ನಾವು ಯಶಸ್ಸಿನ ಕಥೆಗಳನ್ನು ಓದುವಾಗ ಅಥವಾ ಕೇಳುವಾಗ, ನಮಗೆ ಕೇವಲ ಅಂತಿಮ ಫಲಿತಾಂಶ ಮಾತ್ರ ಕಾಣಿಸುತ್ತದೆ. ಆ ವ್ಯಕ್ತಿ ಪಡೆದ ಪದಕ, ಗಳಿಸಿದ ಹಣ ಅಥವಾ ಏರಿದ ಎತ್ತರ ನಮ್ಮ ಕಣ್ಣಿಗೆ ಕಾಣುತ್ತದೆ. ಆಗ ಸಹಜವಾಗಿಯೇ ನಾವು, “ಅವರು ತುಂಬಾ ಅದೃಷ್ಟವಂತರು” ಎಂದು ಅಂದುಕೊಳ್ಳುತ್ತೇವೆ. ಆದರೆ ಆ ಅದೃಷ್ಟದ ಹಿಂದೆ ಹಗಲಿರುಳು ಸುರಿಸಿದ ಬೆವರಿನ ಹನಿಗಳು ಮತ್ತು ಯಾರಿಗೂ ಕಾಣದಂತೆ ಮಾಡಿದ ಪ್ರಾಮಾಣಿಕ ಪ್ರಯತ್ನ ನಮಗೆ ಕಾಣಿಸುವುದಿಲ್ಲ. ವಾಸ್ತವದಲ್ಲಿ, ಜಗತ್ತಿನಲ್ಲಿ ಅದೃಷ್ಟ ಎನ್ನುವುದು ಲಾಟರಿ ಟಿಕೆಟ್ ಅಲ್ಲ, ಅದು ಪ್ರಾಮಾಣಿಕ ಪ್ರಯತ್ನಕ್ಕೆ ಸಿಗುವ ಪ್ರತಿಫಲವಷ್ಟೇ.
ಪ್ರಾಮಾಣಿಕ ಪ್ರಯತ್ನ ಎಂದರೆ ಕೇವಲ ಕೆಲಸ ಮಾಡುವುದಲ್ಲ. ಜನರು ನೋಡುತ್ತಿದ್ದಾರೆ ಎಂದು ತೋರಿಕೆಗಾಗಿ ಮಾಡುವ ಕೆಲಸಕ್ಕೂ, ಮನಸ್ಸಿಟ್ಟು ಶ್ರದ್ಧೆಯಿಂದ ಮಾಡುವ ಕೆಲಸಕ್ಕೂ ಆಕಾಶ ಭೂಮಿಯಷ್ಟು ವ್ಯತ್ಯಾಸವಿದೆ. ಪ್ರಾಮಾಣಿಕ ಪ್ರಯತ್ನ ಎಂದರೆ, ಫಲಿತಾಂಶ ಏನಾಗುತ್ತದೆಯೋ ಎಂಬ ಭಯವಿಲ್ಲದೆ, “ನನ್ನ ಕೈಲಾದ ಶೇ.100 ರಷ್ಟು ಶ್ರಮವನ್ನು ನಾನು ಹಾಕುತ್ತೇನೆ, ಉಳಿದದ್ದು ದೈವೇಚ್ಛೆ” ಎಂದು ಕೆಲಸಕ್ಕೆ ಧುಮುಕುವುದು. ಇಲ್ಲಿ ಮೋಸಕ್ಕೆ, ಸೋಮಾರಿತನಕ್ಕೆ ಅಥವಾ ಅಡ್ಡದಾರಿಗಳಿಗೆ ಜಾಗವಿರುವುದಿಲ್ಲ. ಯಾರು ತಮಗೆ ತಾವೇ ಸುಳ್ಳು ಹೇಳಿಕೊಳ್ಳದೆ ಕೆಲಸ ಮಾಡುತ್ತಾರೋ, ಅವರೇ ನಿಜವಾದ ಸಾಧಕರು.
ಇಂದಿನ ವೇಗದ ಜಗತ್ತಿನಲ್ಲಿ ಅನೇಕರು ಅಡ್ಡದಾರಿಗಳ ಮೂಲಕ ಯಶಸ್ಸು ಪಡೆಯಲು ನೋಡುತ್ತಾರೆ. ಪರೀಕ್ಷೆಯಲ್ಲಿ ನಕಲು ಮಾಡಿ ಪಾಸಾಗಬಹುದು, ಲಂಚ ಕೊಟ್ಟು ಕೆಲಸ ಪಡೆಯಬಹುದು ಅಥವಾ ಸುಳ್ಳು ಹೇಳಿ ವ್ಯಾಪಾರ ಮಾಡಬಹುದು. ಇವೆಲ್ಲವೂ ತಕ್ಷಣಕ್ಕೆ ಗೆಲುವಿನಂತೆ ಕಾಣಿಸಬಹುದು. ಆದರೆ ನೆನಪಿಡಿ, ಅಡ್ಡದಾರಿಯಲ್ಲಿ ಬಂದ ಗೆಲುವು ಮಂಜಿನ ಹನಿಯಂತೆ, ಅದು ಸೂರ್ಯ ಬಂದ ತಕ್ಷಣ ಕರಗಿ ಹೋಗುತ್ತದೆ. ಆದರೆ ಪ್ರಾಮಾಣಿಕ ಪ್ರಯತ್ನದಿಂದ ಕಟ್ಟಿದ ಬದುಕು ಬಂಡೆಯಂತೆ ಗಟ್ಟಿಯಾಗಿರುತ್ತದೆ. ಅದಕ್ಕೆ ಸಮಯ ಹಿಡಿಯಬಹುದು, ಆದರೆ ಅದು ಶಾಶ್ವತವಾಗಿರುತ್ತದೆ.
ನಿಸರ್ಗವೇ ನಮಗೆ ಪ್ರಾಮಾಣಿಕತೆಯ ಪಾಠ ಕಲಿಸುತ್ತದೆ. ಒಬ್ಬ ರೈತ ತನ್ನ ಜಮೀನಿನಲ್ಲಿ ಉಳುವಾಗ ಅಥವಾ ಬಿತ್ತುವಾಗ ಸೋಮಾರಿತನ ಮಾಡಿದರೆ ಅಥವಾ ಭೂಮಿಗೆ ಮೋಸ ಮಾಡಿದರೆ, ಭೂಮಿತಾಯಿ ಎಂದಿಗೂ ಒಳ್ಳೆಯ ಫಸಲನ್ನು ನೀಡುವುದಿಲ್ಲ. ರೈತ ಎಷ್ಟು ಪ್ರಾಮಾಣಿಕವಾಗಿ ಮಣ್ಣಿನ ಸೇವೆ ಮಾಡುತ್ತಾನೋ, ಅಷ್ಟೇ ಸಮೃದ್ಧವಾದ ಬೆಳೆ ಅವನ ಕೈ ಸೇರುತ್ತದೆ. ಜೀವನವೂ ಅಷ್ಟೇ, ನಾವು ನಮ್ಮ ಕೆಲಸದಲ್ಲಿ ಎಷ್ಟು ಪ್ರಾಮಾಣಿಕತೆಯನ್ನು ಬಿತ್ತುತ್ತೇವೆಯೋ, ಅಷ್ಟೇ ದೊಡ್ಡ ಯಶಸ್ಸನ್ನು ಕೊಯ್ಲು ಮಾಡುತ್ತೇವೆ.
ಪ್ರಾಮಾಣಿಕ ಪ್ರಯತ್ನದ ಅತ್ಯಂತ ಸುಂದರವಾದ ಲಾಭವೆಂದರೆ ಆತ್ಮತೃಪ್ತಿ. ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟರೂ ಸೋಲಬಹುದು. ಆದರೆ ಆ ಸೋಲಿನಲ್ಲೂ ಒಂದು ನೆಮ್ಮದಿ ಇರುತ್ತದೆ. “ನಾನು ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ, ನನ್ನಲ್ಲಿ ಯಾವುದೇ ತಪ್ಪಿಲ್ಲ” ಎಂಬ ಭಾವನೆ ರಾತ್ರಿ ನೆಮ್ಮದಿಯ ನಿದ್ದೆ ಕೊಡುತ್ತದೆ. ಆದರೆ ಪ್ರಯತ್ನವನ್ನೇ ಪಡದೆ ಅಥವಾ ಅರೆಮನಸ್ಸಿನಿಂದ ಪ್ರಯತ್ನ ಪಟ್ಟು ಸೋತರೆ, “ಅಯ್ಯೋ, ನಾನು ಇನ್ನೂ ಸ್ವಲ್ಪ ಕಷ್ಟಪಡಬೇಕಿತ್ತು” ಎಂಬ ಪಶ್ಚಾತ್ತಾಪ ಜೀವನಪೂರ್ತಿ ಕಾಡುತ್ತದೆ. ಸೋಲು ಕೆಟ್ಟದ್ದಲ್ಲ, ಆದರೆ ಅಪ್ರಾಮಾಣಿಕ ಪ್ರಯತ್ನ ಕೆಟ್ಟದ್ದು.
ನಾವು ನಮ್ಮ ಪ್ರಯತ್ನದಲ್ಲಿ ಮೋಸ ಮಾಡಬಾರದು. ನಾವು ಬಿಲ್ಲುಗಾರನಂತೆ, ಗುರಿಯತ್ತ ಬಾಣ ಬಿಡಬೇಕು, ಬಿಲ್ಲನ್ನು ಎಷ್ಟು ಬಲವಾಗಿ ಎಳೆಯಬೇಕು ಎಂಬುದು ನಮ್ಮ ಕೈಯಲ್ಲಿದೆ. ಆದರೆ ಒಮ್ಮೆ ಬಾಣ ಬಿಟ್ಟ ಮೇಲೆ ಅದು ಎಲ್ಲಿ ಹೋಗಿ ತಲುಪುತ್ತದೆ ಎಂಬುದು ಗಾಳಿ ಮತ್ತು ವಾತಾವರಣದ ಮೇಲೆ ನಿಂತಿರುತ್ತದೆ. ಆದರೆ ಪ್ರಾಮಾಣಿಕವಾಗಿ ಗುರಿ ಇಟ್ಟವನ ಬಾಣ, ಇಂದಲ್ಲ ನಾಳೆ ಗುರಿ ಮುಟ್ಟಿಯೇ ತೀರುತ್ತದೆ.
ಗೆಲುವು ಎಂದರೆ ಕೇವಲ ಜಗತ್ತು ಕೊಡುವ ಟ್ರೋಫಿ ಅಲ್ಲ. ಕನ್ನಡಿ ಮುಂದೆ ನಿಂತಾಗ, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು “ನಾನು ಯಾರಿಗೂ ಮೋಸ ಮಾಡಿಲ್ಲ, ನನ್ನ ಕೆಲಸವನ್ನು ನಾನು ಶ್ರದ್ಧೆಯಿಂದ ಮಾಡಿದ್ದೇನೆ” ಎಂದು ಹೇಳಿಕೊಳ್ಳುವ ಧೈರ್ಯ ಇದೆಯಲ್ಲ, ಅದುವೇ ನಿಜವಾದ ಗೆಲುವು. ಆ ಗೆಲುವಿಗೆ ಮೊದಲ ಮೆಟ್ಟಿಲು ಮತ್ತು ಏಕೈಕ ಮೆಟ್ಟಿಲು ನಿಮ್ಮ ಪ್ರಾಮಾಣಿಕ ಪ್ರಯತ್ನ.
-ಜಿ. ಎಸ್. ಶರಣು
