ಅಕ್ಕನ ವಿಭೂತಿ
ರತ್ನದ ಸಂಕೋಲೆ ತೊರೆದು
ಜಂಗಮರ ಜೋಳಿಗೆ ಹಿಡಿದು
ಅಪರಮಿತಕತ್ತಲೊಳಗೆ
ಬೆತ್ತಲೆಯಾಗಿ
ಊರೂರು ಅಲೆದು
ಕಲ್ಯಾಣದ ಕಾಂತಾರದ ಖನಿಗೆ
ಬಾಗಿದಾಗ
ಮೈ ಮುತ್ತಿದ
ಆ ಕೇಶಲಂಕಾರಕ್ಕೆ
ಶರಣೆಂದರೆ ಸಾಕೆ….?
ಜೋಳಿಗೆಯಲಿ ಜೋತಾಡಿದ
ಅನಲದ ಉಂಡೆಯಾಕಾರದ
ಮುಖವಾಡ
ಒಂದೊಂದು ರೀತಿಹವು
ಅಂಗದ ಲಿಂಗಕ್ಕೆ ಕೈ ತೆತ್ತಾಗ
ದಕ್ಕಿದ್ದು ಅವರಿಗೆ ಬೂದಿ
ಅದು ಬರೀ ಬೂದಿಯೇ!
ಅಲ್ಲ
ಗಂಡರನ್ನು ಭಸ್ಮ ಮಾಡುವ
ಭಂಡಾರದ ಭಕ್ತಿಯ ವಿಭೂತಿ
ಹಣೆ ತಟ್ಟಿ ಮನ ಮುಟ್ಟಿ
ಮಡಿಮಡಿಯಾಗಿ ಎಡೆ ಎಲೆಯಲ್ಲಿ
ಉರುಳಾಡಿದರು ?
ಮುಕ್ತಿಗದು ಬಹು ಆಳ ಉಂಟು
ಇವರಿಗೆ ಭಂಡರೆಂದರೆ ಸಾಕೆ….?
ಪರಿಪರಿಯಾರಿ ಪರ ದೈವದ
ಗವಿಯೊಳಗೆ ಬೇಡುವೆನು
ಅಪರೂಪದ
ಆಕಾರ ನಿರಾಕಾರ ನಿರ್ಗುಣ
ಚೆಲುವಂಗೆನೊಲಿದು
ಸಾವಿಲ್ಲದ ಕೇಡಿಲ್ಲದ
ಭವವಿಲ್ಲದ ಭಯವಿಲ್ಲ
ಶರಣಂಗೆ ನಾನೊಲಿದೆನವ್ವ
-ಮಲ್ಲಮ್ಮ ಯಾಟಗಲ್ ದೇವದುರ್ಗ
ಗಜ಼ಲ್
ಮೋಡಗಳೆಲ್ಲ ಕರಗಿಹೋಗಿ ಮುಗಿಲೀಗ ಕೆಂಡ-ಕುಲುಮೆ
ಕನಸುಗಳೆಲ್ಲ ಆವಿಯಾಗಿ ಮನಸೀಗ ಕೆಂಡ-ಕುಲುಮೆ
ಯಾವ ಏಟು ಎಲ್ಲಿ ತಾಕಿತೋ ಪ್ರತಿಮೆಯೀಗ ಭಗ್ನ
ಒಡೆದ ಚೂರುಗಳ ಚೂರಿಯಿರಿದು ಒಡಲೀಗ ಕೆಂಡ-ಕುಲುಮೆ
ದಾರಿಯ ತರಗೆಲೆ ಜೊತೆ ಹೂಗಳನೂ ಗುಡಿಸಿಯೊಟ್ಟಿ
ಬೆಂಕಿ ಹಚ್ಚಿದ್ದಾರೆ ಅಯ್ಯೋ ಎದೆಯೀಗ ಕೆಂಡ-ಕುಲುಮೆ
ಪತ್ರಿಕೆಗಳ ಪುಟಪುಟವೂ ಬಣ್ಣದ ನೀರ್ಗುಳ್ಳೆ
ನಿಜದ ಗಂಗೆಗೇ ಬೆಂಕಿ ಬಿದ್ದು ನೆರಳೀಗ ಕೆಂಡ-ಕುಲುಮೆ
ಲೋಕ ಕೊಟ್ಟುದೇನು ‘ವಿಶು’ ಬೊಗಸೆಗೆ ದಕ್ಕಿದ್ದೇನು
ಮರಳ ಹಾಸಿಗೆ ಮಾಯವಾಗಿ ಬದುಕೀಗ ಕೆಂಡ- ಕುಲುಮೆ
•ಗೋವಿಂದ ಹೆಗಡೆ
ಒಡೆದ ಕನ್ನಡಿ
ನೀರವ ಕತ್ತಲ ರಾತ್ರಿಯೊಳಗೆ
ಗೋರಿಯೊಳಗೊಣ ಶವದಂತೆ
ಹೂವ ಕಾಣದ ದುಂಬಿಯಂತೆ
ಎನ್ನ ಮನದ ಪ್ರೀತಿಯಾಗಿದೆ
ತಿರುಗಿ ನೋಡದೆ ಒದ್ದು ಹೋದೆಯಲ್ಲೆ
ಗುಟುಕ ಜೀವ ಉಳಿಸಿದೆಯಲ್ಲೆ
ನಡು ರಸ್ತೆಯಲಿ ನರಳಿ ಒದ್ದಾಡುವಂತಾಯಿತಲ್ಲೇ
ಕರುಣೆಯ ನೋಟ ಬೀರದೆ ಹೊರಟಿಹೆಯಲ್ಲೇ
ಮಾತಿನರಮನೆಯಲ್ಲಿ ತೇಲುವಂತೆ ಮಾಡಿದ್ದೆ ಅಂದು
ಮೌನದ ಕೋಟೆಯಲ್ಲಿ ಬಂಧಿಯಾಗಿಸಿದೆ ಇಂದು
ನೋವಿನ ಅಲೆಗಳ ತರಂಗಗಳು
ಎದೆಯ ತುಂಬ ರಿಂಗಣಿಸುತಿವೆ
ಸವಿ ಮಾತನಾಡುತ ಪ್ರೀತಿ ಮಾಡಿದೆ
ಬೆನ್ನ ಹಿಂದೆ ಚೂರಿ ಹಾಕಿದೆ
ನಂಬಿಕೆ ದ್ರೋಹ ಮಾಡಿದೆ
ಮನಸೆಂಬ ಕನ್ನಡಿಯ ಚೂರು ಮಾಡಿದೆ
ಒಡೆದು ಹೋದ ಕನ್ನಡಿಯ ಬಿರುಕುಗಳು
ಕೂಡಿಸಲಾಗುವುದೆ ಹೇಳೆ ಗೆಳತಿ
ಪ್ರೀತಿಯ ಸೌಧ ಮುರಿದು ಬಿದ್ದಿದೆ
ಅವಶೇಷಗಳಡಿ ಮನವು ಅನಾಥವಾಗಿ ಬಿದ್ದಿದೆ
-ಶಿವಕುಮಾರ ಕರನಂದಿ
ದೀಪಾವಳಿ
ದೀಪಾಲಂಕಾರವಾಗಬೇಕಿದೆ
ಈ ಆತ್ಮಕ್ಕೆ ಒಳಿತಿನ
ದೀಪಾರಾಧನೆಯಾಗಬೇಕಿದೆ
ನಿತ್ಯ ಕತ್ತಲಿನ ಕೊಳಕಿನಲ್ಲಿ
ನೊಂದಮನಕ್ಕೆ ಸಬಲತೆಯ
ದೀಪಾರತಿ ಸಿದ್ಧವಾಗಿದೆ
ಅಷ್ಟ ದೀಪಗಳು
ಅಷ್ಟ ಗುಣಗಳಾಗಿ ಬೆಳಗಿ
ದುಷ್ಟ ಕಪ್ಪು ಇಂದು
ಉನ್ಮೂಲನವಾಗಬೇಕಿದೆ
ಕೀರುತಲೇ ಇರಲಿ ಸಹಿಸದವರು
ಕೀರ್ತಿಯ ಪಥದಲ್ಲಿ
ದೀಪೋತ್ಸವ ನಡೆದಿದೆ
ಚಿದ್ರೂಪರ ಪರಿರೂಪವಾಗಿ
ದೀಪಾಲೆಕಂಬ ನಿಂತಿದೆ
ಚಂಚಲ ಚಿತ್ತದಿ
ನೆಮ್ಮದಿಯು ದೀಪ್ತವಾಗಿದೆ
ನನ್ನೊಳಗಿನ ದೀಪಿಕೆ
ದೀಪಮಾಲೆ ಹಚ್ಚಿದೆ
ಬಾಳ ಪಥದಿ ದೀಪಾವಳಿ ಬಂದಿದೆ
ಸದ್ವಿಚಾರ ಸನ್ನಡತೆ ದೀಪಿಸಲಿ
ದೀಪಕ ನಾನಾಗಿ ಉರಿಯುವೆ
ಸಂಭ್ರಮದ ಬೆಳಕು ಹರಡಲಿ
ಸದ್ಭಕ್ತಿ ಕುಣಿಯಲಿ ಮನದಿ
ದೀಪವರ್ತಿ ಬೂದಿಯಾದರೂ
ದೀಪೋತ್ಸವ ನಡೆಯುತ್ತಿರಲಿ
-ಜಹಾನ್ ಆರಾ
ಧರೆ
ಸೋಜಿಗವಿದು ಈ ಧರೆ
ಬಲು ದೊಡ್ಡದಿದರಂತರಂಗ
ಕಪ್ಪು ಬಿಳುಪಿನೊಳಗೆ ಕುದಿ
ಮೌನ ಚಿಪ್ಪಿನೊಳಗೆ ನಿಧಿ
ಕಪ್ಪು ಕೆಂಪು ಉಪ್ಪು ಸಿಹಿ ಉದಧಿ
ಅಪ್ಪಿಕೊಂಡಿವೆ ಬಳಸಿ ಇಳೆ
ಗಿರಿ ಶಿಖರ ಮರಳುಗಾಡು ದಟ್ಟ ಕಾನನ
ಹಿಮಟೋಪಿ ಹಿಮನದಿ ಅಗ್ನಿ ಪರ್ವತ
ಗರ್ಭದೊಳಗೆ ನಿಗೂಢ ಅಂಡ ಪಿಂಡ
ಬ್ರಹ್ಮಾಂಡದೊಳಗಿದು ಅಚ್ಚರಿ
ಜೀವನ್ಮರಣಗಳ ವೈಖರಿ
ಜೀವಿಗಳ ಬದುಕಿನ ರೀತಿ !
ನಡುಗುತ್ತದೆ ಸಿಡಿಯುತ್ತದೆ ಬಿರಿಯುತ್ತದೆ
ಸಮತೋಲನಕ್ಕಾಗಿ
ಪಡೆಯುತ್ತದೆ ಬಿಸಿಲು ಮಳೆ ಗಾಳಿ
ಜೀವ ಸಂಕುಲದ ಹಿತಕ್ಕಾಗಿ
ಅಲ್ಲಿ ರಾತ್ರಿ ಇಲ್ಲಿ ಹಗಲು
ನೆರಳು ಬೆಳಕಿನ ಬುಗುರಿಯಾಟ
ಮುಕ್ಕಾಲು ನೀರು ಒಕ್ಕಾಲು ನೆಲ
ಜೀವ ಜಾಲದ ನೆಲೆ
ಪಳೆಯುಳಿಕೆಗಳಿಗೂ ಬೆಲೆ
ಹೆಚ್ಚುತ್ತಿದೆ ಮಾನವನ ದಾಹ
ಕ(ಕೊ)ರಗುತ್ತಿದೆ ಧರೆಯ ಒಡಲು
ಕಾದಿದೆ ಕೇಡು
ಬರಿದಾದರೆ ಹಸಿರು
ನಿಲ್ಲುವುದು ಉಸಿರು!
-ಸೋಮಲಿಂಗ ಬೇಡರ ಆಳೂರ
ಅಪ್ಪ
ಬಾಲ್ಯದ ನಿಸಗ೯ದ ಮಡಿಲಲಿ
ಕೂಸು ಮರಿಯನು ಮಾಡುತ
ಪ್ರೀತಿಯ ಊಟ ಉಣಬಡಿಸಿತ
ಜೀವನದಲಿ ಖುಷಿ ಹಂಚುತ ಬೆಳೆಸಿಹನು
ಮನೆಯ ಹಿಂದೆಡೆ ಆಗಸದೆತ್ತರ ಬೆಳೆದ
ಮರದಲ್ಲಿನ ಹಣ್ಣುಗಳನ ಕಿತ್ತು ಕೊಟ್ಟವನು
ನಸುಕಿನಲಿ ಹಾಲು ಹಾಕುತ
ಟಪಾಲು ಹಂಚುತ ಬಡತನದಲಿ ಸ್ವಂತಿಕೆ ಮರೆದವನು
ಊರಿನ ಕೆರೆಯಲಿಬೆನ್ನ ಮೇಲೆ ಹೊತ್ತು
ಈಜುತ ನನಗೂ ಈಜಲೂ ಕಲಿಸಿದವನು
ನಸುಕಿನಲಿ ಹಾಲು ಹಾಕಲು ಕರೆದೊಯ್ದು
ಕತ್ತಲಿನ ಭಯವ ಹೊಡೆದೊಡಿಸಿಹನು
ನಮ್ಮೂರ ಅಜ್ಜನ ಜಾತ್ರೆಯಲಿ
ಜನರ ಮಧ್ಯೆ ಹಟ ಮಾಡಿದಾಗ
ಹೆಗಲ ಮೇಲೆ ಕೂರಿಸಿಕೊಂಡು
ನಾನು ಖುಷಿಪಡುವಾಗ
ತಾನೂ ಸಂತಸ ಪಟ್ಟವನು
ಮೋಸ ವಂಚನೆಯನು ಅರಿಯದೆ
ಇರುವುದರಲ್ಲಿಯೇ ಬದುಕು ಕಟ್ಟಿಕೊಂಡು
ಬದುಕುವ ಛಲದ ಛಲಗಾರ
ನನ್ನಪ್ಪನ ಜೀವನವೇ ಎನಗೆ ದೊಡ್ಡಪಾಠ
ಪ್ರೀತಿಯ ಅಪ್ಪ ನಿನಗ್ಯಾರು ಸಾಟಿ ಈ ಜಗದೊಳಗೆ….
-ಅಕ್ಷಯಕುಮಾರಜೋಶಿ(ಅಕ್ಷು)
I have shared your poem about appa.. FYI
Dear Akshu,
I have shared your poem on appa in my wall….FYI
ಮಲ್ಲಮ್ಮ ಯಾಟಗಲ್ ದೇವದುರ್ಗರ ಕವಿತೆ ಮತ್ತು ಗೋವಿಂದ ಹೆಗಡೆಯವರ ಗಜಲ್ ಮುದ ಕೊಟ್ಟಿತು. ಹಾಗೆಯೇ ಉಳಿದ ಕವಿತೆಗಳೂ ಸುಂದರ.