ಚುಟುಕ

ಪಂಜು ಚುಟುಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮಂಜುನಾಥ್ ಪಿ. ಅವರ ಹನಿಗವಿತೆಗಳು


ಖುಷಿ

ಸಂಜೆ ಸೂರ್ಯನ ಹೆಣದ ಮೆರವಣಿಗೆ

ಸಾಗುವಾಗ ಬಾನ ಬೀದಿಯೊಳಗೆ

ದುಡಿವ ಜನರ ಗೂಡುಗಳ ದೀಪಗಳಿಗೆ

ಉಸಿರು ದಕ್ಕಿ ಪಿಸುಗುಟ್ಟಿ ನಸುನಗುತಾವೆ ಒಳಗೊಳಗೆ.


 ಬದುಕು 

ದುಡಿಯುವ ಜನರ ಸುಖವು

ಕನಸಿನ ತರಹದ್ದು;

ಸಂಕಟಗಳ ನತದೃಷ್ಟ ಬದುಕುಗಳಿಗೋ

ಹಸಿವಿನ ಸರಹದ್ದು.


ಸಹನೆ 

ದುಡಿವ ಜನರನ್ನು ನೀವು

ಬಿರುಬಿಸಿಲ ಬೆಂಕಿಯಲ್ಲಿ

ದಹಿಸಿದರೂ ಸಹಿಸುತ್ತಾರೆ;

ಮುಂದೊಮ್ಮೆ 

ನೀವೇ ಸುರಿಸುವ ಪ್ರೀತಿ ಮಳೆಗೆ

ತೆರೆದುಕೊಳ್ಳುವ ನೆಲವೇ ಆಗುತ್ತಾರೆ!


ಸ್ಪಷ್ಟ

ಓ ಸೂರ್ಯ,

ದುಡಿವ ಜನರ ನೆತ್ತಿಯ

ಸುಡುವುದೆಂದರೆ ಯಾಕೆ ನಿನಗೆ ಇಷ್ಟ?

ನೀನು ಸುಟ್ಟು ಹೋದ ಮೇಲೆ

ಇರುಳು ತಂಪು ಸುರಿವುದಂತೂ ಸ್ಪಷ್ಟ.


ಪೇಟೆ 

ರೈತ ಜನ

ಬೆವರ ಸುರಿಸಿ

ಬೆಳೆದ ಬೆಳೆಯ

ತರುತ್ತಾರೆ ಪೇಟೆಯಲ್ಲಿ;

ಕೂತ ಕುಂಡೆಗೆ

ಮೂರು ಪಾಲೆಂಬುವ

ದಲ್ಲಾಳಿಗಳು

ತೊಡಗಿದ್ದಾರೆ ಬೇಟೆಯಲ್ಲಿ.


ಬೆಲೆ 

ಜಗದ ಈ ಸಂತೆಯಲ್ಲಿ

ಚರಾಚರಗಳೆಲ್ಲವೂ

ಮಾರುಕಟ್ಟೆಯ ಸರಕುಗಳೆ, 

ಎಲ್ಲದಕ್ಕೂ ಬೆಲೆಗಳ tag.

ದೀನರಿಗೆ ಮಾತ್ರ

ಅನ್ವಯಿಸದು ಈ ಸೂತ್ರ

ಯಾಕೆಂದರೆ ಅವರ  

ಜೀವಗಳಿಗೆ ಬೆಲೆಯೇ ಇಲ್ಲ.


ಅನರ್ಘ್ಯ

ಅಮ್ಮ, ನೀನಿಲ್ಲದ ಹೊತ್ತಿನಲ್ಲಿ

ನಡೆಯುತ್ತಿದ್ದೇನೆ ಸಂತೆಯಲ್ಲಿ

ಏನೆಲ್ಲ ಕೊಳ್ಳಬಹುದು ದುಡ್ಡು ಕೊಟ್ಟು

ನಿನ್ನ ಅಪ್ಪಟ ಪ್ರೀತಿಯೊಂದನ್ನು ಬಿಟ್ಟು.


ಹೇಗೆ 

ನಿನ್ನ ಪ್ರೀತಿ ಜಲದಲ್ಲಿ ನಾನು

ನೀನೇ ಬೆಳೆಸಿದ ಮೀನು;

ಗಂಗೆಯಂತಹ ನೀನೆ ಇಲ್ಲದಾದಲ್ಲಿ

ಹೇಳು ಹೇಗೆ ಬದುಕುವುದಿನ್ನು?


ನಿರಾಸೆಯೇಕೆ? 

ಗೆಳೆಯಾ,

ಸೋತರೂ ನಿರಾಶನಾಗದಿರು

ಮರವ ನೋಡದೊ

ಕಡಿದರೂ 

ಮತ್ತೆ ಒಡೆವುದೊ

ಬದುಕುವಾಸೆಯ ಚಿಗುರು! 


ಕನಸಿರಲಿ 

ಹಾರಲೆತ್ನಿಸಿದೆ ಬಾನಿಗೆ

ತಲುಪದಿದ್ದರೂ ಕೊನೆಗೆ

ಮುಟ್ಟಿದೆ ಮನೆಯ ಮಾಳಿಗೆ

ಹೀಗೆ ಕನಸಿರಬೇಕು ಬಾಳಿಗೆ.

 


ಕೊನೆಗೆ 

ನಿನ್ನ 

ನೆನಪಿನ

ಮುತ್ತುಗಳ

ಹೆಕ್ಕುತಲಿದ್ದೆ

ವಿರಹದಿ;

ಗೊತ್ತಾಗಲಿಲ್ಲ

ಸಿಕ್ಕWAY

ಕೊನೆಗೆ…!


ಕರೆ 

ಗೆಳತಿ

ಸುತ್ತಲೂ

ಮುತ್ತಿಕೊಂಡ

ನೋವಿನ ಕತ್ತಲಲ್ಲಿ

ಕತ್ತಲಾಗಿ ಹೋಗುತ್ತಿರುವ

ನನ್ನೊಳಗೆ

ಚೇತನವಾಗು ಬಾRAY.


ಅರ್ಥ?

ಹೃದಯ ಹಾಳೆಯ ಮೇಲೆ

ಚಿತ್ರ ಬಿಡಿಸಿದ ನೀನು,

ಬಣ್ಣ ತುಂಬದೇ ಹೋದುದ್ದರ

ಅರ್ಥವಾದರೂ ಏನು?


ಯೌವನ 

ಮುಂದೆ ವರುಷ ವರುಷಕೆ

ವಸಂತ ಬರುತ್ತಾನೆ ಗೆಳತಿ;

ಆದರೆ, ಯೌವನವೆಂಬುದು

ನಮಗೆ ಒಂದೇ ಒಂದು ಸರತಿ!


ಸೃಷ್ಟಿ

ಒಮ್ಮೆ

ಸೃಷ್ಟಿಗೂ 

ಕವಿತೆ ಬರೆಯಬೇಕೆನಿಸಿತು;

ಆಗ

ಹಸಿರ ಹಾಳೆಯಲಿ

ಹೂವೊಂದು ಜನಿಸಿತು!


ಒಸುಗೆ

ವರುಣನಿಳಿವ ಸುದ್ದಿಯ

ಬಾನಬೀದಿಯಲಿ ಗಾಳಿ ಹೊತ್ತು ತರುತ್ತಿರಲಾಗಿ,

ಇಳೆಯ ಒಲ್ಮೆಯ 

ತರುಲತೆಗಳು ನಲಿಯುತ್ತವೆ ತೂಗಿ ಬಾಗಿ!


ಕವಿತೆ 

ಕವಿ(ಕವಯತ್ರಿ)ಯ

ಎದೆಯ

ಮಣ್ಣಿನಲ್ಲಿ

ಬೆಳೆವ

ಭಾವ-ಅನುಭಾವಗಳ

ಜಲ ಲವಣ

ಪೋಷಿತ ಲತೆ!


ಅನ್ವರ್ಥಕ 

ಮಹಾಕಾವ್ಯ ಕಟ್ಟಿದವರು

ಮಹಾಕವಿಗಳು.

ಕವಿತೆ ರಚಿಸಿದವರು

ಕವಿಗಳಾದರೆ

ಹನಿಗವನ ಬರೆದವರು 

Honey ಗವಿ!


ಫಲ

ಇನ್ನೊಬ್ಬರು ಬೆಳೆದರ

ಹೊಟ್ಟಿ ಕಿಚ್ಚ್ಯಾಕ್ ಪಡುತೀದಿ?

ಎಷ್ಟು ಉರಿದರೂ ಬೆಂಕಿ

ಕೊನಿಗುಳಿಯೋದು ಬರಿ ಬೂದಿ!


ವ್ಯರ್ಥ 

ಗೆಳತಿ,

ಪ್ರೀತಿಯಿಲ್ಲದ 

ಮನಸ್ಸಿನಿಂದ

ಸುಮ್ಮನ್ಯಾಕ ನಗತಿ?

ಎಣ್ಣಿಯಿಲ್ಲದ 

ಬತ್ತಿಯಿಂದ

ಉರಿದೀತೇನ ಹಣತಿ?


ಬೇಡವೆ

ನಮ್ಮಿಬ್ಬರ ಪ್ರೇಮ ಮರವಾಗಿ

ಹಸಿರಾಗಿ ಬೆಳೆಯಲಿ 

ಎಂದಾಶಿಸಿದೆಯಲ್ಲ ಗೆಳತಿ

ಅಷ್ಟೆ ಸಾಕೇನು?

ಹನಿಸಬೇಡವೆ ಒಲುಮೆಯ ನೀರು?


ಹಾಡು

ಕನಸುಗಳು ಕಮರಿ

ಎದೆಯೆಲ್ಲ ನೋವಿನ ಗೂಡಾಯಿತು;

ನೋವು ಪದವಾಗಿ

ಪದಗಳು ಸಾಲು ಸಾಲಾಗಿ ಹಾಡಾಯಿತು!


ಸಂಗತಿ

ಮೋಡ ಚೆಲ್ಲಿದ ಹನಿಗಳಿಗೆ ಗೊತ್ತಿರಲಿಲ್ಲ

ಹೀಗೆ ಹಳ್ಳವಾಗಿ ತೊರೆಯಾಗಿ ನದಿಯಾಗಿ

ಸಾಗರವಾಗುತ್ತೇವೆಂದು

ಗೊತ್ತಿದ್ದ ಸಂಗತಿ ಒಂದೇ- ನುಗ್ಗುವುದು!


ಅಪಾರ್ಥ 

ಪತಿದೇವ 

ಕವಿ ಕರೆದರೆ

ಕವಿ ಸಮ್ಮೇಳನಕೆ,

ರತಿಯಂಥ

ಸತಿ ತಯಾರಾದಳು

ಸವಿ ಸಮ್ಮಿಲನಕೆ!


ಕವಿತೆಯೊಂದರ ಉವಾಚ 

ಕವಿಯೇ,

ನೀನು ನನ್ನನ್ನು ಹೀಗೆ 

Face Bookನ  Tag ಗೆ

ಕಟ್ಟಿ ಹಾಕುವುದು ಸರಿಯೇ?

ನನ್ನ ಬಿಟ್ಟುಬಿಡು ಸಧ್ಯ

ನಾನಿರಬೇಕು ಜನರ ಮಧ್ಯೆ..  


                                                       

    –ಪಿ.ಮಂಜುನಾಥ,ಬೆಳಗಾವಿ

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

16 thoughts on “ಪಂಜು ಚುಟುಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮಂಜುನಾಥ್ ಪಿ. ಅವರ ಹನಿಗವಿತೆಗಳು

  1. ಎಲ್ಲಾ ಹನಿಗವಿತೆಗಳೂ ಸೂಪರ್ ಸರ್..
    ಒಂದಕ್ಕಿಂತ ಒಂದು ಸತ್ವಯುತ
    allade badajanarannu center madida honi gavana chennagide

  2. Badatanada bagge, Raitaru avar paristiti bagge nimagiruva kalakali istavayitu.. gud,keep it up, nd Cngradts…..:-)

  3. ಎಲ್ಲ ಹನಿಗಳೂ ಸವಿಯಾಗಿವೆ, ತಂಪಾಗಿವೆ, ಚೆನ್ನಾಗಿವೆ…
    ಒಮ್ಮೆ ಸೃಷ್ಟಿಗೂ ಕವಿತೆ ಬರೆಯಬೇಕೆನಿಸಿತು; 
    ಆಗ ಹಸಿರ ಹಾಳೆಯಲಿ ಹೂವೊಂದು ಜನಿಸಿತು!
     
    ಇನ್ನೊಬ್ಬರು ಬೆಳೆದರ ಹೊಟ್ಟಿ ಕಿಚ್ಚ್ಯಾಕ್ ಪಡುತೀದಿ?
    ಎಷ್ಟು ಉರಿದರೂ ಬೆಂಕಿ ಕೊನಿಗುಳಿಯೋದು ಬರಿ ಬೂದಿ!
     

  4. ಎಲ್ಲಾ ಹನಿಗವಿತೆಗಳೂ ಸೂಪರ್ ಸರ್.
     
    +1
     
     
    \|/

Leave a Reply

Your email address will not be published. Required fields are marked *