ಮೂವರ ಕವನಗಳು:ಈಶ್ವರ ಭಟ್,ಎಂ.ಎಸ್.ಕೃಷ್ಣಮೂರ್ತಿ,ಅಶೋಕ್ ಕುಮಾರ್ ವಳದೂರು

 

ಆವರ್ತಿತ

ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು
ಕಿರಣಗಳು ಹೊಳಪಿಸಿದ ಬಣ್ಣಗಳನು
ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು?
ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು. 

ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ
ಮೂಡಿ ಕಾಮನಬಿಲ್ಲು ಹನಿಗಳೊಳಗೆ
ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ
ಮೀರಿ ಸಾಗುವ ಮನಕೆ ಎಷ್ಟು ಘಳಿಗೆ?

ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ?
ಆರಿಹೋಗುವುದೇನು ಖಚಿತ ಸಾವೆ?
ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು
ರಾತ್ರಿ ಬೆಳಗಿನ ವರೆಗೆ ಸುಖದ ನಾವೆ

ನಾಳೆ ನಾ ಕಾಯುವೆನು ಇನ್ನೊಂದು ಹನಿಗಾಗಿ
ಹನಿಗಳೊಳಗಿನ ಬಣ್ಣ ಕನಸಿಗಾಗಿ
ಸುಖದಮಲು ಕರಗೀತು, ಬಾಳು ನಿಜ ತೆರೆದೀತು
ಎದೆಯೊಳಗೆ ಉಳಿಯಲದು ಶಾಂತಿಯಾಗಿ.

-ಈಶ್ವರ ಭಟ್


ಈಗೆಲ್ಲಾ ಬರುತ್ತಿಲ್ಲಾ ಕನಸಲ್ಲಿ ಆ ರಾಜಕುಮಾರ


ಬೀಳಿ ಕುದುರೆಯ ಮೇಲ

ಮಂದಹಾಸದ ಸುರಸುಂದರಾಂಗ ಆ ರಾಜಕುಮಾರ

ಹಾರಿಬಂದಿಳಿಯುತ್ತಿದ್ದ ಕನಸಲ್ಲಿ

ನಗಿಸಿ, ಮೋಹಿಸಿ, ಮುದ್ದಿಸಿ

ಸಪ್ತಸಾಗರದಾಚಿಗಿನ ದ್ವೀಪದ ಬಣ್ಣ ಬಣ್ಣದ

ಗಿಳಿಯ ಕಥೆ ಹೇಳಿ ರಮಿಸುತ್ತಿದ್ದ

ಈಗೆಲ್ಲಾ ಬರುತ್ತಿಲ್ಲಾ ಕನಸಲ್ಲಿ ಆ ರಾಜಕುಮಾರ

ನಡುರಾತ್ರಿ ಮೀರಿದಂತೆಲ್ಲಾ ಕನಸುಗಳ

ಮಬ್ಬೆಳಕಿನಲಿ ಮೂಳೆ ಮೂಳೆಗಳು ಪುಡಿ ಪುಡಿಯಾದಂತೆ,

ಉಸಿರುಗಟ್ಟಿ, ನೆತ್ತರು ಚಿಮ್ಮಿ ಕಾರಂಜಿಯಾಗಿ,

ಸಂದಿಗೊಂದಿಗಳಲ್ಲೇಲ್ಲಾ ಅಂಟು ಅಂಟು

ತಿವಿದು ಮೀಟಿದ ಹಾರೆ ಚೂಪು ಚೂಪು,

ಹೊಡೆತ,ಕೇಕೆ,ಆಟ್ಟಾಹಾಸ,ತಿರಸ್ಕಾರ,

ಮಾಯಾ ಮಾಂತ್ರಿಕನ ಉಗುರುಗುರಲ್ಲಿ

ದೇಹ ಕಿತ್ತು ತಿಂದ ಮಾಂಸ

ಚಿಟ್ಟನೆ ಚೀರಿ ಕೂರುವಾಗ,… ಕನಸು ಕರಗುವಾಗ

ಒಮ್ಮೊಮ್ಮೆ …

ಬೆಳ್ಳಂಬೆಳಗಿನ ಕನಸಲ್ಲಿ ಬರುತ್ತಾನೆ ರಾಜಕುಮಾರ

ನಡುನಡುಗವ ಕಣ್ಣೀರಿಡುವ

ಮೋಹಕ, ಮಾಯಾಮೃಗದ ಮೇಲೆ

ಅದರ ಕೊಂಬಿಡಿದು, ಚಾಟಿ ಬೀಸುತ್ತಾ

ಥೂ… ಹೋಗು… ಹೋಗು.. ಅನ್ನುವಾಗ

ಅರೆ ಎಚ್ಚರಗೊಂಡ

ಮಗಳೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ

ತೋಡೆಯ ಮೇಲೆ ತಲೆಯಿಟ್ಟು ಚೀರುತ್ತಾಳೆ

"ಅಮ್ಮಾ ಅಮ್ಮಾ ಹಿಂಸೆ,ಬಸ್ಸು,ಕಾಲೇಜು,ಮಾರ್ಕೆಟ್,ಎಲ್ಲಾ ಹಿಂಸೆ"

"ಹಿಂಸೆ,ಹಿಂಸೆ,ಹಿಂಸೆ

 

-ಎಂ.ಎಸ್.ಕೃಷ್ಣಮೂರ್ತಿ


 

 ವೃದ್ಧಾಶ್ರಮ 
 
ಎಪ್ಪತ್ತರ ಹರೆಯದ ಮುದಿಕಂಗಳಲ್ಲಿ 
ಇನ್ನೂ ಉಳಿದಿದೆ ದೃಷ್ಟಿಯೆಂಬ ಬೆಳಕು 
ಆಶ್ರಮದ ಗೇಟು ಬಳಿ ನಿಂದು ದಾರಿ ಕಾಣಲು 
ದೂರದೂರಿಂದ ಬರುವ ಮನೆಯ ಅತಿಥಿಗೆ !
 
ಮೆಲ್ಲಗೆ ಸುರಿದ ಕಣ್ಣೆವೆಯ ಹನಿಗಳು 
ಮನದಾಳದ ಮಂಥನದ ಕಲಹವ
ಜತನದಿಂದ ಕಥೆಯಾಗಿ ಬಿತ್ತರಿಸಿದೆ !
 
ಪರಿವೆಯಿಲ್ಲದೆ ಕಳೆದ ಸಂತಸದ ಕ್ಷಣಗಳು
ಒಲವಿನಲ್ಲಿ ಹಾಡಿದ ನಂಟಿನ ಪದಗಳು
ಚಿಗುರೊಡೆದ ಲಲನೆಯ ಕೂಸುಗಳು
ತ್ಯಾಗ ಸಮರ್ಪಣೆಯ ಉದಯರಾಗಗಳು
ಸಾಲದುದಕ್ಕೆ ಸಾಲದ ಭಾರೀ ಹೊರೆಗಳು !
 
ಇಂದು ಮಾತಿಲ್ಲ ಎಲ್ಲಾ ಮೌನ ! ಒಳಗೊಳಗೆ ಗೌಣ
ಸುಗ್ಗಿಯ ಹಾಡಿಲ್ಲ , ಹಿಗ್ಗಿನ ಕುಣಿತವಿಲ್ಲ
ಗಾಂಭೀರ್ಯದ ಹೆಜ್ಜೆ ಇಲ್ಲ ಮಾಧುರ್ಯದ ಸ್ವರವಿಲ್ಲ
ಹಚ್ಚಿ ಮಾತಾಡಲು ಅಚ್ಚುಮೆಚ್ಚಿನವರಿಲ್ಲ !
 
ಅಕ್ಕರೆಯ ನುಡಿಯೊಂದು ಒಪ್ಪೊತ್ತು ಸಾಕೆಂದೆ
ತ್ರಾಣವಿಲ್ಲದ ಮೈಗೆ ಊರುಗೋಲು ಅದೆಂದೆ
ದೂಡಿದರು ದೂರದ ವಾಸಕೆ…ಅಪಹಾಸ್ಯಕೆ
ತಬ್ಬಿ ಮುದ್ದಾಡುವ ಹೃದಯ ಬೇಕೆಂದೆ !
 
ನಿನ್ನವರ  ನೀನೆಂದೂ ಜರೆಯಲಿಲ್ಲ
ಕಾಲವನ್ನೇ ಕೆಟ್ಟದೆಂದೆ…ಕಾಲವೇ ಕೆಟ್ಟಿತ್ತೆಂದೆ!
ಇಂದಾದರೂ ಬರುವನೆಂದು…..
ಕದಡದೆ ನಿಂದೆ ಆಶ್ರಮದ ಬಾಗಿಲೊಳು……….!
 
– ಅಶೋಕ್ ಕುಮಾರ್ ವಳದೂರು

 

 

 

 

 

 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

good

Hussain
11 years ago

ಮೂರಕ್ಕೆ ಮೂರು ಉತ್ತಮ … 

hipparagi Siddaram
hipparagi Siddaram
11 years ago

ಮೂರು ಕವನಗಳು ಚೆನ್ನಾಗಿವೆ….

ಶ್ರೀವತ್ಸ ಕಂಚೀಮನೆ.

ಒಂದಕಿಂತ ಒಂದು…ಎಲ್ಲವೂ ಉತ್ತಮ…

ravikiran
11 years ago

ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು
ಕಿರಣಗಳು ಹೊಳಪಿಸಿದ ಬಣ್ಣಗಳನು
ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು?
ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.

Waaaaaaaaw … superb lines

ರುಕ್ಮಿಣಿ ನಾಗಣ್ಣವರ

ಮೂರು ಕವನಗಳು ಉತ್ತಮ…

Santhoshkumar LM
Santhoshkumar LM
11 years ago

ಎಲ್ಲವೂ ಚೆನ್ನಾಗಿವೆ

thirumala raya halemane
thirumala raya halemane
11 years ago

Odide, chennaagide, innoo bareyutthiri. ee mooru kavanagaLa vishayagaLu eegina kaalakke anwayisuvudarinda matthashtu kuthoohalakaariyaagi ive. the first poem displays an intelligent imaginative mind in dreamy observation of nature, the second one is about the dreamy hopeful and anxiety filled emotions of a youthful mind. the third one is about the concerns, desperation, hollowness experienced by an old person in retirement home. all very relevant to the times.

Somesh N Gowda
11 years ago

ಮೂರು ಕವನಗಳು ಚೆನ್ನಾಗಿವೆ…

ಸಂಜಯ್ ಮೊವಾಡಿ
ಸಂಜಯ್ ಮೊವಾಡಿ
10 years ago

superb !! ಅರ್ಥ ಗರ್ಬಿತವಾಗಿದೆ.

10
0
Would love your thoughts, please comment.x
()
x