ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ರಾಘವೇಂದ್ರ ಭಟ್ ರವರ ಚುಟುಕಗಳು

 

ಕವಿತೆ ಹುಟ್ಟಿದ್ದು :

ಭಾವಗಳು ಬತ್ತಿ ಹೋದಾವೆಂದು

ಪದೇ ಪದೇ

ನಿನ್ನೆದುರಲ್ಲೇ ಕುಳಿತೆ.|

ನೀನು ಕಣ್ಣು ಮಿಟುಕಿಸಿ

ಆಶ್ಚರ್ಯ ತೋರಿದಾಗಲೆಲ್ಲ

ರೂಪುಗೊಂಡಿದ್ದೇ ಈ ಕವಿತೆ ||

 

ತಾಯಿ :

ನಿನ್ನ ಮನದ ಹರಹು ಕಂಡದ್ದು

ವಿಶಾಲ ಸಾಗರದೊಡಲಲ್ಲಿ |

ವಿಶಾಲ ಸಾಗರದಷ್ಟು ಪ್ರೀತಿ ಉಂಡಿದ್ದು

ತಾಯೇ ನಿನ್ನಯ ಮಡಿಲಲ್ಲಿ ||

 

ನೀ ಹೋಗುವಾಗ..

ಮರಳ ದಂಡೆಯಲಿ

ಗೆಜ್ಜೆ ಪಾದಗಳ

ಹೆಜ್ಜೆ ಗುರುತುಗಳ ಅಳಿಸಿದೆ |

ಎನ್ನ ಹೃದಯದಲಿ

ಹಚ್ಚೆ ಮೂಡಿಸಿ

ಏಕೆ ಪ್ರೀತಿಯ ಬೆಳೆಸಿದೆ? ||

 

ಪ್ರೇಮಿ :

ಒಂದು ಹನಿ ಕಣ್ಣೀರು

ಕೆಳಗೆ ಬಿದ್ದರೂ

ಬರಡಾದೀತು ಭೂಮಿ |

ನಿನ್ನ ಕಣ್ಣೀರ

ಸಹಿಸಿಕೊಳ್ಳಲಿ ಹೇಗೆ

ನಾನು ನಿನ್ನ ಪ್ರೇಮಿ ||

 

ಭಗವಂತನಿಗೆ

ನಾನು ನಿನ್ನ ಸೃಷ್ಟಿಯಲ್ಲ

ಎಲ್ಲ ನಿನ್ನದೇ |

ನನ್ನ ತನವೇ ನನ್ನ ಅರಿವು

ಭಾವ ನಿನ್ನದೇ ||


ಮುದ್ದು (ಮುತ್ತು) :

ಎರಡು ಹೃದಯಗಳ

ಅಂತರಾತ್ಮಗಳ

ಎದೆ ಬಡಿತದ ಸದ್ದು |

ಮಾತಿಗೆ ನಿಲುಕದ

ಅಧರಾಮೃತಗಳ

’ಕೆನ್ನೆಪ್ರಮಾಣ’ವೇ ಮುದ್ದು ||

 

ಗಾಳಕೆ ಬೀಳೋದ್ಯಾವಾಗ?

ಹೃದಯಾಂತರಾಳದ

ಪ್ರೀತಿ ಗಂಗೆಯಲಿ

ನೀನೊಂದು ಕಳ್ಳ ಮೀನು |

ಗಾಳ ಹಾಕಿ

ಕುಳಿತಿರುವೆ ತಟದಲ್ಲಿ

ಬೀಳೋದ್ಯಾವಾಗ ನೀನು? ||

 

ಮುತ್ತಿನ ಗಮ್ಮತ್ತು :

ಅಂದು ಕಾದಿರುಳ ಸಂಜೆಯಲಿ

ಬಿಸಿಯುಸಿರ ಬಿಗಿಹಿಡಿದು

ನೀ ಕರೆದು ನನಗಿತ್ತ ಮುತ್ತು |

ಒಂದು ಹತ್ತಾಗಿ ಹತ್ತು ನೂರಾಗಿ

ನೂರು ಸಾವಿರವಾಗಿ

ಮಗನು ಕೈಗೆ ಬಂದಾಗಲೇ ಗೊತ್ತು ||

 

ಕರೆ :

ಬಾ ಗೆಳತಿ ಬೇಗ

ಬಂದು ಬಿಡು ಎನ್ನ

ಬೆಚ್ಚನೆಯ ಎದೆಯ ಮೇಲೆ |

ಗೋಧೂಳಿ ಜವನಿಕೆ

ಜಾರಿ ಹೋಗುವ ಮುನ್ನ

ಇರಲೊಂದು ತುಂಟ ಲೀಲೆ ||

 

ನಿನ್ನದೇ ಚಿತ್ರ :

ನನ್ನ ಮನದೊಳ

ಅಮೂರ್ತ ಭಾವನೆಗೆ

ಭಾಷೆಯ ವೇಶ ತೊಡಿಸಲೇ? |

ಕಣ್ಣೊಳಗಿರುವುದು

ನಿನ್ನದೇ ಚಿತ್ರ

ಅದನೆ ಪದೆ ಪದೆ ಬಿಡಿಸಲೇ? ||

 

ನೀನಿಲ್ಲದ ಸಂಜೆ :

ನನ್ನ ಬಾಳಲ್ಲಿ

ನಿನ್ನ ಆಗಮನ

ಅತಿ ಮಧುರ ಮುಸ್ಸಂಜೆ |

ನೀನಿಲ್ಲದಾ ಹೊತ್ತು

ಅನಿಸುವುದೊಂದೇ

ಈ ಸಂಜೆಯೂ ಬಂಜೆ ||

 

ನಿನಗಾಗಿ :

ಕನಸಲಿ ಬಂದು ಕಾಡಿದ್ದಕ್ಕೆ

ಕ್ಷಮಿಸಿಬಿಡು ಈಗ |

ನಿನಗಾಗೀನೇ ಕಾದು ಇಟ್ಟಿರುವೆ

ಈ ಹೃದಯದ ಜಾಗ ||

 

ಪ್ರೀತಿ ಮಧುಮೇಹ ರೋಗಿ :

ನೀ ಕೊಟ್ಟ ಮುತ್ತು

ಕಸಿದುಕೊಂಡವ ನಾನು

ಅಧರಕ್ಕೆ ಬಾಗಿ ಬಾಗಿ |

ನಿನ್ನ ಮುತ್ತ ಸಿಹಿ

ಎಷ್ಟೆಂದು ಹೇಳಲಿ

ನಾ ಪ್ರೀತಿ ಮಧುಮೇಹ ರೋಗಿ ||

 

ನಾವು-ನಮ್ಮ ಪ್ರೀತಿ :

ಜೀವನದ ಗಾಡಿಯಲಿ

ಸಂಬಂಧದ ಗಾಲಿಯಂತೆ

ನಾವಿಬ್ಬರು |

ನಮ್ಮ ಪ್ರೀತಿ ಯಾರೆಷ್ಟೇ

ಉಪ್ಪು ಖಾರ ಹಾಕಿ ಎಳೆದರೂ

ತುಂಡಾಗದ ರಬ್ಬರು ||

 

ಹೆಸರು ಬೇಕೇ? :

ನೀನು ಶ್ಯಾಮನಾಗಬೇಕಿಲ್ಲ

ನಾನು ರಾಧೆಯಾಗುವುದಿಲ್ಲ..

ನಮ್ಮ ನಡುವಿನ ಸಂಬಂಧಕ್ಕೆ

ಹೆಸರಿಡುವ ಗೋಜಿಲ್ಲ. |

ಬದುಕಿಗೆ ಸಾಕಷ್ಟು ಪ್ರೀತಿ ಇದೆಯಲ್ಲ

ಪ್ರೀತಿಯಲಿ ಒಂದಾಗಿ ಬದುಕೋಣ ನಲ್ಲ ||

 

ನೀ ಸಿಕ್ಕಿದ ಮೇಲೆ :

ಇಷ್ಟು ದಿನ

ಬರಡು ಬರಡಾಗಿಯೇ

ಬದುಕು ಬಸಿದು ಹೋದೀತೆಂಬ ಭಯ |

ನೀನು ಸಿಕ್ಕಿದೆ ನೋಡು..

ನಿನ್ನೆದೆಯ ನಯದಲ್ಲಿ

ಹನಿ ಹನಿಯಾಗಿ ದಕ್ಕಿದ್ದೆಲ್ಲವೂ ಜಯ ||

 

ಓಲೈಕೆ..

ಬಾ ನನ್ನ ಒಲವೇ

ಎದೆ ಗೂಡಿನೊಳಗೆ

ನನ್ನ ಮೇಲೆ ಏಕೆ ಮುನಿಸು |

ನೀನಿತ್ತ ಹೂಮುತ್ತು

ಅರಳಿ ಎನ್ನೆದೆಯೊಳಗೆ

ಉಲ್ಲಾಸ ನಿತ್ಯ ಸೊಗಸು ||

 

ಗೆಳತಿ ನಿನಗಾಗಿ :

ಹರಿಸುವೆನು ನೆನಪ ಪನ್ನೀರು

ಪ್ರೀತಿ ಬಾಡದಿರಲೆಂದು |

ಸುರಿಸುವೆನು ಹೂಮಳೆಯ

ಮನಸು ನೋಯದಿರಲೆಂದು |

ಮಾತ ಜೋಗುಳ ನಿನಗೆ

ಮುಖ ಬಾಡದಿರಲೆಂದು |

ನನ್ನೊಲವ ಹಾರೈಕೆ

ಎಂದು-ಎಂದೆಂದೂ.. ||

 

ನಿನ್ನ ನೆನಪು :

ನಿನ್ನೊಲುಮೆ ನನ್ನೆದೆಗೆ

ಪ್ರೀತಿ ಚೂರಿಯ ಹಾಕಿ

ನನ್ನೊಲವೇ ನೀನೆಲ್ಲಿ ಮಾಯ |

ನಿನ್ನ ನೆನಪಿನ ಕೀವು

ಅಲ್ಲಲ್ಲೆ ಹುಣ್ಣಾಗಿ

ರಕ್ತ ರಹಿತ ಗಾಯ ||

 

ನಿನ್ನ ಕನಸಿನ ಹುಡಿ :

ತುಂಬಾ ಸಲ ನೀನು

ಓಡಾಡಿ ಹೋದ

ಜಾಗವೀ ಹೃದಯದಾ ಗುಡಿ |

ನಾನಿಲ್ಲಿ ತಡಕಾಡಿ

ಪ್ರತೀ ಬಾರಿ ಗಳಿಸಿದ್ದು

ನಿನ್ನದೇ ಕನಸಿನಾ ಹುಡಿ ||

 

ಮನಸು ಮೂರಾಬಟ್ಟೆ.

ಮನಸುಗಳಾ ಅಡ್ಡದಲ್ಲಿ

ಬಯಕೆ ಕಾಡಿ ಕೋಪವಾಗಿ

ನನ್ನ ಮೇಲೆ ಸಿಟ್ಟಿನಿಂದ ಪಸರಿಕೊಂಡಿದೆ |

ಬಿಟ್ಟು ಬಿಡದ ಜಿಡ್ಡಿನಲ್ಲಿ

ಸುಖದ ರಾಡಿ ಪಾಪವಾಗಿ

ಅಡ್ಡ ಗೋಡೆ ದೀಪದಂತೆ ಹಬ್ಬಿಕೊಂಡಿದೆ ||

 

ನನ್ನ ಮುಂಜಾವಿನಲಿ :

ನಿದ್ದೆಗಣ್ಣಿಂದ ಕಣ್ಣು ತೆರೆವಾಗ

ನೀನೇ ಪ್ರಥಮ ಹೊತ್ತು |

ಪ್ರೀತಿ ನಿಟ್ಟುಸಿರು ಹೊತ್ತು ಬರುವಾಗ

ದಕ್ಕಿದ್ದೆಲ್ಲವೂ ಮುತ್ತು ||

 

ತವಕ :

ಮನೆಯ ಮಲ್ಲಿಗೆಯ ಗುಬ್ಬಿ ಗೂಡಲ್ಲಿ

ಎರಡೇ ಎರಡು ಬೆಳ್ಳಿ ಮೊಟ್ಟೆ |

ತಲೆಯೆದೆಗಾನಿಸಿ ಕೇಳಿದಳಾಕೆ

ಮರಿಯಾಗೋದ್ಯಾವಾಗ? ||

ಮನದ ಬೆಚ್ಚನೆಯ ಒಲುಮೆ ಬೀಡಲ್ಲಿ

ಹೇಳದೆಯೆ ಲಗ್ಗೆ ಇಟ್ಟೆ |

ನನ್ನೆದೆಯ ತುಂಬ ತುಂಬಿರುವ ಪ್ರೀತಿ

ನಿನಗರಿವಾಗೋದ್ಯಾವಾಗ ? ||

 

ಧನ್ಯವಾದ:

ಕಠುವಾಗಿ ಎನ್ನ ನೀ

ಬೈದು ಹೋದರೂ

ಗೆಳತಿ ಧನ್ಯವಾದ.. |

ಬೆಳಿಗ್ಗೆ ಬೆಳಿಗ್ಗೇನೇ ಬಂದು

ದರ್ಶನ ಕೊಟ್ಟಿದ್ದಕ್ಕೆ

ಮತ್ತು

ನಾನೇ ಕೊಟ್ಟ ತಿಳಿ ನೀಲಿ

ಸೀರೆ ಉಟ್ಟಿದ್ದಕ್ಕೆ. ||

 

ಪ್ರೀತಿ ಬಿತ್ತಿ :

ದ್ವೇಷ ತಾಪವೇ

ತುಂಬಿಕೊಂಡಿರುವ

ಮನವು ಕತ್ತಲಲ್ಲಿ |

sಸ್ವಲ್ಪ ತಡಕಾಡಿ

ಜಾಗ ಸಿಕ್ಕೀತು

ಪ್ರೀತಿ ಬಿತ್ತಲಿಲ್ಲಿ ||

 

ಕಳೆದುಕೊಂಡಿದ್ದು :

ಕೂಡಿ ಕಳೆಯುವ

ಲೆಕ್ಕಚಾರದಲಿ

ಬದುಕು ದಕ್ಕಲಿಲ್ಲ |

ಹಣವ ಬೆಳೆಯುವ

ಕರ್ಮಗಾರದಲಿ

ಪ್ರೀತಿ sಸಿಕ್ಕಲಿಲ್ಲ ||

 

ಈಗೀಗ :

ಗಳಿಸುವ ಹುಡುಗಿ

ಹೊರಗಡೆ ಹೋಗಿ

ಬದುಕು ಕಟ್ಟೋದು ಕಾಮನ್ನು |

ಬಳೆಯು ಕಿವಿಯಲ್ಲಿ

ಓಲೆ ಮೂಗಲ್ಲಿ

ಮಾಡಿದ್ದೆಲ್ಲವೂ ಫ್ಯಾಶನ್ನು ||

 

ಹೇಳಿ ಬಿಟ್ಟೀರಿ ಜೋಕೆ..!

ನನ್ನ ಕೆನ್ನೆಗಳೇ

ಹೇಳದಿರಿ ಯಾರಿಗೂ.

ಕಸಿದುಕೊಂಡ ಮುತ್ತ.. |

ಇವಳ ಕೈಯಲ್ಲಿ

ಲಟ್ಟಣಿಗೆಯಿದೆ..

ಹೇಳಿ ಬಿಟ್ಟೀರಿ ಮತ್ತ!॒ ||

 

ಬಂಜೆ ಗರ್ಭದ ಮೊಳಕೆ :

ಈ ಬದುಕೇ ಮರಳುಗಾಡು

ಹಠಾತ್ತನೇ ಸುರಿದ ಜಡಿಮಳೆ

ಮನತುಂಬ ಸಂತಸದ ಹೊನಲು ||

ಮನಮಹಲು ಪ್ರೀತಿ ಬೀಡು

ಹಠಮಾಡಿ ನೀ ಬಿತ್ತಿದ ಬೆಳೆ

ಬಯಸಿದಂತೆಯೇ ಒಂದು ಎರಡಾದ ಫಸಲು ||

– ರಾಘವೇಂದ್ರ ಭಟ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
10 years ago

ಚುಟುಕುಗಳ ಲೋಕ….

ಶ್ರೀವತ್ಸ ಕಂಚೀಮನೆ.

ಚುಟುಕಗಳಲ್ಲಿ ಪ್ರೀತಿ ಮದ್ದು…ಒಂದಷ್ಟು ಮುದ್ದು…:)
ಇಷ್ಟವಾದವು…

Roopa Satish
Roopa Satish
10 years ago

Tumbaa chennaagive. Ondakkinta ondu………………..

ದಿವ್ಯ ಆಂಜನಪ್ಪ

ಗಾಳಕೆ ಬೀಳೋದ್ಯಾವಾಗ? ಚೆನ್ನಾಗಿದೆ 🙂

Raghunandan K
10 years ago

Superb…

5
0
Would love your thoughts, please comment.x
()
x