ಒಂದಷ್ಟು ವಾಸ್ತವಗಳು ……….!!!
ಬೆಳಗು ಬೈಗಿನ ಅನ್ನಕ್ಕೆ ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ ನನ್ನ ಮಗಳ ವಯಸ್ಸೇ ಏನೋ … ಒಂದಷ್ಟು ನೀರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ … ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ …. 'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ 'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ …. !!!!!!!
'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು ಅವನ ಕಣ್ಣಲ್ಲಿ ಖುಷಿ …. ಅವನಿಂದ ಉಡುಗೊರೆ ಸಿಗುತ್ತದೆ ಎಂದು ತಿಳಿದಿತ್ತು …. ಅವನ ಬಳಿ ಬರುತ್ತಿದ್ದ ಸಿಗರೇಟಿನ ವಾಸನೆ ನಿಂತು ಹೋಗಿತ್ತು …. ಇಷ್ಟು ದೊಡ್ಡ ಉಡುಗೊರೆ ನಿರೀಕ್ಷಿಸದ ಅವಳಿಗೆ ಅವನ ಬಗ್ಗೆ ಹೆಮ್ಮೆ ಗೌರವ ……
ಹೀಗೊಂದು ಪುಟ್ಟ ಕಥೆ : ಹೆರಿಗೆ ಮಾಡಿದ ವೈದ್ಯ:"ಗಂಡು ಮಗು!!!" ಹುಡುಗಿಯ ತಾಯಿ:"……." ಕಣ್ಣ ತುಂಬಾ ತುಂಬಿದ ನೀರು. ವೈದ್ಯ: "ಗಂಡು ಮಗು ಅಂದಾಗ ಅತ್ತಿದ್ದು ನೀವೆ ಮೊದಲಿರಬೇಕು "… ಹುಡುಗಿಯ ತಾಯಿ : 'ಅವರ ಅಪ್ಪನ ಹಾಗೆ ಆಗದೆ ಇರಲಿ ಅಂತ ಡಾಕ್ಕ್ತ್ರೆ " ಆ ಪುಟ್ಟ ಅವಿವಾಹಿತ ಹೆಣ್ಣು ,ಆಗಷ್ಟೇ ಹುಟ್ಟಿದ ಗಂಡು ಮಗುವಿನ ತಾಯಿ ಇನ್ನು ಕಣ್ಣು ಬಿಡದೆ ಮಲಗಿತ್ತು !!
ಅವಳು ಕ್ಷಮಿಸುತ್ತಾ ಹೋದಳು…….ಎಲ್ಲರನ್ನು ಕ್ಷಮಿಸಿದಳು….ಎಲ್ಲವನ್ನು ಕ್ಷಮಿಸಿದಳು…ಮೋಸವನ್ನು, ಮೋಸಮಾಡಿದವರನ್ನು , ನೋವನ್ನು, ನೋಯಿಸಿದವರನ್ನು, ಬೆನ್ನಿಗೆ ಚೂರಿ ಹಾಕಿದವರನ್ನು,…ಎದುರು ನಿಂತು ಹಂಗಿಸಿದವರನ್ನು….ಎಲ್ಲರನ್ನು ಕ್ಷಮಿಸಿದಳು………ನಕ್ಕಳು, ನಗುವ ಹಂಚಿದಳು…………….ಈಗ ಅವಳ ಬಳಿ ಬರುವ ಎಲ್ಲರೂ ತಮ್ಮ ತಪ್ಪ ಅರಿತಿದ್ದಾರೆ…..ಅವಳಲ್ಲಿ ಮಾತುಗಳೇ ಆಡದೆ ಕ್ಷಮೆ ಕೇಳುತ್ತಾರೆ…..ಕಣ್ಣ ಕೊನೆಯಲ್ಲಿ ಬಂದ ಹನಿಯ ಯಾರಿಗೂ ಕಾಣದಂತೆ ಒರೆಸಿಕೊಳ್ಳುತ್ತಾರೆ……..ಅವಳೋ ಇಂದು ನಗುತ್ತಲೇ ಇದ್ದಾಳೆ……..ಮತ್ತೆ ಯಾರೂ ನನ್ನನ್ನು ನೋಯಿಸಲಾರರು ಎಂಬಂತೆ…ನಗುತ್ತಾ……ಕ್ಷಮಿಸಿದ್ದೇನೆ ಎಂಬಂತೆ ನಗುತ್ತಾ ಮಲಗಿದಾಳೆ………ಸೋತು ಗೆದ್ದವಳಂತೆ…..
ಯಾಕೋ ಏನು ಸರಿ ಹೋಗ್ತಾ ಇಲ್ಲ ಅನಿಸಿತು ಅವನಿಗೆ…. ಉದ್ಯೋಗ ಬದಲಿಸಿದ………..ಸರಿ ಹೋಗಲಿಲ್ಲ…. ಮನೆ ಬದಲಿಸಿದ…..ಇಲ್ಲ ಸರಿ ಹೋಗಲಿಲ್ಲ…. ರಸ್ತೆ ಬದಲಿಸಿದ…..ಇಲ್ಲವೇ ಇಲ್ಲ ….ಸರಿ ಹೋಗಲೇ ಇಲ್ಲ…….. ಊರು ಬದಲಿಸಿದ…..ಉಹೂ…….ಏನೂ ಸರಿ ಹೋಗಲಿಲ್ಲ………… ಪುಣ್ಯಾತ್ಮ ತನ್ನ ಸ್ವಭಾವ ಬದಲಿಸಿಕೊಂಡರೆ ಏನಾದ್ರೂ ಸರಿ ಹೋಗಬಹುದು ಅಂತ ಯೋಚಿಸಲೇ ಇಲ್ಲ……………..ಬದುಕು ಸಾವಾಗುವವರೆಗೂ ……………
-ಸುನೀತಾ ಮಂಜುನಾಥ್
******
ತುಂಬಾ ಚೆನ್ನಾಗಿವೆ ..