ಪಂಜು ಕಾವ್ಯಧಾರೆ

" ಶಾಂತಿ "

ಮಳೆ ಹನಿಗಳು ಧರೆಗಿಳಿದಂತೆ
ಶಾಂತಿ ದೊರೆಯುತ್ತಿದೆ

ಹಕ್ಕಿಗಳ ಕಲರವದಲ್ಲಿ 
ಶಾಂತಿ ದೊರೆಯುತ್ತಿದೆ

ತಿಳಿಕೊಳದಲ್ಲಿ ಮೀನು ಈಜಿದಂತೆ
ಶಾಂತಿ ದೊರೆಯುತ್ತಿದೆ

ಪುಟ್ಟ ಮಕ್ಕಳ ನಗುವಿನಲ್ಲಿ
ಶಾಂತಿ ದೊರೆಯುತ್ತಿದೆ

ಕಾಡಿನಲ್ಲಿ ನೆಡೆಯವಾಗ
ಶಾಂತಿ ದೊರೆಯುತ್ತಿದೆ

ಕಡಲತಡಿಯಲ್ಲಿ ಸೂರ್ಯೋದಯ
ಶಾಂತಿ ದೊರೆಯುತ್ತಿದೆ

ವಿವಿಧ ರೀತಿಯಲ್ಲಿ ಶಾಂತಿ ದೊರೆಯಲಿ
ನನಗೂ, ನಿಮಗೂ, ನಮ್ಮೆಲ್ಲರಿಗೂ ಕೂಡಾ

ಚೀನಾದ ಕವಿ Lin LiMei ಯವರು ಚೀನಾ ಭಾಷೆಯಲ್ಲಿ ಕಳುಹಿಸಿರುವ ಶಾಂತಿ ಸಂದೇಶದ ಕನ್ನಡ ಅನುವಾದ

-ಉದಯ ಶಂಕರ ಪುರಾಣಿಕ

Udaya Puranika

 

 

 

 


ಸತ್ಯವ ಹುಡುಕುತ  !!

ಲೋಕದ 
ಕತ್ತಲು 
ಕವಿದಿದೆ !!

ಬಾನಿನಲಿ 
ನೇಸರನಿಲ್ಲ
ಚಂದಿರನಿಲ್ಲ
ತಾರೆಗಳಿಲ್ಲ !!

ನಡುಗತ್ತಲ 
ನಡುವೆ 
ಬದುಕು 
ಕಟ್ಟುವ 
ಪರಿಯ 
ನಾ ಹುಡುಕುತ 
ಸಾಗುತಿರುವೆ  !!

ಸುಳ್ಳು 
ಹಬ್ಬಿರುವ 
ಪರಪಂಚದಲಿ 
ಸತ್ಯವ 
ಕಾಣಲು 
ಹೊರಟಿರುವೆ !!

-ಆದಿ, ಮೈಸೂರು


ಗಜಲ್  

ಪಂಚಭೂತಗಳಲಿ ಮಣ್ಣು ಸತ್ವದ ಆಗರ ನೀ ಇರುವೆ ಜಗದಗಲ
ಸಕಲ ಜೀವರಾಶಿಗಳಿಗೆ ನೀನೇ ಮೂಲಾಧಾರ ನೀ ಇರುವೆ ಜಗದಗಲ

ಮಣ್ಣ ಮಕ್ಕಳು ನಾವು ನಿನ್ನ ನಂಬಿದರೆ ಇಲ್ಲ ಬಡತನವು
ನಡು ಬಗ್ಗಿಸಿ ದುಡಿದರೆ ಬದುಕು ಬಂಗಾರ ನೀ ಇರುವೆ ಜಗದಗಲ

ಬಿತ್ತಿದ ಬೀಜಕ್ಕೆ ಮೊಳಕೆ ಶಕ್ತಿ ಕೊಟ್ಟು ಆಹಾರವಾಗಿಸಿದೆ
ಹಸಿರ ಹೊನ್ನು ಮಣ್ಣ ಮೇಲೆ ಸಿಂಗಾರ ನೀ ಇರುವೆ ಜಗದಗಲ

ಬೆಳೆದ ಪೈರು ನಳನಳಿಸುವುದು ನೀ ಆರೋಗ್ಯವಿರಲು
ಕೊಚ್ಚಿ ಹೋಗದಂತೆ ಹಿಡಿದಿಡಿದೆ ಸಾರ ನೀ ಇರುವೆ ಜಗದಗಲ

ಅದೆಷ್ಟು ಭಾರ ಹೊತ್ತಿರುವೆ ಮಣ್ಣಿನ ಕಣಕಣದಲ್ಲಿದೆ ಆಗಾಧ ಶಕ್ತಿ 
ಲೋಕವು ಮರೆಯದು “ಬೆಂಗಾಲಿ” ಮಣ್ಣಿನ ಉಪಕಾರ ನೀ ಇರುವೆ ಜಗದಗಲ

-ಈರಣ್ಣ ಬೆಂಗಾಲಿ 

earanna-bengali

 

 

 

 



ದಯಾ ಮಾಯಿ ಎಂದು ಬರೆಯಲೆ,
ಸುಂದರಿ ಎಂದು ಬರೆಯಲೆ,
ಪ್ರಿಯತಮೆ ಎಂದು ಬರೆಯಲೆ,
ನಾನು ಕಂಗೆಟ್ಟಿ ಬಿಟ್ಟಿದ್ದೇನೆ ನಿಮಗೆ ಈ ಪತ್ರದಲ್ಲಿ ಏನು ಬರೆಯ ಎಂದು
ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು;
ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ;
ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ , ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ;
ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ, ಆದರೆ ಇದರಲ್ಲಿ ಕಪ್ಪು ಛಾಯೆ ಇದೆ;
ಸಾಕು ನಾನು ನಿನ್ನನ್ನು ಇಷ್ಟೊಂದು ಪ್ರೀತಿಸುತ್ತಿದ್ದೇನೆ, ಇಷ್ಟೊಂದು ಹಚ್ಚಿಕೊಂಡಿದ್ದೇನೆಂದು ಹೇಳುತ್ತೇನೆ.
ನಾನು ನಿನ್ನನ್ನು ಗಂಗೆ ಎಂದು ತಿಳಿದಿದ್ದೇನೆ, ನಾನು  ನಿನ್ನನ್ನು  ಜಮುನಾ ಎಂದು ತಿಳಿದಿದ್ದೇನೆ;
ನೀನು ನನ್ನ ಹೃದಯಕ್ಕೆ ಎಷ್ಟು ಹತ್ತಿರ ವಾಗಿದ್ದಿಯಾ ಎಂದು ನಿನ್ನನ್ನು ನನ್ನವಳು ಎಂದು ತಿಳಿಯುತ್ತೇನೆ;
ನಾನು ಮರಣಹೊಂದಿದರು ನನ್ನ ಆತ್ಮವು ನಿನಗೋಸ್ಕರ ಕಾಯುತ್ತಿರುತ್ತದೆ;
ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು;
ನೀನೆ ನನ್ನ ಜೀವನ, ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ;
ಮೂಲ: ಹಿಂದಿಯ ಸಂಗಮ್ ಚಿತ್ರದ “ಹೇ ಮೇರ್ ಪ್ರೇಮ್ ಪತ್ರ ಪಡ್ಕರ್” 
ಅನುವಾದ: ನ್ಯಾಮತ್

****

ನೀನು ದರ್ಪಣವನ್ನು ನೋಡಿದೆ ಶೃಂಗರಿಸಿಕೊಂಡಗಾಲೆಲ್ಲ;
ನೀನು ಹೂಗಳನ್ನು ನೋಡಿದೆ ವಸಂತ ಋತುವಿನ ಕಾಲದಲ್ಲಿ;
ನಾನೊಬ್ಬ ನತದೃಷ್ಟನಾಗಿದ್ದೇನೆ,ನೀನು ಒಮ್ಮೆ ಯಾದರೂ  ನನಗೆ ನೋಡಲಿಲ್ಲ.
ಸೂರ್ಯನ ಮೊದಲ ಕಿರಣವನ್ನು ನೀನು ನೋಡಿದೆ ತೂಕಡಿಸುತ್ತಾ;
ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡಿದೆ ಕನಸುಗಳಲ್ಲಿ ತಲ್ಲೀನನಾಗುತ್ತ;
ನೀನು ಯಾವುದೊ ಯಾವುದೊ ಕಾರಣಗಳಿಂದಾಗಿ ಇಡೀ ಜಗತ್ತನ್ನೇ ನೋಡಿದೆ;
ನಾನೊಬ್ಬ ನತದೃಷ್ಟನಾಗಿದ್ದೇನೆ,ನೀನು ಒಮ್ಮೆ ಯಾದರೂ  ನನಗೆ ನೋಡಲಿಲ್ಲ.
ಕಾಡಿಗೆಯ ಅದೃಷ್ಟ ನೀನು ನಿನ್ನ ಕಣ್ಣುಗಳಲ್ಲಿ ವಾಸಸ್ಥಾನ ವಾಗಿ ಮಾಡಿದೆ;
ಸೀರೆಯ ಅದೃಷ್ಟ ನೀನು ನಿನ್ನ ದೇಹಕ್ಕೆ ಉಡಿಸಿದೆ;
ಬಯಕೆಯಾಗಿ ಉಳಿದುಬಿಟ್ಟಿತು ನನ್ನ ಹೃದಯದಲ್ಲಿ, ನಿನ್ನ ಕುತ್ತಿಗೆಯ ಹಾರವನ್ನು ಆಗಲು.
ನೀನು ದರ್ಪಣವನ್ನು ನೋಡಿದೆ ನೀನು ಶೃಂಗರಿಸಿಕೊಂಡಗಾಲೆಲ್ಲ;
ನೀನು ಹೂಗಳನ್ನು ನೋಡಿದೆ ವಸಂತ ಋತುವಿನ ಕಾಲದಲ್ಲಿ;
ನಾನೊಬ್ಬ ನತದೃಷ್ಟನಾಗಿದ್ದೇನೆ,ನೀನು ಒಮ್ಮೆ ಯಾದರೂ  ನನಗೆ ನೋಡಲಿಲ್ಲ.
ಮೂಲ: ಹಿಂದಿಯ ಉಪಾಸನ ಚಿತ್ರದ “ದರ್ಪಣ್ ಕೋ ದೇಖಾ”
ಅನುವಾದಕರು: ನ್ಯಾಮತ್.

 

 

 

 

 


 *ಪ್ರೇಮರಥ*

ನಿನ್ನ ಕಂಗಳ ಕುಡಿನೋಟ 
ಹದಿಹರೆಯದ ಮೈಮಾಟ
ನೋಡುತ
ನನಗರಿಯದೆ ಕಳೆಯುತ್ತಿದ್ದೆ 
ದಿನಗಳನು
ನಿನ್ನನೇ ಪ್ರೇಮಿಸುತ………!

ನಿನ್ನ ಹಿಂದೆ ಸುಳಿಯುತ
ದಿನರಾತ್ರಿ ನಿನ್ನನೆ ನೆನೆಯುತ
ನೀನಾದೆ ನನ್ನಲ್ಲಿ ಕರಗತ
ನನ್ನದೆಯದಿ ಸಪ್ತಪದಿ ತುಳಿಯುತ
ಹೃದಯದ ತಂತಿಯನು ಮೀಟುತ
ನೀನೇರೆನ್ನ ಜೀವನದ ಪ್ರೇಮರಥ…!
   
ಪಂಚ ಅಶ್ವಗಳ ಲಗಾಮು 
ನೀ ಹಿಡಿದು ಓ ರತಿ
ಆಗು ಬಾರೆನ್ನ ಸಾರಥಿ
ನಮ್ಮಿಬ್ಬರ ವಿಶ್ವಾಸದ ಗಾಲಿಯಮೇಲೆ
ಸಾಗಲಿ ಬಲುದೂರ ನಮ್ಮೀ ಪ್ರೇಮ ರಥ…..
ರಾಜರಾಣಿಯಾಗಿ ಬದುಕುವಾಸೆ..!
ಗತ ಪ್ರೇಮಕತೆಗಳ ಹಾಗೆ…..
ಇತಿಹಾಸ ಸೇರಲಿ ಆ ಪವಿತ್ರ ಗ್ರಂಥ
ಗೆಳತಿ ಬಾ ಏರು ಬಾ ಎನ್ನ ಪ್ರೇಮರಥ….!!

-ರಂಗರಾವ ಬಾ. ಕುಂಬಾರ


   *ನಾಚಿಕೆಯು ಬಂಧಿಸಿದೆ*
ನನ್ನೆದುರು ಬರಲು ನಾಚಿಕೆಯು ತಡೆಯುತಿದೆ ಅವಳ..
ನಾಚಿಕೆಗೆ ಕಾರಣ ಪ್ರೀತಿಯು ಬಹಳ..!
ಹೆಸರಿನಲೇ ಇದೆ ಮುಖದ ಪ್ರಶಾಂತತೆ..
ಹಸಿರು ವನಗಳ ವಸಂತ ಚೈತ್ರತೆ..!

ಮಧುರ ಹಾಡಿಗೆ ಗಾನ ಸಂಯೋಜನೆ ಅವಳ ಸ್ವರ..
ಮ್ರದುಗಳಿಗೆ ಮೊದಲ ಮಾದರಿ ಅಮ್ರತ ಕರ..
ಮಧುರ,ಮ್ರದುಗಳು ಇವಳ
ವ್ಯಕ್ತಿತ್ವದ ಸಂಕಲನ..!!

ಹೊಸ ರೂಪ ರಚಿಸಿದಳು
ಚೆಲ್ಲಿ ನಗೆ ತುಂತುರು..
ನವಮಾಸದ ಬಳ್ಳಿ ಬಳುಕು 
ಅವಳ ಹೆರಳಿನ ಗುಂಗುರು..
ತುಂತುರು,ಗುಂಗುರುಗಳೆಲ್ಲ
ಇವಳ ಬದುಕಿನ ಕ್ರೋಢೀಕರಣ..!!

ಹೆದರಿರುವೆ ಮಾತಾಡಲು,
ಹೆದರಿಸಲೇ ಮುಂದೆ..
ಅವಳ ಕಣ್ಣೋಟ ಮಿಂಚು 
ನನ್ನ ಕಣ್ಣಿಗೆ, ಹ್ರದಯಕೆ ಅಂಚು..
ಅಂಚು ದಾಟಲೇ ನಾ ಕೈಯ‌ ಹಿಡಿದು,
ನಾಚಿಕೆಯು ಬಂಧಿಸಿದೆ ಮಾಡಲೇನು..?!!
**
   *ಅಕ್ಷತೆ ಕಾಳುಗಳು ಹರಸಲಿ*
ಬಾಡದ ಹೂಗಳಾಗಬೇಕು,
ನಾನು, ನನ್ನ ಪ್ರೀತಿ..
ನೆನಪುಗಳು ಮಿಣುಕುತಿರಲಿ
ಕಳೆಯಲಿ ಭೀತಿ..
ಪ್ರೀತಿಗೆ ಕಾರಣ ಕಾಣದ ಅಗಣಿತ,
ಭೀತಿಗೆ ಕಾರಣ ನನ್ನೆದೆ ಬಡಿತ..
ಅಗಣಿತ ಅಕ್ಕರೆಯ
ಭಾವನೆ ಅಪಾರ..
ಕೇಳದು ಈಗ ಯಾರ ಪ್ರಭಾವ..?
ನನ್ನದು ಪ್ರೇಮಸೋನೆ,
ಅವಳು ಪ್ರೇಮಜಾಣೆ,
ಸೇರಲೇಬೇಕು ಒಲವೆಂಬ ಸಾಗರ..
ಸಾಗರಕೆ ಸೇತುವೆ ಹ್ರದಯಗಳಮಾತು..
ಬಾಡದ ಹೂಗಳು
ಬೆರೆಯಲಿ ಮುತ್ತು..
ಅಕ್ಷತೆಯ ಕಾಳುಗಳು ಹರಸಲಿ ಸೋತು..!!

  -ಗೌತಮೀಪುತ್ರ ಸುರೇಂದ್ರ ಗೌಡ ಗೋಳಿಹೊಳೆ(ಜಿಎಸ್ಜಿ)


ನಾಮ ಫಲಕ

ಹೊಲಗೇರಿ ಕೊಳಗೇರಿ
ಇಲ್ಲಿ ಮಿನುಗುತ್ತಿವೆ ರಂಗೋಲಿ ಕೆಳಗೆ
ಕಾಲನ ಸ್ಪರ್ಶದಿಂದ
ಉಸಿರಾಡಿ
ನಗುತ್ತಿವೆ ತುಟಿಯಂಚಿನಲಿ
ಮೌನಿಯಾಗಿ
ರಾಜರೋಷವಾಗಿ ಬೆರಗುಗೊಳಿಸಿವೆ
ಸರ್ಕಾರಿ ನಾಮ ಫಲಕದಲ್ಲಿ

ಊರು ಗಬ್ಬು ನಾರುತ್ತಿದೆ
ನಾವಿದ್ದೇವೆ ನಿಮ್ಮ ಊರಿನಲ್ಲಿ
ಊರಿಗೆ ಊರೇ ಅಂಟು ಬ್ಯಾನಿ ಬಂದರೆ
ಹತ್ತೂರು ಸುತ್ತಿ ಬರುವ 
ಒಂದೇ… ಬಸ್ಸಿಗೆ
ಜೋತು ಬಿದ್ದು ಹೋಗಬೇಕು
ಹತ್ತು ಮೈಲ್ ದೂರ 
ಸಾಯುವನ್ಯಾರೊ… ಬದುಕುವನ್ಯಾರೋ..
ಆದರೂ ಬೆರಗುಗೊಳಿಸಿವೆ 
ಸರ್ಕಾರಿ ನಾಮ ಫಲಕದಲ್ಲಿ
ನಿಮ್ಮ ಆರೋಗ್ಯ ನಮ್ಮ ಭಾಗ್ಯ
ನಾವಿದ್ದೇವೆ ನಿಮ್ಮ ಊರಿನಲ್ಲಿ

ಇಲ್ಲಿ ಎಲ್ಲಂದರಲ್ಲಿ
ಬಣ್ಣ ಬಣ್ಣದ ಬಕೀಟು ಬಿಂದಿಗೆ
ಹಣ್ಣಾದ ಚೀಲದಲ್ಲಿ ಬುತ್ತಿ ಹೊತ್ತು  ನಿಂತ
ಗೂಳೆ ವಂಶಸ್ಥರನ್ನ ಬೆರಗುಗೊಳಿಸಿವೆ
ಸರ್ಕಾರಿ ನಾಮ ಫಲಕ
ರೋಜಗಾರನರೇಗಾ 
ಆದರೂ ನಾವಿದ್ದೇವೆ ನಿಮ್ಮ ಊರಿನಲ್ಲಿ

ಇಲ್ಲಿರುವ ಶಾಲೆ ಬಿರುಕು ಬಿಟ್ಟು ನಗುತಿದೆ
ಸೋ ಎಂದು ಸುರಿವ ತುಂತ್ತೂರ ಸೋನೆಗೆ.ಆಗೋ….ಈಗೋ. 
ಅಆ ಕಲಿಯುವ ಭಾವಿ ಪ್ರಜೆಗಳಿಗೆ
ಜ್ಞಾನ ದೇಗುಲವಿಲ್ಲ
ಕೈ ಬೀಸಿ ಕರೆಯುತ್ತವೆ
ಸರ್ಕಾರಿ ನಾಮ ಫಲಕ
ಬಾ ಮರಳಿ ಶಾಲೆಗೆ ಸರ್ವರಿಗೂ ಶಿಕ್ಷಣ
ನಮ್ಮ ಅಕ್ಕರ ನಿಮ್ಮ ಅಕ್ಷರ
ನಾವಿದ್ದೇವೆನಿಮ್ಮ ಊರಿನಲ್ಲಿ

ಕಸಿ ಮಾಡಿದ ಸಸಿಯಂತೆ ಊರು
ಹರಿವ ದೋ ಆಬ್ ಕೃಷ್ಣೆ ತುಂಗಭದ್ರೆ 
ರೈತನಿಗೆ ಆಭದ್ರೆ
ಕೈ ಬೀಸಿ ಸ್ವಾಗತಿಸುವ
ಆಂದ್ರ ಕುಲಜರು
ಆದರೂ ಬೆರಗುಗೊಳಿಸಿವೆ
ಸರ್ಕಾರಿ ನಾಮ ಫಲಕ
ಎಡದಂಡೆ ಬಲದಂಡೆಗಳಲ್ಲಿ

-ಮಲ್ಲಮ್ಮ ಯಾಟಗಲ್, ದೇವದುರ್ಗ


ನನ್ನ ತಾವರೆ
ತಾವರೆ,
ತನ್ನ ಕಂಪಿನಿಂದ ಸೆಳೆದಳು ನನ್ನ,
ಬಂದಿಯಾಯಿತೆನ್ನ  ಮನ ಆ ಕಂಪಿಗೆ.
ಕಾಡಿತು ಯಕ್ಷ ಪ್ರಶ್ನೆ,
ತಾವರೆ,
ಪುಷ್ಪಗಳ ಲೋಕದಲ್ಲ ನೀನೆ ಏಕೆ ಹತ್ತಿರವಾದೆ.

ಕೆಸರಲ್ಲಿ ಬಿದ್ದು
ಕೈಯನ್ನು ಚಾಚಿ
ಹಿಡಿವ ಆಸೆ ನಿನ್ನ ನನ್ನ ತಾವರೆ,
ಕೆಸರಲ್ಲಿ ಕೆಸರಾಗದೆ
ಕನಸಲ್ಲಿ ಕನಸಾಗದೆ 
ಬರಲೇನ ನಿನ್ನ ಮನಸಿಗೆ ಓ ತಾವರೆ.

ತಾವರೆಯ ಬೆಲೆಯವಳು
ತಾವರೆಯ ಕಣ್ಣವಳು
ತಾವರೆಗೇನು ತಿಳಿದಿದೆ ತನ್ನ ಬೆಲೆ,
ತಾವರೆಯ ನಾ ಮುಡಿವೆ ಎಂದರೆ 
ಬೇಡ ಎನ್ನುತಿರುವೆ, ನೀ ಶಂಕರ.

 ಆನಂದ ಮ. ಬೀಳಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಆರನಕಟ್ಟೆ ರಂಗನಾಥ

ನ್ಯಾಮತ್ ಅವರು ಅನುವಾದಿಸಿರುವ ಕವಿತೆಗಳು ರಮ್ಯವಾದವುಗಳು. ಓದಿದರೆ ಖುಷಿಯಾಗುತ್ತದೆ.ಅದರೆ ಕನ್ನಡಾನುವಾದದಲ್ಲಿ ತುಸು ಪದ ಬಳಜೆ ಹಾಗೂ ಸಂವೇದನೆಯ ಗ್ರಹಿಕೆ ಗಾಢವಾಗಬೇಕಿದೆ. ಉತ್ತಮ ಪ್ರಯತ್ನಕ್ಕಾಗಿ ನ್ಯಾಮತ್ ಸರ್ ಗೆ ಧನ್ಯವಾದಗಳು.

ಶಿವರಾಜ್ ಬಿ.ಎಲ್. ದೇವದುರ್ಗ
ಶಿವರಾಜ್ ಬಿ.ಎಲ್. ದೇವದುರ್ಗ
6 years ago

ನಾಮಫಲಕದಲ್ಲಿ ಸರ್ವ ಸೌಲಭ್ಯ ಪಡೆದಿರುವವರು ನಾವು ಧನ್ಯರು

ಮಲ್ಲಮ್ಮ ಯಾಟಗಲ್
ಮಲ್ಲಮ್ಮ ಯಾಟಗಲ್
6 years ago

ಶಿವರಾಜ ಸರ್ , ನಮಗೆ ಯಾವಾಗ ಸಿಗಬಹುದು ಆ ಸೌಲಭ್ಯಗಳು?

3
0
Would love your thoughts, please comment.x
()
x