ಧರ್ಮ, ಧರ್ಮಾಂಧತೆ ಮತ್ತು ಊಟ: ಪ್ರಶಸ್ತಿ

ಟೈಟಲ್ ನೋಡಿ ಇದೇನಪ್ಪಾ ? ಕ್ಯಾಲೆಂಡರ್ ಹೊಸವರ್ಷ ಅಂತ ಯದ್ವಾತದ್ವಾ ಏರ್ಸಿದ್ದು ಇನ್ನೂ ಇಳಿದಿಲ್ವಾ ಅಂತ ಅಂದ್ಕಂಡ್ರಾ ? ಹಂಗೇನಿಲ್ಲ. ಹೊಸವರ್ಷ ಅಂದ್ರೆ ಯುಗಾದಿ ಅನ್ನೋ, ಎಣ್ಣೆಯನ್ನೋದ್ನ ತಲೆಗೆ ಹಾಕಿದ್ರೂ ತಲೆಗೇರಿಸಿಕೊಳ್ಳದ ಒಂದಿಷ್ಟು ಜನರ ಮಧ್ಯದಿಂದ ಬಂದಂತ ಮಾತುಗಳ ಸಂಗ್ರಹವಿದು. ಧರ್ಮವನ್ನೋದು ಅಫೀಮು, ಮೂಢನಂಬಿಕೆಗಳ ಸಂಗ್ರಹವನ್ನೋ ಬುದ್ಧಿಜೀವಿಗಳ, ಅವರಿಗೆ ಬುದ್ಧಿ ಬಿಟ್ಟು ಬೇರೆಲ್ಲಾ ಇದೆಯೆಂದು ಲೇವಡಿ ಮಾಡೋ ಬಣ್ಣಗಳ ನಡುವೆ ನಿಂತು ನೋಡಿದ ನೋಟಗಳಿವು. ಅಂತದ್ದೇನಿದೆ ಇದ್ರಲ್ಲಿ ಅಂದ್ರಾ ? ಲೇಖನದ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸುಮ್ಮನೇ ದಾರಿಯಲ್ಲಿ ಕಂಡ ಬೋರ್ಡೊಂದ ಓದುವಂತೆ ಓದ್ತಾ ಹೋಗಿ. ನಿಮ್ಮದೇ ಕೆಲ ಭಾವಗಳು ಇಲ್ಲಿ ಇಣುಕಿದ್ರೆ ಅದು ಕಾಪಿಯಲ್ಲ, ಇಬ್ಬರಲ್ಲೂ ಸಮಾನಭಾವಗಳು ಮೂಡಿದ್ದಕ್ಕೆ ಬರಹವೊಂದರ ಧನ್ಯತೆಯಷ್ಟೆ. 

ಓ ಮೈ ಗಾಡ್, ವಿಶ್ವರೂಪಂ ಮತ್ತು ಪಿ.ಕೆ ಇತ್ತೀಚೆಗೆ ತಮ್ಮದೇ ಕಾರಣಗಳಿಂದ ಸುದ್ದಿಯಾದ ಚಿತ್ರಗಳು. ದೇವಮಾನವರ ಉಪಟಳ ತಡೆಯೋಕೆ ದೇವರೇ ಮನುಷ್ಯನ ರೂಪದಲ್ಲಿ ಬಂದು ಮತ್ತೊಬ್ಬನ ಮೂಲಕ ಪಾಠ ಕಲಿಸೋ ಕತೆ ಓ ಮೈ ಗಾಡಿನದಾದ್ರೆ, ಅನ್ಯಗ್ರಹವಾಸಿಯೊಬ್ಬ ಭೂಮಿಗೆ ಬಂದು ತನ್ನ ಸಮಸ್ಯೆಗಳನ್ನು ಪರಿಹರಿಸಬಲ್ಲ ಏಕಮಾತ್ರ ದೇವರಿಗೆ ಹುಡುಕೋ ಕತೆ ಪಿ.ಕೆ. ಭಯೋತ್ಪಾದನೆಯ ಬಗೆಗಿನ ಕತೆ ವಿಶ್ವರೂಪಂದಾದ್ರೂ ಅದರಲ್ಲಿ ಬಂದ ಧರ್ಮದ ವಿಷಯವಾಗಿ ಸಖತ್ ಗಲಾಟೆಯಾಗಿತ್ತದು. ಒಂದು ಧರ್ಮದ ಎಲ್ಲರೂ ಭಯೋತ್ಪಾದಕರು ಅಂತೇನು ಬಿಂಬಿಸದಿದ್ದರೂ ವಿಶ್ವರೂಪಂನ ಕತೆಗಾಗಿ, ಮತ್ತು ಅದರಲ್ಲಿನ ಅಭಿನಯಕ್ಕಾಗಿ ಕಮಲ್ ವಿಶ್ವದ ಕ್ಷಮೆ ಕೇಳುವ ಪರಿಸ್ಥಿತಿ ಬಂದಿತ್ತು ! ಅದೆಷ್ಟೋ ರಾಜ್ಯಗಳಲ್ಲಿ ಚಿತ್ರದ ಪ್ರದರ್ಶನವೇ ನಿಷೇಧ ಕಾಣುವ ಪರಿಸ್ಥಿತಿಯಾಗಿ ಕಮಲ್ ದೇಶವನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿಯೂ ಬಂದಿತ್ತು ! ಆಮೇಲೆ ಅದೆಲ್ಲಾ ತಣ್ಣಗಾಗಿದ್ದು ಬೇರೆ ವಿಷ್ಯ ಬಿಡಿ. ದೇವಮಾನವರ ಬಗೆಗಿನ ವಿಢಂಬನೆಗಾಗಿ, ದೇವರು ಮಿಸ್ಸಿಂಗು ಅಂತ ಎಲ್ಲೆಡೆ ಪೋಸ್ಟರ್ ಅಂಟಿಸುತ್ತಾ ಹೋಗೋ ದೃಶ್ಯಗಳಿಂದ ಪಿ.ಕೆ ಹಲವರ ಸಿಟ್ಟಿಗೆ ಕಾರಣವಾಗಿತ್ತು. ನನಗೆ ಹಾಲೆರೆವ ಬದಲು ಹತ್ತಾರು ಕೋಟಿ ಹಸಿದ ಮಕ್ಕಳಿಗೆ ಹಾಲೆರೆ ಅಂತಿದ್ದನೇನೋ ದೇವ್ರು ಅಂತ ಫಿಲ್ಮಲ್ಲಿ ಡೈಲಾಗ್ ಹೊಡಿಯೋ ಅಮೀರ್ ಅದೆಷ್ಟು ಮಕ್ಕಳಿಗೆ ಹಾಲು ಕೊಟ್ಟಿದ್ದಾರೆ ? ೨೬೪ ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿರುವ ಸಿನಿಮಾದಿಂದ ೨ ಕೋಟಿಯಾದ್ರೂ ಬಡಜನರ ಉದ್ದಾರಕ್ಕಾಗಿ ಸಿಕ್ಕಿದೆಯಾ ? ಎಲ್ಲಾ ಹಿಪೋಕ್ರೇಟುಗಳು ಅಂತನ್ನೋ ಜನರ ಗುಂಪೊಂದು ಸೃಷ್ಟಿಯಾಯಿತು ! ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದ್ರೆ ರಾಜಕೀಯ ನೇತಾರರು. ಹಿಂದಿನ ಪ್ರಸಂಗದಲ್ಲಿ ಕಮಲ್ರ ನೆರವಿಗೆ ನಿಂತಿದ್ದು ಕೆಲವೇ ಕೆಲವರಾದ್ರೂ ಇಲ್ಲಿನ ಅಮೀರರ ಚಿತ್ರಕ್ಕೆ ಅಪಾರ ಬೆಂಬಲಿಗ್ರು ಸೃಷ್ಟಿಯಾದ್ರು. ಎರಡು  ರಾಜ್ಯದ ಮುಖ್ಯಮಂತ್ರಿಗಳೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸೋಕೆ ಮುಂದೆ ಬಂದು ಒಂದು ಸಮೂಹಕ್ಕೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ವಿವಾದಗಳಿಂದಲೇ ಚಿತ್ರಕ್ಕೆ ಪ್ರಚಾರ ಗಿಟ್ಟಿಸೋ ನಿರ್ಮಾಪಕರ ತಂತ್ರ, ಧರ್ಮಗಳ ಹೆಸರಿನಲ್ಲಿ ಜನರ ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳೋ ರಾಜಕಾರಣಿಗಳ ತಂತ್ರ ಇದರ ಹಿಂದೆ ಅಡಗಿದಂತೆ ಕಂಡು ವಿಪರೀತ ಸಿಟ್ಟು ಬಂದ್ರೂ ಇವುಗಳ ಆಚೆ ಸಮಾನ ಮನಸ್ಥಿತಿಯಿಂದ ಗಮನಿಸೋ ಅಂಶವೊಂದಿದೆ. 

ಕೊಟ್ಟಕೊನೆಗೆ ಸಿನಿಮಾ ಅನ್ನೋದು ಅಭಿವ್ಯಕ್ತಿಯ ಒಂದು ಮಾಧ್ಯಮವಷ್ಟೆ. ಅದ್ರಲ್ಲಿ ಪಾತ್ರವೊಂದು ಕೊಟ್ಟ ರಂಜನೆ ಮುಖ್ಯವಾಗುತ್ತದೆ. ಸಂದೇಶಾತ್ಮಕ ಚಿತ್ರವಾಗಿದ್ದರೆ ಅದರಲ್ಲಿದ್ದ ಸಂದೇಶವೂ ಮುಖ್ಯವಾಗಬಹುದು. ಆದ್ರೆ ಅದರಲ್ಲಿ ನಟಿಸಿದ್ದ ನಟನ ನಿಜಜೀವನಕ್ಕೂ ಆತ ಚಿತ್ರದಲ್ಲಿ ಮಾಡಿದ ಪಾತ್ರಕ್ಕೂ ನಂಟು ಹಾಕಿ ನೋಡುವ ಪೂರ್ವಾಗ್ರಹ ಅದೆಷ್ಟು ಅನಾಹುತಗಳಿಗೆ ಕಾರಣವಾಗಬಹುದು ಅನ್ನೋದಕ್ಕೆ ಈ ಮೂರು ಚಿತ್ರಗಳು ಒಳ್ಳೆಯ ಉದಾಹರಣೆಯೆನ್ನಬಹುದೇನೋ. ವಿಶ್ವರೂಪಂನಲ್ಲಿ ಕಮಲ್ ಹಿಂದೂ ಆಗಿದ್ದ ಅನ್ನೋ ಕಾರಣಕ್ಕೆ ಅವರು ಮಾಡಿದ ಮುಸ್ಲಿಂ ಪಾತ್ರ, ಭಯೋತ್ಪಾದಕತೆಯ ಮುಖಗಳ ಪರಿಚಯವೆಲ್ಲಾ ತಮ್ಮ ಧರ್ಮದ ಮೇಲಿನ ಧಾಳಿಯಂತೆ ಕಂಡು ಹೋಯ್ತು ಅನೇಕರಿಗೆ. ಪಿ.ಕೆಯಲ್ಲಿ ಅಮೀರ್ ಮುಸ್ಲಿಂ ಅನ್ನೋ ಕಾರಣಕ್ಕೆ ಅವರು ಮಾಡಿದ ಹಿಂದೂ ಡಾಂಭಿಕರ ವಿಢಂಬನೆ ದೊಡ್ಡ ಅಪರಾಧದಂತೆ ಕಂಡಿತು ಕೆಲವರಿಗೆ. ಓ ಮೈ ಗಾಡಿನಲ್ಲಿ ಹಿಂದೂವೆ ಆದ ಅಕ್ಷಯ್ ಕುಮಾರ್ ಹಿಂದೂ ದೇವರ ಪಾತ್ರ ಮಾಡಿದ್ದಕ್ಕೆ ಅದರಲ್ಲಿ ಅವರು ಪಿ.ಕೆ ಗಿಂತ ಹೆಚ್ಚು ಸಂಖ್ಯೆಯ ದೇವಮಾನವರನ್ನು ಲೇವಡಿ ಮಾಡಿದ್ದರೂ ಅದು ದೊಡ್ಡ ಅಪರಾಧವಲ್ಲ.ಸತ್ಯದರ್ಶನವೆನ್ನಿಸಿತ್ತು ಕೆಲವರಿಗೆ ! ಸತ್ಯವೆಂಬುದು ಸಾರ್ವಕಾಲಿಕ, ವಿಶ್ವದಲ್ಲೆಲ್ಲಾ ಒಂದೇ ಇಲ್ಲದಿರಬಹುದು. ನನಗೆ ಸತ್ಯವೆನ್ನಿಸಿದ್ದು ನಿಮಗೆ ಸತ್ಯವೆನ್ನಿಸದೇ ನಿಮಗೆ ಸತ್ಯವೆನ್ನಿಸಿದ್ದು ನನಗೆ ಸತ್ಯವೆನ್ನಿಸದೇ ಇರದಿರುವ ಎಲ್ಲಾ ಸಾಧ್ಯತೆಯೂ ಇರುವ ಸಮಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಜನರ ಮೇಲೆ ಹೇರೋ ಅನಿವಾರ್ಯತೆಯೇನಿದೆ ? ಹಿಮಾಲಯದ ತಪ್ಪಲುಗಳಲ್ಲಿ, ಹಳ್ಳಿಗಳ ಮೂಲೆಗಳಲ್ಲಿ ಪಾಠಶಾಲೆ, ಗುರುಕುಲಗಳು ಅಂತ ತೆರೆದು ಬಡ ವಿದ್ಯಾರ್ಥಿಗಳಿಗೆ ಬೆಳಕ ಹಂಚುತ್ತಿರುವ , ನ್ಯಾಯದಾನ ಮಾಡುತ್ತಿರುವ ಸಂತರಿದ್ದಾರೆ. ಅವರ ಹೆಸರಿಗೆ ಮಸಿಬಳೆಯುವಂತಹ ಇಂತಾ ಢೋಂಗಿ ಬಾಬಾಗಳಿಗೆ ನಾನು ನಮಸ್ಕರಿಸೋಲ್ಲ ಅಂತ್ಲೋ, ಧರ್ಮದ ಹೆಸರಲ್ಲಿ ಮುಗ್ದ ಮಕ್ಕಳ ಕೊಂದ ಭಯೋತ್ಪಾದಕರಿಗೆ ನಾನು ನಯಾಪೈಸೆ ಸಹಾನುಭೂತಿ ತೋರಿಸೋಲ್ಲ ಅಂತ್ಲೋ ತೀರ್ಮಾನ ತಗೊಳ್ಳೋ ಬದ್ಲು ತಣ್ಣಗಿದ್ದ ಸಮಾಜದ ಶಾಂತಿ ಕದಡೋ ಪ್ರಯತ್ನಗಳು ಬೇಕಾ ಅಂದ್ರೆ ಉತ್ತರವಿಲ್ಲ ಇವ್ರ ಬಳಿ.  ಸುಪ್ರೀಂ ಕೋರ್ಟಿನಲ್ಲಿ ಪಿ.ಕೆ ಚಿತ್ರದ ತಡೆ ಕೋರಿ ಅರ್ಜಿ ಹಾಕಿದವರಿಗೆ ಛೀಮಾರಿ ಹಾಕಿದ ಕೋರ್ಟು ನಿಮಗೆ ಇಷ್ಟವಿಲ್ಲದಿದ್ದರೆ ಚಿತ್ರ ನೋಡಬೇಡಿ. ಇಂತಹ ವಿಷಯಗಳನ್ನೆಲ್ಲಾ ತಂದು ಕೋರ್ಟಿನ ಸಮಯ ಹಾಳುಮಾಡಬೇಡಿ. ಚಿತ್ರ ಇಂಟರ್ನೆಟ್ಟಲ್ಲಿ ಎಲ್ಲೆಡೆ ದಕ್ಕುತ್ತಿರುವಾಗ ಅದಕ್ಕೆ ನಿಷೇಧ ಹಾಕೋದ್ರಲ್ಲಿ ಅರ್ಥವಿಲ್ಲ ಅಂದಿದ್ದು ಗಮನಾರ್ಹ. ಇಂತದ್ದೇ ಛೀಮಾರಿ ವಿಶ್ವರೂಪಂನ ನಿಷೇಧ ಬೇಡಿಕೆಗಳ ಸಮಯದಲ್ಲೂ ದಕ್ಕಿದ್ರೆ ಅವಾಗ ಸಮಾನತೆಗೊಂದು ಅರ್ಥವಿರುತ್ತಿತ್ತು. ಆದ್ರೆ ಅವಾಗಾಗದ ನ್ಯಾಯ ಈಗ ಸಿಕ್ಕಿದೆ ಅಂತ ಅದಕ್ಕೊಂದು ವಿಪರೀತ ಅರ್ಥ ಕಲ್ಪಿಸೋ ಅವಶ್ಯಕತೆಯಿಲ್ಲ. ನಂಬಿಕೆ-ಮೂಡನಂಬಿಕೆಗಳಾಚೆ, ಧರ್ಮಾಧರ್ಮಗಳ ಪೂರ್ವಾಗ್ರಹಗಳ ಕಳಚಿ ಇಂತಹ ಚಿತ್ರಗಳನ್ನು ಬರೀ ಚಿತ್ರವಾಗಿ ನೋಡಬೇಕಷ್ಟೆ. ಅದರಲ್ಲಿನ ಸಂದೇಶಗಳನ್ನು, ಸಮಾಜದಲ್ಲಿನ ಓರೆಕೋರೆಗಳನ್ನು ಎತ್ತಿ ತೋರಿಸೋ ಪ್ರಯತ್ನಗಳನ್ನು ಮೆಚ್ಚಿ ಅದರಿಂದ ನಮ್ಮನ್ನು ತಿದ್ದಿಕೊಳ್ಳಬೇಕಷ್ಟೆ. 

ಕಿತ್ತು ತಿನ್ನೋ ಬಡತನ, ದೇಶೋದ್ದಾರದ ಅನಿವಾರ್ಯತೆ ಹೀಗೆ ಹತ್ತು ಹಲವು ವಿಷಯಗಳಿರುವಾಗ ಅದೆಲ್ಲಾ ಬಿಟ್ಟು ಚಿತ್ರವೊಂದರ ವಿಷಯದಲ್ಲಿ ಟೈರಿಗೆ ಬೆಂಕಿ ಹಚ್ಚೋ ಕೆಲಸವಿಲ್ಲದ ಜನಗಳಿಗೆ ಬಯ್ಯುತ್ತಿದ್ದಾಗಲೇ ಬೀದಿಯಲ್ಲಿ ಬಿದ್ದಿದ್ದ ಕವರೊಂದು ಕಣ್ಣಿಗೆ ಬಿತ್ತು. ಎರಡು ನಾಯಿಗಳು ಆ ಕವರಿಗೆ ಕಚ್ಚಾಡುತ್ತಿದ್ದವು. ಪಕ್ಕದಲ್ಲಿದ್ದ ಕಸದ ತೊಟ್ಟಿಯಿಂದ ಈಚೆಗೆ ಬಿದ್ದಿದ್ದ ಕವರಿನ ಒಳಗಿದ್ದ ಅನ್ನ, ಸಾಂಬಾರು ನಾಯಿಗಳ ಕಚ್ಚಾಟಕ್ಕೆ ರಸ್ತೆಗೆ ಬಿದ್ದಿತ್ತು. ಅನ್ನ ಸಾಂಬಾರ ಕಂಡ ಎಳೆ ಬಾಲಕಿಯೊಬ್ಬಳು ಅದರತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಳು. ತೇಪೆ ಹಾಕಿದ ಬಟ್ಟೆಗಳು, ಕೆದರಿದ, ಕೊಳೆಯಾದ ಕೂದಲು. ಆದ್ರೆ ತೊಟ್ಟಿಯಲ್ಲಿ ಬಿದ್ದ ಅನ್ನ ತಿನ್ನಲಾಗದ ಸ್ವಾಭಿಮಾನವೋ, ಬೀದಿ ನಾಯಿಗಳಿಂದ ಅನ್ನ ಕಸಿಯಲಾಗದ ಅಸಹಾಯಕತೆಯೋ ಗೊತ್ತಿಲ್ಲ ಆಕೆಯ ಮುಖವನ್ನು ಬಾಡಿಸಿಬಿಟ್ಟಿದ್ದವು . ಎಷ್ಟು ಹೊತ್ತಿಂದ ಅಲ್ಲೇ ಕೂತಿದ್ಲೋ ಗೊತ್ತಿಲ್ಲ. ಅಷ್ಟರಲ್ಲಿ ಆ ಫ್ಲಾಟಿನ ವಾಚ್ ಮೆನ್ ಬಂದು ಅವಳನ್ನು ಬೇರೆಡೆ ಓಡಿಸೋ ಪ್ರಯತ್ನ ಮಾಡಹತ್ತಿದ. ಅವಳ ದೃಷ್ಟಿ ಎತ್ತಲೋ ನೆಟ್ಟಿದೆಯಲ್ಲಾ ಅಂತ ಅತ್ತ ಗಮನಹರಿಸೋದ್ರಲ್ಲಿ ಒಬ್ಬ ಮಹಿಳೆ ಬಂದ್ರು ಪ್ಲಾಟೊಳಗಿಂದ. ಕೈಯಲ್ಲೊಂದು ಕವರು. ಈ ಬಾಲಕಿ ವಾಚಮೆನ್ನಿನ ಕಣ್ಣು ತಪ್ಪಿಸಿ ಅತ್ತ ಓಡುವಷ್ಟರಲ್ಲೇ ಅವರು ಅದನ್ನು ಕಸದ ತೊಟ್ಟಿಗೆ ಎಸೆದು ಬಿಟ್ರು . ಬೀದಿನಾಯಿಗಳು ತಮ್ಮ ಮುಂಚಿನ ಕವರ್ ಬಿಟ್ಟು ಹೊಸ ಕವರಲ್ಲೇನಿದೆ ಅನ್ನೋದ್ರ ಹುಡುಕಿ ಅದನ್ನು ತಿನ್ನಲು ಕಚ್ಚಾಡತೊಡಗಿದ್ವು !

ಮೇಲಿನ ಘಟನೆಯನ್ನು ಸತ್ಯದರ್ಶನವೆನ್ನಿ, ವಾಸ್ತವದ ವಿಢಂಬನೆಯೆನ್ನಿ. ಸನ್ನಿವೇಶವಂತೂ ಬದಲಾಗೋದಿಲ್ಲ. ನಿಮ್ಮ ದೃಷ್ಟಿಯಂತೆ ಸೃಷ್ಠಿಯಷ್ಟೆ. ಧರ್ಮ ಕೆಲ ಹೊಟ್ಟೆತುಂಬಿದ ಜನರ ಪಾಲಿನ ಮೂಢನಂಬಿಕೆಯಾದ್ರೆ ಕೆಲವರ ಪಾಲಿಗೆ ಅದು ಮೂರು ಹೊತ್ತಿನ ಊಟ. ಧರ್ಮದ ಹೆಸರಿನಲ್ಲಿ ತಾನು ಬೆವರು ಹರಿಸಿ ದುಡಿದಿದ್ದನ್ನು ಅನ್ನದಾನ ಅಂತ ಮಾಡುವವನಿರಬಹುದು. ಯಾರದೋ ದುಡ್ಡನ್ನು ಆ ಶಾಂತಿ ಈ ಶಾಂತಿ ಅಂತ ನೂರೆಂಟು ಹೆಸರು ಹೇಳಿ ಕಿತ್ತು ತಿನ್ನುವವನ ಕಾಯಕವಾಗಿರಬಹುದು. ಊಟ ಊಟವೇ ! ಪ್ರತೀ ಅಗುಳಿಗೂ ಒಂದು ಬೆಲೆಯಿದೆ. ಅನವಶ್ಯಕವಾಗಿ ಬಡಿಸಿಕೊಂಡು ಅನ್ನ ಚೆಲ್ಲಬೇಡಿ ಎಂಬ ಕೋರಿಕೆಯಷ್ಟೇ ! ಜರ್ಮನಿಗೆ ಹೋದ ಗೆಳೆಯರ ಬರಹವೊಂದು ನೆನಪಾಗುತ್ತಿದೆ. ಅಲ್ಲಿ ಹೋಟೆಲೊಂದಕ್ಕೆ ಹೋಗಿ ಆರ್ಡರ್ ಮಾಡಿದ ಅರ್ಧ ಊಟವನ್ನು ಮಾಡದೇ ವ್ಯರ್ಥ ಮಾಡಲು ಹೋಗಿದ್ದ ಜನರಿಗೆ ಅಲ್ಲಿನ ಜನ ಚೆನ್ನಾಗಿ ಛೀಮಾರಿ ಹಾಕಿದ್ರಂತೆ. ನನ್ನ ದುಡ್ಡು ನಾನೇನಾದ್ರೂ ಮಾಡ್ತೀನಿ ಅಂದದ್ದಕ್ಕೆ ಅಲ್ಲಿಗೆ ಬಂದ ಪೋಲೀಸು ದುಡ್ಡು ನಿಮ್ಮದಾದ್ರೂ ನೀವು ಚೆಲ್ಲುತ್ತಿರುವ ಊಟ ದೇಶದ ಸಂಪತ್ತು. ಅದನ್ನು ಪೋಲು ಮಾಡುವ ಅಧಿಕಾರ ನಿಮಗಿಲ್ಲ ಅಂತ ಮಾವನ ಮನೆಗೆ ಕಳಿಸಲು ಮುಂದಾಗಿದ್ರಂತೆ ಇವರನ್ನು. ಅದೇ ತರದ ಅಸಡ್ಡೆ ಭಾವ ಇಲ್ಲೂ ಇದ್ರೂ ಅಲ್ಲಿಯ ತರ ಒಳಗಾಕೋ ವ್ಯವಸ್ಥೆಯಿಲ್ಲ ಇಲ್ಲಿ. ಅದೇ ದೊಡ್ಡ ತಪ್ಪೆನ್ನುವಂತೆ ಯದ್ವಾ ತದ್ವಾ ಅನ್ನ ಚೆಲ್ಲುವವರಿದ್ದಾರೆ ಇಲ್ಲಿ. ದೊಡ್ಡ ತಟ್ಟೆಗೆ ಆರ್ಡರ್ ಮಾಡಿ ಅದರಲ್ಲಿ ಗುಬ್ಬಚ್ಚಿಯಂತೆ ತಿಂದು ಉಳಿದ ೯೦% ವ್ಯರ್ಥ ಮಾಡೋದು ಫ್ಯಾಷನ್ನಾಗಿಬಿಟ್ಟಿದೆ ! ಕೇಳಿದ್ರೆ ನಂಗೆ ಪಲ್ಯ ಸೇರೋಲ್ಲ. ಬದನೇಕಾಯಿ ಸೇರೋಲ್ಲ. ಅನ್ನ ತಿನ್ನೋಕಾಗಲ್ಲ ಅನ್ನೋ ನೂರಾರು ಸಬೂಬು. ಸೇರೋಲ್ಲವೆಂದ್ರೆ ಹಾಕಿಸ್ಕೊಳ್ಳೋಕೆ ಯಾರಪ್ಪ ಹೇಳಿದ್ದು. ನಿಂಗೆ ಬೇಡ ಅಂದ್ರೂ ಒತ್ತಾಯ ಮಾಡಿ ಹಾಕ್ತಾನಾ ಹೋಟೇಲಿನವ್ನು , ಬೇಡ ಅಂದ್ರೆ ವಾಪಾಸ್ ತಗೋಳ್ತಾನೆ ಅದನ್ನ . ವ್ಯರ್ಥ ಯಾಕೆ ಮಾಡ್ತೀಯ ಅಂದ್ರೆ ಉತ್ತರವಿಲ್ಲ. flipcart ನಲ್ಲಿ ಬಂದ ಶೂನ ಸೈಜು ಸರಿಯಾಗಿಲ್ಲ ಅಂತ ವಾಪಾಸ್ ಮಾಡೋ ನಾವು ಹೋಟೆಲ್ಲಿನಲ್ಲಿ ಅನಗತ್ಯ ವಸ್ತುಗಳನ್ನು ಹಿಂದಿರುಗಿಸೋ ಪ್ರಯತ್ನ ಯಾಕೆ ಮಾಡೋಲ್ಲ. ಹಸಿವಿರಲಿಲ್ಲ ಅಂದ್ರೆ ತಟ್ಟೆ ಮುಂದೆ ಯಾಕೆ ಬಂದು ಕೂತ್ಕಂಡೆ ಮಾರಾಯ. ಇನ್ನರ್ಧ ಘಂಟೆ ಬಿಟ್ಟು ಬಂದಿದ್ರೆ ಏನಾಗ್ತಿತ್ತು ಅಂದ್ರೆ ಉತ್ತರವಿಲ್ಲ. ಸಂಜೆ ತಿಂದ ಪಾನಿಪೂರಿಯ ಹೆಸರಿನಲ್ಲಿ ರಾತ್ರೆಯ ಎರಡು ರೊಟ್ಟಿಗಳನ್ನ ಕಸದ ಬುಟ್ಟಿಗೆ ಚೆಲ್ಲಿದ್ರೇನೆ ತೃಪ್ತಿ ಇವ್ರಿಗೆ ! ಹೊಟ್ಟೆಗಿಲ್ಲದ ಬಾಲಕಿ ತನಗಾದ್ರೂ ಕೊಟ್ಟಿದ್ರೆ ಅಂತ ಇವರತ್ತ ನೋಡ್ತಾನೆ ಇದ್ದಾಳೆ. ಆದ್ರೆ ಅನ್ನೋ ಪರಬ್ರಹ್ಮ ಅನ್ನೋ ಜನರ ಮಧ್ಯೆ ಈ ಮಾಡರ್ನ್ ಜನರ ಅರ್ಧ ತಿಂದ ಬರ್ಗರು, ಪಿಜ್ಜಾ, ರೊಟ್ಟಿಗಳು ಕಸದ ತೊಟ್ಟಿಗಳ ಪಾಲಾಗುತ್ತಲೇ ಇವೆ. ಬದಲಾಗಬೇಕಾದ್ದು ಇನ್ಯಾರೋ ಅಲ್ಲ. ನಮ್ಮೊಳಗಿನ ನಾವೇ .!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಶ್ರೀವತ್ಸ ಕಂಚೀಮನೆ

ಹೌದು ಪ್ರಶಸ್ತಿ – 

ಬದಲಾಗಬೇಕಾದ್ದು ಇನ್ಯಾರೋ ಅಲ್ಲ. ನಮ್ಮೊಳಗಿನ ನಾವೇ …

ಒಳ್ಳೆಯ ಬರಹ…

shobha
shobha
9 years ago

ಹಸಿವಿನ ಅರಿವಾದಾಗ ಅನ್ನದ ಬೆಲೆ ತಿಳಿಯುತ್ತೆ… ನಾವು ಬದಲಾಗದೆ ಯಾವುದೂ ಬದಲಾಗಲು ಸಾದ್ಯವಿಲ್ಲ. ಇಷ್ಟವಾಯ್ತು ಬರಹ.

prashasti
9 years ago

Thank you Shrivatsanna and Shobha avre 🙂

3
0
Would love your thoughts, please comment.x
()
x