ಸಜ್ಜನರ ಸಹವಾಸ ಯಾವಾಗಲೂ ನಮ್ಮನ್ನ ಉಚ್ಚ ವಿಚಾರಗಳನ್ನು ಯೋಚನೆ ಮಾಡಲು ಪ್ರೇರೇಪಿಸುತ್ತವೆ. ಹಾಗೇ ಹೆಚ್ಚೆಚ್ಚು ಜ್ಞಾನ ಸಂಪಾದನೆಯ ಉಪಾಯಕ್ಕೆ ಹಚ್ಚುತ್ತವೆ ಎನ್ನುವುದು ಬಹಳ ಜನರ ಅನುಭವಕ್ಕೆ ಬಂದಿರುತ್ತದೆ. ಇದೇ ರೀತಿ, ಯಾವ ಜನ್ಮದ ಪುಣ್ಯವೋ ಎನುವಂತೆ ನನಗೂ ಹಲವಾರು ಸಜ್ಜನರು, ಸುಜ್ಞಾನಿಗಳು ಹಾಗೂ ಹಿತ ಕೋರುವವರು, ನನ್ನ ತಿಳುವಳಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾದ ಯುಕ್ತಿಗಳನ್ನು ತಿಳಿಸುವ ಗುರುಗಳ ಸ್ಥಾನದಲ್ಲಿರುವ ಸನ್ಮಿತ್ರರ ಪರಿಚಯ ಆಗಿದೆ. ಅದು ನನ್ನ ಸೌಭಾಗ್ಯವೇ ಸರಿ.
ನಮ್ಮದೇ ಊರಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಶ್ರೀ ಮಂಜುರಾಜ್ ಸರ್ ಕೂಡಾ ಇವರುಗಳಲ್ಲಿ ಒಬ್ಬರು. ಜೀವನದಲ್ಲಿ ಸಾಕಷ್ಟು ಸಂಘರ್ಷಗಳನ್ನು ಅನುಭವಿಸಿದ, ಮಾಗಿದ, ಬಾಗಿದ, ಸರಳ ಜೀವನ ಅವರದ್ದು. ಅವರು ಸರ್ವರಿಗೂ ಆದರ್ಶಪ್ರಾಯರೆಂದರೆ ತಪ್ಪಾಗಲಾರದು. ತಮ್ಮ ಕಾಲೇಜಿನ ದಿನಚರಿಯೂ ಅಲ್ಲದೆ, ನಿತ್ಯ ಒಂದೊಂದು ವಿಚಾರ ತೆಗೆದುಕೊಂಡು ಲೇಖನ ಮಾಲೆಗಳನ್ನು ಪೋಣಿಸಿ ಸಾಹಿತ್ಯ ಸರಸ್ವತಿಯ ಪಾದಪದ್ಮಗಳಿಗೆ ಅರ್ಪಿಸುವ ಅವರ ತಿಳಿವಳಿಕೆ, ಉತ್ಸಾಹ, ತಾಳ್ಮೆಗೆ ನಮೋನಮಃ. “ಅಮ್ಮ, ಸುಮ್ಮನೆ ಅದೂ ಇದೂ ಅಂತ ಲೇಖನಗಳ್ನ ಬರೀತಾ ಇರೋದು ಬಿಟ್ಟು, ಒಂದು ಪಿ ಎಚ್ ಡಿ ಮಾಡಿಕೊಂಡು ಬಿಡಿ. ನಿಮಗೂ ಒಂದು ಘನತೆ ಇರುತ್ತದೆ”, ಎಂದು ನನ್ನ ಮಗ ಎರಡು ವರ್ಷಗಳ ಹಿಂದೆ ಹೇಳಿದಾಗ, ಈ ವಿಚಾರವಾಗಿ ಸರ್ ಕೂಡೆ ಮಾತನಾಡಿದ್ದೆ. ಅವರು ತತ್ಕ್ಷಣವೆ, ”ಮೇಡಮ್, ದಯಮಾಡಿ ಹೇಗೆ ಬರೀತಾ ಇದೀರೋ ಹಾಗೇ ಮುಂದುವರೆಸಿ. ಪಾಂಡಿತ್ಯ ಹೆಚ್ಚಾದಷ್ಟೂ, ಪ್ರೌಡಿಮೆಯ ಸಾಹಿತ್ಯ ರಚಿಸುವತ್ತ ಮನಸ್ಸು ಯೋಚಿಸುತ್ತದೆ. ಬರವಣಿಗೆ ಕಬ್ಬಿಣದ ಕಡಲೆಯಾಗಬಾರದು. ಎಲ್ಲರಿಗೂ ಸುಲಲಿತವಾಗಿ ಓದಿಸಿಕೊಂಡು ಹೋಗುವಂತಿರಬೇಕು. ಅದು ನಿಮ್ಮ ಬರಹಗಳಲ್ಲಿದೆ. ಇಂದಿನ ದಿನಗಳಲ್ಲಿ ಬಹಳ ಜನರಿಗೆ ಮುಟ್ಟಲು ಸರಳ ಭಾಷೆಯೇ ಸೂಕ್ತ. ನೀವು ಸರಳವಾಗಿಯೇ, ನಿಮ್ಮದೇ ಭಾಷೆಯಲ್ಲಿ ಯಾವ ಅಲಂಕಾರವೂ ಮಾಡದೆ, ಸಹಜವಾಗಿ ಬರೆಯಿರಿ”, ಎಂದಿದ್ದರು. ನನಗೂ ಅದು ನಿಜವೆನಿಸಿತು.
ಅಂದಿನಿಂದಲೂ ಇಂದಿನವರೆಗೂ ನಾನು ಏನೇ ಬರೆದರೂ ತುಂಬು ಹೃದಯದಿಂದ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಈಗ ನಾಲ್ಕೈದು ದಿನಗಳ ಹಿಂದೆ, ಸೌದಿ ಅರೆಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ಜಿಪಿಎಸ್ ಸಿಗ್ನಲ್ ಸಿಗದೆ, ಅಲೆದು ಸುಸ್ತಾಗಿ ನಿರ್ಜಲೀಕರಣದಿಂದ ತೆಲಂಗಾಣದ ಒಬ್ಬ ವ್ಯಕ್ತಿ ಹಾಗೂ ಆತನ ಸಹಚರ ಸೂಡಾನ್ ನವನೊಬ್ಬನು ಮೃತಪಟ್ಟ ಘಟನೆಯ ವಿಷಯವಾಗಿ ವೃತ್ತಪತ್ರಿಕೆಯಲ್ಲಿ ಪ್ರಕಟವಾದ ವಿಷಯವನ್ನು ನನಗೆ ವಾಟ್ಸಪ್ ನಲ್ಲಿ ಕಳಿಸಿದ ಮಂಜು ಸರ್, ”ನಿಮ್ಮೊಂದು ಬರಹಕ್ಕೆ ಈ ಲೇಖನ ನಿಮಿತ್ತವಾಗಲಿ”, ಅಂತ ಸಂದೇಶಿಸಿದ್ದರು. ಹೌದು ಪಾಪ, ಆ ಮನುಷ್ಯ ಅದೇನು ಕಾರಣಕ್ಕೆ ಆ ಮರುಭೂಮಿಗೆ ಹೋದನೋ ಏನೋ, ಕೆಟ್ಟ ಹವಾಮಾನ ಪರಿಸ್ಥಿತಿಗಳಿಂದಾಗಿ, ಅಗತ್ಯ ವ್ಯವಸ್ಥಿಗಳ ಕೊರತೆಯಿಂದಾಗಿ, ಬದುಕುಳಿಯಲಾಗದೆ, ತನ್ನ ಬಳಿ ಇದ್ದ ಆಹಾರ, ನೀರು ಮುಗಿದ ಮೇಲೆ, ಮುಂದಿನ ಮಾರ್ಗ ಕಾಣಿಸದೆ, ಹಸಿವು, ನಿತ್ರಾಣಗಳಿಂದ, ಆ ಮರುಭೂಮಿಯಲ್ಲೇ ಸಿಕ್ಕಿಕೊಂಡು ಕೊನೆಯುಸಿರೆಳೆದಿದ್ದರು. ಇಂಥ ವಿಷಾದಕರ ವಿಷಯಕ್ಕೆ ಇನ್ನೇನು ಲೇಖನ ಬರೆಯಲೀ? ಸಾಮಾನ್ಯವಾಗಿ ಲಲಿತ ಪ್ರಬಂಧಗಳನ್ನೇ ಬರೆಯುವ ನನಗೆ, ಈ ವಿಚಾರದಲ್ಲಿ ಏನು ಬರೆಯಲು ಸಾಧ್ಯ ?ಎಂದು ಸುಮಾರು ಬಾರಿ ಯೋಚಿಸಿವ ಹೊತ್ತಿಗೆ, ಥಟ್ ಅಂತ ನೆನಪಿಗೆ ಬಂದಿದ್ದು ಅಧ್ಯಾತ್ಮ!
ನಿಜವಲ್ಲವೇ, ನಮ್ಮ ಈ ಲೌಕಿಕ ದೇಹದ ಪ್ರಯಾಣದಲ್ಲಿ, ಈ ಜನ್ಮವೆಂಬೊ ಪ್ರಯಾಣದ ಪೂರೈಕೆಗೆ ಬೇಕಾಗುವಷ್ಟು ಪುಣ್ಯಕರ್ಮಗಳೆಂಬೊ ಆಹಾರದ ಗಂಟು ಸಂಪಾದಿಸಿಟ್ಟುಕೊಂಡಿರಬೇಕು. ಹಾಗೇ ಭಗವಂತನ ಜೊತೆಗೆ ಜಿಪಿಎಸ್ ಉಪಕರಣದಂತೆ ಶಾಶ್ವತವಾದ ಸಂಪರ್ಕದಲ್ಲಿರಬೇಕು. ಭಗವಂತನ ಸಂದೇಶಗಳು ಯಾವಾಗಲೂ ನಮ್ಮೊಳಗೆ ರಿಂಗಣಿಸುತ್ತಿರುತ್ತದೆ. ಅದನ್ನು ಸ್ವೀಕರಿಸುವ ಶಕ್ತಿ ಭಕ್ತಿ, ಅದನ್ನು ಅನುಷ್ಟಾನಕ್ಕೆ ತರುವ ಸ್ಪೂರ್ತಿ ನಮಗಿರಬೇಕು. ದಾರಿ ತಪ್ಪಿದಾಗ ಅಥವಾ ಸಂಕಷ್ಟದಲ್ಲಿ ಸಿಲುಕಿದಾಗ ನಮ್ಮ ಒಳಗಿರುವ ಪರಮಾತ್ಮನ ದನಿಯನ್ನು ಆಲಿಸಿದಾಗ, ಆ ದನಿ ನಮ್ಮ ಮುಂದಿನ ಪಯಣಕ್ಕೆ ಮಾರ್ಗದರ್ಶನದ ಹಾದಿ ತೋರುತ್ತದೆ. ಅದೇನಾದರೂ ನಮ್ಮಲ್ಲಿ ಸತ್ಕರ್ಮಗಳ ಗಂಟು ಕರಗಿ ಹೋದರೆ, ಜೊತೆಗೆ ಗೀತೆಯಲ್ಲಿ ಶ್ರೀ ಕೃಷ್ಣ ಭಗವಂತನು, ”ನಾನು ನಿಮ್ಮಲ್ಲೇ ಇದ್ದೇನೆ. ನಿಮ್ಮ ದಾರಿ ತಪ್ಪಿದಾಗ, ನಾನು ನಿಮ್ಮನ್ನು ಎಚ್ಚರಿಸುತ್ತೇನೆ”, ಎಂಬ ವಾಣಿಯನ್ನೂ ನಾವು ಸಮರ್ಥವಾಗಿ ಬಳಸಿಕೊಳ್ಳಲು ಸೋತೆವಾದರೆ, ನಾವಿರುವ ಈ ಭವಬಂಧನವೆಂಬೊ ಮರಳುಗಾಡಿನ ನಡುವಿನಲ್ಲಿ ಸಿಕ್ಕಿಕೊಂಡು, ದಡ ಸೇರುವ ಯಾವ ಮಾರ್ಗವೂ ಇಲ್ಲದೆ, ನರಳೀ ನರಳೀ ಜೀವ ತೊರೆಯಬೇಕಾಗುತ್ತದೆ. ಆದರೂ ಆ ಭಗವಂತನು ಕರುಣಾಮಯಿ. ಕಲಿಯುಗದ ಜನರಿಗೆ ಆತ ಬಹಳ ಉದಾರಿಯಾಗಿಯೇ ಇದ್ದಾನೆ. ಅವನು ಸಂತೋಷದಿಂದ ನಮ್ಮ ಜೊತೆಗೆ ಸಂಪರ್ಕದಲ್ಲಿದ್ದು ನಮ್ಮ ಕೈ ಹಿಡಿಯಬೇಕಾದರೆ, ಹಿಂದೆ ಋಷಿ ಮುನಿಗಳು ಮಾಡುತ್ತಿದ್ದಂಥ ಕಠಿಣ ವ್ರತಾಚರಣೆಗಳಾಗಲಿ, ತಪನಿಷ್ಠೆಗಳಾಗಲಿ ಆತ ಇಂದಿನವರಿಂದ ಬಯಸುತ್ತಿಲ್ಲ. “ಕಲಿಯುಗದಲಿ ಹರಿನಾಮವ ನೆನೆದರೆ, ಕುಲಕೋಟಿಗಳು ಉದ್ದರಿಸುವವೂ”, ಅನ್ನುವಂತೆ, ಕಲಿಯುಗದ ಜನರಿಗೆ ಆತ ಹೇಳಿರುವುದೇ ಇಷ್ಟು. ಮಾನವೀಯತೆಯಲ್ಲಿ ಬದುಕಿರಿ ಹಾಗೇ ನನ್ನ ನಾಮಸ್ಮರಣೆ ಮಾಡಿರಿ, ಎನ್ನುವುದನ್ನು ಮಾತ್ರ. ಆದರೆ, ನಮಗೆ ಅಷ್ಟು ಸರಳವಾಗಿ ಜೀವನ ನಡೆಸುವುದೂ ಕೂಡಾ ಕಡುಕಷ್ಟವಾಗಿದೆ.
ಜಿಪಿಎಸ್ ವಾಣಿಯನ್ನು ಅನುಸರಿಸದೆ ಹೋದಾಗ, ಶ್ರೀ ಶಂಕರ ಸ್ವರೂಪಿಗಳಾದ ಶಂಕರಾಚಾರ್ಯರು ತಿಳಿಸಿದಂತೆ, ನಾವು ಪ್ರತಿಯೊಬ್ಬರೂ ನಮ್ಮ ಕರ್ಮಾನುಸಾರ ನಮ್ಮ ಬುತ್ತಿಗಂಟುಗಳನ್ನು ಕಟ್ಟಿಕೊಂಡೇ ಈ ಇಹಲೋಕದ ಯಾತ್ರೆಯನ್ನ ಪ್ರಾರಂಭಿಸಿರುತ್ತೇವೆ. ಬುತ್ತಿಯನ್ನು ವಿವೇಕದಿಂದ ಸಮಯಕ್ಕಾಗುವಷ್ಟು ಉಪಯೋಗಿಸಿಕೊಳ್ಳುವುದಾಗಲಿ, ಸದಾ ದೇವರ ಜಪವೆನ್ನುವ ಜಿಪಿಎಸ್ ನ ಸಹಾಯದಿಂದ, ಅವನ ಲೋಕ ಸೇರುವುದಾಗಲೀ, ನಮ್ಮ ಕೈಯಲ್ಲಿಯೇ ಇರುವುದು ತಾನೇ? ಎಲ್ಲರಿಗೂ ತಿಳಿದಿರುವಂತೆ, ಪುನರಪಿ ಜನನಮ್ ಪುನರಪಿ ಮರಣಮ್ ಎಂದು, ಇದೇ ಮರಳುಗಾಡಿನಲ್ಲಿ ಮತ್ತೇ ಮತ್ತೇ ಪ್ರಯಾಣಿಸಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ ತಾನೇ? ಹಾಗಿದ್ದಾಗ, ಪ್ರತೀ ಪ್ರಯಾಣಕ್ಕೂ ನಮ್ಮ ಸತ್ಕರ್ಮಗಳ ಗಂಟನ್ನು ಹೆಚ್ಚಿಕೊಂಡು, ಹೆಚ್ಚು ಅಪ್ಡೇಟಾಗಿರೋ ದೇಹವೆಂಬ ಗಾಡಿಯಲ್ಲಿ ಬಂದರೆ, ನಮ್ಮ ಪ್ರಯಾಣವೂ ಸರಾಗ, ಹಾಗೂ ಶುಭಕರ! ಜಿಪಿಎಸ್ ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಮಾಡುವಂತೆ, ಭಗವಂತನ ಸಂದೇಶವು ನಮ್ಮ ಕಷ್ಟಕಾಲದಲ್ಲಿ ಬೆಳಕಾಗುವುದಷ್ಟೇ ಅಲ್ಲದೆ, ಸುರಕ್ಷತೆಯ ಹಾದಿಗೆ ಕರೆದೊಯ್ಯುವ ಅಭಯ ಕರ ಜಿಪಿಎಸ್ ಅಲ್ಲವೇ?ಅದನ್ನು ಪಾಲಿಸಿ ಸುರಕ್ಷಿತವಾಗಿ ದಡ ಮುಟ್ಟುವುದು ಕ್ಷೇಮವೋ ಇಲ್ಲಾ, ಇದೇ ಕೆಸರಿನಲ್ಲಿ ಸಿಕ್ಕಿ ಕೊಸರಾಡುವುದೊಳಿತೋ ಯೋಚಿಸಬೇಕಾದ ವಿಷಯವಲ್ಲವೇ ಆತ್ಮೀಯರೇ?
–ರೂಪ ಮಂಜುನಾಥ, ಹೊಳೆನರಸೀಪುರ.