ʻಅಜ್ಜಾ, ನೀ ಮತ್ತ ಅಜ್ಜಿ ಯಾಕ ರಾತ್ರಿ ಪೂಜಿಗೆ ಬರಲಿಲ್ಲ.ʼ
ಪಡಸಾಲ್ಯಾಗ ಕುರ್ಚಿ ಮ್ಯಾಲ ಕುಂತಿದ್ದ ಅಜ್ಜಗ, ಮೊಮ್ಮಗ ಅಂತಪ್ಪ ಕೇಳಿದ
ʻಕೂಸ, ನಾನು ಮುಂಜಾನಿ ಪೂಜಿಗೆ ಹೋಗಿ ಬಂದ್ನೆಲ್ಲಾʼ
ʻಅಜ್ಜಾ, ಸುಳ್ಳ ಹೇಳಬಾರದು, ದೇವರು ರಾತ್ರಿ ಬಂದ ಮೂಗ ಕೊಯ್ತಾನ.ʼ
ʻಏ ಅಂತ್ಯಾ, ದೊಡ್ಡವರಿಗೆ ಹಂಗ ಮಾತಾಡಬಾರದು. ಅಜ್ಜಾ ಅಜ್ಜಿ, ನಿನ್ನೆ ಸಂಜಿಮಟ ಎಷ್ಟ ಕೆಲಸ ಮಾಡ್ಯಾರು? ಗೊತ್ತದ. ಹಳೆ ನೀರ ಚೆಲ್ಲಿ, ಹಿತ್ತಲ ಬಾವಿಲಿಂದ ನೀರ ಸೇದಿ ಎಲ್ಲಾ ತುಂಬಸಲಿಲ್ಲ. ಇಬ್ಬರೂ ನಮ್ಮ ಹಳೆ ಮನಿಗೆ ಹೋಗಿ ನೆಲ ಸಾರಿಸಿ, ಮೂರ ಬಾಯಿ ಒಲಿ ಸಾರಸಿ ಹಸೆ ಇಟ್ಟ ಬರಲಿಲ್ಲ. ನೀ ಎಲ್ಲಿದ್ದಿ? ಊರಾಗ ಸೊರಗ್ಯಾಡಾಕ ಹೋಗಿದ್ದಿ.ʼ
ಸೊಸೆಯತ್ತ ಮುಖ ಮಾಡಿ, ʻಇರ್ಲಿ ಬಿಡವ, ಕೂಸು ಅದಕ್ಕೇನ ಗೊತ್ತಾಗ್ತದ?ʼ ಎನ್ನುತ್ತಾ ಅಜ್ಜ ಅರಳಪ್ಪ, ಮೊಮ್ಮಗ ಅಂತಪ್ಪನ ಕಡೆ ತಿರಗಿ, ʻಕೂಸ, ನಾ ಯಾಕ ಸುಳ್ಳ ಹೇಳಲಿ?ʼ ʻನೀ ನಿನ್ನೆ ರಾತ್ರಿ ಪೂಜಿಗೆ ಹೋಗಿದ್ದಿ. ನಿನಗ ಮುಂಜಾನಿ ಒಂಬುತ್ತೂವರಿತನ ಎಚ್ಚರ ಆಗಿಲ್ಲ.ʼ
ʻಹೌದ ಅಜ್ಜಾ, ನೀ ಹೇಳೂದು ಖರೆ ಅದ. ನಾ ಇಂದ ತಡಾ ಮಾಡಿ ಎದ್ನಿʼ
ʻ… …ʼ
ʻಆದರೂ ಅಜ್ಜ, ನಿನ್ನೆ ರಾತ್ರಿ ಪೂಜಿಗೆ ನೀ ಬರಬೇಕಿತ್ತು. ರಾತ್ರಿ ಪೂಜಿಯೊಳಗ ಸ್ವಾಮಿಗಳು ಕಬ್ಬಿಣದ ದೊಡ್ಡ ಬುಟ್ಯಾನ ಕೆಂಪ ಲಾಲ ನಿಗಿನಿಗಿ ಕೆಂಡದಿಂದ ಬೆಂಕಿ ಎಬ್ಬಿಸಿ ಆ ಹೊಸ ಬೆಂಕಿ ಹಚ್ಚಿ ಪಾಸ್ಖ ದೀಪ ಉರಿಸಿದರು. ಹೊಸ ತೀರ್ಥದ ನೀರ ಮಂತ್ರಿಸಿದರು. ಗುಡ್ಯಾನ ಮಂದಿ ಮೂರ ಸಾರಿ ಮೇಂಬತ್ತಿ ದೀಪಾ ಬೆಳಗಿಸಿದರು. ಎಷ್ಟೊಂದು ಬೈಬಲ್ ಪಠ್ಯ ಓದಿದರು. ಪೂಜಿ ಮುಗದ ಮ್ಯಾಲ ಪಾಸ್ಖ ದೀಪದಿಂದ ನಾ ಮೇಂಬತ್ತಿ ಹಚ್ಚಿಕೊಂಡ ಬಂದ ಮನಿ ಪೀಠದ ದೀಪಾ ಬೆಳಗಿದೆ. ಅವ್ವ ತೀರ್ಥದ ನೀರ ಬಾಟಲಿಯೊಳಗ ಹಿಡಕೊಂಡ ಬಂದಿದ್ದಳು. ಅಪ್ಪ ಅದನ್ನು ಮನಿ ತುಂಬ ಚಿಮುಕಿಸಿದ. ಮತ್ತು ಮನಿ ಸುತ್ತಾ ಓಡಾಡಿ ಅಲ್ಲೆಲ್ಲಾ ಚಿಮಕಿಸಿದ, ದನದ ಮನಿಗೂ ತೀರ್ಥದ ನೀರು ಚಿಮುಕಿಸಿ ಬಂದ. ನೀನು, ಅಜ್ಜಿ ಗಡದ್ದಾಗಿ ಮಲಗಿಬಿಟ್ಟಿದ್ದರಿʼ
ಶನಿವಾದ ಪಾಸ್ಖ ರಾತ್ರಿಯ ಪೂಜೆಯ ವಿವರಗಳನ್ನ ಅಜ್ಜನ ಮುಂದೆ ಸವಿವರವಾಗಿ ಅಂತಪ್ಪ ಹೇಳುತ್ತಾ ಸಾಗಿದ್ದ.
ಅವಂಗ ಸಿಹಿ ತಿಂಡಿ ತಿನ್ನದ ನಾಲಗಿ ರುಚಿ ಕೆಟ್ಟಿತ್ತು. ಮಾಂಸದ ಅಡಿಗಿ ಮನಯಿಂದ ಮಾರ ದೂರ ಇದ್ದವು. ತಪಸ್ಸು ಕಾಲದ ಗುಂಗಿನಿಂದ ಸಾವಕಾಶ ಹೊರಗ ಬರತಿದ್ದ ಅಂತೂ, ಯೇಸುಕ್ರಿಸ್ತರ ಜೆರುಸಲೇಮ ಪುರಪ್ರವೇಶವನ್ನ ಸಂಭ್ರಮಿಸು ಗರಿಗಳ ರವಿವಾರದಿಂದ ಸ್ವಲ್ಪ ಗೆಲುವಾಗಿದ್ದ. ಈ ವರ್ಷನೂ ಹ್ವಾದ ವರ್ಷದ ಶುಭ ಶುಕ್ರವಾರದಂದ ಯುವಕರು ನಿಜದ ಶಿಲುಬೆ ಹಾದಿ ನಡೆಸಿಕೊಟ್ಟಿದ್ದರು. ಹ್ವಾದ ವರ್ಷ ಗುಡಿ ಪಾಲನಾ ಗುರು ಮುಂದ ನಿಂತ ಒಬ್ಬನ್ನ ಯೇಸುಸ್ವಾಮಿ ಮಾಡಿದ್ದರು. ಕೆಲವರನ್ನ ಶಿಷ್ಯರನ್ನಾಗಿ ಮಾಡಿದ್ದರು. ಮತ್ತ ಕೆಲವರು ಯೇಹೂದಿ ಜನಸಾಮಾನ್ಯರು ಮತ್ತ ಯಾಜಕರಾಗಿದ್ದರು. ಬೆಳ್ಳಗ ಇರಾವರು ಪೋನ್ಸಿಸ್ ಪಿಲಾತ ಮತ್ತ ರೋಮಿನ ಸೈನಿಕರ ಪಾರ್ಟ ಹಾಕಿದ್ದರು. ಅದನ್ನ ನೋಡಿದ ಕೆಲವು ಹುಡುಗರು ಬ್ಯಾಟಾ ಮಾಡಿ ಈ ವರ್ಷದ ಗರಿಗಳ ಭಾನುವಾರ ಒಬ್ಬ ಹುಡುಗಗ ಯೇಸುಸ್ವಾಮಿ ವೇಷ ತೊಡಿಸಿ, ಕತ್ತಿ ಮ್ಯಾಲ ಕೂಡಿಸಿ ಗುಡಿಗೆ ಕರಕೊಂಡ ಬಂದಿದ್ದರು. ಅದನ್ನ ನೋಡಿದ್ದ ಸ್ವಾಮ್ಯಾರು ಗರಿಗಳನ್ನು ಮಂತ್ರುಸೂದನ್ನ ಅರ್ಧಕ್ಕ ತರಬಿ, ʻಇದೇನ ಹುಚ್ಚುಚಾರ ಮಾಡ್ತಿದೀರಿ?ʼ ಅಂತ ಬೈದ ಕಳಿಸಿದ್ದರು. ಉಪದೇಶಿ ಸಾಲೊಮನ ಅವರನ್ನ ಗುಡಿ ಅಂಗಳದಿಂದ ಹೊರಗ ಕಳಿಸಿದ್ದ. ಗರಿಗಳನ್ನ ಮಂತ್ರಿಸಿದ ಮ್ಯಾಗ ಗುಡಿಗೆ ಬಂದ ಮಂದಿ ಗರಿಗಳನ್ನ ಹಿಡಕೊಂಡ ಚರ್ಚಿನ ಕಂಪೌಂಡದಾಗ ಮೆರವಣಿಗಿ ಮಾಡಿದ್ದರು.
ʻಇದು ಯಾವ ಹಬ್ಬ? ಎದಕ್ಕ ಅದನ್ನ ಮಾಡ್ತೀವಿ? ಅನ್ನೂದ ಗೊತ್ತದ ಅಲಾ?ʼ ಅಜ್ಜ ಕೇಳಿದ.
ʻಯಾಕಿಲ್ಲ? ನನಗ ಎಲ್ಲಾ ಗೊತ್ತದ. ಸಾಲ್ಯಾಗ ನಮ್ಮ ಧರ್ಮೋಪದೇಶದ ಕ್ಲಾಸನ್ಯಾಗ ಎಲ್ಲ ಹೇಳ್ಯಾರ. ಇದು ಈಸ್ಟರ್ ಹಬ್ಬ ಬೆಳಕಿನ ಹಬ್ಬ. ಯೇಸು ಪುನರುತ್ಥಾನರಾದ ಹಬ್ಬ. ಅದರ ಹಿಂದಿನ ಶುಕ್ರವಾರ ಶುಭ ಶುಕ್ರವಾರ. ಅಂದ ಯೇಸುಸ್ವಾಮಿನ್ನ ಶಿಲುಬೆಗೆ ಏರಿಸಿರತಾರ. ಸಂಜಿ ಮುಂದ ಅವರನ್ನ ಬಿಳಿ ಅರವಿ ಸುತ್ತಿ ಅಂದಿನ ಪದ್ಧತಿ ಪ್ರಕಾರ ಗವಿಯೊಳಗ ಸಮಾಧಿ ಮಾಡಿರತಾರ.ಆದರ ಯೇಸುಸ್ವಾಮಿ ಸಾವನ್ನು ಗೆದ್ದವರು. ಸಮಾಧಿಲಿಂದ ಎದ್ದ ಬರ್ತಾರ. ಅದನ್ನ ಸ್ಮರಿಸೂ ಹಬ್ಬ ಈ ಈಸ್ಟರ್ ಹಬ್ಬ.ʼ
ʻಅಂದ್ರ. ಇದು ಸಮಾಧಿಲಿಂದ ಎದ್ದ ಬರೂದನ್ನು ಸ್ಮರಿಸೂ ಹಬ್ಬ. ಹೌದೋ ಅಲ್ಲೋ?ʼ
ʻಹೌದು.ʼ
ʻಹಂಗಾರ, ಇದು ನಮ್ಮ ಗೋದವ್ವ ಅಜ್ಜೀನ ಸ್ಮರಿಸೂ ಹಬ್ಬಾನೂ ಹೌದ.ʼ
ʻಮಾವಾರ, ಈ ಗೋದವ್ವಜ್ಜಿ ಯಾರ್ರಿ?ʼ ಸೊಸೆ ಅನ್ನಮ್ಮಳಿಂದ ಪ್ರಶ್ನೆ ತೂರಿ ಬಂದಿತು,
ʻಅದನವ್ವ, ಗೋದುತಾಯಿ ಅಜ್ಜಿ. ಗೋದವ್ವಜ್ಜೀನ ಗೋದುತಾಯಿ.ʼ
ʻಹಂಗ ಹೇಳ್ರಿ ಮತ್ತʼ ಅನ್ನಮ್ಮ ಹೇಳಿದಳು. ಮತ್ತ ಮಾವಾರ ಅತ್ತಿಗೆಮ್ಮ, ಗೋದುತಾಯಿ ಅಜ್ಜಿ ಗುಡ್ ಫ್ರೈಡೆ ದಿನಾ ಸತ್ತದ್ದು ಅಂತ ಹೇಳತಿದ್ದರು. ಈಸ್ಟರ್ ಹಬ್ಬದ ದಿನಾಂಕ ಪ್ರತಿವರ್ಷ ಬದಲಾದಂಗ ಗಡ್ ಫ್ರೈಡೆ ದಿನಾನೂ ಬದಲಾಕ್ಕೋತ ಹೋಗ್ತದ. ಜೋಕ ಮಾಡಾಕ ಇದೇನ್ ಮುಂದಿನ ೨೦೨೯ನೇ ಸಾಲಿನ ಮಾರ್ಚ ೩೦ರ ಗುಡ್ ಫ್ರೈಡೆ ಅಲ್ಲ ಮತ್ತ ಏಪ್ರಿಲ್ ೧ ರ ಈಸ್ಟರ್ ಹಬ್ಬ ಅಲ್ಲನ ಅಲ್ಲ.ʼ
ʻಯವ್ವ ನಾ ಯಾಕ ಜೋಕ ಮಾಡ್ಲಿ? ನಮ್ಮಜ್ಜಿ ಸತ್ತ ಮತ್ತ ಎದ್ದ ಬಂದದ್ದ ಖರೇ ಖರೆ ನಡದ ಐತಿ ಇದು,ʼ
ʻ… …ʼ
ʻಸತ್ತ ಎದ್ದ ಮ್ಯಾಲ ನಲವತ್ತ ವರ್ಷ ಸಂಸಾರನೂ ಮಾಡ್ಯಾಳ. ನಾಲ್ಕ ಮಕ್ಕಳನ್ನ ಹಡದ ದಡ ಮುಟ್ಟಿಸ್ಯಾಳʼ
ʻಹಬ್ಬ ಇದ್ದರೂ ಮಗಾ ಅಮೃತಪ್ಪ, ಲಗೂ ಬರ್ತೀನಿ ಅಂತ ಹೇಳಿ ಚಿಕ್ಕು ಹಣ್ಣ ಬಾಕ್ಸ್ ಗಳನ್ನ ಮಾರಾಟಕ್ಕ ಅಡತಿಗೆ ಕಳಸಾಕ ಚಿಕ್ಕು ಗಿಡದ ತ್ವಾಟಕ್ಕ ಹೋಗಿದ್ದ. ತ್ವಾಟಕ್ಕ ಭಾಗವಾನರು ಬರಾವರಿದ್ದರು. ದನಕ್ಕೆ ಮೇವು ಹಾಕಿ ಬಂದ ಅಜ್ಜಿ ಬಂದ ಪಡಸಾಲ್ಯಾಗ ಕೂತಗೊಂಡಳು. ಗಂಡನ ಮಾತ ಕೇಳಿಸಿಕೊಂಡ ಅಜ್ಜಿ, ʻಮತ್ತ ನಿಮ್ಮ ಹಳೀ ಕತಿ ಶುರುವಾದವ, ಗೋದವಜ್ಜಿ ಕತಿಗಳ್ನ ಶುರು ಹಚಗೊಂಡರಿ? ನಿಮಗಂತೂ ಗೋದವ್ವಜ್ಜಿ ಕತಿ ಅಂದ್ರ ಬ್ಯಾಸರಿಕೀನ ಆಗೂದಿಲ್ಲʼ ಎಂದಳು.
ʻಹಿಂದ ಹೇಳಿದ್ದ ಕತಿಗಳ ಬ್ಯಾರೇ ಇದ್ದವು. ಇವತ್ತ ಹೇಳೂ ಕತಿ ಬ್ಯಾರ ಇದ್ದಂಗದ. ಗೋದುತಾಯಿ ಅಜ್ಜಿ ಸತ್ತ ಎದ್ದ ಬಂದಿದ್ದಳಂತʼ ಸೊಸಿ ರಾಗ ಎಳೆದಳು.
ಬಡ್ಡಿಲಿಂದ ಕತಿ ಶುರು ಮಾಡಿದ್ದ ಅಜ್ಜ. ಫ್ಯಾಂಟಮನ ಕತೆಗಳ ನಡುವ, ಆಗಾಗ ತಡವಾಗಿ ಬಂದವರಿಗಾಗಿ ಎಂದು ಮೊದಲಿನಿಂದಲೂ ಕತೆಗಳು ಆರಂಭವಾಗುಹಂಗ, ಅಜ್ಜ ಗೋದುತಾಯಿ ಕತೆಗಳನ್ನ ಶುರು ಮಾಡಿದರ, ಅವು ಮತ್ತ ಮೊದಲಿಂದ ಶುರು ಆಗತಿದ್ದವು.
ʻನಾಲ್ಕೈದ ನೂರ ವರ್ಷದ ಹಿಂದ ಒಬ್ಬ ಸ್ವಾಮಿ ಕಾವಿತೊಟಗೊಂಡ ಊರಿಗೆ ಬಂದಿದ್ದ. ಮಲಪ್ರಭಾ ನದಿ ದಂಡಿಲಿಂದ ಒಂದ ಊರಿಂದ ಇನ್ನೊಂದ ಊರಿಗೆ ಹೊಂಟಿದ್ದ ಆ ಸ್ವಾಮಿ. ಊರ ಹೊರಗಿದ್ದ ಹಾಳ ಬಿದ್ದಿದ್ದ ಗುಡಿಯೊಳಗ ವಸ್ತಿ ಹೂಡಿದ್ದ. ಆ ಗುಡಿಗೆ ಕೆಟ್ಟ ಹೆಸರ ಇಟ್ಟಿತ್ತ ಊರ ಮಂದಿ. ಅಲ್ಲಿ ಕತ್ತಲಾಗಾಣ ಕಳ್ಳರು ಸೇರತಿದ್ದರು. ಕೆಂಪ ಮೊಸಡಿ ಹೊಸಾ ಸ್ವಾಮಿ ಊರಿಗೆ ಬಂದಾನ ಅಂದ ಕೂಡಲೇ ಅವನ್ನ ನೋಡಾಕ ಊರ ಮಂದಿ ಬಂತು. ಮಂದಿ ಅಡ್ಡಬಿದ್ದ ಮಾತಾಡಿಸಿ ನೋಡಿದರು. ಊರವರಿಗೆ ಇಷ್ಟರಮಟಾ ನೋಡಿದ ಸ್ವಾಮಿಗೋಳಗಿಂತ ಈ ಸ್ವಾಮಿ ಸ್ವಲ್ಪ ಫರಕ ಆಗಿ ಕಂಡ. ಅಂವಾ ಕನ್ನಡ ಸೀಮ್ಯಾಗ ಬಂದ ಮ್ಯಾಲ ಕನ್ನಡ ಕಲತಂಗ ಕಾಣತಿದ್ದ. ʻನಾ ಪಡವಣದ ಸ್ವಾಮಿʼ ಎಂದು ಹೇಳಕೊಳ್ತಿದ್ದ ಆ ಸ್ವಾಮಿ, ʻಶುಭ ಸಂದೇಶ ಸಾರಾಕ ಭಂದೀನಿʼ ಅಂತಿದ್ದ.
ಮುಳ್ಳಿನ ಪಾದಕಿ ಮ್ಯಾಲ ನಿಂತ ಬವಿಷ್ಯ ನುಡಿತಿದ್ದ ಸಾರು ಐನಾರನ್ನು ನೋಡತಿದ್ದ ಊರ ಮಂದಿಗೆ, ಈ ಸ್ವಾಮಿ ವರಸೆ ಬ್ಯಾರೇನ ಅನ್ನಿಸಿತು. ʻನೀವು ಯಾವ ದಾರಾನ ಹಾಕೋರಿ, ಯಾವ ದಾರಾ ಹಾಕದಿದ್ದರೂ ನಡೀತದ. ನಮ್ಮ ದೇವರ ಮುಂದ ಎಲ್ಲಾರೂ ಒಂದʼ ಅಂದಾಗ ಊರ ಮಂದಿ ಹೌ ಹಾರಿತು. ʻಏನಪಾ, ಈ ಸ್ವಾಮಿಗೆ ಮಡಿ ಮೈಲಿಗಿ ಗೊತ್ತಿಲ್ಲ. ನಮ್ಮ ಜಾತಿ ಮೈಲಿಗಾದರ ಹೆಂಗಪಾ?ʼ ಅನ್ನು ಚಿಂತಿ ಊರಾವರನ್ನ ಕಾಡಾಕ್ಹತ್ತಿತ್ತು. ಸುತ್ತಲ ಸೀಮಿ ಏಳೆಂಟ ಹಳ್ಳಿ ನೋಡಕೋತಿದ್ದ ಪೊಲೀಸಪ್ಪಗೂ ಸುದ್ದಿ ಹೋಗಿತ್ತು. ಅಂವಾ ಬಂದ ಮ್ಯಾಲ ಈ ಸ್ವಾಮಿ ಕಿರಿಸ್ತಾನರ ಸ್ವಾಮಿ ಅಂತ ಊರ ಮಂದಿಗೆ ಗೊತ್ತಾತು. ಒಬ್ಬೊಬ್ಬರ ಜಾಗಾ ಖಾಲಿ ಮಾಡಾಕಹತ್ತಿದರು. ಐನೋರ ಗೋದುತಾಯಿ ಒಬ್ಬಳ ಉಳದಿದ್ದಳು.
ʻನಿಮ್ಮನ್ನ ಏನಂತ ಕರಿತಾರಿ?ʼ ಗೋದುತಾಯಿ ಕೇಳಿದಳು
ʻನನ್ನ ಫಾದರ್, ಅಂತ ಕರೀತಾರ. ಅಂದ್ರ ತಂದೆ, ಅಯ್ಯ ಅಂತನೂ ಕರಿಬಹುದು.ʼ ಸ್ವಾಮಿ ಹೇಳಿದರು.
ʻಹಂಗಾರ ನೀವ ನಮ್ಮ ಪೈಕೀನʼ ಅಂದಳು ಗೋದುತಾಯಿ. ʻನಿನಗ ಹಂಗ ಅನ್ನಿಸಿತಂದ್ರ ಹಂಗ ತಿಳಕೋ. ದೇವರ ಇಚ್ಛಾ. ಎಲ್ಲಾ ದೇವರ ನಡಿಸಿದಂಗ ನಡೀತದʼ ಸ್ವಾಮಿ ನುಡಿದರು.
ಗೋದುತಾಯಿ ಐನೋರ ಪೈಕಿ ಹೆಣ್ಮಗಳು. ದೊಡ್ಡವಳಾದ ಮೂರು ತಿಂಗಳದಾಗ ಮಗ್ಗಲಕಿನ ಊರಿನ ಹುಡುಗನ ಜೋಡಿ ಅವಳ ಲಗ್ನಾ ಆಗಿತ್ತು. ಲಗ್ನ ಆದ ಆರು ತಿಂಗಳದಾಗ, ಒಂದು ದಿನಾ ಈಸಾಕ ಗೊತ್ತಿಲ್ಲದ ಅವಳ ಗಂಡ, ರಾತ್ರಿ ದಾರಿ ತಪ್ಪಿ ತೋಟದ ಬಾವಿಗೆ ಬಿದ್ದು ಮುಳುಗಿ ಸತ್ತಿದ್ದ. ʻಮಗನ ಸಾವಿಗೆ ಕಾರಣಳಾದ ಹೆಣ್ಮಗಳುʼ ಅಂತ ಹೆಸರಿಟ್ಟ ಗಂಡನ ಮನೆಯವರು ಹೊರಗ ಹಾಕಿದಾಗ, ಅವಳು ಹೊಳ್ಳಿ ತವರು ಮನಿಗೆ ಬಂದಿದ್ದಳು. ಅಣ್ಣಂದಿರು ಆಪ್ತವಾಗಿ ನಡೆದುಕೊಂಡರೂ, ಅವರ ಹೆಂಡಿರುಗಳು, ವ್ಯಾಳ್ಯಾದ ಖಬರ ಇಲ್ಲದ ಮುಂದ ಸಿಕ್ಕಾಗ ಕೊಂಕು ಮಾತುಗಳನ್ನ ಆಡದ ಬಿಡತಿರಲಿಲ್ಲ. ಅಂಥದೇ ಒಂದು ಬೇಜಾರದ ದಿನದಾಗ ದಾನಪ್ಪ ಶೆಟ್ಟರ ಅಂಗಡಿ ಗಲ್ಲೆ ಮ್ಯಾಲ ಕೂಡತ್ತಿದ್ದ ಅವರ ಮಗ ಶಿವಪುತ್ರಪ್ಪನ ಮೇಲೆ ಮನಸ್ಸಾಗಿತ್ತು. ಅವನಿಗೂ ಅವಳನ್ನು ಕೂಡಬೇಕೆಂಬ ಆಸೆ ಇತ್ತು. ಜಾತಿ ಬ್ಯಾರೆ ಅವರಿಬ್ಬರ ಒಡನಾಟಕ್ಕೆ ಅಡ್ಡಿ ತಂದಿತ್ತು. ಅದ ವ್ಯಾಳ್ಳೇಕ ಕೆಂಪು ಮೊಸಡಿ ಸ್ವಾಮಿ ಊರಿಗೆ ಬಂದಿದ್ದ. ಪೊಲೀಸಪ್ಪ ಆ ಸ್ವಾಮಿ ಜೋಡಿ ಭಯ ಭಕ್ತಿಯಿಂದ ನಡೆದುಕೊಂಡ ರೀತಿ ನೋಡಿ, ಸ್ವಾಮಿ ನಮ್ಮ ಜೋಡಿ ಇದ್ದರ ಇಬ್ಬರೂ ಕೂಡಬಹುದು ಎಂದು ಗೋದುತಾಯಿ ಮತ್ತು ಶಿವಪುತ್ರಪ್ಪ ವಿಚಾರ ಮಾಡಿದರು. ʻಇದು ತುಂಬಾ ಸೂಕ್ಷ್ಮ ವಿಚಾರ. ಆದರ, ಈ ಊರು ಬಿಟ್ಟು ಪಟ್ಟಣಕ್ಕೆ ಹೋಗುದಾದರ ಅನುಕೂಲ ಮಾಡಿ ಕೊಡಬಹುದುʼ ಎಂಬ ಭರವಸೆ ಮಾತು ಅವರಿಂದ ಬಂದಿತ್ತು. ಪಟ್ಟಣದಲ್ಲಿ ಕನ್ಯಾಮಠವನ್ನು ಸೇರಿಕೊಂಡ ಅವರಿಬ್ಬರೂ ಮದುವೆಯಾಗದೇ ಕೂಡಿಕೆ ಸಂಸಾರ ಆರಂಭಿಸಿದ್ದರು.
ಒಂದು ದಿನ ಅವರಿಬ್ಬರೂ ತಮ್ಮ ಗುಡಿಸಲಿನ್ಯಾಗ ಮಲಗಿದ್ದಾಗ, ಶಿವಪುತ್ರನಿಗೆ ಗೋದುತಾಯಿಯ ಉಸಿರು ನಿಂತಂತೆ, ಮೈ ತಣ್ಣಗಾದಂಗ ಅನ್ನಿಸಿತು. ಉಸಿರು ಗೊತ್ತ ಆಗತಿರಲಿಲ್ಲ. ಅವಳು ಸತ್ತುಹೋಗ್ಯಾಳ ಅನಕೊಂಡ ಶಿವಪುತ್ರಪ್ಪ ಲಬೋ ಲಬೋ ಬಾಯಿ ಬಡಕೊಂಡ. ಹೊಯ್ಕೊ ಬಡಕೋ ಮಾಡಕೋತ ಗೋಳಾಡಿದ. ಆ ದಿನಾ ಶುಭ ಶುಕ್ರವಾರ ಆಗಿತ್ತು. ಅವನ ಗೋಳಾಟಕ್ಕ ತಾಳ್ಮೆ ಕಳೆದುಕೊಂಡ ಕನ್ಯಾಮಠದವರು ಹೆಣ ಸಾಗಿಸುದಕ್ಕೆ ಅನುವು ಮಾಡಿಕೊಟ್ಟರು. ಚಟ್ಟಾ ಕಟ್ಟಿ ಮೆರಣಿಗ್ಯಾಗ ಹೆಣಾನ ಸ್ಮಶಾನಗಟ್ಟಿಗೆ ಸಾಗಿಸಿದರು. ಇನ್ನೇನು ಅದನ್ನು ಕುಣಿಯಲ್ಲಿ ಇಡಬೇಕು ಅನ್ನುವಾಗ, ಅವಳ ಎಡಗೈ ಕಿರುಬೆರಳು ಅಲುಗಾಡಿದಂಗ ಭಾಸಾಯಿತು. ʻಅಯ್ಯೋ ಶಿವಪುತ್ರಪ್ಪ ನಿನ್ನವಳು ಬದುಕಿದ್ದಾಳೋ?ʼ ಎಂದು ಒಬ್ಬ ಕೂಗಿಕೊಂಡ. ಅಲ್ಲಿ ಇದ್ದವರೆಲ್ಲಾ ʻಇದ ಭೂತ ಚೇಷ್ಟೆʼ ಅಂದಕೊಂಡ ಎದ್ದನೋ ಬಿದ್ದೆನೋ ಎಂದು ಓಡಿಹೋದರಂತ. ಕೂಗು ಹಾಕಿದವ ಮತ್ತು ಶಿವಪುತ್ರಪ್ಪ ಧೈರ್ಯದಿಂದ ಹೆಣವನ್ನು ಮುಟ್ಟಿ ಅಲುಗಾಡಿಸಿದಾಗ ಕಣ್ಣು ಬಿಟ್ಟ ಗೋದೂತಾಯಿ ʻನಾ ಎಲ್ಲಿದೀನಿ?ʼ ಎಂದು ಕೇಳಿದಳಂತೆ. ʻನೀ ಸ್ಮಶಾನಗಟ್ಯಾಗ ಇದಿʼ ಅನ್ನತಿದ್ದ ಶಿವಪುತ್ರನ ಬಾಯಿ ಮುಚ್ಚಿಸಿದ ಅವನ ದೋಸ್ತ. ಅವರಿಬ್ಬರೂ ಅವಳನ್ನ ಚಟ್ಟದಿಂದ ಬಿಡಿಸಿ ಎತ್ತಕೊಂಡ ಕನ್ಯಾಮಠದ ಹಾದಿ ಹಿಡಿದು ಹೊಂಟರು. ಅಷ್ಟರಾಗ ಎರಡು ಮೂರು ತಾಸು ಕಳದಿತ್ತು. ಊರ ಮಂದಿಗೆ ಇದು ಪವಾಡದಂಗ ಕಂಡಿತು.
ಕನ್ಯಾಮಠದ ದೊಡ್ಡ ಅಮ್ನೋರು, ʻದೇವರ ಇಚ್ಛಾ ಇದ್ದಂತಾಗಲಿ. ನೀವಿಬ್ಬರೂ ಲಗೂನ ಲಗ್ನ ಮಾಡಕೊಂಡ ಸುಖವಾಗಿ ಸಂಸಾರ ನಡಸರಿ, ಮನಿ ತುಂಬ ಮಕ್ಕಳಾಗಲಿʼ ಎಂದು ಹರಸಿದರು. ಈಸ್ಟರ್ ಹಬ್ಬ ಮುಗಿದ ನಂತರದ ದಿನಗಳಲ್ಲಿ ಅವರಿಗೆ ಜಪತಪ ಕಲಿಸಿ ಜ್ಷಾನಸ್ನಾನ ಕೊಟ್ಟರು. ಒಂದು ದಿನ ಗುಡಿಯಲ್ಲಿ ಅವರಿಬ್ಬರ ಲಗ್ನ ನಡೀತು. ಅವಳ ಹೆಸರಿನ ಮೂಲ ಗೋದಾವರಿ ನದಿ. ಗೋದಾವರಿ ನದಿ ದಕ್ಷಿಣ ಭಾರತದ ಗಂಗವ್ವ ಅಂತಾರ ನಾಡಿನ ಮಂದಿ. ʻಯೇಸುಸ್ವಾಮಿ ಹುಟ್ಟಿದಾಗ ಹಸಿಗೂಸನ್ನು ದನದ ಕೊಟ್ಟಿಗಿ ಗೋದಲ್ಯಾಗ ಮಲಗಿದ್ದನ್ನು ನೆನೆಸಿ ಅದ ಹೆಸರು ಇರಲಿʼ ಎಂತ ಜ್ಞಾನಸ್ನಾನ ಕೊಟ್ಟ ಲಗ್ನ ಮಾಡಿಸಿದ ಸ್ವಾಮ್ಯಾರು ಆಶೀರ್ವದಿಸಿದರಂತ. ಶಿವಪುತ್ರನಿಗೆ ಪೀಟರ್ ಬದಲು ಪೇತ್ರಪ್ಪ ಎಂದು ಜ್ಞಾನಸ್ನಾನದ ಹೆಸರು ಇಟ್ಟರಂತ. ಹುಡುಗಾಟಿಕೆಯಲ್ಲಿ ಜಿಗರಿ ದೋಸ್ತರು ಅವನನ್ನ, ʻಪ್ರೇತವನ್ನ ಮದುವೆಯಾದವನು ಪ್ರೇತಪ್ಪʼ ಎಂದು ಕರದು ಅಣಕಿಸುತ್ತಿದ್ದರಂತ. ಗೋದುತಾಯಿ ಸಮಾಧಿಗೆ ಹೋಗಿ ಹಿಂತಿರುಗಿದ ವಿಸ್ಮಯದ ಸುದ್ದಿ ಕೇಳಿ ಆ ಊರಾನ ಮತ್ತು ಮಗ್ಗಲಕಿನ ಊರೊಳಗಿನ ಹತ್ತಾರು ಮನೆತನಗಳ ಜನರು ಜ್ಞಾನಸ್ನಾನ ಕೇಳಿಪಡೆದು ಕ್ರೈಸ್ತರಾದರಂತ. ಮದುವೆಯಾದ ಮೇಲೆ ಗೋದುತಾಯಿ ಮತ್ತು ಪೇತ್ರಪ್ಪನಿಗೆ ನಾಲ್ವರು ಗಂಡು ಮಕ್ಕಳು ಹುಟ್ಟಿದರು. ಅವರಿಗೆ ರಾಯಪ್ಪ, ಅರುಳಪ್ಪ, ಅಂತೋನಪ್ಪ, ಸೀಮೋನಪ್ಪ ಎಂದು ಹೆಸರಿಟ್ಟಿದ್ದರು. ಮಕ್ಕಳು ಮೊಮ್ಮಕ್ಕಳು ಆಗಿ ಹಿಂಗ ಮುಂದ ಹೋಗಿ ಗೋದುತಾಯಿಯ ಸಂತಾನ ಇಂದ ಒಂದು ದೊಡ್ಡ ಸಮುದಾಯದ ರೂಪ ತಾಳೇದ. ಇದು ಗೋದವ್ವಜ್ಜಿ ಪುನರ್ಜೀವಂತಳಾಗಿ ಎದ್ದ ಪವಾಡದ ಕತಿʼ ಎಂದು ಅಜ್ಜ ಕತೆ ಮುಗಿಸಿದ.
ಮನೆಯ ಪಡಸಾಲ್ಯಾಗಿದ್ದ ಎಲ್ಲರ ಮುಖಗಳೂ ಅಚ್ಚರಿಯ ಛಾಯೆ ಹೊತ್ತಿದ್ವು.
ಅಷ್ಟಾದ ಮೇಲೆ ಅಜ್ಜ, ಸೊಸೆಯತ್ತ ಮುಖ ಮಾಡಿ ʻಅಂತೋನಪ್ಪ ನಮ್ಮ ಮುತ್ತಜ್ಜ. ಅದೇ ಹೆಸರನ್ನ ನಿಮ್ಮಿಬ್ಬರ ಕುಡಿ ಅಂತಪ್ಪನಿಗೆ ಇಟೈತಿʼ ಎಂಬ ಮಾತನ್ನೂ ಸೇರಿಸಿದ.
ʻಮಾವಾ̧ರ, ಹಿಂದಿ ಭಾಷಾದಾಗ ʻಗೋದ ಅಂದ್ರ ಮಡಿಲು, ಎತ್ತಿಕೋ, ತೊಡೆಯ ಮೇಲೆ ಕೂಡಿಸಿಕೊಳ್ಳು, ದತ್ತು ತಗೋ ಅಂತ ಅರ್ಥ ಅದಾವʼ. ಗೋದವ್ವನ ಮಡಿಲಾಗ ನಾವು ಸಂಪಾಗಿದೀವಿ. ಮತ್ತ ಮತ್ತ ಈ ನಮ್ಮ ಗೋದುತಾಯಿ, ದೂರದ ಆಂಧ್ರ ಪ್ರದೇಶದ ಗುಂಟೂರು ಸೀಮ್ಯಾನ ಅನ್ನಮ್ಮಳಂಗ ವಜನದಾಕಿ ಅದಾಳ ನೋಡ್ರಿ.ʼ
ʻಯಾರವಾ, ಆ ಅನ್ನಮ್ಮ?ʼ
ʻಮಾವಾರ, ನಮ್ಮ ಕರ್ನಾಟಕ ಸೀಮಿಗೆ ಮೊದಲ ದೊಡ್ಡ ಮೇತ್ರಾಣಿ ಆಗಿದ್ರಲ್ಲ ತೋಮಾಸ್ ಪೋತಕಮುರಿ ಅವರಂಗ ಇವಳೂ ಹಿಂದಿನ ವಿಶಾಲ ಆಂಧ್ರಪ್ರದೇಶಕ್ಕೆ ಸೇರಿದವಳು. ಹದಿನೆಂಟನೇ ಶತಮಾನದಾಗ, ಅವಳಿಗೆ ಜ್ಞಾನಸ್ವಾನ ಕೊಡೂವಾಗ ಮೇರಿ ಮಾತೆಯ ಅವ್ವನ ಹೆಸರ ಆನ್ ಹೆಸರ ಕೊಟ್ಟರಂತ. ಅದು ಜನರ ಬಳಕ್ಯಾಗಿ ಅನ್ನಮ್ಮ ಆಗಿಬಿಟ್ಟದ. ಅವಳ ಪ್ರಭಾವದಿಂದ ಬಹಳಷ್ಟ ಮಂದಿ ಕ್ರೈಸ್ತರಾದರಂತ. ಹಂಗಂತ ʻತೆಲುಗು ಕ್ರೈಸ್ತರ ಇತಿಹಾಸʼ ಪುಸ್ತಕದಾಗ ಓದಿದ್ದ ಸಾಲು ಈಗ ಧ್ಯಾಸಕ್ಕ ಬಂತು.ʼ ಸೊಸಿ ಅನ್ನಮ್ಮ ತನ್ನ ಹೆಸರಿಂದು ಹಿರಿಮಿ ಗರಿಮಿ ಏನ ಕಡಿಮಿ ಇಲ್ಲ ಅಂತ ತನಗ ತಿಳಿದಿದ್ದನ್ನ ಹೇಳಿಕೊಂಡಳು.
ಅಷ್ಟೊತ್ತಿಗೆ ಅಂತಪ್ಪನ ಅಪ್ಪ ಅಮೃತಪ್ಪ ಮನಿಗೆ ಬಂದ. ಅಮೃತಪ್ಪನೂ, ಅವರಪ್ಪ ಹೇಳತ್ತಿದ್ದ ಗೋದವ್ವಜ್ಜಿ ಕತಿ ಕೇಳಿಸಿಕೊಂಡಿದ್ದ. ನೂರಾ ಎಂಟ ಸಲ ಅಂವಾ ಈ ಕತಿ ಕೇಳಿದ್ದ. ಅವನಿಗೆ ಅದು ಅಂತ ವಿಶೇಷ ಅನ್ನಿಸುತ್ತಿರಲಿಲ್ಲ. ಅಪ್ಪ, ಇದ್ದದ್ದ ಮತ್ತ ಇಲ್ಲದ್ದನ್ನ ಸೇರಿಸಿ ಕತಿ ಹೇಳತಾನ ಅನ್ನಿಸತಿತ್ತು. ಅಪ್ಪನ ಮನಸ್ಸಿನ ಸಂದೂಕದಾಗ ಇಂಥಾ ನೂರಾರ ಕತಿ ಅದಾವು. ಅಪ್ಪನಿಗೆ, ಅವರಪ್ಪ ಹೇಳಿದ ಗೋದು ತಾಯಿ ಕತಿ ಮ್ಯಾಲ ಎಲ್ಲಿಲ್ಲದ ವಿಶ್ವಾಸ. ಸಾಕ್ಷಿಯಾಗಿ ಸುತ್ತೂರೊಳಗ ನೆಂಟರಿಷ್ಟರ ದೊಡ್ಡ ಬಳಗಾನ ಇದ್ದದ್ದು ಅಮೃತಪ್ಪನ ಕಣ್ಣಮುಂದ ಕಾಣ್ತದ..
ಅಮೃತಪ್ಪನ ಜೋಡಿ ಕನ್ನಡ ಸಾಲ್ಯಾಗ ಇದ್ದ ದೋಸ್ತ ಮಲ್ಲೇಶಪ್ಪ, ಮುಂದ ಓದಿ ಡಾಕ್ಟರ್ ಆಗಿದ್ದ. ಅಂವಾ ʻಬಹುಶಾ, ಅಂದ ಗೋದುತಾಯಿ ತಾತ್ಕಾಲಿಕ ಕೋಮಾ ಅಂದ್ರ ಬದುಕಿದ್ದರೂ ಗೊತ್ತಾಗದ ಸತ್ತಂತಿರುವ ಸ್ಥಿತಿ ಮುಟ್ಟಿದ್ದಳೋ ಏನೋ? ಅಂದ ಸರಿಯಾದ ವೈದ್ಯಕೀಯ ತಿಳಿವಳಿಕೆ ಇಲ್ಲದ ಆಕಿ ಸತ್ತಳು ಅಂತ ಮಂದಿ ಅಂದಕೊಂಡಿರಬೇಕುʼ ಅಂತ ಹೇಳಿದ್ದ, ಅಮೃತಪ್ಪನಿಗೂ ಅದೇ ಸರಿ ಇರಬೇಕು ಅಂತ ಅನಿಸ್ಸಿದ್ದಂತೂ ಖರೆ. ಆದರೆ, ದೃಢ ವಿಶ್ವಾಸದ ಮುಂದ, ಆಳವಾಗಿ ಬೇರು ಬಿಟ್ಟ ನಂಬಿಕಿ ಮುಂದ ಯಾವುದೂ ಸುಳ್ಳಾಗಿ ಸುಳಿಯುದ ಇಲ್ಲ.
–ಎಫ್.ಎಂ.ನಂದಗಾವ
ಸೊಗಸಿಗಿದೆ ಸರ್