ಮೇಷ್ಟ್ರು ಡೈರಿ ೧: ಲಿಂಗರಾಜು ಕೆ ಮಧುಗಿರಿ.

ಎಂದಿನಂತೆ ಶಾಲೆಯ ಬಿಸಿಯೂಟಕ್ಕೆ ತರಕಾರಿ ತರಲು ಹೆಂಡತಿ ಜೊತೆ ಹೋಗಿದ್ದೆ. ರಸ್ತೆ ಬದಿಯ ತರಕಾರಿ ಅಂಗಡಿಯಮ್ಮನ ಜೊತೆ ಸುಮಾರು ಒಂದರವತ್ತೊಂದರ ವಯಸ್ಸಿನ ಅಜ್ಜಿ ಕೂಡಾ ಮೊಳಕೆ ಕಟ್ಟಿದ್ದ ಹೆಸರುಕಾಳು, ತೆಂಗಿನಕಾಯಿ ಮಾರುತ್ತಾ ಕುಳಿತಿತ್ತು.

ತರಕಾರಿ ತೆಗೆದುಕೊಳ್ಳುತ್ತಾ ತರಕಾರಿಯಮ್ಮನ ಜೊತೆ ಮಾತನಾಡುತ್ತಿದ್ದ ಹೆಂಡತಿಯನ್ನು ನೋಡಿದ ಆ ಅಜ್ಜಮ್ಮ, “ಏ ಎಂಗ್ಸೆ ಪ್ರಂಗ್ನೆಂಟ್ ಇದ್ದಂಗ್ ಇದ್ಯ, ಇಂಗೆ ಬಿಗ್ಯಗಿರೋ ಡ್ರೆಸ್ಸಾ ಆಕಬರದು? ಯರ‍್ಯಾರ್ ಕಣ್ ಎಂಗರ‍್ತವೋ ಏನೋ, ಮೈ ತುಂಬಾ ಬಟ್ಟೆ ಆಕಂಡ್ ಓಡಾಡು” ಎಂದು ಅಧಿಕಾರಯುತವಾಗಿ ಹೆಂಡತಿಗೆ ಸಲಹೆ ನೀಡಿತು. ಆ ಅಜ್ಜಿಯ ಧ್ವನಿಯಲ್ಲಿ ಹೆಂಗರುಳಿನ ಕಾಳಜಿ ಹಾಗೂ ಢಾಳ ಅನುಭವದ ಅಧಿಕಾರಯುತ ಕಮ್ಯಾಂಡ್ ಇತ್ತು. ಅದನ್ನು ಅರ್ಥ ಮಾಡಿಕೊಂಡ ಹೆಂಡತಿ ನಗು ನಗುತ್ತಲೇ, “ಆಯ್ತು ಅಜ್ಜಿ” ಎಂದು ಆ ಅಜ್ಜಿಯ ಮುಖವನ್ನು ಗುರ್ತಿಸುತ್ತಾ, “ಅಜ್ಜಿ ನೀನು ಎಣ್ಣೆ ಮಾರ್ಕಂಡು ನಮ್ಮೂರ್ ತವುಕ್ದಳ್ಳಿಗ್ ಬರ್ತಿದ್ದಲ್ವಾ?”ಎಂದು ಅಜ್ಜಿಯ ಉತ್ತರಕ್ಕೆ ಕಾದಳು.

“ಹ್ಹೂಂ ಕಣೇ ಅಮ್ಮಯ್ಯ, ಯರ‍್ಮಗ್ಳು? ನೀನು ತವಕ್ದಳ್ಳೆಗೆ?”
“ಅಜ್ಜೆ ಅದೇ ಸೋಂಪುರುದ್ ರೋಡಗೈತಲ್ಲಾ ಕಂಭಣ್ಣುನ್ ಮಗ್ಳು ನಾನು ಎಂದಿತು”
“ಅಯ್ಯ ನಿಮ್ಮಮ್ನ ಅಂಜುನಪ್ಪುನ್ ಮೊಮ್ಮಗ್ಳಾ ನೀನು? ಗೊತ್ತೇ ಆಗ್ಲಿಲ್ವಲ್ಲೆ!”
ಹೀಗನ್ನುವಾಗ ಅಜ್ಜಿಯ ಮುಖದಲ್ಲಿ ಯಾವುದೋ ಜನ್ಮ ಜನ್ಮದ ಅನುಬಂಧ ಮತ್ತೆ ಬೆಸೆದ ಸಂತಸ ಕಾಣುತ್ತಿತ್ತು.

ಹೆಂಡತಿ, “ಹೌದಜ್ಜೆ, ನೀನು ಆವಗಾವಾಗ ನಮ್ಮನೆಗೆ ಬರ್ತಿದಿದ್ದು ನಂಗಿನ್ನೂ ನೆನ್ಪಿದೆ” ಎಂದಳು ಪರಿಚಯದವಳಂತೆ.
“ಅಮ್ಮಯ್ಯ, ನಿಮ್ ಮನೆಗೆ ಬಂದು ಎಷ್ಟೋ ಸಾರಿ ಉಂಡಿದ್ದೀನಿ, ಎಲೆ ಅಡ್ಕೆ ಆಕಂಡಿದ್ದೀನಿ, ಭಾಳ ಒಳ್ಳಿವ್ನು ಕಣೆ ನಿಮ್ ತಾತ, ಒಳ್ಳೆ ಆಳು ಬಿಮ್ಮಾಗಿದ್ದ, ನಿಮ್ ಮನೆ ಅನ್ನುದ್ ಋಣ ನನ್ಮೇಲೈತೆ” ಎಂದಿತು ಮುಸು ಮುಸು ನಗುತ್ತಾ ಅಜ್ಜಮ್ಮ. ಉಪಕಾರ ಮಾಡಿದವರಿಗೆ ಅಪಕಾರ ಮಾಡುವ ಜನರೇ ಹೆಚ್ಚಿರುವ ಇಂದಿನ ಕಾಲದಲ್ಲಿ ಅಜ್ಜಿ, ಯಾವಾಗಲೋ ತಿಂದಿರುವ ಒಂದಿಡಿ ಅನ್ನದ ಋಣವನ್ನು ತನ್ನ ಮೇಲೆ ಆರೋಹಿಸಿಕೊಂಡದನ್ನು ನೋಡಿ ಅಜ್ಜಿಯ ಮೇಲೆ ಗೌರವ ಹುಟ್ಟಿ ನಾನು ಮಾತನಾಡಿಸಿದೆ:

“ಅಜ್ಜಮ್ಮ ಇಷ್ಟು ವಯಸ್ಸಾಗಿದೆ, ಮನೇಲಿರೋದಲ್ವಾ? ಎಷ್ಟ್ ಜನ ಮಕ್ಳು?”
“ಮರ‍್ಜನ ಕಣಪ್ಪಿ, ಎಲ್ರೂ ಚನ್ನಾಗ್ ದುಡೀತಾರೆ. ನನ್ನೂ ಚೆನ್ನಾಗಿ ನೋಡ್ಕಂತರೆ”
“ಮತ್ತೆ ಮನೆಲೇ ಆರಾಮಾಗಿ ಇರೋದಲ್ವಾ ಅಜ್ಜಮ್ಮಾ?”
“ಹೇ ಹೇಳಪ್ಪಿ, ಇನ್ನೂ ಬಿಮ್ಮಾಗೆ ಇದ್ದೀನಿ, ಈಗ್ಲೇ ಇನ್ನೊಬ್ರು ಮ್ಯಾಲ್ ಬಿದ್ರೆ ಎಂಗೆ? ಅದರ‍್ಲಿ ನಿಮ್ದಾಯಾವೂರು, ಏನ್ ಕೆಲ್ಸ ಮಾಡ್ತಯಪ್ಪೀ”
“ಅಜ್ಜೀ ನಮ್ದು ಇಲ್ಲೇ ಜಡಗನಳ್ಳಿ, ನಾನು ಮೇಷ್ಟ್ರು ಕಣಜ್ಜಿ” ಎನ್ನುತ್ತಲೇ ಅಜ್ಜಮ್ಮ ಕ್ಷಣಕಾಲ ನನ್ನನ್ನೇ ದಿಟ್ಟಿಸುತ್ತಾ, “ಹೌದಾ ಸಾ? ನಿಮ್ಮೆದರ‍್ಗೆ ಏನೇನೋ ಮಾತಾಡ್ದೆ ಗೊತ್ತಿಲ್ದೆ, ತಪ್ ತಿಳ್ಕಬೇಡಿ” ಎನ್ನುವಾಗ, ಅಜ್ಜಿಯ ಧ್ವನಿಯಲ್ಲಿ, ಜಡ್ಜ್ ಎದುರಿಗೆ ಅಪರಾಧಿಯೊಬ್ಬ ಪಶ್ಚಾತ್ತಾಪದಿಂದ ತಪ್ಪನ್ನು ಒಪ್ಪಿಕೊಳ್ಳುವ ದೈನ್ಯತೆ ಕಂಡು ‘ನಾನ್ಯಾಕಾದರೂ ಅಜ್ಜಿಗೆ ಮೇಷ್ಟ್ರು ಅಂತ ಹೇಳಿದೇನೋ’ಅನ್ನಿಸಿಬಿಟ್ಟಿತು.

ಇಷ್ಟೂ ಅಲ್ಲದೇ, ‘ತಗಳಿ ಸಾ’ ಎಂದು ಎರಡು ಮೊಳಕೆ ಕಾಳು ಪೊಟ್ಟಣ ಕೊಟ್ಟು,ದುಡ್ಡು ಕೊಡಲು ಹೋದರೆ, “ಸಾ ನಿಮ್ಮನೆ ಋಣ ನನ್ಮೀಲಿದೆ” ಎಂದು ನಿರಾಕರಿಸಿತು. ಆದರೆ ನಾನೇ ಬಲವಂತದಿಂದ ದುಡ್ಡು ಕೊಟ್ಟು ಮನೆಗೆ ಹೊರಟೆ.

ನನಗಂತೂ ಆವತ್ತು ಇಳಿವಯಸ್ಸಿನ ಆ ಅಜ್ಜಿಯ ಸ್ವಾಭಿಮಾನಿ ನಡೆ, ಕೃತಜ್ಞತಾ ಭಾವ, ಶಿಕ್ಷಕರ ಬಗ್ಗೆ ಇಟ್ಟಿರುವ ಗೌರವ ನೆನೆದು, ಒಂದೊಳ್ಳೆ ಸಂತನ ಭೇಟಿ ಮಾಡಿದ ಅನುಭವ ನನಗಾಗಿತ್ತು. ಹಾಗೆಯೇ ಇಳಿ ವಯಸ್ಸಿನ ಆ ಅಜ್ಜಿಯ ವಯಸ್ಸಿನಂತೆ ಮೌಲ್ಯಗಳೂ ಇಳಿಮುಖವಾಗಿರುತ್ತಿರುವ ಈ ದಿನಗಳ ನೆನೆದು ಬೇಜಾರೂ ಆಗಿತ್ತು.

ಲಿಂಗರಾಜು ಕೆ ಮಧುಗಿರಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
3.5 2 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x