ಬೃಂದಾ(ನ್ಯೂಸ್ ನಿರೂಪಕಿ): ಕನ್ನಡ ಚಿತ್ರರಂಗದ ಉದ್ಧಾರಕ್ಕಾಗಿ ನಮ್ಮ ಸರ್ಕಾರಕ್ಕೂ ಚಿತ್ರರಂಗದವರಿಗೂ ನಡೆದ ಚರ್ಚೆ ಸಫಲವಾಗಿದೆ. ಚಲನ ಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷರು ಗೋವಿಂದೋ ಗೋವಿಂದರವರು ಇದು ಚಿತ್ರೋದ್ಯಮದ ಹೊಸ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ರೀಮೇಕ್ ಸಿನಿಮಾಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರಿ ಅವಾರ್ಡ್ ಗಳು ಘೋಷಣೆಯಾಗಿದೆ ! ನಮ್ಮ ವರದಿಗಾರ ಸತ್ಯನಾಥ ಇದರ ಬಗ್ಗೆ ಹೇಳ್ತಾರೆ. ಹೇಳಿ ಸತ್ಯನಾಥ! ಸತ್ಯನಾಥ ! (ಸಿಟ್ಟಲ್ಲಿ) : ರೀ ಸತ್ಯನಾಥ!
ಸತ್ಯನಾಥ ಬರುತ್ತಾನೆ!
ಬೃಂದಾ(ನ್ಯೂಸ್ ನಿರೂಪಕಿ): ಎಲ್ಲಿ ಹಾಳಾಗಿ ಹೋಗಿದ್ದ್ರೀ.. ಥೂ (ಪಿಸು ನುಡಿಯಲ್ಲಿ)
ಸತ್ಯನಾಥ: ಅಯ್ಯೋ.. ಪಕ್ಕದ ಚ್ಯಾನಲ್ ಅವರು ಏನು ಹೇಳ್ತಾರೆ ಅಂತಾ ಕೇಳೋಕ್ಕೆ ಹೋಗಿದ್ದೆ, ನೋಡಿ ಅವ್ರು ಹೇಳಿದ್ದ ಎಲ್ಲಾ ಕ್ಲೀನ್ ಆಗಿ ಬೆರೆದು ಕೊಂಡು ಬಂದಿದ್ದೀನಿ! (ಚೀಟಿ ತೋರಿಸುತ್ತಾ). ನೀವು ಹೇಳಿದ್ದು ನಿಜ, ರೀಮೇಕ್ ರಾಜರು ಪಾಟಾಕಿ ಸಿಡಿಸಿ ಸಂತಸದಿಂದ ಇದ್ದಾರೆ! ವಿವರ ಹೀಗೆ ಇದೆ!
ಅತ್ಯುತ್ತಮ ಪಡಿ ಅಚ್ಚು ಪ್ರಶಸ್ತಿ – ನಿಮ್ಮ ರೀಮೇಕ್ ಮೂಲ ಕೃತಿಗೆ ಎಷ್ಟು ಹೋಲುತ್ತೆ ಅನ್ನೋದರ ಮೇಲೆ ಇದೆ! ಕ್ಯಾಮರಾ ಬಳಕೆಯ ವಿಧಾನ, ನಟ ನಟಿಯರ ವೇಷ ಭೂಷಣೆ, ಮೀಸೆಯ ಆಕಾರ ಇತ್ಯಾದಿ. ಚಿತ್ರರಂಗದ ನಿರ್ಣಾಯಕಾರರ ಪ್ರಕಾರ ಈ ಪ್ರಶಸ್ತಿ ತುಂಬಾ ಸೂಕ್ಷ್ಮವಾಗಿ ಗಮನಿಸಿ ಕೊಡ್ತಾರಂತೆ ಉದಾ :ಮಮ್ಮೂಟಿ ೪೫ ಕೋಣದಲ್ಲಿ ಬಿದ್ದರೆ, ಇದರಲ್ಲೂ ನಾಯಕರು ಹಾಗೆಯೇ ಬಿದ್ದಿರ ಬೇಕು! ( ಪ್ರಶಸ್ತಿ: ಕಾರ್ಬನ್ ಪೇಪರ್ ಲೈಫ್ ಟೈಮ್ ಸಪ್ಲೈ ಫ್ರೀ)
ನೇಟಿವಿಟಿ ಪ್ರಶಸ್ತಿ: ಅದರಲ್ಲಿ ನೀವು ಕಥೆಯನ್ನು ಹೇಗೆ ಅಳವಡಿಸಿದ್ದೀರಾ ಎಂದು ಮೌಲ್ಯಮಾಪನ ಮಾಡುತ್ತಾರೆ! ಉದಾ : ಮೂಲದಲ್ಲಿ ಸಹ ನಟಿಯ ಹೆಸರು ಗೀದಾ ಇದ್ದರೆ ನೀವು ಅದನ್ನು ಗೀತಾ ಮಾಡಿದ್ದೀರಾ ಇತ್ಯಾದಿ! ಇವರನ್ನು ಪ್ರೇರಿಪಿಸಲು, ಹಾಗು ಅಂತರ ರಾಷ್ಟಿಯ ಮಟ್ಟದಲ್ಲಿ ಬೆಳಸಲು ಅವರಿಗೆ ಹಾಲಿವುಡ್ ಹಾಗು ಫ್ರೆಂಚ್ ಸಿನಿಮಾಗಳನ್ನು ತಿಂಗಳಿಗೆ ಒಂದರಂತೆ ಬಾಡಿಗೆಗೆ ನೀಡಲಾಗುವುದು
ರವಿ ಮಾಮ ಲೈಫ್ ಟೈಂ ಅಚೀವ್ ಮೆಂಟ್ ಅವಾರ್ಡ್; ಅತಿ ಹೆಚ್ಚು ರೀಮೇಕ್ ಗಳ ಮಾಡುವ ನಿರ್ದೇಶಕರಿಗೆ ಮೀಸಲು! ಗೆದ್ದವರಿಗೆ ತಗಡು ದ್ರಾಕ್ಷಿ ಕೊಡಲಾಗುತ್ತೆ!
ಈ ಸಮಾರಂಭದಲ್ಲಿ ಪ್ರೇಕ್ಷಕ ಪ್ರಭು ಕೂಡ ಮಕಮಲ್ ಟೋಪಿ ಅವಾರ್ಡ್ ಗೆಲ್ಲಬಹುದು, ಬೃಂದ ಅವರೆ !
ಬೃಂದಾ (ನ್ಯೂಸ್ ನಿರೂಪಕಿ): ಮಕಮಲ್ ಟೋಪಿ ಯಾಕೆ?
ಸತ್ಯನಾಥ: ಕನ್ನಡದ ನೆಲದಲ್ಲಿ ಬೆಳೆಯದ, ನಮ್ಮ ಸಾಹಿತ್ಯ, ಜಾನಪದ, ಇತ್ಯಾದಿಗಳ ಬಳಸಿ ಸಿನಿಮಾ ಮಾಡದೆ, ದುಡ್ಡಿಗಾಗಿ ಸಿನಿಮಾ ಮಾಡಿದವರು ಪ್ರೇಕ್ಷಕರಿಗೆ ಇನ್ನೇನು ಹಾಕ್ತಾರೆ ಹೇಳಿ!
ಬೃಂದಾ (ನ್ಯೂಸ್ ನಿರೂಪಕಿ): ಸೀರಿಯಸ್ ಆಗಿ ಸಾಯಬೇಡಿ ಬೇರೆ ಬೇರೆ ಬ್ರೇಕಿಂಗ್ ನ್ಯೂಸ್ ಬರುತ್ತಿದೆ. ಸುಮ್ಮನೆ ಇರಿ! ಹೇಳಿ, ಕೌಸ್ತುಬ ….
ಕೌಸ್ತುಬ …. ಹೇಳಿ!
ಕೌಸ್ತುಬ: ಇಲ್ಲಿ ಪರಿಸ್ಥಿತಿ ಹದಗೆಟ್ಟಿದೆ, ಪೈರೆಟೇಡ್ ಡಿವಿಡಿಗಳ ಮಾಲಿಕರು ರಸ್ತೆಗೆ ಇಳಿದಿದ್ದಾರೆ! ಅಲ್ಲಿ ಇಲ್ಲಿ ಡಿ.ವಿ.ಡಿ ತೂರಾಟ ನಡೀತಾ ಇದೆ, ಸರ್ಕಾರದ ರೀಮೇಕ್ ಮಾಡುವವರಿಗೆ ಮಣೆ ಹಾಕಿ ನಮ್ಮ ವಿರುದ್ಧ ತಾರತಮ್ಯ ಮಾಡ್ತಾ ನಮ್ಮ ಹೊಟ್ಟೆಗೆ ಕಲ್ಲು ಹೊಡೀತ ಇದ್ದಾರೆ, ಎಂದು ಟೋರೆಂಟ್ ಕುಮಾರರು ತರಾಟೆ ತೆಗೆದಿದ್ದಾರೆ!
*****