ಸ್ನೇಹಿತರೆ, ನಾನು ಪ್ರೌಢಶಾಲೆ ಓದುವಂಥ ಕಾಲದಲ್ಲಿ ನಮಗೆ ಕನ್ನಡ ಭಾಷೆಯನ್ನ ಕಲಿಸೋಕಿದ್ದ ಮಾಸ್ತರರು ಎಂ.ರಂಗಯ್ಯನವರು ಅರ್ಥಾತ್ ಎಂಆರ್ ಸರ್. ಎಂದಿನಂತೆ ಕನ್ನಡ ಪೀರಿಯಡ್ನಲ್ಲಿ ಮಾಡೋ ಪಾಠವೆಲ್ಲಾ ಮಾಡಿ ಮುಗಿಸಿ, ಆಚೆ ಹೋಗುವಾಗ, “ನಾನು ನಾಳೆ ರಗಳೆ ಮಾಡ್ತೀನಿ”, ಅಂದು ಕ್ಲಾಸಿಂದ ಆಚೆಗೆ ಹೊರಟುಬಿಟ್ರು. ನಾನು ಸರ್ ಹೇಳಿದ ಮಾತು ಕೇಳಿ ಗೊಂದಲದ ಗೂಡಾಗಿಬಿಟ್ಟು ನನ್ನ ಪಕ್ಕದಲ್ಲಿ ಕುಳಿತಿದ್ದ ಗೆಳತಿ ಕವಿತಳಿಗೆ,”ಲೇ ಏನೇ ಇದೂ? ಸರ್ ಏನ್ ರಗಳೆ ಮಾಡ್ತಾರೋ! ಮನೇಲಿ ಏನಾದ್ರೂ ರಗಳೆ ಮಾಡಿದಾಗ ನಮ್ಮಮ್ಮನ ಹತ್ರ ಸಖತ್ತಾಗಿ ಉಗುಸ್ಕೋತೀನಿ.ತಪ್ ಮಾಡ್ದಾಗ ನಮ್ಗೆಲ್ಲಾ ಕ್ಲಾಸ್ ತಗೊಳೋ ಸರ್ರೇ ರಗಳೆ ತೆಗೆದ್ರೆ ಅವ್ರಿಗೆ ಕ್ಲಾಸ್ ತಗೊಳೋರು ಯಾರಮ್ಮಾ ತಾಯಿ?“,ಅಂದೆ.ಅದಕ್ಕೆ ಸ್ವಲ್ಪ ಹೆಚ್ಗೇ ಇಂಗ್ಲೀಸು ಮಾತಾಡೋ ಅವಳು,”ಪ್ರಾಬಬ್ಲಿ ಹೆಡ್ ಮಾಸ್ಟರ್ ವಿಲ್ ಕಮ್ ಅಂಡ್ ಟೇಕ್ ದ ಕ್ಲಾಸ್ ಟು ಎಂಆರ್ ಸರ್”, ಅಂತ ಪರಿಹಾರ ಹೇಳಿದಳಾದರೂ, ನನ್ನ ತಲೇಲಿದ್ದ ಹುಳ ಹೋಗಲೇ ಇಲ್ಲ. ‘ಅಲ್ಲಾ….ಯಾರಾದ್ರೂ ಹೇಳಿ ಕೇಳಿ ಮೊದಲೇ ಇನ್ಫಾರ್ಮ್ ಮಾಡಿ, ರಗಳೆ ಮಾಡೋದುಂಟಾ? ನಾವು ಹುಡುಗರೇ ಎಷ್ಟೋ ವಾಸಿ. ನೋಡೋಣ ನಾಳೆ ಎಂಆರ್ ಸರ್ ಕತೆ ಹೆಂಗಿರುತ್ತೋ, ಅದ್ಯಾವ್ ವಿಷ್ಯಕ್ಕೆ ರಗಳೆ ತೆಗೀತಾರೋ….ಯಾರ್ಯಾರ ಹತ್ರ ಮಂಗಳಾರತಿ, ಸಹಸ್ರನಾಮ ಮಾಡಿಸಿಕೊಳ್ತಾರೋ”, ಅಂತ! ಶಾಲೆಗೆ ಬರೋಕೂ ಭಯ, ಇನ್ನೊಂದ್ ಕಡೆ ಸರ್ ಏನು ರಗಳೆ ತೆಗೆದಾರೋ ನೋಡೋಣಾ ಅನ್ನೋ ಕುತೂಹಲ! ಆದ್ರೂ ದಿನ ಬೆಳಗಾದ್ರೆ ಉಗಿದು ಉಪ್ಪೂಖಾರ ಹಾಕೋ ಮೇಷ್ಟ್ರನ್ನ ಯಾರಾದ್ರೂ ಬೈಯ್ಯೋದು, ಅವರ ಮುಖ ಸಪ್ಪೆ ಮಾಡ್ಕೊಂಡು ತಲೆ ತಗ್ಗಿಸೋದೂ ನೋಡೋಕೆ ಮಸ್ತಾಗಿರುತ್ತೆ! ಸ್ಕೂಲಿಗೆ ಹೋಗೋದೇ ಸೈ ಅಂತ ಗಟ್ಟಿ ನಿರ್ಧಾರ ಮಾಡಿಬಿಟ್ಟೆ.
ಸಂಜೆ ಐದಕ್ಕೆ ಢಣಢಣ ಗಂಟೆ ಬಾರಿಸಿತು! ಮನೆ ಕಡೆ ಹೊರಟಿದ್ದಾಯಿತು.ಲೈಟಾಗಿ ಸ್ನಾಕ್ಸ್ ಸೇವಿಸಿ, ಸ್ವಲ್ಪ ಹೊತ್ತು ಆಟವಾಡಿ, ದೀಪ ಹಚ್ಚೋ ಟೈಮಿಗೆ ಮನೆಯ ಹುಡುಗರೆಲ್ಲಾ ಓದೋಕೆ ಚಾಪೆ ತುಂಬಾ ಕೂತಿದ್ದಾಯಿತು.ಕನ್ನಡ ಪಾಠದಲ್ಲಿ ಆ ದಿನದ ಮನೆಕೆಲಸ ಮಾಡುವಾಗ ಮತ್ತೆ ರಂಗಣ್ಣ ಸರ್ ನಾಳೆ ಮಾಡುವ ರಗಳೆ ಜ್ಞಾಪಕಕ್ಕೆ ಬಂದು, ಅಲ್ಲೇ ಯಾವುದೋ ಕೆಲಸದ ಒತ್ತಡದಲ್ಲಿ ಓಡಾಡುತ್ತಿದ್ದ ನಮ್ಮಮ್ಮನನ್ನ,”ಅಮ್ಮಾ”, ಅಂದೆ. ಅವರು ಸಿಡುಕುತ್ತಲೇ,”ಏನೇ ನಿನ್ನ ರಗಳೇ?”, ಅಂದ್ರಾ….ಯುರೇಕಾ, ಯುರೇಕಾ….ಎಂದು ಒಳಗೊಳಗೇ ಕಿರುಚುತ್ತಾ,”ನನ್ ರಗಳೆ ಅಲ್ಲಮ್ಮಾ.ನಾಳೆ ಕನ್ನಡ ಸರ್ ರಗಳೆ ಮಾಡ್ತಾರಂತೆ”, ಅಂದೆ. ಅದಕ್ಕವರು,”ಹೋ….ದಿನಾ ನಿಮ್ಗಳ ರಗಳೆ ನೋಡೀ ನೋಡೀ ಅವ್ರಿಗೂ ರಗಳೆ ಮಾಡಬೇಕೂಂತ ಅನ್ನಿಸಿದೆಯೋ ಏನೋ! ಮಾಡ್ಲಿ ಮಾಡ್ಲಿ. ನಿಮ್ಗೂ ರಗಳೆ ಅಂದ್ರೆ ಗೊತ್ತಾಗ್ಬೇಕು!,” ಅಂದಳೇ ಹೊರತು, ಅಸಲಿ ರಗಳೆ ಅವಳಿಗೂ ನೆನಪು ಬಂತೋ, ಇಲ್ಲೋ …..ಅವಳು ಅವಳ ವಿದ್ಯಾರ್ಥಿ ದೆಸೆಯಲ್ಲಿ ರಗಳೆ ಕಲಿತಿದ್ದಳೋ ಇಲ್ಲವೋ ತಿಳೀಲಿಲ್ಲ.
ಸರಿ, ಮಾರನೆಯ ದಿನ ಕನ್ನಡ ಕ್ಲಾಸ್ ಬರೋದೇ ಎದುರು ನೋಡ್ತಿದ್ದೆ. ಎಂಆರ್ ಸರ್ ಬಂದ್ರು. “ಕನ್ನಡ ವ್ಯಾಕರಣ ಪ್ರಕಾರ….ರಗಳೆ”ಅಂತ ಕಪ್ಪು ಬೋರ್ಡಿನ ಮೇಲೆ ಬಿಳಿಯ ಸೀಮೆಸುಣ್ಣದಲ್ಲಿ ತಮ್ಮ ಗುಂಡಗಿನ ಅಕ್ಷರಗಳ ಮುತ್ತನ್ನ ಪೋಣಿಸಿದರು. ಅಬ್ಬಾ……ಆಗ ತಿಳೀತು ರಗಳೆ ಅಂದ್ರೆ ಅದೊಂದು ವ್ಯಾಕರಣದಲ್ಲಿರುವ
ಅಧ್ಯಾಯ ಅಂತ! ಸರ್ರು ರಗಳೆ ಮಾಡೋಕೆ ಸುರು ಅಚ್ಕೊಂಡ್ರು.ಲಘು, ಗುರು, ಮಾತ್ರೆ, ಎಷ್ಟು ರಗಳೆಗಳಿವೆ, ಅವಕ್ಕೆಲ್ಲಾ ಎಷ್ಟು ಮಾತ್ರೆ ಹಾಕ್ಬೇಕು,ಎಲ್ಲಿಗೆ ಗೀಟು ಎಳೀಬೇಕು, ಒಟ್ಟು ಕೂಡಿದಾಗ ಎಷ್ಟು ಅಕ್ಷರ ಇರ್ಬೇಕು, ಏ ಟೂ ಜ಼ೆಡ್ ಎಲ್ಲಾ ರೂಲ್ಸು ನೀರು ಕುಡಿದಂತೆ ಬಡಬಡಾಂತ ಹೇಳಿ,
ಉತ್ಸಾಹ ರಗಳೆ ಸುರು ಹಚ್ಕೊಂಡ್ರು. ಇಷ್ಟೆಲ್ಲಾ ಕೇಳೋ ಹೊತ್ಗೇ ನಮ್ ಉತ್ಸಾಹವೆಲ್ಲಾ ಝ….ರ್ ಅಂತ ಇಳಿದೋ….ಯ್ತು.ಇನ್ನು ಮಂದಾನಿಲ ರಗಳೆ ಈ ಮಂದಬುದ್ದಿಯ ಮಂಡೆಗೆ ಎಲ್ಲಿ ಹೋಗಬೇಕು ಹೇಳೀ?
ಕೊನೆಗೆ ಲಲಿತ ರಗಳೆನೂ ಆ ದಿನವೇ ಮುಗಿಸಿ ರಗಳೆಗಳ ವೆರೈಟಿಗೆ ಮಂಗಳ ಹಾಡಿದರು ರಂಗಣ್ಣ ಮೇಷ್ಟ್ರು!
ಕೊನೆಗೆ, ರಗಳೆಗಳ ಕವಿ ಹರಿಹರ ಅಂತ ಕೂಡಾ ಅಂದ್ರು ಮೇಷ್ಟ್ರು. ‘ಹರಿಹರಾ……., ಇದ್ಯಾಕಯ್ಯೂ ನಿಂಗೆ ಈ ರಗಳೆ ಬೇಕಾಯ್ತು? ಒಂದೊಂದು ಸಬ್ಜೆಕ್ಟೇ ನಮ್ ತಲೆ ತಿಂದು ಮೆದಳಿಗೆ ಕೈ ಹಾಕೋವಾಗ, ಕನ್ನಡಕ್ಕೆ ಗಣಿತ ಯಾಕ ಪ್ಪಾ ಸಿಂಕ್ ಮಾಡ್ದೇ?ಇದೆಲ್ಲ ನೋಡ್ತಾ ಇದ್ರೆ, ಇನ್ನೂ ಯಾವ್ಯಾವ ಸಬ್ಜೆಕ್ಟಿಗೆ ಯಾವ್ಯಾವ ಸಬ್ಜೆಕ್ಟ್ ಸೇರಿಸಿ, ಯಾವ್ಯಾವ ಹೊಸ ಸಬ್ಜೆಕ್ಟ್ ಓದಬೇಕಾಗುತ್ತೋ ಶಿವನೇ! ನಾವೇನು ತಪ್ಪು ಮಾಡಿದೀವೀಂತ ಬಡಪಾಯಿಗಳಾದ ನಮಗೀ ಶಿಕ್ಷೆಯೋ ನಾರಾಯಣಾ?“, ಅಂತ ಹರಿಹರರನ್ನ ಅಂಗಲಾಚಿದೆನಾದರೂ, ಹರನೂ ಕರಗಲಿಲ್ಲ.ಹರಿಯೂ ಕರುಣೆದೋರಲಿಲ್ಲ.ಹಾಗಿದ್ದಾಗ, ಈ ದೌರ್ಭಾಗ್ಯೆ ಪಾಮರಳಿಗೆ ಯಾರ ಕೃಪಾಕಟಾಕ್ಷವೂ ದೊರಕದೆ, ರಗಳೆ ಅರ್ಥವಾಗಲೇ ಇಲ್ಲ.ಪಾಠ ಮುಗಿಸಿದ ಸರ್ರು,ನಾಲ್ಕು ಸಾಲಿನ ಎರಡು ಸ್ಯಾಂಪಲ್ ಕವನಗಳ್ನ ಹೋಮ್ ವರ್ಕು ಕೊಟ್ಟು, ಇದಕ್ಕೆ ಮಾತ್ರೆ ಹಾಕಿ, ಗಣಗಳ್ನ ವಿಂಗಡಿಸಿ, ಯಾವ ರಗಳೆ ಅಂತ ಬರ್ಕೊಂಡು ಬನ್ನಿ ಅನ್ನೋ ಹೊತ್ಗೆ ಢಣ್ ಅಂತ ಗಂಟೆ ಬಾರಿಸಿತಾ, ಮೇಷ್ಟ್ರು ಎದ್ದೋದ್ರು. “ಏನೇ ಕವಿತಾ? ರಗಳೆ ಅರ್ಥವಾಯ್ತೇನೇ? ಹೋಮ್ ವರ್ಕ್ ಹೆಂಗೇ ಮಾಡೋದೂ?”, ಅಂತ ಪೆದ್ದುಪೆದ್ದಾಗಿ ಕಣ್ಬಿಟ್ಟೆ. ನನ್ನ ಗ್ರಹಚಾರಕ್ಕೆ, ನಮ್ಮ ಮನೆ ಮಕ್ಕಳಲ್ಲಿ ನಾನೇ ಹಿರಿಯವಳಾದರೆ, ಅವಳ ಅದೃಷ್ಟಕ್ಕೆ ಅವಳ ಮನೇಲಿ ಅವಳೇ ಕಿರಿಯವಳು! “ಹೇ ಪದ್ಮಜ(ನನ್ ಮತ್ತೊಂದ್ ಹೆಸ್ರು), ವಿಲ್ ಆಸ್ಕ್ ಮೈ ಸಿಸ್ಟರ್.ಶಿ ವಿಲ್ ಗೈಡ್ ಮಿ”, ಅಂತ ಕೂಲಾಗಿ ಹೇಳುವಾಗ, ನನ್ಗೆ ಅಕ್ಕನ ಭಾಗ್ಯ ಇಲ್ವಲ್ಲಾಂತ ಮೈಯ್ಯೆಲ್ಲಾ ಉರಿದೋಗಿತ್ತು!
“ಅಮ್ಮಾ, ಇದ್ಯಾಕೋ ಇದು ರಗಳೆ ಅರ್ಥವೇ ಆಗ್ತಿಲ್ಲ. ಸ್ವಲ್ಪ ಹೇಳ್ಕೊಡಮ್ಮಾ…..”, ಅಂತ ಸಂಜೆ ಪಾಠ ಓದಲು ಕೂತಾಗ ಅಮ್ಮನನ್ನ ಆರ್ತನಾದದಲ್ಲಿ ಬೇಡಿಕೊಂಡೆ.ಅಮ್ಮ,ಆ ದಿನ ಏನು ಪುಣ್ಯವೋ, ಒಳ್ಳೆ ಮೂಡಲ್ಲಿ ಪಕ್ಕದಲ್ಲಿ ಬಂದು ಕೂತಳು. ಪುಸ್ತಕದ ಮೇಲೆ ಕಣ್ಣಾಡಿಸಿದಳು. ಯಾಕೋ ಮುಖಭಾವವೇ ಬದಲಾಯಿತು. ಹುಬ್ಬು ಗಂಟಿಕ್ಕಿಕೊಂಡು.”ಏನ್ ರಗಳೆಯೇ? ಇದೇನಾ ನಿಮ್ ಮೇಷ್ಟ್ರು ಮಾಡಿದ ರಗಳೇ? ಈ ನಿಮ್ ಮೇಷ್ಟ್ರು ಮಾಡಿರೋ ರಗಳೆಗಿಂತ ನೀವ್ ಮಾಡೋ ರಗಳೆೇನೇ ಎಷ್ಟೋ ವಾಸಿ.”ಅಂದು ಪೆನ್ನನ್ನ ಪುಸ್ತಕದ ಮೇಲೆ ಕುಕ್ಕಿ, ಲೊಟಗುಟ್ಟಿದಳು. ಆದರೂ ನನ್ನ ಹ್ಯಾಪ್ ಮೋರೆ ನೋಡಿ,ಸಹಾಯಕ್ಕೆ ಕೂತಳು.
ಪುಸ್ತಕ ನೋಡಿ ಸಾಲುಗಳಿಗೆ ಮಾತ್ರೆ, ಗಣ ಅಂತ ಹಾಕತೊಡಗಿದಳಾದರೂ ಯಾಕೋ,ಅವು ಯಾಕೋ ರೂಲ್ಸಿಗೆ ತಾಳೆ ಆಗಲೇ ಇಲ್ಲ. ಸೋಲಪ್ಪಿಕೊಳ್ಳದೆ ಸಿಡಸಿಡಗುಟ್ಟುತ್ತಾ,”ಇದ್ಯಾಕೇ ಬೇಕಂತೆ ನಿಮ್ ಮೇಷ್ಟಿಗೆ ಈ ರಗಳೆರಾಮಾಯಣವೆಲ್ಲಾ?ಆವಯ್ಯ ಯಾರೋ ಕವನ ಬರೆದ್ರೆ ಅದ್ರಲ್ಲಿ ಎಷ್ಟ್ ಅಕ್ಷರ ಇದ್ಯೋ, ಇಲ್ವೋ ಆ ಲೆಕ್ಕಾಚಾರ ಕಟ್ಕೊಂಡು ನಿಮ್ ಮೇಷ್ಟ್ರಿಗೇನೂ? ಬೇರೆ ಕೆಲ್ಸಿಲ್ವಾ?ಅದೆಲ್ಲಾ ಹೆಂಗಾದ್ರೂ ಹಾಳಾಗ್ ಹೋಗ್ಲಿ, ಇದನ್ನ ಪಾಠ ಮಾಡಿ ತೆಪ್ಗಿರೋದು ಬಿಟ್ಟು, ಹೋಮ್ ವರ್ಕೂಂತ ಯಾಕ್ ಕೊಡ್ಬೇಕೂ? ನೀನಾದ್ರೂ ಪಾಠ ಮಾಡಿದ್ದು ಸರ್ಯಾಗಿ ಕೇಳ್ಕೊಂಡ್ ಬರೋದು ಬಿಟ್ಟು….ಒಟ್ನಲ್ಲಿ ನಿನ್ನ, ನಿಮ್ ಮೇಷ್ಟ್ರ ರಗಳೆಗೆ ಮಾತ್ರೆ, ಟಾನಿಕ್ಕೂ ಹಾಕೋ ಹೊತ್ಗೆ ನಂಗ್ ಚಳಿಜ್ವರ ಬರುತ್ತೆ”, ಅಂತ ಹಲ್ಲು ಕಚ್ಚಿ, ನನ್ನ ತಲೆ ಮೇಲೊಂದು ಮೊಟಕಿ, ತನ್ನ ಫ್ರಸ್ಟ್ರೇಷನ್ ಅನ್ನ ತೀರಿಸಿಕೊಂಡು, ಗೊಣಗಾಡುತ್ತಲೇ ಯಾವುದೋ ಅಕ್ಷರಕ್ಕೆ ಯಾವುದೋ ಮಾತ್ರೆ ಹಾಕಿ, ಯಾವುದೋ ರಗಳೆಗೆ ಯಾವುದೋ ಹೆಸರಿಟ್ಟು,’ಸಧ್ಯ ಗೆದ್ನಪ್ಪಾ ಅಂದ್ಕೋತಾ’ ತನ್ನ ಪಾಡಿಗೆ ತಾನು ಎದ್ದೋಗಿದ್ದಳು. ಹೆಂಗೋ, ಎಗರಾಡಿದಳೋ, ಹಾರಾಡಿದಳೋ, ನಮ್ಮಮ್ಮ ಉತ್ತರ ತಿಳಿಸಿದಳಲ್ಲಾ, ದಿಲ್ಖುಷ್ ಆಗಿ ಹೋದೆ. ನಾನು, ನಮ್ಮಮ್ಮ ತಾಯಿಯ ನುಡಿದಿದ್ದೇ ವೇದವಾಕ್ಯ ಅಂತ ನಂಬಿ, ಆಕೆ ಹೇಳಿದ್ದನ್ನೇ ಬರ್ಕೊಂಡು, ಕ್ಲಾಸಲ್ಲಿ ಹೋಮ್ ವರ್ಕು ಒಪ್ಪಿಸಿ, ಮೇಷ್ಟ್ರ ಕೈಲಿ,”ಪೆದ್ದ್ ಮುಂಡೇದು,ಕನ್ನಡ ನಾಡ್ನಲ್ಲಿ ಹುಟ್ಟಿ, ಕನ್ನಡದ ನೀರ್ ಕುಡ್ದು,ಕನ್ನಡದ್ ಅನ್ನ ತಿಂದು, ಕನ್ನಡ ಭಾಷೆಯ ವ್ಯಾಕರಣ ತಪ್ಪು ಮಾಡ್ತೀಯಾ. ನಿನಗೆ ಧಿಕ್ಕಾರವಿರಲಿ! ”, ಅಂತ ಸರಿಯಾಗಿ ಬೈಸಿಕೊಂಡು ರೂಲುದೊಣ್ಣೇಲಿ ಎರಡೇಟು ತಿಂದು, ಕನ್ನಡದಲ್ಲೇ ಬಳಬಳ ಕಣ್ಣೀರ್ನ ಸುರಿಸಿದ್ದೆ.
ಆಗ ನಿಧಾನವಾಗಿ ಯೋಚಿಸೋ ವಯಸ್ಸಲ್ಲ. ಹುಡುಗ ಬುದ್ದಿ. ಆಟ,ಪಾಟ,ಊಟ, ಓಟಗಳಲ್ಲಿ ರಗಳೆೇನ ಮರೆತೇಬಿಟ್ಟೆ. ಮೊನ್ನೆ ಆನ್ಲೈನ್ ಕ್ಲಾಸ್ ಮಾಡ್ತಾ ನನ್ನ ವಿದ್ಯಾರ್ಥಿಗೆ ರಗಳೆ ರೂಲ್ಸು ಹೇಳಿಕೊಡುವಾಗ ಇದ್ದಕ್ಕಿದ್ದಂತೆ, ಹರಿಹರ ಕವಿ ಈ ಕಾವ್ಯ ಪ್ರಾಕಾರಕ್ಕೆ ರಗಳೆ ಅಂತ ಯಾಕಿಟ್ಟಿರಬಹುದೂಂತ ಫ್ಲಾಶ್ ಆಯ್ತು. ಆದ್ರೂ ಉಗುರಿನಿಂದ ಆಗೋ ಕೆಲಸಕ್ಕೆ ಜನ ಕೊಡಲಿ ಏಕೆ ತಗೋತಾರೋ, ಜೀವನ ಯಾಕೆ ಕಾಂಪ್ಲಿಕೇಟ್ ಮಾಡ್ಕೋತಾರೋ ಗೊತ್ತಿಲ್ಲ ಕಣ್ರೀ. ಸರಳವಾಗಿ ಬರಕೊಂಡು ಹೋದ್ರೆ, ಅವರಿಗೂ ಸುಲಭ ನಮಗೂ ಸಲೀಸು!
ಅಲ್ಲಾರೀ, ಕವನ, ಕಾವ್ಯ ಅಂದ್ರೆ ಭಾವನೆಗಳ ಅಕ್ಷರ ರೂಪ ಅಲ್ವೇ? ಅದನ್ನೆಲ್ಲಾ ಲೆಕ್ಕಾಚಾರ ಹಾಕಿ ಬರೆಯೋದೂಂದ್ರೇ….! ಯಾಕೋಪ್ಪಾ, ನನಗರ್ಥವೂ ಆಗೋಲ್ಲ. ಒಪ್ಪಿಗೆಯೂ ಆಗ್ಲಿಲ್ಲ.ಇವತ್ತಿಗೂ ಈ ಲೆಕ್ಕಾಚಾರವಾಗಿ ಬರೆಯೋ ಸಾಹಸಕ್ಕೆ ನಾನು ಕೈ ಹಾಕ್ಲಿಲ್ಲ. ಮುಂದೇನೂ ಹಾಕೋಕೆ ಹೋಗಲ್ಲಪ್ಪಾ! ಅದೆಲ್ಲಾ ನನ್ನಂತೋರಿಗಲ್ಲ ಬಿಡಿ! ಸುಮ್ನೆ ವ್ಯರ್ಥ ಸಾಹಸ ಮಾಡೋಕೆ ಹೋಗ್ಬಾರ್ದು. ಆ ರಗಳೆ ನನಗೆ ಬೇಡವೇ ಬೇಡ.
ಆದ್ರೂ, ಏನೇ ಆಗ್ಲಿ, ಪದಪದವನ್ನೂ ಅಳೆದೂ ಸುರಿದೂ ಮಹಾಕಾವ್ಯಗಳ್ನ ರಗಳೆಯ ಪ್ರಾಕಾರದಲ್ಲಿ ರಚಿಸಿರೋ ಆ ಮಹಾನುಭಾವ ರಗಳೆಯ ಕವಿ ಹರಿಹರರಿಗೆ ಅಡ್ಬಿದ್ದೆ ಕಣ್ರೀ. ನಮಸ್ಕಾರಗಳು! ವಂದನೆಗಳು.
–ರೂಪ ಮಂಜುನಾಥ, ಹೊಳೆನರಸೀಪುರ