ಪಂಜು-ವಿಶೇಷ

ಕುವೆಂಪುರವರ ಕ್ರಾಂತಿ ಗೀತೆ: ದಿವ್ಯ ಆಂಜನಪ್ಪ


ಏನಾದರೂ ಆಗು,
ನೀ ಬಯಸಿದಂತಾಗು,
ಏನಾದರೂ ಸರಿಯೇ
ಮೊದಲು ಮಾನವನಾಗು

– ಎಂಬ ಮಾತಿನಿಂದ ಮಾನವನ ಮಾನವೀಯತೆಯನ್ನು ಕವಿ ಜಾಗೃತಗೊಳಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಮನುಷ್ಯತ್ವವನ್ನೇ ಮರೆತಂತಹ ರಾಕ್ಷಸ ಕೃತ್ಯಗಳು ತಾಂಡವವಾಡುತ್ತಿರುವ ಕಾಲದಲ್ಲಿ ಇಂತಹ ಕವಿವಾಣಿಗಳು ಆಗಿಂದಾಗ್ಗೆ ಮನುಷ್ಯನ ಕಿವಿ ಮೇಲೆ ಬೀಳುತ್ತಿದ್ದಲ್ಲಿ ಸುಧಾರಣೆ ಕಾರ್ಯ ಸಾಧ್ಯವಾಗುವುದೆನೋ? ಎಂದೆನಿಸುತ್ತದೆ. ಇಂತಹದೇ ಸಂದೇಶ ಹೊತ್ತ ಮನುಜ ಮತಕ್ಕೆ ಒತ್ತನ್ನು ನೀಡಿದ ಅವರ ಕ್ರಾಂತಿಕಾರಿ ಗೀತೆಗಳ "ಅನಿಕೇತನ" ಕವನ ಸಂಕಲನದ "ಗುಡಿ, ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ….ಎಂಬ ಕ್ರಾಂತಿ ಗೀತೆ.

ಕವಿ ತಮ್ಮ ಈ ಗೀತೆಯಲ್ಲಿ ಸರ್ವ ಧರ್ಮ ಸಮಾನತೆಯ ಮಂತ್ರವನ್ನು ಜಪಿಸಿದ್ದಾರೆ. ಇಂದು ಮನುಷ್ಯ-ಮನುಷ್ಯನನ್ನು ದ್ವೇಷಿಸುತ್ತಿದ್ದಾರೆ. ಅದೂ ವಿನಾಕಾರಣ, ಒಬ್ಬರಿಂದೊಬ್ಬರಿಗೆ ಯಾವ ಹಾನಿ-ನಷ್ಟದ ವಿಚಾರವಿಲ್ಲದೆಯೇ!! ಇಲ್ಲಿ ಕಾರಣವಾದದ್ದಾರೂ ಏನು ಧರ್ಮಗಳು, ಜಾತಿಗಳು ಮತ್ತು ಉಪಜಾತಿಗಳು. ಹೌದು ಇಂದು ಧರ್ಮ-ಜಾತಿಗಳಿರಲಿ, ತಮ್ ತಮ್ಮ ಉಪಜಾತಿಗಳ ನಡುವೆಯೂ ವೈಷಮ್ಯ-ತಾರತಮ್ಯಗಳು ಹೆಚ್ಚಾಗಿವೆ. ಒಂದೇ ಧರ್ಮ, ಒಂದೇ ಜಾತಿಯೇ ಆದರೂ ಉಪಜಾತಿಗಳ ಹಣೆಪಟ್ಟಿ ಹಿಡಿದು; ಮನಸ್ಸಿನೊಂದಿಗೆ ಸಮಾಜಕ್ಕೂ ಹುಳಿ ಹಿಂಡಿಕೊಂಡು ಬಗ್ಗಡವಾಗುತ್ತಿದ್ದಾರೆ. ರಾಷ್ಟ್ರ ಕವಿಗಳು ಧರ್ಮಗಳನ್ನು ಒಂದಾಗಿಸುವ ಪ್ರಯತ್ನದಲ್ಲಿದ್ದರೆ; ಸಣ್ಣ ಮನಸ್ಸಿನವರು ತಮ್ ತಮ್ಮ ಧರ್ಮಗಳಲ್ಲೇ
ಹೊಡೆದಾಡುತ್ತಿದ್ದಾರೆ. ಎಂತಹ ವಿಪರ್ಯಾಸ…

ಮಾನವರು ತಾವೇ ಮಾಡಿಕೊಂಡ ತಮ್ಮ ಧರ್ಮ ಸಂಕೇತಗಳಾದ ಗುಡಿ, ಚರ್ಚು ಮತ್ತು ಮಸಜೀದಿಗಳನ್ನು ಬಿಟ್ಟು; ವಿಶಾಲವಾಗಿ ಚಿಂತಿಸಿ ಅಜ್ಞಾನದಿಂದ ಹೊರ ಬಂದು ಬಡತನವನ್ನು ಬುಡಸಮೇತ ಕಿತ್ತೆಸೆಯುವಂತೆ ಕವಿ ಕರೆ ನೀಡಿದ್ದಾರೆ. ಧರ್ಮಕ್ಕಾಗಿ ಹೊಡೆದಾಡುವ ಶಕ್ತಿ, ಹಣ ಮತ್ತು ಶ್ರಮವನ್ನು ದಾರಿದ್ರ್ಯ ನಿರ್ಮೂಲನೆಗೆ ಬಳಸಿದ್ದೇ ಆದರೆ ಬಡತನದ ರೇಖೆಯಿಂದ ಕೆಳಗಿರುವ ಜನರು, ಬಡತನ ರೇಖೆಯಲ್ಲಿರುವ ಜನರು ಮೇಲೇರುವಂತಾಗಬಹುದು ಎಂಬುದು ಕವಿಗಳ ಸಾಮಾಜಿಕ ಕಳಕಳಿ. ಜೊತೆಗೆ ಏಕತೆಯ ಮಂತ್ರದಿಂದ ದೇಶದ ಪ್ರಗತಿ ಸಾಧ್ಯ.


 ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ
 ಬಡತನವ ಬುಡಮಟ್ಟ ಕೀಳ ಬನ್ನಿ

ಅಜ್ಞಾನ, ಮೂಢನಂಬಿಕೆಗಳಿಂದ ಜಾತಿ, ಧರ್ಮಗಳ ಆಚರಣೆಗಳಿಗೆ ಪುಷ್ಠಿ ಹೆಚ್ಚು. ಆದರಿಂದ ಮಾರಿಯಂತೆ ಕಾಡುತ್ತಿರುವ ಮೌಡ್ಯತೆಯನ್ನು ಜ್ಞಾನದ ಬೆಳಕಿನಲ್ಲಿ ಸಾಗಿ ವಿಜ್ಞಾನದ ದೀವಿಗೆಯನ್ನು ಹಿಡಿಯ ಬನ್ನಿರೆಂದು ಆಹ್ವಾನಿಸಿದ್ದಾರೆ. ಶೈಕ್ಷಣಿಕ ಮತ್ತು ವೈಜ್ಞಾನಿಕ ಮನೋಭಾವದಿಂದಷ್ಟೇ ಮೂಢನಂಬಿಕೆಗಳ ನಿರ್ಮೂಲನ ಸಾಧ್ಯವೆಂಬುದು ಇಲ್ಲಿನ ಸಾರ.

 ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ
 ವಿ
ಜ್ಞಾನ ದೀವಿಗೆಯ ಹಿಡಿಯ ಬನ್ನಿ
 ಓ ಬನ್ನಿ ಸೋದರರೆ ಬೇಗ ಬನ್ನಿ…….

 ಎಲ್ಲಾ ಧರ್ಮದವರೂ ಸೋದರರಾಗಿ ಒಂದಾಗಿ ಬನ್ನಿ. ಮೌಡ್ಯತೆಯನ್ನು ಹೊರ ಹಾಕಿ ಬಡತನದ ನಿರ್ಮೂಲನೆಗೆ ಕೈ ಜೋಡಿಸಿರೆಂದು ಕವಿ ಕರೆ ನೀಡಿ ಹುರಿದುಂಬಿಸಿದ್ದಾರೆ.

ಮತವೆಂಬ ಮೋಹಕ್ಕೆ ಸಿಲುಕಿ ಅಜ್ಞಾನದಿಂದ ನಡೆಯದೆ; ಬುದ್ದಿವಂತಿಕೆಯಿಂದ ಲೋಕ ಹಿತಕ್ಕಾಗಿ ದುಡಿಯುವ ಅಗತ್ಯವಿದೆ ಎಂದಿದ್ದಾರೆ. ಕಾಲ, ಶ್ರಮ ಮನಸ್ಸನ್ನು ದುಡಿಮೆಯಲ್ಲಿ ವಿನಿಯೋಗಿಸಿದ್ದಲ್ಲಿ ನಮ್ಮಲ್ಲಿ ದಾರಿದ್ರ್ಯವಿಲ್ಲದಂತಾಗಿ ಜನ, ನಾಡು, ದೇಶವು ಪ್ರಗತಿಯ ಹಾದಿ ಹಿಡಿಯುತ್ತದೆ. ಅಜ್ಞಾನದಿಂದ ಮತಗಳ ಸುಳಿಗಳಲ್ಲಿ ಸಿಲುಕದಿರಿ
ಎಂಬುದು ಕವಿಗಳ ವಿನಮ್ರ ಸಲಹೆ.

ಸಿಲುಕದಿರಿ ಮತವೆಂಬ ಮೊಹದಜ್ಞಾನಕ್ಕೆ
ಮತಿಯಿಂದ ದುಡುಯಿರೈ ಲೋಕ ಹಿತಕ್ಕೆ

ಇಂದು ಮನುಷ್ಯನು "ತನ್ನದು ಈ ಮತ, ಅವನದು ಆ ಮತ"ವೆಂದು ತಮ್ ತಮ್ಮ ಧರ್ಮಗಳ ಉಳಿವಿಗಾಗಿ ಮತ್ತು ಪ್ರಚಾರಕ್ಕಾಗಿ ಸೆಣಸಾಡುತ್ತಿದ್ದಾನೆ. ಪರಸ್ಪರ ದ್ವೇಷ, ಪೈಪೋಟಿಗಳಲ್ಲಿ ಮುಳುಗಿ ದೇಶದ ಅಭಿವೃಧಿಯನ್ನು ಮರೆತಿದ್ದಾನೆ. ಈಗಂತು ಧರ್ಮದ ಹೆಸರಿನ ಆಡಂಬರದ ಆಚರಣೆಗಳಿಗೂ ಮೀರಿ, ಧರ್ಮದ ಉಳಿವಿಗಾಗಿ ಮತಾಂತರಗಳನ್ನು ಕೈಗೊಳ್ಳುವಂತಹ ಮನಃಸ್ಥಿತಿಗೆ ಧರ್ಮ ಪ್ರಚಾರಕರು ತಲುಪಿಬಿಟ್ಟಿದ್ದಾರೆ. ಜಾತಿಯೇ ಬೇಡ, ಧರ್ಮವೇ ಬೇಡವೆಂದು ಬದಿಗೊತ್ತಿ ಮುಂದೆ ಬನ್ನಿ ಎಂಬ ಕವಿ ವಾಣಿಗೆ ನಮ್ಮ ಪ್ರತಿಕ್ರಿಯೇ ಏನು? ಚಿಂತಿಸಬೇಕಾಗಿದೆ. ಮಾನವನದು ಒಂದೇ ಧರ್ಮ; ಮನುಜ ಕುಲ ಒಂದೇ ಎನ್ನುವಾಗ, 'ಇಂತದ್ದೇ ಧರ್ಮವು ಶ್ರೇಷ್ಠ, ಆ ಮತಕ್ಕೆ ಮತಾಂತರ ಹೊಂದಿ' ಎನ್ನುವುದು ಎಷ್ಟು ಸರಿ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದ ಕುದುರೆಯ ಬೇಡುವವ ವೀರನೂ ಅಲ್ಲ, ಶೂರನೂ ಅಲ್ಲ……. ಎಂಬ ವಚನದಂತೆ. ಹುಟ್ಟಿದ ಧರ್ಮವನ್ನು ಜರಿದು ಮತ್ತೊಂದು ಧರ್ಮೋದ್ದಾರಕ್ಕೆ ನಿಲ್ಲುವವನೂ ಈ ಸಂದರ್ಭದಲ್ಲಿ ವಚನದಲ್ಲಿ ಹೇಳಿದಂತೆಯೇ ಕಾಣುತ್ತಾನೆ.

 ಈ ಯಾವ ಮತಗಳ ಸಹವಾಸ, ಹಂಗಿಲ್ಲದೆ ಎಲ್ಲರೂ ವಿಶ್ವ ಮಾನವರಾಗೋಣ ಎಂದು ಕವಿ ಸ್ವಾಗತಿಸಿದ್ದಾರೆ.

ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕ್ಕೆ
ಓ ಬನ್ನಿ ಸೋದರರೇ ವಿಶ್ವ ಪಥಕೆ…………

ಕರೆ ನೀಡಿದ ಕವಿಯೇ ಕಾಲವಾದರೂ ಸಮಾಜವು ಜಗ್ಗದೆ ಇನ್ನೂ ಧರ್ಮ ಜಾತಿಗಳಿಗಂಟಿಕೊಂಡೇ ಇದೆ. ಅಷ್ಟು ಹಿಂದಿನ ಕವಿ ಕರೆಗೆ ಇಂದು ಕೂಡ ತೀರ ವಿಳಂಬವೇ ಸರಿ. ಇನ್ನಾದರೂ ಸಮಾಜ(ನಾವು) ಬದಲಾಗಿ ನಮ್ಮ ಪರಿಸರವನ್ನೂ ಬದಲಾಗಿಸಬೇಕಾಗಿದೆ. ಸ್ನೇಹಿತರೇ, ಹಾಗಾದರೆ ಕವಿ ಕರೆಗೆ ಕೈ ಜೋಡಿಸೋಣವೆ?…

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಕುವೆಂಪುರವರ ಕ್ರಾಂತಿ ಗೀತೆ: ದಿವ್ಯ ಆಂಜನಪ್ಪ

  1. ಮೇಡಮ್, ವಿಶ್ಲೇಷಣೆ ಚೆನ್ನಾಗಿದೆ….'ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ' ಎಂಬ ಮಹಾಕವಿಗಳ ಸಾಲನ್ನೂ ಸಹ ಸೇರಿಸಿದ್ದರೆ ಲೇಖನಕ್ಕೆ ಹೆಚ್ಚಿನ  ಹೊಳಪಿರುತ್ತಿತ್ತೆಂದು ನನ್ನ ಭಾವನೆ… 

    1. ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್.
       
      ಅಜ್ಞಾನ, ಮೂಢನಂಬಿಕೆಗಳಿಂದ ಜಾತಿ, ಧರ್ಮಗಳ ಆಚರಣೆಗಳಿಗೆ ಪುಷ್ಠಿ ಹೆಚ್ಚು. ಆದರಿಂದ ಮಾರಿಯಂತೆ ಕಾಡುತ್ತಿರುವ ಮೌಡ್ಯತೆಯನ್ನು ಜ್ಞಾನದ ಬೆಳಕಿನಲ್ಲಿ ಸಾಗಿ ವಿಜ್ಞಾನದ ದೀವಿಗೆಯನ್ನು ಹಿಡಿಯ ಬನ್ನಿರೆಂದು ಆಹ್ವಾನಿಸಿದ್ದಾರೆ. ಶೈಕ್ಷಣಿಕ ಮತ್ತು ವೈಜ್ಞಾನಿಕ ಮನೋಭಾವದಿಂದಷ್ಟೇ ಮೂಢನಂಬಿಕೆಗಳ ನಿರ್ಮೂಲನ ಸಾಧ್ಯವೆಂಬುದು ಇಲ್ಲಿನ ಸಾರ.
       ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ
       ವಿ
      ಜ್ಞಾನ ದೀವಿಗೆಯ ಹಿಡಿಯ ಬನ್ನಿ
       ಓ ಬನ್ನಿ ಸೋದರರೆ ಬೇಗ ಬನ್ನಿ…….

      ನೀವು ತಿಳಿಸಿದ ವಿಚಾರವನ್ನು ನಾ ಬಿಟ್ಟಿಲ್ಲವೆಂದು ಭಾವಿಸುತ್ತೇನೆ. ವಿಙ್ಞಾನವೆಂದರೆ ಶೈಕ್ಷಣಿಕ ದೃಷ್ಟಿಕೊನವನ್ನೂ ನೀಡುತ್ತದೆ ಎಂಬುದು ನನ್ನ ಭಾವ. 🙂

  2. ಧರ್ಮ ಗ್ರಂಥಗಳಿಗೂ ಕೊನೆಯ ಪುಟವಿದೆ
    ವಿಪರ್ಯಾಸ…

  3. Madam nimma lekhana chennagide . Nanu nadesuva Hiriyuru taluk gollahalliya shaleyalli nadeyuva prathi samarambhada aarambhadalli  ee padya deepa beleguv haadagi molagutthade. Neevu omme namma shalege banni. chitraduraga jille, hiriyuru talukina gollahalliya EE shalege bengalurininda bassinalli 3.30 gante prayana. mbl 9448484897

Leave a Reply

Your email address will not be published. Required fields are marked *