ಭಾರತದ ಸಂವಿಧಾನವು ಪ್ರತಿ ಮಕ್ಕಳಿಗೂ – ಜಾತಿ, ಧರ್ಮ, ಲಿಂಗ ಅಥವಾ ವರ್ಗದ ವ್ಯತ್ಯಾಸವಿಲ್ಲದೆ – ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲ ಹಕ್ಕು ಎಂದು ಘೋಷಿಸುತ್ತದೆ. ಈ ಹಕ್ಕು ಶಾರೀರಿಕ, ಬೌದ್ಧಿಕ, ಮತ್ತು ಭಾವನಾತ್ಮಕ ಅಡಚಣೆಗಳನ್ನು ಅನುಭವಿಸುತ್ತಿರುವ ಅಂಗವಿಕಲ ಮಕ್ಕಳಿಗೂ ಹೋಲಿಕೆಯ ರೀತಿಯಲ್ಲಿ ಅನ್ವಯಿಸಬೇಕಾಗಿದೆ. ಆದರೆ ನೆಲೆನಿಂತಿರುವ ನೈಜತೆ ಬೇರೆಯೇ ಹೇಳುತ್ತದೆ.
ಸಮಾನತೆ ನೀಡುವ ಸಂವಿಧಾನ – ವ್ಯತ್ಯಾಸ ತೋರುವ ನೈಜತೆ
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ – 2009 (RTE Act), ಅಂಗವಿಕಲರ ಹಕ್ಕುಗಳು ಕಾಯಿದೆ – 2016 (RPWD Act) ಗಳು ಪ್ರತಿಯೊಬ್ಬ ಅಂಗವಿಕಲ ಮಗುವಿಗೆ ಸಮಾನತೆ ಮತ್ತು ಸೂಕ್ತ ಶಿಕ್ಷಣವನ್ನು ಒದಗಿಸಬೇಕು ಎಂದು ಹೇಳುತ್ತವೆ. ಯಾವುದೇ ಅಂಗವಿಕಲ ಮಗು ಕೇವಲ ತನ್ನ ವಿಕಲತೆಯ ಕಾರಣಕ್ಕೆ ಶಾಲೆಯಿಂದ ಹೊರಗಡೆಯಾಗಬಾರದು ಎಂಬುದು ಕಾನೂನು.
ಈ ಕಾಯಿದೆಗಳ ಫಲವಾಗಿ, ಕೆಲವೊಂದು ಕಡಿಮೆ ತೀವ್ರತೆಯ ಅಂಗವಿಕಲತೆ ಹೊಂದಿದ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ಲಭಿಸುತ್ತಿದೆ. ಹಲವೆಡೆ ವಿಶೇಷ ಶಿಕ್ಷಕರ ನೇಮಕಾತಿ, ಇಳಿಜಾರುಗಳು, ವಿಶೇಷ ಶೌಚಾಲಯಗಳು, ಮತ್ತು ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ಬೆಳವಣಿಗೆಗಳು ಪ್ರಶಂಸನೀಯವೂ ಹೌದು.
ಆದರೆ ತೀವ್ರ ವಿಕಲತೆ ಹೊಂದಿದ ಮಕ್ಕಳಿಗೆ…?
ಸಾಮಾನ್ಯವಾಗಿ, ದೈಹಿಕ ವಿಕಲತೆ, ಅಂಧತೆ, ಕಲಿಕಾತೊಂದರೆ, ಅಥವಾ ಮೆದುಳುವಾತ ಇರುವ ಮಕ್ಕಳು ಇನ್ನುಮಟ್ಟಿಗೆ ಸಾಮಾನ್ಯ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಆದರೆ ತೀವ್ರತರದ ಬೌದ್ಧಿಕ ವಿಕಲತೆ, ಬಹುವಿಧದ ಅಂಗವಿಕಲತೆ, ಆಟಿಸಂ ಇತ್ಯಾದಿಗಳಂತಹ ಸಮಸ್ಯೆಗಳಿರುವ ಮಕ್ಕಳಿಗೆ ಇನ್ನೂ ಸಮನ್ವಯ ಶಿಕ್ಷಣ ಮರೀಚಿಕೆಯಾಗಿದೆ.
ಅವರಿಗೆ ಬೇಕಾದ ವಿಶೇಷ ಶಾಲೆಗಳಿವೆ – ಆದರೆ ಹೆಚ್ಚಿನದು ಖಾಸಗಿಯಾಗಿವೆ. ಈ ಶಾಲೆಗಳು ಸಾಮಾನ್ಯವಾಗಿ ನಗರಗಳಲ್ಲಿ ಮಾತ್ರ ಲಭ್ಯ. ಗ್ರಾಮೀಣ ಭಾಗದ ಮಕ್ಕಳಿಗೆ ಮಾತ್ರವಲ್ಲ ನಗರ ಪ್ರದೇಶದ ಮಕ್ಕಳಿಗೂ ಸಹ ಈ ಶಾಲೆಗಳ ಪ್ರವೇಶ ಪಡೆಯುವಲ್ಲಿ ಹಲವಾರು ಸಮಸ್ಯೆಗಳು ನಮಗೆ ಎದ್ದು ಕಾಣುತ್ತವೆ.
• ಸಾರಿಗೆ ವ್ಯವಸ್ಥೆಯ ಕೊರತೆ
• ಆರ್ಥಿಕ ಬಡತನ
• ಪೋಷಕರ ಅಜ್ಞಾನ ಅಥವಾ ನಿರ್ಲಕ್ಷ್ಯ
• ಆರೋಗ್ಯದ ಸಮಸ್ಯೆಗಳು
• ಸೂಕ್ತವಾಗಿ ತರಬೇತಿ ಪಡೆದ ವಿಶೇಷ ಶಿಕ್ಷಕರ ಕೊರತೆ
ಶಿಕ್ಷಣ ಎಂದರೆ ಅಕ್ಷರಚಿಂತನೆ ಮಾತ್ರವಲ್ಲ
ಒಂದು ಮಗು ಪಾಠ ಓದಿದರೆ ಮಾತ್ರವೇ ಅದು ಕಲಿತಂತಾಗುವುದಿಲ್ಲ. ಒಬ್ಬ ಪರಿಚಿತನನ್ನು ನೋಡಿ ನಗು ಬೀರುವ ಕ್ರಿಯೆ, ಸ್ವತಂತ್ರವಾಗಿ ಕೆಲಸ ನಿರ್ವಹಿಸುವ ಹಂಬಲ, ಸನ್ನೆ ಅಥವಾ ಬಾಯಿಮಾತು ಮೂಲಕ ತನ್ನ ಅವಶ್ಯಕತೆಗಳನ್ನು ತಿಳಿಸುವ ಶಕ್ತಿ – ಇವುಗಳೂ ಸಹ ಅತ್ಯಗತ್ಯವಾದ “ಕಲಿಕೆಗಳು”.
ಇವುಗಳನ್ನು ಕಲಿಸಲು ಸಹಾನುಭೂತಿಯುಳ್ಳ ಶಿಕ್ಷಕರು, ಸಂಬಂಧಿತ ತರಬೇತಿಗಳು, ಮತ್ತು ಸಮರ್ಥವಾದ ಶಿಕ್ಷಣ ವ್ಯವಸ್ಥೆ ಅವಶ್ಯಕ. ಆದರೆ ಇದಕ್ಕೆ ಬೇಕಾದ ನೀತಿಯನ್ನು ರೂಪಿಸುವಲ್ಲಿ, ಪೋಷಕರು, ಶಿಕ್ಷಕರು, ಸರ್ಕಾರ, ಸ್ಥಳೀಯ ಸಂಸ್ಥೆಗಳು, ಅಂಗವಿಕಲ ಕ್ಷೇತ್ರದ ತಜ್ಞರು ಹಾಗೂ ಅಂಗವಿಕಲತೆ ಕ್ಷೇತ್ರದ ಕುರಿತು ಕಾಳಜಿಯುಳ್ಳವರು ಎಲ್ಲರೂ ಸೇರಿ ಚಿಂತನೆ ಮಾಡಬೇಕಾದ ಅಗತ್ಯವಿದೆ.
ಅಂಗವಿಕಲ ಮಕ್ಕಳ ಹಕ್ಕುಗಳ ಕಾವಲುಗಾರರು ನಾವೆಲ್ಲರೂ
ಇದು ಯಾರ ಒಬ್ಬರ ಹೊಣೆಗಾರಿಕೆಯಾಗಬಾರದು.
ಪೋಷಕರೊಬ್ಬರ “ಗೌರವ” ಅಥವಾ “ಪ್ರತಿಷ್ಠೆ” ಎಂಬ ಮುಸುಕುಕವಚದಲ್ಲಿ ಮಕ್ಕಳ ಹಕ್ಕುಗಳನ್ನು ಮುಚ್ಚಿಹಾಕುವುದನ್ನು ನಿಲ್ಲಿಸಬೇಕು. “ಅಂಗವಿಕಲ ಮಗು” ಎಂದರೆ “ಅಪೂರ್ಣ ಮನುಷ್ಯ” ಎಂಬ ಕಲ್ಪನೆಗೆ ಸ್ಥಳವಿಲ್ಲ.
ಅವರಿಗೂ ಇತರ ಮಗುವಿನಂತೆ ಪ್ರೀತಿ, ಗೌರವ ಮತ್ತು ಶಿಕ್ಷಣದ ಹಕ್ಕು ಸಿಗಬೇಕು.
ಪೋಷಕರು ತಮ್ಮ ಮಕ್ಕಳ ಹಕ್ಕುಗಳಿಗಾಗಿ ಧ್ವನಿಯಾಗಬೇಕು, ಆದರೆ ಅದು ಅವರ ಹೊಣೆಗಾರಿಕೆಗೆ ಸೀಮಿತವಲ್ಲ – ಇದು ನಮ್ಮ, ನಿಮ್ಮ, ಎಲ್ಲರ ಸಾಮಾಜಿಕ ಕರ್ತವ್ಯ.
ಅವರ ಹಕ್ಕುಗಳು ಕೇವಲ ಪುಸ್ತಕದಲ್ಲಿ ಬರೆದಿಟ್ಟ ದಾಖಲೆಗಳಾಗಬಾರದು. “ಸಮಾನತೆ” ಎಂಬ ಶಬ್ದವನ್ನು ಕೇವಲ ಧ್ವನಿಯೆಂದು ನಿಲ್ಲಿಸದೆ, ನೈಜ ರೀತಿಯಲ್ಲಿ ಪ್ರತಿದಿನದ ಜೀವನದಲ್ಲಿ ಅನ್ವಯಿಸುವ ಹಾದಿಯನ್ನು ನಾವು ನಿರ್ಮಿಸಬೇಕಾಗಿದೆ. ಅಂಗವಿಕಲ ಮಕ್ಕಳಿಗೂ ಕನಸುಗಳಿರುತ್ತವೆ – ಅವರನ್ನು ಸಾಧಿಸಲು ಸಹಾಯಹಸ್ತ ಬೇಕಾಗಿರುವಷ್ಟೇ.
ರಶ್ಮಿ ಎಂ ಟಿ