ಪಂಚ್ ಕಜ್ಜಾಯ

ದೆವ್ವದ ಮನೆ: ಗುರುಪ್ರಸಾದ ಕುರ್ತಕೋಟಿ


(ಇದು ನನ್ನ ತಂದೆ ಶಶಿಕಾಂತ ಕುರ್ತಕೋಟಿ ಅವರಿಗೆ ಆದ ಒಂದು ಅನುಭವ, ಅವರೇ ಹೇಳಿದ್ದು. ಮೂಲ ಕತೆಗೆ ಧಕ್ಕೆ ಬರದಂತೆ, ಓದಿಸಿಕೊಂಡು ಹೋಗಲಿ ಅಂತ ಸಲ್ಪ ಮಸಾಲೆ ಬೆರೆಸಿದ್ದೇನೆ. ಅದು ಅಜೀರ್ಣಕ್ಕೆ ಕಾರಣವಾಗಲಿಕ್ಕಿಲ್ಲವೆಂಬ ನಂಬಿಕೆ ನನ್ನದು!)

ಕಣ್ಣು ತೆರೆದಾಗ ನಾನು ಆಸ್ಪತ್ರೆಯಲ್ಲಿದ್ದೆ. ಕೈಗೆ ಸಲಾಯಿನ್ ಹಚ್ಚಿದ್ದರು. ನನ್ನ ಹೃದಯದ ಬಡಿತ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಕಣ್ಣಿಗೆ ಕತ್ತಲೆ ಬಂದಿದ್ದಷ್ಟೆ ನನಗೆ ನೆನಪು. ಆಮೇಲೇನಾಯ್ತು? ಯಾರು ನನ್ನನ್ನಿಲ್ಲಿ ತಂದದ್ದು ಒಂದು ನನಗೆ ಅರ್ಥವಾಗುತ್ತಿಲ್ಲ. 
"ಸರ್ ಕಣ್ಣು ತಗದ್ರು!" ಅಂತ ನನ್ನ ನೆಚ್ಚಿನ ಶಿಷ್ಯ ಪ್ರಮೋದ ಓಡೋಡಿ ನನ್ನ ಬಳಿ ಬಂದಿದ್ದ. ಅವನ ಜೊತೆಗೆ ಉಳಿದಿಬ್ಬರು ಶಿಷ್ಯಂದಿರೂ ಇದ್ದರು.
"ಸರ್ ಏನೂ ಚಿಂತಿ ಮಾಡಬ್ಯಾಡ್ರೀ ಎಲ್ಲಾ ಸರಿ ಹೋಗ್ತದ." ಪ್ರಮೋದ ಹೇಳಿದ. 
"ಸರಿ ಹೋಗ್ಲಿಕ್ಕೆ ಆಗಿದ್ದಾದ್ರೂ ಏನು?" 
"ಸರ್ ನಾನು ಮತ್ತ ಪ್ರಶಾಂತ ರಾತ್ರಿ ನಿಮಗ ಊಟ ಕಟಗೊಂಡು ನಿಮ್ಮ ಮನಿಗೆ ಬಂದ್ವಿ. ಒಳಗ ಬಂದು ನೋಡಿದ್ರ, ನೀವು ಪಡಸಾಲ್ಯಾಗ ಅಂಗಾತ ಬಿದ್ದಿದ್ರಿ. ನನಗ ಘಾಬ್ರಿ ಆತು. ನೀರ್ ಹೊಡದ್ರೂ ನೀವು ಏಳಲಿಲ್ಲ. ಅದಕ್ಕ ದವಾಖಾನಿಗೆ ಕರಕೊಂಡು ಬಂದ್ವಿ. ಪುಣ್ಯಾಕ್ಕ ನಿಮ್ಮ ತಲಬಾಗಿಲ ತಕ್ಕೊಂಡ ಇತ್ತು, ಇಲ್ಲಂದ್ರ ಬಾಗಲಾ ಒಡಿಬೇಕಾಕ್ತಿತ್ತು!" ಒಂದೆ ಉಸಿರಿನಲ್ಲಿ ಹೇಳಿದ. ಅಷ್ಟರೊಳಗೆ ಡಾಕ್ಟರ್ ಬಂದ್ರು. 
"ಅವರಿಗೆ ತ್ರಾಸ್ ಕೊಡ್ಬ್ಯಾಡ್ರೀ, ಹೊಗ್ರೀ ಹೊರಗ" ಅಂತ ತಮ್ಮ ವೈದ್ಯಸಹಜ ಕೋಪದಿಂದ ಎಲ್ಲರನ್ನೂ ಹೊರಗೆ ದಬ್ಬಿದರು. ಮತ್ತೊಂದು ನಿದ್ದೆ ಇಂಜೆಕ್ಷನ್ ಕೊಟ್ಟರೇನೊ ಹಾಗೇ ನಿದ್ದೆಗೆ ಜಾರಿದ್ದೆ. 

ಮತ್ತೆ ಎಚ್ಚರವಾದಾಗ ಮುಂದೆ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ಅಮ್ಮ ಕೂತಿದ್ದಳು. ನನಗೆ ಹಿಂಗಾಗಿದ್ದು ಅವಳಿಗೆ ಯಾರೊ ತಿಳಿಸಿರಬೇಕು. ಅವಳಿರುತ್ತಿದ್ದದ್ದು ಹುಬ್ಬಳ್ಳಿಯ ನನ್ನ ಅಣ್ಣನ ಮನೆಯಲ್ಲಿ. ನಾನು ಎಚ್ಚರಾಗಿದ್ದು ನೋಡಿ ಕಕ್ಕುಲತೆಯಿಂದ ವಿಚಾರಿಸಿದಳು "ಹೆಂಗಿದ್ದೀಪಾ ಈಗ? ನನಗಂತೂ ಭಾಳ ಕಾಳಜಿಯಾಗಿತ್ತು." ಮತ್ತೆ ಅವಳ ಕಣ್ಣುಗಳು ಗಂಗಾ ಯಮುನೆಗಳಾದವು! 
"ನಾನು ಮೊದ್ಲ ಬಡಕೊಂಡೆ, ಆ ಸುಡಗಾಡು ಮನ್ಯಾಗ ನೀನು ಇರೂದು ಬ್ಯಾಡಾ ಅಂತ. ಅಲ್ಲಿ ದೆವ್ವದ ಕಾಟ ಅದ ಅಂತ ಗೊತ್ತಾದ ಮ್ಯಾಲೂ ಅಲ್ಲೇ ಇದ್ದೀ ಅಂದ್ರ ನಿನಗ ಹುಂಬ ಧೈರ್ಯ ಭಾಳ ಅದ ಬಿಡು. ನನ್ನ ಮಾತು ಎಂದ ಕೇಳಿ ನೀನು." ಅಂತ ತನ್ನ ಕೋಪ ತೋರಿದಳು. ಆ ಕೋಪದಲ್ಲೂ ಮಾತೃ ಸಹಜವಾದ ಕಾಳಜಿ, ಪ್ರೀತಿ ಇತ್ತು. ಹೌದು ಅದು ದೆವ್ವದ ಕಾಟ ಇರುವ ಮನೆ ಅಂತ ಆವಾಗ್ಲೆ ಒಬ್ಬ ಹೇಳಿದ್ದ. ಹಿಂದಿನ ಘಟನೆಗಳು ನಿಧಾನವಾಗಿ ನೆನಪಿನಂಗಳದಲ್ಲಿ ಬಿಚ್ಚಿಕೊಳ್ಳತೊಡಗಿದವು.

ಅವತ್ತು ಆ ಊರಿಗೆ ಬಂದಿದ್ದು ನನ್ನ ಜೀವನದಲ್ಲಿಯೇ ನನಗೆ ಪ್ರಥಮ ಬಾರಿಗೆ ನೌಕರಿ ಸಿಕ್ಕಾಗ. ಇತ್ತ ಪಟ್ಟಣವೂ ಅಲ್ಲದ ಹಳ್ಳಿಯೂ ಅಲ್ಲದ ಅದು ಒಂದು ದೊಡ್ಡ ಗ್ರಾಮ ಅನ್ನಬಹುದಾದಂತಹ ಊರು. ಅಲ್ಲೊಂದು ಕಾಲೇಜು ಇತ್ತು. ಅಲ್ಲಿ ನನಗೆ ಅಧ್ಯಾಪಕನ ಕೆಲಸ. ಊರಿನ ಹೆಸರು ಯಮನೂರು.  ಹೆಸರೇ ಒಂಥರ ವಿಚಿತ್ರವಾಗಿದ್ದರೂ ಅಲ್ಲಿಯ ಜನರು ತುಂಬಾ ಒಳ್ಳೆಯವರೆನಿಸಿದರು. ಮೊದಲು ಸ್ವಲ್ಪ ದಿನಗಳ ಮಟ್ಟಿಗೆ ಅಂತ ಪ್ರಿನ್ಸಿಪಾಲರ ಔಟ್ ಹೌಸಿನಲ್ಲೇ ಇದ್ದರೂ, ನನ್ನದು ಅಂತ ಒಂದು ಬೇರೆ ಮನೆ ನೋಡಲೇ ಬೇಕಿತ್ತು. ಈಗ ಒಬ್ಬನೇ ಇದ್ದದ್ದರಿಂದ ಆ ಔಟ್ ಹೌಸ್ ಸಾಲುತ್ತಿತ್ತು. ಆದರೆ ಅಮ್ಮನ ಕರೆದುಕೊಂಡು ಬರುವ ವಿಚಾರವೂ ಇತ್ತಲ್ಲದೇ, ಮದುವೆಯಾಗುವ ಕನಸೂ ಕಾಣುತ್ತಿದ್ದೆನಾದ್ದರಿಂದ ಸ್ವಲ್ಪ ದೊಡ್ಡ ಮನೆಯ ಅವಶ್ಯಕತೆ ಇತ್ತು. ಮನೆ ಹುಡುಕಾಟ ನಡೆದಿತ್ತು. ಒಬ್ಬನೇ ಇದ್ದುದರಿಂದ ಒಂದಿಷ್ಟು ಜನ ಶಿಷ್ಯಂದಿರು ಮನೆಗೆ ಪಾಠ ಹೇಳಿಸಿಕೊಳ್ಳುವುದಕ್ಕೆ ಬರುತ್ತಿದ್ದರು. ಆಗಾಗ ನನಗೆ ಅಂತ ಊಟ ತಿಂಡಿ ಕಟ್ಟಿಸಿಕೊಂಡು ಬರುತ್ತಿದ್ದರು. ಹೀಗೆ ತಮ್ಮ ಗುರುಗಳ ಸೇವೆಯಲ್ಲಿ ನಿರತರಾಗಿದ್ದರು. ನಾನೂ ಒಬ್ಬಂಟಿ ಯಾಗಿದ್ದೆನಾದ್ದರಿಂದ, ಅವರು ನನಗೆ ಒಳ್ಳೆಯ ಜೊತೆಯಾಗಿದ್ದರು. ಅವರಲ್ಲಿಯೇ ಪ್ರಮೋದ ತುಂಬಾ ಹಚ್ಚಿಕೊಂಡು ನನ್ನ ಪ್ರೀತಿಯ ಶಿಷ್ಯ ಅನ್ನುವ ಪಟ್ಟ ಅಲಂಕರಿಸಿದ್ದ! ಹೀಗೆ ಎರಡು ಮೂರು ತಿಂಗಳು ಕಳೆದಿರಬೇಕು. ಒಂದು ದಿನ ಪ್ರಮೋದ ಕಾಲೇಜು ಬಳಿ ಸಿಕ್ಕಾಗ, 
"ಸರ್ ಒಂದು ಮಸ್ತ ಮನಿ ನೋಡಿಕೊಂಡ್ ಬಂದೀನಿ. ಭಾರಿ ಧೊಡ್ಡ ಮನಿ. ಬಾಡಿಗಿ ಭಾಳ ಕಡಿಮಿ." 
"ದೊಡ್ಡ ಮನಿ ಅಂತೀದಿ, ಬಾಡಿಗಿ ಕಡಿಮಿ ಹೆಂಗ ಆಗ್ತದೋ. ಸರ್ಯಾಗಿ ಕೇಳೀದ್ಯೊ ಇಲ್ಲೊ?"
"ಮತ್ತ ಮತ್ತ ಕೇಳ್ಕೊಂಡ್ ಬಂದಿನ್ರೀ ಸರ್. ಅಡ್ವಾನ್ಸೂ ಬ್ಯಾಡ ಅಂತ ಅಂದ್ರು" ನನಗ್ಯಾಕೋ ಸಂಶಯ ಇನ್ನೂ ಜಾಸ್ತಿ ಆಯ್ತು. ಏನೇ ಆಗ್ಲಿ ಮನೆ ನೋಡ್ಕೊಂಡು ಬಂದು ಅಮೇಲೆ ನಿರ್ಧಾರ ತೆಗೆದುಕೊಂಡ್ರಾಯ್ತು ಅಂದ್ಕೊಂಡು "ಆಗ್ಲಿ ಇವತ್ತ ಮದ್ಯಾಹ್ನ ಮನಿ ನೋಡ್ಕೊಂಡು ಬರೋಣ" ಅಂತ ನನ್ನ ಮುಂದಿನ ಪಿರಿಯಡ್ ಗೆ ಟೈಮ್ ಆಗಿದ್ದು ಗಮನಿಸಿ ಕ್ಲಾಸ್ ಗೆ ತೆರಳಿದೆ. 

"ಬರ್ರೀ ಮಾಸ್ತರ … ಒಳಗ ಬರ್ರೀ" ಅಂತ ಸಿಕಾಪಟ್ಟೆ ಮರ್ಯಾದೆಯಿಂದ ಕರೆದ ಮನೆಯ ಮಾಲಿಕರು ಕೆಟ್ಟವರಂತೇನು ಕಾಣ್ಲಿಲ್ಲ. ಪ್ರಮೋದನೂ ಒಟ್ಟಿಗಿದ್ದುದರಿಂದ, ಅವನು ಮೊದಲೇ ಅವರಿಗೆ ಭೆಟ್ಟಿಯಾಗಿದ್ದರಿಂದ ನಾವು ಯಾಕೆ ಬಂದಿದ್ದು ಅಂತ ಅವರಿಗೆ ಗೊತ್ತಾಗಿ ಹೋಗಿತ್ತು. "ಚಾ ಕುಡುದು ಮನಿ ನೋಡ್ಲಿಕ್ಕೆ ಹೋಗೋಣಂತ" ಅಂದರು. ಹಾಗೆ ಅದು ಇದು ಮಾತನಾಡುತ್ತಾ ನನ್ನ ಬಗ್ಗೆ ಸಕಲ ಮಾಹಿತಿಗಳನ್ನೂ ಕಲೆ ಹಾಕಿದರು. ಬಹುಶಃ ಯಾವುದೋ ಕನ್ಯಾಮಣಿ ಇನ್ನೂ ಮದುವೆಯಾಗದೆ ಉಳಿದಿತ್ತೇನೊ! ಚಾ ಕುಡಿದು ಮನೆ ನೋಡಲು ಹೊರಟೆವು. ಮಾಲೀಕರ ಮನೆಯಿಂದ ಸ್ವಲ್ಪ ದೂರ ನಡಕೊಂಡು ಹೋದರೆ ಸಿಕ್ಕಿದ್ದೆ ಆ ಮನೆ. ಹೊರಗಡೆಯಿಂದ ನೋಡಿದಾಗಲೇ ಗೊತ್ತಾಗುತ್ತಿತ್ತು, ಅದೊಂದು ದೊಡ್ಡ ಮನೇನೆ ಅಂತ. ಇಷ್ಟು ದೊಡ್ಡ ಮನೆಗೆ ಕಡಿಮೆ ಬಾಡಿಗೆ ಅಂತ ಪ್ರಮೋದ ಹೇಳಿದ್ದ. ಅವನ್ಯಾಕೋ ಸರಿಯಾಗಿ ಕೇಳಿಸಿಕೊಂಡಿರಲಾರ ಅಂತ ನನಗೆ ಸಂಶಯ ದಟ್ಟವಾಯ್ತು. ಒಂದು ವಿಶಾಲವಾದ ವರಾಂಡ. ಎರಡು ದೊಡ್ಡದೇ ಅನ್ನಿಸುವ ಕೋಣೆಗಳು. ಚೊಕ್ಕದಾದ ಅಡುಗೆ ಮನೆ, ಬಚ್ಚಲು ಮನೆ. ಒಳಗಡೆಯೇ ನೀರು ಕಾಯಿಸಿಕೊಳ್ಳಲು ವ್ಯವಸ್ಥೆ. ಹಳೆಯ ಕಾಲದ ಮಣ್ಣು ಗಾರೆಯಿಂದ ಕಟ್ಟಿದ ಮನೆಯಾದ್ದರಿಂದ ಮೇಲೆ ಜಂತಿ ತೊಲೆಗಳಿದ್ದವು. ಹೊರಗೆ ಅಷ್ಟೊಂದು ಬಿಸಿಲಿದ್ದರೂ ಮನೆ ಒಳಗೆ ತುಂಬಾ ತಣ್ಣಗಿತ್ತು. ಆದರೆ ಹಿತ್ತಲು ಇರಲಿಲ್ಲ. ಯಾಕೆಂದರೆ ಆ ಮನೆಯ ಹಿಂದೆ ಮನೆಯ ಎತ್ತರಕ್ಕೆ ಒಂದು ದಿಬ್ಬ ಇತ್ತು. ಆ ದಿಬ್ಬದ ಮೇಲೆ ಒಂದಿಷ್ಟು ಮನೆಗಳಿದ್ದವು. ಒಟ್ಟಿನಲ್ಲಿ ಮನೆ ನನಗಂತೂ ಇಷ್ಟವಾಯ್ತು. ಮದುವೆಯಾಗಿ ಹೆಂಡತಿಯೊಬ್ಬಳು ಮನೆಗೆ ಬಂದು, ಅಮ್ಮನ ಕರೆಸಿಕೊಂಡರೂ ಎರಡು ಕೋಣೆಗಳು ಸಾಕಾಗುತ್ತಿತ್ತು. ಹೊರಗೆ ಬಂದವನೇ ಎಷ್ಟು ಬಾಡಿಗೆ ಅಂತ ಅಳಕುತ್ತಲೇ ಕೇಳಿದವನಿಗೆ ಅವರು ಹೇಳಿದ್ದು ತುಂಬಾ ಕಡಿಮೆ ಬಾಡಿಗೇನೆ! ಅಡ್ವಾನ್ಸು ಕೂಡ ಬೇಡ ಅಂದರು. ಯಾಕೆ ಅಂದ್ರೆ "ನೀವು ವಿದ್ಯಾ ಹೇಳಿ ಕೊಡೊ ಗುರುಗಳು. ನಿಮ್ಮ ಮ್ಯಾಲೆ ಭಾಳ ಗೌರವ ಅದ ನಮಗ. ನಿಮ್ಮ ಹತ್ರ ನಾವು ಜಾಸ್ತಿ ದುರಾಸೆ ಮಾಡೋದು ಒಳ್ಳೇದಲ್ಲ." ಅಂತೇನೇನೋ ದೊಡ್ಡ ಮಾತುಗಳನ್ನಾಡಿ ಬಿಟ್ಟರು ಆ ಪುಣ್ಣ್ಯಾತ್ಮ. ಸರಿ ನನಗೂ ಸಣ್ಣ ಪಗಾರ. ಆಗಿದ್ದೆಲ್ಲಾ ಒಳ್ಳೇದಕ್ಕೇ ಅಂತ ನಾನೂ ಆಗ್ಲಿ ಅಂದೆ. ಆದರೂ ಇಷ್ಟೊಂದು ಒಳ್ಳೆಯ ಮನೆಗೆ ಇನ್ನೂ ಯಾರೂ ಬಾಡಿಗೆಗೆ ಬಂದಿಲ್ಲದಿರುವುದೇ ಒಂದು ಆಶ್ಚರ್ಯವಾಗಿತ್ತು. ಬಹುಶಃ ನನ್ನಂಥ ಒಳ್ಳೆಯವರು ಯಾರೂ ಸಿಕ್ಕಿಲ್ಲದಿರಬಹುದೇನೋ ಎಂದು ನನಗೆ ನನ್ನ ಮೇಲೆ ಒಂದು ಬಗೆಯ ಅಭಿಮಾನ ಉಂಟಾಯ್ತು.

ಪ್ರಮೋದನ ಮುಖದಲ್ಲಿ, ತನ್ನ ಗುರುವಿಗೊಂದು ಚಂದದ ಮನೆ ಗೊತ್ತು ಮಾಡಿಸಿಕೊಟ್ಟ ನಿರಂಬಳತೆ ಇತ್ತು. 
"ಸರ್ರ ಮುಂದಿನ ಸೋಮವಾರ ಚೊಲೋ ದಿನ ಅದರೀ. ಹಾಲು ಉಕ್ಕಿಸಿ ಬಿಡೋಣು" ಅಂತ ಖುಷಿಯಿಂದ ಹೇಳಿದ. ನನಗೂ ಅದು ಸರಿ ಅನಿಸಿತ್ತು. ಭ್ರಹ್ಮಚಾರಿಯಾಗಿದ್ದ ನನ್ನ ಬಳಿ ಹೇಳಿಕೊಳ್ಳುವಂಥ ಸಾಮಾನು ಸರಂಜಾಮುಗಳಿರಲಿಲ್ಲ. ಒಂದು ಗಾದಿ, ಹಾಸಿಕೊಳ್ಳಲು, ಹೊದೆದುಕೊಳ್ಳಲು ಒಂದೆರಡು ಚಾದರು, ಕೆಲವು ಪಾತ್ರೆ ಪಗಡುಗಳು, ಬಕೇಟು – ಚೆಂಬು, ಒಂದಿಷ್ಟು ಪುಸ್ತಕಗಳು ಇವಿಷ್ಟೇ ನನ್ನ ಜಗತ್ತು. ಅದನ್ನು ಒಂದು ಜಟಕಾ ಗಾಡಿಯಲ್ಲಿ ಹೇರಿಕೊಂಡು ಒಂದೇ ಸಾರಿಗೆಯಲ್ಲಿ ಸಾಗಿಸಿಬಿಡುವಷ್ಟು ದೊಡ್ಡ ಜಗತ್ತು! 

ಮಾಲಕರಿಗೆ, ನನಗೆ ಮನೆ ಒಪ್ಪಿಗೆ ಅಂತ ಹೇಳಿ ನಾನು ಪ್ರಮೋದ ಬರ್ತಾ ಇದ್ವಿ. ವಾಪಸ್ಸು ನಾವು ಹೋಗುವ ದಾರಿಯಲ್ಲೇ ಆ ಮನೆಯಿತ್ತು. ಮತ್ತೊಮ್ಮೆ ಕಣ್ತುಂಬಾ ನೋಡಿಕೊಂಡೆ. ಹಾಗೆ ಸ್ವಲ್ಪ ಮುಂದೆ ಹೋಗುತ್ತಲೇ ಹಿಂದಿನಿಂದ "ನಮಸ್ಕಾರ್ರೀ ಸಾವ್ಕಾರ್ರ" ಅನ್ನು ವ ದನಿ ಕೇಳಿ ಇಬ್ಬರೂ ನಿಂತೂ ಹಿಂತಿರುಗಿ ನೋಡಿದೆವು. ಒಬ್ಬ ಧೊತ್ರ, ದೊಗಳೆ ಅಂಗಿ ಹಾಕಿಕೊಂಡವನೊಬ್ಬ ನಮಗೆ ನಮಸ್ಕರಿಸಿದ. ನೋಡೋಕೆ ರೈತನ ಥರ ಕಾಣುತ್ತಿದ್ದ. ಪ್ರತಿಯಾಗಿ ನಮಸ್ಕಾರ ಮಾಡಿ, ಏನು ಎಂಬಂತೆ ನೋಡಿದೆ. 
"ನನ್ನ ಹೆಸ್ರು ನಿಂಗಪ್ಪ ಅಂತ ರೀ. ಇಲ್ಲೇ ನಿಮ್ಮ ಮನಿ ಹಿಂದ ದಿಬ್ಬದ ಮ್ಯಾಲೆ ನನ್ನ ಮನಿ ಐತಿ. ನೀವ ಏನ್ರೀ ಈ ಮನಿಗೆ ಬಾಡಿಗಿ ಬರೋವ್ರು?"
"ಹೌದು, ಯಾಕ?" ನನಗೆ ಈತ ಸ್ವಲ್ಪಅಧಿಕ ಪ್ರಸಂಗಿ ಎನಿಸಿದ.  
"ಯಾಕ್ರೀ ಸಾವಕಾರ್ರ, ನಿಮಗ ಜೀವನ ಬ್ಯಾಸರಾ ಅಗೈತೇನು? ನೋಡಾಕ ಇನ್ನೂ ಭಾಳ ಸಣ್ಣವ್ರು ಕಾಣ್ತೀರಿ" ಅಂದಾಗ, ನನಗೆ ಸಿಕ್ಕಾಪಟ್ಟೆ ಕೋಪ ಬಂತು.
"ಏನ್ ಹಂಗ ಮಾತಾಡಿದ್ರ! ಏನಂತ ಬಿಡಿಸಿ ಹೇಳು" ಅಂತ ಸ್ವಲ್ಪ ಕಡಕ್ ಆಗಿಯೇ ಕೇಳಿದೆ.
"ಸಿಟ್ಟಿಗೇಳಬ್ಯಾಡ್ರೀ… ಈ ಮನ್ಯಾಗ ಒಬ್ಬಾಕಿ ಹೆಣ್ಣ ಮಗಳು ಉರುಲು ಹಾಕ್ಕೊಂಡು ಸತ್ತಿದ್ಲು. ಅಕಿ ದೆವ್ವಾ ಆಗ್ಯಾಳ. ಈ ಮನೀಗೆ ಬಂದವ್ರಿಗೆಲ್ಲಾ ಕಾಡತಾಳ. ಈ ಮನಿಗೆ ಯಾರ ಬಂದ್ರೂ ಒಂದು ತಿಂಗಳದೊಳಗ ಖಾಲಿ ಮಾಡತಾರ. ಅಮವಾಸಿಗಂತೂ ಆ ದೆವ್ವದ ಕಾಟ ಇನ್ನೂ ಜಾಸ್ತಿ. ನಿಮ್ಮ ಒಳ್ಳೆದಕ್ಕ ಅಂತ ಹೇಳಿದೇರಿ, ತಪ್ಪು ತಿಳ್ಕೋಬ್ಯಾಡ್ರೀ" ಅಂತ ಸ್ವಲ್ಪ ಜಾಸ್ತಿನೇ ವಿನಯ ಪ್ರದರ್ಶಿಸಿದ.  ನನಗೆ ದೆವ್ವ ಭೂತಗಳಲ್ಲಿ ವಿಶ್ವಾಸವಿರದಿದ್ದರೂ ಅವನ ಮಾತು ಕೇಳಿ ಸ್ವಲ್ಪ ಮಟ್ಟಿಗೆ ಗಾಬರಿ ಆಯಿತು. ನಾನು ಪ್ರಮೋದ ಒಬ್ಬರಿಗೊಬ್ಬರು ಮುಖ ನೋಡಿಕೊಂಡೆವು. 
"ನೋಡೇಬಿಡೋಣ ಆ ದೆವ್ವಕ್ಕ ಎಷ್ಟು ಧೈರ್ಯ ಅದ ಅಂತ" ಅಂದೆನಾದರೂ ಒಳಗೊಳಗೆ ಸ್ವಲ್ಪ ಅಳುಕು ಇತ್ತು. ಅದಕ್ಕೇ ಇರಬೇಕು ಮಾಲೀಕರು ಇಷ್ಟು ಕಡಿಮೆ ಬಾಡಿಗೆಗೆ ಮನೆಯನ್ನು ನನಗೆ ಕೊಡುತ್ತಿರುವುದು ಅಂತ  ಖಾತ್ರಿಯಾಗಿತ್ತು. 
"ನಾ ಹೇಳೂದು ಹೇಳೀನಿ, ಇದರ ಮ್ಯಲೆ ನಿಮ್ಮ ಮರ್ಜಿ" ಅಂತ ಹೇಳಿ ನಿಂಗಪ್ಪ ಅಲ್ಲಿಂದ ಜಾಗ ಖಾಲಿ ಮಾಡಿದ. ಪ್ರಮೋದ "ನೀವೇನೂ ಹೆದರಬ್ಯಾಡ್ರೀ ಸರ್ರ ಆ ದೆವ್ವಾನ ಒಂದು ಕೈ ನೋಡೇಬಿಡೋಣ" ಅಂದಾಗ ನನಗೂ ಸ್ವಲ್ಪ ಧೈರ್ಯ ಬಂತು. 
 
ಅಂತೂ ಸೋಮವಾರ ಬಂದೇ ಬಿಡ್ತು. ಹೊಸ ಮನೆಗೆ ಹೋಗಿ ಆಯ್ತು. ಹಾಲು ಉಕ್ಕಿಸಿದ್ದೂ ಆಯ್ತು. ಆ ದೊಡ್ಡ ಮನೆಯಲ್ಲಿ ನನ್ನ ಚಿಕ್ಕ ಸಂಸಾರದಿಂದಾಗಿ ಮನೆಯಲ್ಲಾ ಖಾಲಿ ಖಾಲಿ ಅನಿಸುತ್ತಿತ್ತು. ಒಂದಿಷ್ಟು ಕುರ್ಚಿಗಳ ಅವಶ್ಯಕತೆಯೂ ಇದೆ ಅನ್ನಿಸಿತು. ಹೀಗೇ ಶುರುವಾಗಿತ್ತು ನನ್ನ ’ಸನ್ಯಾಸಿ ಸಂಸಾರ’! ಪ್ರಮೋದ ಹಾಗೂ ಇನ್ನೊಬ್ಬ ಶಿಷ್ಯ ದಿನಾಲೂ ನನ್ನ ಜೊತೆ ಮಲಗಲು ಬರುತ್ತಿದ್ದರು. ಜೊತೆಗೆ ಊಟವನ್ನೂ ತರುತ್ತಿದ್ದರು. ಹೀಗಾಗಿ ದೆವ್ವಗಳ ಭಯ ಅಷ್ಟಾಗಿ ಕಾಡಲಿಲ್ಲ. ಆ ನಿಂಗಪ್ಪನ ಮಾತು ತಲೆಯಲ್ಲಿ ಆಗಾಗ ಸುಳಿಯುತ್ತಿತ್ತು. ಅದರಲ್ಲೂ ಈ ಅಮವಾಸ್ಯೆಯಲ್ಲಿ ನೋಡಿ ಆ ದೆವ್ವದ ಕರಾಮತ್ತು ಅಂತ ಅವನು ಹೇಳಿದ್ದು ಇನ್ನೂ ಕಿವಿಯಲ್ಲಿ ಗುಂಯ್ಯ್ ಗುಡುತ್ತಿತ್ತು. ಈ ನಡುವೆ ಅಮ್ಮ ಹೊಸ ಮನೆ ನೋಡುವುದಕ್ಕೆ ಅಂತ ಒಂದೆರಡು ದಿನ ಬಂದವಳು ದೆವ್ವದ ಸುದ್ದಿ ಕೇಳಿ ವಾಪಸ್ಸು ಹುಬ್ಬಳ್ಳಿಗೆ ಹೊರಟು ಹೋದಳು. ಆ ಮನೆಯಲ್ಲಿ ಇರುವುದು ಬೇಡ ಅಂತಲೂ ಎಚ್ಚರಿಸಿದಳು. ನನಗೆಷ್ಟಂದ್ರೂ ಬಿಸಿ ರಕ್ತ. ಆ ದೆವ್ವಗಳ ಕರಾಮತ್ತು ಅನುಭವಿಸುವ ತವಕ! ಅಮವಾಸ್ಯೆಗೆ ಇನ್ನೂ ಮೂರು ದಿನಗಳಷ್ಟೇ ಬಾಕಿ ಇತ್ತು. 

ಅವತ್ತು ಅಮವಾಸ್ಯೆಯ ದಿನ ರಾತ್ರಿ ನಾನೊಬ್ಬನೇ ಮನೆಯಲ್ಲಿ ಏನೋ ಓದುತ್ತ ಕುಳಿತಿದ್ದೆ.  ಬೇಸಿಗೆಯ ರಾತ್ರಿಯಾದ್ದರಿಂದ ತಲಬಾಗಿಲು ತೆರೆದುಕೊಂಡೇ ಇಟ್ಟಿದ್ದೆ. ತಂಪಾದ ಗಾಳಿ ಹಿತವಾಗಿತ್ತು. ಅಷ್ಟರಲ್ಲೇ ಕರೆಂಟು ಹೋಗಬೇಕೆ. ಪ್ರಮೋದ ಇನ್ನೂ ಬಂದಿರಲಿಲ್ಲ. ಕಂದೀಲು ಹಚ್ಚಿ ಹಾಗೇ ಕೂತಿದ್ದವನಿಗೆ ಒಮ್ಮಿಂದೊಮ್ಮೆಲೆ ಗೆಜ್ಜೆಯ ಸಪ್ಪಳ ಕೇಳತೊಡಗಿತು. ಎದೆ ಝಲ್ ಅಂತು. ಯಾರೋ ನಡೆದಾಡಿದಂತೆಯೂ ಅನಿಸತೊಡಗಿತು. ಅದು ನನ್ನ ಭ್ರಮೆ ಇರಬಹುದೆ ಎಂದುಕೊಂಡವನಿಗೆ ಮತ್ತೆ ಮತ್ತೆ ಆ ಸಪ್ಪಳ ಕೇಳಿ ದುಗುಡ ಹೆಚ್ಚಾಯ್ತು. ನಿಂಗಣ್ಣ ಹೇಳಿದ್ದು ನಿಜವೇ ಅನ್ನಿಸತೊಡಗಿತು! ಅದರ ಜೊತೆಗೆ ಒಂದು ಹೇಣ್ಣುಮಗಳು ಗುಸು ಗುಸು ಮಾತಾಡುವ ಶಬ್ಧ ಸ್ಪಷ್ಟವಾಗಿ ಕೇಳತೊಡಗಿತು. ನಾನು ಬೆವರತೊಡಗಿದ್ದೆ. ಆದರೂ ಧೈರ್ಯ ಮಾಡಿ "ಯಾರದು" ಅಂತ ಜೋರಾಗಿ ಕೂಗಿದೆ. ಅಷ್ಟರಲ್ಲೇ ನನ್ನ ತಲೆಗೆ ಹಿಂದಿನಿಂದ ಯಾರೋ ಹೊಡೆದಂತಾಗಿ ಕಣ್ಣಿಗೆ ಕತ್ತಲೆ ಬಂದಿದ್ದೊಂದೇ ನೆನಪು. ಕಣ್ಣು ತೆಗೆದದ್ದು ಆಸ್ಪತ್ರೆಯಲ್ಲೇ!

ಮರುದಿನ ಡಾಕ್ಟರು ನಾನು ಆರಾಮ ಆದೆನೆಂದು ಮನೆಗೆ ಕಳಿಸಿದರು. ಪ್ರಮೋದನಿಗೆ ಅವತ್ತು ನಡೆದ ಘಟನೆಯನ್ನು ವಿವರಿಸಿದೆ. ಆತನದೂ ನನ್ನಂತೆಯೇ ಹುಂಬ ಧೈರ್ಯ. ಇವತ್ತಿನಿಂದ ಆ ದೆವ್ವನ ಒಂದು ಕೈ   ನೋಡೆಬಿಡುವ ಅಂತ ಇಬ್ಬರೂ ನಿರ್ಧರಿಸಿದ್ದೆವು. ಅವನ ಜೊತೆಗೆ ಅವನ ಸಹಪಾಠಿ ಪ್ರಶಾಂತನೂ ಬಂದಿದ್ದ. ಊಟ ಮಾಡಿ ದೆವ್ವಗಳಿಗೆ ಕಾಯುತ್ತಾ ಹರಟೆ ಹೊಡೆಯುತ್ತ ಕೂತಿದ್ದೆವು. ಸರಿ ಸುಮಾರು ಅದೇ ಸಮಯಕ್ಕೆ ಮತ್ತದೇ ಗೆಜ್ಜೆಗಳ ಶಬ್ಧ ಕೇಳತೊಡಗಿತು. ಮತ್ತೆ ಹೆಣ್ಣುಮಗಳ ಗುಸು ಗುಸು ಮಾತು. ಮಾತು ಸ್ಪಷ್ಟವಾಗಿರಲಿಲ್ಲವಾದರೂ, ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು. ಮೂವರು ಬೆವರತೊಡಗಿದೆವು. ಆದರೂ ಆ ಶಬ್ಧ ಎಲ್ಲಿಂದ ಬರುತ್ತಿದೆಯೆಂದು ಗಮನಿಸಿದಾಗ, ಅದು ಮಾಳಿಗೆಯಿಂದಲೇ ಅಂತ ಗೊತ್ತಾಯ್ತು. ಸ್ವಲ್ಪ ಹೊತ್ತಿಗೆ ಹೆಂಗಸು ಮಾತನಾಡುವ ಶಬ್ಧ ನಿಂತಿತಾದರೂ ಹೆಚ್ಚು ಕಡಿಮೆ ಬೆಳಗಿನವರೆಗೆ ಗೆಜ್ಜೆ ಶಬ್ಧ ಕೇಳುತ್ತಲೇ ಇತ್ತು. ಯಾರಿಗೂ  ಸರಿಯಾಗಿ ನಿದ್ದೆಯೂ ಹತ್ತಲಿಲ್ಲ. 

ಮರುದಿನ, ಇವತ್ತು ಏನೇ ಆಗಲಿ ಮಾಳಿಗೆ ಹತ್ತಿ ನೋಡೆ ಬಿಡೋಣ ಅಂತ ನಿರ್ಧಾರ ಮಾಡಿ ಬಿಟ್ಟೆವು. ಹಳೆ ಮನೆಯಾದ್ದರಿಂದ ಮಾಳಿಗೆ ಹತ್ತಲು ಮೆಟ್ಟಲುಗಳಿರಲಿಲ್ಲ. ಪ್ರಮೋದ ಅವತ್ತು ಸಂಜೆ ಒಂದು ನಿಚ್ಚಣಿಕೆ ವ್ಯವಸ್ಥೆ ಮಾಡಿದ. ಜೊತೆಗೊಂದು ಟಾರ್ಚು ಇಟ್ಟುಕೊಂಡೆವು. ರಾತ್ರಿ ಮತ್ತೆ ದೆವ್ವದ ಚೇಷ್ಟೆಗೆ ಕಾಯತೊಡಗಿದವರಿಗೆ ದೆವ್ವಗಳು ಮೋಸ ಮಾಡಲಿಲ್ಲ! ಕೂಡಲೇ ಹೊರಗೆ ಹೊಗಿ ನಿಚ್ಚಣಿಕೆ ಇಟ್ಟು ಒಬ್ಬೊಬ್ಬರಾಗಿ ನಾನು ಮತ್ತು ಪ್ರಮೋದ ನಿಚ್ಚಣಿಕೆ ಹತ್ತಿ ಮಾಳಿಗೆಯ ಮೇಲೆ ತಲುಪಿದೆವು. ಪ್ರಶಾಂತನಿಗೆ ಕೆಳಗೇ ಇರುವಂತೆ ಸೂಚಿಸಿದ್ದೆವು. ಯಾರಿಗ್ಗೊತ್ತು ನಾವು ಮೇಲೆ ಹೋದಮೇಲೆ ದೆವ್ವ ನಿಚ್ಚಣಿಕೆ ಅಪಹರಿಸಿದರೆ? ಎನ್ನುವುದು ನಮ್ಮ ತರ್ಕವಾಗಿತ್ತು! ಮಾಳಿಗೆಯ ಮೇಲೆ ಹತ್ತಿ ನಿಂತು ಟಾರ್ಚಿನಿಂದ ಅತ್ತಿತ್ತ ಬೆಳಕು ಹರಿಸಿ ನೋಡಿದವರಿಗೆ ದೆವ್ವದ ನೆಲೆ ಕಂಡಿತ್ತು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಗಲಿಕ್ಕೆ ಶುರು ಮಾಡಿದೆವು. ಅಲ್ಲಿ ಮಾಳಿಗೆಯ ಮೇಲೆ ಒಂದಿಷ್ಟು ಆಡು-ಕುರಿಗಳ ಕಟ್ಟಿದ್ದರು. ಅವು ಅಲುಗಾಡಿದಾಗಲೊಮ್ಮೆ ಅವುಗಳ ಕೊರಳಿಗೆ ಕಟ್ಟಿದ್ದ ಗೆಜ್ಜೆಗಳು ಸದ್ದು ಮಾಡುತ್ತಿದ್ದವು. ಇನ್ನೊ ಸ್ವಲ್ಪ ಮುಂದೆ ಹೋಗಿ ಗಮನಿಸಿದಾಗ ಒಂದಿಷ್ಟು ಹೆಂಗಸರು ನಮ್ಮ ಮನೆಯ ಹಿಂದಿನ ದಿಬ್ಬದ ಮೇಲೆ ಬಹಿರ್ಧೆಶೆಗೆ ಅಂತ ಕೂತವರು ಗಡಿಬಿಡಿಯಿಂದ ಜಾಗ ಕಿತ್ತದ್ದು ನಮ್ಮ ಗಮನಕ್ಕೆ ಬಂತು. ಕೆಳಗಿಳಿದು ಪ್ರಶಾಂತನಿಗೆ ದೆವ್ವದ ಮೂಲ ಹೇಳಿ ಎಲ್ಲರೂ ಸೇರಿ ಬಿದ್ದು ಬಿದ್ದು ನಕ್ಕಿದ್ದಾಯ್ತು. ಅಂತೂ ಅವತ್ತು ನಿರಂಬಳವಾಗಿ ನಿದ್ದೆ ಹೋದೆವು.

ಮರುದಿನ ವಿಚಾರಿಸಲಾಗಿ ಗೊತ್ತಾಗಿದ್ದು ಇಷ್ಟು. ಆ ಕುರಿಗಳು ನಿಂಗಪ್ಪನವು. ಅವನ ಮನೆ ದಿಬ್ಬದ ಮೇಲಿದ್ದುದರಿಂದ ನಮ್ಮ ಮನೆಯ ಮಾಳಿಗೆ ಅವನ ಮನೆಯ ಅಂಗಳಕ್ಕೆ ಸಮಾನವಾಗಿತ್ತು. ಬೆಳಗೆಲ್ಲ ಹೊರಗೆ ಮೇಯಿಸುತ್ತಿದ್ದವನು ರಾತ್ರಿ ಅವುಗಳನ್ನು ಕಟ್ಟಲು ನಮ್ಮ ಮನೆಯ ಮಾಳಿಗೆಯನ್ನು ಉಪಯೋಗಿಸುತ್ತಿದ್ದ. ಅವನ ಮನೆಯಲ್ಲಿ ಬಹಿರ್ದೆಶೆಗೆ ಅಂತ ಸಂಡಾಸು ಇರಲಿಲ್ಲವಾದ್ದರಿಂದ ಮನೆಯ ಮಂದಿ ರಾತ್ರಿ ಆ ದಿಬ್ಬದ ಬದಿಯೇ ತಮ್ಮ ಕ್ರಿಯೆಯನ್ನು ಮುಗಿಸುತ್ತಿದ್ದರು. ಹಾಗೆ ಕೂತಾಗ ತಮ್ಮೊಳಗೇ ಗುಸು ಗುಸು ಮಾತಾಡುತ್ತಿದ್ದರು. ಆ ಮನೆಗೆ ಯಾರದರೂ ಬಾಡಿಗೆ ಬಂದರೆ ಇದಕ್ಕೆಲ್ಲ ತಡೆಯಾಗುವುದೆಂದು ಹೀಗೆ ಎಲ್ಲರಿಗೂ ಹೆದರಿಸುತ್ತಿದ್ದನವನು. ಗೆಜ್ಜೆಯ ಶಬ್ಧ ಹಾಗೂ ಹೆಂಗಸರು ಮಾತನಾಡುವ ಶಬ್ಧ ಅವನು ಹೇಳುವುದಕ್ಕೆ ಪೂರಕವಾಗಿದ್ದು ಭಯ ಹುಟ್ಟಿಸುತ್ತಿದ್ದವು. ಇನ್ನೂ ಜಾಸ್ತಿ ಭಯ ಬರಿಸಲು ಅವತ್ತು ನನ್ನ ಮನೆಯೊಳಗೆ ಬಂದು ತಲೆಗೆ ಹೊಡೆದಿದ್ದ. ಆ ಹೊಡೆತ ಮಾರಣಾಂತಿಕವಾಗಿಲ್ಲದಿದ್ದರೂ, ಮೊದಲೇ ಭಯದಿಂದಿದ್ದ ನನಗೆ ಆಕಸ್ಮಿಕವಾಗಿ ತಲೆಗೆ ಬಿದ್ದ ಪೆಟ್ಟು ಅವತ್ತು ಎಚ್ಚರ ತಪ್ಪಿಸಿತ್ತು. ಅಂತೂ ಅವನಿಗೆ ಕರೆಸಿ ಬುದ್ಧಿ ಹೇಳಿ ಮಾಳಿಗೆ ತೆರವುಗೊಳಿಸಿದ್ದೂ ಅಲ್ಲದೆ, ಊರ ಪಂಚಾಯಿತಿಯ ಸಹಾಯದಿಂದ ಅವನ ಮನೆಗೊಂದು ಸಂಡಾಸು ಕಟ್ಟಿಸಿಕೊಟ್ಟೆವು. ಆತನಿಗೆ ತಪ್ಪಿನ ಅರಿವಾಗಿತ್ತು. ಅಂತೂ ಭೂತಗಳನ್ನು ನಾವು ಮನೆಯಿಂದ ಹಾಗು ಮನದಿಂದ ಓಡಿಸಿಯಾಗಿತ್ತು!    

******    

ಕನ್ನಡದ ಬರಹಗಳನ್ನು ಹಂಚಿ ಹರಡಿ

36 thoughts on “ದೆವ್ವದ ಮನೆ: ಗುರುಪ್ರಸಾದ ಕುರ್ತಕೋಟಿ

  1. ಸುಭಗ ಶೈಲಿಯ ಒಂದು ಅಚ್ಚುಕಟ್ಟಾದ, ನಿರೂಪಣೆ. ಭಯ ಮತ್ತು ಸಂಶಯವೇ ದೊಡ್ಡ ದೆವ್ವ… ಅಂದ ಹಾಗೆ ಆ ಯಮನೂರು ಯಾವುದು?   

     

    1. ಗುರುಗಳೆ, ನೀವು ಒದಿ ಮೆಚ್ಚಿದ್ದು ನನಗೆ ದೊಡ್ಡ ಬಹುಮಾನ!! ನವಲಗುಂದವೇ ಆ ಯಮನೂರು. ಲಕ್ಷ್ಮೇಶ್ವರದಲ್ಲೂ ಇಂತಹ ಅನುಭವ ಆಗಿತ್ತಂತೆ. ಅದರ ಬಗ್ಗೆ ಇನ್ನೊಮ್ಮೆ ಬರೆಯುವೆ 🙂

  2. ವೇರ್ ನೈಸ್!  ಪ್ರತ್ಯಕ್ಷ  ಖಂಢರು ಪ್ರಮಾಣಿಸಿ ನೋಡು ಸೂಕ್ತಿ ಬಹಳ ಸೂಟ್ ಅಗಥದ ಈ ಆರ್ಟಿಕಲ್ ಗ

  3. ಚೆಂದಾದ ನಿರೂಪಣೆ. ಮೂಢನಂಬಿಕೆ ತೊಲಗಿಸಲು
    ಉಪಯೋಗವಾಗಬಲ್ಲ ಬರಹ.

    1. ಅಖಿಲೇಶ್, ಕತೆಯ ನಿರೂಪಣೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು! ನೀವು ಕೆಲವು ವಾರಗಳ ಹಿಂದೆ ಬರೆದ ನಂಬಿಕೆ ಹಾಗೂ ಮೂಢನಂಬಿಕೆಯ ಬಗ್ಗೆ ಬರೆದ ಲೇಖನ ನೆನಪಾಯ್ತು.

  4. ದೊಡ್ಡಮನೆಯ ದೆವ್ವದ ಹಿಂದಿನ ರಹಸ್ಯವನ್ನು
    ಸ್ವಾರಸ್ಯಕರವಾಗಿ ನಿರೂಪಿಸಿದ್ದೀರಿ ಸರ್ .. ಅಭಿನಂದನೆಗಳು

    1. ಗವಿಸ್ವಾಮಿಗಳೆ, ದೆವ್ವದ ಮನೆಯ ರಹಸ್ಯದ ಸ್ವಾರಸ್ಯವನ್ನು ಆಸ್ವಾದಿಸಿದ್ದಕ್ಕೆ ಖುಷಿಯಾಯ್ತು 🙂

  5. ಮಸ್ತ ಅದರಿ ಕಥಿ. ಜನರನ್ನು ಹೆದರಿಸಲು ಈ ರಿತಿ ದೆವ್ವಗಳನ್ನು ಕೆಲ ಜನರು ಸೃಷ್ಟಿಸಿರ ಬಹುದು…ಸಂಶಯ ನಿವಾರಣೆ ಯಾಗದಿದ್ದರೆ, ಅದೆ ಒಂದು ಭೀತಿಯುಂಟಾಗುತ್ತಿತ್ತು. ಈ ದೆವ್ವಗಳ ಬಗ್ಗೆ ಪತ್ತೆ ಹಚ್ಚಿ, ಅವರನ್ನು ಸರಿಯಾದ ದಾರಿಗೆ ತಂದದ್ದು ತುಂಬಾ ಒಳ್ಳೆಯದನ್ನೆ ಮಾಡಿದರು.

     

    1. ಅನಂತ, ಹೌದು… ಎಷ್ಟೊ ಸಲ ಆ ತರಹದ ಹೆದರಿಕೆಯನ್ನು ನಾವು ಚಿಕ್ಕ ಮಕ್ಕಳಲ್ಲೂ ಹುಟ್ಟು ಹಾಕುತ್ತೇವೆ. ಅದು ಅವರ ಮನೋಬಲವನ್ನ ಕುಗ್ಗಿಸಿಬಿಡುತ್ತದೆ. ಕತೆ ಓದಿ ಮೆಚ್ಚಿದ್ದಕ್ಕೆ ಖುಷಿಯಾಯ್ತು!

  6. ನಿಂಗಪ್ಪನಂತೋರು ಇದ್ದೇ ಇರ್ತಾರಾ… ಆದರೆ ಹುಂಬು ಧೈರ್ಯ ಮಾಡಿ ಇರೋರು ನಿಮ್ಮಂಗ ಇರ್ಬೇಕು ನೋಡ್ರಿ ಸರ್…  ನಾನು ಮೊದ್ಲು ದೆವ್ವ ಅಂದ್ಕೊಂಡಿದ್ದೆ….. ಆದ್ರೆ ಇದು ನಿಂಗಪ್ಪನ ಕಳ್ಳ ದೆವ್ವ….

    1. ಹೌದು ಅಮರ್, ನಿಂಗಪ್ಪನಂಥಾ ಹೆದರ್ಸೊರೂ ಇರ್ತಾರೆ, ಹೆದ್ರೊರು ಇರ್ತಾರೆ ಮತ್ತೆ ಹೆದರಿಕೆಯನ್ನ ಮೆಟ್ಟಿ ನಿಲ್ಲೋ ನನ್ನ ಅಪ್ಪನಂಥೋರೂ ಇರ್ತಾರೆ! ಅಂದ ಹಾಗೆ ಆ ಥರ ಧೈರ್ಯ ಮಾಡಿದ್ದು ನನ್ನ ತಂದೆ, ನಾನಲ್ಲ… ಇದು ಅವರ ಕತೆ 🙂

  7. Very impressive writing! Impressive enough to drag us back to old memory lane. Enjoyed it thoroughly! !

  8. ಕಾಕಾ ಅವರ ಹತ್ರ ನಾವಿಬ್ರೂ ಕೂತ ಕೆಳಿದ್ವಿ ಈ ಕಥಿನ, ನೆನಪದ… ಅದಕ್ಕ ಮಸಾಲಿ ಅಗದಿ ಸರಿಯಾಗ್ಯದ… ಮತ್ತ ಹಿಂಗ ಬರೀರಿ… ಬರಕೋತ ಇರ್ರಿ… ಭಾಳ ಮಾಸ್ತ ಆಗಿಬಂದದ… Suppar! 

    1. ಹೌದು ವಿಟ್ಠಲ. ಅಂದ ಹಂಗ ನೀನು ಒಂದು ಕತಿ ಹೇಳಿದ್ದಿ. ಅದೂ ಮೈ ಝುಮ್ ಅನ್ನು ಅಂಥಾದ್ದ! ನಿನಗ ಕತಿ ಸೇರಿದ್ದು ಕೇಳಿ ಖುಷಿ ಆತು.

  9. ಚೆನ್ನಾಗಿದೆ. ನಿಜವೋ ಅಥವಾ ಕಲ್ಪನೆಯೋ ಎಂಬುದು ತಿಳಿಯದಷ್ಟು ಸರಾಗ ನಿರೂಪಣೆ. ನಡುನಡುವೆ ಹಾಸ್ಯ ಲೇಪ ಲೇಖನದ readability ಹೆಚ್ಚಿಸಿದೆ.

    1. ಮೂರ್ತಿ, ನಿಮಗೆ ಕತೆಯ ನಿರೂಪಣೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!

  10. nimma baravanigeyalli sakath power idhe gurugalle 🙂 nimma saralla padagala balake mana mututhade 🙂 adbutha

  11. ninna kathe…moudhyateyannu doora sarisuvudaralli samshayavilla. Nimma

    kathaloka ide reeti munduvariyali.

  12. ತಮ್ಮ ತಂದೆ ಶಶಿಕಾಂತ ಕುರ್ತಕೋಟಿಯವರ ಈ ಅನುಭವ ಮತ್ತು ಕಥನ ಎರಡೂ ರೋಚಕವಾಗಿವೆ.
    ಮನೆಯನ್ನು ಅತಿಕ್ರಮಿಸಿದ ಅತೀ ಬುದ್ಧಿವಂತನ ಪ್ರಹಸನ ಓದುಗನಲ್ಲಿ ಕುತೂಹಲ ಕಟ್ಟಿಕೊಟ್ಟಿದೆ.

Leave a Reply

Your email address will not be published. Required fields are marked *