ಕಾವ್ಯಧಾರೆ

ಎರೆಡು ಕವಿತೆಗಳು:ಅನಿತಾ, ಶಾಂತಿ ಅಪ್ಪಣ್ಣ


ಸಣ್ಣ ತಪ್ಪಿಗಾಗಿ ಎದುರು ನಿಂತು ನೀ ನಿಂದಿಸುವಾಗ

ಹೆದರಿದ ನನ್ನ ಮೊಗವ ಕಂಡು ಮೌನ ತಳೆವ
ಆ ನಿನ್ನ ಒಲವಿನ ಪರಿ ಚಂದ…
 
ಮುಸ್ಸಂಜೆಯಲಿ ಮುತ್ತಿಟ್ಟು, ಮರು ಮುತ್ತಿಗಾಗಿ ಕಾಯುವಾಗ
ಕೊಡದೆ ನಾ ಕಾಡುವಾಗ, ಹುಸಿಕೋಪಗೊಂಡ
ಆ ನಿನ್ನ ಮುದ್ದು ಮೊಗ ಚೆಂದ….
 
ನಾ ಮಾಡಿದ ಚೇಷ್ಟೆಯನ್ನೆಲ್ಲಾ ಮರೆತು, ನೀ ನನ್ನ ಮಗುವಂತೆ
ಎಂದು ಎದೆಗಪ್ಪಿ ಸಂತೈಸುವ
ಆ ನಿನ್ನ ಸಹನೆಯ ಗುಣ ಚೆಂದ…
 
ನಿನ್ನ ಪ್ರೀತಿಯ ನನ್ನೆದುರು ನಿರೂಪಿಸಿ, ಕಾಯುವಾಗ
ನನ್ನ ಸಮ್ಮತಿಗಾಗಿ, ನಾ ಸಮ್ಮತಿಸಿದ ಕ್ಷಣದಿ ನಿನ್ನಲ್ಲಿ ಕಂಡ
ಆ ನಿಷ್ಕಲ್ಮಷ ನಗು ಚೆಂದ….
 
ಕೊನೆವರೆಗೂ ನಿನ್ನ ಕೈ ಬಿಡದೆ
ಪ್ರತಿಕ್ಷಣವೂ ನಿನ್ನ ಜೊತೆಗಿರುವೆನೆಂದು
ಪ್ರಮಾಣ ಮಾಡುವೆ ನಾ ನನ್ನ ಮನದಾಳದಿಂದ…
 
-ಅನಿತಾ

 
ಸ್ವಾತಿಯೋ .. ಚಿತ್ತವೋ .. 
ಮುತ್ತು ಕಟ್ಟುವ ಮಳೆ ಹನಿಯ 
ಹಿಡಿದಿಟ್ಟವರಿಲ್ಲ .. 
 
ಮನದ ಹಸಿಮಣ್ಣಿನಲಿ 
ಕವಿತೆ ಬಿತ್ತುವ  
ಮಾಯದ ಕೈಯ ಕಂಡವರಿಲ್ಲ 
 
 
ಕವಿತೆ ಹುಟ್ಟುವ ಕಾಲ 
ಗುಣಿಸಿ ಭಾಗಿಸಿ ಹೇಳಲಾಗುವುದಿಲ್ಲ 
ಮೂರು ನಾಲ್ಕು ಆರು ಒಂಭತ್ತು ..
ತಿಂಗಳ ಲೆಕ್ಕ ಇಲ್ಲಿ ಸಲ್ಲುವುದಿಲ್ಲ . 
 
ಕವಿತೆ ಹುಟ್ಟುವ ಮೊದಲು 
ಹೊರಬೇಕು ಬಸಿರ ಭಾರ 
ಕನಸಬೇಕು ಕವಿತೆಯ 
ಧೇನಿಸಬೇಕು .. ಕೈ ಕಾಲು ಕಣ್ಣು ಮೂಗು 
ಕವಿತೆಯ ಒಳಹೊರಗು 
ಒಳಗಣ್ಣಿಗೆ ಕಾಣಬೇಕು . 
 
ಎಲ್ಲ ಕೇಳಿಸಿಕೊಳ್ಳುತ್ತದೆ ಕವಿತೆ 
ಎಚ್ಚರವಿರಬೇಕು ಸದಾ ..ಕವಿಮನಸು 
ಇಲ್ಲವಾದರೆ ಕವಿತೆ ಅನಾಥವಾಗುತ್ತದೆ 
ಕಾಲಗತಿಯ ಚಕ್ರವ್ಯೂಹದಲಿ 
ಅಭಿಮನ್ಯುವಿನಂತೆ ಅಕಾಲದಲಿ ಸಾಯುತ್ತದೆ 
 
ಒಳಗರ್ಭದಲಿ ಒಡಮೂಡಿದ 
ಕವಿತೆಯ ಹಡೆಯಬೇಕು .. 
ಪೂರ್ಣರೂಪದಲಿ
ನೋವು ತಿನ್ನಲೇ ಬೇಕು ಹಡೆವ ಮೊದಲು 
ಹಡೆದ ಸುಖವಿರುವುದೇ 
ಪಡೆದ ನೋವಿನಲ್ಲಿ … 
 
-ಶಾಂತಿ ಅಪ್ಪಣ್ಣ 

 
ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಎರೆಡು ಕವಿತೆಗಳು:ಅನಿತಾ, ಶಾಂತಿ ಅಪ್ಪಣ್ಣ

  1. Anitha avre nimma kavite balu hidisitu. Preethiya nija rupa , nivedane haagu adara nishkalmashate na bahu sogaasaagi varnisiddiri 🙂
     
    Shanti Appanna avre , nimma kavite bahu adbuta vaagide. haagu artha purna vaagide. kaviteyannu maguvina rupadalli kaanuva nimma ee bhaavakka salaam. magu tanna rupavannu prati kshanakku padeyuttale iruttade. haagu taayi , maguvina iruvikeyannu prati kshanakku anubhavisuttale. illi kaviyu tannolage chiguruttiruva kaviteyannu prati yondu hantadallu druda padisikolluttiruva holike adbutavaagide. 🙂

  2. ಕವಿತೆ ಹುಟ್ಟುವ ಗುಟ್ಟನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ನಿಮ್ಮ ಒಳಗಣ್ಣಿಗೆ ಥ್ಯಾಂಕ್ಸ ಶಾಂತಿ ಅವರೇ…

Leave a Reply

Your email address will not be published. Required fields are marked *