ನಟ್ಟು ಕಾಲಂ

ಆಪರೇಷನ್ ಡೆಂಗ್ಯೂ ಮೊದಲ ಭಾಗ: ನಟರಾಜು ಎಸ್ ಎಂ

ಆಗಷ್ಟ್ ತಿಂಗಳ ಮೊದಲ ವಾರದಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆಯೊಂದರ ರಿಪೋರ್ಟ್ ನಲ್ಲಿ 3 ಡೆಂಗ್ಯೂ ಜ್ವರದ ಕೇಸ್ ಗಳು ಹಳ್ಳಿಯೊಂದರಲ್ಲಿ ಪತ್ತೆಯಾಗಿವೆ ಎಂಬ ಈ ಮೇಲ್ ನಮ್ಮ ಪಬ್ಲಿಕ್ ಹೆಲ್ತ್ ವಿಭಾಗದ ಈ ಮೇಲ್ ಗೆ ಬಂದಿತ್ತು. ಮೂರ್ನಾಲ್ಕು ಡೆಂಗ್ಯೂ ಜ್ವರದ ಕೇಸ್ ಗಳು ಒಂದೇ ಊರಿನಲ್ಲಿ ಕಾಣಿಸಿಕೊಂಡಿರುವುದು ಡೇಂಜರ್ ಸಿಗ್ನಲ್ ಎಂದರಿತ ನಾವು ತಕ್ಷಣ ಆ ತಾಲ್ಲೂಕಿನ ವೈದ್ಯಾಧಿಕಾರಿಗೆ ಕರೆ ಮಾಡಿ ಕೇಸ್ ಗಳು ಪತ್ತೆಯಾಗಿರುವುದನ್ನು ದೃಢಪಡಿಸಿಕೊಂಡೆವು. ಮಾರನೆಯ ದಿನ ನಮ್ಮ ಟೀಮ್ ಆ ಹಳ್ಳಿಯನ್ನು ತಲುಪಿತ್ತು. ಆ ಹಳ್ಳಿಯ ಸ್ಥಳೀಯ ಆರೋಗ್ಯ ಕಾರ್ಯಕರ್ತರ ಸಹಾಯದಿಂದ ಜ್ವರದಿಂದ ನರಳುತ್ತಿರುವ ಆ ಹಳ್ಳಿಯ ಜನರನ್ನು ಒಂದೆಡೆ ಕಲೆ ಹಾಕಿ ವೈದ್ಯಾಧಿಕಾರಿಗಳಿಂದ ತಪಾಷಣೆ ಮಾಡಿಸಿ ಔಷಧಿಗಳನ್ನು ನೀಡಿ ಕೆಲವರ ರಕ್ತದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದೆವು. ಆ ಸಂಗ್ರಹಿಸಿದ ರಕ್ತದ ಸ್ಯಾಂಪಲ್ ಗಳನ್ನು ಡೆಂಗ್ಯೂವಿನ ಪರೀಕ್ಷೆಗಾಗಿ ಹತ್ತಿರದ ನಾರ್ಥ್ ಬೆಂಗಾಲ್ ಮೆಡಿಕಲ್ ಕಾಲೇಜ್ ಗೆ ಕಳಿಸಿಕೊಟ್ಟಿದ್ದೆವು. ಒಂದೆರಡು ದಿನಗಳ ನಂತರ ಬಂದ ರಕ್ತದ ರಿಪೋರ್ಟ್ ಡೆಂಗ್ಯೂ ಕೇಸ್ ಗಳು ಆ ಹಳ್ಳಿಯಲ್ಲಿ ಇರುವುದನ್ನು ದೃಢೀಕರಿಸಿತ್ತು. ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ಆ ಹಳ್ಳಿಯ ಮೇಲೆ ನಿಗಾ ಇಡುವಂತೆಯೂ, ಯಾವುದೇ ಹೊಸ ಜ್ವರದ ಕೇಸ್ ಬಂದರೂ ತಿಳಿಸುವಂತೆಯೂ ಹೇಳಿದ್ದೆವು. ಜೊತೆಗೆ ಸುತ್ತ ಮುತ್ತಲಿನ ಖಾಸಗಿ ಆಸ್ಪತ್ರೆಗಳಿಗೂ ಸಹ ಯಾವುದೇ ರೋಗಿಯು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರೆ ನಮಗೆ ತಿಳಿಸುವಂತೆ ಒಂದು ಕೋರಿಕೆಯನ್ನು ಸಹ ಸಲ್ಲಿಸಿದ್ದೆವು. ಆ ಹಳ್ಳಿಯ ಮೇಲೆ ಒಂದು ನಿಗಾ ಚಾಲ್ತಿಯಲ್ಲಿತ್ತು.

ನಾವು ಇಟ್ಟಿದ್ದ ನಿಗಾ ಮೂರ್ನಾಲ್ಕು ದಿನಗಳಲ್ಲೇ ಆ ಹಳ್ಳಿಯಲ್ಲಿ ಮತ್ತಷ್ಟು ಜ್ವರದಿಂದ ಬಳಲುತ್ತಿರುವ ಜನರ ಮಾಹಿತಿಯನ್ನು ನಮಗೆ ಒದಗಿಸಿತ್ತು. ದಿನೇ ದಿನೇ ಜ್ವರದಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬ ಮಾಹಿತಿ ಬರುತ್ತಿದ್ದಂತೆ ಸುಮಾರು ನಲವತ್ತು ನಲವತ್ತೈದು ಜನರ ಟೀಮ್ ಒಂದನ್ನು ಮಾಡಿ ಆ ಟೀಮ್ ಮೆಂಬರ್ ಗಳಿಗೆ ಡೆಂಗ್ಯೂ ಕುರಿತ ಮಾಹಿತಿ ನೀಡಿ ಕೈಗೆ ಡೆಂಗ್ಯೂ ಕುರಿತ ಮಾಹಿತಿ ಇರುವ ಪಾಂಪ್ಲೇಟ್ ಕೊಟ್ಟು ಮನೆ ಮನೆಯನ್ನು ಭೇಟಿ ಮಾಡಿ ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ಆ ರೋಗಿಯನ್ನು ನಾವು ಕ್ಯಾಂಪ್ ಮಾಡಿರುವ ಜಾಗಕ್ಕೆ ಕಳಿಸುವಂತೆ ಹೇಳಿದ್ದೆವು. ಆ ಆರೋಗ್ಯ ಕಾರ್ಯಕರ್ತರು ರೋಗಿಗಳನ್ನು ಪತ್ತೆ ಮಾಡುವುದರ ಜೊತೆಗೆ ಡೆಂಗ್ಯೂ ಕುರಿತ ಅರಿವನ್ನು ಜನರಲ್ಲಿ ಮೂಡಿಸಲು ತೊಡಗಿಕೊಂಡಿದ್ದರು. ಅವತ್ತೂ ಸಹ ರಕ್ತದ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಜ್ವರದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿಸಿದ್ದೆವು. ನಾವು ಅಂದುಕೊಂಡಂತೆ ನಾವು ಕಳುಹಿಸಿದ ಮತ್ತಷ್ಟು ರಕ್ತದ ಸ್ಯಾಂಪಲ್ ಗಳು ಡೆಂಗ್ಯೂ ಪಾಸಿಟಿವ್ ಆಗಿದ್ದವು. ನಮ್ಮ ನಿಗಾ ಆ ಹಳ್ಳಿಯ ಮೇಲೆ ಇನ್ನೂ ತೀವ್ರವಾಗುವ ಜೊತೆಗೆ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಲು ಅನುವಾಗಿದ್ದೆವು. 

ಆಗಾಗಲೇ ನಮಗೆ ಖಾಸಗಿ ನರ್ಸಿಂಗ್ ಹೋಮ್ ಗಳಿಂದಲೂ ರಿಪೋರ್ಟ್ ಗಳು ಬರತೊಡಗಿದ್ದವು. ಆ ಹಳ್ಳಿ ಆಡಳಿತದ ದೃಷ್ಟಿಯಲ್ಲಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬಂದರೂ ವಿಶಾಲವಾಗಿ ಬೆಳೆದಿರುವ ಸಿಲಿಗುರಿ ಪಟ್ಟಣಕ್ಕೆ ಅಂಟಿಕೊಂಡಂತೆಯೇ ಇದೆ. ಆದ ಕಾರಣ ನಮಗೆ ಬಂದ ರಿಪೋರ್ಟ್ ಗಳಲ್ಲಿ ಆ ಹಳ್ಳಿಯ ಅಕ್ಕ ಪಕ್ಕದ ಮುನಿಸಿಪಾಲಿಟಿ ಏರಿಯಾಗಳ ಜನರಲ್ಲೂ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಈ ವಿಷಯವನ್ನು ಸ್ಥಳೀಯ ನಗರ ಪಾಲಿಕೆಯ ಮೇಯರ್ ಗೆ ತಿಳಿಸಿ ಆ ಹಳ್ಳಿ ನಗರ ಪ್ರದೇಶಕ್ಕೆ ಅಂಟಿಕೊಂಡಿರುವ ಕಾರಣ ಅಲ್ಲಿ ಸೊಳ್ಳೆಗಳ ನಿಯಂತ್ರಣದ ಮಹತ್ವವನ್ನು ತಿಳಿ ಹೇಳಿದ್ದೆವು. ಸೊಳ್ಳೆಗಳ ನಿಯಂತ್ರಣಕ್ಕೆ ಬೇಕಾದ malathion ಔಷಧಿಯನ್ನು ಖರೀದಿಸಿ ನಗರ ಪಾಲಿಕೆಗೆ ನೀಡಿದ್ದೆವು. ಅವರು ತಮ್ಮ ಫಾಗಿಂಗ್ ಮೆಷಿನ್ ಉಪಯೋಗಿಸಿ ಆ ಹಳ್ಳಿಯಲ್ಲಿ ಫಾಗಿಂಗ್ ಮಾಡಿಸಿದ್ದರು. ವಿಶೇಷವಾದ ಮೆಷಿನ್ ಅನ್ನು ಉಪಯೋಗಿಸಿ ಕೀಟನಾಶಕಗಳನ್ನು ಹೊಗೆಯ ರೂಪದಲ್ಲಿ ಸಿಂಪಡಿಸುವುದನ್ನು ಫಾಗಿಂಗ್ (fogging) ಎನ್ನುತ್ತಾರೆ. ಸೊಳ್ಳೆಗಳ ನಿಯಂತ್ರಣಕ್ಕಾಗಿ ನಗರ ಪಾಲಿಕೆಯವರು ಬಳಸುವ ಫಾಗಿಂಗ್ ಯಂತ್ರಗಳನ್ನು ಬಹುಶಃ ನೀವು ನೋಡುತ್ತೀರಿ.  

ಆ ಹಳ್ಳಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ ಎಂಬ ಸುದ್ದಿಯನ್ನು ನಗರ ಪಾಲಿಕೆಗೆ ನಾವು ತಿಳಿಸಿದ ನಂತರ ನಗರ ಪಾಲಿಕೆಯ ವಿರೋಧ ಪಕ್ಷದವರು ಸಿಕ್ಕಾಪಟ್ಟೆ ಕಾರ್ಯನಿರತರಾಗಿ ಡೆಂಗ್ಯೂ ನಗರ ಪಾಲಿಕೆಯ ಯಾವ ಯಾವ ಏರಿಯಾದಲ್ಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು. ಸಿಲಿಗುರಿಯ ಅತಿ ಹೆಚ್ಚಿನ ಭಾಗ ಡಾರ್ಜಿಲಿಂಗ್ ಜಿಲ್ಲೆಗೆ ಸೇರಿದರೂ ನಮ್ಮ ಜಲ್ಪಾಯ್ಗುರಿ ಜಿಲ್ಲೆಗೆ ಸೇರುವ ನಗರ ಪಾಲಿಕೆಯ ಕೆಲವು ವಾರ್ಡ್ ಗಳಲ್ಲಿನ ಡೆಂಗ್ಯೂ ಕೇಸ್ ಗಳ ವಿವರಗಳನ್ನು ನಾವು ಸಹ ಸಂಗ್ರಹಿಸಿದ್ದೆವು. ಸಿಲಿಗುರಿ ನಗರ ಪಾಲಿಕೆಯ ಹೆಚ್ಚಿನ ಆರೋಗ್ಯ ಕಾರ್ಯಕ್ರಮಗಳನ್ನು ಡಾರ್ಜಿಲಿಂಗ್ ಜಿಲ್ಲೆಯೇ ನಿರ್ವಹಿಸುವ ಕಾರಣ ನಾವು ಸಿಲಿಗುರಿಯಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವನ್ನು ಶುರು ಮಾಡಿರಲಿಲ್ಲ. ಆದರೆ ಡೆಂಗ್ಯೂ ಸಮಸ್ಯೆ ಉಲ್ಬಣವಾಗುತ್ತಿರುವುದನ್ನು ಮಹಾ ನಗರ ಪಾಲಿಕೆಯ ಮೇಯರ್ ಮತ್ತು ಕಮಿಷನರ್ ಗೆ ತಿಳಿಸಿದ್ದೆವು. ಡೆಂಗ್ಯೂ ಸಮಸ್ಯೆ ಉಲ್ಬಣವಾಗುತ್ತಿರುವುದನ್ನು ಮನಗಂಡ ಮೇಯರ್ ತಕ್ಷಣ ಒಂದು ಸಭೆ ಕರೆದಿದ್ದರು. ಆ ತುಂಬಿದ ಸಭೆಯಲ್ಲಿ ಸಿಲಿಗುರಿಯಲ್ಲಿ ಡೆಂಗ್ಯೂ ಕೇಸ್ ಗಳು ತುಂಬಾ ಕಮ್ಮಿ ಎನ್ನುವಂತ ತಪ್ಪು ಮಾಹಿತಿಯನ್ನು ಒಬ್ಬ ವೈದ್ಯಾಧಿಕಾರಿ ನೀಡುವಾಗ ವಿರೋಧ ಪಕ್ಷದವರು ಆ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಎದುರಿಗೆ ಮಾಧ್ಯಮವಿದೆ ಎಂಬ ಕಾರಣಕ್ಕೆ ಇರುವ ಸಮಸ್ಯೆಯನ್ನು ಇಲ್ಲ ಎಂದು ಹೇಳಿದರೆ ಏನು ಪ್ರಯೋಜನ ಹೇಳಿ. ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಮಾಹಿತಿ ಇದ್ದರೆ ಅದನ್ನು ಮುಚ್ಚಿಡುವುದು ಬಹಳ ತಪ್ಪು. ಹಾಗೆ ಮಾಹಿತಿಯನ್ನು ಮುಚ್ಚಿಡುವ ಕಾರಣಕ್ಕೆ ಸರಿಯಾದ ಸಮಯದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದಿಲ್ಲ. ಆಗ ರೋಗಗಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತವೆ. 

ಆ ಸಭೆಯಲ್ಲಿ ಡಾರ್ಜಿಲಿಂಗ್ ಜಿಲ್ಲೆಯ ವೈದ್ಯಾಧಿಕಾರಿ ಸಹ ಡೆಂಗ್ಯೂ ಸಮಸ್ಯೆಯನ್ನು ಜಲ್ಪಾಯ್ಗುರಿ ಜಿಲ್ಲೆಯ ತಲೆ ಮೇಲೆ ಹೊರೆಸಿ ಇಲ್ಲಿಂದ ಕಳಚಿಕೊಳ್ಳೋಣ ಎಂದು ಹವಣಿಸುವಾಗ ಮತ್ತೆ ನಗರ ಪಾಲಿಕೆಯ ವಿರೋಧಿ ಪಕ್ಷದವರ ಕೆಂಗಣ್ಣು ಆ ವೈದ್ಯಾಧಿಕಾರಿಯ ಮೇಲೆ ಬಿದ್ದಿತ್ತು. ಮೊದಲ ಬಾರಿಗೆ ತುಂಬಿದ ಸಭೆಯಲ್ಲಿ ಮಾಧ್ಯಮಗಳ ಇರುವಿಕೆಯಲ್ಲಿ ಜಲ್ಪಾಯ್ಗುರಿಯನ್ನು ರೆಪ್ರೆಜೆಂಟ್ ಮಾಡಿದ್ದ ನಾನು ಡೆಂಗ್ಯೂ ಪರಿಸ್ಥಿತಿಯನ್ನು ಆ ಸಭೆಯಲ್ಲಿ ವಿವರಿಸಿದ್ದೆ. ಆ ಸಭೆಯಲ್ಲಿದ್ದ ಯಾರೂ ಸಹ ಜಲ್ಪಾಯ್ಗುರಿ ಜಿಲ್ಲೆ ಡೆಂಗ್ಯೂ ನಿಯಂತ್ರಣದಲ್ಲಿ ತೊಡಗಿಕೊಂಡಿರುವ ಕಾರ್ಯ ವೈಖರಿಯ ಬಗ್ಗೆ ಚಕಾರವೆತ್ತಲಿಲ್ಲ. ಆ ಮೀಟಿಂಗ್ ನ ನಂತರ ನಾವು ಜಲ್ಪಾಯ್ಗುರಿ ಜಿಲ್ಲೆಗೆ ಸೇರಿದ್ದರೂ ಸಿಲಿಗುರಿಯ ನಗರ ಪಾಲಿಕೆಯ ವಾರ್ಡ್ ಗಳಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳೋಣ ಎಂದು ನಮ್ಮ ಜಿಲ್ಲೆಯ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಪ್ರತಿ ದಿನ ಜಲ್ಪಾಯ್ಗುರಿಯಿಂದ ಸಿಲಿಗುರಿಗೆ ಎರಡು ಎರಡೂವರೆ ಗಂಟೆ ಕೆಟ್ಟ ರಸ್ತೆಗಳಲ್ಲಿ ಪ್ರಯಾಣಿಸಿ ಸಿಲಿಗುರಿಯಲ್ಲಿ ಕಾರ್ಯ ನಿರ್ವಹಿಸಿ ಮತ್ತೆ ಜಲ್ಪಾಯ್ಗುರಿಗೆ ವಾಪಾಸ್ಸು ಹೋಗುವುದು ತುಂಬಾ ಕಷ್ಟಕರವಾದ ಕಾರಣ ನಗರ ಪಾಲಿಕೆಯ ಮೇಯರ್ ಜಲ್ಪಾಯ್ಗುರಿ ಜಿಲ್ಲೆಯ ಎಪಿಡೆಮಿಯಾಲಜಿಕಲ್ ಟೀಮ್ ಗೆ ಒಂದು ಹೋಟೆಲ್ ಬುಕ್ ಮಾಡಿ ಸಿಲಿಗುರಿಯಲ್ಲಿ ತಂಗುವ ವ್ಯವಸ್ಥೆ ಮಾಡಿದ್ದರು. ನಾವು (ಟೀಮ್ ಜಲ್ಪಾಯ್ಗುರಿ) ನಮ್ಮ ಗಂಟು ಮೂಟೆ ಕಟ್ಟಿಕೊಂಡು ಡೆಂಗ್ಯೂ ವಾರ್ ಫೀಲ್ಡ್ ಗೆ ಇಳಿಯಲು ಜಲ್ಪಾಯ್ಗುರಿಯಿಂದ ಪಯಣಿಸಿ ಸಿಲಿಗುರಿಯ ಕಾಂಚನಜಂಗಾ ಸ್ಟೇಡಿಯಂನಲ್ಲಿರುವ ಆ ಹೋಟೆಲ್ ತಲುಪಿದ್ದೆವು. 

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಆಪರೇಷನ್ ಡೆಂಗ್ಯೂ ಮೊದಲ ಭಾಗ: ನಟರಾಜು ಎಸ್ ಎಂ

  1. ಸರ್, ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಮ್ಮ ಹೋರಾಟ ನಿರಂತರವಾಗಿಲಿ…ಈಗಾಗಲೇ ಹಲವಾರು ಸಾಂಕ್ರಾಮಿಕ ರೋಗಗಳನ್ನು ವೈಧ್ಯಕೀಯ ಕ್ಷೇತ್ರದ ಪರಿಣಿತರು ಮತ್ತೆ ತಲೆಯೆತ್ತದಂತೆ ಅವಿರತ ಶ್ರಮದ ಹೋರಾಟದಿಂದ ಮಾಡಿರುವುದು ಸ್ತುತ್ಯಾರ್ಹವಾದ ಕೆಲಸ. ಆರೋಗ್ಯದ ದೃಷ್ಟಿಯಿಂದ ಜನಮುಖಿ ಸೇವೆಯಲ್ಲಿ ತಲ್ಲೀನರಾಗಿರುವ ನಿಮಗೆ ಮತ್ತು ನಿಮ್ಮ ತಂಡಕ್ಕೆ ಶುಭಕಾಮನೆಗಳು….ಶುಭದಿನ !

  2. ಕತೆಯನ್ನು ಓದಿದಾಗ ಸ್ವಲ್ಪ ನಮಗೂ ಭಯವಾಯಿತು. ನಾವೆಷ್ಟೋ ಕ್ಷೇಮವಿಲ್ಲ. ಡೆಂಗ್ಯೂ ಫೈಟರ್ಸ್ ಟೀಮ್ ಮೂರು ಹೊತ್ತು ಚೆನ್ನಾಗಿ ಊಟ ಮಾಡಿಕೊಂಡು ಇನ್ನಷ್ಟು ಸದೃಢರಾಗಿ ಕಾರ್ಯ ನಿರ್ವಹಿಸಲಿ ಎಂದು ನಾವೆಲ್ಲಾ ಆಶಿಸುತ್ತೇವೆ. 🙂

  3. ನಿಮ್ಮ ಅನುಭವ ಲೇಖನ ತುಂಬ ಹಿಡಿಸಿತು ಸರ್. ಒಳ್ಳೆಯ ನಿರೂಪಣೆ:-)

Leave a Reply

Your email address will not be published. Required fields are marked *