ಆಗ ನಾನಿನ್ನು ಪಿಯುಸಿ ಮೊದಲಿನ ವರ್ಷದಾಗ ಓದತಿದ್ಯಾ. ಚೊಕ್ಕ ಹೆಣ್ಮಕ್ಳಿದ್ದ ಕಾಲೇಜ್ಗೆ ನಮ್ಮಪ್ಪ ಹಚ್ಚಿ ಬಂದಿದ್ದ. ಮಂಜಾನೆ ಒಂಬತ್ತಕ್ಕ ಬಸ್ ಹಿಡದ ಹೊಂಟ್ವಿ ಅಂದ್ರ ತಿರ್ಗಿ ಮನಿ ಹತ್ತೊದ್ರಾಗ ಹೊತ್ತ ಮುಳಗತ್ತಿತ್ತ. ದಿನಾ ಹಿಂಗ ನಡಿತಿತ್ತ. ಕ್ಲಾಸ್ ಟೀಚರ್ಸ ಬಗ್ಗೆ ಎರಡ ಮಾತಿಲ್ಲ ಹಂಗ ಹೇಳೋರು. ಹೀಂಗ ಒಂದಿನ ಬ್ಯಾರೆ ಕಾಲೇಜಿಗೆ ಹೋಗತ್ತಿದ್ದ ನನ್ನ ಜೀವದ ಗೆಳತಿ ನೆನಪಿಗೆ ಬಂದ್ಲು, ಅಕಿ ಕೊಟ್ಟ ನಂಬರ್ಗ ಪೋನ್ ಮಾದಿದ್ಯಾ, ಬಾಳ ಖುಷಿಯಿಂದ ಮಾತಾಡಿ ನಮ್ಮ ಸ್ಕೂಲ್ ನೆನಪನ್ನ ಮರಕಳಿಸಿದ್ಲು, ನಂಗಂತೂ ಹಸದ ಹಾಲ ಕುಡಡಷ್ಟ ಸಂತೋಷ ಆತು.
ಹಿಂಗ ಒಂದಿನಾ ಮಾತಾಡ್ಕೋತ ಕುಂತಿದ್ವಿ. ಅದ್ರಾಗ ಬಾಳ ದಿನಕ್ಕ ಸಿಕ್ಕೆವಿ ಅಂತ ಶುರು ಮಾಡಿದ್ದ ಮಾತಗಳು ಮುಗಿವಂಗ ಕಾಣ್ಲಿಲ್ಲ. ಕಷ್ಟ ಅಂದಮ್ಯಾಲ ಮನುಷ್ಯಾಗ ಬರದ ಮರಕ್ಕ ಬರತಾವನ್ರಿ. ಇಲ್ಲಲ್ಲ,, ಹಂಗ ಇಬ್ಬರು ಹೊಟ್ಯಾಂದು ಬಾಯಾಂದು ಮಾತಾಡಾಕತ್ವಿ. ಪಾಪಾ! ನನ್ನ ಗಳತಿ ಮನಿ ಪರಸ್ಥಿತಿ ಬಾಳ ಹದಗೆಟ್ಟಿತ್ತ. ಕೇಳಿ ಜೀವಾ ಜುಲು ಜುಲು ಅಂತ ನೋಡ್ರಿ. ಏನಮಾಡೊದ ಯಾರ್ಯಾರು ದೇವರ ಹಂತೆಕ ಮೊದ್ಲ ಕೇಳ್ಕೊಂಡ ಬಂದಿರ್ತಾರಾ. ಇಲ್ವೆ ಇಲ್ಲಾ… ಎನೋ ಕೆಲವ ಮಂದಿ ಹಂತ ಅದ್ರುಷ್ಟ ಪಡ್ಕೊಂಡ ಬಂದಿರ್ತಾರ. ಅದು ಇರ್ಲಿ ಕಷ್ಟ ಅಂದಮ್ಯಾಲೆ ಪರಿಹಾರಾನು ಇದ್ದ ಇರತಾವ.
ಹಂಗ ಮಾತ ಬೆಳಕೋತ ಜ್ಯೋತಿಷ್ಯ ಕೇಳಸೋದ ಚಲೋ ಅನಸ್ತ ಯಾಕೋ. ಮಾರನೆ ದಿನಾ ಮನ್ಯಾಗು ಹೇಳ್ದ ಕೇಳ್ದ ತಯಾರಾಗಿ ಹೊದ್ವಿ. ಎಪ್ಪಾ ಸಾಕಾತ ಮಟ ಮಟ ಮಧ್ಯಾಹ್ನ ಬಿಸಲ್ದಾಗ ಹುಡ್ಕೊಂಡ ಹೋಗೋದ್ರಾಗ ರಗಡಾತ. ಕಡೆಗ ಸಿಕ್ಕಾ ಮಾರಾಂಯ್ಯ. ಜೋರಗೆ ಉಸರ ಬಿಟ್ಟ ಅವನ ಮುಂದ ಹೋಗಿ ಕುಂತ್ವಿ. ನಾಲ್ಕ ಮಂದಿ ನಮಗಿಂತ ಮೊದ್ಲ ಬಂದಿದ್ರ ಅವರು ತಮ್ಮ ತಮ್ಮ ಸಮಸ್ಯೆಗೆ ಪರಿಹಾರ ಕೇಳತಿದ್ರು. ಅವಾಗ ಅನಸ್ತ ನಮ್ಮ ಸಮಸ್ಯೆ ಇಂವ ಹೇಳಿದಂಗ ಕೇಳಿದ್ರ ಬಗೆ ಹರಿತಾವ ಅಂತ ಮಾತಡ್ಕೊಂಡ್ವಿ. “ಹಾ ಬರೆವ್ವಾ ಎಲ್ಲಿಂದ ಬಂದಿರಿ? ಏನ ಸಮಸ್ಯೆ ಅಂತ ಕೇಳಿದಾ..
ಮೊದ್ಲ ನನ್ನ ಗೆಳತಿಗೆ ಅಂದಾ… ನೀವ ನಾಲ್ಕ ಮಕ್ಕಳ ಮನ್ಯಾಗ ಎಷ್ಟು ದುಡದ್ರು ಈಡ ಆಗವಲ್ದ, ಬರೆ ಜಗಳ ಮನಸ್ತಾಪ ಬರತಾವ ಯಾಕಂತ ತಿಳಿದಂಗ ಆಗೈತಿ, ಇಷ್ಟರ ಮಧ್ಯೆ ಓದಾಕ ಬಾಳ ಕಷ್ಟ ಪಡಾತಿ, ಗೋರ್ಮೆಂಟ ಕೆಲಸ ಮಾಡಬೇಕಂತ ನಿನ್ನ ತಲ್ಯಾಗ ಅದ ಆದ್ರ ಮನ್ಯಾಗ ಹೆಂಗರೆ ಮಾಡಿ ಮದ್ವೆ ಮಾಡಬೇಕಂತ ನಿಂತರ ತಲಿ ಕೆಡಸ್ಕೊಬೇಡ, ಮೊನ್ನೆ ಒಂದ ಅಫ್ಲಕೇಸನ ಹಾಕಿಯಲ್ಲ ಅದು ಇನ್ನ ಎರಡ ವಾರದಾಗ ಬರತೈತಿ” ಅಂತಾ ಪಕ್ಕಾ ಹೇಳೆಬಿಟ್ಟ.. ಆಮ್ಯಾಗ ನನ್ನ ಮುಖ ದಿಟ್ಟಿಸ್ಕೊಂಡ ನೋಡಿದವನೆ ತಂಗಿ ನಿಮ್ಮ ಅಪ್ಪಾ ಅವ್ವಾಗ ಕೊನೆ ಮಗ್ಳು ಅಂದ. ಒಮ್ಮೆಗೆ ಗರಾಬಡದಾರಂಗ ಆಯಿತ. ದೇವರೆ ಕಡೆಗೂ ದಾರಿ ತೋರಿಸಿದಲ್ಲಪ್ಪಾ ಅನಸ್ತ..
ಆದ್ರು ಎಷ್ಟೆ ಕಲತ್ರು ಒಮ್ಮೊಮ್ಮೆ ಅನಕ್ಷರಸ್ಥರಂಗ ಮಾಡತ್ತೇವಿ ಅಲ್ವಾ. ಮತ್ತ ಹಂಗ ಹೇಳಕ ಶುರುಮಾಡಿದ್ನು ನಿನ್ನ ಸುತ್ತು ಇರೋ ಮಂದಿ ಬಾಳ ಸುಮಾರ ಅದಾರ ಬರೇ ಅಣಕ ನುಡಿತಾರ ಎಷ್ಷೆ ಪ್ರಯತ್ನ ಮಾಡಿದ್ರು ನೀನ ಅನಕೊಂಡ ಕೆಲಸ ಅಗಂಗಿಲ್ಲ.. ಇನ ಮುಂದನು ಹಂಗ ನೀನ ಎಷ್ಟೆ ಚಲೋ ಓದಿದ್ರು, ಒಂದ್ಯಾರಡ ವಿಷಯ ಹಿಂದೆ ಉಳ್ಕೋತಾವ ಮುಖ್ಯವಾಗಿ ಈ ಬರೋ ಮೇ ತಿಂಗಳದಾಗ ಮನೆವರ ಇಷ್ಟದಂಗ ಮದ್ವೆ ಆಗ್ತದ, ಆದ್ರ ಅವನ ನಿನ್ನ ಮಧ್ಯೆ ಹದಿನೈದ ವರ್ಷ ಅಂತರ ಇರತದ ಇದ ಮಾತ್ರ ಯಾರಿಂದನು ತಪ್ಸಾಕ ಆಗಂಗಿಲ್ಲಂತ ಕಡಾ ಕಂಡಿತವಾಗಿ ಹೇಳಿಬಿಟ್ಟ.
ಒಮ್ಮೆಗೆ ಜೀವ ಜಲ್ಲ ಅಂತು, ಉಸಿರ ಭಾರಾತ ವಟ್ಟ ತಿಳಿದಂಗ ಆಗಿ ಹೈರ್ಯಾಣಾಗಿ ಬಂದ ಮನ್ಯಾಗೊಂದ ಮೂಲ್ಯಾಗ ಕುಂತೆ. ಊಟಾ ಮಾಡಾಕೂ ಮನಸ್ಸಾಗಲಿಲ್ಲ. ರಾತ್ರಿಯಲ್ಲ ಕಣ್ಣ ಬಿಡಕೂತ ಅಂವ ಹೇಳಿದನ್ನ ಪದೆ ಪದೆ ಯೋಚನೆ ಮಾಡಿ ಮಾಡಿ ಸಾಕಾತ ನಿದ್ದಿ ಹತ್ತಿದ್ದು ಗೊತ್ತಾಗ್ಲಿಲ್ಲ.. ಅದ್ರ ಕರುಳ ಸಂಬಂಧ ಅಂತ ಸುಮ್ನ ಅನ್ನಂಗಿಲ್ರಿ. ಅವ್ವ ಕೇಳೆ ಬಿಟ್ಟಳು. ನಾನು ನಿನ್ನೆ ಬಂದಾಗಿಂದ ನೋಡಾತ್ತೇನಿ ಏನ ಆಗೈತಿ ನಿಂಗ? ಆರಾಮ ಅದಿ ಇಲ್ಲೋ ಅಂತ ಕೇಳಿದ್ಲು.. ಮನಸ್ಸ ತಡಿಲಿಲ್ಲ ಜ್ಯೋತಿಷ್ಯ ಕೇಳಿಸಿದ್ವಿ ಹಿಂಗಂಗೆಲ್ಲಾ ಹೇಳ್ಯಾರ ಅಂದಿದ್ದ ತಡಾ ಅವ್ವ ಮತ್ತ ಮನೆವರೆಲ್ಲರು ಬೈಯಾಕ ಸುರು ಮಾಡಿದ್ರ.. ದೊಡ್ಡ ಹಿರೇತನ ಮಾಡಿ ನಿಂಗ್ಯಾರ ಹೋಗಂದ್ರ, ಮದ್ವಿ ಅಂತಾ ಮದ್ವಿ ಶ್ಯಾಣೇಕಿ ಅದಿ, ಕೈಯಾಗ ಹತ್ತಪೈಸೆ ಇಲ್ಲಾ ತಲ್ಯಾಗಿನ ಹಳಹಳ ಬಿಟ್ಟ ಚಂದಗೆ ಓದ ನೋಡುನ. ಎಲ್ಲಾ ಚಲೋ ಆಕ್ಕೇತಿ ಇಲ್ಲದ ಮಾಡಿ ಇಲಿಗೆ ಚೊಣ್ಣಾ ಹೊಲಿಸಿದ್ರಂತ ಹಂಗಾತ ಮುಂದ ಯಾವಗು ಹಿರೆತನ ಹಿಟ್ಟ ಹಚ್ಚೊ ಕೆಲಸಾ ಮತ್ತ ಮಾಡಬೇಡಂತ ಮಸ್ತ ಮಂಗಳಾರ್ತಿ ಆತ..
ಹೌದ್ರಿ! ದೊಡ್ಡಾರ ಮಾತ ಕೇಳಬೇಕಾಂತರ ಹಿಂತಾದ್ಕ ನೋಡ್ರಿ ಇವಾಗ ಪಿಯುಸಿ, ಡಿಗ್ರಿ ಮುಗ್ಸಿ ಒಂದೆ ವಿಷಯ ಹಿಂದ ಉಳಸದಂಗ ಪ್ರಥಮ ವರ್ಷ ಸ್ನಾತಕೋತ್ತರ ಓದಾತ್ತೇನಿ… ಏನಾರ ಸಾಧನೆ ಮಾಡಬೇಕ ಅನ್ನೋ ಚಲಾ ಜೊತೆಗ ಮನೆವರ ಆರ್ಶೀವಾದ ಒಂದ ಇದ್ರ ನೋಡ್ರಿ ಯಾವದೆ ಕೆಲಸ ಇರ್ಲಿ ಅನಕೊಂಡಂಗ ಆಗತಾವ. ಇನ್ನ ನನ್ನ ಗೆಳತಿ ಮದ್ವೆ ಆಗಿ ಎರಡ ಮಕ್ಕಳ ಗಂಡನ ಜೊತೆ ಆರಾಮ ಅದಾಳ. ನೊಡ್ರಿ ಚಟಗೆವ್ವ ಹಣೆಬಾರ ಬರಿತಾಳೊ, ಬ್ರಹ್ಮ ಬರಿತಾನೋ ಒಟ್ಟಿನ್ಯಾಗ ಪ್ರಯತ್ನ ಇದ್ದಲ್ಲಿ ಪ್ರತಿಫಲ ನಮ್ಮದ ಆಗೆ ಆಗ್ತೈತಿ ಇದು ಖರೇ ಮಾತ್ರಿ. ಏನಂತೀರಿ?
-ಗಾಯತ್ರಿ ಬಡಿಗೇರ
*****
ಹೌದ್ರಿ ಬಾಯರ ಖರೆ ಹೇಳಿದ್ರಿ !!!
ಛ೦ದ ಬರದೀರಿ ಅಕ್ಕಾರ …. ಹಿ೦ಗ ಬರಕೊ೦ತ ಇರ್ರಿ… ಲೇಖನ ಒಳಗ ಇನ್ನೂ ಪ್ರೌಢಿಮೆ ಬರತೈತ್ರಿ !!!!!!
ಪ್ರೊ.ಶ್ರೀವಲ್ಲಭ ರಾ ಕುಲಕರ್ಣಿ
ನಿಡಸೋಸಿ ಗ್ರಾಮ