ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ: ರೋಹಿತ್ ವಿ. ಸಾಗರ್


ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂ ಗಮಯ ಎಂದು ಶಾಂತಿ ಮಂತ್ರದಲ್ಲಿ ನಮ್ಮ ಹಿರಿಯರು ಬೆಳಕನ್ನು ಸತ್ಯಕ್ಕೆ, ಮನುಷ್ಯ ಜೀವನದ ಅಮೃತತ್ವಕ್ಕೆ ಹೋಲಿಸಿದ್ದಾರೆ. ಈ ಬೆಳಕು ಎಂಬುದು ಎಷ್ಟು ಬೆಲೆಬಾಳುತ್ತದೆ ಎಂದೇನಾದರು ನೀವು ಸರಳವಾಗಿ ತಿಳಿಯಬೇಕೆಂದರೆ, ಒಂದು ಕ್ಷಣ ಅದು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ? ಕತ್ತಲಲ್ಲಿ ನಮ್ಮ ಹಿತ್ತಲಲ್ಲಿ ಓಡಾಡಲೂ ಹಿಂಜರಿಯುತ್ತೇವೆ ನಾವು; ಅಂತಹದ್ದರಲ್ಲಿ ವಿಶ್ವದಲ್ಲೆಲ್ಲೂ ಬೆಳಕೇ ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನು ಊಹಿಸಲು ಅಥವಾ ಕಲ್ಪಿಸಲೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ನಾವು ಬೆಳಕಿನೊಂದಿಗೆ ಬೆರೆತು ಬಿಟ್ಟಿದ್ದೇವೆ, ಅದೇ ಪ್ರಕೃತಿಯ ನಿಯಮ ಕೂಡ. ಪ್ರಾಣಿಗಳ ಸಂತಾನೋತ್ಪತ್ತಿಯಿಂದ ಹಿಡಿದು ಅವುಗಳ ಆರೋಗ್ಯವಂತ ಬದುಕಿನವರೆಗೆ ಬೆಳಕಿನ ಪ್ರಭಾವ ಬಹುಮುಖ್ಯ ಪಾತ್ರವಹಿಸುತ್ತದೆ. ಇಂತಹ ಅತ್ಯಮೂಲ್ಯ  ಬೆಳಕಿನ ಬಗ್ಗೆ ತಿಳಿದುಕೊಳ್ಳುವುದು ಒಂದು ಕುತೂಹಲಕಾರಿ  ವಿಷಯ. ಇದೇ ಕುತೂಹಲದಲ್ಲಿ ಯೋಚಿಸುತ್ತಾ ಕುಳಿತಿರುವ ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆ ಬೆಳಕು ಎಂದರೇನು?, ಈ ಪ್ರಶ್ನೆಯನ್ನು  ಕೇಳಿದಷ್ಟೇ ವೇಗವಾಗಿ ಹಲವು ಉತ್ತರಗಳು ಬಂದು ಬಿಡುತ್ತವೆ. ಅದರಲ್ಲಿ ಹೆಚ್ಚಿನವರು ತುಂಬಾ ಸಲೀಸಾಗಿ ಹೇಳುವ ಉತ್ತರವೆಂದರೆ ನಮ್ಮ ಸುತ್ತಲೂ ಕಾಣುತ್ತಿರುವುದೆಲ್ಲವೂ ಬೆಳಕೇ ….. ಎಂದು. ಆದರೆ ಗಮನಿಸಿ ನಿಜವಾಗಿಯೂ ನಾವು ನಮ್ಮ ಸುತ್ತಲೂ ಕಾಣುತ್ತಿರುವುದು ಬೆಳಕನ್ನಲ್ಲ, ಭುವಿಯ ವಾತಾವರಣವನ್ನು; ಅದು ನಮಗೆ ಕಾಣಿಸುವಂತೆ ಮಾಡುತ್ತಿರುವ ಅಗೋಚರ ಶಕ್ತಿಯನ್ನೇ ಬೆಳಕು ಎಂದು ಕರೆಯುವುದು. 

ನಾವು ಏನನ್ನಾದರೂ ಓದುತ್ತಿದ್ದೇವೆ ಅಥವಾ ಯಾರನ್ನಾದರೂ ನೋಡುತ್ತಿದ್ದೇವೆ ಎಂದರೆ ಅದು ಬೆಳಕಿನ ಸಹಾಯವಿಲ್ಲದೆ ಸಾಧ್ಯವಾಗಲಾರದು. ಇನ್ನೂ ಹೇಳಬೇಕೆಂದರೆ, ನಮ್ಮ ಕವಿಗಳು ನಿಸರ್ಗದ ಕುರಿತು ಪೇಜುಗಟ್ಟಲೆ ಕವನಗಳನ್ನು ಗೀಚುತ್ತಾರಲ್ಲಾ ಅದಕ್ಕೂ ಈ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ಗುಲಾಬಿಯ ಕೆಂಪು ನಿತ್ಯ ಹರಿದ್ವರ್ಣದ ಕಂಪು, ಭತ್ತದೆಲೆಯ ಹಸಿರು, ಅದರ ಬುಡದ ಕೆಸರು ಇದೆಲ್ಲವನ್ನೂ ಕತ್ತಲೆಯ ಕರಿಛಾಯೆಯೇ ನುಂಗಿಬಿಡುತ್ತಿತ್ತು, ಬಣ್ಣ ಬಣ್ಣದ ಲೋಕವೆಂಬುದು ಒಂದು ಅರ್ಥವಿಲ್ಲದ ಪದವಾಗಿ ಬಿಡುತಿತ್ತು. ಆದ್ದರಿಂದಲೇ ಬೆಳಕಿಗೆ ಪುರಾತನ ಕಾಲದಿಂದಲೂ ಅಪಾರ ಮನ್ನಣೆ ದೊರಕುತ್ತಿರುವುದು. ಜಗತ್ತಿನ ಅಪೂರ್ವ ಸೌಂದರ್ಯವನ್ನು ಬಿಚ್ಚಿಡುವ ಮಾಧ್ಯಮವಾದ್ದರಿಂದಲೋ ಏನೋ, ಈ ಬೆಳಕಿನ ಬಗ್ಗೆ ಹಲವು ಚಿಂತನೆಗಳು ಬಹಳ ಹಿಂದಿನ ಕಾಲದಿಂದಲೇ ನಡೆಯ ತೊಡಗಿದ್ದವು. ಗ್ರೀಕ್ ಮುಂತಾದ ದೇಶಗಳಲ್ಲಿ ಕ್ರಿಸ್ತಪೂರ್ವದಲ್ಲಿಯೇ ಪ್ಲೇಟೋ ಮತ್ತು ಅರಿಸ್ಟಾಟಲ್ ತಮ್ಮ ಹಲವು ಸಿದ್ಧಾಂತಗಳಲ್ಲಿ ಬೆಳಕಿನ ಸ್ವರೂಪವನ್ನು ವಿವರಿಸಲು ಪ್ರಯತ್ನಿಸಿದ್ದರು. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಭಾರತದ ಆರ್‍ಯಭಟ, ವರಾಹಿಮಿಹಿರಾ ಮುಂತಾದ ಜ್ಯೋತಿರ್ವಿಜ್ಞಾನಿಗಳು ಸಹ ಈ ಬೆಳಕಿನ ಹಿಂದೆ ಬಿದ್ದಿದ್ದರು ಎನ್ನುತ್ತವೆ ಐತಿಹ್ಯಗಳು. ನಂತರದ ದಿನಗಳಲ್ಲಿ ಡಿಕಾರ್ಟೆ ಎಂಬ ಭೌತಶಾಸ್ತ್ರಜ್ಞ ಬೆಳಕಿನ ರಚನೆಯ ಬಗ್ಗೆ ಮೊದಲ ಬಾರಿ ಸಿದ್ಧಾಂತವೊಂದರಲ್ಲಿ ಬೆಳಕು ಎಂಬುದು ಸಣ್ಣ ಸಣ್ಣ ಕಣಗಳಿಂದ ಮಾಡಲ್ಪಟ್ಟ ಒಂದು ಪ್ರವಾಹ ಎಂದು ಪ್ರತಿಪಾದಿಸುತ್ತಾನೆ. ಅದೇ ಸಿದ್ಧಾಂತವನ್ನು ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನ್ ಸ್ವಲ್ಪ ಮಾರ್ಪಡಿಸಿ ನ್ಯೂಟನ್ನನ ಕಣ ಸಿದ್ಧಾಂತ (ಕಾರ್ಪಸ್ಕುಲರ್ ಥಿಯರಿ)ದ ಮೂಲಕ ಬೆಳಕು ’ಕಾರ್ಪುಸ್ಕಲ್’ಗಳೆಂಬ ಕಣಗಳಿಂದ ಮಾಡಲ್ಪಟ್ಟಿದೆ ಎಂದೂ, ಅವುಗಳು ಮತ್ತು ಗಾಜಿನಂತ ವಸ್ತುಗಳ ಮಧ್ಯೆ ಇರುವ ಆಕರ್ಷಣೆ ಶಕ್ತಿಯಿಂದ ಬೆಳಕು ಅಂತಹ ವಸ್ತುಗಳ ಮೂಲಕ ಹಾದು ಹೋಗುತ್ತದೆಂದೂ, ಕನ್ನಡಿಯಂತಹ ವಸ್ತುವಿನ  ಜೊತೆ ಇರುವ ವಿಕರ್ಷಣೆಯಿಂದ ಅದು ಪ್ರತಿಫಲನ ಹೊಂದುತ್ತದೆ ಎಂದೂ ಪ್ರತಿಪಾದಿಸುತ್ತಾನೆ. ಆದರೆ ಮುಂದೆ ಅವನೇ ಮಾಡಿದ ’ನ್ಯೂಟನ್‌ನ ಉಂಗುರ’ಗಳಂತಹ ಕೆಲ ಬೆಳಕಿನ ಪ್ರಯೋಗಗಳಿಂದ ಈ ಸಿದ್ಧಾಂತದಲ್ಲಿ ದೋಷಗಳಿರುವುದು ಗೊತ್ತಾಗುತ್ತದೆ. ನಂತರ ಬಂದ ಹೈಗೆನ್ಸ್ ಎಂಬಾತ ಬೆಳಕು ತರಂಗಗಳ ರೂಪದಲ್ಲಿರುತ್ತದೆ ಮತ್ತು ತನ್ನ ಚಲನೆಗೆ ವಿಶ್ವದೆಲ್ಲೆಡೆ ಪಸರಿಸಿರುವ ಅಗೋಚರ  ’ಈಥರ್’ ಎಂಬ ಮಾಧ್ಯಮವನ್ನು ಬಳಸಿಕೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಆದರೆ ಈ ಸಿದ್ಧಾಂತವೂ ಪ್ರಾಯೋಗಿಕವಾಗಿ ಈಥರ್ ಮಾಧ್ಯಮದ ಇರುವಿಕೆಯನ್ನು ತೋರಿಸಿಕೊಡುವಲ್ಲಿ ಸೋಲೊಪ್ಪಿಕೊಳ್ಳುತ್ತದೆ. ಜೊತೆಗ ಬೆಳಕು ನಿರ್ವಾತದಲ್ಲಿ ಅಂದರೆ ಯಾವುದೇ ಮಾಧ್ಯಮವಿಲ್ಲದಿದ್ದಲ್ಲಿಯೂ ಹೇಗೆ ಚಲಿಸುತ್ತದೆ ಎಂಬುದಕ್ಕೆ ಆ ಸಿದ್ಧಾಂತ ವಿವರಣೆ ನೀಡುವುದಿಲ್ಲ.  ಕಡೆಗೆ ಮ್ಯಾಕ್ಸವೆಲ್ ಎಂಬಾತ ಬೆಳಕು ಒಂದು ವಿದ್ಯುದ್ಕಾಂತೀಯ ತರಂಗವೆಂದೂ ಅದರಲ್ಲಿ ವಿದ್ಯುತ್ ಮತ್ತು ಕಾಂತಕ್ಷೇತ್ರಗಳ ಪ್ರಭಾವ ಇರತ್ತವೆಂದೂ ಅವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ಚಲಿಸಬಲ್ಲವೆಂದೂ ಪ್ರತಿಪಾದಿಸುತ್ತಾನೆ. ಅಲ್ಲದೆ ಹೆನ್ರಿ ಹರ್ಡ್ಸ್ ಎಂಬಾತ ಈ ಸಿದ್ಧಾಂತಕ್ಕೆ ಪ್ರಾಯೋಗಿಕ ನಿದರ್ಶನವನ್ನು ಮಾಡಿ ತೋರಿಸುವುದರ ಜೊತೆಗೇ ವಿದ್ಯುತ್ ಮತ್ತು ಕಾಂತಕ್ಷೇತ್ರಗಳನ್ನು ಬಳಸಿ ವಿದ್ಯುದ್ಕಾಂತೀಯ ತರಂಗಗಳನ್ನು ಉತ್ಪಾದಿಸಬಹುದು ಎಂದೂ ತೋರಿಸಿಕೊಟ್ಟನು. ಹಾಗಾಗಿ ಬೆಳಕನ್ನು ಒಂದು ವಿದ್ಯುದ್ಕಾಂತೀಯ ತರಂಗವಾಗಿ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಯಿತು. ಆದರೆ ಕೆಲವೊಂದಿಷ್ಟು ಪ್ರಯೋಗಗಳಲ್ಲಿ ಬೆಳಕು ಕಣಗಳ ಪ್ರವಾಹದಂತೆ, ಇನ್ನೂ ಕೆಲವಷ್ಟರಲ್ಲಿ ವಿದ್ಯುದ್ಕಾಂತೀಯ ತರಂಗಗಳಂತೆ ವರ್ತಿಸುತ್ತಿರುವುದನ್ನು ಮ್ಯಾಕ್ಸ್ ಪ್ಲಾಂಕ್ ಎಂಬಾತ ಗಮನಿಸಿ, ಬೆಳಕಿಗೆ ಕೆಲವೊಮ್ಮೆ ತರಂಗಗಳಂತೆಯೂ ಮತ್ತೆ ಕೆಲವೊಮ್ಮೆ ಕಣಗಳಂತೆಯೂ ವರ್ತಿಸುವ ಇಬ್ಬಗೆಯ ಸ್ವಭಾವ ಅಥವಾ ದ್ವಂದ್ವ ಸ್ವಭಾವ ಇದೆಯೆಂದು ತೋರಿಸಿಕೊಟ್ಟನು. ಅಲ್ಲದೆ ಆ ಬೆಳಕಿನ ಕಣಗಳು ನಿರ್ದಿಷ್ಟ ಶಕ್ತಿಯ ಪ್ಯಾಕೆಟ್ಟುಗಳಾಗಿವೆ ಎಂದು ಪ್ರತಿಪಾದಿಸಿದನು. ಅವಕ್ಕೆ  ಶಕ್ತಿಯ ಪ್ಯಾಕೆಟ್ಟುಗಳೆಂಬ ಅರ್ಥ ಬರುವ ’ಫೋಟಾನ್ ಅಥವಾ ಕ್ವಾಂಟಮ್’ಗಳೆಂಬ ಹೆಸರನ್ನು ನೀಡಿದನು. ಈ ಫೋಟಾನ್ ಸಿದ್ಧಾಂತದಿಂದಲೇ ದ್ಯುತಿ ವಿದ್ಯುತ್ ಪರಿಣಾಮವನ್ನು ಐನ್‌ಸ್ಟೈನ್ ಯಶಸ್ವಿಯಾಗಿ ವಿವರಿಸಿ ನೋಬೆಲ್ ಪಡೆದದ್ದು. ಒಟ್ಟಾರೆಯಾಗಿ ಬೆಳಕಿನ ಈ ದ್ವಂದ್ವ ಸ್ವಭಾವದಿಂದ ಅದರ ನಡತೆಯನ್ನು ನಾವು ಕೆಲವೊಮ್ಮೆ ಸಂಧರ್ಭಕ್ಕನುಗುಣವಾಗಿ ಮ್ಯಾಕ್ಸ್‌ವೆಲ್ಲನ ವಿದ್ಯುದ್ಕಾಂತೀಯ ಸಿದ್ಧಾಂತದಿಂದಲೂ, ಇನ್ನೂ ಕೆಲವೊಮ್ಮೆ ಪ್ಲಾಂಕನ ಕ್ವಾಂಟಮ್ ಸಿದ್ಧಾಂತದಿಂದಲೂ ಅರ್ಥಮಾಡಿ ಕೊಳ್ಳಬೇಕಾಗುತ್ತದೆ.

ಈ ತೆರನಾದ ದ್ವಂದ್ವ ಸ್ವಭಾವದಿಂದಾದ ಬೆಳಕು ಅಪಾರ ವೇಗವಾಗಿ ಚಲಿಸುವ ಗುಣವನ್ನು ಹೊಂದಿದೆ. ವಿಶ್ವದಲ್ಲಿ ಅದಕ್ಕಿಂತ ವೇಗವಾಗಿ ಚಲಿಸುವ ಭೌತಿಕ ವಸ್ತು ಇನ್ನೊಂದಿಲ್ಲ ಎನ್ನಬಹುದು. ಆದ್ದರಿಂದ ಆ ವೇಗದ ಮೌಲ್ಯವನ್ನು ತಿಳಿಯಲು ಹಲವು ವಿಜ್ಞಾನಿಗಳು ತಮ್ಮ ಜೀವಮಾನವನ್ನೇ ಮುಡಿಪಿಟ್ಟಿದ್ದರಾದರೂ, ಅಮೇರಿಕಾದ ಮ್ಯೆಕೆಲ್‌ಸ್‌ನ್ ಎಂಬಾತ ಯಶಸ್ವಿಯಾಗಿ ಬೆಳಕು ನಿರ್ವಾತದಲ್ಲಿ ಸೆಕೆಂಡಿಗೆ ಹೆಚ್ಚು ಕಡಿಮೆ ಎರೆಡು ಲಕ್ಷದ ತೊಂಬತ್ತೊಂಬತ್ತು ಸಾವಿರ ಕಿಲೋಮೀಟರ್ ದೂರವನ್ನು ಕ್ರಮಿಸಬಲ್ಲದು ಎಂಬುದನ್ನ ಪ್ರಾಯೋಗಿಕವಾಗಿ ಕಂಡುಹಿಡಿಯುತ್ತಾನೆ. ಅದೇ ಮೌಲ್ಯವನ್ನೇ ನಾವು ಇಂದಿಗೂ ಯಶಸ್ವಿಯಾಗಿ ಉಪಯೋಗಿಸುತ್ತಿದ್ದೇವೆ. ಇಲ್ಲೊಂದು ಅಚ್ಚರಿಯ ವಿಷಯವೆಂದರೆ, ನಮ್ಮ ಕೆಲವು ಇತಿಹಾಸಕಾರರು ಹೇಳುವಂತೆ ಕ್ರಿ.ಪೂ.೧೫೦೦ರ ಸುಮಾರಿನಲ್ಲಿ ರಚಿತವಾದ ಋಗ್ವೇದದಲ್ಲಿರುವ, ಸೂರ್ಯನನ್ನು ಆರಾಧಿಸುವ ತಥಾಚ ಸ್ಮರ್ಯತೇ ಯೋಜನಾನಮ್ ಸಹಸ್ರಂ ದ್ವೇದ್ವೇ ಶತೇ, ದ್ವೇಚಯೋಜನೇ ಏಕೇನ ನಿಷಾರ್ಧೇನ ಕ್ರಮಮಾಣ ನಮೋಸ್ತುತೆ ಎಂಬ ಶ್ಲೋಕವನ್ನು ಸರಿಯಾಗಿ ವಿವರಿಸಿ, ಸಮೀಕರಿಸಿದಲ್ಲಿ ಬೆಳಕಿನ ವೇಗದ ಮೌಲ್ಯ ಸುಮಾರು ಮೂರು ಲಕ್ಷದ ಹತ್ತೊಂಬತ್ತು ಸಾವಿರ ಎಂದು ತಿಳಿಯುತ್ತದಂತೆ. ಇದು ಮ್ಯಾಕ್ಸ್‌ವೆಲ್ ನೀಡಿದ ಮೌಲ್ಯಕ್ಕೆ ಹೆಚ್ಚು ಕಡಿಮೆ ಹತ್ತಿರದಲ್ಲಿದೆ, ಇದು ವೈಜ್ಞಾನಿಕವಾಗಿ ವಿಶ್ವವೇ ಹಿಂದುಳಿದ ಕಾಲದಲ್ಲಿದ್ದ ಪುರಾತನ ಭಾರತೀಯರ ಅಪಾರ ಜ್ಞಾನ ಸಂಪತ್ತಿಗೆ ಹಿಡಿದ ಕನ್ನಡಿಯಾಗಿದೆ.

ಇದಿಷ್ಟೂ ಬೆಳಕಿನ ಸ್ವರೂಪದ ಬಗ್ಗೆಯಾದರೆ ಸುತ್ತಲಿನ ವಸ್ತುಗಳು ನಮಗೆ ಕಾಣುವ ಪರಿ ಮತ್ತೊಂದು ವೈಜ್ಞಾನಿಕ ಹಂದರ. ಒಂದು ಚಕ್ರವನ್ನು ತೆಗೆದುಕೊಳ್ಳೋಣ ಅದರ ಮೇಲ್ಮೈಯನ್ನ  ತ್ರಿಜ್ಯಗಳಿಂದ ಏಳು ಭಾಗಗಳನ್ನಾಗಿಸಿ ನೇರಳೆ, ದಟ್ಟ ನೀಲಿ, ನೀಲಿ, ಹಸಿರು, ಹಳದಿ, ಕೇಸರಿ ಮತ್ತು ಕೆಂಪು ಬಣ್ಣಗಳನ್ನು ತಲಾ ಒಂದೊಂದು ಭಾಗಗಳಿಗೆ ಹಚ್ಚಿ ಅದನ್ನು ಅದರ ಕೇಂದ್ರದಲ್ಲಿ ಹಿಡಿದು ವೇಗವಾಗಿ ತಿರುಗಿಸೋಣ. ಅಬ್ಬಾ ಏನಚ್ಚರಿ…! ಬಣ್ಣ ಬಣ್ಣವಾಗಿ ಕಾಣಬೇಕಿದ್ದ ಆ ಚಕ್ರ ಸಂಪೂರ್ಣ ಬಿಳಿ ಬಣ್ಣದ್ದಾಗಿ ಕಾಣುತ್ತಿದೆ. ಅಂದರೆ ಮೇಲೆ ಹೇಳಿದ ಬಣ್ಣಗಳು ವೇಗದಲ್ಲಿ ಸಮ್ಮಿಳಿತಗೊಂಡರೆ ಬಿಳಿ ಬಣ್ಣವಾಗಿ ಕಾಣಿಸಿಬಿಡುತ್ತವೆ ಎಂದಾಯಿತಲ್ಲವೆ. ಹೌದು ವಿಶ್ವದಲ್ಲಿರುವ ಎಲ್ಲಾ ಬಣ್ಣದ ಚಿತ್ತಾರಗಳೂ ನಮ್ಮ ಕಣ್ಮನ ಸೇರುವಂತೆ ಮಾಡುತ್ತಿರುವ ಬೆಳ್ಳಗೆ ಕಾಣುವ ಬೆಳಕೂ ಸಹ ಮೇಲೆ ಹೆಸರಿಸಿದ ಏಳು ಬಣ್ಣಗಳಿಂದ ಮಾಡಲ್ಪಟ್ಟಿದೆ. ಆದರೆ ಅವುಗಳ ಚಲನೆಯ ವೇಗ ಅತಿಯಾದ್ದರಿಂದ ಅವುಗಳ ಮಿಶ್ರಣ ಬಿಳಿ ಬಣ್ಣವಾಗಿ ನಮ್ಮ ಕಣ್ಣಿಗೆ ಕಾಣಿಸುತ್ತದೆ (ಇದನ್ನು ಮೊದಲು ಜಗತ್ತಿಗೆ ವಿವರಿಸಿದವನು ನ್ಯೂಟನ್). ಹಗಲಿನಲ್ಲಿ ಸೂರ್ಯನಿಂದ, ಉಳಿದ ಹೊತ್ತಿನಲ್ಲಿ ದೀಪಗಳಿಂದ ವಿದ್ಯುತ್ ದೀಪಗಳಿಂದ ಹೊರಡುವ ಬೆಳಕಿನ ಕಿರಣಗಳು ಯಾವುದೇ ವಸ್ತುವಿನ ಮೇಲೆ ಬಿದ್ದ ನಂತರ, ಅದರ ಬಣ್ಣಕ್ಕೆ ಸಮಾನ ತರಂಗ ದೂರ ಆಥವಾ ಬಣ್ಣ ಹೊಂದಿರುವ ಆ ಕಿರಣದ ಭಾಗಗಳು ಪ್ರತಿಫಲನ ಹೊಂದಿ ನಮ್ಮ ಕಣ್ಣನ್ನು ಸೇರುತ್ತವೆ. ಕಣ್ಣಿನೊಳಗಿರುವ ’ರೆಟಿನಾ’ ಎಂಬ ಪರದೆಯು ಹಲವಾರು ದ್ಯುತಿಸಂವೇದಕಗಳಿಂದ ಮಾಡಲ್ಪಟ್ಟಿದೆ. ಅವುಗಳ  ಮೇಲೆ ಬಿದ್ದ ಬೆಳಕಿನನ್ವಯ ಅವು ಮೆದುಳಿಗೆ ವಿದ್ಯುತ್ ಸಂಜ್ಞೆಗಳನ್ನು ಕಳಿಸುತ್ತವೆ ಹಾಗು ಅದನ್ನು ನಮ್ಮ ಮೆದುಳು ಅರ್ಥೈಸಿಕೊಳ್ಳುತ್ತದೆ. ಈ ರೀತಿಯಾಗಿ ಬೆಳಕು ನಮಗೆ ವಿಶ್ವದ ಸೌಂದರ್ಯವನ್ನು ಸವಿಯಲು ವೇದಿಕೆಯನ್ನೊದಗಿಸುತ್ತದೆ.

ನಿಜ ಜೀವನದಲ್ಲಿಯೇ ಇಷ್ಟೊಂದು ವಿಸ್ಮಯದ ಗೂಡಾಗಿರುವ ಬೆಳಕಿನ ರಹಸ್ಯ ಅಕ್ಷಯ ಪಾತ್ರೆಯಂತೆ ಹುಡುಕಿದಷ್ಟೂ ಮುಗಿಯುವುದೇ ಇಲ್ಲ. ಪಾಪ ಸೂರ್‍ಯ ಹಗಲು ಹೊತ್ತಿನಲ್ಲಿ ನಮಗೆ ಬೆಳಕನ್ನು ಧಾರಾಕಾರವಾಗಿ ನೀಡಿಬಿಡುತ್ತಾನಾದ್ದರಿಂದ ಅದರ ಬೆಲೆ ನಮಗೆ ಗೊತ್ತಾಗುವುದಿಲ್ಲ. ನಿಮಗೆ ನಿಜವಾಗಿಯೂ ಅದು ಗೊತ್ತಾಗುವುದು ನೀವು ಬೆಳಕಿಗಾಗಿ ಬಳಸಿದ ವಿದ್ಯುತ್ತಿನ ಬಿಲ್ಲು ನಿಮ್ಮ ಕೈ ಸೇರಿದಾಗ ಮಾತ್ರ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
prashasti
9 years ago

Chendiddu (y). Mahitipoorna article

Rohith V Sagar
Rohith V Sagar
9 years ago
Reply to  prashasti

Thank you bro 🙂

suhas.kumsi
suhas.kumsi
9 years ago

My dear friend u r doing good job…. continue writing like dis….
god bless u.

3
0
Would love your thoughts, please comment.x
()
x