ಶೋಕಸಂಮ್ಲಾನೆ!

ತವ ವಿರಹ ದೀನೆ! ಹೇ ದಾಶರಥಿ, ಧನ್ಯನಾಂ

ಕಂಡು ಪುಣ್ಯಶ್ಲೋಕೆಯಂ!” ಎನುತೆ ಹೃದಯದ ಖನಿಗೆ

ಕೈಯಿಕ್ಕಿ, ವಕ್ಷದ ವಜ್ರರಕ್ಷೆಯೊಳಿರ್ದುದನ್

ಚೂಡಾಮಣಿಯನಂಜುಳಿಗೆ ತೆಗೆದು, ನೋಳ್ಪರ್ಗೆ

ಕಣ್‍ಮಣಿಯೆ, ನೀಡಿದನವಿನ್ನಾಣಮಂ ಪ್ರೀತಿ

ಗೌರವಸ್ಫೀತನೇತ್ರಂಗೆ, ಸೀತಾ ಶ್ವಾಸ

ಸೂತ್ರಂಗೆ.


Like Veda chant, the Yogi descanted

From heart his gland timings thus: Disciplined! Unharmed!

True to her vow is Devi! She is in Ashokavana!

Grief-Stricken! Saddened by your severance! Dasharathi repute

Then he took out from his hearts jewel box the crest jewel

In his palms as its light dazzled as lookers eyes

And handed it over without much ceremony to Rama,

Who watched him with wide, loving and respectful eyes!

ಮಹಾಕವಿ ಕುವೆಂಪುರವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಅನ್ನು ದ್ವಿಭಾಷಾ ಸಾಹಿತಿಯೆಂದು ಖ್ಯಾತರಾದ ಶಂಕರಮೊಕಾಶಿ ಪುಣೇಕರರು ವಿಶ್ವಭಾಷೆ ಆಂಗ್ಲಭಾಷೆಗೆ ಅನುವಾದಿಸಿ, ಕನ್ನಡ ಭಾಷೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಸರ್ ಹರ್ಬರ್ಟ್ ರೀಡ್ ಎಂಬ ಖ್ಯಾತ ಆಂಗ್ಲ ಲೇಖಕ ಕವಿ ವಿಮರ್ಶಕರು 1965ರಲ್ಲಿಯೇ ಪುಣೇಕರರ ಆಂಗ್ಲ ಭಾಷಾ ಕಾವ್ಯಪ್ರೌಢಿಮೆಯನ್ನು ಬಹುವಾಗಿ ಮೆಚ್ಚಿ ಹೀಗೆ ಬರೆದಿದ್ದಾರೆ: “ಮೊಕಾಶಿಯವರ (ಆಂಗ್ಲ ಕಾವ್ಯಕೃಷಿ) ಈ ಕೆಲಸ, ಇಂಗ್ಲಿಷ್ ಬಳಕೆಯ ವಿಶ್ವದ ಎಲ್ಲ ನಾಡುಗಳಲ್ಲಿ ಮುಂದೆ ಒಂದು ದಿನ ಗಮನಕ್ಕೆ ಬಂದೇ ಬರುತ್ತದೆ.”

“ಶ್ರೀರಾಮಾಯಣ ದರ್ಶನಂ”ದ ಆಂಗ್ಲ ಅನುವಾದ ಈ ಭವಿಷ್ಯವಾಣಿಯನ್ನು ನಿಜಗೊಳಿಸಿದೆ. ಏಕೆಂದರೆ ಆಂಗ್ಲ ಭಾಷೆಯ ಈ ಕೃತಿ Sri Ramayana Darshanam ಸ್ವತಃ ಮೂಲರಚನೆಯ ನೈಜತೆ ಪಡೆದಿದೆ.

-ಶ್ರೀನಿವಾಸ ದೇಸಾಯಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Kiran
Kiran
8 years ago

Someone need to investigate why the publication of the translated work didn't happen for such a long time.

I read somewhere, I have forgotten where & when, that there was a lobby from North to prevent the english translation and publication of KuVemPu's works so that he will not get nominated for the Nobel literature prize.. As the availability of english translation of one's work is necessary for that.

1
0
Would love your thoughts, please comment.x
()
x