ಕನ್ನಡ ಕಣ್ಮಣಿ “ಅನ್ನದಾನಯ್ಯ ಪುರಾಣಿಕ”: ಉದಯ ಪುರಾಣಿಕ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ ಜೀವನ-ಸಾಧನೆ-ಕನ್ನಡ ಪ್ರೇಮ ಎಲ್ಲಾ ಕನ್ನಡಿಗರಿಗೂ ಪ್ರೇರಣೆಯಾಗಿದೆ.

ಕನ್ನಡ ನುಡಿ, ಗಡಿ ಮತ್ತು ಗುಡಿಗಳ ರಕ್ಷಣೆಗೆ ಮತ್ತು ನಡಕಟ್ಟಿದ ಕಟ್ಟಾಳು, ಚತುರ ಮತ್ತು ಸಮರ್ಥ ಸಂಘಟಕ, ಆರ್ಥಿಕ ಸಂಕಷ್ಟದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಜೀವ ನೀಡಿದ ಭೂತಪೂರ್ವ ಗೌರವ ಕಾರ್ಯದರ್ಶಿ, ಪರಿಷತ್ತಿನ ಮುಖವಾಣಿ “ಕನ್ನಡ ನುಡಿ”ಯ ಮಾಜಿ ಸಂಪಾದಕ, ಪ್ರಪ್ರಥಮ ಕನ್ನಡ-ನಿಘಂಟು ಪ್ರಕಟಣೆ ಮತ್ತು ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳ ರೂವಾರಿ, ಕರ್ನಾಟಕ ಭಾಷಾ ಆಯೋಗ ಮತ್ತು ಕರ್ನಾಟಕ ಗೆಜೆಟಿಯರ್ ಸಮಿತಿಯ ಮತ್ತು ಅಖಿಲ ಭಾರತ ವಕೀಲರ ಪರಿಷತ್ತಿನ ಮಾಜಿ ಸದಸ್ಯ, ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕ ಮತ್ತು ಪ್ರಥಮ ಪ್ರಧಾನ ಕಾರ್ಯದರ್ಶಿ, ಸಾವಿರಾರು ಜನ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ನ್ಯಾಯ ಒದಗಿಸಿಕೊಟ್ಟ ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಪ್ರಸಿದ್ಧ ವಾಗ್ಮಿ, ಪ್ರಧ್ಯಾಪಕ, ಕವಿ, ಲೇಖಕ, ಚಿಂತಕ, ವಿಮರ್ಶಕ, 3000ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಖ್ಯಾತ ಅಧುನಿಕ ವಚನಕಾರ, ಕಟ್ಟಾ ಗಾಂಧೀವಾದಿ –   ಶ್ರೀ ಅನ್ನದಾನಯ್ಯ ಪುರಾಣಿಕರನ್ನು ವರ್ಣಿಸುವುದು ಹೇಗೆ? ಯಾವ ವರ್ಣನೆಯೂ ಕಡಮೆಯೇ !

ಅಂದಿನ ನಿಜಾಂ ಸಂಸ್ಥಾನದ ರಾಯಚೂರು ಜಿಲ್ಲೆಯ, ಇಂದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ( 8 ಮಾರ್ಚ 1928)ರಂದು ಜನಿಸಿದ ಪುರಾಣಿಕರ ತಂದೆ ಖ್ಯಾತ ಪ್ರವಚನಕಾರ, ವೈದ್ಯರು ಮತ್ತು ಕವಿಗಳಾಗಿದ್ದ ಪಂಡಿತ ಕಲ್ಲಿನಾಥಶಾಸ್ತ್ರೀಗಳು ಮತ್ತು ತಾಯಿ ದಾನದ ಪ್ರತಿರೂಪವೇ ಆಗಿದ್ದ ದಾನಮ್ಮ. ಆ ಭಾಗದ ಓರ್ವ ಮಹಾತಪಸ್ವಿಗಳ ಕೃಪಾಶಿರ್ವಾದದ ಬಲ ಪಡೆದುಕೊಂಡೇ ನನ್ನ ಮಗ ಹುಟ್ಟಿದ, ಅದಕ್ಕಂದೇ ಆ ತಪಸ್ವಿಗಳ ಹೆಸರನ್ನೇ ನನ್ನ ಮಗನಿಗೆ ( ಅನ್ನದಾನಯ್ಯ) ಎಂದಿಟ್ಟಿರುವೆ – ಎಂದು ಅವರ ತಾಯಿ ಆಗಾಗ ಹೇಳುತ್ತಿದ್ದರು. ಆ ಮಹಾತಪಸ್ವಿಗಳು ಮೆಚ್ಚುವಂತೆ ಜೀವನ ನೆಡೆಸಿದ್ದಾರೆ ಪುರಾಣಿಕರು. ಕಡುಬಡತನದಲ್ಲಿ ಬೆಳೆದ ಅನ್ನದಾನಯ್ಯ ಅಂದಿನಿಂದ ಇಂದಿನವರೆಗೂ ಸಮಾಜದಲ್ಲಿರುವ ಬಡವರ ಮತ್ತು  ದಮನಿತರ ನೋವು ಮತ್ತು ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಸಹಾಯ ಮಾಡುವ ತನು-ಮನ-ಧನದ ದಾಸೋಹ ನೆಡೆಸುತ್ತಿದ್ದಾರೆ. 

ಕುಗ್ರಾಮವೊಂದರಲ್ಲಿ ಬೆಳೆದ, ಶಿಕ್ಷಣ ಪಡೆದ, ಯಾವುದೇ ಶಿಫಾರಸು ಪತ್ರಗಳೂ ಇಲ್ಲದ ಈ ಹಳ್ಳಿಯ ಹೈದ, ಕನ್ನಡ ಕಣ್ಮಣಿಯಾಗಿ, ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದು ಯಾರಾದರೂ ಬೆರಳು ಕಚ್ಚುವಂತಿದೆ. ಅವರ ಈ ಸಾಧನೆಗೆ ಪ್ರೇರಣೆ, ನಿರಂತರ ಪ್ರಚೋದನೆ, ಗುರಿಯತ್ತ ಗಮನಕ್ಕೆ ಬೆಂಗಾವಲಾದ ಕುಗ್ಗದ ಸ್ಥೈರ್ಯ ಮತ್ತು ಅಪಾರ ಸಹನೆಗಳ ರಹಸ್ಯವನ್ನು ಅರಸುವ ಪ್ರಯಾಸವು ಹೃದಯಂಗಮವಾಗಿರುವಂತೆ ಅದು ಉಜ್ವಲವೂ ಆಗಿರುತ್ತದೆ. 

ಅನ್ನದಾನಯ್ಯ ಪುರಾಣಿಕರ ಬಾಳಬಟ್ಟೆಗೆ ದಾರಿದೀಪಗಳಾಗಿ ಬೆಳಗುತ್ತಿರುವ ವ್ಯಕ್ತಿಗಳು ಇಬ್ಬರು : ಒಬ್ಬರು ಹನ್ನೆರಡನೆಯ ಶತಮಾನದಲ್ಲಿ ಕಿರಿಯ ವಯಸ್ಸಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಶರಣ ಚೆನ್ನಬಸವಣ್ಣನವರು, ಮತ್ತೊಬ್ಬರು ಹರನ ಮುಡಿಯಿಂದ ಇಳಿದು ಬಾ ತಾಯಿ ಎಂದು ಗಂಗಾವತರಣ ಮಾಡಿಸಿದ ಭಗೀರಥರು. ಬಾಲ್ಯದಲ್ಲಿಯೇ ಪುರಾಣಿಕರ ಭಾವವನ್ನು ಒಳಹೊಕ್ಕ ಮತ್ತು ಮನದಲ್ಲಿ ನೆಲೆನಿಂತ ಈ ಇಬ್ಬರ ಅಮೋಘ ವ್ಯಕ್ತಿತ್ವ ಮತ್ತು ಗೌರಿಶಂಕರ ಸಾಧನೆಗಳು ಪುರಾಣಿಕರ ವ್ಯಕ್ತಿತ್ವ ವಿಕಸನದಲ್ಲಿ “ಸತ್ವದ” ಪಾರಮ್ಯತೆ ಮತ್ತು ಅಂತರಿಕ ಸತ್ವದ ಅದಮ್ಯತೆಗಳನ್ನು ದೃಢಗೊಳಿಸಿದವು.

ತಾನು ಜೀವಿಸಿದ ಕೇವಲ 25 ವರ್ಷಗಳ ಅವಧಿಯಲ್ಲಿ ಚೆನ್ನಬಸವಣ್ಣ ಮಾಡಿದ್ದು, ಸಾಧಿಸಿದ್ದು ಮತ್ತು ಸಿದ್ಧಿಸಿದ್ದು ‘ದಂತಕತೆ’ಯಂತಾಗಿದೆ. ಶರಣರ ಆಂದೋಲನದ ನಾಯಕ ಬಸವಣ್ಣನ ಬಲಗೈಯಾಗಿ, ಬಸವನ ನಡೆ-ನುಡಿಗಳ, ಗುರಿ-ಗಮ್ಯಗಳ ಸೂಕ್ಷ್ಮ ಪರೀಕ್ಷಕನಾಗಿ, ಅನುಭವ ಮಂಟಪದ ಸಾರಥಿಯಾಗಿ, ಧರ್ಮಸೂಕ್ಷ್ಮಗಳ ಸಂಹಿತೆಯ ರೂಪಕನಾಗಿ ಚೆನ್ನಬಸವಣ್ಣ ತಲುಪಿದ ಎತ್ತರ ಹಾಗೂ ಚಲಿಸಿದ ಬಿತ್ತರಗಳು ಪುರಾಣಿಕರಲ್ಲಿ ಅಪಾರವಾಗಿ ಪ್ರಭಾವ ಬೀರಿದವು ಮತ್ತು ಸದಾ ಜಾಗೃತವಾಗಿದ್ದು ದಾರಿ ತೋರಿಸುತ್ತಲಿವೆ. ಚೆನ್ನಬಸವಣ್ಣನಿಂದ ತಾವು ಪಡೆದ ಜೀವನ-ಸಂಜೀವನಿಯ ಪ್ರೇರಣೆಗೆ ಕಾಣಿಕೆ ಎನ್ನುವಂತೆ ಪ್ರಪ್ರಥಮವಾಗಿ ಆತನ ಕೃತಿಗಳನ್ನು ಪರಿಶ್ರಮದಿಂದ ಕಲೆಹಾಕಿ ಶಾಸ್ತ್ರೀಯವಾಗಿ ಶೋಧಿಸಿ ಸಂಪಾದಿಸಿ “ಚೆನ್ನಬಸವ ಸಾಹಿತ್ಯ” ಎಂಬ ಹೆಸರಿನಲ್ಲಿ 1956ನಲ್ಲಿ ಪ್ರಕಟಿಸಿದರು. ಆಗಿನ್ನೂ ಅವರು ಲಾ ಕಾಲೇಜಿನ ವಿದ್ಯಾರ್ಥಿ. ಆ ಕೃತಿಗೆ ಪಂಡಿತ ಪ್ರಕಾಂಢ ಡಾ.ಎಸ್.ಸಿ.ನಂದೀಮಠರು ಅಮೂಲ್ಯವಾದ ಮುನ್ನಡಿ ಬರೆದಿದ್ದು ಪುರಾಣಿಕರ ಸಾಧನೆಯನ್ನು ಮತ್ತು ಕೃತಿಯ ಸತ್ವವನ್ನು ಸೂಚಿಸುತ್ತದೆ. ಆ ಗ್ರಂಥವು ಶರಣ ಸಾಹಿತ್ಯ ಅಧ್ಯಯನಕ್ಕೆ ಹೊಸ ಬಾಗಿಲನ್ನೇ ತೆರೆದದ್ದು ಇತಿಹಾಸ.

ಭಗೀರಥ ಹರನ ಜಟಾಜೂಟದಿಂದ ಗಂಗೆಯನ್ನು ಪ್ರಯಾಸಪಟ್ಟು ಧರೆಗೆ ಇಳಿಸಿದ ಧೀರ, ಅಸದೃಶ ಸಾಧಕ. ದೃಢ ಸಂಕಲ್ಪ, ಸಂಕಲ್ಪಕ್ಕೆ ಅನುಗುಣವಾದ ಕ್ರಿಯಾಕಲ್ಪ, ಸವೆಯದ ಸಹನೆ, ಯೋಜನೆಯ ಹೆಜ್ಜೆ, ಹೆಜ್ಜೆಗೆ ಅನಿವಾರ್ಯವಾಗಿರುವ ಸಂಪನ್ಮೂಲಗಳ ಶೇಖರಣೆ ಮತ್ತು ಸದೂಪಯೋಗ – ಇವುಗಳ ಸಂಕೇತನಾಗಿದ್ದಾನೆ ಭಗೀರಥ. ಅವನ ಬಗ್ಗೆ ಪುರಾಣಿಕರಿಗೆ ಎಷ್ಟು ಪರಿಯ ಅಭಿಮಾನವೆಂದರೆ, ಅವನ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಒಂದು ಚರಿತ್ರೆಯನ್ನೇ 1960 ರಲ್ಲಿ ಬರೆದರು. ಅದು ಕನ್ನಡ ಯುವಜನಾಂಗಕ್ಕೆ ಪ್ರೇರಣೆಯಾಗಿರಲಿ ಎಂಬ ಆಶಯದಿಂದ ಅರ್ಪಿಸಿದರು. ಅದು ಶಿಕ್ಷಣ ಕ್ರಮ ನಿರ್ಮಿಸುವ ಮಂದಿಗಾಗಲಿ, ಮಕ್ಕಳನ್ನು ಹೆತ್ತ ತಂದೆತಾಯಂದಿರಿಗಾಗಲಿ ಎಂದಿಗೂ ಒಂದು ಪ್ರೇರಣೆಯ ಪಾಠವಾಗಿದೆ. ರಾಜ್ಯ ಸಾಹಿತ್ಯ ಅಕೆಡೆಮಿಯ ಪ್ರಶಸ್ತಿಯನ್ನು ಈ ಪುಸ್ತಕ್ಕೆ ನೀಡಲಾಗಿದೆ.

ಚೆನ್ನಬಸವಣ್ಣ ಮತ್ತು ಭಗೀರಥರಿಂದ ಕಲಿತ ಪಾಠವೆಂದರೆ ಯಾವುದೇ ಸಮಸ್ಯೆಯಿರಲಿ, ಅದನ್ನು ಹಿಮ್ಮೆಟ್ಟದೆ ಎದುರಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಲುವ ಕೌಶಲ, ಆ ಪ್ರವೃತ್ತಿ ಪುರಾಣಿಕರನ್ನು ಬಹಳ ಎತ್ತರದವರೆಗೆ ತಲುಪಿಸಿದೆ. 

ಪುರಾಣಿಕರದು ಎಂದೂ ಒಂಟಿ ಸಲಗದ ಬದುಕಲ್ಲ. ಯಾವಾಗಲೂ ಗೆಳೆಯರ, ಆಪ್ತರ ಗುಂಪು ಕಟ್ಟುತ್ತಿದ್ದರು. ಎಲ್ಲರೂ ಸ್ಕೂಲು-ಕಾಲೇಜಿಗೆ  ಹೋಗುವುದು ಕಲಿಯಲಿಕ್ಕೆ, ಆಟ ಓಟದಲ್ಲಿ ಒಂದಿಷ್ಟು ನಲಿಯಲಿಕ್ಕೆ. ಪುರಾಣಿಕರ ಹುಟ್ಟುಗುಣವೆಂದರೆ, ಕಲಿಯುವುದಂತೂ ಸರಿಯೆ, ಆಟ-ಓಟಗಳಲ್ಲಿ ಮೆರೆಯುವುದೂ ಸರಿಯೆ, ಆದರೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗುರುತಿಸುವುದು, ಅವುಗಳ ಪರಿಹಾರಕ್ಕೆ ಸಂಬಂಧಿಸಿದವರ ಗಮನ ಸೆಳೆಯುವುದು ಅದು ಅದ್ಯವಾಗಿತ್ತು. ಅದಕ್ಕೆಂದು ಒಂದು ವಿದ್ಯಾರ್ಥಿ ಸಂಘ ಹುಟ್ಟುತ್ತಿತ್ತು, ಅದರ ಕರ್ಣಧಾರತ್ವ ಅವರಿಗೆ ಸಲ್ಲುತ್ತಿತ್ತು. ಅವರು ಕೊಪ್ಪಳದಲ್ಲಿ ಓದಲಿ, ಗುಲಬರ್ಗಾದಲ್ಲಿ ಕಲಿಯಲಿ, ಹೈದರಾಬಾದಿನಲ್ಲಿ ಅಭ್ಯಾಸ ಮಾಡಲಿ, ಅಲ್ಲಲ್ಲಿ ವಿದ್ಯಾರ್ಥಿ ಸಂಘಗಳು ಹುಟ್ಟುತ್ತ ಹೋದವು. ಅಂದಿನ ಪರಿಸರಕ್ಕೆ ಪರಿಸ್ಥಿತಿಗೆ ತಕ್ಕಂತೆ ವಿದ್ಯಾರ್ಥಿಗಳ ಮತ್ತು ವಿಶೇಷವಾಗಿ ಬಡವರ, ದಲಿತರ, ಅಲ್ಪಸಂಖ್ಯಾತರ ಕ್ಷೇಮಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾದವು.

ಅನ್ನದಾನಯ್ಯ ಪುರಾಣಿಕ

1942ರಲ್ಲಿ ರಾಜ್ಯದಲ್ಲಿ ನೆಡೆದ ಚಲೇಜಾವ್ ಮತ್ತು ಸ್ವಾತಂತ್ರ್ಯ ಚಳುವಳಿಯ ನಾಯಕರಲ್ಲಿ ಒಬ್ಬರಾಗಿ ಬ್ರಿಟೀಷರ ದೌರ್ಜನ್ಯವನ್ನು ಎದುರಿಸಿದ ಅನ್ನದಾನಯ್ಯ, ನಂತರ 1947-48ರಲ್ಲಿ ಹೈದರಾಬಾದು ಸಂಸ್ಥಾನದ ಪೋಲಿಸರು ಮತ್ತು ಉಗ್ರಗಾಮಿಗಳಾದ ರಜಾಕಾರರ ದೌರ್ಜನ್ಯದ ವಿರುದ್ಧ ಸಿಡಿದ್ದೆದರು. ಭಾರತದೊಡನೆ ಹೈದರಾಬಾದು ಸಂಸ್ಥಾನ ವಿಲೀನವಾಗುವುದನ್ನು ವಿರೋಧಿಸುವ ರಜಾಕಾರರು ಜನಸಾಮಾನ್ಯರ ಮೇಲೆ ನೆಡೆಸಿದ ಹಿಂಸೆ ಮತ್ತು  ದೌರ್ಜನ್ಯ ಇಡೀ ಮನುಕುಲದ ಇತಿಹಾಸದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತಿದೆ. ಆಗ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಅನ್ನದಾನಯ್ಯನವರು, ತಮ್ಮ ವಿದ್ಯಾಭ್ಯಾಸ ತೊರೆದು ಸಾವಿರಾರು ಜನ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರನ್ನು ರಜಾಕಾರರಿಂದ ರಕ್ಷಿಸಲು ಮುಂದಾದರು. ಅನ್ನದಾನಯ್ಯನವರ ಹೋರಾಟದ ಬದುಕಿಗೆ ಹೊಸ ಆಯಾಮ ದೊರೆಯಿತು. ಅವರ ಕತೃತ್ವಶಕ್ತಿಗೆಯ ಅವಿಷ್ಕಾರಕ್ಕೆ ಹೊಸ ಕ್ಷೇತ್ರ ಲಭಿಸಿತು. ರಾಯಚೂರು ಜಿಲ್ಲೆಯ ಗಡಿಗಂಟಿದ ಮುಂಬೈ ರಾಜ್ಯದ ಮುಂಡರಗಿ ಮೊದಲಾದ ಗ್ರಾಮಗಳ ಪ್ರದೇಶ ಪುರಾಣಿಕರೂ ಹಾಗೂ ಅವರ ಸ್ನೇಹಿತರ ಪಾತ್ರಕ್ಕೆ ಆಹ್ವಾನ ನೀಡಿತು. ಹೀಗೆ ರಾಜ್ಯದಲ್ಲಿ ನೆಡೆದ ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ಮುನ್ನುಡಿಯನ್ನು ಬರೆದ ಅನ್ನದಾನಯ್ಯನವರು ಮುಂಡರಗಿ ಶಿಬಿರದಲ್ಲಿ ಸಮಾನಮನಸ್ಕರ ಮತ್ತು ಉತ್ಸುಕ ಸ್ನೇಹಿತರ ಒಂದು ಪಡೆಯನ್ನು 1947ರಲ್ಲಿ ಸಂಘಟಿಸಿದರು. ನಿರಾಯುಧವಾಗಿದ್ದ ಈ ಪಡೆ ಯಾರಿಗೂ ತಿಳಿಯದಂತೆ ನಿಜಾಮ ಸಂಸ್ಥಾನದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಧುನಿಕ ಬಂದೂಕುಗಳನ್ನು ಹೊಂದಿದ್ದ ರಜಾಕಾರರ ವಿರುದ್ಧ ಕಾರ್ಯಾಚರಣೆ ನೆಡೆಸುತ್ತಿತ್ತು ಹಾಗೂ ಯಾವ ಹಾನಿಯನ್ನೂ ಅನುಭವಿಸದೆ ಬೆಳಗಾಗುವುದರಲ್ಲಿ ತನ್ನ ನೆಲೆಗೆ ಹಿಂತಿರುಗುತ್ತಿತ್ತು. ಇದು ರಜಾಕಾರರಿಗೆ ಬರೆ ಎಳೆಯುವ ಕೆಲಸವಾಗಿತ್ತು. ಅವರ ಸ್ಥೈರ್ಯ ಕುಗ್ಗಿಸುವ ಹುನ್ನಾರವಾಗಿತ್ತು. ಈ ಪಡೆಗೆಳ ಸಂಘಟನೆ, ಅವುಗಳು ಅನುಸರಿಸಬೇಕಾದ ರಣತಂತ್ರ, ರಹಸ್ಯವರದಿ ವರ್ತಮಾನಗಳ ವಿಲೇವಾರಿ ಮತ್ತು ಪ್ರಚಾರ ಇವು ಅನ್ನದಾನಯ್ಯನವರ ನೇತೃತ್ವದಲ್ಲಿ ರೂಪಗೊಳ್ಳುತ್ತಿದ್ದವು. ಅನ್ನದಾನಯ್ಯನವರ ನೇತ್ರತ್ವದಲ್ಲಿ ಮುಂಡರಗಿ ಶಿಬಿರಾರ್ಥಿಗಳು ನೆಡೆಸಿದ ಹೋರಾಟಕ್ಕೆ ಸೋತು ಕಂಗೆಟ್ಟ ರಜಾಕಾರರು ಮತ್ತು ನಿಜಾಮ್ ಪೋಲಿಸರು ಪಲಾಯನ ಮಾಡಿದರು. ಅನ್ನದಾನಯ್ಯನವರು ಹೈದರಾಬಾದು ಸಂಸ್ಥಾನದ 87 ಹಳ್ಳಿಗಳನ್ನು ಸ್ವತಂತ್ರಗೊಳಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಈ ಹಳ್ಳಿಗಳು ಸ್ವತಂತ್ರ ಭಾರತದ ಭಾಗವೆಂದು ಘೋಷಿಸಿದರು. ಸಾವಿರಾರು ಕುಟುಂಬಗಳನ್ನು ರಜಾಕಾರರಿಂದ ರಕ್ಷಿಸಿದರು. ಈ ಸೋಲಿನಿಂದ ರಜಾಕಾರರಾಗಲಿ ಅಥವಾ ಹೈದರಾಬಾದಿನ ನಿಜಾಮನಾಗಲಿ ಮತ್ತು ದಕ್ಷಿಣ ಭಾರತದಲ್ಲಿ ಮತ್ತೊಂದು ಪಾಕಿಸ್ತಾನವನ್ನು ಸ್ಥಾಪಿಸುವ ಹುನ್ನಾರದಲ್ಲಿದ್ದ ಭಾರತದ ವಿರೋಧಿಗಳಾಗಲಿ ಚೇತರಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಸರದಾರ ಪಟೇಲ್‍ರು ಅನ್ನದಾನಯ್ಯನವರ ಹೋರಟವನ್ನು ಮೆಚ್ಚಿ, ಕೇಂದ್ರ ಮಂತ್ರಿ ಗಾಡ್ಗೀಲ್‍ರನ್ನು ಮುಂಡರಗಿಯ ಶಿಬಿರಕ್ಕೆ ಕಳುಹಿಸಿದ್ದರು. ನಿಜಲಿಂಗಪ್ಪನವರು ಮೊದಲಾದ ರಾಜ್ಯ ನಾಯಕರು ಅನ್ನದಾನಯ್ಯನವರಿಗೆ ನೈತಿಕ ಬೆಂಬಲ ಸೂಚಿಸಿದರು. ಪುರಾಣಿಕರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಅದೇಶ ಹೊರಡಿಸಿದ ಹೈದರಬಾದು ನಿಜಾಮ, ಮುಂದೆ 1948ರಲ್ಲಿ ಭಾರತಕ್ಕೆ ಸೋತು ಶರಣಾಗಿ ತನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿದ. ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ 2 ವರ್ಷಗಳ ಕಾಲ ವಿದ್ಯಾಭ್ಯಾಸ ಕಳೆದು ಕೊಂಡಿದ್ದಲ್ಲದೆ, ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು ಅನ್ನದಾನಯ್ಯನವರು.  ಆದರೆ ಅವರಲ್ಲಿ ಹುದುಗಿದ್ದ ಅನೇಕ ಶಕ್ತಿಗಳನ್ನು ಹೊರಹೊಮ್ಮಿ ಅವರ ಸತ್ವವನ್ನು ಸದೃಢಗೊಳಿಸಿದವು. ಮುಂದೆ ರಾಷ್ಟ್ರೀಯ ಮತ್ತು ರಾಜ್ಯದ ಮುತ್ಸದ್ಧಿಗಳ ಹಿತವಾದ ಕೇಳಿ, ಓದು ಮುಂದುವರೆಸಲು ಸಿದ್ಧರಾದ ಪುರಾಣಿಕರಿಗೆ , ಹೈದರಾಬಾದಿಗೆ ಹಿಂತಿರುಗಿ ಉಳಿದ ಸ್ನೇಹಿತರು ತಾವು ಹೈದರಾಬಾದು ಸಂಸ್ಥಾನ ಹೋರಾಟದಲ್ಲಿ ಭಾಗವಹಿಸಿದೆವೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದ ಸನ್ಮಾನ ಮತ್ತು ಸವಲತ್ತುಗಳ ಲಾಭ ಪಡೆಯುವ ಮನಸ್ಸಾಗಲಿಲ್ಲ. ತಮ್ಮ ಶಿಕ್ಷಣಕ್ಕೆ ಒಂದು ಹೊಸ ತಿರುವು ಕೊಟ್ಟು ವಿಜ್ಞಾನದ ಬದಲಾಗಿ ವಾಣಿಜ್ಯ ಕಲಿಯಲಿಕ್ಕೆಂದು ಹುಬ್ಬಳ್ಳಿಗೆ ಬಂದಿಳಿದರು.

ಹುಬ್ಬಳ್ಳಿಯ ಜೆ.ಜೆ.ಕಾಮರ್ಸ ಕಾಲೇಜಿನ ಮೊದಲನೆಯ ವರ್ಷದ ವಿದ್ಯಾರ್ಥಿಯಾದ ಪುರಾಣಿಕರಿಗೆ ಎಲ್ಲವೂ ಅಪರಿಚಿತವೆ. ಸಾಲದ್ದಕ್ಕೆ “ಮುಗಲಾಯಿ”ಯಿಂದ ಬಂದ ಕಡುಬಡವ ಮತ್ತು ಹಿಂದುಳಿದವನೆಂದು ಅವಮಾನಿಸುವ ಜನರ ಕಿರುಕುಳ ಬೇರೆ. ಈ ನಿಷೇಧಸ್ವರೂಪದ ವಿಷಮ ಪರಿಸ್ಥಿತಿಯಲ್ಲಿ ಅನೇಕ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೊಂದು-ಬೆಂದಿರುವುದನ್ನು ಕಂಡು ಕೆರಳಿದ ಅನ್ನದಾನಯ್ಯನವರು, ವಿದ್ಯಾರ್ಥಿಗಳ ಸಂಘಟನೆಗೆ ಮುಂದಾದರು. ಸೂಕ್ತ ಪಾಠಕ್ಕೆ ಆಗ್ರಹ, ಬಡ ವಿದ್ಯಾರ್ಥಿಗಳಿಗೆ ಆಸನ, ವಸನ ಮತ್ತು ವಾಸಗಳ ಏರ್ಪಾಡು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಹುಬ್ಬಳ್ಳಿ ನಗರಸಭಾಗೃಹದಲ್ಲಿ ವಿದ್ವಾಂಸರ, ಸಾಧಕರ, ಸಿದ್ಧಪ್ಮರುಷರ ವ್ಯಾಖ್ಯಾನಗಳು ಮೊದಲಾದ ಕೆಲಸಗಳನ್ನು ಪುರಾಣಿಕರ ನೇತೃತ್ವದಲ್ಲಿ ಈ ಸಂಘಟನೆಯು ನೆಡೆಸಿತು. ಕರ್ನಾಟಕ ಏಕೀಕರಣ ಆಗ್ರಹಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಪುರಾಣಿಕರು ನೆಡೆಸಿದ ಬೃಹತ್ ವಿದ್ಯಾರ್ಥಿ ಸಮಾವೇಶ ಮತ್ತು ಮೆರವಣಿಗೆಯಂತಹ ಮತ್ತೊಂದು ಜನಪರ ಕಾರ್ಯಕ್ರಮವನ್ನು ಇದುವರೆಗೂ ಹುಬ್ಬಳ್ಳಿ ಇನ್ನೂ ಕಂಡಿಲ್ಲ. ಪುರಾಣಿಕರಿಗೆ ಹುಬ್ಬಳ್ಳಿ-ಧಾರವಾಡಗಳ ‘ನಾ’, ‘ನೀ’ ಎನ್ಮ್ನವ ಎಲ್ಲಾ P್ವ್ಷೀತ್ರದ ನಾಯಕರೊಂದಿಗೆ ಸಂಪರ್ಕ ದೊರೆಯಿತು. ಎಲ್ಲ ಮತಭಾಂದವರು, ಭಾಷಿಕರೂ ಪುರಾಣಿಕರೊಡನೆ ಕೈಗೋಡಿಸಿದರು. ಒಬ್ಬ ಯುವ ನಾಯಕ ಉದಯಿಸಿದ ಎಂದು ದಿನಪತ್ರಿಕೆಗಳು ಗುರುತಿಸಿ ಬೆನ್ಮ್ನ ತಟ್ಟಿದವು. ಆದರೆ ಹೊರಗಿನಿಂದ ಬಂದ ಮೊಗಲಾಯಿ ಪ್ರದೇಶದ ಒಬ್ಬ ಹ್ಶೆದ ನಮ್ಮೂರಲ್ಲಿ ಧ್ವಜ ಹಾರಿಸಿದನಲ್ಲ ಎಂಬ ಕೆಲವರ ಹೊಟ್ಟೆಯುರಿಗೂ ಅನ್ನದಾನಯ್ಯನವರು ಗುರಿಯಾದರು. ‘ ಕರ್ನಾಟಕ ಏಕೀಕರಣ’ ಆಗಲೇ ಬೇಕೆಂಬ ಆಗ್ರಹದ ಉಪವಾಸ ಹ್ರಡಿದ್ದ ಗಾಂಧಿವಾದಿ ಅದರಗುಂಚಿ ಶಂಕರಗೌಡರ ಉಪವಾಸದ ಅಂತ್ಯದಲ್ಲಿ ಸಂಭವಿಸಿದ ಅನೀರಿಕ್ಷಿತ ಗಲಭೆಯಲ್ಲಿ ಪೋಲಿಸರು ಗುಂಡು ಹಾರಿಸಿದರು. ಗಲಭೆಗೆ ವಿದ್ಯಾರ್ಥಿ ನಾಯಕ ಪುರಾಣಿಕ ಕಾರ್ಯಕರ್ತನೆಂದು ಸುಳ್ಮ್ಳ ಆರೋಪ ಹೊರಸಿ ಕೆಲ ರಾಜಕೀಯ ವ್ಯಕ್ತಿಗಳು ಅವರನ್ಮ್ನ ಬಂಧನಕ್ಕೆ ಒಳಪಡಿಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದ ನಾಯಕನೊಬ್ಬನನ್ನು ಸುಳ್ಳು ಆರೋಪದಡಿ ಬಂಧಿಸಿ, 1954ರಲ್ಲಿ ಸೆರೆಮನೆಗಟ್ಟಿದ ಕೀರ್ತಿ ಸ್ವತಂತ್ರ್ಯ ಭಾರತದ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ್ದಾಯಿತು. 

ಸೆರೆಮನೆ ಸೇರಿದ ಗಾಂಧಿವಾದಿ ಪುರಾಣಿಕರ ಉಪವಾಸ ವ್ರತ ಕೈಗೊಂಡರು. ಯಾರ ಬೆದರಿಕೆಗೂ ಜಗ್ಗದೆ ಅನ್ನ ಸತ್ಯಾಗ್ರಹ ನೆಡೆಸಿ, ಜೈಲಿನಲ್ಲಿ ಪೋಲಿಸರ ಹಿಂಸೆ-ದೌರ್ಜನ್ಯಕ್ಕೀಡಾದ ಅಮಾಯಕರ ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸಿದರು.  ಪುರಾಣಿಕರ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಸಾಬೀತಾಗಿ ಅವರನ್ನು ಗೌರವಾನ್ವಿತವಾಗಿ ಬಿಡುಗಡೆ ಮಾಡಿದ ಘನ ನ್ಯಾಯಾಲಯವು, ಪೋಲಿಸರಿಗೆ ಮತ್ತು ಸರ್ಕಾರಕ್ಕೆ ಛೀಮಾರಿ ಹಾಕಿತು.  

ಹುಬ್ಬಳ್ಲಿಯಿಂದ ಬಿ.ಕಾಮ್ ಪದವಿ ಪಡೆದ ಪುರಾಣಿಕರು ಲಾ ಓದಲೆಂದು ಹ್ಶೆದರಾಬಾದಿಗೆ ಹಿಂದಿರುಗಿದರು. “ಆಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು” ಆಯೋಗಿಸ ಬೇಕು. ಅದರ ಮೂಲಕ ಇಡೀ ಕರ್ನಾಟಕದ ವಿದ್ಯಾರ್ಥಿ ವೃಂದಕ್ಕೆ ಒಂದು ಸೂಕ್ತ ವೇದಿಕೆ ಲಭಿಸುವುದು ಎಂದು ಯೋಚಿಸಿದ ಪುರಾಣಿಕರು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಪರಿಷತ್ತಿನ ಪಾತ್ರ ಬಹಳ ದೊಡ್ಡದೆಂದು ಮನದಟ್ಟು ಮಾಡಿ ಕೊಡಲು ಕರ್ನಾಟಕದಾದಂತ್ಯ ಪ್ರಯಾಣ ಮಾಡಿದರು.  ವಿದ್ಯಾರ್ಥಿಗಳಂತೂ ಸರಿಯೇ ಅವರಿಗೆ ಪ್ರಚೋದನೆ ಪ್ರೇರಣೆ, ಫ್ರೋಫೆಸರ್ ಗಳು, ಪ್ರಿನ್ಸಿಪಾಲರು, ಸಾಹಿತಿಗಳು, ಸಮಾಜ ಚಿಂತಕರನ್ಮ್ನ ಸಂಪರ್ಕಿಸಿ ಅವರ ಬೆಂಬಲ, ಮಾರ್ಗದರ್ಶನ ಪಡೆಯುವ್ಯದರಲ್ಲಿ  ಪುರಾಣಿಕರು ಯಶಸ್ವಿಯಾದರು. ಪುರಾಣಿಕರು ಭೇಟಿಯಾಗಿ ಮಾತನಾಡಿದ ನಂತರ ರಾಷ್ಟ್ರಕವಿ ಕುವೆಂಪು ಈ ಸಂಘಟನೆಗೆ ಮುಕ್ತ ಬೆಂಬಲ ನೀಡಿದರು. ಪ್ರಪ್ರಥಮ ಅಖಿಲ ಕರ್ನಾಟಕ ವಿದ್ಯಾರ್ಥಿ ಸಮ್ಮೇಳನವು ಯಶಸ್ವಿಯಾಗಿ 1954ನಲ್ಲಿ ಹ್ಶೆದರಾಬಾದಿನಲ್ಲಿ ನೆಡೆಯಿತು. ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು ಪುರಾಣಿಕರು. ಕರ್ನಾಟಕದ ಎಲ್ಲಾ ಭಾಗದ ವಿದ್ಯಾರ್ಥಿಗಳು, ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಹೀಗೆ ಇಡೀ ರಾಜ್ಯದ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸಂಘಟಿತರಾಗಿದ್ದು ಇದೇ ಮೊದಲು ಮತ್ತು ಇದಕ್ಕೆ ರೂವಾರಿಯಾದರು ಪುರಾಣಿಕರು. ಇಡೀ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಒಂದು ವಿದ್ಯುತ್ ಸಂಚಾರದ ಅನುಭವವಾಯಿತು. ಅವರಿಗೆ ಸಂಘಟನೆಯ ಇನ್ನಷ್ಟು ಸೂಕ್ಷ್ಮ ಸುಳುಹುಗಳು ಮನೋಗತವಾದವು.

ಗಡಿನಾಡಿನಲ್ಲಿ ಕನ್ನಡ ಮತ್ತು ಕನ್ನಡ ಸಾಹಿತ್ಯದ ಪ್ರಚಾರಕ್ಕಾಗಿ ಸ್ವಂತ ಹಣ ವಿನಯೋಗಿಸಿ ಹೈದರಾಬಾದಿನಲ್ಲಿ ಭಾರತೀ ಪ್ರಿಂಟರಿ ಎಂಬ ಅಚ್ಚುಕೂಟವನ್ನು ತನ್ಮೂಲಕ “ಸಹಜೀವನ ಪ್ರಕಾಶನ” ಎಂಬ ಸಂಸ್ಥೆಯನ್ನು ಪುರಾಣಿಕರು ಪ್ರಾರಂಭಿಸಿದರು. ಪ್ರಮುಖ ಸಾಹಿತಿಗಳ ಹಲವಾರು ಪುಸ್ತಕಗಳು ಇಲ್ಲಿ ಪ್ರಕಟವಾಗಿರುವುದು ಇಲ್ಲಿ ಗಮನಾರ್ಹವಾಗಿದೆ.

ನವೆಂಬರ್ 1, 1956ರಂದು ಕರ್ನಾಟಕ ಏಕೀಕರಣಗೊಂಡು ಮೈಸೂರು ರಾಜ್ಯವಾಗಿ ಹೊರಹೊಮ್ಮುವ ಹಿಗ್ಗಿನ ಸುದ್ಧಿ ಪುರಾಣಿಕರನ್ನು ರೋಮಾಂಚನಗೊಳಸಿತ್ತು. ಆಗ ಅವರು ಹೈದರಾಬಾದಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿ ನ್ಯಾಯವಾದಿಯಾಗಿ ವೃತ್ತಿ ಆರಂಭಿಸುವ ತೀರ್ಮಾಣ ಕೈಗೊಂಡರು. ‘ಹೊಸ ಮಾಲೆಗಿತ್ತಿ’ಯಾಗಿ ಅದೇ ಬಂದಿದ್ದ ಪತ್ನಿ ನೀಲಾಂಬಿಕೆಯೊಡನೆ, ಅಷ್ಟಿಷ್ಟು ಮನೆ ಸಾಮಾನುಗಳು ಮತ್ತು ಕಿಸೆಯಲ್ಲಿ ಪುಡಿಗಾಸು ಇಟ್ಟುಕೊಂಡು. ಅರಿಯದ ನಗರಕ್ಕೆ, ತಲೆಯಲ್ಲಿ ಯೋಜನೆ, ಎದೆಯಲ್ಲಿ ಧೈರ್ಯ, ಹಿಡಿಯಲ್ಲಿ ಸ್ಥೈರ್ಯ ತುಂಬಿಕೊಂಡು ಬೆಂಗಳೂರಿಗೆ ಬಂದಿಳಿದರು. ದೂರಾತಿದೂರದ ಸಂಬಂಧವಾದರೂ ಅತ್ಯಂತ ಆಪ್ತರಾಗಿ ಸ್ವಾಗತಿಸಿದ ಶ್ರೀನೀಲಕಂಠಾರಾಧ್ಯರ ಅತಿಥಿಯಾಗಿ “ಸನ್ಯಾಸಿಯ ಮದುವೆಗೆ ಜುಟ್ಟು ಜನಿವಾರಗಳಿಂದ ಆರಂಭ” ಎನ್ನುವಂತೆ ಪುರಾಣಿಕರು ತಮ್ಮ ನ್ಯಾಯವಾದಿ ವೃತ್ತಿ ಆರಂಭಿಸಲು ಒಬ್ಬ ಹಿರಿಯ ನ್ಯಾಯವಾದಿಯ ಬಳಿ ತರಬೇತಿಗಾಗಿ ಹುಡುಕಾಟ ಆರಂಭಿಸಿದರು. ಹೈದರಾಬಾದಿನಲ್ಲಿ ಪಡೆದಿದ್ದ ಅಂತಹ ಅನುಭವ, ಅವರು ನ್ಯಾಯವಾದಿಯಂದು ಸನದು ಪಡೆಯಲು ಕಡಿಮೆಯಾಗಿತ್ತು. ಶ್ರೀ ವಿ.ಕೃಷ್ಣಮೂರ್ತಿ ಎಂಬ ಸಹೃದಯದ ಹಿರಿಯ ನ್ಯಾಯವಾದಿಯ ಕಚೇರಿಯಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕೆಲ ಸಮಯದಲ್ಲೇ ತಂದೆ, ತಾಯಿ, ತಮ್ಮ, ತಂಗಿ ಮತ್ತು ಅಳಿಯ ಬೆಂಗಳೂರಿನಲ್ಲಿದ್ದ ಅನ್ನದಾನಯ್ಯನವರ ಜೊತೆಗೆ ವಾಸಿಸಲು ಬಂದರು. ಪ್ರತಿದಿನ ಬರುವ ಪರಿಚಿತರು, ಸಂಬಂಧಿಗಳು ಬೇರೆ. ಆಗ ನ್ಯಾಯವಾದಿಯಾಗಿ ಸಂಜೆಯವರೆಗೆ ಕೆಲಸ ಮಾಡಿದರೆ ರಾತ್ರಿಯೀಡಿ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡಿ, ಕುಟುಂಬ ವೆಚ್ಚ ನಿರ್ವಹಿಸುವ ಸಾಹಸ ಮಾಡಿದರು ಪುರಾಣಿಕರು. 1957ರಿಂದ ನ್ಯಾಯವಾದಿಯಾದರೂ, ಗಾಂಧೀಜಿಯವರಂತೆ ಕೇಸಿನಲ್ಲಿ ಅನ್ಯಾಯವಾದದ್ದು ಖಾತ್ರಿ ಎನಿಸಿ ಅದನ್ನು ನೆಡೆಸಿದರೆ ನ್ಯಾಯ ದೊರೆಯಲು ಶಕ್ಯ ಎಂದು ಅನ್ನುವಂಥಹ ಕೇಸುಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಂತಿಂಥ ಕೇಸುಗಳನ್ನು “ಬಂದಷ್ಟು ಬಂತು ಬಂಡಿವಾಡದ ಸುಂಕ” ಎಂದು ಫೀಸಿಗಾಗಿ ಹಾತೊರೆದು ಎಂದೂ ನೆಡೆಸಲಿಲ್ಲ. ಅವುಗಳನ್ನು ವಾಪಸ್ಸು ಕಳುಹಿಸಿ ಕೊಡುತ್ತಿದ್ದರು. ಅವರಲ್ಲಿ ಕೆಲವರು ಬೇರೆ ವಕೀಲರತ್ತ ಧಾವಿಸುತ್ತಿದ್ದರು. ಬಡವರಿಗೆ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲೇ ಊಟ, ವಸತಿ ನೀಡಿ ಮತ್ತು ಊರಿಗೆ ಹಿಂದಿರುಗಲು ಪುರಾಣಿಕರೇ ಹಣಕೊಟ್ಟು ಕಳುಹಿಸುತ್ತಿದ್ದರು. ಕೇಸ್ ನೆಡೆಸಿ ಗೆದ್ದು ಕೊಟ್ಟರೂ ಏನನ್ನೂ ಕೊಡದ ಕಕ್ಷಿದಾರಗಳಿಗಾಗಿ ಅವರು ಎಂದೂ ತಲೆಕೆಡೆಸಿ ಕೊಳ್ಳಲಿಲ್ಲ. ಸುಮಾರು 12 ವರ್ಷ ಸರ್ಕಾರಿ ನ್ಯಾಯವಾದಿಯಾಗಿ(1969-81), ಕೋಟ್ಯಾಂತ ಮೌಲ್ಯದ ಸರ್ಕಾರಿ ಆಸ್ತಿಯನ್ನು ಉಳಿಸುಕೊಡುವಲ್ಲಿ ಅಮೂಲ್ಯ ಸೇವೆ ಸಲ್ಲಿಸಿದರು. ಸಾವಿರಾರು ಜನ ಬಡವರಿಗೆ, ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಉಚಿತವಾಗಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ನ್ಯಾಯ ನಿಷ್ಟುರಿ, ನಿರ್ಭಿತ ನ್ಯಾಯವಾದಿಯಾಗಿ 50 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಹೈಕೋರ್ಟ ನ್ಯಾಯಧೀಶರಾಗುವ ಅವಕಾಶಗಳು ಬಂದರೂ ಅದನ್ನು ಸ್ವೀಕರಿಸದೆ ಅವರು ನ್ಯಾಯವಾದಿಯಾಗಿ ಮುಂದುವರೆದಿದ್ದು ಇಲ್ಲಿ ಗಮನಾರ್ಹವಾಗಿದೆ. ನ್ಯಾಯವಾದಿಯ ವೃತ್ತಿಯು ಪುರಾಣಿಕರಿಗೆ ಉಪಾಸನೆಯಾಗಿತ್ತು ಮತ್ತು ಸಮಾಜ ಸೇವೆಯ ಸಾಧನವಾಗಿತ್ತು. 

ಪುರಾಣಿಕರು ಮುಂಜಾನೆ 9ರಿಂದ ಸಂಜೆಯ 5ರವರೆಗೆ ಹೈಕೋರ್ಟ ಕೆಲಸ ಮತ್ತು ಸಂಜೆ ಒಂದೆರಡು ತಾಸು ಕೇಸ್ ತಯಾರಿಗೆ, ಇತ್ಯಾದಿಗಳಿಗೆ ಬಳಸಿದರೆ, ಉಳಿದ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟರು. ಅವರ ಹೋರಾಟ ಮನೋಭಾವ, ರಚನಾತ್ಮಕ ಯೋಜನೆ, ಸಮಾಜ ನಿಷ್ಠೆ, ಕತೃತ್ವ ಶಕ್ತಿಗಳು ಹೊರಹೊಮ್ಮಿದವು. ಬೆಂಗಳೂರಿನ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವೇಶಿಸಿದರು ಮತ್ತು ಜನತೆಯ ಬೆಂಬಲ ಗೆದ್ದರು. ಈ ಕೆಲಸಗಳಲ್ಲಿ ತಮ್ಮ ಛಾಪು ಸ್ಥಾಪಿಸಿದರು. ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಾ ಹೋದರು. ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕರಾಗಿ (1969ರಿಂದ), 27 ವರ್ಷಗಳ ಕಾಲ ಅದರ ಪ್ರಧಾನ ಕಾರ್ಯದರ್ಶಿಯಾಗಿ (1964-91) ಅವರು ತನು-ಮನ-ಧನದ ಸೇವೆ ಸಲ್ಲಿಸಿರುವುದರಿಂದ ಈ ಸಂಸ್ಥೆ ಇಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯಲು ಸಾಧ್ಯವಾಗಿದೆ. ಪುರಾಣಿಕರ ಪ್ರಯತ್ನದಿಂದಾಗಿ ಬಸವಣ್ಣನವರ 8ನೆ ಶತಮಾನೋತ್ಸವ ಮತ್ತು ಪಾದಯಾತ್ರೆ (1967-68) ಮತ್ತು ಕನ್ನಡ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷ್, ರಷ್ಯಾ ಮೊದಲಾದ ಭಾಷೆಗಳಲ್ಲಿ ವಚನ ಸಾಹಿತ್ಯದ ಪ್ರಕಟಣೆ ಮೊದಲಾದ ಕೆಲಸಗಳನ್ನು ಬಸವ ಸಮಿತಿ ಮಾಡಲು ಸಾಧ್ಯವಾಯಿತು. ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದರ ಗೌರವ ಕಾರ್ಯದರ್ಶಿಯಾಗಿ ( 1960-68) ಸೇವೆ ಸಲ್ಲಿಸಿ, ಅದರ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ಈ ಸಂಸ್ಥೆಗೆ ಪುರ್ನಜನ್ಮ ನೀಡಿದವರು ಪುರಾಣಿಕರು.  

ಕನ್ನಡ, ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ಅನ್ನದಾನಯ್ಯ ಪುರಾಣಿಕರು 35ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವರ ನೂರಾರು ಲೇಖನಗಳು ದೇಶ-ವಿದೇಶಗಳಲ್ಲಿ ಪ್ರಕಟವಾಗಿವೆ. ಜನಜಾಗೃತಿಗಾಗಿ ಅವರು ¨ರೆಯುವ ಸಾವಿರಾರು ಅಧುನಿಕ ವಚನಗಳು ಅಪಾರ ಮನ್ನಣೆ ಗಳಿಸಿವೆ. ಅವರಿಗೆ ಅಖಿಲ ಕರ್ನಾಟಕ ವಚನ ಪರಿಷತ್ತಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯ ಗೌರವ ದೊರೆತಿದೆ. ಕರ್ನಾಟಕದ ಶ್ರೀಷ್ಟ ವಚನಕಾರನೆಂಬ ಪ್ರಶಸ್ತಿ ಗೌರವ ದೊರೆತಿದೆ. ಕರ್ನಾಟಕ ರಾಜ್ಯ ಸರ್ಕಾರವು ಅವರಿಗೆ 2006ರಲ್ಲಿ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಸಾಂಸ್ಕøತಿಕ ಸಂಸ್ಥೆಗಳು ಮತ್ತು ಸಂಘಟನೆಗಳು ಅವರ ಸೇವೆಯ ಘನತೆ ಮನ್ನಿಸಿ ಸತ್ಕರಿಸಿವೆ. 

ನಿರ್ಬಲರಿಗೆ ಬಲವನ್ನು, ಬಲವಂತರಿಗೆ ವಿದ್ಯೆಯನ್ನು
ಸೋತವರಿಗೆ ತಲೆಯೆತ್ತಿ ನಿಲ್ಲುವ ಕೆಚ್ಚನ್ನು, 
ಸೋಲುವವರಿಗೆ ಗೆಲುವೆನೆಂಬ ನಂಬಿಕೆಯನ್ನು
ಏಗಿದವರಿಗೆ ಎತ್ತರವನ್ನು, ಬೀಗಿದವರಿಗೆ ಬಾಗುವುದನ್ನು ಕೊಡುತ್ತಲ್ಲೆ ತಮ್ಮ ಸಂಸಾರವನ್ನು ಸವೆಯಬಳಸುತ್ತಿರುವ ತ್ರಿವಿಧ ದಾಸೋಹ ಗುಣದ ಅನ್ನದಾನಯ್ಯನವರಿಗೆ ಜನಮನ್ನಣೆಯ ದಾಹವಿಲ್ಲ, ಮಾನ ಸಮ್ಮಾನದ ಲೋಭವಿಲ್ಲ, ಕೀರ್ತಿ ಪ್ರಶಸ್ತಿಗಳ ಭ್ರಮೆಯಿಲ್ಲ, ಅತ್ತ ಹೊರಳಿ ನೋಡುವ ಜಾಯಮಾನ ಅವರದಲ್ಲ. 

87 ವರ್ಷದ ಇಳಿವಯಸ್ಸಿನಲ್ಲೂ ಸಹ ಇಳೆಯ ಕೊಳೆ ಕಳೆದು ಶಿವಕಳೆ ಬೆಳಗಲಿ ಎಂಬ ಚಿಂತನೆಯನು ಹಾಸಲು, ಹೊದೆಯಲು ಬಳಸಿಕೊಂಡು ಹದುಳಿಗರಾಗಿದ್ದಾರೆ ಅನ್ನದಾನಯ್ಯ ಪುರಾಣಿಕರು. ಸುಮಾರು 5 ವರ್ಷದಿಂದ ಅನಾರೋಗ್ಯದಿಂದಾಗಿ ಅವರು ಹಾಸಿಗೆ ಹಿಡಿದರೂ, ಬೆಂಗಳೂರಿನಲ್ಲಿ ವಾಸವಾಗಿರುವ ಅವರನ್ನು ಸೌಜನ್ಯಕ್ಕಾದರೂ ಒಬ್ಬ ಮಂತ್ರಿಗಳಾಗಲಿ ಅಥವಾ ಅಧಿಕಾರಿಗಳಾಗಿ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಪದಾಧಿಕಾರಿಗಳಾಗಲಿ ಭೇಟಿಯಾಗಿ, ನೆರವು ನೀಡದಿರುವುದು ನಾಡಿನ ದುರಂತ. 

ನಾಡು ನುಡಿಗಾಗಿ 67 ವರ್ಷ ನಿರಂತರವಾಗಿ ದುಡಿದ ಈ ನಾಡಿನ ಆಸ್ತಿಗೆ, ಕನ್ನಡಿಗರು ತೋರಿದ ನಿರ್ಲಕ್ಷ ಅಕ್ಷಮ್ಯ. 20-10-2015ರಂದು ಶಿವಾಧೀನರಾದ ಶ್ರೀ ಪುರಾಣಿಕರಿಗೆ ಸರ್ಕಾರದ ಗೌರವದೊಂದಿಗೆ ಅಂತ್ಯಸಂಸ್ಸಾರವೂ ನೆಡೆಯಲಿಲ್ಲ. ಕರ್ನಾಟಕ ಏಕೀಕರಣದ 75 ವರ್ಷದ ಸಂಭ್ರಮದ ಹೊಸಲಿನಿಲ್ಲಿ, ಕರ್ನಾಟಕ ಏಕೀಕರಣದ ಪ್ರಮುಖ ನಾಯಕರೊಬ್ಬರನ್ಮ್ನ ಕನ್ನಡಿಗರು ಹೀಗೆ ಕಳುಹಿಸಿಕೊಟ್ಟಿದ್ದು ವಿಷಾದನೀಯ. 


                   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x