ಬಡವರ ನಿರ್ಮೂಲನೆಯೋ, ಬಡತನದ ನಿರ್ಮೂಲನೆಯೋ !?: ಆಶಿಕ್ ಮುಲ್ಕಿ


(ಬಡವರು ಬಡವರಾಗಿಯೇ ಇರೋವುದು ಯಾರತಪ್ಪು ? ಬಡವರನ್ನು ಬಡವರೆಂದು ಕರೆದು ತುಳಿತಕ್ಕೊಳಪಡಿಸಿರೋವುದು ಸರ್ಕಾರವೇ ಎಂದರೆ ತಪ್ಪಾಗಲಾರದು. ಬಡತನಕ್ಕೆ ಕೇವಲ ಸರ್ಕಾರವಷ್ಟೆ ಹೊಣೆಯಲ್ಲ. ದಿನದಿಂದ ದಿನಕ್ಕೆ ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತಿರುವ ಎಂ.ಎನ್.ಸಿ ಕಂಪೆನಿಗಳೂ ಕೂಡ ಇದಕ್ಕೆ ಕುಮ್ಮಕ್ಕು ನೀಡಿತ್ತಿವೆ.) 

ಹೌದು! ಇತ್ತೀಚಿನ ಪರಿಸ್ಥಿತಿ ನೋಡುವಾಗ ಇಂತಹಾ ಒಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ದಿನ ನಿತ್ಯ ಒಂದೊತ್ತು ಊಟ ಇಲ್ಲದೆ ಕಣ್ಣೀರಿಟ್ಟು ಜೀವನ ‘ಕಳೆಯುವ’ ಅದೆಷ್ಟೋ ಜನರು ನಮ್ಮ ಮುಂದೆ ಇದ್ದಾರೆ. ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲಾ. ಆದರೆ ಅದರ ಕೊರತೆಯನ್ನು ಸರ್ಕಾರವಾದರು ಸರಿದೂಗಿಸ ಬೇಕಿತ್ತು ಅಲ್ವಾ, ಆದರೆ ಅದರಲ್ಲೂ ಸರ್ಕಾರ ವಿಫಲವಾಗಿದೆ. ಡಿಜಿಟಲ್ ಇಂಡಿಯಾದಂತಹ ಯೋಜನೆಯನ್ನು ಕೋಟಿಗಟ್ಟಲೆ ಹಣ ವ್ಯಯ ಮಾಡಿ ಜಾರಿಗೊಳಿಸಿದ್ದು ಬಡವರ ಮುಂದೆ ಯಮನಾಗಿ ನಿಂತಿದೆ. 

ಯಾರು ಬಡವರು, ಯಾರು ಬಡವರಲ್ಲ ಎಂದು ತಿಳಿದುಕೊಳ್ಳಲು ಸರ್ಕಾರ ಕೆಲವೊಂದು ಸಮಿತಿಗಳನ್ನು ರೂಪಿಸಿದೆ. ಹೀಗಾದರು ಬಡವರ ಸ್ಥಿತಿಗತಿಗಳನ್ನು ಅರಿಯಲು ಮುಂದಾಗಿದೆ ಎಂದು ಸಮಾಧನ ಪಟ್ಟರೆ ! ರಚಿಸಲಾದ ಈ ಸಮಿತಿಗಳು ನೀಡಿದ ವರದಿ ಜನರನ್ನು ಹಾಲಿಗಾಗಿ ಬಾಯಿಬಿಟ್ಟ ಬೆಕ್ಕಿನ ಹಾಗೆ ಮಾಡಿದೆ. ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರಾದ ರಂಗರಾಜನ್ ನೇತೃತ್ವದ ಸಮಿತಿ 2012 ರಲ್ಲಿ ನೀಡಿದ ವರದಿ ಪ್ರಕಾರ ಸರಾಸರಿ ಲೆಕ್ಕ ಹಿಡಿದರೆ ಮೂವರಲ್ಲಿ ಒಬ್ಬ ಭಾರತೀಯ ಬಡವ ಎಂದು, ಮತ್ತು  ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 32 ರೂಪಾಯಿ ವೆಚ್ಚ ಮಾಡಲು ಶಕ್ತಿ ಇರುವವರು ಬಡವರಲ್ಲ, ನಗರ ಪ್ರದೇಶಗಳಲ್ಲಿ 46 ರೂಪಾಯಿ ವೆಚ್ಚ ಮಾಡಲು ಶಕ್ತಿ ಇರುವವರು ಬಡವರಲ್ಲ ಎಂದು ವರದಿ ನೀಡಿತು. ಆದರೆ ಪ್ರಖ್ಯಾತ ಅರ್ಥಶಾಸ್ತ್ರಜ್ಞನಾದ ತೆಂಡುಲ್ಕರ್ ಸಮಿತಿಯ ವರದಿ ಇನ್ನಷ್ಟೂ ಕಠೋರವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ 21 ರೂಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟ ಹಾಗೆ ಖರ್ಚು ಮಾಡಲು ಸಾಧ್ಯವಿರುವವರು ಬಡವರಲ್ಲ ಮತ್ತು 33 ರೂಪಾಯಿ ಮತ್ತು ಅದಕ್ಕಿಂತ ಜಾಸ್ತಿಯಾಗಿ ವ್ಯಯ ಮಾಡಲು ಶಕ್ತಿ ಇರುವವರು ಬಡವರಲ್ಲ ಎಂದು ವರದಿ ಸಲ್ಲಿಸಿತು. ಸಾಮಾನ್ಯವಾಗಿ ಒಂದೊತ್ತು ಊಟಕ್ಕೆ ಸಾಲದ ಈ ಮೊತ್ತವನ್ನು ಆಧರಿಸಿ ನೀವು ಬಡವರು, ನೀವು ಬಡವರಲ್ಲ ಎಂದು ಸರ್ಕಾರ ಹೇಳಿರುವದು ಯಾವ ಸೀಮೆಯ ನ್ಯಾಯ ಎಂದು ಗೊತ್ತಾಗುತ್ತಿಲ್ಲಾ.

ಬಡವರಿಗೆ ಸಲ್ಲ ಬೇಕಾದ ನೆರವು ಮತ್ತು ಸವಲತ್ತುಗಳು ಅವರಿಗೆ ಮಾತ್ರ ಸಲ್ಲ ಬೇಕು ಹೊರತು ಅಪಾತ್ರರಿಗಲ್ಲ.  ಆಗ ಈ ಸಮಸ್ಯೆ ಪರಿಹಾರದ ಪ್ರಯತ್ನಗಳಿಗೆ ಇನ್ನಷ್ಟು ಶಕ್ತಿ ಬಂದೀತು. ಇದು ಕೇವಲ ಸ್ಥಳೀಯವಾದರೆ. ಇನ್ನೂ ಜಾಗತಿಕ ಮಟ್ಟದಲ್ಲಿ ಬಡತನ ಎಂದರೇನು ಎಂದು ಕೇಳೀದರೆ ವಿಶ್ವಬ್ಯಾಂಕ್‍ನ ವ್ಯಾಖ್ಯಾನ ಕಣ್ಮುಂದೆ ಬರುತ್ತದೆ. ಇದರ ಪ್ರಕಾರ ದಿನಕ್ಕೆ ಒಂದು ಡಾಲರ್ ಗಿಂತ ಕಡಿಮೆ ಖರ್ಚು ಮಾಡಿದರೆ ಆತ ಬಡವ ಎಂದು ಹೇಳುತ್ತದೆ. 

ಬಡವರು ಬಡವರಾಗಿಯೇ ಇರೋವುದು ಯಾರತಪ್ಪು ? ಬಡವರನ್ನು ಬಡವರೆಂದು ಕರೆದು ತುಳಿತಕ್ಕೊಳಪಡಿಸಿರೋವುದು ಸರ್ಕಾರವೇ ಎಂದರೆ ತಪ್ಪಾಗಲಾರದು. ಒಂದು ದಿನಕ್ಕೆ 32 ರೂಪಾಯಿಗಿಂತ ಕೆಳಗೆ ಜೀವನ ಮಾಡುವಂತವರು ಬಡವರು ಎಂದು ಕೂಗಿ ನಾಮಕರಣ ಮಾಡಿದ್ದು ನಮ್ಮ ಸರ್ಕಾರವಲ್ಲವೇ !. ಈ ಸರ್ಕಾರವು ಬಡವರ ಕಣ್ಣೀರಿಗೆ  ಒರಸು ಬಟ್ಟೆ ಆಗಿ ನಿಲ್ಲದೇ ಇರೋವುದು ವಿಶಾಧನೀಯ. ಎನೆಲ್ಲಾ ಯೋಜನೆ ಮಾಡ್ತಾರೆ ಆದ್ರೆ ಬಡತನ ನಿರ್ಮೂಲನೆಗೆ ಬೇಕಾಗಿರುವಂತಹ ಯೋಜನೆ ಜಾರಿಗೆ ಬಂದಿಲ್ಲ ಬಂದರೂ ಅದು ವಿಫಲವಾಯಿತಲ್ಲದೆ ಯಾವುದೇ ಫಲ ಕಂಡಿಲ್ಲ. ಬಡತನ ನಿರ್ಮೂಲನೆ ಬಗ್ಗೆ ಮಾತನಾಡುವಾಗ ನಾವು ವಚನ ಚಳುವಳಿಗಳ ಕಡೆಗೆ ಕಣ್ಣಾಯಿಸಬೇಕು.  ಬಡತನವನ್ನು ನಿರ್ಮೂಲನೆ ಹೇಗೆ ಮಾಡುವುದು ಎಂಬೂದಕ್ಕೆ ವಚನಾಕಾರರು ಉತ್ತರ ನೀಡಿದ್ದಾರೆ. “ ಎಲ್ಲಾ ಐಶಾರಮಿ ಜೀವನವನ್ನು ನೀರಾಕರಿಸಿದರೆ ಅಥವಾ ತ್ಯಜಿಸಿದರೆ ಬಡತನ ನಿರ್ಮೂಲನೆ ಸಾಧ್ಯ ಎಂದು ಹೇಳಿದ್ದಾರೆ ”.  ಆದರೆ ಈಗಿನ ನಮ್ಮ ಸರ್ಕಾರಗಳು ಮತ್ತು  ಸಂಘ ಸಂಸ್ಥೆಗಳು ಎಲ್ಲಾ ಐಶಾರಾಮಿ ಜೀವನವನ್ನು ನೀಡಿ ಬಡತನವನ್ನು ನಿವಾರಿಸುತ್ತೇವೆ ಎನ್ನುತ್ತಿದ್ದಾರೆ. ಇದು ವಿಪರ್ಯಾಸವೇ ಸರಿ. 

ಇನ್ನೂ ಜಾಗತಿಕ ಮಟ್ಟದಲ್ಲಿ ನಾವು ಬಡತನ ಬಗ್ಗೆ ಮಾತನಾಡುವುದಾದರೆ, ವಲ್ರ್ಟ್ ಬ್ಯಾಂಕ್, ವಿಶ್ವ ಸಂಸ್ಥೆ, ಮುಂದುವರೆದ ರಾಷ್ಟ್ರ, ಮುಂದುವರೆಯದ ರಾಷ್ಟ್ರ ಎಂದೆಲ್ಲಾ ವಿಂಗಡಿಸಿ ವ್ಯಾಖ್ಯಾನ  ನೀಡುತ್ತೇವೆ. ಆದರೆ ಬಡತನಕ್ಕೆ ಸೂಕ್ತವಾದ ವ್ಯಾಖ್ಯಾನವೆ ಇಲ್ಲವೆಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. “ ಉತ್ತಾದನೆಯಲ್ಲಿ ಕೊರತೆಯಿಲ್ಲ  ಆದರೆ ಹಂಚಿಕೆಯಲ್ಲಿ ಕೊರತೆ ಇದೆ. ಇದು ಬಡತನಕ್ಕೆ ಕಾರಣವಾಗಿರಬಹುದಾ ? “ಎಂಬ ಅಮಾತ್ಯಸೇನನ ಮಾತು ಸತ್ಯಯವೆಂದು ಅನಿಸುತ್ತದೆ. ಉದಾಹರಣೆಗೆ  ರೈತರು ಬಿತ್ತಿ ಬೆಳೆತೆಗೆಯುತ್ತಾರೆ ಆದರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತಿಲ್ಲ. ಹೆಚ್ಚಿನ ಲಾಭವನ್ನು ಮಧ್ಯವರ್ತಿಗಳೇ ಬಾಚುತ್ತಿದ್ದಾರೆ. ಬಡತನವನ್ನು ಸ್ಥಳೀಯಕ್ಕೂ ಜಾಗತೀಕ ಮಟ್ಟಕ್ಕೂ ಹೋಲಿಸಿದರೆ ಭಿನ್ನತೆ ಇದೆ. ಸ್ಥಳೀಯ ಬಡತನವನ್ನು ನಮ್ಮ ಜೀವನ ಶೈಲಿಗಳ ಆಧಾರದ ಮೇಲೆ ತೂಗುತ್ತಾರೆ ಆದರೆ ಜಾಗತಿಕ ಮಟ್ಟದಲ್ಲಿ ಆದಾಯವನ್ನು ಬಿಂದುವಾಗಿರಿಸಿಕೊಳ್ಳುತ್ತಾರೆ. 

ಬಟ್ಟೆಗೆ ಲಕ್ಷ-ಲಕ್ಷ ರೂಪಾಯಿ, ವಿದೇಶಿ ಯಾತ್ರೆಗೆ ಕೋಟಿ ಕೋಟಿರೂಪಾಯಿ ವ್ಯಯ ಮಾಡುವ ನಮ್ಮ ರಾಜಕರಣಿಗಳಿಗೆ ಒಂದೊತ್ತು ಊಟಕ್ಕಿಲ್ಲದಾಗ ಬಡವರ ನೋವು ಅರ್ಥವಾದೀತೇನೋ !. ಎಲ್ಲರೂ ಗಾಂಧಿ ತತ್ವದ ದೇಸಿಯ ಕಡೆಗೆ ಹಿಂತಿರುಗಬೇಕು ಎಂದು ಕರೆ ನೀಡುತ್ತಾರೆ. ಆದರೆ ಗಾಂಧಿಯ ಬಡವರ ಮೇಲಿನ ಕಾಳಜಿಯ ತತ್ವ ಯಾರಿಗೂ ಬೇಡವೇನೋ ! 

ಬಡತನಕ್ಕೆ ಕೇವಲ ಸರ್ಕಾರವಷ್ಟೆ ಹೊಣೆಯಲ್ಲ. ದಿನದಿಂದ ದಿನಕ್ಕೆ ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತಿರುವ ಎಂ.ಎನ್.ಸಿ ಕಂಪೆನಿಗಳೂ ಕೂಡ ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ತಮ್ಮ ಸ್ವಾರ್ಥಕ್ಕಾಗಿ ಬಡವರ ಎದೆಗೆ ಕಾಲಿಟ್ಟು ಅಲ್ಲಿ ತಮ್ಮ ಕಂಪೆನಿಯ ಕಟ್ಟಡಕ್ಕೆ ಫೌಂಡೇಶನ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಬೆನ್ನು ತಟ್ಟಿ ನಿಲ್ಲಲು ನಮ್ಮ ಸರ್ಕಾರ ಕೂಡ ಇದೆ ಎನ್ನುವುದು ಬೇಸರದ ಸಂಗತಿ. ಒಟ್ಟಿನಲ್ಲಿ ಇನ್ನಾದರು ಬಡವರ ನಿರ್ಮೂಲನೆ ಬಿಟ್ಟು ಬಟತನದ ನಿರ್ಮೂಲನೆ ಮಾಡುವತ್ತ ಗಮನಹರಿಸ ಬೇಕು ಎದಕ್ಕೆ ಸರ್ಕಾರವೇ ಮುಂದಾಳತ್ವ ವಹಿಸಬೇಕಾಗಿದೆ. 

-ಆಶಿಕ್ ಮುಲ್ಕಿ 
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Pruthvirani
4 years ago

It’s true sir..

1
0
Would love your thoughts, please comment.x
()
x