ತಮ್ಮ ಕಾವ್ಯದ ಮೂಲಕ ನಮ್ಮ ಪತ್ರಿಕೆಯನ್ನು ಶ್ರೀಮಂತಗೊಳಿಸಿದ ಸಹೃದಯರಾದ ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗ ಅಂತಿಮ ನಮನಗಳನ್ನು ಸಲ್ಲಿಸುತ್ತದೆ.
ರಮೇಶ್ ಹೆಗಡೆಯವರು ಕಳುಹಿಸಿಕೊಟ್ಟಿದ್ದ ಮೊದಲ ಗಝಲ್ ಇದು. ಪತ್ರಿಕೆಯೆಡೆಗಿನ ಅವರ ಪ್ರೀತಿಗೆ ಗೌರವಾರ್ಥವಾಗಿ ತಮ್ಮ ಮುಂದಿಡುತ್ತಿದ್ದೇವೆ.
ಮಾತುಗಳ ಸೇತು . . . :
ಮಾತುಗಳ ಸೇತುವೆಯ ಬೆಸೆದುಬಿಡು ಚೂರು/
ಕುಪಿತ ಭಾವದ ಬಸಿರ ಎಸೆದುಬಿಡು ಚೂರು//
ಕವಿದ ಮೋಡದ ಕೆಳಗೆ ಒಣ ಮೊಗವು ಏಕೆ/
ಸಸುನಗೆಯ ಮಳೆಯ ಹನಿ ಬಸಿದುಬಿಡು ಚೂರು//
ನದಿಯ ದಡದಲಿ ಬಂದು ಕೊಲ್ಲುವುದೆ ಕಾಲ/
ದೋಣಿಯೇರುತ ಕೂತು ಹೊಸೆದುಬಿಡು ಚೂರು//
ಅಲೆಯಲೆಯ ದಿಬ್ಬಣವು ಹಾಜರಿಯ ಇಡಲು/
ಉಸಿರ ತಾಕುತ ಚಳಿಯ ಕಸಿದುಬಿಡು ಚೂರು//
ತೀರ ಕಾಣುವುದಲ್ಲಿ ತಡವೇಕೆ ಮರಳಿ/
ಕೆಂಪು ಅಧರದ ಮಧುವ ಮಸೆದುಬಿಡು ಚೂರು//
– ರಮೇಶ ಹೆಗಡೆ