ಕೋತಿ ಮತ್ತು ಮನುಷ್ಯ: ರೇಷ್ಮಾ ಎ.ಎಸ್.

ಬಣ್ಣದ ಒಂದು ಇಡೀ ಸೀರೆಯನ್ನೇ ತಲೆಗೆ ರುಮಾಲಾಗಿ ಸುತ್ತಿ ಒಂದು ಚುಂಗನ್ನು ಹೆಗಲ ಮೇಲೆ ಬರುವಂತೆ ಇಳಿ ಬಿಟ್ಟಿದ್ದಾನೆ. ದೊಡ್ದ ಪೊದೆ ಮೀಸೆ, ಹಣೆಯಲ್ಲೊಂದು ಹಳದಿ ನಾಮ, ಮಾಸಲು ಕಪ್ಪು ಕೋಟು, ಎಂದೋ ಬಿಳಿಯಾಗಿದ್ದಿರಬಹುದಾದ ಪಂಚೆ, ಹೆಗಲಿಗೆ ಒಂದು ಚಿಂದಿ ಜೋಳಿಗೆ, ಒಂದು ಕೈಯಲ್ಲಿ ಬಣ್ಣದ ಬೇಗಡೆ ಹಚ್ಚಿದ ಕೋಲು, ಇನ್ನೊಂದು ಕೈಯ ದಾರದ ತಿದಿಯಲ್ಲಿ ಕಟ್ಟಿದುದು ಒಂದು ಧಡೂತಿ ಮಂಗ. ಅದೇ ಗಲ್ಲಿಯ ಮಕ್ಕಳಿಗೆಲ್ಲರಿಗೆ ಆಕರ್ಷಣೆಯಾಗಿದ್ದುದುದು. ಆ ಮಂಗಕ್ಕೆ ಬಣ್ಣ ಬಣ್ಣದ ಬಟ್ಟೆಗಳ ಚೂರುಗಳನ್ನು ಚೌಕಚೌಕವಾಗಿ ಕತ್ತರಿಸಿ ಸೇರಿಸಿ ಹೊಲೆದು ಮಾಡಿದ್ದ ಅಂಗಿ, ಬಾಲ ಹೊರಗಿರುವಂತೆ ಹೊಲೆದ ದೊಗಲೆ ಕೆಂಪು ಚೆಡ್ಡಿ ಬೇರೆ. ಕೈಯಲ್ಲಿ ಕುತ್ತಿಗೆಯಲ್ಲಿ ಬಣ್ಣ ಬಣ್ಣದ ಮಣಿಗಳ ಸರಗಳು. ಸ್ವಲ್ಪ ಹಿಂದೆಯಷ್ಟೇ ಮನೆ ಮನೆಯ ಮುಂದೆಯೂ ಆ ಮಂಗ ಏನೆಲ್ಲಾ ದೊಂಬರಾಟ, ಅಲ್ಲಲ್ಲಿ ಮಂಗನಾಟ ಪ್ರದರ್ಶಿಸಿತ್ತೆಂದರೆ ಮಕ್ಕಳಿರಲಿ ದೊಡ್ದವರೂ ಸುತ್ತ ನೆರೆದು ಹಲ್ಲುಬಿಟ್ಟು ಹಿಗ್ಗಿ ನೋಡಿದ್ದರು. ಸಾಕಷ್ಟು ಚಿಲ್ಲರೆ ಮಂಗನೊಡೆಯನಿಗೆ ಸಿಕ್ಕಿತ್ತು. ಮಂಗನಿಗೂ ಕೆಲ ಮನೆಗಳಲ್ಲಿ ದೋಸೆ, ರೊಟ್ಟಿ, ಬಾಳೆಹಣ್ಣುಗಳು ಹೊಟ್ಟೆತುಂಬಿಸಿದ್ದವು. ಒಂದು ಮನೆಯಲ್ಲಂತೂ ಅಲ್ಯೂಮಿನಿಯಂ ಬಟ್ಟಲು ಹಿಡಿದು ನೀರು ಬೇಡಿ ಪಡೆದು ಕಾಲು ಹಾಕಿಕೊಂಡು ಮನುಷ್ಯರಂತೆಯೇ ಕುಡಿದು ಎಲ್ಲರನ್ನೂ ರಂಜಿಸಿತ್ತದು.

ಈಗ ಸಾಕಾಗಿರಬೇಕು ಇಬ್ಬರಿಗೂ. ನಮ್ಮ ಮನೆಯ ಮುಂದಿನ ಮಾವಿನ ಮರದ ನೆರಳಿಗೆ ಇಬ್ಬರೂ ವಿಶ್ರಾಂತಿಗೆ ಕುಳಿತರು. ಯಜಮಾನ ಜೋಳಿಗೆ ಬದಿಗಿಟ್ಟು ಕೆವಿಯ ಮೇಲೆ ಸಿಕ್ಕಿಸಿದ್ದ ಬೀಡಿ ತೆಗೆದು ಕೋತಿನ ಜೇಬಿನಲ್ಲಿದ್ದ ಬೆಂಕಿಪೊಟ್ಟಣ ತೆಗೆದು ಬೆಂಕಿ ಹಚ್ಚಿಕೊಂಡು ಬೀಡಿ ಹಚ್ಚಿದ. ಮಧ್ಯದಲ್ಲೇ ಸಂಗ್ರಹವಾಗಿದ್ದ ಬೀಡಿ ಎಷ್ಟು ಎಂದು ನೋಡುವ ಹಂಬಲ ಅವನಿಗೆ. ಸ್ವಲ್ಪ ಬೀಡಿ ಸೇದುವುದು, ನಂತರ ಬೀಡಿ ತೆಗೆದು ಮಂಗನ ಕೈಲಿ ಕೊಡುವುದು, ಚಿಲ್ಲರೆ ಎಣಿಸುವುದು ಮಾಡತೊಡಗಿದ. ತನ್ನ ಕೈಗೆ ಬೀಡಿ ಸಿಕ್ಕಾಗಲೆಲ್ಲಾ ಮಂಗ ಮನುಷ್ಯರಂತೆಯೇ ಪರಮಾನಂದದಿಂದ ಬಾಯಲ್ಲಿ ಬೀಡಿ ಇಟ್ಟುಕೊಂಡು ಎಳೆಯುತ್ತಿತ್ತು. ಮಾಲೀಕ ಬೀಡಿ ತೆಗೆದುಕೊಂಡಾಗ ಅವನ ಮುಖವನ್ನೇ ನಿರೀಕ್ಷ್ರೆಯಿಂದ ಆಸೆಯಿಂದ ನೋಡುತ್ತಾ ಇರುತ್ತಿತ್ತು. ಈ ವಿಚಿತ್ರ ದೃಶ್ಯ ನೋಡಿದಾಗ “ಕೋತಿ ತಾನು ಕೆಡೋದಲ್ಲದೇ ವನಾನೆಲ್ಲಾ ಕೆಡಿಸ್ತು” ಎಂಬ ಗಾದೆಯ ಬದಲು “ಮನುಷ್ಯ ತಾನು ಕೆಡೋದಲ್ಲದೇ ಕೋತೀನೂ ಕೆಡಿಸ್ದ” ಎಂದೇಕೆ ಗಾದೇನ ಬದಲಿಸಬಾರದು ಎಂದೆನಿಸತೊಡಗಿತು.

*****
________________________________________________________________________________
ಅರಳದ ಮೊಗ್ಗುಗಳು…
ತಮನ್ನಾ ಅವಳ ಹೆಸರು. ಎರಡು ವರ್ಷ ನನ್ನ ವಿದ್ಯಾರ್ಥಿನಿಯಾಗಿದ್ದವಳು. ಕಣ್ಣುಗಳಲ್ಲಿ ಉಕ್ಕುವ ನಕ್ಷತ್ರಕಾಂತಿ. ಪ್ರತಿಭೆ ಮುಕ್ಕಳಿಸುವ ಮುದ್ದು ಮುಖ. ಅಕ್ಷರಗಳೋ ಅವಳಷ್ಟೇ ಮುದ್ದು. ಕನ್ನಡ ಬರವಣಿಗೆಯಂತೂ ಮುಸ್ಲಿಂ ಹುಡುಗಿ ಈಕೆ ಎಂದು ನಂಬಲೇ ಆಗದಷ್ಟು ಉತ್ಕೃಷ್ಟ. ಪ್ರಶ್ನೆಗೆ ಉತ್ತರಿಸುವ ವೈಖರಿ, ನಾಟಕ-ನೃತ್ಯಗಳಲ್ಲಿ ನೀಡುವ ಪ್ರಬುದ್ದ ಆಕರ್ಷಕ ಅಭಿನಯ, ಪಾಠಗಳ ಸಂದರ್ಭಗಳನ್ನು ಚಿತ್ರದ ರೂಪದಲ್ಲಿಳಿಸಿ ತೋರಿಸುವ, ಕವನ-ಕಥೆಗಳನ್ನು ಬರೆದು ತೋರಿಸುವುದು ಎಲ್ಲದರಲ್ಲೂ ಈ ಹುಡುಗಿ ಅದೆಷ್ಟು ಪ್ರತಿಭಾವಂತೆ ಎಂದು ಮೆಚ್ಚುಗೆಯಿಂದ ತುಂಬಿ ಹೋಗಬೇಕು. ಅಂತಹ ಮಾದರಿ ವಿದ್ಯಾರ್ಥಿನಿ ಆಕೆ. ಆದರೇನು? ಅರ್ಧಕ್ಕೆ ಶಾಲೆ ಬಿಡುತ್ತಾಳೆ ಅವಳು. ಯಾವ ಪರಿಯಲ್ಲಿ ಹೇಳಿದರೂ ಅವಳನ್ನು ಮುಂದೆ ಓದಿಸಲು ಹಿರಿಯರು ಒಪ್ಪುವುದಿಲ್ಲ. ಸಾಕು, ಇನ್ನು ಶಾಲೆ ಇಲ್ಲವೇ ಇಲ್ಲ, ಇನ್ನು ಮದುವೆ, ಇದು ಅವರ ನಿರ್ಧಾರ-ಹಠ. ಅರಳುಗಣ್ಣುಗಳ ತುಂಬಾ ನೀರು ತುಂಬಿಕೊಂಡು, ಮುಖವಿಳಿಸಿಕೊಂಡು ತಮನ್ನಾ ಅಸಹಾಯಕ ನೋಟ ಬೀರುತ್ತಾಳೆ. ಸಂಪ್ರದಾಯ, ಹಿಂದಿನಿಂದ ಬಂದ ರೀತಿ-ಪದ್ದತಿಗಳ ಬೇಲಿ ಕೋಟೆ ಅವಳನ್ನು ಮುಂದೆ ಹೋಗದಂತೆ ತಡೆಯುತ್ತವೆ. ಕೆಲವು ದಿನಗಳಲ್ಲೇ ತಮನ್ನಾ ಗೃಹಿಣಿಯಾಗಿಬಿಡುತ್ತಾಳೆ. ಆ ಎಳೆಯ ಹುಡುಗಿಯ ಭವಿಷ್ಯ, ಆಸೆ, ಪ್ರತಿಭೆ ಎಲ್ಲವೂ ಗಂಡ, ಮನೆ, ಮಕ್ಕಳು ಇವರ ನಡುವೆ, ಬುರಖಾ, ಅಡುಗೆಮನೆಗಳ ನಡುವೆ ಕಳೆದು ಹೋಗುತ್ತದೆ. ಏನೇನೋ ಆಗಬಹುದಿದ್ದ ತಮನ್ನಾ ಏನೂ ಆಗದೇ ಕಳೆದುಹೋಗುವುದನ್ನು ಅಸಹಾಯಕತೆಯಿಂದ ನೋಡುತ್ತಾ ಉಳಿಯುವುದೇ ನನ್ನ ಪಾಲಿಗೆ ಉಳಿವ ಕೆಲಸ. ಇಂತಹ ಅರಳಲಾಗದೇ ನರಳುವ ಮೊಗ್ಗುಗಳು ಅದೆಷ್ಟೋ…?
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x