ಕವಿ ನಾಗರಾಜರವರ ಆದರ್ಶದ ಬೆನ್ನು ಹತ್ತಿ : ಪಾರ್ಥಸಾರಥಿ ನರಸಿಂಗರಾವ್

ಪುಸ್ತಕ ಪರಿಚಯ : ಆದರ್ಶದ ಬೆನ್ನು ಹತ್ತಿ…..
ಪ್ರಕಾಶನ : ಕವಿಪ್ರಕಾಶನ, ಶಿವಮೊಗ್ಗ.

'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು

ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೋ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೇ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೇ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ. ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು. ಆದರೆ ವಿಧಿಬಿಡಬೇಕಲ್ಲ, ಆ ಯುವಕನ ಮುಂದೆ ದೊಡ್ಡದೊಂದು 'ಆಸೆ' ಯ ಬೆಟ್ಟವನ್ನು ಕಣ್ಣಮುಂದೆ ನಿಲ್ಲಿಸುತ್ತದೆ, ವಿಧಿಯ ಆ ಆಟಕ್ಕೆ ಯುವಕ ಖಂಡಿತ ಮರುಳಾಗುತ್ತಾನೆ, ದೈವ ತನ್ನ ಚಿಕ್ಕವಯಸ್ಸಿನಲ್ಲಿ ಕೇಳಿ ಕೊಟ್ಟಿದ್ದ 'ವರ' ಪೋಸ್ಟಾಫೀಸಿನ ಕೆಲಸವನ್ನು ಬಿಟ್ಟು, ರಾಜ್ಯ ಸರ್ಕಾರದ ಅತಿ ಭ್ರಷ್ಟ ಇಲಾಖೆ- ಕಂದಾಯ ಇಲಾಖೆಗೆ ಆಡಿ ಇಡುತ್ತಾನೆ, ತನ್ನೊಳಗಿರುವ ನಿಜವಾದ ಮನುಷ್ಯನನ್ನು ಗ್ರಹಿಸಲು ವಿಫಲನಾಗುವುದು, ಮತ್ತು ತನ್ನ ಮನಸತ್ವಕ್ಕೆ ತಾನು ಹಿಡಿಯಲು ಹೊರಟಿರುವ ಕೆಲಸ ಹೊಂದಿಕೆಯಾಗುವದಿಲ್ಲ ಅನ್ನುವದನ್ನು ಗ್ರಹಿಸಲು ವಿಫಲನಾಗುವುದು, ಮತ್ತು ಆ ಕೆಲಸಕ್ಕೆ ಸೇರುವುದು ಬಹುಷಃ ಆ ಯುವಕನ ಜೀವನದ ಬಹು ದೊಡ್ಡ ತಿರುವು ಎಂದು ನನಗನ್ನಿಸುತ್ತಿದೆ.

ಕವಿ ನಾಗರಾಜರ ಜೀವನ ಕಥೆಯಲ್ಲಿನ ಪ್ರಮುಖ ಘಟ್ಟವೇ, ಅವರ ಕೆಲಸ ಬದಲಿಸುವ ತೀರ್ಮಾನ.

ಕಂದಾಯ ಇಲಾಖೆಗೆ ಸೇರಿದ ಕೆಲವೇ ದಿನಗಳಲ್ಲಿ ಅವರಿಗೆ ಅಲ್ಲಿಯ ಭ್ರಷ್ಟ ಮುಖದ ಪರಿಚಯ, ಇವರೆ ತಂದಿದ್ದ ೧೮೦೦೦ ರೇಷನ್ ಕಾರ್ಡಿನಲ್ಲಿ ಕಣ್ಮರೆಯಾದ ೧೨೦೦ ಕಾರ್ಡಿನ ಬಗ್ಗೆ ಇವರ ಮೇಲೆ ಅಪವಾದ, ಕಡೆಗೊಮ್ಮೆ ಇವರೆ ಅದನ್ನು ಸೊಸೈಟಿಗಳಲ್ಲಿ ಹೋಗಿ ಕಳುವಾದ ಕಾರ್ಡ್ ಗಳನ್ನು ಪತ್ತೆ ಹಚ್ಚಿದಾದ ಅದನ್ನು ತಹಸಿಲ್ದಾರರೇ ಸಹಿಮಾಡಿ ಅವರ ಕಛೇರಿ ಮೂಲಕವೆ ಅನಧಿಕೃತವಾಗಿ ಸೊಸೈಟಿಗಳಿಗೆ ಹಂಚಿದ್ದು ತಿಳಿಯುತ್ತದೆ. ಅದನ್ನು ಪ್ರಶ್ನಿಸಹೋದರೆ ಬಾಯಿ ಮುಚ್ಚಿಸುತ್ತಾರೆ. ಅಲ್ಲಿಂದ ಮುಂದೆ ಭ್ರಷ್ಟಾಚಾರದ ವಿವಿಧ ಮುಖಗಳ ಭೂತದರ್ಶನ ಕಂಡು ಬೆಚ್ಚಿ ಅದನ್ನು ಎದುರಿಸಹೊರಟವರು ನಾಗರಾಜರು.

ಕಾಂಗ್ರೆಸ್ ನಾಯಕ ಹಾಗು ವ್ಯಾಪಾರಿ ಆಗಿದ್ದ ವರ್ತಕರೊಬ್ಬರ ಕೃತ್ರಿಮ ಅಕ್ಕಿ ಪರ್ಮಿಟ್ ಬಗ್ಗೆ ಪ್ರಶ್ನಿಸಲು ಹೊರಟ ನಾಗರಾಜರ ಕ್ರಮ ಜಿಲ್ಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಅದು ದ್ವೇಷದ ರೂಪ ತಾಳಿ, ನಾಗರಾಜರು ಜೈಲನ್ನು ಸೇರಬೇಕಾಗುತ್ತದೆ. ಅತೀವ ದುಸ್ತಿತಿ ಎಂದರೆ ನಾಗರಾಜರನ್ನು ಯಾವ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೋ ಅದೇ ನ್ಯಾಯಾಲಯದಲ್ಲಿ ಅವರ ತಂದೆಯವರು ಉದ್ಯೋಗಿಗಳು. ನಾಗರಾಜರ ಒಳಗಿನ 'ಆಂಗ್ರಿ ಯಂಗ್ ಮ್ಯಾನ್' ನ ನಡುವಳಿಕೆ, ಅವರ ಸ್ವಾಭಿಮಾನಿ ವರ್ತನೆ, ಅವರನ್ನು ಸತತ ವಿವಿಧ ಕೇಸುಗಳಲ್ಲಿ ಪೋಲಿಸ್ ಸ್ಟೇಷನ್ ಹಾಗು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುತ್ತದೆ. ಕಡೆಗೊಮ್ಮೆ ಮುಖ್ಯಪೇದೆಗೆ ನಮಸ್ಕರಿಸಲಿಲ್ಲ ಎನ್ನುವ ಕಾರಣಕ್ಕೆ ಒಂದು ಚಿಲ್ಲರೆ ಕೇಸು ಹಾಕುವ ಮಟ್ಟಕ್ಕೆ ಅವರನ್ನು ಹಿಂಸೆಗೆ ಒಳಪಡಿಸಿದ ಘಟನೆಯೂ ಇದೆ.

ಆ ಸಮಯಕ್ಕೆ ದೇಶದಲ್ಲಿ 'ಎಮರ್ಜೆನ್ಸಿ' ಘೋಷಣೆಯಾಗುತ್ತದೆ, ಅದರ ಸಂಪೂರ್ಣ ದುರಪಯೋಗ ಪಡೆದ ಪೋಲಿಸ್ ಹಾಗು ನಾಗರಾಜರ ಮೇಲಾಧಿಕಾರಿಗಳು ಅವರನ್ನು ದೇಶದ್ರೋಹದ ಅಪಾದನೆಗೊಳಪಡಿಸಿ , ಶಾಶ್ವತವಾಗಿ ಕಂಬಿಯ ಹಿಂದೆ ತಳ್ಳುತ್ತಾರೆ. ಜೈಲಿನ ವಾತವಾರಣ, ಅಲ್ಲಿಯ ಸಹಕೈದಿಗಳ ವರ್ತನೆ, ಜೈಲಿನಲ್ಲಿ ಪೋಲಿಸರ ಶೋಷಣೆ ಇವೆಲ್ಲ ನಾಗರಾಜರ ಮನವನ್ನು ನಿಜಕ್ಕೂ ಒಬ್ಬ ರಕ್ತಪಿಪಾಸುವಾಗುವಂತೆ ಕೊಲೆಗಡುಕನಾಗುವಂತೆ ಒತ್ತಾಸೆ ನೀಡುತ್ತದೆ, ಆದರೆ ಸಾತ್ವಿಕ ಮನೋಭಾವದ ನಾಗರಾಜರು ಆ ಎಲ್ಲ ಪರಿಸ್ಥಿತಿಯನ್ನು ಗೆದ್ದು ಬೆಂಕಿಯಲ್ಲಿ ಪುಟವಿಟ್ಟ ಚಿನ್ನದಂತೆ ಹೊರಬರುವುದು ನಮ್ಮೆಲ್ಲರ ಮನಸ್ಸು ತುಂಬುತ್ತದೆ.

ಎಮೆರ್ಜಿನ್ಸಿಯಲ್ಲಿ ಇವರ ಮೇಲೆ ಪೋಲಿಸರು ಹೊರಸಿದ ಅಪಾದನೆ ಎಷ್ಟು ಬಾಲಿಶವೆಂದರೆ ಅವರ ಮನೆಯಲ್ಲಿ 'ಅಸತ್ಯ ಅನ್ಯಾಯದ ವಿರುದ್ದ ತಲೆಬಾಗುವುದು ಹೇಡಿತನ' ಎಂಬ ಗಾಂಧೀಜಿಯವರ ಹೇಳಿಕೆ ಇದ್ದ ಗಾಂಧೀಜಿಯವರ ಫೋಟೊ ಇದೆ ಎನ್ನುವುದು. ಅದೇ ರೀತಿಯ ಇತರ ಕಾರಣಗಳು, ಕಡೆಗೊಮ್ಮೆ ಎಮರ್ಜೆನ್ಸಿ ಅವಧಿ ಮುಗಿದ ನಂತರ ಎಲ್ಲ ಅರೋಪಗಳಿಂದ ಮುಕ್ತರಾಗಿ, ಪುನಃ ಕೆಲಸಕ್ಕೆ ಸೇರುತ್ತಾರೆ. ಆದರೆ ಅವರ ರೋಷ , ಸಾತ್ವಿಕ ಸಿಟ್ಟು ಇವುಗಳು ಸದಾ ಅವರ ಸುತ್ತ ಶತ್ರುವಲಯವನ್ನು ನಿರ್ಮಿಸಿರುತ್ತದೆ.

ಕಡೆಯಲ್ಲಿ ಎಲ್ಲ ಅಗ್ನಿಪರೀಕ್ಷೆಗಳನ್ನು ಗೆದ್ದು ನಿಂತು, ಶುದ್ದ ಚಿನ್ನವಾಗಿ (ಅಪರಂಜಿ ) ಹೊರಹೊಮ್ಮುವುದು ನಾಗರಾಜರ ಜೀವನದ ಉಜ್ವಲತೆ ತೋರಿಸುತ್ತದೆ. ವಿಧಿ ಸಹ ಅವರ ಹೋರಾಟ ಮನೋಭಾವ ಮೆಚ್ಚಿದನೇನೋ, ಇಲ್ಲದಿದ್ದರೆ ಯಾವ ಜೈಲಿನಲ್ಲಿ ಅವರು ಕೈದಿಯಾಗಿ ಜೀವನ ಕಳೆದರೊ ಅದೇ ಜೈಲಿಗೆ ಪುನಃ ಜೈಲಿನ ಅಧಿಕಾರಿಯಾಗಿ , ತಾಲೂಕಿನ ದಂಡಾಧಿಕಾರಿಯಾಗಿ ಬರುತ್ತಾರೆಂದರೆ , ಇಂತಹ ಘಟನೆ ಬೇರ ಯಾರ ಜೀವನದಲ್ಲಿ ನಡೆದಿದೆಯೊ ಇಲ್ಲವೊ ನನಗೆ ತಿಳಿದಿಲ್ಲ.

ಕತೆಯ ಉದ್ದಕ್ಕೂ ಮನಸೆಳೆಯುವುದು ಅವರ ನಿರ್ಭಾವ ನಿರ್ವಿಕಾರದ ಘಟನೆಗಳ ನಿರೂಪಣೆ, ಎಲ್ಲಿಯೂ ಅವರು ಅವರನ್ನು ವಿಜೃಂಭಿಸಲು ವೈಭವೀಕರಿಸಲು ಹೋಗಿಲ್ಲ ಅನ್ನುವುದು ಪುಸ್ತಕದ ಅತಿ ಮುಖ್ಯ ಅಂಶ. ಇನ್ನಾದರು ದೇಶದಲ್ಲಿ ಭ್ರಷ್ಟಾಚಾರ ತೊಲಗಲಿ ಅನ್ನುವುದು ಅವರ ಪುಸ್ತಕದ ಮುಖ್ಯ ಧ್ಯೇಯ. ಅಷ್ಟು ಅನುಭವಿಸಿದರೂ ವ್ಯವಸ್ಥೆಯ ಮೇಲಿನ ಕೋಪವೇ ಹೊರತಾಗಿ ವ್ಯಕ್ತಿಗತ ದ್ವೇಷ ಯಾರ ಮೇಲೂ ಇಲ್ಲ ! ಇದೆಂಥ ಮನೋಭಾವ ! ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ.

ಓದಿ ಮುಗಿಸಿದ ನಂತರವು ಕೆಲವು ಘಟನೆಗಳು ಹಾಗೆ ಮನದಲ್ಲಿ ತಳ ಊರುತ್ತವೆ, ಎಂದರೆ ಇವು:

ಒಮ್ಮೆ ಅಂಗಡಿಯ ಮಾಲಿಕನೊಬ್ಬ ಬಲವಂತದಿಂದ ಹಣ್ಣಿಗೆ ಎಂದು ಐವತ್ತು ರೂಪಾಯಿಗಳನ್ನು ಕೊಟ್ಟು ಹೋಗುವ, ಯಾವುದೊ ಅಸ್ತವ್ಯಸ್ತ ಮನಸ್ಥಿತಿಯಲ್ಲಿ ಅದನ್ನು ತೆಗೆದುಕೊಂಡ ನಾಗರಾಜರಿಗೆ ರಾತ್ರಿ ಎಲ್ಲ ನಿದ್ದೆ ಇಲ್ಲ, ಕಡೆಗೆ ಬೆಳಗ್ಗೆಯೆ ಎದ್ದು ಅಂಗಡಿ ತೆರೆಯುವ ಮುಂಚೆಯೆ ಹೋಗಿ ಜಗಲಿಯಲ್ಲಿ ಕುಳಿತಿರುತ್ತಾರೆ, ಬಾಗಿಲು ತೆಗೆಯಲು ಬಂದ ಅಂಗಡಿಯಾತ ಬೆಳಗ್ಗೆಯೇ ಫುಡ್ ಇನ್ಸ್ ಪೆಕ್ಟರ್ ಕಂಡು ಗಾಭರಿಯಾದರೆ, ನಾಗರಾಜರು ಅವನ ಐವತ್ತು ರುಪಾಯಿ ಹಿಂದೆ ನೀಡಿ ಅವನಿಗೆ ಮತ್ತೆ ಹೀಗೆಮಾಡಬೇಡ ಎಂದು ಬುದ್ದಿ ಹೇಳಿದಾಗ ಆತನ ಕಣ್ಣಲ್ಲಿ ಸಹ ನೀರು, ಇದು ಗಾಂಧೀಜಿಯವರ 'Experiment with truth '
ನೆನಪಿಸುತ್ತದೆ.

ಇವರು ಎಷ್ಟು ಸಣಕಲು ಎಂದರೆ ಇವರಿಗೆ ಹಾಕಿದ್ದ ಬೇಡಿಯಿಂದ ಸಲಿಸಾಗಿ ಕೈ ಹೊರಗೆ ಎಳೆದು ಬಿಡಬಹುದು, ಒಮ್ಮೆ ಅದೇ ರೀತಿ ಬೇಡಿ ಕಿತ್ತು ವ್ಯಾನಿನಿಂದ ಎಸೆದು ಇಂದಿರಾ ವಿರುದ್ದ ಗರ್ಜಿಸುವ ಘಟನೆ ನಗೆಯ ಜೊತೆ ಉಪೇಂದ್ರರ ರೊಬಾಟ್ ಬಗೆಗಿನ ಸಿನಿಮ ನೆನಪಿಸುತ್ತದೆ.

ಉದ್ದಕ್ಕೂ ಇವರು ತಮ್ಮ 'ಆಂಗ್ರಿ ಇಮೇಜ್ ' ನಿಂದ ಮೈಮೇಲೆ ಕೇಸುಗಳನ್ನು ಎಳೆದುಕೊಳ್ಳುವಾಗ ಸಿನಿಮಾಗಳಲ್ಲಿ (ಸಿನಿಮಾದಲ್ಲಿ ಮಾತ್ರ) ಅಂಬರೀಷರ ನಟನೆ, ಅಮಿತಾಬ್ ರ ನಟನೆ ನೆನಪಿಗೆ ಬರುತ್ತೆ.

ಕಡೆಯದೊಂದು ಝಲಕ್ : ಪುಸ್ತಕದ ಕಡೆಯಲ್ಲಿ ಸಂಪದದ ಹಲವು ಮಿತ್ರರ ಸುರೇಶ್ ನಾಡಿಗ್, ಬೆಳ್ಳಾಲ ಗೋಪಿನಾಥ್ ರಾವ್, ಹೊಳೆನರಸಿಪುರ ಮಂಜುನಾಥ್ , ಕೋಮಲ್, ಹರಿಹರಪುರ ಶ್ರೀಧರ್, ಗಣೇಶರು, ವಿರೇಂದ್ರ, ಹರೀಶ್ ಆತ್ರೇಯ, ಕೇಶವ ಮೈಸೂರು, ಚೇತನ್ ಕೋಡುವಳ್ಳಿ, ನಾವಡರು, ರಾಕೇಶ್ ಶೆಟ್ಟಿ, ಗೋಪಾಲ್ ಕುಲಕರ್ಣಿ, ಪ್ರಸನ್ನ ಎಸ್ ಪಿ. ಮತ್ತೆ ಸೋಮಶೇಖರಯ್ಯ ಚಿತ್ರದುರ್ಗ ಇವರೆಲ್ಲರ ನಾಗರಾಜರ ಲೇಖನದ ಬಗೆಗಿನ ಅಭಿಪ್ರಾಯಗಳು ದಾಖಲಾಗಿವೆ.

ಕಡೆಯಲ್ಲೊಂದು ಮಾತು, ನಾಗರಾಜರೆ 'ಆದರ್ಶದ ಬೆನ್ನು ಹತ್ತಿ… ' ಎನ್ನುವ ಶೀರ್ಷಿಕೆ ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅದು 'ಮರೀಚಿಕೆ' ಎನ್ನುವ ಅರ್ಥವನ್ನು ಕೊಡುತ್ತಿದೆ. ನೀವಿಲ್ಲಿ ಆದರ್ಶದ ಬೆನ್ನು ಹತ್ತಿಲ್ಲ. ಆದರ್ಶ, ನ್ಯಾಯ ನೀತಿ ಇವೆಲ್ಲ ನಿಮ್ಮ ಹೃದಯಸ್ಥವಾಗಿದೆ. ನಿಮ್ಮ ನಡೆ ನುಡಿ ಮಾತು ಮತ್ತು ಹೃದಯದಲ್ಲಿ ಆದರ್ಶ ನೆಲಗೊಂಡಿದೆ. ನೀವು ಅದನ್ನು ಬೆನ್ನು ಹತ್ತುವ ಪ್ರಮೇಯವಿಲ್ಲ , ಅದು ನಿಮ್ಮೊಳಗೆ ನೆಲೆನಿಂತಿದೆ. ಹೊಗಳಲು ನಾನು ನಿಮಗಿಂತ ಚಿಕ್ಕವನು. ಈ ಜೀವನ ಹೋರಾಟವೇ ನಮಗೆ ಆದರ್ಶವಾಗಲಿ.

-ಪಾರ್ಥಸಾರಥಿ ನರಸಿಂಗರಾವ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
ಆಸು ಹೆಗ್ಡೆ

ಪಾರ್ಥಸಾರಥಿಯವರೇ,  ನನ್ನ ಪ್ರಕಾರ, "ಆದರ್ಶದ ಬೆನ್ನು ಹತ್ತಿ" ಅನ್ನುವ ಶೀರ್ಷಿಕೆ ಸೂಕ್ತವೇ ಆಗಿದೆ.

ಹಣ ಮಾಡುವ ಇಚ್ಛೆ ಹೊಂದಿರುವವನು ಹಣದ ಬೆನ್ನು ಹತ್ತುತ್ತಾನೆ. ಬೆನ್ನು ಹತ್ತದೇ ಇದ್ದರೆ ಅದು ಕೈಹಿಡಿಯುವುದಿಲ್ಲ. ತಮಗೆ ಮತ್ತು ನಮಗೆ ಅದರ ಅರಿವು ಇದೆಯಲ್ಲವೇ? ನಮಗೋ ಹಣ ನಮ್ಮ ಬೆನ್ನು ಹತ್ತಬೇಕೆಂಬ ಒಳ ಬಯಕೆ.

ಹಾಗೆಯೇ ಆದರ್ಶ ಅನ್ನುವುದನ್ನು ಅತಿ ಸುಲಭವಾಗಿ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಮೊದ ಮೊದಲು ನಾವು ಅದರ ಬೆನ್ನು ಹತ್ತಲೇ ಬೇಕು. ಆಗ ಅದು ಸೋತು ನಮ್ಮ ಬೆನ್ನನೇರಿ ಕೂರುತ್ತದೆ.

ನಾವು ನಮ್ಮ ಜೀವನದಲ್ಲಿ ಒಂದು ನಿಯಮವನ್ನು ಹಾಕಿಕೊಂಡು, ಕಷ್ಟವಾದರೂ, ಅದರಂತೆ ಜೀವಿಸುತ್ತಾ ಬಂದರೆ, ನಂತರ ನಾವು ಬದಲಾಗುತ್ತೇವೆಂದರೂ, ನಮ್ಮನ್ನು ಆ ನಿಯಮಗಳೊಡನೆ ಗುರುತಿಸಿರುವ ಈ ಸಮಾಜ ನಮ್ಮನ್ನು ಬದಲಾಗಲು ಬಿಡುವುದಿಲ್ಲ. 

ಪುಸ್ತಕದ ವಿಮರ್ಶಾತ್ಮಕ ಪರಿಚಯದ ಓದು ಖುಷಿ ನೀಡಿತು. ಕಾಗುಣಿತಗಳ ಬಗ್ಗೆ ನಾನೇನೂ ಹೇಳಲಾರೆ. ಕಾಗುಣಿತದಲ್ಲಿನ ಆ ತಪ್ಪುಗಳು ಇಲ್ಲಿ ಮಾತ್ರ ತಮ್ಮವಾಗಿ ಉಳಿಯುವುದಿಲ್ಲ. ಅವುಗಳ  ಹೊಣೆ ಸಂಪಾದಕರದು ಜಾಸ್ತಿಯಾಗಿರುತ್ತದೆ. ತಾವು ಬಚಾವಾದಿರಿ. 
 

PARTHASARATHY N
11 years ago

ತಮ್ಮ ಪ್ರತಿಕ್ರಿಯೆಗೆ ವಂದನೆ ! 🙂
ಕಾಗುಣಿತದ  ತಪ್ಪಿನ  ಪೂರ್ತಿ  ಹೊಣೆ  ನನ್ನ ಮೇಲೆ ಇರಲಿ! ಸರಿಯಾಗಿ ತಿದ್ದದೆ ಹಾಕಿಬಿಟ್ಟಿದ್ದೆ ! ಇನ್ನು ಮೇಲೆ ಪ್ರತಿ ಪದವನ್ನು ಗಮನಿಸಿಯೆ ಹಾಕುವೆ ಎಲ್ಲಿಯಾದರು ಅನುಮಾನಗಳು ಬಂದಾಗ ತಮ್ಮನ್ನೊ ಅಥವ ಬೇರೆ ಯಾರಲ್ಲಾದರು ಕೇಳಿ ತಿಳಿದು ಬರೆಯಲು ಪ್ರಯತ್ನಿಸುವೆ !  🙁

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ಸಾತ್ವಿಕ ಜೀವನದ ನಿಜವಾದ ನಾಯಕ ಕವಿ "ನಾಗರಾಜರು" ಎನ್ನುವುದು ಸತ್ಯ ಅಲ್ಲವೆ ಸರ್.? ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ. ಶುಭವಾಗಲಿ ಸರ್………

PARTHASARATHY N
11 years ago

ವಂದನೆಗಳು ಮಠಪತಿಯವರಿಗೆ 
ನಿಜ ನಾಗರಾಜರ ಜೀವನ ಬೇರೆಯವರಿಗೆ ಆದರ್ಶ

Rukmini Nagannavar
11 years ago

Vimarshe chennagi moodibandide… 🙂

PARTHASARATHY N
11 years ago

ವಂದನೆಗಳು ರುಕ್ಮಿಣಿಯವರಿಗೆ 

prashasti
11 years ago

ಚೆನ್ನಾಗಿದೆ ಪಾರ್ಥಸಾರಥಿಯವರೇ.
ಸಂಪದದಲ್ಲಿ ಪಾರ್ಥಸಾರಥಿಯವರು ಎಂದು ಓದಿದ್ದ ನನಗೆ ಆವರು ಯಾರಿರಬಹುದೆಂಬ ಕುತೂಹಲವಿತ್ತು. ಇವತ್ತು ನಿಮ್ಮ ಮುಖವನ್ನೂ ನೋಡುವ ಅವಕಾಶ ಸಿಕ್ಕಿತು. ಚೆಂದದ ಪುಸ್ತಕ ಪರಿಚಯ 🙂

parthasarathy N
parthasarathy N
11 years ago
Reply to  prashasti

ವಂದನೆ ಪ್ರಶಸ್ತಿರವರಿಗೆ 
ನಿಮ್ಮ ಹೆಸರು ವಿಶೇಷವಾಗಿದೆ ! 
ನನ್ನ ಮುಖ ನೋಡಿದ ನಂತರವು ಪ್ರತಿಕ್ರಿಯೆ ಹಾಕಿದ್ದೀರಿ ಅಂದಮೇಲೆ , ನನ್ನ ಮುಖ ಅಷ್ಟು ಕೆಟ್ಟದಾಗಿಲ್ಲ ಅನ್ನುವ ದೈರ್ಯ ಬಂದಿತು ! 🙂
ಧನ್ಯವಾದಗಳು

ಎನ್ ಸತೀಶ್

ಒಬ್ಬರು ಉತ್ತಮ ಆದರ್ಶ ವ್ಯಕ್ತಿಯ ಹಾಗೂ ಪುಸ್ತಕದ ಪರಿಚಯದ ಲೇಖನ  ಧನ್ಯವಾದಗಳೊಂದಿಗೆ

parthasarathy N
parthasarathy N
11 years ago

ವಂದನೆಗಳು ಸತೀಶ್ ರವರೆ

Santhosh
11 years ago

good!!

parthasarathy N
parthasarathy N
11 years ago
Reply to  Santhosh

ಥ್ಯಾಂಕ್ಸ್ !!

12
0
Would love your thoughts, please comment.x
()
x