ಕಾಣುವ ಅನಾಚಾರಕ್ಕೆ, ಕಾಣದ ಅಸಮಂಜಸ ಉಪಮೆಗಳೇಕೆ?: ಸುಮನ್ ದೇಸಾಯಿ

  

ಈಗೀಗ ದೇಶದೊಳಗ ಅತ್ಯಾಚಾರದ ಪ್ರಕರಣಗೊಳು ಅತೀ ಸರ್ವೆ ಸಾಮಾನ್ಯ ಅನ್ನೊ ಹಂಗ ನಡಿಲಿಕತ್ತಾವ. ಮನುಷ್ಯನ ಮನಸ್ಥಿತಿ ಎಷ್ಟು ವಿಕೃತಿಗಳ ಕಡೆಗೆ ವಾಲೆದಂದ್ರ ಇವತ್ತ ಸಂಬಂಧಗಳ ಪವಿತ್ರತೆಯನ್ನು ಸುದ್ಧಾ ಮರೆತು ಮನುಷ್ಯ ಮೃಗಗಳಂಗ ವರ್ತಿಸ್ಲಿಕತ್ತಾನ. ಇಂಥಾ ವಿಕೃತ ಮನಸಿಗೆ, ಸಣ್ಣ ಮಕ್ಕಳು, ಅಕ್ಕ ತಂಗಿ, ಕಡಿಕ ತಾ ಹಡದ ಮಗಳು ಅನ್ನೊದನ್ನು ಮರೆತು ಕಾಮಾಂಧ ಆಗ್ಯಾನ. ಗಾಂಧೀ ಅಜ್ಜನ ರಾಮ ರಾಜ್ಯದ ಕನಸು ನೆನಸಾಗೊ ಯಾವ ಲಕ್ಷಣಗಳು ಈ ಯುಗಾಂತ್ಯದ ತನಕಾ ಇಲ್ಲಾ ಅನಿಸ್ತದ. 

ರಾಮ ರಾಜ್ಯ ಅಂದಕೂಡಲೆ ಒಂದ ವಿಷಯ ನೆನಪಾಗ್ತದ. ಈ ಅತ್ಯಾಚಾರದ ವಿಷಯ ಬಂದಾಗ ರಾಮಣನ ಉದಾಹರಣೆ ಕೊಡ್ತಾರ. ಆದ್ರ ಪುರಾಣದ ಪುಟಗಳನ್ನ ತಿರುವಿ ಹಾಕಿದ್ರ ಗೊತ್ತಾಗ್ತದ ರಾವಣ ಒಬ್ಬ ಪರಾಕ್ರಮಿಯಾಗುವುದರ ಜೊತಿಗೆ ಒಬ್ಬ ಮಹಾನ್ ಪಂಡಿತ, ಶಾಸ್ತ್ರ ಪಾರಂಗತನಾಗಿದ್ದಾ ಅಂತ. ಒಂದು ನಿಟ್ಟಿನ್ಯಾಗ ವಿಚಾರ ಮಾಡಿನೋಡಿದ್ರ ರಾವಣನನ್ನ ಅಪಹರಣಕಾರ ಅನ್ನಬಹುದು ಆದರ ಆಂವಾ ಅತ್ಯಾಚಾರಿ ಅಲ್ಲಾ. 

ರಾಕ್ಷಸ ಸಹಜವಾಗಿ ಬಂದ ರಕ್ತಗತ ಗುಣಲಕ್ಷಣಗಳಿಂದಾಗಿ ಆಂವಾ ಸೀತೆಯನ್ನ ಅಪಹರಿಸಿಕೊಂಡು ಬಂದು ತನ್ನ ಬಂಧನದೊಳಗ ಇರಿಸಿದ್ದಾ ಖರೆ ಆದ್ರ ಆಕಿನ್ನ ಬಲಾತ್ಕಾರ ಮಾಡೊ ಪ್ರಯತ್ನ ಎಂದು ಮಾಡಿರಲಿಲ್ಲಾ. ಸೀತೆ ಲೋಕನಿಂದನೆಗೆ ಗುರಿಯಾಗಬಾರದು ಅಂತ ತನ್ನ ಮಹಲಿನೊಳಗ ಇರಿಸಿಕೊಳ್ಳಲಾರದ ಅಶೋಕವನದೊಳಗ ಇರಿಸಿದ್ದಾ. ಸೀತೆಯನ್ನ ಮನವೊಲಿಸೊ ಸಲುವಾಗಿ ಆಕಿ ಇದ್ದಲ್ಲೆ ಹೋಗಬೇಕಾದ್ರ ತನ್ನ ರಾಣಿ ಮಂಡೋದರಿನ್ನ ಜೊತಿಗೆ ಕರಕೊಂಡು ಹೋಗ್ತಿದ್ದನಂತ, ಅನ್ನೊ ಉಲ್ಲೇಖ ಪುರಾಣಗಳಿಂದ ತಿಳಿದು ಬರ್ತದ. ರಾವಣನ ಸಾಮ್ರಾಜ್ಯದೊಳಗ ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯ ಇತ್ತು . ಅಯೋಧ್ಯೆಗಿಂತಾ ಹೆಚ್ಚಿನ ಸ್ವಾತಂತ್ರ್ಯ ಪಡೆದ ಸ್ವಾಭಿಮಾನಿಯಾದ ಮಹಿಳೆಯರು ಅಲ್ಲಿದ್ದರು ಅನ್ನೊದು ವಿಶೇಷ ಅಧ್ಯಯನಗಳಿಂದ ತಿಳಿದು ಬಂದದ.

ನನ್ನ ಉದ್ದೇಶ ಇಲ್ಲೆ ರಾವಣನ ನಡುವಳಿಕೆ ಸರಿ ಅಂತ ಸಮರ್ಥನೆ ಮಾಡಿಕೊಳ್ಳೊದಲ್ಲ. ಯಾವುದೇ ಒಂದು ಪ್ರಕರಣ ನಡೆದರು ಸಮಂಜಸ ಅಲ್ಲದ ಉಪಮೆಯ್ ಗಳನ್ನ ಕೋಡೊದು ಎಷ್ಟರ ಮಟ್ಟಿಗೆ ಸರಿ ಅನ್ನೊದನ್ನ ಬೆಳಕಿಗೆ ತರುವ ಒಂದು ಸಣ್ಣ ಪ್ರಯತ್ನ ಅಷ್ಟ.

ಈಗೀಗ ದೇಶದೊಳಗ ನಡೆಯೊ ಲೈಂಗಿಕ ಹಗರಣಗಳ ಸುದ್ದಿಗಳನ್ನ ಬಣ್ಣ ಹಚ್ಚಿ ಬಹಿರಂಗ ಪಡಿಸೊ ಅಬ್ಬರದೊಳಗ ಈ ಮಾಧ್ಯಮದವರು ಕೃಷ್ಣಲೀಲೆ-ರಾಸಲೀಲೆ ಅಂತೆಲ್ಲಾ ಹೆಸರಿಸಿ ಪ್ರಸಾರ ಮಾಡೊದ ನೋಡಿದ್ರ ದೊಡ್ಡ ವಿಪರ್ಯಾಸ ಅನಿಸ್ತದ. ಇವರೆಲ್ಲಾ ಕೃಷ್ಣನ ಹುಟ್ಟಿನಿಂದ ಕೊನೆಯ ಘಳಿಗಿ ತನಕಾ ಚರಿತ್ರಯ ಅಧ್ಯಯನ ಮಾಡಲೆಬೇಕು ಅನ್ನೊದು ನನ್ನ ಅಭಿಪ್ರಾಯ. ಒಬ್ಬ ಕಾಮುಕನ ಅನಾಚಾರಗಳನ್ನ ಪುಣ್ಯ ಪುರುಷನಾದ ಶ್ರೀಕೃಷ್ಣನ ಭಕ್ತಿ ಲೀಲೆಗಳಿಗೆ ಹೋಲಿಸಿ ಭಾರತದ ಸನಾತನ ಹಿಂದು ಧರ್ಮದ ಪುರಾಣಗಳಿಗೆ ಅವಮಾನ ಮಾಡಿದಂಗ.

ಹೌದು ಶ್ರೀಕೃಷ್ಣಗ ಅಷ್ಟಮಹಿಷಿಯರಲ್ಲದ ಹದಿನಾರು ಸಾವಿರ ಗೋಪಿಕಾ ಸ್ತ್ರಿಯರಿದ್ದರು, ಆದರ ಅವರೆಲ್ಲಾರು ಶ್ರೀಕೃಷ್ಣನನ್ನ ನಿಷ್ಕಾಮ ಭಾವದಿಂದ ಪ್ರೀತಿಸುತ್ತಿದ್ದರು. ಜೀವನ್ಮರಣದ ಬಂಧನದಿಂದ ಮುಕ್ತಿಯನ್ನ ಪಡಿಲಿಕ್ಕೆ ಆ ಪರಮಾತ್ಮನಲ್ಲೆ ಭಕ್ತಿಯಿಂದ ತಮ್ಮನ್ನ ತಾವು ಸಮರ್ಪಣಾ ಮಾಡಿಕೊಂಡಿದ್ದರು. ಶುದ್ಧವಾದ ಭಕ್ತಿ ವಿನಃ ಅಲ್ಲೆ ಬ್ಯಾರೆ ಯಾವ ವಾಸನಾ ಭಾವ ಇರಲಿಲ್ಲಾ ಅನ್ನೊದು ಪುರಾಣಗಳಿಂದ ತಿಳಿದು ಬರ್ತದ. ಅಲ್ಲೆ ಯಾವುದೇ ಕಾಮ ವಾಂಛೆಯಿತ್ತು ಅನ್ನೊದನ್ನ ಯಾವ ಗ್ರಂಥಗಳಲ್ಲು ಉಲ್ಲೇಖಿಸಿಲ್ಲ. ಕೃಷ್ಣ ಯಾವ ಗೋಪಿಕೆಯ ಜೊತಿಗೆ ಫ್ಲರ್ಟ ಮಾಡಿರಲಿಲ್ಲ ಮತ್ತ ಯಾವ ಗೋಪಿಕಾ ಆಂವನ್ನ ಮ್ಯಾಲೆ ಲೈಗಿಂಕ ಅತ್ಯಚಾರದ ಕಂಪ್ಲೇಂಟ್‌ನು ಕೊಟ್ಟಿರಲಿಲ್ಲ.

ರಾಸ ಅನ್ನೊದು ಒಂದು ಸನಾತನ ನೃತ್ಯ ಪ್ರಾಕಾರ. ಹಿಂದಕ ದ್ವಾಪಾರ ಯುಗದಾಗ ಗೊಪಿಕಾ ಸ್ತ್ರಿ, ಮತ್ತ ಪುರುಷ, ಋಷಿಮುನಿಯಾದಿಯಾಗಿ ಎಲ್ಲಾರು ಶ್ರೀ ಕೃಷ್ಣನ ಆರಾಧನೆಯೋಳಗ ಮೈಮರೆತು, ನಾಮಸ್ಮರಣೆಯೊಳಗ ಮತ್ತರಾಗಿ ನೃತ್ಯ ಮಾಡೊದನ್ನ ರಾಸ ನೃತ್ಯ ಅಂತಿದ್ರು. ನಿರ್ಮಲ ಭಕ್ತಿಯನ್ನ ಪ್ರದರ್ಶನ ಮಾಡೊ ಅಂಥಾ ಒಂದು ಪಧ್ಧತಿ. ಇಂಥ ಒಂದು ಪದ್ಧತಿಯನ್ನ ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತ ನವರಾತ್ರಿಗಳೊಳಗ ಆಚರಸ್ತಾರ. ಕೃಷ್ಣನ ಮಹಿಮೆಯ ಛಂದ ಛಂದ ಹಾಡುಗಳನ್ನ ಹಾಡಕೊತ ಭಕ್ತಿಲೀಲೆಗಳನ್ನ ಸ್ಮರಿಸಿಕೋತ ಕೋಲಾಟಾ ಆಡಕೋತ ನೃತ್ಯ ಮಾಡತರ. ಇಂಥಾ ಒಂದು ಪಾರಂಪರಿಕ ಪಧ್ಧತಿನ ಯಾವ ಯಾವದಕ್ಕೊ ಒಯ್ದು ಹೋಲಿಸ್ತಾರಂದ್ರ ಎಲ್ಲೆ ಹೋಗಿ ಉರಲಹಾಕ್ಕೊಳದ ಅಂತ??!!..

ದೇಶದ ಆಗುಹೋಗುಗಳ ಬಗ್ಗೆ, ಸತ್ಯನ್ಯಾಯಗಳ ಧ್ವನಿಯನ್ನ ಜನಸಮಾನ್ಯರ ತನಕಾ ಮುಟ್ಟಿಸೊ ಅಂಥಾ ಸಾಮಾಜಿಕ ಜವಾಬ್ದಾರಿಯನ್ನ ಹೊತ್ತಿರೊ ಈ ಮಾಧ್ಯಮದವರಿಗೆ ಯಾವದಕ್ಕ ಏನ ಉದಾಹರಣೆ ಕೊಡಬೇಕನ್ನೊ ಅಷ್ಟು ಸಾಮಾನ್ಯ ಪರಿಜ್ಞಾನ ಇಲ್ಲಂದ್ರ ಆಶ್ಚರ್ಯದ ಸಂಗತಿ. ನಿಜವಾದ ಭಕ್ತಿರಸದ ಮಹತ್ವ ಸಾರುವಂಥಾ, ದುಷ್ಟರನ್ನ ಶಿಕ್ಷಿಸಿ, ಶಿಷ್ಟರ ರಕ್ಷಣಾಮಾಡಿ ಧರ್ಮ ಸಂಸ್ಥಾಪನಾರ್ಥಕ್ಕಾಗಿ ಸೃಷ್ಟಿಸಿದ ಶ್ರೀಕೃಷ್ಣನ ಲೀಲೆಗಳನ್ನ ಭಂಡ ಜನರ ಕಾಮದಾಟಕ್ಕ ಹೊಲಿಸ್ತಾರಂದ್ರ ಖರೇನು ಆಕ್ಷೇಪಣಾರ್ಹ.

ನಮ್ಮ ದೇಶ ಸನಾತನ ಧರ್ಮ, ಸಂಸ್ಕೃತಿ ಮತ್ತ ಅದರ ಸಲುವಾಗಿ ದುಡಿದ ಮಹಾಪುರುಷರ ಜೀವನದ ಆದರ್ಶಗಳ ತಳಹದಿ ಮ್ಯಾಲೆ ನಿಂತದ. ನೀತಿ ಭ್ರಷ್ಠ ಜನಾ ಮಾಡೊ ಹೆಸಿಗಿ ಕೆಲಸಕ್ಕೆಲ್ಲ ಕೃಷ್ಣಲೀಲೆ, ರಾಮಲೀಲೆ, ಅನಕೋತ ಹೋದ್ರ ನಾಳೆ ಜನರ ಮನಸ್ಸಿನ್ಯಾಗ, ದೇವರು ಅನ್ನಿಸಿಕೊಂಡವರಲ್ಲೆ ಇಂಥಾವೆಲ್ಲ ನಡಿತಾವ ಇನ್ನ ನಾವ ಮಾಡೊದ್ರಾಗ ತಪ್ಪೇನದ ಅಂತ ಹಾದಿ ತಪ್ಪೊ ಸಾಧ್ಯತೆನು ಇರ್ತದ. ರಾಮ-ಕೃಷ್ಣರು ಏನೇನು ಮಾಡ್ಯಾರ ಅಂತ ಎನ ಯಾರ ನೋಡಿಬಂದಾರೇನು? ಕಣ್ಣಿಗೆ ಕಾಣೊ ಅನಾಚಾರಕ್ಕ ಎಂದು ಕಾಣದ ಸಮಂಜಸ ಅಲ್ಲದ ಉಪಮೇಯ್ ಕೋಡೊದು ಎಷ್ಟರ ಮಟ್ಟಿಗೆ ಸರಿ?  ನಮ್ಮ ಆರಾಧ್ಯ ದೈವಗಳ ಬಗ್ಗೆಯಾಗಲಿ ಅಥವಾ ಮಹಿಮೆ ಲೀಲೆಗಳ ಬಗ್ಗೆ, ಪುರಾಣ ಧರ್ಮಗಳ ಬಗ್ಗೆ ಹಿಂಗ ತಪ್ಪು ಕಲ್ಪನಾ ಮುಂದಿನ ಪೀಳಿಗೆಯವರೊಳಗ ಹುಟ್ಟಿಸಿಲಿಕತ್ರ ದೇಶದ , ಧರ್ಮದ ಪಾವಿತ್ರತೆಯ ಗತಿ ಎನು?  ಸ್ವಂತ ಮನಿ ಮಕ್ಕಳನ ನಡುಹಾದ್ಯಾಗ ನಿಂತು ಮನಿಮರ್ಯಾದಿ ಹರಾಜಿಗೆ ಹಾಕಿಧಂಗ ಪರಿಸ್ಥಿತಿ ಆಗತದ. ಈಗೀಗ ಕಾವಿಯನ್ನ ಅಸ್ತ್ರ ಮಡಿಕೊಂಡು ತಮ್ಮ ವಿಕೃತ ಬಯಕೆಗಳನ್ನ ತಿರಿಸ್ಕೊಳ್ಳೊದು ಒಂದು ರೀತಿಯ ಫ್ಯಾಶನ್ ಆಗಿಬಿಟ್ಟದ. ಇದೊಂದು ಸಾಮಾಜಿಕ ಪಿಡುಗು ಅಂದ್ರ ಅಡ್ಡಿಯಿಲ್ಲ. ಇದರಿಂದ ಗುರು ಅನ್ನೊ ಸ್ಥಾನಕ್ಕ ಪಾವಿತ್ರತೆ ಕಡಿಮಿ ಆಕ್ಕೊತ ಬರಲಿಕತ್ತದ. ಧರ್ಮದ ಹಾದಿಯೊಳಗ ನೈತಿಕತೆ ಅನ್ನೊ ಹೆಜ್ಜಿ ಇಡಲಿಕ್ಕೆ ಹೇಳಿಕೊಡೊ ಅಂಥಾ ಗುರು, ಇವತ್ತ ಅನೈತಿಕತೆಯ ಹಾದಿಯೊಳಗ ಕುಣಕೋತ ಹೊಂಟ್ರ ಯಾರ ಮ್ಯಾಲೆ ವಿಶ್ವಾಸಾ ನಂಬಿಕಿ ಇಡೊದು. ಎಲ್ಲಿತನಕಾ ಜನರಲ್ಲೆ ಮೂಢನಂಬಿಕಿ ಮತ್ತ ಅಜ್ಞಾನ ತುಂಬಿರತದೊ ಅಲ್ಲಿತನಕಾ ಸಮಾಜಕ್ಕಂಟಿದ ಈ ಪಿಡುಗು ಗುಣಾ ಆಗುದಿಲ್ಲಾ॒॒.

*****        

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
amardeep.ps
amardeep.ps
10 years ago

good interpretation…..madam….convincing one….

umesh desai
umesh desai
10 years ago

hallo madam, nice article. and Your argument is Valid.

Akhilesh Chipli
Akhilesh Chipli
10 years ago

ಖರೆ ಹೇಳಿರಿ ನೋಡ್ರಿ ಮೇಡಂ.

3
0
Would love your thoughts, please comment.x
()
x