ಪುಸ್ತಕ ಮೇಳ: ಕೋಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ: ಅರಣ್ಯಕೃಷ್ಣ

ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್

ಈ ಜ್ಞಾನದ ವನದಲ್ಲಿ

ಪ್ರತಿ ಮರವೂ ಗಂಭೀರವಾಗಿ ನಿಂತು

‘ಜ್ಞಾನಫಲಗಳನ್ನು ಕೊಂಡೊಯ್ಯಿರಿ’ ಎಂದು ಕರೆಯುತ್ತಿದೆ.

ಪಥಿಕನು ಯಾವ ಫಲವನ್ನು ಮುಟ್ಟಿದರೂ

ಒಂದು ದಿವ್ಯ ಉಪದೇಶದ ಧ್ವನಿ ಆಲಿಸುತ್ತದೆ.

ಹೌದು, ಪ್ರತಿಯೊಂದು ಪುಸ್ತಕವೂ ಒಂದು ಜ್ಞಾನಫಲ!

ಆ ಫಲವನ್ನು ಸವಿದಾಗಲೇ ತಾನೇ

ಅರಿವಿನ ಕುಡಿಗಳು ಅರಳಿ, ಆಸೆಗಳು ಚಿಗುರಿ

ಮನುಷ್ಯ ತನ್ನ ಅಸ್ತಿತ್ವದ ಮೌಲ್ಯವನ್ನರಿಯುವುದು;

ನಡೆದು ಬಂದ ಜಗತ್ತಿನ ದಾರಿಗಳೆಲ್ಲ

ನಯನಗಳ ಮುಂದೆ ಅನಾವರಣಗೊಳ್ಳುವುದು.

ವಿಕಾಸಪೂರ್ವ ಆದಿಮಾನವನ ಭಾವ ವೈಶಿಷ್ಟ್ಯದಿಂದ

ಚರಿತ್ರೆಯ ಸಂಧ್ಯಾಕಾಲದ ರಕ್ತಪಾತಗಳವರೆಗೆ,

ಯುದ್ಧೋನ್ಮುಖ ಮಾನವನ ಸಂಘರ್ಷ,

ಭಯೋತ್ಪಾತದ ಬೀಭತ್ಸಗಳು;

ಅಂಬರದ ಗರ್ಭ ಸೀಳಿ ಮಂಗಳನ ಅಂಗಳದಲ್ಲಿ

ಹೆಜ್ಜೆ ಗುರುತು ಮೂಡಿಸಿದ ಕ್ಷಣದವರೆಗೆ —

ನನ್ನ ಪೂರ್ವಜರಿಂದ ನನ್ನವರೆಗೆ ನಡೆದ

ಈ ನಿಗೂಢ ಪಯಣದ ಮರ್ಮವೆಲ್ಲ

ಪುಸ್ತಕವಾಗಿ ಇಂದು ನನ್ನ ಅಂಜಲಿಯಲ್ಲಿ ತುಂಬಿದೆ.

ಬಹುಶಃ ಮನುಷ್ಯ ತಾನು ಕಳೆದುಕೊಂಡ ಆತ್ಮಗಳನ್ನು

ಈ ಪುಸ್ತಕಗಳು ಆಯ್ದುಕೊಂಡು, ಅಪ್ಪಿ ಭದ್ರಪಡಿಸಿವೆಯೇನೋ!

ಅದಕ್ಕೇ ಪುಸ್ತಕ ಇಂದಿಗೂ ಮನುಷ್ಯನ ವಾಸನೆ ಬೀರುತ್ತಿದೆ.

ಪ್ರೀತಿಸಿದ್ದಕ್ಕಾಗಿ, ದ್ವೇಷಿಸಿದ್ದಕ್ಕಾಗಿ ಹುಣ್ಣಾದ ಬದುಕುಗಳು;

ಕರಗಿ ನೀರಾಗಿ, ಕಣ್ಣೀರಾಗಿ ಆವಿಯಾದ ಜೀವಾತ್ಮಗಳು;

ಜಗತ್ತಿನೊಂದಿಗೆ ಜಗಳವಾಡಿದ ಅದೆಷ್ಟೋ ಹೃದಯಗಳು —

ಎಲ್ಲವೂ ಸೇರುವ ಏಕೈಕ ಆಪ್ತ ವೈದ್ಯಶಾಲೆ ಈ ಪುಸ್ತಕ.

ಗಾಯಗೊಂಡ ಎದೆಗಳಿಗೆ, ಚದರಿದ ಮನಸುಗಳಿಗೆ

ಒಂದು ಶಾಂತ ಮಂತ್ರವೇ ಈ ಪುಸ್ತಕ.

ಹೊಸ ಪುಸ್ತಕವನ್ನು ತೆರೆದಾಗ

ಹಸುಗೂಸಿನ ಕೆನ್ನೆಯ ಸುಗಂಧವಿರಬಹುದು;

ಹಳೆಯ ಪುಸ್ತಕವ ಮುಟ್ಟಿದಾಗ —

ಹುಟ್ಟಿದ ಹಬ್ಬದಂದು ಸೀಗೆಕಾಯಿ ರಸದಿಂದ ತಲೆಸ್ನಾನ ಮಾಡಿಸುತ್ತಾ

ಅಮ್ಮ ಹಾಡುತ್ತಿದ್ದ ಹಾಡಿನ ಆ ಕರುಳಿನ ತಂಪು ತಗುಲಬಹುದು,

ಅಪ್ಪನ ಕಿರುಬೆರಳು ಹಿಡಿದ ಧೈರ್ಯವು ಮರಳಬಹುದು.

ಪುಸ್ತಕ ಕುಸಿದ ಕನಸುಗಳ ಬಿಕ್ಕಳಿಕೆಯನ್ನು ಮಾತ್ರವಲ್ಲ,

ಬಾನೆತ್ತರಕ್ಕೆ ಎದ್ದ ಅಲೆಗಳ ಆರ್ಭಟವನ್ನೂ ಮೊಳಗಿಸುತ್ತದೆ.

ಕತ್ತಿಯ ತುದಿಯ ರಕ್ತದ ಹನಿಗಳನ್ನಷ್ಟೇ ಅಲ್ಲ,

ನಂಬಿಕೆಯಿಂದ ಅರಳುವ ಕಾಮನಬಿಲ್ಲನ್ನೂ ಸ್ಪರ್ಶಿಸುತ್ತದೆ.

ನನ್ನನ್ನು ನಾನೇ ಕಳೆದುಕೊಂಡಾಗಲೆಲ್ಲ

ಈ ಪುಸ್ತಕವೇ ನನ್ನನ್ನು ಹುಡುಕಿ ತಂದು ನನಗೆ ನೀಡಿತು.

ಮನುಷ್ಯನ ಮೇಲೆ ಮುನಿಸು ಮೂಡಿದಾಗಲೆಲ್ಲ

ಅದೇ ಪುಸ್ತಕವು ಮನುಷ್ಯನೊಡನೆ ಸಂಧಿಯನ್ನು ಮಾಡಿಸಿತು.

ಅಗೋ, ಆ ಪುಸ್ತಕಗಳ ಗೂಡಿನೊಳಗೆ ಹೋಗಿ ಬರುತ್ತೇನೆ —

ಕಳೆದುಹೋದ ನನ್ನನ್ನು ನಾನೇ ಮರಳಿ ಕಂಡುಕೊಳ್ಳಬೇಕು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x