ಗಾಂಧಿಯನ್ನು ಕೊಂದವರ್‍ಯಾರು?:ಅಖಿಲೇಶ್ ಚಿಪ್ಪಳಿ ಅಂಕಣ


ಭೌತಿಕವಾದ ಗಾಂಧಿಯನ್ನು ಕೊಂದಿದ್ದು ನಾಥುರಾಮ್ ಗೋಡ್ಸೆ. ಗಾಂಧಿಯನ್ನು ಕೊಂದ ತಾನು ನೇಣಿಗೇರಿ ಸತ್ತ. 600 ಚಿಲ್ಲರೆ ರಾಜರನ್ನು ಹೊಂದಿದ ಪುರಾತನ ಭಾರತವನ್ನು ಒಡೆದಾಳಿ, ಗುಲಾಮಗಿರಿಗೆ ತಳ್ಳಿ ಮೆರೆದಿದ್ದು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆಯಲಾಗುವ ಬ್ರೀಟಿಷರ ಹೆಗ್ಗಳಿಕೆ. ದೇಶಾಭಿಮಾನ ಮತ್ತು ಸ್ವಾಭಿಮಾನ ಮೇಳೈಸಿ, ಗುಲಾಮತನಕ್ಕೆ ಒಗ್ಗಿಹೋಗಿದ್ದ ಲಕ್ಷಾಂತರ ಭಾರತೀಯರಿಗೆ ಸ್ವದೇಶಿ, ಸ್ವಾಭಿಮಾನ, ಸ್ವಾತಂತ್ರ್ಯವೆಂಬ ಊರುಗೋಲುಗಳನ್ನು ನೀಡಿ ಎಬ್ಬಿಸಿ ನಿಲ್ಲಿಸಿದವರಲ್ಲಿ ಗಾಂಧಿ ಪ್ರಮುಖರು. ಇದಕ್ಕಾಗಿಯೇ ಗಾಂಧಿಯನ್ನು ಇಡೀ ದೇಶ ರಾಷ್ಟ್ರಪಿತನೆಂದು ಒಪ್ಪಿಕೊಂಡಿದೆ. ಸ್ವಾತಂತ್ರ್ಯ ಪಡೆದ ನಂತರದಲ್ಲಿ ರಚಿತವಾದ ಸರ್ಕಾರಗಳ ಧೋರಣೆಗಳು ಇನ್ನಿಲ್ಲದಂತೆ ಬದಲಾದವು. ಗಾಂಧಿ ಹೇಳಿದ್ದು, ಹಳ್ಳಿಗಳೇ ದೇಶದ ಜೀವಾಳ, ರೈತನೇ ದೇಶದ ಬೆನ್ನೆಲುಬು, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ, ಔಧ್ಯಮೀಕರಣ, ಕೈಗಾರಿಕರಣ ಇವುಗಳು ಮುಂದೊಂದು ದಿನ ಈ ದೇಶಕ್ಕೆ ಶಾಪವಾಗಿ ಪರಿಣಮಿಸಲಿವೆ. ಬೃಹತ್ ಕೈಗಾರಿಕೆಗಳು, ಬೃಹತ್ ಆಣೆಕಟ್ಟುಗಳು ಈ ದೇಶದ ಅವಶ್ಯಕತೆಗಳಲ್ಲ, ಬದಲಿಗೆ ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಲಿವೆ. ರಾಮರಾಜ್ಯವೆಂದರೆ ಹೆಣ್ಣು ಮಕ್ಕಳು ಸರಿರಾತ್ರಿಯಲ್ಲೂ ಯಾರ ಭಯವಿಲ್ಲದೆ ಹೊರಗೆ ಏಕಾಂಗಿಯಾಗಿ ತಿರುಗಾಡುವಂತಹ ಸ್ಥಿತಿ. ಹೀಗೆ ಹತ್ತು ಹಲವು ದೇಶ ಕಟ್ಟುವ ವಿಚಾರಗಳನ್ನು ಹೇಳಿದ್ದರು. ಅವರಂತೂ ನುಡಿದಂತೆ ನಡೆದು ತೋರಿಸಿದರು. ಗಾಂಧಿ ಕೊಂದದು ಎಷ್ಟು ದೊಡ್ಡ ಅಪರಾಧವೋ ಅದಕ್ಕಿಂತ ಸಾವಿರ ಪಟ್ಟು ಹೆಚ್ಚು ಅಪರಾಧ ಗಾಂಧೀಜಿಯ ಆದರ್ಶಗಳನ್ನು ಕೊಲ್ಲುವುದಾಗಿದೆ. 

ನಮ್ಮನ್ನಾಳುವ ಸರ್ಕಾರಗಳು ಪ್ರತಿನಿತ್ಯ ಗಾಂಧಿಯನ್ನು ಕೊಲ್ಲುತ್ತಿವೆ. ಪ್ರತಿವರ್ಷ ಗಾಂಧಿಜಯಂತಿಯನ್ನು ಆಚರಣೆ ಮಾಡಿ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಪ್ರತಿಯೊಬ್ಬ ಜನಸೇವಕನೂ ಕರೆ ನೀಡುತ್ತಾನೆ. ಸಲಹೆ ನೀಡುತ್ತಾನೆ. ಆದರೆ ಕೃತಿಯಲ್ಲಿ ಆಚರಿಸುವುದಿಲ್ಲ. ರೈತರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡು ಕೈಗಾರಿಕೆಗಳಿಗೆ ನೀಡುವ ಕಾನೂನನ್ನೇ ಸರ್ಕಾರಗಳು ರೂಪಿಸುತ್ತವೆ. ರೈತನಿಗಾಗಿ ಹುಸಿಕಂಬನಿಗರೆಯುವುದನ್ನು ಬಿಟ್ಟರೆ ಬೇರೇನು ಸಾಧಿಸಿಲ್ಲ. ಮೊನ್ನೆ ತೋಟಗಾರಿಕಾ ಇಲಾಖೆಯ ಹಿರಿಯ ಮಂತ್ರಿಯೊಬ್ಬರು ನನ್ನ ಕೈಯಲ್ಲಿರುವುದು ಕೆಲಸಕ್ಕೆ ಬಾರದ ಖಾತೆ ಎಂದಿದ್ದನ್ನು ರಾಜ್ಯಮಟ್ಟದ ಪತ್ರಿಕೆಗಳು ವರದಿ ಮಾಡಿವೆ. ರಾಜ್ಯದಲ್ಲಿರುವ ತೋಟಗಾರಿಕಾ ಪ್ರದೇಶವೆಷ್ಟು, ಇವುಗಳನ್ನೇ ನಂಬಿಕೊಂಡ ರೈತರೆಷ್ಟು, ಈ ರೈತರ ಸ್ಥಿತಿ ಏನಾಗಿದೆ ಎಂಬುವ ಬಗ್ಗೆ ಇವರಿಗೆ ಕಾಳಜಿಯಿಲ್ಲ. ಇದೊಂದೇ ವಾಕ್ಯ ಸಾಕು ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಎಷ್ಟಿದೆ ಎಂಬುದನ್ನು ಅರಿಯಲು.

ದೇಶದ ಪ್ರಥಮ ಪ್ರಧಾನಿಯವರು ಆಣೆಕಟ್ಟುಗಳು ಈ ದೇಶದ ದೇವಾಲಯಗಳಿಂದ್ದಂತೆ ಎಂದು ಹೇಳಿ ಸರ್ವನಾಶಕ್ಕೆ ನಾಂದಿ ಹಾಡಿದರು. ಮುಂದೆ ಬಂದವರೆಲ್ಲರೂ ದೇಶದ ಬಡವರ, ರೈತರ ಕಣ್ಣೀರೊರೆಸುವ ನಾಟಕವಾಡಿದ್ದನ್ನು ಬಿಟ್ಟರೆ, ಸಮಗ್ರವಾಗಿ ದೇಶ ಕಟ್ಟುವ ಕೆಲಸದಲ್ಲಿ ಸಾಮೂಹಿಕವಾಗಿ ವಿಫಲರಾದರು. ಕೈಯಲ್ಲಿ ನೂಲುತ್ತಿದ್ದರನ್ನು ಬೀದಿಪಾಲು ಮಾಡಿ ನೂರಾರು ಸ್ಪಿನ್ನಿಂಗ್ ಮಿಲ್‍ಗಳನ್ನು ಸೃಷ್ಟಿ ಮಾಡಿದರು. ಕಷ್ಟವೋ ನಷ್ಟವೋ ಲಕ್ಷಾಂತರ ಸೈಕಲ್ ರಿಕ್ಷಾವಾಲಗಳು ಸಾರ್ವಜನಿಕ ಬಸ್ಸುಗಳ ಸೇವೆಯಿಂದಾಗಿ ತಮ್ಮ ದುಡಿಮೆಯನ್ನು ಕಳೆದುಕೊಂಡು ನಿರ್ಗತಿಕರಾದರು. ಸಾರ್ವಜನಿಕರ ಹಣದಿಂದ ನಿರ್ವಹಿಸಲ್ಪಡುವ ಸರ್ಕಾರಿ ಪೋಷಿತ ಬಸ್ ಕಂಪನಿಗಳು ಯಾವಾಗಲೂ ನಷ್ಟದಲ್ಲೇ ಇರುತ್ತವೆ. ಬಸ್ಸು ಖರೀದಿ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ದೊಡ್ಡವರ ಪಾಲಾಗುತ್ತದೆ. ಸಮಾಜದ ಕಟ್ಟಕಡೆಯ ಮನುಷ್ಯ ಅಥವಾ ಕುಟುಂಬ ಅಥವಾ ಜನಾಂಗ ನೆಮ್ಮದಿಯ ಬದುಕನ್ನು ಕಾಣಬೇಕು ಎಂಬುದು ಗಾಂಧಿಜಿಯ ಆಶಯವಾಗಿತ್ತು. ಹೀಗೆ ಪ್ರತಿ ಹೆಜ್ಜೆಯಲ್ಲೂ ಗಾಂಧಿಜೀಯ ಹೆಸರನ್ನು ಮಾತ್ರ ಬಳಸಿಕೊಂಡು ಅವರ ಆದರ್ಶಗಳನ್ನು ಕೊಲ್ಲುತ್ತಾ ಬಂದರು. ಪಂಚವಾರ್ಷಿಕ ಯೋಜನೆಗಳೂ, 20 ಅಂಶದ ಕಾರ್ಯಕ್ರಮಗಳು, ಮಾಜಿ ಪ್ರಧಾನಿಗಳ ಹೆಸರುಳ್ಳ ಹಲವು ಜನಪ್ರಿಯ ಯೋಜನೆಗಳು ಯಾವುದೂ ಜನರಿಗೆ ಪ್ರಿಯವಾಗಲೇ ಇಲ್ಲ. ಇಂದಿಗೂ ಬರೀ ಹತ್ತಿಪ್ಪತ್ತು ರೂಪಾಯಿಗಳ ಸಂಬಳ ಪಡೆದು ಜೀವನ ನಡೆಸುವ ಕುಟುಂಬಗಳನ್ನು ಸ್ವತಂತ್ರ ಭಾರತದಲ್ಲಿ ಕಾಣಬಹುದು. ಭಾರೀ ಆಣೆಕಟ್ಟುಗಳು, ಭಾರೀ ಕೈಗಾರಿಕೆಗಳು ಅಥವಾ ಸರ್ಕಾರದ ಯಾವ ಯೋಜನೆಯೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾದವು ಅಲ್ಲದೇ ಸಮಸ್ಯೆಗಳನ್ನು ಹೆಚ್ಚು ಮಾಡುವಲ್ಲಿ ಸಹಕರಿಸಿದವು ಎನ್ನಬಹುದು.

ಹಸಿರುಕ್ರಾಂತಿಯೆಂಬ ಭೂತ ದೇಶದ 70% ಜನರ ಅಂದರೆ ರೈತರ ಬಾಳನ್ನು ಮಣ್ಣು ಮಾಡಿತು. ರಾಸಾಯನಿಕಗಳು ಕಾಲಿಟ್ಟ ಎಲ್ಲಾ ಕಡೆಗಳಲ್ಲೂ ಇವತ್ತು ಬಡತನವನ್ನೇ ಕಾಣುವಿರಿ. ಗೋಧಿಯ ಕಣಜವಾದ ಪಂಜಾಬ್‌ನಲ್ಲಿ 5 ಹಳ್ಳಿಗಳು ಮಾರಾಟಕ್ಕಿವೆ ಎಂಬುದನ್ನು ಶ್ರೀ ನಾಗೇಶ್ ಹೆಗಡೆಯವರು ತಮ್ಮ ಅಂಕಣದಲ್ಲಿ ಬರೆದಿದ್ದು ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರಪಂಚದ ಎಲ್ಲಾ ದೇಶಗಳಿಗೂ ಈ ಹೊತ್ತಿನ ಸವಾಲು ಎಂದರೆ ಹವಾಮಾನ ಬದಲಾವಣೆಯನ್ನು ಹೇಗೆ ಎದುರಿಸುವುದು ಎಂಬುದಾಗಿದೆ. ಅಮೇರಿಕಾದಂದ ದೈತ್ಯ ತನ್ನ ಸೌಲತ್ತುಗಳನ್ನು ಕಡಿಮೆ ಮಾಡಿಕೊಂಡೋ ಅಥವಾ ಮರುಬಳಕೆ ಇಂಧನಗಳಿಗೆ ಪ್ರೋತ್ಸಾಹ ನೀಡುವುದನ್ನೋ ಮಾಡುವುದಿಲ್ಲ. ಜಗತ್ತನ್ನು ಇವತ್ತು ಆಳುತ್ತಿರುವುದು ತೈಲ-ಕಲ್ಲಿದ್ದಲು-ಕುಲಾಂತರಿ ಕಂಪನಿಗಳು. ಇವುಗಳಿಗೆ ಈ ಕ್ಷೇತ್ರದಲ್ಲಿ ಅಪಾರ ಲಾಭವಿದೆ. ಹಾಗಾಗಿಯೇ ಈ ಅಂತಾರಾಷ್ಟ್ರೀಯ ಕಂಪನಿಗಳು ತೈಲ-ಕಲ್ಲಿದ್ದಲುಗಳ ಬದಲಿ ವ್ಯವಸ್ಥೆಗೆ ಒಪ್ಪುವುದಿಲ್ಲ. ಪ್ರಪಂಚ ಹಾಳಾದರೆ ಅವರಿಗೇನು ತಮ್ಮ ಲಾಭವಷ್ಟೆ ಮುಖ್ಯ. ಭಾರದತಂದಹ ಸಮಶೀತೋಷ್ಣ ದೇಶ ಪ್ರಪಂಚದ ಇತರೆ ಯಾವುದೇ ದೇಶದ ನೆರವಿಲ್ಲದೆ ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕಬಹುದಾಗಿದೆ. ಇಲ್ಲಿನ ರಾಜಕೀಯಸ್ತರ ಹಪಾಹಪಿತನ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕೆಲವೇ ಪಕ್ಷ ಮತ್ತು ಜನರಿಂದ ನೂರು ಚಿಲ್ಲರೆ ಕೋಟಿ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಹವಾಮಾನ ವೈಪರೀತ್ಯದ ದುಷ್ಪರಿಣಾಮ ಇಲ್ಲಿನ ನೆಲ-ಜಲ-ರೈತ ಮತ್ತು ಬಡವರ ಮೇಲಾಗುತ್ತದೆ. ದೇಶದ ಗಡಿಗುಂಟ ಬೇಲಿ ಹಾಕಿ, ಸೈನಿಕರನ್ನು ಕಾಯಲು ಬಿಡುವುದರಿಂದ ಹವಾಮಾನ ಬದಲಾವಣೆಯನ್ನು ತಡೆಯಲು ಸಾಧ್ಯವಿಲ್ಲ. ಮೂರು ವರ್ಷಗಳಲ್ಲಿ 7 ದೇಶಗಳ 33,500 ಜನರನ್ನು ಬಿಬಿಸಿ ಭೇಟಿ ಮಾಡಿ (ಭಾರತ, ಚೀನಾ, ವಿಯಟ್ನಾಂ, ಪಾಕಿಸ್ತಾನ್, ಬಂಗ್ಲಾದೇಶ, ಇಂಡೋನೇಷಿಯಾ ಮತ್ತು ನೇಪಾಳ) ಒಂದು ಸಮೀಕ್ಷೆ ನಡೆಸಿದೆ. ಇದರಲ್ಲಿ 46% ಜನ ಹವಾಮಾನ ಬದಲಾವಣೆಗೆ ಮನುಷ್ಯನೇ ನೇರ ಕಾರಣ ಎಂದು ಆರೋಪಿಸಿದರೆ, ಇನ್ನುಳಿದವರು ಜನಸಂಖ್ಯೆ ಮತ್ತು ಅರಣ್ಯ ನಾಶ ಕಾರಣ ಎಂದು ತಿಳಿಸಿದ್ದಾಗಿ ವರದಿ ಮಾಡಿದೆ. ಅಮೇರಿಕದ ಹವಾಯಿ ದ್ವೀಪ ಸಮೂಹದ ಮೌನಾ ಲೋವಾದಲ್ಲಿ ಇಂಗಾಲಾಮ್ಲ ಪ್ರಮಾಣವನ್ನು ಅಳೆಯುವ ಅತ್ಯಾಧುನಿಕ ಸಾಧನವನ್ನು 9/05/2013ರಂದು ಅಳವಡಿಸಲಾಗಿದೆ. ಇದು ಪ್ರತಿನಿತ್ಯ ವಾತಾವರಣದಲ್ಲಿನ ಇಂಗಾಲಾಮ್ಲ ಪ್ರಮಾಣವನ್ನು ದಾಖಲು ಮಾಡುತ್ತಿದೆ. ಸರಾಸರಿ ಪ್ರಮಾಣ ೪೦೦ ಪಿಪಿಎಮ್ ದಾಟಿದೆ. ಭೂಮಿಯ ಸುರಕ್ಷತೆಯ ದೃಷ್ಟಿಯಿಂದ ಈ ಪ್ರಮಾಣ 350 ಪಿಪಿಎಮ್ ದಾಟಬಾರದು. ಆದರೆ, ಈಗ 400ಪಿಪಿಎಮ್ ಮುಟ್ಟಿದೆ ಅಂದರೆ ಅಪಾಯದ ಕತ್ತಿ ನೆತ್ತಿಯ ಮೇಲೆ ತೂಗುತ್ತಿದೆ. ಹವಾಮಾನ ವೈಪರೀತ್ಯದಿಂದಲೇ ಬರಗಾಲ, ಅತಿವೃಷ್ಟಿ, ಸಮುದ್ರದ ಮಟ್ಟದಲ್ಲಿ ಏರಿಕೆ, ಮಳೆಯಲ್ಲಿ ಏರುಪೇರು ಇತ್ಯಾದಿಗಳು ಸಂಭವಿಸುತ್ತವೆ. ಇತ್ತೀಚಿನ ಉತ್ತರಾಖಂಡದ ಅವಘಡಕ್ಕೂ ಹವಾಮಾನ ವೈಪರೀತ್ಯವೇ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. 

ಹಾಗಾದರೆ ಇದಕ್ಕೇನು ಪರಿಹಾರ? ಹವಾಮಾನ ವೈಪರೀತ್ಯಕ್ಕೆ ನೇರ ಕಾರಣ ನಾವು ಬಳಸುವ ಪೆಟ್ರೋಲ್-ಡೀಸೆಲ್ ಹಾಗೂ ಕಲ್ಲಿದ್ದಲು. ಭಾರತದ 57% ವಿದ್ಯುಚ್ಚಕ್ತಿಯ ಉತ್ಪಾದನೆ ಕಲ್ಲಿದ್ದಲಿನಿಂದಾಗುತ್ತದೆ. 12ನೇ ಪಂಚವಾರ್ಷಿಕ ಯೋಜನೆ (2012-2017)ಯಲ್ಲಿ ಇನ್ನೂ 1 ಲಕ್ಷ ಮೆಗಾವ್ಯಾಟ್ ವಿದ್ಯುಚ್ಚಕ್ತಿಯನ್ನು ಕಲ್ಲಿದ್ದಲಿಂದಲೇ ಉತ್ಪಾದಿಸಲು ಯೋಜನೆಗಳು ತಯಾರಾಗಿದೆ. ನಮ್ಮಲ್ಲಿ ಕಲ್ಲಿದ್ದಲ ನಿಕ್ಷೇಪ ಬರಿದಾಗುತ್ತಿದೆ. ವರ್ಷದ 300 ದಿನಗಳಲ್ಲೂ ಸೂರ್ಯನ ಪ್ರಖರ ಬೆಳಕು ಲಭ್ಯವಿದ್ದರೂ ಸರ್ಕಾರಗಳು ಮರುಬಳಕೆಯ ತಂತ್ರಜ್ಞಾನದತ್ತ ಗಮನಹರಿಸದಿರುವುದು ನಾಚಿಕೆಗೇಡಿನ ವಿಚಾರವೇ ಸೈ. ಕಲ್ಲಿದ್ದಲ ಮಾಲಿನ್ಯದಿಂದ ಪ್ರತಿವರ್ಷ 8೦,೦೦೦ ಜನರು ಭಾರತದಲ್ಲಿ ಮರಣ ಹೊಂದುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ವಿದ್ಯುತ್ ವಿಕೇಂದ್ರಿಕರಣವೊಂದೇ ಇದಕ್ಕೆ ಪರಿಹಾರವಾಗಬಲ್ಲದು. ಅಂದರೆ ಜನ ತಮ್ಮ ವಿದ್ಯುತ್‌ನ್ನು ತಾವೇ ಛಾವಣಿಗಳಿಂದ ಉತ್ಪಾದಿಸಿಕೊಳ್ಳಬಹುದು.

ಗ್ಲೋಬಲ್ ಪವರ್ ಶಿಪ್ಟ್ ಅಂದರೆ ಜಾಗತಿಕ ಮಟ್ಟದಲ್ಲಿ ಪರ್‍ಯಾಯ ಇಂಧನವನ್ನು ಬಳಸುವ ನಿಟ್ಟಿನಲ್ಲಿ ಹಲವು ದೇಶಗಳ ಸಂಘ-ಸಂಸ್ಥೆಗಳು ಒಟ್ಟಾಗಿ ಸೇರಿಕೊಂಡು ರೂಪಿಸಿಕೊಂಡ ಒಂದು ವ್ಯವಸ್ಥೆ. ಗ್ರೀನ್-ಪೀಸ್‌ನಂತಹ ಪರಿಸರ ಸಂಘಟನೆಗಳು ಇದರ ಬೆನ್ನಿಗಿವೆ. ಭಾರತದಲ್ಲೂ ಪರ್‍ಯಾಯ ಇಂಧನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನ್ಯಾಷನಲ್ ಪವರ್ ಶಿಫ್ಟ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು, ವಿಜ್ಞಾನಿಗಳು, ಸಂಶೋಧಕರು, ಪರಿಸರವಾದಿಗಳು ಎಲ್ಲರೂ ಇದ್ದಾರೆ. ಥಿಂಕ್ ಗ್ಲೋಬಲಿ ಆಕ್ಟ್ ಲೋಕಲಿ ಎಂಬುದು ಇವರ ಮಂತ್ರ. ಡಿಸೆಂಬರ್ 17-21ರವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಜಗತ್ತಿನ ವಿವಿಧ ದೇಶಗಳ 15೦ ಮಂದಿ ಸೇರಿ ಸಮಾವೇಶ ನಡೆಸಲಿದ್ದಾರೆ. ಮುಂದಿನ ಪೀಳಿಗೆಗೆ ಸ್ವಚ್ಛವಾದ ಪರಿಸರವನ್ನು ನೀಡಬೇಕು ಎಂಬುದೇ ಈ ವಿಚಾರ ಸಂಕಿರಣದ ಸದಾಶಯ. ಉಡಾಣ್ ಹೆಸರಿನಲ್ಲಿ ನಡೆಯುವ ಈ ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವವರು 350.org  ಈ ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ southasia@350.org ಇಲ್ಲಿಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಅಕ್ಟೋಬರ್ 15, 2013.

ಈಗ ತಲೆಬರಹದ ಔಚಿತ್ಯವೇನು ನೋಡೋಣ. ಗಾಂಧಿಯನ್ನು ಕೊಂದು ಅವರ ಆಶಯಗಳನ್ನು ಕೊಂದ ಸರ್ಕಾರಗಳು, ದೇಶದ ಹೆಚ್ಚು-ಹೆಚ್ಚು ಅಭಿವೃದ್ಧಿಯ ಮಂತ್ರ ಜಪಿಸುತ್ತಿವೆ. ಮೌನ ಪ್ರಧಾನಿ ಅಮೇರಿಕಾದಲ್ಲಿ ಒಬಾಮನನ್ನು ಭೇಟಿ ಮಾಡಿ ಸಾವಿರಗಟ್ಟಲೆ ಕೋಟಿ ರೂಪಾಯಿಗಳ ಶಸ್ತ್ರಾಸ್ತ್ರ ಮತ್ತು ಪರಮಾಣು ತಂತ್ರಜ್ಞಾನ ಇತ್ಯಾದಿಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿ ಬರುತ್ತಾರೆ. ತುರ್ತಾಗಿ 5 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಒಬಾಮನೆದಿರು ಹೂಂ ಎಂದು ತಲೆ ಆಡಿಸಿ ಭವಿಷ್ಯದ ಜನಾಂಗಕ್ಕೆ ನರಕ ಸದೃಶ ಭಾರತವನ್ನು ಕೊಡುಗೆಯಾಗಿ ನೀಡಲು ಅಡಿಗಲ್ಲು ಹಾಕಿದ್ದಾರೆ. ಜಪಾನಿನ ಫುಕೋಶಿಮಾದ ಅಣುದುರಂತವನ್ನು ಗುಡಿಸಿ ತೆಗೆಯಲು 600 ಶತಕೋಟಿ ಡಾಲರ್‌ಗಳು ಖರ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಒಪ್ಪಂದದ ನಂತರ ಇನ್ನೂ 40 ಪರಮಾಣು ರಿಯಾಕ್ಟರ್‌ಗಳು ಭಾರತದಲ್ಲಿ ತಲೆಯೆತ್ತಲಿವೆ. ಇಲ್ಲೇನಾದರೂ ಅಣುದುರಂತವಾದಲ್ಲಿ ಪರಿಣಾಮ ಏನಾಗಬಹದು, ಗಾಂಧಿ ಜೀವಂತವಾಗಿದ್ದರೆ ಒಪ್ಪುತ್ತಿದ್ದರೆ? 


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
ಸುಮನ್ ದೇಸಾಯಿ
ಸುಮನ್ ದೇಸಾಯಿ
10 years ago

ಲೇಖನ ಇಷ್ಟ ಆತು… ನಮ್ಮ ದೇಶದ ಜನಗಳು ಹೇಂಗಂದರ ಗಾಂಧೀಜಿ ಅವರನ್ನ " ಮಹಾತ್ಮ" ಅಂತಾನು ಕರಿತಾರ, ಹಂಗಾ ನಾಥೂರಾಮ ಗೋಡ್ಸೆನ್ನ " ಹೀರೊ ಅಂತನು ಪರಿಗಣಿಸ್ತಾರ.. ಹಿಂಗಾಗಿ ಗಾಂಧೀಜಿ ಕಂಡ ಅಭಿವೃಧ್ಧಿಯ ದೇಶ ನಮ್ಮದಾಗಲಿಕ್ಕೆ ಸಾಧ್ಯನ ಇಲ್ಲ.

ಸುಮನ್ ದೇಸಾಯಿ
ಸುಮನ್ ದೇಸಾಯಿ
10 years ago

ಲೇಖನ ಇಷ್ಟ ಆತು. ನಮ್ಮ ದೇಶದ ಜನರು ಹೆಂಗಿದ್ದಾರಂದರ " ಗಾಂಧೀಜಿಯವರನ್ನ ಮಹಾತ್ಮ ಅಂತಾನು ಅಂತಾರ, ಹಂಗಾ ನಾಥೂರಾಮ ಗೊಡ್ಸೆನ್ನ ಹೀರೊ ಅಂತನು ಪರಿಗಣಿಸ್ತಾರ, ಹಿಂಗಿದ್ದಾಗ ಗಾಂಧೀಜಿಯವರು ಕಂಡ ಅಭಿವೃಧ್ಧಿಯುತ ದೇಶ ಆಗಲಿಕ್ಕೆ ಸಾಧ್ಯನ ಇಲ್ಲಾ…

Santhoshkumar LM
10 years ago

Superb article sir!

K.M.Vishwanath
10 years ago

ನಮ್ಮ ದೇಶದ ಅನೇಕ ದುರದೈವಗಳಲ್ಲಿ ಇದು ಒಂದು ಸದ್ಯ ಪ್ರಸ್ತುತ ಅನಿಸುತ್ತದೆ ಸರ್ 

Akhilesh Chipli
Akhilesh Chipli
10 years ago

ಲೇಖನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು

prashasti
10 years ago

ಸಖತ್ತಾದ ಲೇಖನ 🙂 ಇಷ್ಟ ಆತು 🙂

sharada.m
sharada.m
10 years ago

ನಮ್ಮನ್ನಾಳುವ ಸರ್ಕಾರಗಳು ಪ್ರತಿನಿತ್ಯ ಗಾಂಧಿಯನ್ನು ಕೊಲ್ಲುತ್ತಿವೆ. ಪ್ರತಿವರ್ಷ ಗಾಂಧಿಜಯಂತಿಯನ್ನು ಆಚರಣೆ ಮಾಡಿ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಪ್ರತಿಯೊಬ್ಬ ಜನಸೇವಕನೂ ಕರೆ ನೀಡುತ್ತಾನೆ. ಸಲಹೆ ನೀಡುತ್ತಾನೆ. ಆದರೆ ಕೃತಿಯಲ್ಲಿ ಆಚರಿಸುವುದಿಲ್ಲ.
ಸತ್ಯವಾದ  ಮಾತು..ಗೋಡ್ಸೆ  ಒಮ್ಮೆ  ಕೊಂದ ..ನಾವು  ನಿತ್ಯವೂ  ಪರೋಕ್ಷವಾಗಿ  ಗಾಂಧೀ  ಆದರ್ಶಗಳನ್ನು  ಕೊಲ್ಲುತ್ತಿದ್ದೇವೆ
nice article..

7
0
Would love your thoughts, please comment.x
()
x