ಗುಲ್ಬರ್ಗ ವೈಷ್ಣೋದೇವಿ ಮಂದಿರ: ವೈ. ಬಿ. ಕಡಕೋಳ

ಗುಲ್ಬರ್ಗ ಕರ್ನಾಟಕದ ಹೈದ್ರಾಬಾದ್ ಕರ್ನಾಟಕ ಎಂದು ಕರೆಸಿಕೊಂಡ ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಪ್ರದೇಶ. ಇದು ಬೆಂಗಳೂರಿನಿಂದ 613 ಕಿ. ಮೀ ಅಂತರದಲ್ಲಿದ್ದು ಶರಣಬಸವೇಶ್ವರ ಅಪ್ಪ ಅವರಿಂದ ಪ್ರಸಿದ್ದಿ ಪಡೆದದ್ದು. ಬೀದರ ಶ್ರೀರಂಗಪಟ್ಟಣ ಹೆದ್ದಾರಿಯ ಫಲವಾಗಿ ಸಾಕಷ್ಟು ವಾಹನ ಸೌಕರ್ಯದ ಜೊತೆಗೆ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗ ಮೂಲಕ ಹಾಯ್ದು ಹೋಗುವ ಮೂಲಕ ಇದು ಸಾರಿಗೆ ಸೌಕರ್ಯಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಇಸ್ಲಾಮಿಕ್ ಶೈಲಿಯ ಗುಂಬಜ್ಗಳು. ಬುದ್ದ ವಿಹಾರ ಮಂದಿರ. ಶರಣ ಬಸವೇಶ್ವರ ಅಪ್ಪ ಮಠ. ಗುಲ್ಬರ್ಗ ವಿಶ್ವವಿದ್ಯಾಲಯ ಮೊದಲಾದ ಸ್ಥಳಗಳಿಂದ ಪ್ರವಾಸೀ ತಾಣವೂ ಕೂಡ. ಇಲ್ಲಿ ವೈಷ್ಣೋದೇವಿ ಮಂದಿರ ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಈ ಮಂದಿರ ನಿಜಕ್ಕೂ ಅದ್ಬುತ.

108 ಅಡಿಯ ಎತ್ತರದ ಕಟ್ಟಡವನ್ನು ಗುಜರಾತ್, ಉತ್ತರ ಪ್ರದೇಶ, ಬಿಹಾರ್, ಮಹಾರಾಷ್ಟ್ರದ ಕೆಲಸಗಾರರು ಈ ನಿರ್ಮಾಣದಲ್ಲಿ ತೊಡಗಿದ್ದು. ಇದು ಗುಲ್ಬರ್ಗ ಹೊರವಲಯದ ಗಬರಾದಿ ರಿಲಿಜಿಯಸ್ ಟ್ರಸ್ಟ ವತಿಯಿಂದ ನಿರ್ಮಾಣಗೊಂಡಿದ್ದು ಸುಮಾರು ಒಂದು ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಈ ದೇವಾಲಯವು ಜಮ್ಮುವಿನ ವೈಷ್ಣೋದೇವಿ ಮಂದಿರವನ್ನು ಹೋಲುತ್ತಿದ್ದು ಅದು ನೈಸರ್ಗಿಕವಾಗಿದ್ದರೆ ಇದು ಮಾನವ ನಿರ್ಮಿತವಾಗಿದೆ. ಇದು ಗುಲ್ಬರ್ಗ ಹೊರವಲಯದಲ್ಲಿನ ಸೈಯದ್ ಚಿಂಚೋಳಿ ಬಳಿಯ ರಿಂಗ್ ರಸ್ತೆಯಲ್ಲಿದೆ. ಇದರ ಪಕ್ಕದಲ್ಲಿ ಶಾಲೆಯೊಂದಿದೆ. ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕಂತೂ ಹೋಗುವುದು ಅಸಾಧ್ಯ. ಹಣವುಳ್ಳವರಿಗೆ ಅದು ಎಟುಕಿದರೆ. ಕಡಿಮೆ ಖರ್ಚಿನಲ್ಲಿ ಈ ದೇವಾಲಯವನ್ನ ನಾವು ನೋಡಬಹುದು ಎಂಬುದು.

ಇಲ್ಲಿ ಬಂದ ತಕ್ಷಣ ಪ್ರವೇಶದರಕ್ಕನುಗುಣವಾಗಿ ಹಣ ಕೊಟ್ಟು ರಸೀದಿ ಪಡೆಯಬೇಕು. ಕ್ಯಾಮರಾ ತಂದಿದ್ದರೆ ಪೋಟೋ ತಗೆಯಲು ಅವಕಾಶವಿಲ್ಲ. ಮೋಬೈಲ್ ದಲ್ಲೂ ಕೂಡ ಪೋಟೋ ತಗೆಯುವಂತಿಲ್ಲ. ಅದಕ್ಕಾಗಿ ಸೆಕ್ಯೂರಟಿ ಸಿಬ್ಬಂಧಿ ನಿಮ್ಮನ್ನು ತಪಾಸಣೆಗೊಳಪಡಿಸಿ ಅವುಗಳನ್ನು ತಮ್ಮ ಬಳಿ ಪಡೆಯುತ್ತಾರೆ. ಇಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶದರ ಇಲ್ಲ. ವಿಶೇಷ ಚೇತನರು, ವಯಸ್ಸಾದ ವೃದ್ಧರಿಗೆ ಲಿಪ್ಟ ವ್ಯವಸ್ಥೆ ಕೂಡ ಇಲ್ಲಿದೆ. ಇದರಲ್ಲಿ ಎಂಟು ಜನಕ್ಕೆ ಅವಕಾಶವಿದೆ. ಇದರ ದರ ಒಬ್ಬರಿಗೆ 25 ರೂ. ಗಳು. ಹೀಗೆ ಪ್ರವೇಶ ದರ ನೀಡಿ ಗುಹೆಯಾಕಾರದ ಬೆಟ್ಟದ ವೈಷ್ಣೋದೇವಿ ಮಂದಿರ ಪ್ರವೇಶದಲ್ಲಿ ನಡೆದು ಬರತೊಡಗಿದರೆ ಮೊದಲಿಗೆ ಚರಣ ಪಾದುಕೆಗಳನ್ನು ಕಾಣುವಿರಿ. ಅದರ ಪಕ್ಕದಲ್ಲಿ ಗಣೇಶ. ಹನುಮಾನ. ಮೂರ್ತಿಗಳನ್ನು ನೋಡಿ ನಮಸ್ಕರಿಸಿ ಇಳಿಜಾರಿನ ಹಾಸಿನಲ್ಲಿ ನಡೆಯುತ್ತ ಬಂದರೆ ಅಲ್ಲಿ 21 ಮೆಟ್ಟಿಲುಗಳನ್ನು ಹತ್ತಿ ಮುಂದೆ ಬರಬೇಕು ಆಗ ಅರ್ಧಕುಮಾರಿ ಮಾಳ ದರ್ಶನ ಪಡೆಯುವಿರಿ. ಅಲ್ಲಿಂದ ಮತ್ತೆ 15 ಮೆಟ್ಟಿಲುಗಳನ್ನೇರಿ ಬಂದರೆ ವೈಷ್ಣವಿ ಮಾತಾ ಗುಹೆ ಕಾಣುತ್ತದೆ. ಅಲ್ಲಿ ವೈಷ್ಣವಿ ದೇವಿಯ ದರ್ಶನ ಪಡೆದು 40 ಮೆಟ್ಟಿಲುಗಳನ್ನು ಹತ್ತಬೇಕು ಅಲ್ಲಿ ಬೈರವ ಮೂರ್ತಿ ಇದೆ. ಇದೆಲ್ಲ ಗುಹೆಯೊಳಗೆ ಪ್ರಯಾಣ ಮಾಡುತ್ತ ಬೆಟ್ಟದಲ್ಲಿ ಸಾಗುತ್ತಿದ್ದರೆ ಒಂದು ರೀತಿಯ ರೋಮಾಂಚನ ಅನುಭವ ಉಂಟಾಗುತ್ತದೆ.

ಬೈರವನ ದರ್ಶನ ಮಾಡಿ ಮತ್ತೆ 50 ಮೆಟ್ಟಿಲುಗಳನ್ನು ಹತ್ತಬೇಕು. ಅಲ್ಲಿ ಮತ್ತೊಂದು ಗುಹೆಯ ಪ್ರವೇಶ ಮಾಡುವಿರಿ. ಗುಹೆಯಲ್ಲಿ 13 ಮೆಟ್ಟಿಲುಗಳನ್ನು ಇಳಿದರೆಅಮರನಾಥ. ಕೇದಾರನಾಥ. ಮಲ್ಲಿಕಾರ್ಜುನ. ತ್ರ್ಯಂಭಕೇಶ್ವರ. ವಿಶ್ವನಾಥ. ಭೀಮಾಶಂಕರ. ವೈದ್ಯನಾಥ. ಸೋಮನಾಥ. ರಾಮೇಶ್ವರ. ಓಂಕಾರೇಶ್ವರ ಹೀಗೆ ಎಲ್ಲ ಜ್ಯೋರ್ತಿಲಿಂಗಗಳನ್ನು ಕಂಡು ಪುನೀತರಾಗುವಿರಿ. ಪ್ರತಿ ಗುಹೆಯೂ ಸುಸಜ್ಜಿತ ಹವೆಯನ್ನು(ಎ. ಸಿ) ಒಳಗೊಂಡಿರುವುದು ವಿಶೇಷ. ಹೀಗೆ ನೋಡುತ್ತ ಗುಹೆಯಿಂದ ಹೊರಬರುವಾಗ ಮತ್ತೆ 13 ಮೆಟ್ಟಿಲುಗಳನ್ನು ಹತ್ತಬೇಕು ಅಲ್ಲಿ ಗುರು ದತ್ತಾತ್ರೇಯನ ದರ್ಶನವಾಗುವುದು. ಅಲ್ಲಿಂದ ಕೆಳಗೆ 17 ಮೆಟ್ಟಿಲುಗಳನ್ನು ಇಳಿದರೆ ತಿರುಪತಿ ಬಾಲಾಜಿಯ ದರ್ಶನ. ಮತ್ತೆ 23 ಮೆಟ್ಟಿಲುಗಳನ್ನು ಇಳಿದರೆ ಬಾಗಿಲು ಕಾಣುವುದು ಅದರೊಳಗೆ ಪ್ರವೇಶಿಸಿ 5 ಮೆಟ್ಟಿಲು ಇಳಿದರೆ ಮಹಾಕಾಳಿ ಮಾ ದರ್ಶನ ಮಾಡುವಿರಿ. ಅಲ್ಲೊಂದು ಗುಹೆ ಅದರ ಹೊರ ವಲಯದಲ್ಲಿ 15 ಮೆಟ್ಟಿಲುಗಳನ್ನು ಇಳಿದರೆ ಹೊರಭಾಗದಲ್ಲಿ ನೀವಿರುವಿರಿ.

ಮೊದಲು ಪ್ರವೇಶ ಪಡೆದ ದ್ವಾರದ ಬಳಿ ಇರುವ ಸೆಕ್ಯೂರಟಿಯವರನ್ನು ಭೇಟಿಯಾಗಿ ನಿಮ್ಮ ವಸ್ತುಗಳನ್ನು ಪಡೆದುಕೊಂಡು ಹೊರಬಂದಾಗ ವೈಷ್ಣೋದೇವಿಯ ದರ್ಶನದಿಂದ ಪುಣ್ಯ ಪಾವನ ಹೊಂದಿರುತ್ತೀರಿ. ಬಿಸಿಲು ನಾಡು ಗುಲ್ಬರ್ಗದಲ್ಲಿ ಇಂತಹದೊಂದು ಪ್ರವಾಸೀ ತಾಣ ಇರುವುದೇ ವಿಶೇಷ. ಅದರಲ್ಲೂ ಬಹಳಷ್ಟು ಸ್ವಚ್ಚತೆ ಮತ್ತು ಶಿಸ್ತು. ಸುವಿಹಾರಿ ದೇಗುಲವನ್ನು ಜಮ್ಮುವಿನ ಮಾದರಿಯಲ್ಲಿ ನಿರ್ಮಿಸಿರುವುದು ನಿಜಕ್ಕೂ ಅದ್ಬುತ. ಗುಲ್ಬರ್ಗಕ್ಕೆ ರಸ್ತೆ ವಿಮಾನ ರೈಲು ಹೀಗೆ ಮೂರು ರೀತಿಯ ಪ್ರಯಾಣ ಸೌಲಭ್ಯವಿದೆ. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲಿಗೆ ಬರಬಹುದು ಬೆಂಗಳೂರು ಹುಬ್ಬಳ್ಳಿ ಬೆಳಗಾವಿ ವಿಜಯಪುರ. ಬಾಗಲಕೋಟೆ ಹೀಗೆ ಎಲ್ಲ ಜಿಲ್ಲಾ ಕೇಂದ್ರಗಳಿಂದಲೂ ಬಸ್ ಸೌಕರ್ಯ ಉಂಟು.

ವೈ. ಬಿ. ಕಡಕೋಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x