ಅಮರ್ ದೀಪ್ ಅಂಕಣ

ಎದ್ದೇಳು ಮಂಜುನಾಥ”ನೂ “ಹ್ಯಾಪಿ ಡೇಸ್” ನ ಅಮಲಿನವನೂ: ಅಮರ್ ದೀಪ್ ಪಿ. ಎಸ್.

ನನ್ನೊಬ್ಬ  ಹಳೆಯ ಗೆಳೆಯ ನೆನಪಾದ. ಇತ್ತೀಚಿಗೆ ನಾನು ಕಂಡ ಹೊಸ ಹುಡುಗನ ಅತಿಯಾದ ಆತ್ಮವಿಶ್ವಾಸವೋ ಅಹಮಿಕೆಯೋ ಒಟ್ಟಿನಲ್ಲಿ ಬೇಜಾರು ತರಿಸಿತು. ಪ್ರತಿ ದಿನ ಬಂದು ನಗು ನಗುತ್ತಾ, ಹಳೆಯ, ಕಿಶೋರನದೋ, ರಫಿ ಸಾಹೇಬರದೋ ಇಲ್ಲಾ ಮುಖೇಶನದೋ ಹಾಡನ್ನು ಗುನುಗುತ್ತಾ, ತನಗೆ ತಿಳಿದ ತಿಳಿ ಹಾಸ್ಯದ ಮಾತನ್ನೂ ಬಿಂದಾಸ್ ಆಗಿ  ಹೇಳುತ್ತಾ ನಾಲಗೆ ಮೇಲೆ ಬಹಳ ಹೊತ್ತು ರುಚಿ ಆರದಂತಿರುವ ಚಹಾ ಅಥವಾ ಕಾಫಿ ಕೊಟ್ಟು ಹೋಗುವ ವಿಷ್ಣು ಈಗತಾನೇ ಕೊಟ್ಟು ಹೋದ ಕಾಫಿ ಹೀರುತ್ತಿದ್ದೆ.  ಒಂದಕ್ಕೊಂದು ತಾಳೆಯಿಲ್ಲದ ಪರಿಚಯವೆನಿಸಿದರೂ ಒಂದೆರಡು ನಿರ್ಲಕ್ಷಿಸುವಂಥ ಗುಣಗಳ ಅಲ್ಲದೇ ಒಂಚೂರು ಇಷ್ಟವಾದ್ದನ್ನು ಹೇಳಬೇಕಾದ್ದಿದೆ…. 

ನಮ್ಮ ಕಾಲೇಜಿನ ದಿನಗಳಲ್ಲಿ ಹರಿಹರದಿಂದ  ದಾವಣಗೆರೆಗೆ ಓಡಾಡುತ್ತಿದ್ದ ಹಲವು ಗೆಳೆಯರಲ್ಲಿ  ಒಬ್ಬನಿದ್ದ..ಅವನಂತೆ ಅದಕ್ಕೂ ಮುಂಚೆ ಮತ್ತು ನಂತರ ಪರಿಚಯವಾದವರು ಇದ್ದಾರೆ. ಅವನ ಮನೆಯಲ್ಲಿ ದುಡಿಯುವ ತಂದೆ, ಯಾವತ್ತೂ ಮಕ್ಕಳಿಗೆ ಕೈ ಎತ್ತಿ ಹೊಡೆದಿದ್ದರೋ ಏನೋ ಕಾಣೆ. ಆದರೆ ಧಾರಾಳವಾಗಿ ಕೈಯಿಂದ ಇಷ್ಟಪಟ್ಟು ಖುಷಿಯಿಂದ ಕಾಸು ಕೊಡೋರು. ನಾನು ನೋಡುವಾಗ ಆಗಲೇ ನನ್ನ ಗೆಳೆಯ, ನನಗಿಂತ ನಾಲ್ಕೈದು ವರ್ಷಗಳ ಹಿರಿಯ. ಆದರೂ ಪಿಯು ಫೇಲಾಗಿ, ಬದು ಕೆಂದರೆ ಸೊ ಸಿಂಪಲ್. ನಥಿಂಗ್ ಟು ವರಿ… ಜಸ್ಟ್ ಗೋ ಆನ್  ವಿತ್ ದಿ ಟೈಮ್ … ಅನ್ನುವಂಥ ಗುಣ. ಒಳ್ಳೆಯವನೇ, ಚೂರು ಎಫರ್ಟ್ ಹಾಕಿದರೂ ಓದಿನಲ್ಲಿ ದಾಟಿಕೊಂಡು ಬಿಡುತ್ತಿದ್ದನೋ ಏನೋ. ಆದರೆ ದಾಟಲು ಇವನವೇ ತೊಡರುಗಾಲು. ಹೇಳಿದೆನಲ್ಲ, ನನಗಿಂತ ನಾಲ್ಕೈದು ವರ್ಷ ದೊಡ್ಡವ ಬೇರೆ. ನಮ್ಮ ಜೊತೆ ಸೇರಿಕೊಂಡ ಕಾಲೇಜಿಗೆ ಜೊತೆಗೆ ಓಡಾಡುವ ಹುಡುಗಿಯರನ್ನು, ಹುಡುಗರನ್ನು ಕಾಲೆಳೆಯುತ್ತಾ, ಎಳೆಸಿಕೊಳ್ಳುತ್ತಾ, ನಕ್ಕು ನಗಿಸಿ ಹ್ಯುಮರಸ್ ಆಗೇನೋ ಇರುತ್ತಿದ್ದ. ಆದರೆ ಬದುಕಿನ ಇಂಟೆನ್ಸಿಟಿ  ಅನ್ನೋದು ಅವನಿಗೆ ನಗಣ್ಯವಾಗಿತ್ತು.  ಓದು ಇಲ್ಲದಿದ್ದರೂ ಒಂದೋ ವ್ಯವಹಾರ, ದುಡಿಮೆ ಯಾವುದಾದರೂ ಶುರು ಹಚ್ಚಿ ಕೊಂಡಿದ್ದರೂ ಅವನಿಗೆ ಜೀವನ ದಕ್ಕಿಬಿಡುತ್ತಿತ್ತು. ಆದರೆ ಹಾಗಾಗಲಿಲ್ಲ. ತನಗಿಂತ ಚಿಕ್ಕವಳು, ತನ್ನನ್ನು ಕೇವಲ ಸ್ನೇಹಿತನೆಂದೇ ಮಾತಾಡಿಸುತ್ತಿದ್ದ ಹುಡುಗಿಯ ಹಿಂದೆ ಅಲೆದ. ಆ ಅಲೆದಾಟ ಎಲ್ಲಿವರೆಗೆ ಅಂದರೆ ನಮ್ಮ ಕಾಲೇಜು ಮುಗಿದು ನಾವು ದುಡಿಮೆ, ನೌಕರಿ, ಮನೆ, ಹೆಂಡತಿ, ಮಕ್ಕಳು, ಖರ್ಚು, ಇವುಗಳಿಗೆ ಗಂಟು ಬಿದ್ದಿದ್ದರೆ, ಅವನಿನ್ನೂ ಆ ಹುಡುಗಿ ಕಾಲೇಜು ಬಿಟ್ಟು, ಮದುವೆಯಾಗಿ, ಮಕ್ಕಳಾಗಿ,ಯಾವುದೋ ಊರಿನಲ್ಲಿದ್ದರೂ ಅಪ್ಪಿತಪ್ಪಿ ಆ ಊರಿಗುಂಟ ಬೇರೆ ಊರಿಗೆ ಹೋಗುವುದಿದ್ದರೆ, ಅವಳ ಮನೆ ಪತ್ತೆ ಮಾಡಿ, ಅವಳಿಗೆ ಆಪ್ತರೆನಿಸಿಕೊಂಡವರನ್ನು ಎಳೆದುಕೊಂಡು ಹೋಗಿ ಅವಳೆದುರು ಹಲ್ಕಿರಿದು ಒಂದು ಕಪ್ಪು ಕಾಫಿ ಅಥವಾ ಟೀ ಹೀರಿ, ಹೊರಗಡೆ ಬಂದವನೇ ಥ್ರಿಲ್ಲಾಗಿಬಿಡುತ್ತಿದ್ದನಂತೆ. ಆ ಹುಡುಗಿಯ ಕ್ಷಮಿಸಿ ಗೃಹಿಣಿಯ ಪರಿಸ್ಥಿತಿ ಹೇಗಾಗಿರಬೇಡ? ಇಷ್ಟರಲ್ಲಾ ಗಲೇ ಅವರಪ್ಪನಿಗೆ ನೌಕರಿಯಲ್ಲಿ ನಿವೃತ್ತಿಯಾಗಿ ಬೆಂಗಳೂರಿನ ಸಮೀಪದ ಊರೊಂದರಲ್ಲಿ ಸೆಟ್ಲ್  ಆಗಿದ್ದರು. ಮತ್ತಿವನು, ದುಡಿಯಲು ಬೆಂಗಳೂರಿನ ಟ್ರಾವೆಲ್ಸ್ ಏಜೆನ್ಸಿಯೊಂದರಲ್ಲಿ ಸೇರಿಕೊಂಡ. 

ನನ್ನ ಮದುವೆಗೆ ಉಳಿದೆಲ್ಲ ಗೆಳೆಯರು ಬೆಂಗಳೂರಿನಿಂದ ಬರಲು ಇನ್ನೇನು ಹಿಂದಿನ ದಿನ ರಾತ್ರಿ ಬಸ್ಸು ಹತ್ತಬೇಕು, ಈ ಗೆಳೆಯನ ತಂದೆ ತೀರಿ ಹೋದರಂತೆ.  ಆ ಕಡೆ ನಡೆದರು. ನನಗೆ ಆಮೇಲೆ ತಿಳಿಯಿತು. ಬರುಬರುತ್ತಾ, ಅವನ ಪರಿಸ್ಥಿತಿ "ದುಡಿಯೋದು ಎಂಟಾಣಿ ಖರ್ಚು ರುಪಾಯಿ" ಅಂತಾ ಯಿತು. ಬೆಂಗಳೂರಿನಲ್ಲಿ ದುಡಿಯಬೇಕೆಂದರೆ ಐದು, ಆರು ಗಂಟೆಗೆ ಮನೆ ಬಿಡುವ ಸಂಧರ್ಭವು ಉಂಟು. ಹೀಗಿದ್ದಾಗ ಏಳುವುದೇ ಒಂಬತ್ತು ಆದರೆ ಮುಗೀತು ಕಥೆ. ವ್ಯವಹಾರ ಮಾಡಲು ಬಂಡವಾಳ ಬೇಕು, ಹಾಕುವವರ್ಯಾರು ? ಇರುವ ನಮ್ಮ ಶ್ರಮವನ್ನೇ ಬಂಡವಾಳವನ್ನಾಗಿ ಬದಲಾಯಿಸಿಕೊಳ್ಳ ಬೇಕು. ಅದು ಬಿಟ್ಟು ಅವರಿವರನ್ನು ಕೇಳುವುದು ಅಲ್ಲ. ನಂತರ ನೌಕರಿಯಲ್ಲಿದ್ದ ನಮ್ಮಲ್ಲೇ ಕೆಲ ಗೆಳೆಯರಿಗೆ ಫೋನು ಮಾಡಿ "ಒಂದತ್ತು ಸಾವ್ರ ಕೊಡಲೇ, ನಿಮಗೇನ್ ಕಮ್ಮಿ, ಮಸ್ತ್ ಇನ್ಕಮ್ ಇಲ್ವಾ ?" ಅನ್ನುತ್ತಿದ್ದ. ಅಷ್ಟೊತ್ತಿಗಾಗಲೇ ಎಷ್ಟು ಬಾರಿ ಕೆಲಸ ಬಿಟ್ಟಿದ್ದನೋ ಗೊತ್ತಿಲ್ಲ. ಗೆಳೆಯ ನಮ್ಮ ವನೇ, ವರ್ಷಗಳಿಂದಲೂ ಗೊತ್ತು, ಹಾಗೂ ಹೀಗೂ ಒಂದತ್ತು ಸಾವಿರ ಅಲ್ವಾ ? ಅಂದುಕೊಂಡು ಕೊಡಲೂಬಹುದು. ಆದರೆ, ದುಡಿಯುವ ಜರೂರತ್ತೆ ಗೊತ್ತಿರದವನಿಗೆ, ದುಡ್ಡಿನ ಬೆಲೆ ಗೊತ್ತಾಗುವುದಾ ದರೂ ಹೇಗೆ? ಅವನ ಒಂಟಿ ಬದುಕಿರುವ ಜರೂರತ್ತಿನಂತೆ ಇತರೇ ಗೆಳೆಯರ ಮನೆ, ಮಕ್ಕಳು, ಸಂಸಾರದ ಖರ್ಚು ಇವುಗಳೆಲ್ಲವನ್ನೂ ಸರಿದೂಗಿಸುವ ಜವಾಬ್ದಾರಿ ಇರುತ್ತೆ ಅನ್ನುವ ಕನಿಷ್ಠ ಕನ್ಸರ್ನ್ ಆದರೂ ಇರಬೇಡವೇ?  ಅವನು ಒಳ್ಳೆಯವನು, ಒಳ್ಳೆಯತನ ದುಡಿಮೆ ತರುವುದಿಲ್ಲ, ದುಡ್ಡು ತಂದು ಹಾಕುವುದಿಲ್ಲ. ನಾವಾಗೇ ದುಡಿದರೂ, ಸಿಗುವ ಅಲ್ಪ ಸ್ವಲ್ಪ ಮೊತ್ತ ನಮ್ಮ ಅಗತ್ಯವನ್ನೇನೋ ಪೂರೈಸಬಹುದೇ ಹೊರತು "ನಮ್ಮತನ" ದಿಂದ ಆಚೆಗಿರುವ ಪ್ರಪಂಚದೊಂದಿಗೂ ನಾವು ಬೆರೆಯುವ ಗುಣವನ್ನು ನಾವೇ ತಂದುಕೊಳ್ಳಬೇಕು. ಯಾಕೋ ಇತ್ತೀಚಿಗೆ ಅವನಿಂದ ಫೋನ್ ಬಂದಿಲ್ಲ. ಮೊದ ಮೊದಲು ಮೊಬೈಲ್ ಖರೀದಿಸಿದಾಗ ಸಂಖ್ಯೆ ಪಡೆಯುವುದು, ಕಾಲ್ ಮಾಡುವುದು, ಮತ್ತೆ ಮತ್ತೆ ಜೇಬಿನಿಂದ ಮೊಬೈಲ್ ತೆಗೆದು ನೋಡುವುದು ಹೇಗೆ ಅಂಟಿಕೊಂಡಿತೋ, ಅದೇ ರೀತಿ ಇಂಥ ಕರೆಗಳು ಬಂದು ಆ  ಹುಚ್ಚನ್ನು ಅಷ್ಟೇ ನಿರ್ಲಕ್ಷ್ಯಕ್ಕೆ ಒಳಪಡಿಸಿದವು. ಅವನ ಮೊಬೈಲ್ ನ  ಕೊನೆ ಸಂಖ್ಯೆಗಳು ಸಹ ಅಷ್ಟೇ ಆಕರ್ಷಣೀಯವಾಗಿದ್ದವು."sixty..three sixty… ninety"…..ಬಹುಶಃ  ಸಂಖ್ಯಾ ಶಾಸ್ತ್ರ ಅವನ  ವೈಯುಕ್ತಿಕ ಗುಣದ ಜೊತೆಗೆ ಮಿಳಿತವಾಗಿದೆಯೇನೋ. ಇದರ ಮೇಲೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲವೆಂದುಕೊಳ್ಳುತ್ತೇನೆ.  ಅವನೀಗ ಫಾರ್ಟಿ ಪ್ಲಸ್ ಪರ್ಸನ್.  ಮದುವೆ  ಮೋಸ್ಟ್ಲಿ ಇನ್ನು ಆಗಿಲ್ಲ. ಒಂದು ಕಾಲದಲ್ಲಿ ನಾವು ಇವನ ಸೋಶಿಯಲ್ ಅವೇರ್ನೆಸ್ ನೋಡಿ ಇವ ನಂತಿರಬೇಕು ಅಂದುಕೊಂಡಿದ್ದೆವು. ಉಹೂ… ಆಗಿದ್ದೇ ಬೇರೆ. ಗೆಳೆಯರು ಎಷ್ಟೇ ಸಮಾಧಾನದಿಂದ ತಿಳಿಸಿ ಹೇಳಿದರೂ ಕೂತು ಕೇಳುತ್ತಾನೆಯೇ ಹೊರತು ಬದಲಾಗುವ ಪ್ರಯತ್ನ ಮಾಡುತ್ತಾನೆ ಅನ್ನಿಸು ತ್ತಿಲ್ಲ. ಬಹುಶಃ  ಇತ್ತೀಚಿಗೆ ಬದಲಾಗಿದ್ದರೂ ಆಗಿರಬಹುದು, ಹಾಗಾದಲ್ಲಿ ಅವರ ಮನೆಯವರಿಗಿಂತ ಹೆಚ್ಚು ಖುಷಿ ಪಡುವವರು ಗೆಳೆಯರಾದ ನಾವೇ. ಇದು ಓದಿನ, ದುಡಿಮೆಯ ಅವಕಾಶ ಕೈಲಿದ್ದು ತಾನಾಗೇ ತನ್ನ ಕೈಯಾರೆ ಒದ್ದುಕೊಂಡವನ ಕಥೆ.    

ಇನ್ನು "ಹ್ಯಾಪಿ ಡೇಸ್ ತೆಲುಗು ಸಿನಿಮಾದಂತೆ ನಮ್ಮ ಜೀವನಾನೂ ಇರುತ್ತೆ" ಅಂದುಕೊಂಡು ಹೊರ ಬಂದ ಹುಡುಗನೊಬ್ಬನು ಸಿಕ್ಕಿದ್ದ. ಎಲ್ಲರೂ ಆ ಥರಾ ಇರಲಿಕ್ಕಿಲ್ಲ. ಒಂದು ಕಚೇರಿಗೆ ಈಗತಾನೇ ಇಂಜ ನೀಯರಿಂಗ್ ಓದು ಮುಗಿಸಿಕೊಂಡು  ಬಂದವನೇ "ನಾನು ಟೆಕ್ನಿಕಲ್ ಪರ್ಸನ್ ಏನೇನ್ ಮಾಡ್ತೀನಂಥ ನಿಮಗ್ ಹೇಳೋ ನೆಸೇಸ್ಸಿಟಿ ಇಲ್ಲ, ಅಷ್ಟಕ್ಕೂ ನಿಮಗ್ ಅರ್ಥ ಆಗಲ್ಲ, ನನ್ ಕೆಲ್ಸ system maintenance ಮಾತ್ರ. ನಿಮಗ್ ಹೇಳುತಾ ಕೂಡೋದಲ್ಲ ಅಂದ. ಇಷ್ಟಕ್ಕೂ ಅವನು ಬಂದಿದ್ದೇ ಒಂದು ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಾ, ಆ ಪ್ರಾಜೆಕ್ಟ್ ಬಗ್ಗೆ ಸಿಬ್ಬಂದಿಗೆ ತಿಳಿಸಿ ಕೊಡುವ "ಹೊರಗುತ್ತಿಗೆ" ಆಧಾರದ ಕೆಲಸಕ್ಕೆ. ಮಾಡಲು ಕೆಲಸವೇ ಇಲ್ಲದ ಅನೇಕ ನಿರುದ್ಯೋಗಿಗಳ ಎದುರಿಗೆ ಇವನನ್ನು ನಿಲ್ಲಿಸಿ ತೋರಿಸಿದರೆ ಏನನ್ನಬೇಡ? ಮತ್ತೆ ಮೇಲೆ, "ನಾನ್ ಮನಸ್ ಮಾಡೀದ್ರೆ ಒಂದ್ ಕಂಪನಿ ಓಪನ್ ಮಾಡೋವಷ್ಟು ತಾಕತ್ ಇದೆ ನಂಗೆ" ಅಂದುಬಿಟ್ಟ. ಹತ್ತು ಸಾವಿರ ಸಂಬಳದ ನೌಕರಿ ಯನ್ನು ಸರಳವಾಗಿ, ಸಹನೆಯಿಂದ ನಿಭಾಯಿಸಲಾರದವನು ಅಷ್ಟೊಂದು ಅಹಂ ಇಟ್ಟುಕೊಂಡು ಒಂದು ದೊಡ್ಡ ಕಂಪನಿಯನ್ನು ನಡೆಸಬಲ್ಲನೇ? ಏನೇ ಬಿಸಿ ರಕ್ತವೆಂದುಕೊಂಡರೂ ನೌಕರಿಯ ಮಿತಿ ಮತ್ತು ತನ್ನ ಜವಾಬ್ದಾರಿಯನ್ನೂ ಅರಿಯಲಾರದಷ್ಟು ಅವಿವೇಕವಾ?  ಕೇವಲ ಐದು ನೂರು ರೂಪಾಯಿಗಳ ಸಂಬಳದ ಕೆಲಸಕ್ಕೆ (ಅದೂ ತಿಂಗಳಿಗೆ) ಬೆಳಗಿನಿಂದ ಸಂಜೆವರೆಗೆ ಟೈಪುರೈಟರ್ ಕುಟ್ಟಲು ನಾನು ತಯಾರಾಗಿದ್ದ ದಿನಗಳು ನೆನಪಾದವು. ನನಗೀಗ ಮೂವತ್ತೊಂದು ಸಾವಿರ ಸಂಬಳ ಅದೂ   ಹತ್ತೊಂಬತ್ತು ವರ್ಷಗಳ ನಂತರ. ಅವನ ಓದನ್ನು, ಅವನ ಛಲವನ್ನು ಗೇಲಿ ಮಾಡುವ ಉದ್ದೇಶವಿಲ್ಲ.  ಅಥವಾ ಆ ಹುಡುಗನೂ ನನ್ನಂತೆ ಇರಬೇಕೆಂದೇನಿಲ್ಲ. ಆದರೆ, ದುಡಿಮೆಯ ಆರಂಭದ ದಿನಗಳನ್ನು ಏಣಿಯಂತೆ ಹತ್ತಬೇಕೇ ವಿನಃ ಹತ್ತುವ ಸಹನೆ ಇಲ್ಲದೇ ಎಗರಲು ಹೋಗಿ ಮುಗ್ಗರಿಸಬಾರದಲ್ವಾ? ರವಿ ಬೆಳಗೆರೆಯವರು ಒಮ್ಮೆ ಬರೆದ "ಏಣಿ ಏರಲಾರದವನು ಅಟ್ಟ ಸೃಷ್ಟಿಸಿಕೊಳ್ಳಲಾರ"  ಸಾಲು ನೆನೆಪಾ ಗುತ್ತೆ. ತಿಂಗಳ ಸಂಬಳ ನಮ್ಮ  ಓದಿನ ಅರ್ಹತೆ ಮೇಲೆ ಬಂದು ಹೂಡುವ ನೌಕರಿಯಲ್ಲಿನ ಶ್ರಮಕ್ಕೆ ಕೊಡಬಹುದು . ಆದರೆ, ನಮ್ಮ ಏಣಿ ಏರುವ ಸಹನೆ ಇದೆಯಲ್ಲ? ಅದು  "ಅಟ್ಟ" ಸಿಗುವವರೆಗಿನ ಶ್ರಮವನ್ನು ನಿರಂತರತೆಯಲ್ಲಿ ಇರಿಸುತ್ತದೆನ್ನುವುದನ್ನು ಮರೆಯಬಾರದು.  ಇದು ನನಗಿಂತ ಹೆಚ್ಚು ಓದಿ ಬಂದವನಿಗೆ ಹೇಗೆ ಹೇಳುವುದು? "ಸಾಗರ" ದಂಥ ಅವಕಾಶಗಳ ಮಧ್ಯೆ ಮೀನು  ಚಾಕಚಕ್ಯತೆ ಯಿಂದ ಈಜುವಂತೆ  ಖುಷಿಯಾಗಿ ಕೆಲಸ ಮಾಡಬೇಕೇ ವಿನಃ ಪಾಚಿಟ್ಟ ಬಾವಿಯೊಳಗಿನ ನಿಂತ ನೀರಲ್ಲಿ ಓಟಗುಟ್ಟುವ "ಕಪ್ಪೆ"ಯಂತಾಗಬಾರದಷ್ಟೇ. ಇದನ್ನು ಆ "ಹ್ಯಾಪಿ ಡೇಸ್" ಅಮಲಿನ ಹುಡುಗನಿಗೆ ಬಿಡಿಸಿ ಹೇಳಲಿಕ್ಕಿತ್ತು, ಕೇಳುವ ಕಿವಿ ಅವನಾಗಲಾರನೆಂದು ಜಸ್ಟ್ ಕೆಪ್ಟ್ ಮೈಸೆಲ್ಫ್ ಮಮ್. 

ಇವೆರಡು ಕ್ಯಾರೆಕ್ಟರ್ ಗಳಿಗಿಂತ ಇನ್ನೊಂದು ಕ್ಯಾರೆಕ್ಟರ್ ನಿಮಗೆ ಹೇಳುತ್ತೇನೆ. ಅವನ  ಹೆಸರು ವಿಷ್ಣು ಪೂರ್ತಿ ಹೆಸರು ನನಗೂ ಗೊತ್ತಿಲ್ಲ. ನಮ್ಮ ಕಚೇರಿ ಸೇರಿದಂತೆ, ಮುಖ್ಯ ರಸ್ತೆಯಲ್ಲಿ  ಬರುವ ಎಲ್ಲಾ ಕಚೇರಿ, ಅಂಗಡಿ, ತರಕಾರಿ ಮಾರ್ಕೆಟ್, ಹೂವಿ ನಂಗಡಿ ಸಾಲುಗಳಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಹಿಡಿದು ಸಂಜೆ ಆರು, ಏಳರ ತನಕ ಕೈಯಲ್ಲಿ ಕ್ಯಾನ್ ಹಿಡಿದು ಸರ ಸರ ನಡೆದು ಅಧಿಕಾರ, ವಯಸ್ಸು, ಸ್ನೇಹ, ಸಂಪರ್ಕ, ಜಸ್ಟ್ ಪರಿಚಯ ಹೀಗೆ ಎಲ್ಲಾ ವರ್ಗದ ಜನರನ್ನು ಆಯಾ ರೀತಿ ಮಾತಾಡಿಸುತ್ತಾ, ನಗುತ್ತಾ ನಗಿಸುತ್ತಾ, ಹಳೆಯ, ತನಗೆ ತೋಚಿದ, ನಾಲಗೆಗೆ ಸಿಕ್ಕ ಹಾಡುಗಳನ್ನು ಗುನುಗುತ್ತಾ ಸಖತ್ ಆಗಿರೋ ಟೀ ಕಾಫಿ ಮಾರುತ್ತಾನೆ. ಮತ್ತು ರೊಟ್ಟಿ, ಪುಡಿ ಚಟ್ನಿಯನ್ನು ಮನೆಯವರು ಮಾಡಿ ಮಾರು ತ್ತಾರೆ. ಅವನ ದುಡಿಮೆ ತಿಂಗಳಿಗೆ ಅವನ ಮನೆ  ಖರ್ಚು ಕನಿಷ್ಠ ಹದಿನೈದು ಸಾವಿರವಾದರೂ ತೆಗೆದು ನಿಕ್ಕಿ ಹದಿನೈದರಿಂದ ಹದಿನೆಂಟು ಸಾವಿರ ಉಳಿತಾಯ ಮಾಡುತ್ತಾನೆ. ಅವನಿಗಿರುವ ಅರ್ಹತೆ ಕೇವಲ ಮಾತು, ಭಾಷೆ, ಸಹನೆ.  ವಿದ್ಯಾರ್ಹತೆ  "ಒಂದನೇ ಕ್ಲಾಸು". ನನಗಿಂತ ಹೆಚ್ಚು ಶ್ರಮಿಸಿ, ಹೆಚ್ಚು ದುಡಿ ಯುತ್ತಾನೆ, ಉಳಿಸುತ್ತಾನೆ. ಅದಕ್ಕಿಂತ ಹೆಚ್ಚಾಗಿ ಜನರಲ್ಲಿ  "ವಿಷ್ಣು – ಸಾವಾಜಿ ದಿ ಚಾಯ್ವಾಲಾ" ನಾಗಿ ಆತ್ಮೀಯತೆ ಗಳಿಸಿದ್ದಾನೆ. ಇಂಥವರು ಬಹಳಷ್ಟು ಕಡೆ ನಮಗೆ ಸಿಗುತ್ತಾರೆ. ನಾವು ಟೀ ಕುಡಿದ ಕಪ್ಪನ್ನು ಡಸ್ಟ್ ಬಿನ್ನಿಗೆ ಹಾಕಿದಷ್ಟೇ ಸುಲಭವಾಗಿ ಅವರ ಮುಖಗಳನ್ನೂ ಮರೆತುಬಿಡುತ್ತೇವೆ. ಮೊನ್ನೆ ಕ್ಯಾಮೆರಾ ಕಚೇರಿಗೆ ತಂದಿದ್ದೆ. ವಿಷ್ಣು ಟೀ ತಂದು ಕೊಟ್ಟ… ಹಾಗೆ ತಮಾಷೆ ಮಾಡುತ್ತಲೇ ಒಂದು ಫೋಟೋ ತೆಗೆದುಕೊಂಡೆ. ಆಗ ಅವನ ಬಗ್ಗೆ ಬರೆಯುವ ಇರಾದೆ ಇದ್ದಿಲ್ಲ. ಆದರೆ, "ಎದ್ದೇಳು ಮಂಜು ನಾಥ" ನಂಥವನೂ ನೆನಪಾಗಿ "ಹ್ಯಾಪಿ ಡೇಸ್" ನ ಅಮಲಿನವನು ತೊಡರಿಕೊಂಡಾಗ ಅವರಿಬ್ಬರಿ ಗಿಂತ ಮತ್ತು  ನನ್ನ ಸೋಮಾರಿತನವನ್ನು ಅಳೆದರೂ  "ವಿಷ್ಣು – ದಿ ಚಾಯ್ವಾಲಾ" ಹೆಚ್ಚು ಅಕ್ಟೀವ್ ಅನ್ನಿಸಿತು. ಸರಾಗವಾಗಿ ತನ್ನ ಇತಿ ಮಿತಿಗಳಲ್ಲೇ, ಇದ್ದೂರಲ್ಲೇ ಇದ್ದು ದುಡಿದು ತನ್ನದೊಂದು "ಅಟ್ಟ" ಸೃಷ್ಟಿಸಿಕೊಳ್ಳಲು ಅವನೀಗ ಏಣಿಯ ಎಷ್ಟನೇ ಮೆಟ್ಟಿಲು ಹತ್ತಿರಬಹುದು? ಎಂದು ಯೋಚಿಸುತ್ತಾ ಕುಳಿತೆ. ನಾಲಗೆ ಮೇಲೆ ಇನ್ನೂ ಟೀ ಕುಡಿದ ರುಚಿ ಹಾಗೆ ಇತ್ತು; ಬಹಳ ಹೊತ್ತಿನವರೆಗೆ. 

******

 

ಕನ್ನಡದ ಬರಹಗಳನ್ನು ಹಂಚಿ ಹರಡಿ

13 thoughts on “ಎದ್ದೇಳು ಮಂಜುನಾಥ”ನೂ “ಹ್ಯಾಪಿ ಡೇಸ್” ನ ಅಮಲಿನವನೂ: ಅಮರ್ ದೀಪ್ ಪಿ. ಎಸ್.

  1. Good post sir, cant get time to read ur all posts. but yes i do read whenever i get time . Keep sharing ur thoughts in written language so that everyone can get into it. 

  2. ಯಾವುದಕ್ಕೂ ಮನಸ್ಸೇ ಮುಖ್ಯ ಎಂಬುದನ್ನು ಪರಿಣಾಮಕಾರಿಯಾಗಿ
    ಹೇಳಿದ್ದೀರಿ. ಧನ್ಯವಾದಗಳು ಅಮರ್ ದೀಪ್

  3. ಸೋಮಾರಿ ಅಸಡ್ಡೆ ಪಾತ್ರಗಳ ಪರಿಚಯ ಮಾಡಿಕೊಡುತ್ತಾ ಚಾಯ್ವಾಲಹೇಳಿ ಇದ್ದಕ್ಕಿದ್ದಂತೆ ಒಂದು ಸಂದೇಶ ಕೊಟ್ಟು ಮುಕ್ತಾಯ ಮಾಡಿದಿರಿ. liked the subject and the way you wrote it.
     

  4. ತುಂಬಾ ಚೆನ್ನಾಗಿ, ಸುಕ್ಷಮವಾಗಿ ಮೂರೂ ವ್ಯಕ್ತಿಗಳ ಪರಿಚಯ ಮಾಡಿದ್ಡೀಯಾ ಅಮರ್

    ಗ್ರೇಟ್

  5. Nim vishnu-savaji lekhana odida mele nanage namo brigade Modi nenapaithu.  Nimma nirupane, tharjume, holike chennagithu. somarigalu odale bekada lekahana.  Goog keep it up.

  6. Deepu naanu nimmibbara jote ade college, class, benchalli kootu odideeni.  navibru avaga eddelu manjunathana tara aagbeku anta ankantidvi, nenpidiya. aagenadru aagidre eega namma lekhanana bere yaradru baritidru ansutte

     

Leave a Reply

Your email address will not be published. Required fields are marked *