ಕಿರು ಕವಿತೆಗಳು
	——————
	ಅಪ್ಪನ ನೇಗಿಲ ಕಾವ್ಯಕೆ
	ಹೊಟ್ಟೆ ತುಂಬಿದವರ
	ತೇಗುಗಳೇ
	ಪ್ರಶಸ್ತಿ , ಪುರಸ್ಕಾರ
	ತಟ್ಟೆಯಲಿ ಬಿಟ್ಟ,
	ತಿಪ್ಪೆಗೆ ಚೆಲ್ಲಿದ ಅನ್ನ
	ಅಪ್ಪನ ಬೆವರಿಗೆ
	ನೀವು ಮಾಡಿದ ಅವಮಾನ
	—
	ಮೊನ್ನೆ
	ಮಹಾನ್ ದೈವಭಕ್ತ ಸಿದ್ರಾಮ
	ದೇವರಿಗೆ ಕೈ ಮುಗಿದು
	ಕಾಣಿಕೆ ಸಲ್ಲಿಸಿ
	ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ
	ಅವನ ಚಪ್ಪಲಿ ಕಳುವಾಗಿದ್ದವು!
	—
	ರೈತನ ಬೆವರ ಹನಿ
	ಹೊಳೆದಿದೆ
	ಎಳೆ ಬಿಸಿಲಿಗೆ
	ಪೈರಿನ ನೆತ್ತಿಯ ಮೇಲೆ
	ತೆನೆ
	—
	ಒಂದಷ್ಟು ಪ್ರೀತಿ
	ಮಣ್ಣಾದ ಮೇಲೆ
	ಈ ಭೂಮಿಯಲ್ಲಿ
	ಹಲವು
	ಹೊಸ ಪ್ರೇಮಕಥೆಗಳು
	ಹುಟ್ಟಿ – ಬೆಳೆದವು
	—
	ಚಳಿಯಿಂದ ನಡುಗುವ
	ಹೂವು
	ತಂಗಾಳಿಯನ್ನೇ
	ಧ್ಯಾನಿಸುವುದು
	ಕುರುಡು ಪ್ರೇಮ
—
	ಕಾಲು ಜಾರಿಬಿದ್ದ
	ಚಂದಿರ
	ನಮ್ಮೂರ ಕೆರೆಯಲ್ಲಿ
	ತೇಲುವಾಗ
	ನೋಡಿದ ಅಪ್ಪ ಹೇಳಿದ್ದು –
	'ನಾಳೆ,  ಇಲ್ಲ ನಾಡಿದ್ದೋ
	ಪೌರ್ಣಮಿ'
—
	ಉದುರಿ ಬಿತ್ತು 
	ಹಣ್ಣೆಲೆ
	ಚಿಗುರಿನ ಮೇಲೆ
	ಚಿಟ್ಟೆ
—
	ಬಸಿರು ಮೋಡಕ್ಕೆ
	ಹೆರಿಗೆಯಾಯ್ತೋ, 
	ಗರ್ಭಪಾತವೋ?
	ಗೊತ್ತಿಲ್ಲ.
	ಅಂತೂ ನಮ್ಮೂರಿಗೆ
	ಮಳೆ ಬಂತು.
—
	ಅವಳಿದ್ದರೆ
	ಈ ಕಾಗದದ ಹೂವಿನಲ್ಲೂ
	ಪರಿಮಳ
	ಇದು ವಿಸ್ಮಯ
	ಅಥವಾ
	ನನ್ನ ಭ್ರಮೆ
—
	ಪಾಪವೆಲ್ಲ ಕಳೆಯಿತೆಂದು
	ಭ್ರಮೆಯಲ್ಲಿ
	ಮುಳುಗೆದ್ದವನ
	ಜಾತಿಯನ್ನೂ ತೊಳೆಯಲಿಲ್ಲ
	ಹರಿವ ನದಿ
—
	ಬೆತ್ತಲಾಗಿ
	ನಾವಿಬ್ಬರೂ
	ಶೀಲವನ್ನ ಹುಡುಕಿದೆವು
	ಸುಖ
	ಸಿಕ್ಕಿತು
—
	ಚಿಗುರುಗಳ ನಡುವೆ
	ಕೋಗಿಲೆಯ
	ಕುಹು ಕುಹು
	ಬೀಳುವಾಗ ಹಣ್ಣೆಲೆ
	ಬೀಸೊ ಗಾಳಿಯ ಕೈ ಹಿಡಿದು
	ನರ್ತಿಸಿತು
—-
– ನವೀನ್ ಮಧುಗಿರಿ
ಚಂದಿರ
	೧. ಕೊಳಕ್ಕೆ 
	ಎಸೆದ ಕಲ್ಲುಗಳು 
	ಈಜುತಿದ್ದ ಚಂದಿರನ 
	ಏಕಾಂತವನ್ನು 
	ಭಗ್ನಗೊಳಿಸಿದೆ 
	
	೨. ಒಡೆದ ಕನ್ನಡಿ; 
	ಬೇಲಿ ಅಂಚಲ್ಲಿ
	ಚಂದಿರ ಚೂರಾಗಿ 
	ಬಿದ್ದಿಹನು  
	೩. ರಾತ್ರಿ ಬೆನ್ನ ಹಿಂದೆ
	ಬಿದ್ದ ಚಂದಿರ
	ಅಪ್ಪನ ಕರೆದ ತಕ್ಷಣ
	ಬೆಟ್ಟದ ಹಿಂದೆ 
	ಅಡಗಿ ಕುಳಿತ
	೪. ಕೊಡಕ್ಕೆ ಹಗ್ಗ ಕಟ್ಟಿ
	ಕೆಳಗಿಳಿಸಿ, 
	ಮೇಲೆತ್ತಬೇಕು;
	ಬಾವಿಗೆ ಬಿದ್ದ
	ಚಂದಿರನ
	ಬದುಕಿಸಲು.
	೫. ಚಳಿಯ ಹೊಡೆತಕ್ಕೆ
	ಚಂದ್ರನು ಮೋಡದ
	ಹೊದಿಕೆಯಲಿ 
	ಅವಿತು ಕುಳಿತಿದ್ದಾನೆ
	೬. ಹಸಿದ ಹೊಟ್ಟೆ ಈಗ 
	ಚಂದ್ರನನ್ನೇ 
	ಮುರಿದು ತಿನ್ನು 
	ಎನ್ನುತಿದೆ 
	 ೭. ಅಂದಕ್ಕೆ ಸೋತು 
	ಮೀನುಗಳು ಬಿಡದೆ 
	ಮುತ್ತಿಡುತಿವೆ 
	ಚಂದಿರ ಬಿಂಬಕ್ಕೆ 
-ನಗೆಮಲ್ಲಿಗೆ
					

ಇಬ್ಬರ ಹನಿಗೂ ತುಬಾ ಚೆನ್ನಾಗಿವೆ.. 🙂 ಅಿನಂದನೆಗಳು..
ಇಬ್ಬರ ಹನಿಗಳೂ ತುಂಬಾ ಚೆನ್ನಾಗಿವೆ… ಅಿನಂದನೆಗಳು…