ಎರಡು ಕವಿತೆಗಳು: ಪ್ರಮೋದ್ ಬಿ.ಸಿ., ಅಕುವ

 

ನನ್ನ ಹಾಡಿನ ಪಲ್ಲವಿ 

ಸ್ನೇಹದ ಸವಿನೆನಪಿನ ಇಂಪಾದ ಸ್ವರ ನೀನು,
ಬಯಸಿರುವೆ ನಿನ್ನ ವಾಣಿಯ ಮಾಯೆಯನು;

ನನ್ನ ರಹಸ್ಯ ಹೊತ್ತಿಗೆಯ ಸಾರಾಂಶ ನೀನು,
ಲೇಖನಿಯು ಕಾತರಿಸಿದೆ ಮೊದಲ ಅಕ್ಷರವನು;

ಇಳಿಸಂಜೆಯ ಮಧುರವಾದ ಕಲ್ಪನೆ ನೀನು,
ಕಾದಿರುವೆ ನಿನ್ನ ಒಲವಿನ ಆಗಮನವನು;

ಮುಂಬರುವ ಕ್ಷಣದಲ್ಲಿ ನಿನ್ನ ಕಾಣುವೆನು,
ಕಬಳಿಸಿರುವ ಪುಟ್ಟ ಹೃದಯದ ಕೋಣೆಯಲಿ;

ಬರೆಯುವೆ ನನ್ನ ಜೀವಾಳದ ಸುಮಧುರ ಹಾಡನು
ಆಗುವೆಯಾ ಆ ಹಾಡಿನ ಚರಣಕ್ಕೆ ಪಲ್ಲವಿ ನೀನು.
– ಬಿ. ಸಿ. ಪ್ರಮೋದ.

 

 

 

 

 

 

ಮಂಥನ 

ಆಡದ ಮಾತೊಂದು ಹುದುಗಿದೆ 
ಮನದೊಳಗೆ 
ಸಾವಿರ ಮಾತಲ್ಲಿ ಸಮಜಾಯಿಸಿದರೂ  
ಸಾಂತ್ವನ ಗೊಳ್ಳಲಿಲ್ಲ !

ಮಂದರವ ಕಡೆಗೋಲು ಮಾಡಿ 
ಹದ ಹದವಾಗಿ ಕಡೆದೆ 
ತಲವ ಬಿಟ್ಟು ಕದಲಲಿಲ್ಲ !
ಒಳಗಿನ ವಿಷವು ಸರಿಯಲಿಲ್ಲ !

ಮೌನವ ಕಲಕಿ ರಾಡಿ ಮಾಡಿದೆ 
ಎದೆಯ ಬಗೆ ಬಗೆಯಲ್ಲಿ ಬಗೆದೆ 
ಮಂಥಿಸಿ  ಮಥಿಸಿ ಚಿಂತೆಗೀಡಿಕ್ಕಿ 
ಧ್ಯಾನದಲ್ಲೂ ಇಲ್ಲವಾದೆ ! 

ಆಡದ ಮಾತೊಂದು ಸಿಡಿಯಲಿಲ್ಲ 
ತಿರಳು ತೇದು ಸುಗಂಧಕ್ಕೆ ಹವಣಿಸಿದೆ 
ಪುಟವಿಕ್ಕಿ ಕಾಯಿಸಿದೆ ಹೊಳೆಯಲಿಲ್ಲ 
ಕಾರಣದ ಹುಡುಕಾಟದಲ್ಲಿ ಕಳೆದು ಹೋದೆ !

ಶಬ್ದಗಳಿಗಿಳಿಸಲು ಶತ ವ್ಯಥೆ ಪಟ್ಟೆ 
ಪದಗಳ ಜೋಡಿಸಿ  ಸಾಲುಗಳಲ್ಲಿ ನೆಟ್ಟೆ 
ಚಿಗುರೊಡೆದು ಮಾತಾಡಿತು 
ಹೂ ಬಿಟ್ಟು ನಲಿದಾಡಿತು 
ಆಡದ ಮಾತೊಂದು ಬೇರುಗಳಲ್ಲಿ ಹುದುಗಿತು !
ಕಾಂಡಗಳ ತೊಗಟೆಯಲ್ಲಿ  ಮರೆಯಾಯಿತು !

ಆಡದ ಮಾತಿಂದು ಗಿಡಕ್ಕೆ ಗೊಬ್ಬರವಾಯಿತು 
ಕವಿತೆಗೆ ತಿರುಳಾಯಿತು !! 
ಕವಿತೆ ಉದ್ಭವವಾಯಿತು !!

ಅಶೋಕ್ ಕುಮಾರ್ ವಳದೂರು   (ಅಕುವ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x