ಕೆಲವೊಂದು ಸಂಧರ್ಭದಲ್ಲಿ ಅಪ್ಪ ಅಂದರೆ ನಮಗೆಲ್ಲಾ ಯಾವುದೋ ಮಿಲಟರಿ ದಂಡಿನ ಮಹಾದಂಡನಾಯಕನಂತೆಯೂ ಮತ್ತೊಮ್ಮೆ ಜಮದಗ್ನಿ ಮುನಿಯಂತೆ ಭಾಸವಾಗಿ ಬಿಡುತ್ತಾನೆ.ಅಷ್ಟೇ ಏಕೆ ನಮ್ಮಪ್ಪ ಕೋಪಿಷ್ಟ, ಗರ್ವಿಷ್ಟ ಅವನ ಮೂಗಿನ ತುದಿಯಲ್ಲೇ ಕೋಪ ಎಂದೆಲ್ಲಾ ಗೊಣಗುತ್ತೇವೆ.
ಆದರೆ ಅಪ್ಪನ ಮನಸ್ಥಿತಿಯೇ ಬೇರೆ ಮನದಲ್ಲಿ ಬೆಟ್ಟದಷ್ಟು ಪ್ರೀತಿಯನ್ನು ತುಂಬಿಕೊಂಡಿದ್ದರು ವ್ಯಕ್ತಪಡಿಸುವಲ್ಲಿ ಹಿಂದೆಟು ಹಾಕುತ್ತಾನೆ. ತನ್ನವರನ್ನು ಸಂರಕ್ಷಿಸಲು ಹಗಲಿರುಳು ಶ್ರಮಿಸುತ್ತಾನೆ. ಅಂತಹ ಅಪ್ಪನಿಗೆ ಅಪ್ಪನೇ ಸಾಟಿ. ಅವನ ಶ್ರಮದ ಬೆವರಹನಿಯ ಹಿಂದೆ ತನ್ನವರನ್ನು ಸಂರಕ್ಷಿಸುವ ಸ್ವಾರ್ಥತೆಯಿದೆ. ಕ್ಷಣಕ್ಷಣಕ್ಕೂ ಕೋಪಸಿಕೊಳ್ಳುವ ಕೋಪದ ಹಿಂದೆ ಮಕ್ಕಳಿಗೆ ಬದುಕು ಕಟ್ಟಿಕೊಡುವ ಮಹದಾಸೆಯಿದೆ. ಇಂತಹ ಅಪ್ಪನ ಅದೆಷ್ಟು ಗುಣಗಳು ಅವನ ಕೋಪದ ಮುಂದೆ ಮಸುಕಾಗಿ ನಮ್ಮಗೆ ಕಾಣುವುದೆಯಿಲ್ಲಾ.
ಬಹುಶಃ ಇಂತಹ ನಿಸ್ವಾರ್ಥದ ಕೋಪಕ್ಕೆ ನಾನು ಬಲಿಯಾಗಿದ್ದಾರೆ ಇವತ್ತು ಪ್ರಾಥಮಿಕ ಶಾಲೆಯ ಶಿಕ್ಷಕನಾಗುತ್ತಿದ್ದೆ. ತನ್ನ ಮಗ ಶಿಕ್ಷಕನಾಗಬೇಕು. ತನ್ನಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಬೇಕು. ಎಂಬುವದು ಅವರ ಜೀವನದ ದೊಡ್ಡ ಆಸೆಯಾಗಿತ್ತು. ನಾನು ಅವರ ಮುಂಗೋಪದ ಕನಸುಗಳನ್ನು ಬದಿಗೆ ಸರಸಿ ನನ್ನಿಷ್ಟದ ಪತ್ರಿಕೋದ್ಯಮವನ್ನು ಅಪ್ಪಿಕೊಂಡೆ. ಇದರಿಂದ ಅಲ್ಲಿಯವರೆಗೂ ಮಾತಿನಲ್ಲೇ ಮುಗಿಯುತ್ತಿದ ಅಪ್ಪನ ಕೋಪ ಇಂದು ಮೌನದೊಳಗೆ ಅವಿತುಕೊಂಡಿದೆ.
ಆ ಕ್ಷಣದಿಂದ ನನ್ನ ಜೀವನ ನಾವಿಕನಿಲ್ಲದ ದೋಣಿಯಂತೆ ಸ್ಪಷ್ಟ ಗುರಿ ಗೋಚರವಾಗದೇ ಅತ್ತಿಂದಿತ್ತ ಅಲೆದಾಡುತ್ತಿದೆ. ಅಂಬೆಗಾಲಿಡುವ ದಿನಗಳಿಂದಲೂ ನನಗೆ ಅಪ್ಪನೇ ಸರ್ವಸ್ವ. ಜ್ಞಾನದ ದಾರಿಗೆ ಗುರುವಾಗಿ ಕತ್ತಲೆಯ ಬಾಳಿಗೆ ಬೆಳಕಾದ ಅಪ್ಪನ ಪ್ರೀತಿ ಅದ್ಯಾಕೋ ನನ್ನಿಂದ ದೂರವಾಗುತ್ತಿರುವ ನೋವು ಕಾಡುತ್ತಿದೆ.
ಜೀವನದಲ್ಲಿ ಮೊದಲ ಬಾರಿಗೆ ನಿಮ್ಮ ಇಚ್ಚೆಗೆ ವಿರುದ್ದವಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಪತ್ರಕರ್ತನು ಕೂಡಾ ಒಂದರ್ಥದಲ್ಲಿ ಸಮಾಜದ ಶಿಕ್ಷಕನೇ ನನ್ನ ಆಯ್ಕೆಯಂತೆ ನಿಮ್ಮ ಇಚ್ಛೆಯಂತೆ ಈ ಹುದ್ದೆಯನ್ನು ನಾನು ನಿರ್ವಹಿಸುತ್ತೇನೆ. ನನ್ನಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.
ಈ ದೋಣಿಗೆ ನಿಮ್ಮ ಕೋಪದ ನಾವಿಕನ ಅವಶ್ಯಕತೆಯಿದೆ. ಅಂಗಲಾಚಿ ಬೇಡಿಕೊಳ್ಳವೆ ಅಪ್ಪಾ ನನ್ನನ್ನು ಕ್ಷಮಿಸಿ, ನಿಮ್ಮ ಮೌನವನ್ನು ಮುರಿದು ಅದೇ ಹಳೆಯ ಸ್ಟೈಲ್ನಲ್ಲಿ ನನ್ನ ಮೇಲೆ ಒಂದೇ ಒಂದು ಸಾರಿ ಕೋಪಿಸಿಕೊಳ್ಳಿ ಪ್ಲೀಸ್.
-ಮಲ್ಲೇಶ ಮುಕ್ಕಣ್ಣವರ
nice article.