ಕಿಕ್ಕೇರಿ ಪಂಚಲಿಂಗೇಶ್ವರ ಹಾಗೂ ಹೊಸಹೊಳಲು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ

"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು…ಅಪಾರ ಕೀರ್ತಿಯೇ"

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಶ್ರೀ ಆರ್. ಎನ್. ನಾಗೇಂದ್ರ ರಾಯರು ದಿಗ್ದರ್ಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರ ವಿಜಯನಗರದ ವೀರಪುತ್ರ ಚಿತ್ರದ ಕುದುರೆ ನಡಿಗೆಯ ತಾಳದ ಜನಪ್ರಿಯ ಗೀತೆ ಕೇಳಿದಾಗೆಲ್ಲ ಕರ್ನಾಟಕದಲ್ಲಿ ಶಿಲ್ಪಕಲೆಯು ಉನ್ನತ ಸ್ಥಾಯಿ ಮುಟ್ಟಿದ್ದ ಹೊಯ್ಸಳ ಅರಸರ ಕಲೆಯು ನೆನಪಿಗೆ ಬರುತ್ತದೆ.  

ಡಿಸೆಂಬರ್ ೨೯ನೆ ತಾರೀಕು ಹಾಸನದಿಂದ ಮೈಸೂರಿಗೆ ಹೋಗಬೇಕಿತ್ತು..ಕರುನಾಡಿನ ಎಲ್ಲ ಸ್ಥಳಗಳು ಕೈ ರೇಖೆಯಂತೆ ಗುರುತು ಇಟ್ಟುಕೊಂಡಿರುವ "ನಿಮ್ಮೊಳಗೊಬ್ಬ ಬಾಲೂ" ಬ್ಲಾಗ್  ಖ್ಯಾತಿಯ ಬಾಲೂ ಸರ್ ಗೆ ಫೋನಾಯಿಸಿದೆ….ಚಕ ಚಕ ಅಂತ…ಒಂದು ಸಿದ್ಧ ಪ್ಲಾನ್ ಹೇಳಿಯೇ ಬಿಟ್ಟರು…ಚನ್ನರಾಯಪಟ್ಟಣ ಆದ ಮೇಲೆ ಬಲಕ್ಕೆ ತಿರುಗಿ ಕೆ.ಆರ್. ಪೇಟೆ ಕಡೆ ತಿರುಗಿಸಿರಿ…ಅಂತ…ಸರಿ ಗುರುಗಳ ಮಾರ್ಗದರ್ಶನದಲ್ಲಿ ಮುಂದುವರೆಯಿತು..ನಮ್ಮ ಗಾಡಿ.

ಕಿಕ್ಕೇರಿಗಿಂತ ಮುಂಚೆ  ಕಾರನ್ನು ನಿಲ್ಲಿಸಿ ಮತ್ತೆ ಫೋನ್ ಹಚ್ಚಿದೆ..ಕುರುಡನಿಗೂ ದಾರಿ ಗೊತ್ತಾಗಬೇಕು..ಹಾಗೆ ಅಚ್ಚುಕಟ್ಟಾಗಿ ದಾರಿ ಹೇಳಿದರು. ಗೋವಿಂದನ ಹಳ್ಳಿ ಮಾರ್ಗದಲ್ಲಿ ಓಡಿತು ನಮ್ಮ ರಥ…ಸುಮಾರು ೩-೪ ಕಿ.ಮಿ. ಸಾಗುತ್ತ ಹಳ್ಳಿಯ ಸೊಬಗನ್ನು ಸವಿಯುತ್ತ, ಹೊಲ ಗದ್ದೆಗಳ ರಾಶಿ ರಾಶಿ ಜಮೀನನ್ನು ನೋಡುತ್ತಾ ನಿಧಾನವಾಗಿ ಸಾಗಿದೆ. ಬಲ ಭಾಗದಲ್ಲಿ ಒಂದು ಫಲಕ ಕಾಣಿಸಿತು…ಮತ್ತು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಎಡಗಡೆ ಎಂದು ಬಾಣದ ಗುರುತು ಇತ್ತು…

ಎಡಕ್ಕೆ ತಿರುಗಿ ಸೀದಾ ಒಂದು ೩೦೦ ಮೀಟರ್  ಬಂದಾಗ ಸಿಕ್ಕಿತು ಒಂದು ಸುಂದರ ಹೊಯ್ಸಳ ಕಲೆಯ ದೇವಾಲಯ…ಮನಕ್ಕೆ ಆಹಾ ಎನ್ನಿಸಿತು..ಅಚ್ಚುಕಟ್ಟಾಗಿ ಸುತ್ತಲು ಕಬ್ಬಿಣದ ತಂತಿಗಳ 

ಕಾಂಪೌಂಡ್ ನಿಂದ ಸುತ್ತುವರೆದು, ಹಸಿರು ಹುಲ್ಲು ಹಾಸಿನ ಮಧ್ಯೆ ಇದ್ದ ದೇವಾಲಯ ಸುಂದರವಾಗಿ ಕಂಡಿತು. ಸುಮಾರು ೧೨೩೦ರ ಆಸುಪಾಸಿನಲ್ಲಿ ನಿರ್ಮಾಣವಾದ ದೇವಾಲಯ  ಸಹಜವಾಗಿಯೇ ಹೊಯ್ಸಳರ ಕಾಲದ ಶಿಲ್ಪಿಗಳ ಕೈ ಚಳಕವನ್ನು ಅನಾವರಣ ಮಾಡಿತ್ತು. 

ನಿಧಾನವಾಗಿ ಕ್ಯಾಮೆರ ಹೊಟ್ಟೆಗೆ ಚಿತ್ರಗಳನ್ನು ತುಂಬಿಸುತ್ತಾ ಒಳಗೆ ಸಾಗಿದೆ. ಅಲ್ಲಿಯ ಕೂತಿದ್ದ ಒಬ್ಬರು ಒಳಗೆ ಬಂದು ದೇವಾಲಯದ ಪರಿಚಯ ಮಾಡಿಕೊಟ್ಟರು. ಒಂದೇ ದೇವಾಲಯದಲ್ಲಿ ಐದು ಶಿವಲಿಂಗದ ದರ್ಶನ ಬಲು ಅಪರೂಪ ಎಂದು ಹೇಳಿದರು. 

ಇಶಾನ್ಯೇಶ್ವರ, ತತ್ಪುರುಶೇಶ್ವರ, ಅಘೋರೇಶ್ವರ, ವಾಮದೇವೇಶ್ವರ ಮತ್ತು ಸಧ್ಯೋ ಜಾತೇಶ್ವರ ಹೀಗೆ ಐದು ಬಗೆಯ ಹೆಸರಿನ ಶಿವಲಿಂಗಗಳಿಗೆ ಪ್ರತ್ಯೇಕ ಗುಡಿಗಳು, ಮತ್ತು ಅದಕ್ಕೆ ಸರಿಯಾಗಿ ಎದುರಿಗೆ ನಂದಿಗಳು ಇವೆ. ದೇವಸ್ಥಾನದ ಒಳಗೆ ಅಪ್ಪಣೆ ಪಡೆದು ಒಂದೆರಡು ಚಿತ್ರಗಳನ್ನು ಸೆರೆ ಹಿಡಿದು ಕೊಂಡೆ. ಅದರಲ್ಲೂ ಸಾಲು ಸಾಲು ಕಂಬಗಳ ಚಿತ್ರ ಮನಸಿಗೆ ಇಷ್ಟವಾಯಿತು. ಚಾಮುಂಡೇಶ್ವರಿ ವಿಗ್ರಹ, ಸುಬ್ರಮಣ್ಯ ವಿಗ್ರಹ, ಗಣಪತಿ ಎಲ್ಲವು ಸುಂದರವಾದ ಕೆತ್ತನೆಗಳಿಗೆ ಸಾಕ್ಷಿಯಾಗಿದ್ದವು. 

ಹೊರಾಂಗಣವನ್ನು ಸುತ್ತಿ ಬಂದಾಗ ನೀಲಾಕಾಶದಲ್ಲಿ ಹತ್ತಿಯ ಹಾಗೆ ಹಿಂಜಿ ನಿಂತ ಮೋಡಗಳ ಹಿನ್ನೆಲೆಯಲ್ಲಿ ದೇವಾಲಯ ಇನ್ನಷ್ಟು ಸುಂದರವಾಗಿ ಕಂಡಿತು. ಮನಸಾರೆ ಚಿತ್ರಗಳನ್ನು ಸೆರೆಹಿಡಿದು ಅಲ್ಲಿಂದ ಹೊರಟೆವು. ಇನ್ನೊಂದು ಅದ್ಭುತ ಶಿಲ್ಪಕಲಾ ಗುಡಿಯ ಕಡೆಗೆ. 

ಕೆ.ಆರ್. ಪೇಟೆ ಹತ್ತಿರ ಬಂದು ಮತ್ತೆ ಗುರುಗಳಿಗೆ ಫೋನಾಯಿಸಿದೆ. ಅಲ್ಲಿಯೇ ಹೊಸಹೊಳಲು ದೇವಸ್ಥಾನಕ್ಕೆ ದಾರಿ ಕೇಳಿ ಸುಮಾರು ಒಂದೆರಡು ಕಿ.ಮಿ ಹೋದರೆ ನಿಮಗೆ ದೇವಾಲಯ ಸಿಗುತ್ತೆ ಅಂತ ಹೇಳಿದರು. ನಿಧಾನವಾಗಿ ಚಲಿಸುತ್ತ ದಾರಿ ಕೇಳಿಕೊಂಡು ಹೋದಾಗ..ಮುಖ್ಯ ರಸ್ತೆಯಲ್ಲಿಯೇ ಒಂದು  ಕಮಾನು ನಮ್ಮನ್ನು ಸ್ವಾಗತಿಸಿತು. ಹೊಸಹೊಳಲು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಸ್ವಾಗತ ಎಂದು. 

ಬೇಲೂರಿನ ಪ್ರತಿ ಕೃತಿಯಂತೆ ಕಂಡು ಬಂದ ಈ ದೇವಾಲಯದ ಮುಂಬಾಗ ನವಿಕರಣಗೊಂಡಿದ್ದರೂ, ಹೊಯ್ಸಳರ ಶಿಲ್ಪಿಗಳು ಪ್ರಭುತ್ವ ಮೆರೆದ ಇನ್ನೊಂದು ಕಲಾ ದೇಗುಲ ನಮ್ಮ ಮನಸಿಗೆ ಸಂತಸದ ಕಡಲನ್ನೇ ತಂದಿತ್ತು.   ಮಧ್ಯಾಹ್ನದ ಸಮಯ ಹತ್ತಿರ ಬಂದಿತ್ತು, ದೇವಾಲಯದ  ಕದ ಹಾಕುವ ಮುಂಚೆ ದೇವರ ದರ್ಶನ ಮಾಡಿದೆವು. ಅಲ್ಲಿಯ ಅರ್ಚಕರು ಅಲ್ಲಿಯ ಗರ್ಭ ಗುಡಿಯ ಕೆತ್ತನೆಗಳ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟರು.

 ಶ್ರೀ ಲಕ್ಷ್ಮಿ ನಾರಾಯಣ, ಶ್ರೀ ಲಕ್ಷ್ಮಿ ನರಸಿಂಹ, ಶ್ರೀ ವೇಣು ಗೋಪಾಲ ಮೂರ್ತಿಗಳು ತುಂಬಾ ಮುದ್ದಾಗಿದ್ದವು, ಸುಂದರವಾದ ನವರಂಗ, ಅಮೋಘ  ಕುಸುರಿ ಕೆಲಸವನ್ನು ಹೊಂದಿದ್ದ ಕಂಬಗಳು ಒಂದಕ್ಕಿಂತ ಒಂದು ಸೊಗಸಾಗಿದ್ದವು. ಇದನ್ನು ಮನದಣಿಯೆ ನೋಡಬೇಕು. 

ಕ್ಯಾಮೆರಾದಲ್ಲಿ ಆದಷ್ಟು ತುಂಬಿಕೊಂಡು ಹೊರಗೆ ಬಂದೆ. 

ಸುಮಾರು ೧೨೫೦ ರ ಆಸುಪಾಸಿನಲ್ಲಿ ನಿರ್ಮಾಣವಾದ ದೇವಾಲಯವನ್ನು ಸುಂದರವಾಗಿ ರಕ್ಷಿಸಿದ್ದಾರೆ ಮತ್ತು ನೋಡಿಕೊಂಡಿದ್ದಾರೆ. ದೇವಾಲಯವನ್ನು ಒಂದು ಸುತ್ತು ಹಾಕಿದರೆ ನಮಗೆ ಅರಿವಿಲ್ಲದೆ ಸುಮಾರು ೮೦೦-೯೦೦ ವರ್ಷಗಳ ಹಿಂದೆ ಹೋಗಿಬಿಡುತ್ತೇವೆ. ಅಷ್ಟು ಸುಂದರ ಮೂರ್ತಿಗಳು, ಕುಸುರಿ ಕೆತ್ತನೆ, ಆಹಾ ಪದಗಳಲ್ಲಿ ಬಣ್ಣಿಸಲಾಗದು.  

ಹೊಯ್ಸಳ ಶಿಲ್ಪಕಲೆ ಎಂದರೆ ಬೇಲೂರು ಹಳೇಬೀಡು ಅಷ್ಟೇ ಅಲ್ಲ..ಇಂತಹ ಅನೇಕ ಅಮೋಘ ಕೆತ್ತನೆಗಳು ಹಾಸನ, ಮೈಸೂರು, ಮಂಡ್ಯ, ಚಿಕಮಗಳೂರ್, ಭದ್ರಾವತಿ, ಶಿವಮೊಗ್ಗ, ಹರಿಹರ,  ಹೀಗೆ ಅನೇಕ ಕಡೆ ಸಿಗುತ್ತದೆ. ಹೊಯ್ಸಳರಸರ ಕಾಲದ ಕೆತ್ತನೆ ಕಂಡು ಬರುವ ಇಲ್ಲಾ ದೇವಾಲಯಗಳನ್ನು ನೋಡುವ ತವಕ, ಉತ್ಸಾಹವಿದೆ.  ಭಗವಂತನ  ಅನುಗ್ರಹವಿದ್ದರೆ ಸಾಧ್ಯವಾಗುತ್ತದೆ ಎನ್ನುವ ಆಶಾಭಾವ ಹೊತ್ತು ದೇವಸ್ಥಾನದಿಂದ ಹೊರಟೆವು. 

ಎರಡು ಸುಂದರ ದೇವಾಲಯಗಳನ್ನು ಭೇಟಿ ಮಾಡಲು ಮಾರ್ಗದರ್ಶನ ನೀಡಿದ ಬಾಲೂ ಸರ್ ಅವರಿಗೆ ಧನ್ಯವಾದ ತಿಳಿಸುತ್ತ ಈ ಲೇಖನವನ್ನು ಅವರಿಗೆ ಅರ್ಪಿಸುತ್ತಿದ್ದೇನೆ. ಧನ್ಯವಾದಗಳು ಬಾಲೂ ಸರ್.

-ಶ್ರೀಕಾಂತ್ ಮಂಜುನಾಥ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Santhoshkumar LM
11 years ago

Good!!

Badarinath Palavalli
11 years ago

"ರೈಲನ್ನು ನೆನಪಿಸುವಂತಹ ಸಾಲು ಸಾಲು ಕಂಬಗಳು" ಚಿತ್ರದ ಕ್ಯಾಪ್ಷನ್ ಅಮೋಘ.

ನಿಮ್ಮ ಬ್ಲಾಗ್ ಬರಹಗಳನ್ನೇ ಮುಂದಿಟ್ಟುಕೊಂಡು, ಪ್ರವಾಸ ಹೊರಟರೆ ನಮಗೆ ಬಹು ಉಪಯೋಗವಾಗುವುದು.

ಹೊಯ್ಸಳರ ಶಿಲ್ಪ ಕಲೆಯ ಬಗೆಗಿನ ಪ್ರೀತಿಯು ನೂರ್ಕಾಲಕೂ ಜನ ಮಾನ್ಯ.

ಸುಮತಿ ದೀಪ ಹೆಗ್ಡೆ

ಶ್ರೀಕಾಂತ್, ಚಂದದ ಚಿತ್ರದೊಂದಿಗೆ ಸುಂದರ ನಿರೂಪಣೆ.

3
0
Would love your thoughts, please comment.x
()
x