ಸಂಪಾದಕೀಯ

ಓದುವ ಬರೆಯುವ ಸುಖಕ್ಕೆ ಸೀಮಾರೇಖೆಗಳ ಹಂಗೇಕೆ: ನಟರಾಜು ಎಸ್. ಎಂ.

ಕೋಲ್ಕತ್ತಾದಲ್ಲಿದ್ದ ದಿನಗಳಲ್ಲಿ ಕನ್ನಡ ಪೇಪರ್ ಗಳು ಸಿಗದ ಕಾರಣ ಟೈಮ್ಸ್ ಆಫ್ ಇಂಡಿಯಾ ಪೇಪರ್ ಓದುವ ಅಭ್ಯಾಸವಿತ್ತು. ಬೆನೆಟ್ ಕೋಲೆಮನ್ ಕಂಪನಿ ಹೆಸರಿನಲ್ಲಿ 390 ರೂಪಾಯಿಯ ಚೆಕ್ ಒಂದರ ಜೊತೆ ಆ ಪೇಪರ್ ನ ಚಂದಾದಾರರಾಗುವ ಅರ್ಜಿಯೊಂದನ್ನು ಸ್ಥಳೀಯ ಪೇಪರ್ ವೆಂಡರ್ ಗೆ ನೀಡಿದರೆ ಒಂದು ವರ್ಷ ಪೂರ್ತಿ ಆ ಪೇಪರ್ ಮನೆ ಬಾಗಿಲಿಗೆ ಬಂದು ಬೀಳುತ್ತಿತ್ತು. ಆ ಒಂದು ವರ್ಷದಲ್ಲಿ ಪಡೆದ ಪೇಪರ್ ಗಳನ್ನು ತೂಕಕ್ಕೆ ಹಾಕಿದರೆ ಸುಮಾರು 200 ರೂಪಾಯಿ ತೂಕ ಹಾಕಿದ ಪೇಪರ್ ನಿಂದಲೇ ಸಿಗುತ್ತಿತ್ತು. ಆ ರೀತಿ ಚಂದಾದಾರನಾಗದೆ, ಬಿಡಿ ಪೇಪರ್ ಗಳನ್ನು ನಿತ್ಯ ಕೊಂಡರೆ ತಿಂಗಳ ಪೇಪರ್ ಬಿಲ್ ನೂರ ಹದಿನೈದರಿಂದ ನೂರಿಪ್ಪತ್ತು ರೂಪಾಯಿಗಳಾಗುತ್ತಿತ್ತು. ಚಂದಾದಾರನಾಗಲು ಕೊಟ್ಟ ಹಣದಲ್ಲಿ ಪೇಪರ್ ಮಾರಿದ ದುಡ್ಡು ಕಳೆದರೆ ಸುಮಾರು 190 ರೂಪಾಯಿಗೆ ವರ್ಷವಿಡೀ ಪೇಪರ್ ಸಿಗುವಾಗ ಚಂದಾದಾರನಾಗುವ ಅವಕಾಶವನ್ನು ನಾನು ಬಿಟ್ಟಿರಲಿಲ್ಲ.

ಆ ದಿನಗಳಲ್ಲಿ ಟೈಮ್ಸ್ ಆಫ್ ಇಂಡಿಯಾದ ಚಂದಾದಾರನಾಗಿ ಒಂದಷ್ಟು ವರ್ಷ ಓದುವ ಸುಖವನ್ನು ಅನುಭವಿಸುವ ಜೊತೆಗೆ ಸಪ್ಲಿಮೆಂಟರಿ ಪೇಜ್ ನಲ್ಲಿ ಬರುತ್ತಿದ್ದ ಅಂದವಾದ ಬೆಡಗಿಯರ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದೆ. ಒಮ್ಮೊಮ್ಮೆ ಕಾರಣಾಂತರಗಳಿಂದ ಪೇಪರ್ ವೆಂಡರ್ ಟೈಮ್ ಆಫ್ ಇಂಡಿಯಾ ಪೇಪರ್ ನೀಡಲಾಗದಿದ್ದರೆ ಟೆಲಿಗ್ರಾಫ್ ಎನ್ನುವ ಪೇಪರ್ ನೀಡುತ್ತಿದ್ದ. ಟೈಮ್ಸ್ ಆಫ್ ಇಂಡಿಯಾ ಪೇಪರ್ ಓದಿ ಓದಿ ಅಭ್ಯಾಸವಿರುವವನಿಗೆ ಟೆಲಿಗ್ರಾಫ್ ಮೇಲೆ ಕಣ್ಣಾಡಿಸಬೇಕು ಎಂದು ಮನಸ್ಸಾಗುತ್ತಿರಲಿಲ್ಲ. ಟೈಮ್ ಆಫ್ ಇಂಡಿಯಾ ಓದುವ ಸುಖಕ್ಕೆ ಮರುಳಾಗಿದ್ದ ಮನಸ್ಸು ಯಾಕೋ ಟೆಲಿಗ್ರಾಫ್ ಅನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಆದರೂ ಮನಸ್ಸಿಗೊಂದಿಷ್ಟು ಮಸ್ಕಾ ಹೊಡೆದು ಟೆಲಿಗ್ರಾಫ್ ಓದುವಂತೆ ಮಾಡುತ್ತಿದ್ದೆ.

ಕೋಲ್ಕತ್ತಾದಿಂದ ಸುಮಾರು 600ಕಿಮೀ ದೂರ ಇರುವ ಜಲ್ಪಾಯ್ಗುರಿಗೆ ಬಂದ ಮೇಲೆ ಟೈಮ್ಸ್ ಆಫ್ ಇಂಡಿಯಾ ಪೇಪರ್ ನ ಆಫರ್ ಗಾಗಿ ವಿಚಾರಿಸಿದಾಗ ಆ 390 ರೂಪಾಯಿಯ ಚಂದಾದಾರರಾಗುವ ಆಫರ್ ಕೋಲ್ಕತ್ತಾದಲ್ಲಿ ಮಾತ್ರ ಲಭ್ಯ ಎಂದು ತಿಳಿಯಿತು. ಜೊತೆಗೆ ಜಲ್ಪಾಯ್ಗುರಿಯಲ್ಲಿ ಇವತ್ತಿನ ಟೈಮ್ಸ್ ಆಫ್ ಇಂಡಿಯಾ ಪೇಪರ್ ನಾಳೆ ಓದಲು ಸಿಗುತ್ತದೆ ಎಂದು ತಿಳಿಯಿತು. ಆ ಪೇಪರ್ ಕೋಲ್ಕತ್ತಾದಲ್ಲಿ ಪ್ರಿಂಟ್ ಆಗುವ ಕಾರಣ 16 ಗಂಟೆ ರೈಲಿನ ಪ್ರಯಾಣ ಮುಗಿಸಿ ಜಲ್ಪಾಯ್ಗುರಿ ತಲುಪುವದರೊಳಗಾಗಿ ಆ ಪೇಪರ್ ನಲ್ಲಿರುವ ಸುದ್ದಿಗಳು ಹಳೆಯದಾಗಿರುತ್ತವೆ. ಹೀಗಿರುವಾಗ ಟೈಮ್ಸ್ ಆಫ್ ಇಂಡಿಯಾ ಕೊಂಡುಕೊಂಡು ಓದುವುದರಲ್ಲಿ ಅರ್ಥವಿಲ್ಲ ಎನಿಸಿತು. ಆಗ ಜಲ್ಪಾಯ್ಗುರಿ ಮಾರ್ಕೆಟ್ ನಲ್ಲಿ ಸಿಗುತ್ತಿದ್ದ ಪೇಪರ್ ಎಂದರೆ ಟೆಲಿಗ್ರಾಫ್ ಮಾತ್ರ. ದಿನ ನಿತ್ಯದ ಸುದ್ದಿಗಳನ್ನು ತಿಳಿಯಲು ಪೇಪರ್ ಓದಲೇಬೇಕಾದ ಅವಶ್ಯಕತೆ ಇರುವಾಗ ವೆಂಡರ್ ಒಬ್ಬನ ಜೊತೆ ಮಾತನಾಡಿ ಮನೆಗೆ ಟೆಲಿಗ್ರಾಫ್ ಹಾಕಿಸಲು ಶುರು ಮಾಡಿದ ಮೇಲೆ ಎಲ್ಲೋ ಟೈಮ್ಸ್ ಆಫ್ ಇಂಡಿಯಾ ಮಿಸ್ ಮಾಡಿಕೊಂಡ ಅನುಭವವಾಗುತ್ತಿತ್ತು. ಕ್ರಮೇಣ ಟೆಲಿಗ್ರಾಫ್ ನ ಓದಿಗೆ ಒಗ್ಗಿಕೊಂಡೆ.

ದಿನಪತ್ರಿಕೆಗಳೆಂದ ಮೇಲೆ ಕೆಲವು ರಾಜಕೀಯ ಪಕ್ಷಗಳ ಜೊತೆಗಿನ ಅವರ ನಿಷ್ಠೆ ಆ ಪೇಪರ್ ಗಳ ನಿಲುವುಗಳನ್ನು ಬಿಂಬಿಸುತ್ತವೆ. ಹೆಚ್ಚು ಸಲ ನಮ್ಮ ರಾಜಕೀಯ ನಿಲುವುಗಳ ಜೊತೆಗೆ ಪೇಪರ್ ಗಳ ರಾಜಕೀಯ ನಿಲುವುಗಳನು ನಾವು ತಾಳೆ ಮಾಡಿ ನೋಡುತ್ತೇವೆ. ನಮ್ಮ ಮತ್ತು ಆ ಪೇಪರ್ ಗಳ ರಾಜಕೀಯ ನಿಲುವುಗಳು ಬೇರೆ ಬೇರೆಯಾಗಿದ್ದರೆ ಆ ಪೇಪರ್ ಗೆ ನಾವು ಚಂದಾದಾರರಾಗುವುದಿಲ್ಲ. ರಾಜಕೀಯ ನಿಲುವುಗಳನ್ನು ಬದಿಗಿಟ್ಟು ಕೆಲ ಸುದ್ದಿಗಳ ಮೇಲೆ ಸುಮ್ಮನೆ ಕಣ್ಣಾಡಿಸಿದರೆ ಖಂಡಿತಾ ಪ್ರತಿ ಪೇಪರ್ ಗಳಲ್ಲಿ ಕೆಲವು ಸುದ್ದಿಗಳಾದರು ಓದಲು ಯೋಗ್ಯವಾಗಿಯೇ ಇರುತ್ತವೆ. ನಾವು ಪೇಪರ್ ಗಳನ್ನು ಕೊಂಡು ಓದಬೇಕಾದ ಕಾರಣ ನಮ್ಮ ಓದು ಹೆಚ್ಚು ಸಲ ಒಂದು ಪೇಪರಿಗಷ್ಟೇ ಸೀಮಿತವಾಗಿಬಿಡುತ್ತದೆ. ಖುಷಿಯ ಸಂಗತಿ ಎಂದರೆ ಓದುಗನಿಗೆ ಅನುಕೂಲವಾಗುವಂತೆ ಇಂದು ಪ್ರತಿ ಪೇಪರ್ ಗಳು ಅಂತರ್ಜಾಲದಲ್ಲೂ ಲಭ್ಯವಿದೆ. ಪ್ರಿಂಟ್ ಆದ ಪೇಪರ್ ಗಳಲ್ಲಿ ಓದುವ ಸುಖ ಆನ್ ಲೈನ್ ಪೇಪರ್ ಗಳಲ್ಲಿ ಸಿಗದೆ ಇರಬಹುದು. ಆದರೆ ಬೇಕಾದ ಪೇಪರ್ ಅನ್ನು ಒಂದು ಕ್ಲಿಕ್ಕಿನಲ್ಲಿ ದೇಶ ವಿದೇಶದ ಯಾವುದೇ ಮೂಲೆಯಲ್ಲಿದ್ದರೂ ತಿರುವಿ ನೋಡಬಹುದು.

ಹೀಗೊಂದು ಓದುವ ಸದಾವಕಾಶವಿರುವಾಗ ನಮ್ಮ ರಾಜಕೀಯ ನಿಲುವುಗಳ ಕಾರಣ ಒಂದೇ ಪೇಪರ್ ಅನ್ನು ಓದುತ್ತಾ ಕುಳಿತರೆ ಉಳಿದ ಪೇಪರ್ ಗಳಿಂದಲೂ ಪಡೆಯಬಹುದಾದ ಜ್ಞಾನವನ್ನು ನಾವು ಪಡೆಯುವಲ್ಲಿ ವಿಫಲರಾಗುತ್ತೇವೆ ಅನಿಸುತ್ತೆ. ಪತ್ರಿಕೆ ಯಾವುದಾದರೇನು ಓದಲು ಒಳ್ಳೆಯ ಬರಹ ಸಿಕ್ಕರೆ ಸಾಕು ಎಂಬ ಕಾರಣಕ್ಕೆ ನನಗೆ ತಿಳಿದ ಅಷ್ಟು ಕನ್ನಡ ಅಂತರ್ಜಾಲ ಪತ್ರಿಕೆಗಳನ್ನು ಸಮಯವಿದ್ದಾಗಲೆಲ್ಲಾ ಹುಡುಕಿ ಓದಿದ್ದಿದೆ. ಈಗಲೂ ಸಮಯ ಸಿಕ್ಕಾಗಲೆಲ್ಲಾ ಬೇರೆ ಅಂತರ್ಜಾಲ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಇಷ್ಟವಾದ ಲೇಖನಗಳನ್ನು ಪೂರ್ತಿ ಓದುತ್ತೇನೆ. ಈ ಓದಿನಿಂದ "ಎಲ್ಲೆಲ್ಲಿ ಏನೇನು ಪ್ರಕಟವಾಗುತ್ತಿದೆ" ಎಂಬ ಅರಿವು ಮೂಡುವುದರ ಜೊತೆಗೆ ಆ ಪತ್ರಿಕೆಗಳಿಂದ ನಾವು  ಕಲಿಯುವುದು ಏನೇನಿದೆ ಎಂಬುದನ್ನು ಮನಗಂಡಿದ್ದೇನೆ.

ಹೀಗೆ ಹೆಚ್ಚು ಪೇಪರ್ ಗಳನ್ನು ಓದುವುದರಲ್ಲಿ ಇರುವ ಸುಖವನ್ನು ಮನಗಂಡು ಒಮ್ಮೆ ಪಂಜು ಹೊಸದಾಗಿ ಪ್ರಾರಂಭವಾದ ದಿನಗಳಲ್ಲಿ ಗೆಳೆಯರೊಬ್ಬರಿಗೆ ಕರೆ ಮಾಡಿ "ಅಲ್ಲಾ ಸರ್, ಕೆಂಡಸಂಪಿಗೆ ಓದೋರು ಅವಧಿ ಓದಲ್ಲ. ಅವಧಿ ಓದೋರು ಪಂಜು ಓದಲ್ಲ. ಯಾಕೆ ಹೀಗೆ?" ಎಂದು ಪ್ರಶ್ನೆ ಮಾಡಿದ್ದೆ. "ಹಾಗೆ ನಟರಾಜ್. ಪ್ರಜಾವಾಣಿ ಓದೋರು ಕನ್ನಡ ಪ್ರಭ ಓದಲ್ಲ. ಕನ್ನಡ ಪ್ರಭ ಓದೋರು ವಿಜಯ ಕರ್ನಾಟಕ ಓದಲ್ಲ. ಓದುಗರಿಗೆ ಅವರದೇ ಆದ ಚಾಯ್ಸ್ ಇರುತ್ತದೆ. ಓದುಗರ ಆಯ್ಕೆಯ ವಿಸ್ತಾರವನ್ನು ಬದಲಿಸುವುದು ಕಷ್ಟದ ಕೆಲಸ" ಎಂದಿದ್ದರು. ಬಹುಶಃ ಆ ದಿನವೇ ಅನಿಸುತ್ತೆ ಬೇರೆಲ್ಲಾ ಅಂತರ್ಜಾಲ ಪತ್ರಿಕೆಗಳನ್ನು ಓದುವ ಓದುಗ ಮಹಾಶಯನನ್ನು ಪಂಜುವನ್ನು ಸಹ ಓದುವಂತೆ ಮಾಡುವ ಸಂಕಲ್ಪ ತೊಟ್ಟಿದ್ದೆ. ಆ ಸಂಕಲ್ಪ ತೊಟ್ಟ ನಂತರ ನಿಧಾನವಾಗಿ ಬರೀ ಓದುಗ ಮಹಾಶಯನಷ್ಟೇ ಅಲ್ಲ ಬರಹಗಾರರ ಬಳಗವೂ ಸಹ ಒಂದು ಪತ್ರಿಕೆಯ ಸೀಮಾರೇಖೆಯನ್ನು ದಾಟಿ ಮತ್ತೊಂದು ಪತ್ರಿಕೆಯ ಅದರಲ್ಲೂ ಈಗಷ್ಟೇ ಪ್ರಾರಂಭವಾಗಿರುವ ಪಂಜುವಿನಂತಹ ಪತ್ರಿಕೆಯ ಗಡಿಯೊಳಗೆ ಒಳ ಬರಲಾರರು ಎಂಬ ಸತ್ಯ ತಿಳಿಯಿತು.

ಹೊಸ ನಟರನ್ನು ಹಾಕಿಕೊಂಡು ಫಿಲಂ ತೆಗೆದರೆ ಫಿಲಂ ಹಿಟ್ ಆಗಲ್ಲ ಎಂಬ ಗಾಂಧಿನಗರದ ಅಪನಂಬಿಕೆಯಂತೆ ಹೊಸ ಲೇಖಕರ ಲೇಖನಗಳನ್ನು ಪಂಜುವಿನಲ್ಲಿ ಪ್ರಕಟಿಸತೊಡಗಿದಾಗ ಗೆಳೆಯರನೇಕರು "ಯಾರಾದರು ಫೇಮಸ್ ಆಗಿರ್ತಾರಲ್ಲ ಅಂತಹವರನ್ನೂ ಪಂಜುಗಾಗಿ ಬರೆದುಕೊಡಿ ಎಂದು ಕೇಳಿ" ಎಂಬ ಸಲಹೆ ಕೊಟ್ಟಿದ್ದರು. "ಫೇಮಸ್ ಆಗಿರೋರು ಏನಾದರು ಬರೆದರೆ ಹೆಸರು ಮಾಡಿರುವ ಪತ್ರಿಕೆಗಳಿಗೆ ಕಳಿಸ್ತಾರೆ ಸರ್. ನಮಗೆ ಯಾಕೆ ಕಳಿಸ್ತಾರೆ. ಆದರೂ ಪರಿಚಯವಿರುವ ಯಾರನ್ನಾದರು ಕೇಳೋಣ ಬಿಡಿ." ಎಂದು ಸಲಹೆ ನೀಡಿದ ಗೆಳೆಯರನ್ನು ಸುಮ್ಮನಾಗಿಸುತ್ತಿದ್ದೆ. ಇವತ್ತಿಗೂ ನಾನು ನನಗೆ ಪರಿಚಯವಿರುವ ಈಗಾಗಲೇ ಪತ್ರಿಕೆಗಳಲ್ಲಿ ಬರೆದು ಹೆಸರು ಮಾಡಿರುವ ಗೆಳೆಯರನ್ನು ಹಿರಿಯರನ್ನು ಪಂಜುಗಾಗಿ ಬರೆಯಿರಿ ಎಂದು ಕೇಳಿದರೆ ಪಂಜುಗಾಗಿ ಬರೆಯಲು ಹಿಂದು ಮುಂದು ನೋಡುತ್ತಾರೆ. ಅಷ್ಟೇ ಅಲ್ಲ, ಒಬ್ಬ ಸಾಮಾನ್ಯ ಓದುಗನಂತೆ ಪಂಜುವಿನ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಪಂಜುವನ್ನು ಆಹ್ವಾದಿಸಲು ಮುಜುಗರಪಡುತ್ತಾರೆ. ಅಂತಹ ಗೆಳೆಯರನ್ನು ನೋಡಿದಾಗ "ನೀವು ಪಂಜುವಿನಲ್ಲಿ ಓದುವ ಸುಖವನ್ನು, ಪಂಜುವಿಗಾಗಿ ಬರೆಯುವ ಸುಖವನ್ನು ಮಿಸ್ ಮಾಡಿಕೊಳ್ತಾ ಇದ್ದೀರಿ" ಎಂದು ಹೇಳಬೇಕೆನಿಸುತ್ತದೆ.

ಸಹೃದಯಿಗಳೇ, ನೀವು ಪ್ರೀತಿಯಿಂದ ಪಂಜುವನ್ನು ಪ್ರತಿ ವಾರ ಓದುತ್ತೀರಿ ಎಂದುಕೊಳ್ಳುವೆ. ನೀವು ಪಂಜುವಿನ ಖಾಯಂ ಓದುಗರಾಗಿದ್ದರೆ ಪಂಜುವಿನಲ್ಲಿ ಬರೆಯಲು ಶುರು ಮಾಡಿದವರಲ್ಲಿ ಹೆಚ್ಚಿನವರು ಹೊಸಬರೇ ಎಂದು ತಿಳಿದಿರುತ್ತದೆ.  ಆ ಹೊಸ ಲೇಖಕರು ಶ್ರದ್ಧೆಯಿಂದ ಕಟ್ಟಿಕೊಡುತ್ತಿರುವ ಅಕ್ಷರಗಳ ಲೋಕ ಪ್ರತಿ ವಾರ ನಿಮ್ಮ ಮುಂದೆ ಗೋಚರವಾಗುತ್ತಿದೆ. ಆ ಅಕ್ಷರಗಳ ಲೋಕವನ್ನು ನಿಮಗೆ ಕಟ್ಟಿಕೊಡಲು ಆ ಲೇಖಕರು ಅದೆಷ್ಟು ಸಮಯವನ್ನು ತಮ್ಮ ಲೇಖನವನ್ನು ತಿದ್ದಿ ತೀಡಲು ಕಳೆದಿರಬಹುದು ಎಂಬ ಅಕ್ಷರಗಳ ಕಟ್ಟುವ ಕಷ್ಟದ ಕೆಲಸದ ಅರಿವು ನೀವು ಒಬ್ಬ ಲೇಖಕನಾಗಿದ್ದರೆ ಮಾತ್ರ ನಿಮಗೆ ತಿಳಿದಿರುತ್ತದೆ. ಲೇಖಕರು ಕಳುಹಿಸಿದ ಲೇಖನಗಳನ್ನು ಒಪ್ಪ ಹೋರಣ ಮಾಡಿ ನಿಮ್ಮ ಮುಂದೆ ನೀಡುವುದು ಸಂಪಾದಕ ಮಂಡಳಿಯ ಶ್ರಮವೂ ಅಷ್ಟೆ ಸಣ್ಣದೇನಲ್ಲ.

ಪಂಜುವನ್ನು ಸೇರಿದಂತೆ ಪ್ರತಿ ಅಂತರ್ಜಾಲ ಪತ್ರಿಕೆಗಳನ್ನು ನಡೆಸುತ್ತಿರುವ ಎಲ್ಲಾ ಸಂಪಾದಕ ಬಳಗಕ್ಕೆ ಅಂತರ್ಜಾಲ ಪತ್ರಿಕೆಯೊಂದನ್ನು ನಡೆಸುವುದರಿಂದ ಆರ್ಥಿಕವಾಗಿ ಯಾವ ಲಾಭವೂ ಇಲ್ಲ ಎಂಬ ಸತ್ಯ ನಿಮಗೆ ತಿಳಿದಿರುತ್ತೆ ಎಂದುಕೊಳ್ಳುವೆ. ಅಂತರ್ಜಾಲ ಲೋಕದಲ್ಲಿ ಕಾಣಸಿಗುವ ಅಷ್ಟು ಲೇಖಕರುಗಳ ಮತ್ತು ಸಂಪಾದಕ ಮಂಡಳಿಯ ಆಶಯ ಓದುಗ ಮಹಾಶಯರಾದ ನಿಮಗೆ ಒಂದೊಳ್ಳೆಯ ಓದಿನ ಅನುಭವವನ್ನು ನೀಡಬೇಕೆಂಬುದರ ಜೊತೆಗೆ ನಾವೆಲ್ಲಾ ಒಟ್ಟಿಗೆ ಸೇರಿ ಕನ್ನಡದ ಸೇವೆಯನ್ನು ಹೀಗೂ ಸಹ ಮಾಡಬಹುದು ಎಂದು ತೋರಿಸುವುದೇ ಆಗಿರುತ್ತದೆ. ನಿಮಗೆ ತಿಳಿದಿರುವಂತೆ ಪತ್ರಿಕೆಯೊಂದರ ಯಶಸ್ಸು ನಿಂತಿರುವುದೇ ಓದುಗ, ಬರಹಗಾರ ಮತ್ತು ಸಂಪಾದಕ ಮಂಡಳಿಯ ನಡುವಿನ ಸಂಬಂಧಗಳ ಮೇಲೆ. ಆ ಸಂಬಂಧದಲ್ಲಿ ಹಿರಿದಾದ ಪಾಲು  ಓದುಗ ಮಹಾಶಯರಾದ ನಿಮ್ಮದು. ಆದ್ದರಿಂದ ಕನ್ನಡ ಪತ್ರಿಕೆಗಳನ್ನು ಓದಿ ಮತ್ತು ನಿಮ್ಮ ಗೆಳೆಯರಿಂದಲೂ ಓದಿಸಿರಿ. ಪಂಜು ತನ್ನ 25ನೇ ಸಂಚಿಕೆಯನ್ನು ಪ್ರಕಟಿಸುತ್ತಿರುವ ಈ ಸುಸಂದರ್ಭದಲ್ಲಿ ಪಂಜುವಿನ ಸಂಪಾದಕ ಮಂಡಳಿಯ ಪರವಾಗಿ ಸಹೃದಯಿ ಓದುಗರಾದ ನಿಮಗೆ ಮತ್ತು ನಲ್ಮೆಯ ಬರಹಗಾರರ ಬಳಗಕ್ಕೆ ನನ್ನ ನಮನಗಳು ಸಲ್ಲುತ್ತವೆ.

ಪಂಜುವಿನ ಮೇಲೆ ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ..

ನಿಮ್ಮ ಪ್ರೀತಿಯ

ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ

19 thoughts on “ಓದುವ ಬರೆಯುವ ಸುಖಕ್ಕೆ ಸೀಮಾರೇಖೆಗಳ ಹಂಗೇಕೆ: ನಟರಾಜು ಎಸ್. ಎಂ.

  1. ಪಂಜುವಿನ ಕವಾಯತು ನಿರಂತರವಾಗಿ ಸಾಗುತ್ತಿರಲಿ.
    ಅಭಿನಂದನೆಗಳು .

     

  2. ಮಾನ್ಯ ನಟರಾಜ ರವರೆ ,
    ನಿಮ್ಮ ಬರಹದಲ್ಲಿ ಸತ್ಯ ತುಂಬಾ ಅಡಗಿದೆ ಪಂಜು ನನಗೆ ಮೂರು  ಕಾರಣದಿಂದ ಇಷ್ಟವಾಯಿತು . ಮೊದಲು ಇದು ಸಾಹಿತ್ತಿಕವಾಗಿದೆ ಎರಡನೇಯದು ಇಲ್ಲಿ ನಮ್ಮ ಸಂಸ್ಕೃತಿಯಿದೆ ಮೋರನೆಯದ್ದು ಇಲ್ಲಿ ಹೊಸಬರಿಗೆ ಅವಕಾಶವಿದೆ . ಈಗಾಗಳೆ ಬೆಳಿದು ನಿಂತವರ ಬರಹ ಒಳ್ಳೆಯದೆ ಇದೆ ಒಪ್ಪುತ್ತೇನೆ ಎಷ್ಟು ದಿನ ಅಂತಾ ಅವರ ಬರಹಗಳೆ ಓದುವುದು ಹೊಸಬರಿಗೆ ಅವಕಾಶವಿಲ್ಲವೆ ಎನ್ನವುದು ನನ್ನ ಮೂಲಭೂತ ಪ್ರಶ್ನೆ ಈ ಬರವಣಿಗೆ ಕ್ಷೇತ್ರದವರಿಗೆ ಪತ್ರಿಕೆ ಮಾಧ್ಯಮದವರಿಗೆ ಹೊಸ ಮುಖಗಳಿಗೆ ಅವಕಾಶ ಸಿಕ್ಕಗಾಲೇ ಅವರ ಪ್ರತಿಭೆ ಗುರುತಾಗುವುದು
    ಇನ್ನು ಪಂಜು ಯಾವುದೆ ಕಾರಣಕ್ಕು ಹೆದರಬೇಕಿಲ್ಲ ಅನಿಸುತ್ತೆ ನಾನು ಇಲ್ಲಿರುವ ಎಲ್ಲಾ ಲೇಖನಗಳನ್ನು ತಪ್ಪದೆ ಓದುವೆ ಎಲ್ಲದ್ದಕ್ಕು ಕಾಮೆಂಟ ಬರೆಯಲು ಸಾದ್ಯವಾಗಿಲ್ಲ ಅಷ್ಟೆ ನನಗೆ ಅನಿಸುತ್ತದೆ ಈ ಪಂಜು ಅತಿ ದೊಡ್ಡವರು ಕೂಡಾ ಹಿರಿಯ ಸಾಹಿತಿಗಳು ಕೂಡಾ ಓದುತ್ತಾರೆ ಆದರೆ ಕಾಮೆಂಟ್ ಬರೆಯಲು ಹಿಂದೇಟು ಹಾಕುತ್ತಾರೆ ಅಷ್ಟೆ
    ನಿಮ್ಮ ಪಂಜು ತುಂಬಾ ಸುಂದರವಾಗಿ ಮೂಡಿ ಬರುತ್ತಿದೆ ಹಳೆಯ ಲೇಖಕರು ಬರೆಯಲಿಲ್ಲ ಅಂತಾ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಹೊಸಬರಿಗೆ ಅವಕಾಶಕೊಡಿ ಒಂದು ಅವರನ್ನು ಬೆಳಿಸಿದ ಶ್ರೇಯಸ್ಸು ಇನ್ನೊಂದು ನಿಮ್ಮ ಪತ್ರಿಕೆಯ ಪ್ರಚಾರ ಕನ್ನಡ ತಾಯಿಯ ಸೇವೆ ಮಾಡಲು ಬರವಣಿಗೆ ಲೋಕದಲ್ಲಿ ಅದೆಷ್ಟೊ ನವ ಯುವಕರು ಹಾತುರಿಯುತ್ತಿದ್ದಾರೆ ಅವರೆ ನಿಮ್ಮ ಪಂಜು ಬೆಳೆಸಲಿದ್ದಾರೆ
     
    ಶುಭವಾಗಲಿ ಪಂಜು

  3. ಮಾನ್ಯ ನಟರಾಜ ಅವರಿಗೆ ನಮಸ್ಕಾರ.
                  ನಾನು, ಪ್ರಕಾಶ  ಡಂಗಿ ಬಾಗಲಕೋಟೆ ನಗರದ ನಿವಾಸಿ ಕಳೆದ ಎರಡು ವಾರದಿಂದ ನಿಮ್ಮ ಪಂಜು ಓದುಗ. ಪಂಜು ತುಂಬಾ ಚನ್ನಾಗಿ ಮೂಡಿ ಬರುತ್ತಿದೆ. ಶುಭವಾಗಲಿ.

  4. regular oduttiddene….Best for future…dont worry…u have bright future with Panju….

  5. ಸರ್, ಪತ್ರಿಕಾರಂಗದ ಪಂಜುವೆಂಬ ಬೆಳಕಿನ ಮಹತ್ವಾಕಾಂಕ್ಷೆಯ ದಾರಿಯನ್ನು ಹಿಡಿದಿರುವ ನಿಮಗೆ ನಮ್ಮೆಲ್ಲಾ ಸಹಕಾರವಿದ್ದೆ ಇದೆ. ಮುನ್ನಡೆಯಿರಿ…ಅಕ್ಷರಲೋಕದಲ್ಲಿ ಗಟ್ಟಿಯಾಗಿದ್ದು ಉಳಿಯುವುದು…ಜೊಳ್ಳು ಹಾರಿಹೋಗುವುದು…ಚಿಂತೆ ಬೇಡ…ಪಂಜು ಪ್ರಜ್ವಲಿಸಲಿ…ಆ ಪ್ರಜ್ವ ಬೆಳಕಿನಲ್ಲಿ ನಮ್ಮಂಥವರನ್ನೂ ಮಿಂಚುವಂತೆ ಮಾಡುವ ನಿಮ್ಮಲ್ಲಿರುವ ಹಟವಾದಿ, ಛಲಗಾರನಿಗೆ ಶರಣೆಂದೆನು….ಶುಭವಾಗಲಿ !

  6. ಇಪ್ಪತ್ತೈದು ಸಂಚಿಕೆಗಳ ಸಾಧನೆಗೆ ಅಭಿನಂದನೆಗಳು.  ನಿರಂತರ "ಪಂಜು" ಪತ್ರಿಕೆ ಬರುತ್ತಿರಲಿ ಹಾಗೂ "ಪಂಜು"ವಿನ ಬೆಳಕು ಎಲ್ಲೆಡೆ ಹರಡಲಿ.
    ಒಂದು ಪತ್ರಿಕೆ ಯಶಸ್ವಿ ಆಗಬೇಕಿದ್ದರೆ, ಹೆಸರಾಂತ ಲೇಖನವೇ ಬೇಕೆಂದೇನಿಲ್ಲ. ಪ್ರಕಟಿಸುವ ಲೇಖನಗಳ ಗುಣಮಟ್ಟ ಇಂದಿನಂತೆಯೇ ಕಾಯ್ದುಕೊಳ್ಳಿ. ಆವಾಗ "ಪಂಜು"ವಿನ ಹೆಸರು ಎಲ್ಲೆಡೆ ಪಸರುವುದು ಖಂಡಿತ.
    ಶುಭವಾಗಲಿ

  7. "ಹೆಸರಾಂತ ಲೇಖನವೇ" ದ ಬದಲಿಗೆ, ದಯವಿಟ್ಟು " ಹೆಸರಾಂತ ಲೇಖಕರ ಲೇಖನವೇ" ಎಂದು ಓದಿಕೊಳ್ಳಿ.

  8. ವೆಂಕಟೇಶ ಮಡಿವಾಳ (ಬೆಂಗಳೂರು ಸಪ್ತಗಿರಿವಾಸಿ) says:

    "ಪತ್ರಿಕೆ ಯಾವುದಾದರೇನು ಓದಲು ಒಳ್ಳೆಯ ಬರಹ ಸಿಕ್ಕರೆ ಸಾಕು ಎಂಬ ಕಾರಣಕ್ಕೆ ನನಗೆ ತಿಳಿದ ಅಷ್ಟು ಕನ್ನಡ ಅಂತರ್ಜಾಲ ಪತ್ರಿಕೆಗಳನ್ನು ಸಮಯವಿದ್ದಾಗಲೆಲ್ಲಾ ಹುಡುಕಿ ಓದಿದ್ದಿದೆ. ಈಗಲೂ ಸಮಯ ಸಿಕ್ಕಾಗಲೆಲ್ಲಾ ಬೇರೆ ಅಂತರ್ಜಾಲ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಇಷ್ಟವಾದ ಲೇಖನಗಳನ್ನು ಪೂರ್ತಿ ಓದುತ್ತೇನೆ. ಈ ಓದಿನಿಂದ "ಎಲ್ಲೆಲ್ಲಿ ಏನೇನು ಪ್ರಕಟವಾಗುತ್ತಿದೆ" ಎಂಬ ಅರಿವು ಮೂಡುವುದರ ಜೊತೆಗೆ ಆ ಪತ್ರಿಕೆಗಳಿಂದ ನಾವು  ಕಲಿಯುವುದು ಏನೇನಿದೆ ಎಂಬುದನ್ನು ಮನಗಂಡಿದ್ದೇನೆ."
     
    +1
    ""ಅಲ್ಲಾ ಸರ್, ಕೆಂಡಸಂಪಿಗೆ ಓದೋರು ಅವಧಿ ಓದಲ್ಲ. ಅವಧಿ ಓದೋರು ಪಂಜು ಓದಲ್ಲ. ಯಾಕೆ ಹೀಗೆ?" ಎಂದು ಪ್ರಶ್ನೆ ಮಾಡಿದ್ದೆ."
     
    ಇದು ಎಲ್ಲರಿಗೆ ಅನ್ವಯವಾಗುವುದಲ್ಲ ಅನ್ಸುತ್ತೆ .. ಕಾರಣ ನಾನು  ಈಗಲೂ ದಿನಂಪ್ರತಿ  ಕೆಂಡ ಸಂಪಿಗೆ ಸಂಪದ ವಿಸ್ಮಯನಗರಿ  ಮತ್ತಸ್ತು ಕನ್ನಡ ಜಾಲ ತಾಣಗಳನ್ನು ಓದುವೆ ಪ್ರತಿಕ್ರಿಯಿಸುವೆ ಬರೆಯುವೆ ..
     
     
    ಸಮೂಹ ಮಾಧ್ಯಮಗಳು  ರಾಜಕೀಯ ಪಕ್ಷಗಳು -ವ್ಯಕ್ತಿಗಳ  ಕೈ ಗೊಂಬೆ , ಆಸ್ತಿಯಾಗಿ ಯಾವ್ದೋ ಕಾಲವಾಯ್ತು .. 
    http://apostlethomasindia.wordpress.com/about-us/who-controls-the-indian-media-gautam-sen/
     
    ನಟರಾಜು ಅವರೇ  ಮೊದಲಿಗೆ ನೀವ್ ಪಟ್ಟಿ ಮಾಡಿದ ರೀತಿಯ  ಎಲ್ಲ ಸಮಸ್ಯೆಗಳು ಮೊದಲಿಗೆ ಮಾಮೂಲು ಕಾಲ ಕ್ರಮೇಣ ಪಂಜು ದಿವ್ಯವಾಗಿ ಬೆಳಗುತ್ತಿದ್ದಂತೆ ಈಗ ಮೂಗು ಮುರಿಯುವವರು ತಾವಾಗೆ ಬರುವರು ಬರೆಯಲು ಹಾತೊರೆಯುವರು-ಬರದಿದ್ದರೂ ಪರವಾಗಿಲ್ಲ …! 
    ಫೇಮಸ್ ಆದವರನ್ನ್ ಮತ್ತಸ್ತು ಫೇಮಸ್ ಯಾಕ್ ಮಾಡೋದು  ಎಲೆ ಮರೆ ಕಾಯಿಗಳನ್ನು ಬೆಳಕಿಗೆ ತರುವ  ಪ್ರಯತ್ನವಾಗಲಿ .. 
    ಕನ್ನಡ ಅಂತರ್ಜಲ ತಾಣಗಳು  ನಡೆಸುವವರು ಬರೀ ಈ ತಾಣಗಳನ್ನು ನಡೆಸುತ್ತ ಇದ್ದರೆ  ನಿರ್ವಹಣೆ ಕಷ್ಟ ಎಂದು ಎಲ್ಲರೂ ಅವರೇ ಹೇಳಿರುವರು , ಅದಕ್ಕಾಗಿ ಕೆಲವರು ಜಾಹೀರಾತು  ಹಾಕುವರು . ಹಾಗಯೇ ಇನ್ನಿತರ ಕೆಲಸ ಮಾಡುವರು ,ಮತ್ತು ಈ ತಾಣಗಳನ್ನು ಕನ್ನಡಮ್ಮನಿಗೆ ಸಲ್ಲಿಸುವ ಕಿರು ಸಾಹಿತ್ಯ ಕಾಣಿಕೆ ಎನ್ನುವರು .. 
     
     
    ೨೫ ನೆ ಸಂಚಿಕೆ  ಇಇನ್ನಷ್ಟು ವಿಶೇಷವಾಗಿದ್ದರೆ ಚೆನ್ನಿತ್ತು ಅನ್ಸಿತು. 
    ಕಾರಣ  ಇದು ೨೫ ನೆ ವಿಶೇಷ ಸಂಚಿಕೆ  ಆದರೆ ಎಂದಿನಂತೆಯೇ ಇತ್ತೆನಿಸಿತು .. 
    ಮುಂದಿನ ಸಂಚಿಕೆಗಳಲ್ಲಿ  ಆ ವಿಶೇಷತೆ ಕಾಣಿಸಲಿ ಎಂದು ಆಶಿಸುವೆ .. 
     
     
    .. 
    ಶುಭವಾಗಲಿ 
     
    \।/
     
     
     

  9. ಹೌದು ನಟಣ್ಣ..
    ಬರೆಯೋರ ಕಷ್ಟ ಬರೆಯೋರಿಗೆ, ಪ್ರಕಟಿಸೋರ ಕಷ್ಟ ಅವರಿಗೆ ಮಾತ್ರ ತಿಳಿಯುತ್ತೆ.. ಪ್ರತಿ ವಾರ ಎಲ್ಲೇ ಇದ್ರೂ ವಾರಾಂತ್ಯದ ಹೊತ್ತಿಗೆ ಒಂದು ಲೇಖನ ಬರೆಯಲೇಬೇಕಾದ ಜವಾಬ್ದಾರಿ ಲೇಖಕರದು. ಪ್ರೆತೀ ವಾರ ಹೊಸತನ್ನೇ ಬರೆಯಬೇಕೆಂಬ ಬಯಕೆಯಲ್ಲಿ ಕೆಲಬಾರಿ ಅಂದುಕೊಂಡಿದ್ದೆಲ್ಲವೂ  ಖಾಲಿಯಾಯಿತು .. ಮುಂದಿನ ವಾರಕ್ಕೆ ಏನೂ ಇಲ್ಲವೇ ಅಂದೂ ಅನಿಸುತ್ತದೆ.. ಆದರೆ ವಾರಾಂತ್ಯಕ್ಕೆ ಇದೇ ಜವಾಬ್ದಾರಿಯ ನೆನಪು ನಮ್ಮಿಂದ ಏನೋ ಬರೆಸುತ್ತದೆ. ಅಂತರ್ಜಾಲ ತಾಣದಲ್ಲಿದ್ದರೂ , ಬ್ಲಾಗುಗಳಲ್ಲಿದ್ದರೂ ಪ್ರತೀವಾರ ಒಂದು ತಾಣದಲ್ಲಿ ಬರೆಯಬೇಕೆನ್ನೋ ಗುರಿ ಬರಹಕ್ಕೆ ಒಂದು ಜವಾಬ್ದಾರಿಯನ್ನೂ, ಕಲಿಯುವಿಕೆಯನ್ನೂ ಕಲ್ಪಿಸಿಕೊಡುತ್ತದೆ..
    ಇನ್ನು ಓದುಗರಾಗಿ: ಅದನ್ನೋದೋರು ಇದನ್ನೋದಲ್ಲ. ಯಾಕೆ ಅನ್ನೋ ಪ್ರಶ್ನೆಗೆ ನೀವೇ ಉತ್ತರ ಕೊಟ್ಟಿದ್ದೀರಿ.. ಮತ್ತೊಂದು ಉತ್ತರ ಸಮಯದ ಅಭಾವ ಅಂತಲೂ ಅನ್ನಬಹುದು. ಅಂತರ್ಜಾಲದಲ್ಲಿ ಮುಂಚೆ ಒಂದೋ ಎರಡೋ ತಾಣಗಳಿದ್ದವು. ಈಗ ನಿಲುಮೆ, ಸಂಪದ, ಅವಧಿ, ಕೆಂಡಸಂಪಿಗೆ.. ಹೀಗೆ ಹೊಸ ಹೊಸ ತಾಣಗಳು… ಹಾಗೆ ಒಂದು ಬದಿಯ ಜನರು ಮತ್ತೊಂದಕ್ಕೆ ಬರದೇ ಇರಬಹುದು

  10. ನಾನು ಮೂರು ವಾರಗಳಿಂದ ಪಂಜು ಓದುತ್ತಿದ್ದೇನೆ. ಇಷ್ಟವಾಯ್ತು.

  11. ೨೫ ನೇ ಸಂಚಿಕೆಯನ್ನು ಯಶಸ್ವಿಯಾಗಿ ಪೂರೈಸಿದ  'ಪಂಜುಗೆ' ಶುಭ ಹಾರೈಕೆಗಳು….  ಇನ್ನಷ್ಟು ಉತ್ತಮ ಸಂಚಿಕೆಗಳು ಮೂಡಿಬರಲಿ….

Leave a Reply

Your email address will not be published. Required fields are marked *