ವರದಾಮೂಲ: ಪ್ರಶಸ್ತಿ

ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳ ಮಾಹಿತಿ ಕಲೆಹಾಕಿ ಅದನ್ನು ವಿಕಿಪೀಡಿಯಾದಲ್ಲಿ ಎಲ್ಲರಿಗೂ ತಲುಪುವಂತೆ ದಾಖಲಿಸೋ ಒಂದು ಕಾರ್ಯಕ್ರಮ ವಿಕಿಪೀಡಿಯಾ ಫೋಟೋವಾಕ್.ಸಾಗರದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕೆಂದುಕೊಂಡಾಗ ನಾವು ಅದನ್ನು ಶುರುಮಾಡಿದ್ದು ವರದಾಮೂಲದಿಂದ. ವರದಾಮೂಲವೆನ್ನೋ ಸ್ಥಳದ ಬಗ್ಗೆ ಸಾಗರದ ಸುತ್ತಮುತ್ತಲಿನವರಿಗೆ ಹೊಸದಾಗಿ ಹೇಳೋ ಅವಶ್ಯಕತೆಯಿಲ್ಲದಿದ್ದರೂ ಈ ಭಾರಿಯ ಭೇಟಿಯಲ್ಲಿ ಸಿಕ್ಕ ಒಂದಿಷ್ಟು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಳ್ಳಲೇಬೇಕೆಂಬ ಹಂಬಲ ಹುಟ್ಟಿದ್ದು ಸಹಜ. ಅದರ ಫಲವೇ ಈ ಲೇಖನ. 

ಹೋಗೋದು ಹೇಗೆ ? 
ವರದಾಮೂಲಕ್ಕೆ ಸಾಗರದಿಂದ ೬ ಕಿ.ಮೀ. ಸಾಗರದಿಂದ ಇಕ್ಕೇರಿ/ಸಿಗಂದೂರು ಮಾರ್ಗದಲ್ಲಿ ೩ಕಿ.ಮೀ ಸಾಗಿದರೆ ಇಕ್ಕೇರಿ ಸರ್ಕಲ್ ಅಥವಾ ಅಘೋರೇಶ್ವರ ಸರ್ಕಲ್ ಅಂತ ಸಿಗುತ್ತದೆ. ಅದರಲ್ಲಿ ಎಡಕ್ಕೆ ಸಾಗಿದರೆ ೩.ಕಿ.ಮೀ ಕ್ರಮಿಸುವಷ್ಟರಲ್ಲಿ ವರದಾಮೂಲ ಸಿಗುತ್ತದೆ.  ಬಲಕ್ಕೆ ಸಾಗಿದರೆ ಒಂದು ಕಿ.ಮೀನಲ್ಲಿ ಇಕ್ಕೇರಿ. ಹಾಗಾಗಿ ಮತ್ತೊಂದು ಪ್ರೇಕ್ಷಣೀಯ ಸ್ಥಳ ಇಕ್ಕೇರಿಯಿಂದ ವರದಾಮೂಲಕ್ಕೆ ೪ ಕಿ.ಮೀ ಅಷ್ಟೆ.

ನೋಡಲೇನಿದೆಯಿಲ್ಲಿ? 
ವರದಾಮೂಲ ಎನ್ನೋದು ಹೆಸರೇ ಹೇಳುವಂತೆ ವರದಾನದಿಯ ಉಗಮಸ್ಥಾನ. ಇಲ್ಲಿ ವರದಾನದಿಯು ಲಕ್ಷ್ಮೀದೇವಿಯ ಪಾದದಡಿಯಿಂದ ಉದ್ಭವಿಸಿ ಲಕ್ಷ್ಮೀತೀರ್ಥವೆಂದು ಕರೆಯಲ್ಪಡುವ ಮೊದಲ ಕಲ್ಯಾಣಿಯನ್ನು ಸೇರುತ್ತಾಳೆಂಬ ಪ್ರತೀತಿಯಿದೆ. ವರ್ಷವಿಡೀ ತುಂಬಿರೋ ಈ ಕಲ್ಯಾಣಿಯಿಂದ ಸರ್ವತೀರ್ಥ ಎಂದು ಕರೆಯಲ್ಪಡುವ ಹೊರಗಿನ ದೊಡ್ಡ ಕಲ್ಯಾಣಿಗೆ ವರದೆ ಹರಿಯುತ್ತಾಳೆ. ಹೊರಗಿನ ಕೊಳದಲ್ಲಿ ಪ್ರತೀ ಎರಡು ಮೂರು ಅಡಿಗಳಿಗೊಂದರಂತೆ ಒಟ್ಟು ೨೪ ತೀರ್ಥಗಳು ಉಗಮಿಸುತ್ತವೆಂದೂ ಅದಕ್ಕೇ ಅದಕ್ಕೆ ಸರ್ವತೀರ್ಥವೆಂದು ಕರೆಯುತ್ತಾರೆಂದು ಸ್ಥಳೀಯರು ತಿಳಿಸುತ್ತಾರೆ. 

ವರದಾ ಮೂಲಕ್ಕೆ ಬಂದವರಿಗೆ ಮೊದಲು ಎದುರಾಗೋದೇ ಸರ್ವತೀರ್ಥ. ಅದಕ್ಕೆ ಇಳಿಯೋ ಜಾಗದಲ್ಲಿ ಬಲಬದಿಯಲ್ಲಿ ಕಾಲಭೈರವನ ವಿಗ್ರಹವಿದೆ. ಹೊಯ್ಸಳರ ದೇಗುಲಗಳಲ್ಲಿ ಅತೀ ಸಾಮಾನ್ಯವೆನಿಸೋ ಸ್ಮಶಾನಭೈರವಿಯ ಶಿಲ್ಪವನ್ನು ಈ ಶಿಲ್ಪ ನೆನಪಿಸಿದರೆ ಅಚ್ಚರಿಯಿಲ್ಲ. ದೇವಿಯ ಕೈಯಲ್ಲಿರೋ ರುಂಡಕ್ಕೆ ಬಾಯಿ ಹಾಕುತ್ತಿರೋ ನಾಯಿಯವರೆಗಿನ ಚಿತ್ರಣ ಇಲ್ಲೂ ಇದ್ದರೂ ಸ್ಮಶಾನ ಭೈರವಿಯ ಶಿಲ್ಪದಲ್ಲಿರೋ ಪ್ರೇತಗಣಗಳು, ಅದರಲ್ಲೊಂದರ ಕೈಯಲ್ಲಿರೋ ಮಗು ಮುಂತಾದ ಕೆತ್ತನೆಗಳು ಇಲ್ಲಿಲ್ಲ. ಅದರಿಂದ ಹಾಗೇ ಮುಂದೆ ಬಂದರೆ ತ್ರಿಲೋಚನ ಎಂದು ಕರೆಯಲ್ಪಡುವ ಶಿವಲಿಂಗ ಮತ್ತು ಪ್ರಸನ್ನಗಣಪತಿಯ ದೇಗುಲಗಳಿವೆ. 

ಸರ್ವತೀರ್ಥದಿಂದ ಮೇಲ್ಗಡೆ ಹತ್ತಲಿರೋ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದರೆ ಎದುರಾಗೋದು ಲಕ್ಷ್ಮೀ ತೀರ್ಥ ಮತ್ತು ಅದಕ್ಕಿಳಿಯಲಿರೋ ಮೆಟ್ಟಿಲುಗಳು. ಅದರೆದುರಿಗಿರುವುದೇ ಸದಾಶಿವದೇಗುಲ. ಕೆಳದಿಯರಸ ಶಿವಪ್ಪನಾಯಕನ ಚಿಕ್ಕಪ್ಪ ಸದಾಶಿವನಾಯಕ ಈ ದೇಗುಲಕ್ಕೆ ಉಂಬುಳಿ ಕೊಟ್ಟಿದ್ದ ಕಾರಣ ಈ ದೇಗುಲಕ್ಕೆ ಸದಾಶಿವದೇಗುಲವೆಂದು ಹೆಸರಾಯಿತೆಂದು ಕೆಲವರ ಅಭಿಪ್ರಾಯ. ಈ ದೇಗುಲದ ದ್ವಾರದಲ್ಲಿರೋ ಗಜಲಕ್ಷ್ಮಿ ಸಾಮಾನ್ಯವಾಗಿ ವಿಷ್ಣುವಿನ ದೇಗುಲಗಳಲ್ಲಿ ಕಂಡುಬರುವ ರಚನೆ. ಹಾಗಾಗಿ ಮೂಲದಲ್ಲಿ ಇದು ವಿಷ್ಣು ದೇಗುಲವಾಗಿದ್ದು ತದನಂತರದಲ್ಲಿ ಶೈವ ದೇಗುಲವಾಗಿ ಬದಲಾಗಿರಬಹುದೆಂಬ ಊಹಾಪೋಹಗಳಿದ್ದರೂ ಅದಕ್ಕೆ ತಕ್ಕ ಆಧಾರಗಳಿಲ್ಲ. ಇದರೆದುರು ಇರುವ ಧ್ವಜಸ್ಥಂಭದೆದುರು ಹಿಂದಿನ ಕಾಲದಲ್ಲಿ ಹೋಮಕ್ಕೆ ತುಪ್ಪ ಹಾಕಲು ಬಳಸುತ್ತಿದ್ದ ಸೃಕ್ ಸೃವ ಎಂಬ ಭಾರೀ ಗಾತ್ರದ ಹುಟ್ಟನ್ನು ನೋಡಬಹುದು. ಕಲ್ಲುವೀಣೆ ಎಂದೂ ಕೆಲವರು ಕರೆಯೋ ಇದು ತನ್ನ ಗಾತ್ರ ಮತ್ತು ರಚನೆಯಿಂದ ಇಲ್ಲಿಗೆ ಬರುವವರ ಗಮನ ಸೆಳೆಯುತ್ತೆ. ಈ ದೇಗುಲದ ಬಾಗಿಲಲ್ಲಿ "ಜೋಯಿಸರ ತಿಂಮಣನ ನಮಸ್ಕಾರ" ಎಂಬ ಕೆತ್ತನೆಯಿರುವುದನ್ನು ಕಾಣಬಹುದು. ಇಕ್ಕೇರಿಯಲ್ಲಿರೋ ಹನುಮದೇವಸ್ಥಾನದಲ್ಲೂ ಇದೇ ಬರಹವಿರುವ ಕಾರಣದಿಂದ ಎರಡೂ ದೇವಸ್ಥಾನಗಳು ಸರಿಸುಮಾರು ಒಂದೇ ಸಮಯದಲ್ಲಿ ನಿರ್ಮಾಣವನ್ನೋ ಜೀರ್ಣೋದ್ದಾರವನ್ನೋ ಕಂಡಿರಬಹುದೆಂದು ಊಹಿಸಬಹುದು. 

ಕೂಗಲೇಶ್ವರ:
ಸದಾಶಿವದೇಗುಲದ ಪಕ್ಕದಲ್ಲಿರೋ ಒಂದು ಸಣ್ಣ ಗೇಟನ್ನು ದಾಟಿದರೆ ಸಪ್ತಮಾತೃಕೆಯರ ಕಲ್ಲೊಂದು ಕಾಣುತ್ತದೆ. ಇಲ್ಲಿ ಸಪ್ತ ಮಾತೃಕೆಯರ ಜೊತೆಗೆ ಎಡಬಲಗಳಲ್ಲಿ ಇನ್ನೆರೆಡು ಮೂರ್ತಿಗಳಿರೋದು ವಿಶೇಷ.
"ಬ್ರಾಹ್ಮೀ ಮಾಹೇಶ್ವರಿ ಚೈವ ಕೌಮಾರಿ ವೈಷ್ಣವೀ ತಥಾ
ವಾರಾಹೀ ನಾರಸಿಂಹೀ ಚ ಭೈಮಾಭೈರವಿ ನಂದಿನಿ" ಎಂಬ ಶ್ಲೋಕ ಅಥವಾ
ಬ್ರಾಹ್ಮೀ ಮಾಹೇಶ್ವರಿ ಚ ಇಂದ್ರಿ ಕೌಮಾರಿ ವೈಷ್ಣವೀ ತಥಾ
ಚಾಮುಂಡ ಚೈವ ವಾರಾಹಿ  ಲಕ್ಷ್ಮೀಶ್ಚ ಪುರುಶಾಕೃತಿಃ ಎಂಬ ದುರ್ಗಾ ಅಷ್ಟೋತ್ತರ ಸ್ತೋತ್ರದ ಎಂಟನೇ

ಚರಣ(೧)

ಅಥವಾ

ಬ್ರಾಹ್ಮೀ ಮಾಹೇಶ್ವರಿ ಚೈವ ಕೌಮಾರೀ ವೈಷ್ಣವೀ ಯದಾ
ವಾರಾಹಿ ಚ ತದೇಂದ್ರಾಣಿ ಚಾಮುಂಡ ಸಪ್ತ ಮಾತಾರಃ ಎಂಬ ಮತ್ತೊಂದು ನಿತ್ಯ ಶ್ಲೋಕ(೨)ದ ಮೂಲಕ ಇಲ್ಲಿರುವ ಸಪ್ತಮಾತೃಕೆಯರನ್ನು ಅವರ ವಾಹನಗಳದೊಂದಿಗೆ ಗುರುತಿಸಬಹುದು. 
ಅವರನ್ನು ಅವರ ವಾಹನಗಳೊಂದಿಗೆ ಗುರುತಿಸುವುದಾದರೆ
ಬ್ರಾಹ್ಮೀ(ವಾಹನ:ಕೋಣ), ಮಾಹೇಶ್ವರಿ(ವಾಹನ=ಮೊಸಳೆ/ಮಕರ), ಕೌಮಾರಿ(ಹಂಸ), ವೈಷ್ಣವಿ(ಮಾನವ), ವಾರಾಹಿ ನಾರಸಿಂಹಿ(ವಾಹನ=ವೃಷಭ/ಎತ್ತು), ಇಂದ್ರಾಣಿ(ವಾಹನ=ಆನೆ), ಚಾಮುಂಡಿ(ವಾಹನ=ವರಾಹ/ಹಂದಿ). ಇವರ ಬಲಭಾಗದಲ್ಲಿ ಗಣಪತಿಯಿದ್ದರೆ ಎಡಭಾಗದಲ್ಲಿ ರುದ್ರವೀಣೆಯನ್ನು ಹಿಡಿದ ನಂದಿವಾಹನನಾದ ಶಿವನಿದ್ದಾನೆ. ಇವನಿಗೆ ಕೂಗಲೇಶ್ವರ ಎಂಬ ಹೆಸರಂತೆ. ಇದಕ್ಕೆ ಕೂಗಲೇಶ್ವರ ಎಂದು ಹೆಸರು ಬಂದುದರ ಹಿಂದೂ ಒಂದು ಕಥೆಯಿದೆ. 
ಹಿಂದೆಲ್ಲಾ ಈ ಭಾಗದಲ್ಲಿ ಮಕ್ಕಳು ತುಂಬಾ ಅಳುತ್ತಿದ್ದರೆ , ನಾಲ್ಕೈದು ವರ್ಷಗಳಾದರೂ ಮಾತು ಬರದಿದ್ದರೆ ಅದರ ಶಮನಕ್ಕೆಂದು ಈ ದೇವನಿಗೆ ಹರಕೆ ಹೊರುತ್ತಿದ್ದರಂತೆ. ಆ ಆಚರಣೆ ಈಗ ಕಡಿಮೆಯಾಗಿದೆಯಾದರೂ ದೇವನ ಹೆಸರಂತೂ ಹಾಗೇ ಉಳಿದಿದೆ

ಅದರ ಪಕ್ಕದಲ್ಲಿರುವ ಗುಡಿಗಳೆಲ್ಲಾ ಕಾಲಾನಂತರದಲ್ಲಿ ಈ ಕ್ಷೇತ್ರಕ್ಕೆ ಬಂದು ಹರಕೆ ಹೊತ್ತವರು ಕಟ್ಟಿಸಿಕೊಟ್ಟ ದೇಗುಲಗಳಂತೆ. ಉದಾಹರಣೆಗೆ ಸದಾಶಿವ ದೇಗುಲದ ಪಕ್ಕದಲ್ಲಿ ದ್ವಾರದಲ್ಲಿ ಕಡಲೇಕಾಳು ಗಣೇಶ ಮತ್ತು ಅನ್ನಪೂರ್ಣೇಶ್ವರಿ ವಿಗ್ರಹಗಳಿರುವ ಶಂಭುಲಿಂಗೇಶ್ವರ ದೇಗುಲವಿದೆ. ಅದರ ಪಕ್ಕದಲ್ಲಿ ಮಣಿಕರ್ಣಿಕೇಶ್ವರ ಮತ್ತು ರಾಮೇಶ್ವರ ದೇಗುಲಗಳಿವೆ. ಇವುಗಳ ಬಗ್ಗೆಯೂ ಒಂದೊಂದು ಕತೆಗಳಿವೆ. ಕೆಲ ಸ್ಥಳಗಳಲ್ಲಿರೋ ಕಲ್ಲನ್ನು ಎತ್ತಿದರೆ ತಮ್ಮ ಕೆಲಸವಾಗುತ್ತದೆ ಎಂಬ ನಂಬಿಕೆಯಿರುವಂತೆಯೇ ಮಣಿಕರ್ಣಿಕೇಶ್ವರನ ಎದುರಿಗಿರೋ ನಂದಿಯನ್ನು ಎತ್ತಿದರೆ ಕೆಲಸವಾಗುತ್ತದೆ ಎಂಬ ನಂಬಿಕೆಯಿತ್ತಂತೆ ! ಅದೆಲ್ಲಾ ಮೂಡನಂಬಿಕೆ ಎಂದು ನಂದಿಯನ್ನು ಅಷ್ಟಬಂಧ ಮಾಡಿ ಕೂರಿಸಲಾಗಿದೆಯೀಗ. ವರದಾಮೂಲವೆಂಬುದು ವಿಂಧ್ಯಪರ್ವತದ ಮೂಲ. ಹಾಗಾಗಿ ರಾಮ ಇಲ್ಲಿಂದಲೇ ವನವಾಸವನ್ನು ಪ್ರಾರಂಭಿಸಿದ ಎನ್ನೋ ಪ್ರತೀತಿ ರಾಮೇಶ್ವರ ದೇಗುಲದ ಬಗೆಗಿದೆ. ಆ ದೇಗುಲದ ಎಡಬಲಗಳಲ್ಲಿ ಗಣೇಶ, ಸುಬ್ರಹ್ಮಣ್ಯರ ವಿಗ್ರಹಗಳಿವೆ. 

ಇವನ್ನೆಲ್ಲಾ ದಾಟಿ ಒಳಗೆ ಸಾಗಿದರೆ ೭ ಕುದುರೆಗಳಿಂದ ಕೂಡಿದ ರಥವೇರಿದ ಸೂರ್ಯನಾರಾಯಣನ ವಿಗ್ರಹವಿದೆ. ರಥದ ಚಕ್ರಗಳು ಈ ಮುರಿದು ಹೋಗಿದ್ದು ಅದರ ಬಲಭಾಗದಲ್ಲಿ ವರದಾದೇವಿಯ ಗರ್ಭಗೃಹವಿದೆ. ಇದರ ಪುರಾಣವನ್ನು ಕೇಳುವುದಾದರೆ ತನ್ನಿಂದಲೇ ಸೃಷ್ಠಿಯಾದ ಶತರೂಪೆಯನ್ನು ಮೋಹಿಸುತ್ತಿದ್ದ ಬ್ರಹ್ಮನ ಐದನೇ ತಲೆಯನ್ನು ಶಿವ ಕಡಿದು ಕಪಾಲವನ್ನಾಗಿ ಬಳಸುತ್ತಾನೆ. ಆದರೆ ಇದರ ಪಾಪ ಶಿವನನ್ನ ಕಾಡತೊಡಗಿ ಆತ ಚತುಶೃಂಗಗಳ ಮಧ್ಯೆ ತಪಸ್ಸಿಗೆ ಕೂರುತ್ತಾನೆ. ಶಿವನ ಪಾಪ ಪರಿಹಾರಕ್ಕಾಗಿ ವಿಷ್ಣುವು ತನ್ನ ಶಂಖದಿಂದ ಗಂಗೆಯಲ್ಲಿ ಶಿವನಿಗೆ ಅಭಿಷೇಕ ಮಾಡುತ್ತಾನೆ. ಆ ನಂತರದಲ್ಲಿ ಉಳಿದ ನೀರೇ ವರದಾತೀರ್ಥವಾಯಿತೆಂದು ಪ್ರತೀತಿಯಿದೆ. ಮೇಲಿನ ಪ್ರತೀತಿಗಳಿಗನುಗುಣವಾಗಿ ವರದಾಮೂಲದ ಸುತ್ತಲೇ ಕವಲಗೋಡು, ಓತುಗೋಡು,ಕುಂಟುಗೋಡು,ತೆಂಕೋಡು ಎಂಬ ನಾಲ್ಕು ಊರುಗಳಿರುವುದು ವಿಶೇಷ.

ದೇವಿಯ ಬಗ್ಗೆ:
ಗಾಯಿತಿ,ಸಾವಿತ್ರಿ, ಸರಸ್ವತಿ ದೇವಿಯರ ಸಂಗಮರೂಪವೆಂದು ನಂಬಲಾಗುವ ವರದೆಯು ಎಡಗೈಯಲ್ಲಿ ವರದಹಸ್ತೆ. ಎರಡೂ ಕಡೆ ವರ ಕೊಡೋದ್ರಿಂದ ವರದಾಂಬಿಕೆಯೆಂಬ ನಂಬಿಕೆಯಿದೆಯೆಂದೂ ಪ್ರತೀತಿಯೆದೆ. ಈ ಕ್ಷೇತ್ರಕ್ಕೆ ಮುಂಚೆ ತೀರ್ಥರಾಜಪುರ ಎಂಬ ಹೆಸರೂ ಇತ್ತಂತೆ. ಅದರ ಬಗೆಗಿನ ಉಲ್ಲೇಖಗಳ ನೋಡೋದಾದರೆ ಮಹಾರಾಜ ಸಗರನು ನೀರಿಗಾಗಿ ಯಜ್ಞವೊಂದನ್ನು ಕೈಗೊಳ್ಳಲು ತಾಯಿ ವರದೆ ಪ್ರತ್ಯಕ್ಷಳಾಗಿ ನೀನು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಬರುತ್ತೇನೆಂದೂ ಆದರೆ ಹಿಂದಿರುಗಿ ನೋಡಬೇಡವೆಂದೂ ಹೇಳುತ್ತಾಳಂತೆ. ಆತ ಸಾಗರವೆಂಬ ಪ್ರದೇಶದಲ್ಲಿ ಹಿಂತಿರುಗಿ ನೋಡುತ್ತಾನಂತೆ. ಅಲ್ಲಿಗೆ ನದಿಯ ಹರಿಯುವಿಕೆ ನಿಂತು ಆಕೆ ಬೃಹದಾಕಾರವಾಗಿ ಶೇಖರಗೊಳ್ಳುತ್ತಾಳಂತೆ. ಅದೇ ಈಗಿನ ಸಾಗರವೆಂಬ ಊರೆಂದು ಪ್ರತೀತಿ ! ಈ ಕಥೆ ಭಗೀರಥನು ಭೂಮಿಗೆ ಗಂಗೆಯನ್ನು ತಂದ ಪ್ರಸಂಗವನ್ನು ಹೋಲುತ್ತದಾದರೂ ಸಾಗರವೆಂದು ಬರೋ ಉಲ್ಲೇಖ ನಿಜವಾದ ಸಮುದ್ರದ ಪರಿಕಲ್ಪನೆಯೂ ಆಗಿರಬಹುದು ! ಈ ನದಿ ಉತ್ತರಕ್ಕೆ ಹರಿಯುತ್ತದೆ. ಬಂಕಸಾಣ ಎಂಬ ಊರಿನಲ್ಲಿ ದಂಡಾವತಿಯನ್ನು ಸೇರುತ್ತದೆ. 

ಈ ದೇಗುಲದ ಪಕ್ಕದಲ್ಲೇ ಗೋಪಾಲ ಮೊದಲಾದ ದೇಗುಲಗಳಿವೆ. ಇಲ್ಲೊಂದು ಸಣ್ಣ ಕೊಳವಿದ್ದು ಅದಕ್ಕೆ ಅಗ್ನಿತೀರ್ಥವೆಂದು ಹೆಸರು. ಪಕ್ಕದಲ್ಲೇ ಇದ್ದರೂ ಲವಣಗಳಿಂದ ತುಂಬಿರೋ ಈ ನೀರಿನ ರುಚಿ ಸರ್ವತೀರ್ಥದ ನೀರ ರುಚಿಗಿಂತ ಭಿನ್ನವಾಗಿರುವುದು ವಿಶೇಷ. 

ಸ್ಥಳಪುರಾಣಗಳ ಮಾಹಿತಿ: ಶ್ರೀ ಗುರುದತ್ತ ಶರ್ಮ, ವರದಾಮೂಲ
ನಿರೂಪಣೆ: ಪ್ರಶಸ್ತಿ,ಸಾಗರ  


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x