ಕಾಲೇಜ್ ಕಹಾನಿ: ಪ್ರಶಸ್ತಿ ಅಂಕಣ


ನೀರವ ರಾತ್ರಿ. ಜೀವನವೇ ಜಿಗುಪ್ಸೆಯಾಗಿ , ಮನಶ್ಯಾಂತಿಯನ್ನು ಹುಡುಕಿ ಅಲೆಯುತ್ತಿರೋ ಅಲೆಮಾರಿಯಂತೆ ಒಬ್ಬ ಕೆರೆಯನ್ನೇ ದಿಟ್ಟಿಸುತ್ತಾ ಅದರ ದಡದಲ್ಲಿ ಕುಳಿತಿದ್ದ. ಬೆಳದಿಂಗಳ ರಾತ್ರಿ. ಕೆರೆಯ ಅಲೆಗಳಲ್ಲಿ ಪ್ರತಿಬಿಂಬಿಸುತ್ತಿದ್ದ ಚಂದ್ರನ ಬಿಂಬ ನೋಡುತ್ತಿದ್ದರೆ ಆಗಸದ ಆ ಶಶಿ ಈತನಿಗೆ ಸಾಂತ್ವನ ಹೇಳಲೆಂದೇ ಭುವಿಗಿಳಿದು ಬಂದು ಕೆರೆಯಲ್ಲಿ ಈಜಾಡುತ್ತಿದ್ದಾನೇನೋ ಅನಿಸುತ್ತಿತ್ತು. ರೋಹಿಣೀಪತಿ ಪ್ರಭೆಯ ರಾತ್ರಿ ಸಭೆಗೆ ಆಗಮಿಸಿದ್ದ ತಾರೆಗಳೆಲ್ಲಾ ಮಿಂಚುತ್ತಾ ಆಗಸದಲ್ಲಿ ಚಿತ್ರ ವಿಚಿತ್ರ ಆಕೃತಿಗಳನ್ನು ಮೂಡಿಸುತ್ತಿದ್ದವು. ಸೃಷ್ಟಿಕರ್ತನ ಚುಕ್ಕಿಯಾಟಕ್ಕೋ , ರಂಗೋಲಿಗೋ ಅಂಗಳವಾದಂತಿದ್ದವು. ತಂಗಾಳಿಗೆ ಗತ್ತು ಬಂದಂತೆ ಕೊಂಬೆಗಳನ್ನು ಇಂಚಿಂಚೇ ಅಲ್ಲಾಡಿಸಿ ಬೀಗುತ್ತಿದ್ದ ಮರಗಳೂ ರಾತ್ರಿ ತಮ್ಮದೇ ಲೋಕವೆಂಬಂತೆ ಅಲ್ಲಲ್ಲಿ ಹಾರಾಡುತ್ತಿದ್ದ ಬಾವಲಿಗಳೂ ರಾತ್ರಿಯ ಚಂದಿರನ ಬೆಳಕಿಗೆ ಬೆಳಗಿದಂತಾಗುತ್ತಿದ್ದ ತೇಲು ಸಸ್ಯಗಳೂ, ತಾವರೆಗಳೂ ಕೆರೆಯ ಪರಿಸರಕ್ಕೊಂದು ಕಳೆ ತಂದುಕೊಟ್ಟಿದ್ದವು. ಬೀಸುತ್ತಿದ್ದ ಮಂದಮಾರುತದ ತಂಪಲ್ಲೂ ಕೆರೆಯ ದಡದಲ್ಲಿ ಕೂತಿದ್ದವ ಬೆವರುತ್ತಿದ್ದ. ಕೆರೆಯ ತಿಳಿನೀರು, ಅದರಲ್ಲಿ ಮೂಡುತ್ತಿದ್ದ ಪ್ರಶಾಂತ ಬಿಂಬ ಅಲ್ಲೋಲಕಲ್ಲೋಲವಾಗಿದ್ದ ಈತನ ಮನಸ್ಸಿಗೆ ಕಸಿವಿಸಿಯುಂಟುಮಾಡಿ. ಆ ಸಿಟ್ಟಿನಲ್ಲಿ ಕೈಗೆ ಸಿಕ್ಕಿದ ಕಲ್ಲನ್ನೆತ್ತಿ ಕೆರೆಗೆಸೆದ. ಮುಳುಗಿದ ಕಲ್ಲಿನಂತೆಯೇ ಈತ ಹಳೆಯ ನೆನಪುಗಳಲ್ಲಿ ಮುಳುಗತೊಡಗಿದ. ತಿಳಿಯಾಗುತ್ತಿದ್ದ ಚಂದ್ರನ ಬಿಂಬದಂತೆಯೇ ಈತನ ನೆನಪುಗಳು ಕಣ್ಣೆದುರು ಮೂಡತೊಡಗಿದವು.

ಬೆಂಗಳೂರಿಗೆ ಬಂದ ಹೊಸದು. ಕಾಲೇಜು ಜೀವನದ ಮೊದಲ ದಿನಗಳು. ಹಳ್ಳಿಯಿಂದ ಬಂದ ಈತನಿಗೆ ಇಲ್ಲಿನ ಜಗತ್ತೇ ವಿಚಿತ್ರವೆನಿಸಿತ್ತು. ದೊಡ್ಡವರಿಗೆಲ್ಲಾ ಅಣ್ಣಾ, ಸಣ್ಣವರಿಗೆಲ್ಲಾ ಹೆಸರಿಡೋದು, ಸಮಾನವಯಸ್ಕರಾದ್ರೆ ಲೋ, ಗುರೂ, ಸಿಸ್ಯಾ ಅನ್ನೋದೊಂದೇ ಗೊತ್ತಿದ್ದ ಆತನಿಗೆ ಇಲ್ಲಿ ಬಂದ ಮೇಲೆ ಶಬ್ದ ಸಾಮ್ರಾಜ್ಯವೊಂದಕ್ಕೆ ಕಣ್ಕಟ್ಟು ಬಿಟ್ಟಂತಾಗಿತ್ತು. ಮಗಾ, ಮಚ್ಚಿ, ಮಚ್ಚಾ, ಐಟಮ್ಮು, ಪೀಸು, ಸ್ಪೆಸಿಮನ್ನು, ಸೂಟಿ ಹೀಗೆ ಹಲವಾರು ಹೊಸ ಪದಗಳು. ರಾಜ್ಯದೆಲ್ಲೆಡೆಯ, ರಾಷ್ಟ್ರದೆಲ್ಲೆಡೆಯ ಜನ ಬಂದಂತೆ ಅವರ ಪದಗಳೂ ಇಲ್ಲಿ ಬಂದು ಬೆರೆತುಹೋಗಿದ್ದವು. ಬೇಬೆ, ಡೂಡ್ಗಳಿಲ್ಲದೆ ಮಾತಾಡೋದೇ ಕಷ್ಟವಾಗುವಂತ ಪರಿಸ್ಥಿತಿ ಇವನ ಹಾಸ್ಟೆಲ್ಲಿಗೆ ಬಂದುಹೋಗಿತ್ತು !  ಈ ಪರಿಸ್ಥಿತಿಯಲ್ಲಿ ಪಿಳಿಪಿಳಿ ಕಣ್ಣು ಬಿಡುವಷ್ಟರಲ್ಲೇ ಕ್ಲಾಸಲ್ಲಿದ್ದ ಒಬ್ಬ ಹುಡುಗಿ ಯಾಕೋ ಇಷ್ಟವಾಗಿ ಹೋಗಿದ್ದಳು. ನಾನು ಇಲ್ಲಿ ಬಂದಿರೋದು ಓದೋಕೆ, ಪ್ರೀತಿ ಮಾಡೋಕಲ್ಲ ಅಂತ ಎಷ್ಟು ಹೇಳಿಕೊಂಡರೂ ಯಾಕೋ ಕ್ಲಾಸಲ್ಲಿ ಕೂತಾಗ ಕಣ್ಣು ಅವಳತ್ತಲೇ ಹೊರಳುತ್ತಿತ್ತು. ಆದರೆ ಅವಳ ಹೆಸರು ಬಿಟ್ಟರೆ ಬೇರೇನೂ ಗೊತ್ತಿರದಿದ್ದರೂ ಆಕೆಯ ನಿತ್ಯದ ಟೈಟ್ ಜೀನ್ಸು, ಲೆಗ್ಗಿಂಗುಗಳನ್ನು ನೋಡಿದಾಗೆಲ್ಲಾ ಆಕೆ ಪೇಟೆಯವಳು , ತಾನು ಹಳ್ಳಿಯವನು . ಜೀನ್ಸು, ಶೂಗಳೆಲ್ಲಿ , ಸಾದಾ ಪ್ಯಾಂಟು ಚಪ್ಪಲಿಗಳೆಲ್ಲಿ ಎಂಬ ಕೀಳರಿಮೆ ಕಾಡುತ್ತಿತ್ತು. ಕಣ್ಣಂಚಿನ ನಗುವನ್ನೇ ನೋಡುತ್ತಾ ಕುಳಿತುಬಿಡುವ ಆಸೆಯಾಗುತ್ತಿದ್ದರೂ ಬಾಬ್ಕಟ್ಟನ್ನು ನೋಡಿದಾಗೆಲ್ಲಾ ದಿನಾ ಎಣ್ಣೆ ಹಾಕಿ ಬಾಚುವ ತನ್ನ ಎಣ್ಣೆಜಿಡ್ಡಿನ ಕೂದಲು ನೆನಪಾಗಿ ಮತ್ತೆ ತಲೆತಗ್ಗಿಸುವಂತಾಗುತ್ತಿತ್ತು.  ಆದರೂ ತಾನು ಬಂದ ಉದ್ದೇಶ ಏನು ಎಂದು ಅವನಿಗೆ ಅವನೇ ಮಾಡಿಕೊಳ್ಳುತ್ತಿದ್ದ ಸಮಾಧಾನಗಳಿಂದ ಎಷ್ಟೋ ಹೊತ್ತಿನ ನಂತರ ಮನಸ್ಸಿಗೆ ಶಾಂತಿ ಸಿಗುತ್ತಿತ್ತು.

ಆದರೆ ಭಾವನೆಗಳೆಂದರೆ ಹಾಗೆ. ಒಮ್ಮೆ ಮೊಳಕೆಯೊಡೆದರೆ ಅವನ್ನು ಚಿವುಟುವುದು ಕಷ್ಟ. ಎಷ್ಟೇ ತಡೆ ಹಾಕಿದರೂ ಅದು ಮರವಾಗೇ ಸಿದ್ದ. ಎಷ್ಟು ಬೇಡವೆಂದರೂ ತಡೆಯದ ಕಣ್ಣುಗಳು ಕೆಲವೊಮ್ಮೆ 

ಅವಳತ್ತ ಹೊರಳಿಬಿಡುತ್ತಿದ್ದವು. ಕೊನೆಗೊಮ್ಮೆ ಎರಡನೆಯ ಇಂಟರ್ನಲ್ ಹೊತ್ತಿಗೆ ಅದು ಅವಳಿಗೂ ತಿಳಿದುಬಿಟ್ಟಿತು. ಒಂದಿನ  ಅವಳನ್ನು ಮಾತಾಡ್ಬೆಸ್ಬೇಕು ಅಂದ್ಕೊಂಡ್ರೂ ಪ್ರತೀ ಬಾರಿ ಅವಳೆದುರು ಹಾದಾಗ ಧೈರ್ಯ ಸಾಕಾಗ್ತಿರಲಿಲ್ಲ. ಹಿಂಗೇ ಒಂದ್ಸಲ ಮತ್ತೆ ಸಿಕ್ಕಿದ್ಲು ಅವ್ಲು.  ಯಾವ್ದೋ ಯೋಚನೆಯಲ್ಲಿ ಮುಳುಗಿದ್ದ ಅವನಿಗೆ ಆಕೆ ಹಲೋ ಅಂದಂಗಾಯ್ತು. ಇಂಟರ್ನಲ್ ರಿಸಲ್ಟ್ ಪೇಪರ್ ನೋಡೋಕೆ ಹೋಗಿದ್ದ ಆತ ಆಕೆಯ ಹತ್ರ ಏನು ಮಾತಾಡ್ಬೋದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದ. ಬ್ರೇಕಲ್ಲಿ ಲೈಬ್ರರಿ ಹತ್ರ  ಬಂದ್ರೆ ಸಿಗ್ರಿ . ಏನೋ ಡೌಟಿದೆ ಅಂದ್ಲು. ಸರಿ ಅಂದ ಆತ. ಇಂಟರ್ನಲ್ಲು ಆಗಿ ಎರಡು ದಿನ ಕಳೆದ್ದರಿಂದ ಲೈಬ್ರರಿಯ ಹತ್ತಿರ ಹೆಚ್ಚಿಗೆ ಜನರಿರಲಿಲ್ಲ. ಮಾತುಕತೆ ಹೀಗೇ ಸಾಗಿತು.

ಆಕೆ:ಹೇಗಿತ್ತು ಎಕ್ಸಾಮು ?

ಈತ:(ತಲೆ ತಗ್ಗಿಸಿಕೊಂಡೇ)ಚೆನ್ನಾಗಿತ್ತು.

ಆಕೆ:ಯಾಕ್ರಿ ಸುಳ್ಳೇಳ್ತೀರಾ? ನಿಮ್ಮ ಪೇಪರ್ ನೊಡ್ಕೋಂಬಂದೆ. ಮೊದಲ ಇಂಟರ್ನಲ್ಲಲ್ಲಿ ೨೫ ತಗೊಂಡ ಸಬ್ಜೆಕ್ಟಿಗೆ ಈ ಸಲ ೧೫. ಪೇಪರ್ರೇನು ಅಷ್ಟು ಕಷ್ಟ ಇರ್ಲಿಲ್ವಲ

ಈತ:ಆಂ, ಹೌದಾ ?

ಆಕೆ: ಎಲ್ಲಿದೆ ನಿಮ್ಮ ಮನಸ್ಸು? ಏನಾಗಿದೆ ನಿಮ್ಗೆ. ಯಾವಾಗ್ಲೂ ನನ್ನೇ ನೋಡ್ತಾ ಕೂತಿರ್ತೀರ ಕ್ಲಾಸಲ್ಲಿ. ಇನ್ನೇನಾಗ್ಗುತ್ತೆ ? ನೋಡಕ್ಕೆ ಹಳ್ಳಿ ಗಮಾರನ ತರ ಇದೀಯ. ಪೇಟೆ ಹುಡ್ಗೀರನ್ನ ನೋಡ್ತಾ ಕೂತು ಬಿಟ್ರೆ ಆಯ್ತಾ ? ನಾವೂ ನಿನ್ನ ನೋಡ್ಕೋತಾ ಇರ್ಬೇಕಾ ? ನೀನೊಬ್ನೆ ಇಲ್ಲಿ ಓದೋಕೆ ಬರೋನು. ನಾವೆಲ್ಲಾ ಇಲ್ಲಿ ಸ್ಟೈಲು ಮಾಡೋಕೆ ಬರೋರು ಅಂದ್ಕೊಂಡಿದೀಯ ಹೇಗೆ ?

ಈತ: ರೀ. ಹಂಗೆಲ್ಲಾ ಇಲ್ಲ. ಛೇ .. ನೀವು ನನ್ನ ತಪ್ಪು ತಿಳೀತಾ ಇದೀರ..

ಆಕೆ: ಹಂಗೂ ಇಲ್ಲ. ಹಿಂಗೂ ಇಲ್ಲ. ಇನ್ನೊಂದ್ಸಲ ಕ್ಲಾಸಲ್ಲಿ ನನ್ನ ನೋಡ್ತಾ ಕೂತ್ರೆ ಸರಿಗಿರಲ್ಲ. ಓದೋಕೆ ಅಂತ ಬಂದಿದೀರ. ನಿಮ್ಮ ಪಾಡಿಗೆ ಅದ್ನ ಮಾಡ್ಕೊಂಡು ಹೋಗಿ ಅಂತ ದಡಕ್ಕನೆ ಎದ್ದು ಹೋದ್ಲು.. ಅಬ್ಬಾ ಅಂದ್ಕೊಂಡು ಕಣ್ಣು ಮುಚ್ಚಿ ಬಿಡ್ತಾನೆ. ಆದ್ರೆ ಆತ ಲೈಬ್ರರಿಯ ಹತ್ರ ಅಲ್ಲ. ಕ್ಲಾಸ ಹತ್ರವೇ ಇದ್ದಾನೆ. ಯಪ್ಪಾ ಎಂತಾ ಕಲ್ಪನೆಗಳು ಅಂದ್ಕೊಂಡ. 

ಅವನು ಕಲ್ಪನೆಗಳಲ್ಲಿ ಮುಳುಗಿದ್ದಾಗಲೇ ಆಕೆಯೂ ಆತನನ್ನು ಮಾತಾಡಿಸ್ಬೇಕು. ಆದ್ರೆ ಏನು ಮಾತಾಡೋದು ಅನ್ನೋ ಯೋಚನೇಲಿ ಮುಳುಗಿ ಹೋಗಿದ್ಲು.ಹಲೋ ಅಂದ ಆತ. ಹಲೋ ಅಂದ್ಲು ಆಕೆ.ನೀವು ಫ್ರೀ ಇದ್ರೆ ಕ್ಯಾಂಟೀನತ್ರ ಸಿಗ್ತೀರ ಬ್ರೇಕಲ್ಲಿ ? ಏನೋ ಮಾತಾಡ್ಬೇಕು ಅಂದ ಅವ. ಏನೋ ಹಳ್ಳಿ ಗಮಾರ ಅಂದ್ಕೊಂಡಿದ್ದೆ, ಆದ್ರೆ ಸಿಕ್ಕಾಪಟ್ಟೆ ಫಾರ್ವರ್ಡ್ ಇರೋ ತರ ಇದಾನೆ ಇವ. ಪರ್ವಾಗಿಲ್ಲ ಅಂತ ನಸುನಕ್ಕು ಹೂಂ ಅಂದ್ಲು ಈಕೆ. 

ಆತ: ನನಗೆ ನೆಸ್ ಕಾಫಿ ಮತ್ತು ನ್ಯೂಡಲ್ಸ್. ನಿಮ್ಗೆ ?

ಈಕೆ : ನಂಗೂ ಅದೇ(ಆಶ್ಚರ್ಯದಿಂದ)

ಆತ : ಮತ್ತೆ ಹೇಗಿದೀರ. ಹೇಗಾಯ್ತು ಇಂಟರ್ನಲ್ಸ್ ?

ಈಕೆ : ಓ, ಸೂಪರ್. 

ಆತ:  ಗುಡ್. ಅಂತೂ ಇಂಟರ್ನಲ್ಸ್ ಮುಗೀತು. ವೀಕೆಂಡಿಗೆ ಏನು ಪ್ಲಾನು ?

ಈಕೆ : ಓ ಗಾಡ್. ನಿಮ್ಮ ಮಾತು ಕೇಳ್ತಾ ಇದ್ರೆ ಆಶ್ಚರ್ಯ ಆಗುತ್ತೆ ರೀ. ನೀವು ಯಾವ್ದೋ ಹಳ್ಳಿಯವ ಅಂದ್ಕೊಂಡಿದ್ದೆ ನಿಮ್ಮ ಮೊದಲ ಕೆಲವು ದಿನಗಳ ವೇಷ ನೋಡಿ. ಪರ್ವಾಗಿಲ್ಲ ರೀ. ಸಿಕ್ಕಾಪಟ್ಟೆ ಫಾಸ್ಟಾಗಿ ಚೆಂಜ್ ಆಗಿದೀರ.

ಆತ: ಹುಡ್ಗೀರತ್ರ ಮಾತೇ ಆಡದವ ಇವತ್ತು ಹೇಗಿಷ್ಟು ಮಾತಾಡ್ತಾ ಇದಾನೆ ಅಂತಾನ ? 

ಈಕೆ: ಸೋರಿ. ಬೇಜಾರು ಮಾಡ್ಕೋಬೇಡಿ. ಆದ್ರೆ ಹೌದು.  ನೀವು ಎಲ್ರನ್ನೂ ನೀವು ಅಂತೀರ ಅಂತ ಎಲ್ಲಾ ಹಿಂದೆ ಬಿಟ್ಟು ಬಿದ್ದು ಬಿದ್ದು ನಗ್ತಾರೆ. ನೀವು ಬದಲಾಗೋದೆ ಇಲ್ಲಾ ಅಂದ್ಕೊಂಡಿದ್ದೆ. ಆದ್ರೆ ಇವತ್ತು ಆಶ್ಚರ್ಯ ಆಗ್ತಿದೆ. ಆದ್ರೂ ಯಾಕಿಂತ ದಿಢೀರ್ ಬದಲಾವಣೆ ?

ಆತ: ಹೆ ಹೆ. ಹಂಗೇನಿಲ್ಲ ರೀ. ಪರಿವರ್ತನೆ ಜಗದ ನಿಯಮ ಅಂತಾರಲ್ಲ. ಇಲ್ಲಿದ್ಮೇಲೆ ಇಲ್ಲಿಗೆ ತಕ್ಕ ಹಾಗೆ ಇರ್ಬೇಕಲ್ವಾ ? ಮತ್ತೆ ನಿಮ್ಮ ಫೇವರಿಟ್ ಚಾಟ್ ಯಾವ್ದು ? ನ್ಯೂಡಲ್ಸಾ ಅಂದ. ನಗುತ್ತಾ ?

ಈಕೆ: ಇಲ್ಲ ರೀ. ನಾನು ಈ ಪೇಟೆಲಿದ್ರೂ ನ್ಯೂಡಲ್ಸ್, ಬರ್ಗರ್, ಫಿಜ್ಜಾಗಳಿಗಿಂತ ಮಸಾಲೆಪುರಿ, ಪಾನಿಪೂರಿ, ನಮ್ಮಜ್ಜಿ ಮಾಡೋ ಚಿತ್ರಾನ್ನಗಳ್ನೇ ಜಾಸ್ತಿ ಇಷ್ಟಪಡ್ತೀನಿ

ಆತ: ಓ, ಪರ್ವಾಗಿಲ್ಲ. ಜಸ್ಟ್ ಅಟ್ ೨೫ ಅನ್ನೋ ಬರ್ಗರ್ ರೇಟಲ್ಲಿ ಎರಡ್ಮೂರು ಮಸಾಲೆಪುರಿ ತಿನ್ನಬೋದು ಅನ್ನೋ ಆಲೋಚನೆ.

ಈಕೆ: ಹೆ ಹೆ. ದುಡ್ಡಿನ ಆಲೋಚನೆ ಅಂತಲ್ಲ. ಆದ್ರು ಯಾಕೋ..

ಹೀಗೆ ಏನೆಲ್ಲಾ ಕಲ್ಪನೆಗಳು. ವಾ, ಏನಂದ್ಕೊಡಿದ್ದೆ.ಎಂಥಾ ಬದಲಾವಣೆ ಅಬ್ಬಾ ಅಂತ ಕಣ್ಮುಚ್ಚಿ ತೆರಿತಾಳೀ. ಆದ್ರೆ ಏನಿದು ? ಕ್ಯಾಂಟೀನಲ್ಲಿರಲಿಲ್ಲ. ಬದಲಿಗೆ ಆ ಹುಡುಗನ ಎದ್ರಿಗೇ ಕ್ಲಾಸ ಹತ್ರ ಇದಾಳೆ.

ಅಬ್ಬಾ ಎಂಥಾ ಕಲ್ಪನೆಗಳು ಅಂದ್ಕೊಂಡ್ಳು.

ಇಬ್ರೂ ವಾಸ್ತವಕ್ಕೆ ಬಂದು ಹಲೋ ಅನ್ನೋದು ಸರಿ ಹೋಯ್ತು. ವಾಸ್ತವಕ್ಕೆ ಬಂದರೂ ತಮ್ಮ ಕಲ್ಪನೆಗಳನ್ನು ನೆನೆಸಿಕೊಂಡು ಆಕೆಗೆ ನಗು ಬರ್ತಾ ಇದ್ರೆ, ಈತನಿಗೆ ಭಯ ಆಗ್ತಾ ಇತ್ತು. ಪರಸ್ಪರರ ಮುಖದಲ್ಲಿನ ಅನಿರೀಕ್ಷಿತ ಭಾವ ನೋಡಿ ಇಬ್ಬರಿಗೂ ಆಶ್ಚರ್ಯ ಆಯ್ತು.  ಏನೋ ಯೋಚ್ನೆ ಮಾಡ್ತಾ ಇದ್ದಂಗಿದೆ ಅಂದ್ಲು ಆಕೆ. ಈ ಇಲ್ಲಪ. ನೀವು ಏನೋ ಯೋಚ್ನೆ ಮಾಡ್ತಾ ಇದ್ದಂಗಿತ್ತು ಅಂದ ಇವ.

ಹೇ ಏನೂ ಇಲ್ಲಪ. ಮತ್ತೆ ಹೇಗಿದೀರ ,ಹೇಗಾಯ್ತು ಇಂಟರ್ನಲ್ಲು ಅಂದ್ಲು ಅವ್ಳು. ಅಷ್ಟು ಚೆನ್ನಾಗಾಗ್ಲಿಲ್ಲ ಅಂತ ಸಪ್ಪೆ ಮೋರೆ ಹಾಕಿದ ಅವ ನಿಮ್ದೆಂಗಾಯ್ತು ಅಂದ ? ನಾಟ್ ಬ್ಯಾಡ್ . ನಿಮ್ಗೊಂದು ರಿಕ್ವೆಸ್ಟ್. ಇಲ್ಲ ಅನ್ಬಾರ್ದು ಅಂದ್ಲು. ಎಲ್ಲಿ ನನ ಮುಖ ನೋಡ್ಬೇಡ ಅಂತಾಳೋ ಅಂತ ಹೆದರಿದ್ದ ಅವನು ಹೆದರುತ್ತಲೇ ಹೂಂ ಅಂದ. ಪ್ಲೀಸ್, ನೀವು ಅಂತ ಕರಿಬೇಡಿ ನನ್ನ. ಹೆಸರಿಟ್ಟು ಕರೀರಿ.. ಐ ಡೋಂಡ್ ಲೈಕ್ ಇಟ್. ನನ್ನೆಸ್ರು ಕರ್ರಮ್ಮ, ಬೆಳ್ಳಮ್ಮ, ಕುರುಡಮ್ಮ ಅಂತೇನು ಇಟ್ಟಿಲ್ಲ , ಲಕ್ಷಣವಾಗೇ ಇಟ್ಟಿದಾರೆ ಓಕೆ. ಅಂತ ನಗೋಕೆ ಶುರು ಮಾಡಿದ್ಲು. ಇವನಿಗೆ ಅಬ್ಬಾ ಎನಿಸಿ ಹೂಂ ಅಂದ.

ಅವತ್ತಿಂದ ನೀವು ಹೋಗಿ, ನೀನು ಆಯ್ತು. ಮೊಬೈಲ್ ನಂಬರ್ ಬದಲಾಯ್ತು. ಸಾದಾ ಪ್ಯಾಂಟ್  ಹೋಗಿ ಜೀನ್ಸ್, ಉದ್ದಕೂದಲ ಎಣ್ಣೆತಲೆಯ ಬದ್ಲು ಮಿಲ್ಟ್ರಿ ಕಟ್ ಬಂತು. ಟೈಟ್ ಜೀನ್ಸ್ ಹೋಗಿ ಚೂಡಿದಾರ, ನ್ಯೂಡಲ್ಸ್ ಬದ್ಲು ರೈಸ್ ಬಾತುಗಳೂ ಬಂದವು ! ಸೈಲೆಂಟಾಗಿ ಶುರುವಾದ ಈ ಬದಲಾವಣೆಗಳು ಅವರಿಗೇ ಆಶ್ಚರ್ಯ ಉಂಟು ಮಾಡಿದ್ವು. ಮಾತಾಡಿದ್ರೆ ಏನೋ ಕಳ್ದು ಹೋಗತ್ತೆ ಅಂತಿದ್ದ ಆತ ಈಕೆಯ ಪರಿಚಯವಾದಾಗಿನಿಂದ ಮೈಬಿಚ್ಚಿ ಎಲ್ಲರತ್ರನೂ ಮಾತಾಡೋಕೆ ಶುರುಮಾಡಿದ. ಮೊದಲ ಸೆಮ್ ಮುಗಿಯೋ ಹೊತ್ತಿಗೆ ಸ್ನೇಹಿತರೆಲ್ಲರೂ ಆಪ್ತರಾಗಿದ್ರು. ಹಾಗಾಗಿ   ಮಾತು ಮಾತು ಮಾತು.. ಕ್ಲಾಸಲ್ಲಿ,ಬ್ರೇಕಲ್ಲಿ, ಸೈಲೆಂಟಾಗಿರೋ ಲೈಬ್ರರೀಲೂ ಬಿಡದಂತೆ, ಕ್ಯಾಂಟೀನು, ಬಸ್ಸಲ್ಲಿ. ಅದೂ ಸಾಕಾಗದಂತೆ  ಫೋನ್, ವಾಟ್ಸಾಪು, ಫೇಸ್ಬುಕ್ಕು, ಜೀಚಾಟು ಹೀಗೆ ಸಿಕ್ಕಲ್ಲೆಲ್ಲಾ ಮಾತು. ಮನೆಯವರತ್ರ ಕಾಲು ಘಂಟೆ ಮಾತಾಡಿದ್ರೂ ತಲೆ ಚಿಟ್ಟಿಡಿಯುವಂತ ಆದ್ರೆ ಸ್ನೇಹಿತರತ್ರ ಮಾತಾಡ್ತಾ ಮೂರು ದಿನಕ್ಕೆ ಮೊಬೈಲು ರಿಚಾರ್ಜ್ ಮಾಡುವಷ್ಟು ಮಾತು.. ಹೀಗೆ ಒಂದಿನ ಮೊಬೈಲು, ಇಂಟರ್ನೆಟ್ಟಿಲ್ಲದಿದ್ರೆ ಜೀವನವೇ ಸಾಗೋಲ್ಲ ಅನ್ನೋಷ್ಟು ಮಾತು. ಬಿಡುವಿಲ್ಲದಷ್ಟು ಮಾತು. ನಂಗೆಂತೂ ಅರ್ಧ ಘಂಟೆ ಈ ಮೊಬೈಲಿಲ್ದೇ ಇರಕ್ಕಾಗಲ್ಲ ನಿಮ್ಗಿರಕಾಗತ್ತಾ ಅಂತಿದ್ಲು ಆಕೆ . ಒಂದರ್ಧ ಘಂಟೆನಾಡ್ರೂ ಮೊಬೈಲು ಹತ್ರ ಹಿಡ್ಕೋ. ಎಲ್ಲೆಲ್ಲೋ ಒಗಿಬೇಡ. ಮೆಸೇಜ್ ಮಾಡಿದ್ರೆ ಮಾರ್ನೆ ದಿನ ರಿಪ್ಲೈ ಮಾಡ್ತಿಯ!.. ಅನ್ನೋ ಬೈಗುಳಗಳು ಕಾಮನ್ನಾಗಿ ಹೋಗಿದ್ವು. ಉಫ್..ಯಾಕೋ ಕೆಲವೊಮ್ಮೆ ಮಾತಿಲ್ದೆ ಹೋದ್ರೆ ಏನೋ ಕಳಕೊಂಡಂತೆ , ಈ ಮಾತು ಮಾತಲ್ಲೇ ಎಲ್ಲೋ ಕಳೆದುಹೋದಂತೆ , ಮಾತಾಡ್ತಾ ಮಾತಾಡ್ತಾ ಅದ್ರಲ್ಲೇ ಮುಳುಗಿಹೋಗಿ ಮಾಡಬೇಕಾಗಿದ್ದ ಇನ್ನೇನೋ ಮಹತ್ಕಾರ್ಯಗಳನ್ನು ಮಿಸ್ ಮಾಡ್ಕೊಳ್ಳುತ್ತಿರುವಂತೆಯೂ ಅನಿಸುತ್ತಿತ್ತು.

ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳೀಬೇಕು, ಸಂಸ್ಕೃತ ಎಂ.ಎ ಮಾಡ್ಬೇಕು. ಸಂಗೀತ, ಭರತನಾಟ್ಯ ಕಲೀಬೇಕು ಅಂತ ಎಷ್ಟೆಲ್ಲಾ ಆಸೆಗಳಿದ್ದ ನನ್ನ ಇಲ್ಲಿ ತಂದು ಸೇರ್ಸಿದಾರೆ ನನ್ನ ತಂದೆತಾಯಿಗಳು. ಅವ್ರಿಗೆ ಎಷ್ಟು ಬಡ್ಕೊಂಡು, ಬೇಡ್ಕೊಂಡ್ರೂ ಆರ್ಥ ಆಗೋಲ್ಲ.  ಅವೆಲ್ಲಾ ಟೈಂ ವೇಸ್ಟು. ಅದ್ರಿಂದ ಹೊಟ್ಟೆ ತುಂಬಲ್ಲ ಅಂತಾರೆ. ಎಲ್ಲಾದ್ರೂ ಅವಕಾಶ ಸಿಕ್ರೆ ನಾನು ಈ ಕೋರ್ಸನ್ನ ಬಿಟ್ಟು ಅದಕ್ಕೇ ಹೋಗ್ಬಿಟ್ತೀನಿ ಅಂತಿದ್ಲು ಆಕೆ. ಓ ಹೌದಾ. ನಮ್ಕಡೆ ಹಾಗೇನಿಲ್ಲ. ನಮ್ಮ ತಂದೆ ತಾಯಿ, ನೀನೂ ನಮ್ಮ ಜೊತೆ ಕೂಲಿಗೆ ಬಾ ಅಂತಾರೆ. ಆದ್ರೆ ನಮ್ಮೂರಲ್ಲಿ ಸರಿಯಾಗಿ ಮಳೆ ಇಲ್ದೆ ಮೂರು ವರ್ಷ ಆಯ್ತು. ಫುಲ್ ಕಷ್ಟ. ಹಂಗಾಗಿ ನಾನು ಇಲ್ಲೇ ಓದಿ ಒಂದು ಒಳ್ಳೆ ಕೆಲ್ಸ ಹಿಡಿಬೇಕು ಅಂತಿದೀನಿ ಅಂತಿದ್ದ ಈತ. ಹೀಗೆ ಭಿನ್ನ ಧೃವಗಳಾದ್ರೂ ಏನೋ ಸೆಳೆತ ಇಬ್ಬರನ್ನೂ ಹಿಡಿದಿಟ್ಟಿತ್ತು. ಮೊದಲ್ನೇ ಸೆಮ್ಮು ಮುಗಿದು ರಜ ಬಂದಾಗ ಈ ರಜ ಯಾಕೆ ಬರತ್ತೋ ಅನಿಸಿಬಿಟ್ಟಿತ್ತು. ರಜಾಕ್ಕೆ ಊರಿಗೆ ಬಂದವನಿಗೆ ಮೊದಲೆರೆಡು ದಿನಗಳು ಹೇಗೋ ಕಳೆದುಹೋದ್ವು. ಆದ್ರೆ ಮೂರ್ನೇ ದಿನದಿಂದ ದಿನವೇ ಪಾಸಾಗ್ತಿಲ್ಲ. ಊರಲ್ಲಿ ಮೊಬೈಲ್ ನೆಟ್ವರ್ಕು ಸಿಗೋದೇ ಕಷ್ಟ. ಅಂತದ್ರಲ್ಲಿ ಇಂಟರ್ನೆಟ್ಟೆಲ್ಲಿಂದ ಬರ್ಬೇಕು ? ಎಲ್ಲೋ ಗುಡ್ಡ ಹತ್ತಿದ್ರೆ ಒಂದು ಪಾಯಿಂಟ್ ನೆಟ್ವರ್ಕು ಸಿಗ್ತಿತ್ತು. ಅದ್ರಲ್ಲೇ ಆಕೆಗೆ ಕರೆ ಮಾಡೋಕೆ ಸಿಕ್ಕಾಪಟ್ಟೆ ಸಲ ಟ್ರೈ ಮಾಡ್ತಿದ್ದ. ಆದ್ರೆ ಒಂದು ಸಲವೂ ಆಕೆ ಫೋನ್ ಎತ್ತುತ್ತಿರಲಿಲ್ಲ. ಸುಮಾರು ಸಲ ಸ್ವಿಚ್ ಆಫ್ ಬರ್ತಿತ್ತು. ಕೆಲೋ ಸಲ ರಿಂಗಾದ್ರೂ ಯಾರೂ ಎತ್ತುತ್ತಿರಲಿಲ್ಲ. ಆಕೆಗೆ ಏನಾಯ್ತು ಅಂತ ನೆನೆನೆನೆದೇ ಬೇಜಾರಾಗ್ತಿತ್ತು. ಕೆಲೋ ಗೆಳೆಯರನ್ನ ಕೇಳಿದ್ರೂ ಗೊತ್ತಿಲ್ಲ ಗುರೂ ಅನ್ನೋ ಉತ್ರವೇ ಸಿಗ್ತು. ಅಷ್ಟಕ್ಕೂ ರಜದಲ್ಲಿ ಯಾರು ಎಲ್ಲಿ ಹೋಗ್ತಾರೆ ಅಂತ ಯಾರು ತಲೆ ಕೆಡಿಸ್ಕೋತಾರೆ ? ಹುಡ್ಗಿಯರಿಗೆ ಫೋನ್ ಮಾಡಿದ್ರೆ ಗೊತ್ತಾಗ್ತಿತ್ತೇನೋ. ಆದ್ರೆ ಯಾಕೋ ಮನಸ್ಸು ಬರ್ಲಿಲ್ಲ. ಊರಿಗೋಕೋಕೆ ಮುಂಚಿನ ದಿನ ನಡೆದ ಸಂಭಾಷಣೆ ನೆನಪಿಗೆ ಬಂತು..

ನಿನ್ನಿಷ್ಟದಂತೆ ನೀನು ಇಲ್ಲಿ ಯಾವ್ದೋ ಕೆಲ್ಸ ಹಿಡಿತೀಯ. ಮುಂದೆ ಅಂದಿದ್ಲು ಒಂದ್ಸಲ ಮಾತಾಡ್ತಾ ಆಡ್ತಾ ಆಕೆ. ಮುಂದೆ ಮದ್ವೆ ಅಂದಾಗ ಇಬ್ರೂ ನಕ್ಕಿದ್ರು. ಯಾರ್ನ ಅಂದಾಗ ನಿನ್ನೇ ಅನ್ನಬೇಕು ಅಂತ ಸಾಕಷ್ಟು ಮನಸ್ಸಾದ್ರೂ ಯಾಕೋ ಬಾಯಿ ಬಂದಿರಲಿಲ್ಲ. ಸುಮ್ನೆ ನಕ್ಕಿದ್ದ. ನೀನೋ ಆಮೇಲ್ಯಾವಾಗಾದ್ರೂ ಹಳ್ಳಿಗೆ ಹೋಗಿ ಸೆಟ್ಲ್ ಆಗೋಣ ಅಂತಿರ್ತೀಯ. ಆದ್ರೆ ಇಲ್ಲಿನ ಹುಡ್ಗೀರಿಗೆ ಹಳ್ಳಿಗೋಗೋಕೆ ಇಷ್ಟ ಇರಲ್ಲ. ಹಂಗಾಗಿ ಹಳ್ಳಿಲಿರೋರ್ನ ಅಥವಾ ಹಳ್ಳಿ ಬಗ್ಗೆ ಇಷ್ಟ ಇರೋರ್ನೇ ಮದ್ವೆ ಆಗೋದು ಬೆಟರ್ ಅಂತ ಅವಳೂ ನಕ್ಕಿದ್ಲು. ಆ ಮಾತಿನ ಇನ್ನೊಂದು ಅರ್ಥ ಅವನಿಗೆ ಆಗಿರದಿದ್ರೂ ಅವನೂ ಹೌದೌದು ಅಂತ ನಕ್ಕಿದ್ದ. ಹಳ್ಳಿಲಿರೋರ್ನ ಮದ್ವೆ ಆಗು ಅಂದ್ಲು ಅಂದ್ರೆ ನನ್ನ ಮರೆತುಬಿಡು, ನನ್ನಂತೋರ್ನ ಹಳ್ಳಿಯವನಾದ ನೀನು ಪ್ರೀತಿಸೋದು ತಪ್ಪು ಅನ್ನೋ ಅರ್ಥದಲ್ಲಿ ಅವಳು ಅಂದಿದ್ಲಾ ಅನ್ನೋ ಸಂದೇಹ ಊರಲ್ಲಿ ಖಾಲಿ ಕೂತಿದ್ದ ಇವನ ಮನಸ್ಸಲ್ಲಿ ಕೊರಿತಾ ಇತ್ತು. ಖಾಲಿ ಮನಸ್ಸು ದೆವ್ವದ ಆಸ್ಥಾನ ಅಂತಾರೆ. ಹಾಗಾಗಿ ನೂರೆಂಟು ಯೋಚನೆಗಳು.ಅದ್ನೇ ಬಗೆಹರಿಸಿಕೊಳ್ಳೋಣ ಅಂತ ಸುಮಾರು ಸಲ ಗುಡ್ಡ ಹತ್ತಿ ಪ್ರಯತ್ನ ಪಟ್ರೂ ಆಗಿರಲಿಲ್ಲ. ಮಗನ ಉದಾಸಮುಖ ನೋಡಿ ಏನಾಯ್ತು ಅಂತ ಚಿಂತೆ ಮಾಡೋಕೆ ಶುರು ಮಾಡಿದ್ದ ಅಪ್ಪ, ಅಮ್ಮನ್ನ ನೋಡಿ ಈತ ಖುಷಿಯಾಗಿದ್ದಂತೆ ತೋರಿಸಿಕೊಳ್ಳತೊಡಗಿದ. ಆದರೆ ನಗೆಯ ಮುಖವಾಡದ ಹಿಂದೆ ಅಳು ಸಂದರ್ಭಕ್ಕೆ ಕಾದು ವಿಸ್ಫೋಟಿಸುವ ಜ್ವಾಲಾಮುಖಿಯಂತೆ ಕಾಯುತ್ತಾ ಕುಳಿತಿತ್ತು. ಮನೆಯವರೆಲ್ಲಾ ಪಕ್ಕದ ಹಳ್ಳಿಯ ಮದುವೆಗೆ ಹೋಗಬೇಕಾಗಿ ಬಂತು. ಎಷ್ಟು ಒತ್ತಾಯ ಮಾಡಿದ್ರೂ ಹೋಗದೇ, ಏನೋ ನೆಪ ಹೇಳಿ ತಪ್ಪಿಸಿಕೊಂಡಿದ್ದ.  ಮಧ್ಯಾಹ್ನದ ತನಕವೂ ಹೊದ್ದು ಮಲಗಿದ್ದ ಈತ ಸಂಜೆಯ ಹೊತ್ತು ಬೇಜಾರು ಬಂದು ತನ್ನ ನೆಚ್ಚಿನ ತಾಣ ಊರಕೆರೆಯ ಬಳಿ ಬಂದಿದ್ದ.

ಅಲ್ಲಿನ ಸೂರ್ಯಾಸ್ತ, ಹಾರುಹಕ್ಕಿಗಳ ನಾನಾ ರೂಪ, ಹಕ್ಕಿಗಳ ನಿನಾದವನ್ನ ಕೇಳುತ್ತಾ ಮೈಮರೆತವನಿಗೆ ಹೊತ್ತು ಕಳೆದು ರಾತ್ರಿಯಾಗಿದ್ದೇ ತಿಳಿಯಲಿಲ್ಲ. ಹೊತ್ತಾದರೂ ಎಲ್ಲಿ ಹೋಗಬೇಕು ? ಯಾಕೆ ಹೋಗಬೇಕು ? ಪ್ರೀತಿಯೇ ಕೈಸಿಗದ ಮೇಲೆ ಬದುಕಿದ್ದೂ ಏನು ಫಲ. ಇಲ್ಲೇ ಸತ್ತು ಬಿಡಲೇ ಎಂಬ ಆಲೋಚನಾ ತರಂಗಗಳು ಮೂಡತೊಡಗಿದ್ದವು. ಆದ್ರೂ ಸಾಯೋ ನೆನಪಾದಾಗೆಲ್ಲಾ ತನ್ನ ಮೇಲೆ ನೂರೆಂಟು ಕನಸು ಕಂಡ ತಂದೆ, ತಾಯಿಯ ಪ್ರೀತಿ ನೆನಪಾಯ್ತು. ಮಗ ಬಂದಿದ್ದಾನೆ ಅಂತ ತಾಯಿ ಮಾಡಿದ ಕಜ್ಜಾಯ, ಕಡುಬುಗಳನ್ನ ನೆನೆದು ಬಾಯಲ್ಲಿ ನೀರು ಬಂತು. ಬರಲಿರೋ ಆಲೆಮನೆ ಬೆಲ್ಲದ  ನೆನಪು ಬಂದು ಬಾಲ್ಯದ ಮಧುರ ನೆನಪುಗಳು ಮರುಕಳಿಸಿದ್ವು. ಚಿಕ್ಕವನಿದ್ದಾಗ ಈಜಿ ತೇಲಿದ ಕೆರೆಯಲ್ಲಿ ಈಗ ಹೆಣವಾಗಿ ಕೊಳೆತು ತೇಲೋ ಕಲ್ಪನೆಯೇ ಅಸಹ್ಯವೆನಿಸಿತು. ಸಾಯ್ಲೇಬೇಕೂಂದ್ರೆ ಒಂದು ಕೊನೆ ಬಾರಿ ಅವನ್ನೆಲ್ಲಾ ತಿಂದು, ಆಲೆಮನೆ ಸವಿದು ಸಾಯೋಣ. ಗಡಿಬಿಡಿ ಯಾಕೆ ಅನಿಸ್ತು. ಸರಿ ಆಯ್ತು ಅಂದ್ಕೊಂಡ. ಮತ್ತೊಂದು ಕ್ಷಣದಲ್ಲಿ ನನಗಾಗಿ ಇಷ್ಟೊಂದು ಕಷ್ಟ ಪಟ್ಟ ತಂದೆತಾಯೀನ ಒಂದು ಸುಸ್ಥಿತಿಗೆ ತಲುಪಿಸ್ಬೇಕು. ಹಂಗಾಗಿ ನಾನು ವಿದ್ಯಾಭ್ಯಾಸ ಮುಗಿಸಿ ಕೆಲ್ಸ ಹಿಡಿದು ಕೆಲ ವರ್ಷದವರೆಗೂ ಸಾಯೋಲ್ಲ ಅಂದ್ಕೊಂಡ. ಮತ್ತೊಂದು ಕ್ಷಣದಲ್ಲಿ ಮತ್ತೊಂದು ಆಲೋಚನೆ ಮೂಡಿತು. ನನ್ನ ಹುಟ್ಟುಸ್ತಾ ನೀನು ಹುಟ್ಟುತೀಯೇನಪ್ಪಾ ಅಂತ ಕೇಳೇನೂ ದೇವ್ರು , ಅಪ್ಪ ಅಮ್ಮ ಹುಟ್ಟುಸ್ಲಿಲ್ಲ. ಹಾಗಾಗಿ ನಾನು ಸಾಯೋವಾಗ ಅವ್ರಿಗೆ ಕೇಳದೇ ಹೇಗೆ ಸಾಯ್ಲಿ ? ಅವ್ರಾಗೇ ಸಾಯಿಸೋವರ್ಗೂ ಅಥವಾ ಸಾಯಿ ಅಂತ ಹೇಳೋವರ್ಗೂ ಸಾಯೋ ನೈತಿಕ ಹಕ್ಕು ನನಗಿಲ್ಲ ಅಂದ್ಕೊಂಡ. ಅಷ್ಟಕ್ಕೂ ಪ್ರೀತಿ ಸಿಗಲಿಲ್ಲ ಅಂತೇಕೆ ಅಂದ್ಕೋಬೇಕು. ಅವಳು ರಜಾ ಮುಗಿದ ಮೇಲೆ ಸಿಕ್ಕಿದ್ರೂ ಸಿಗಬಹುದು. ಒಂದೊಮ್ಮೆ ಅವಳು ಅವಳಿಷ್ಟದಂತೆಯೇ ಕೋರ್ಸ್ ಬಿಟ್ಟು ಬೇರೆಡೆ ಹೋಗಿದ್ದರೂ ತೊಂದರೆಯೇನಿಲ್ಲ. ಕನಸುಗಳ ಕೊಂದು ಬದುಕೋದೂ ಒಂದು ಬದುಕೆ ? ಒಂದೊಮ್ಮೆ ಅವಳು ಅಲ್ಲೇ ಇದ್ದು, ನಿನ್ನ ಪ್ರೀತಿಸೊಲ್ಲ ಅಂದರೆ ? ಅಂದರೇನಾಯ್ತು ? ಪ್ರೀತಿ ಜೀವನದ ಒಂದು ಭಾಗವೇ ಹೊರತು ಪ್ರೀತಿಯೇ ಜೀವನವಲ್ಲವಲ್ಲ. ಏನಾದರಾಗಲಿ , ನಾಳೆಯನ್ನು ನಾಳೆ ನೋಡೋಣ ಇವತ್ತಿನದು ಇವತ್ತಿಗೆ ಅಂತ ಎದ್ದು ಮನೆಯತ್ತ ಹೆಜ್ಜೆ ಹಾಕಿದ. ಕೆರೆಯಲ್ಲಿ ಈಜುತ್ತಿದ್ದ ಚಂದ್ರ ನಗುತ್ತಿದ್ದ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಚೆನ್ನಾಗಿದೆ ಪ್ರಶಸ್ತಿ….

Venkatesh
Venkatesh
10 years ago

Wah ! sooper !!

prashasti
10 years ago

thank u 🙂

3
0
Would love your thoughts, please comment.x
()
x